ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಏನೆ ಮನವಿತ್ತೆ ಲಲಿತಾಂಗಿ


 

*ಕನಕದಾಸರ ಪೌರಾಣಿಕ ಕಥೆಗಳ ಹಿನ್ನೆಲೆಯುಳ್ಳ, ನಿಂದಾಸ್ತುತಿಯ ಮುಂಡಿಗೆ*


ಏನೆ ಮನವಿತ್ತೆ ಲಲಿತಾಂಗಿ ಅಸಮಾನ ಗೋವಳ ಕುಲವಿಲ್ಲದವನೊಳು (ಪ) 


ಮಗಗೆ ಮೈದುನನಾದ ಮಗಳಿಗೆ ಪತಿಯಾದ ಮಗಳಿಗಳಿಯನಾದ ಅಳಿಯಗಳಿಯನಾದ (ಚ-1)


ಮಗಳ ಮಗಗೆ ಮೈದುನನಾಗಿ ಮಾವನ ಜಗವರಿಯಲು ಕೊಂದ ಕುಲಗೇಡಿ ಗೋವಳ (ಚ-2)


ಅತ್ತೆಗೆ ವಲ್ಲಭನಾದ ಭೃತ್ಯರಿಗಾಳಾದ ಚಿತ್ತ ಒಲಿದು ಚೆನ್ನಆದಿಕೇಶವನೊಳು (ಚ-3)

_________________


ಭಾವಾರ್ಥ — ನಿನಗೆ ಸರಿಸಮಾನನಲ್ಲದ ಈ ಗೋವಳ  ಗೋಪಾಲನಿಗೆ ಏಕಮ್ಮ ನೀನು ಮನವನ್ನಿತ್ತೆ  ಲಕ್ಷ್ಮೀ? 


(1)

ಮಗಗೆ ಮೈದುನನಾದ —  ನರಕಾಸುರ ಮತ್ತು ಸೀತೆ ಭೂದೇವಿಯ ಮಕ್ಕಳು. 

ಭೂದೇವಿಯು ವಿಷ್ಣುವಿನ ಹೆಂಡತಿಯೂ ಹೌದು. ಆಗ ನರಕಾಸುರನು ವಿಷ್ಣುವಿನ ಮಗನೂ ಆದಂತಾಯಿತು. ರಾಮಾವತಾರದಲ್ಲಿ ಸೀತೆಯನ್ನು ಮದುವೆಯಾದ್ದರಿಂದ ನರಕಾಸುರನಿಗೆ ಮೈದುನ - ಭಾವನಾದಂತಾಯಿತು. 


ಮಗಳಿಗೆ ಪತಿಯಾದ — ಭೂದೇವಿಯ ಮಗಳಾದ ಸೀತೆ ವಿಷ್ಣುವಿಗೂ ಮಗಳಾದಂತಾಯ್ತು. 

ರಾಮಾವತಾರದಲ್ಲಿ ಸೀತೆಯನ್ನು ಮದುವೆಯಾದ್ದರಿಂದ ಪತಿಯಾದಂತಾಯ್ತು. 


ಮಗಳಿಗೆ ಅಳಿಯನಾದ - ವಿಷ್ಣುವಿನ ಪಾದದಿಂದ ಗಂಗೆ ಉದ್ಭವವಾದ್ದರಿಂದ ವಿಷ್ಣುವಿಗೆ ಮಗಳಾದಂತಾಯ್ತು, ಅವಳು ಸಮುದ್ರರಾಜನ ಪತ್ನಿಯಾಗುತ್ತಾಳೆ. ಸಾಗರನ ಮಗಳು ಲಕ್ಷ್ಮಿಯನ್ನು ವಿಷ್ಣು ಕೈ ಹಿಡಿದದ್ದುಂದ ಸಾಗರನಿಗೆ ಅಳಿಯನಾದಂತಾಯಿತು. 

ಆಗ ಮಗಳಾದ ಗಂಗೆಗೂ ಅಳಿಯನಾದಂತಾಯ್ತು. 


ಅಳಿಯಗಳಿಯನಾದ — ವಿಷ್ಣುವಿನ ಮಗಳಾದ ಗಂಗೆಯನ್ನು ಸಾಗರ ಮದುವೆ ಯಾದ್ದರಿಂದ ಸಾಗರ ವಿಷ್ಣುವಿಗೆ ಅಳಿಯನಾದ, ಸಾಗರನ ಮಗಳು ಲಕ್ಷ್ಮಿಯನ್ನು ತಾನು ಮದುವೆಯಾದ್ದರಿಂದ ಅಳಿಯನಾದ ಸಾಗರನಿಗೆ ವಿಷ್ಣುವು ಅಳಿಯನಾದಂತಾಯಿತು. 


(2)

ಮಗಳ ಮಗಗೆ ಮೈದುನನಾಗಿ —  ಲಕ್ಷ್ಮಿ, ಚಂದ್ರ ಇಬ್ಬರೂ ಸಾಗರನ ಮಕ್ಕಳು. ವಿಷ್ಣುವಿನ ಪುತ್ರಿ ಗಂಗೆಯು ಸಾಗರನ ಹೆಂಡತಿಯಾದ್ದರಿಂದ ಚಂದ್ರ ಅವಳಿಗೂ ಮಗನಾದಂತಾಯಿತು. ಚಂದ್ರನ ಸಹೋದರಿಯಾದ ಲಕ್ಷ್ಮಿಯನ್ನು ವಿಷ್ಣುವು ಮದುವೆಯಾದ್ದರಿಂದ ವಿಷ್ಣುವು ಚಂದ್ರನಿಗೆ ಮೈದುನ =ಭಾವನಾದಂತಾಯಿತು. 


ಮಾವನ ಕೊಂದ ಕುಲಗೇಡಿ ಗೋವಳ—  ಮಾವನಾದ ಕಂಸನನ್ನು ಕೊಂದ ಕುಲಕಂಟಕನಾದ ಕೃಷ್ಣ 


(3)

ಅತ್ತೆಗೆ ವಲ್ಲಭನಾದ — ವಿಷ್ಣುವು ರಾಮಾವತಾರದಲ್ಲಿ ಸೀತೆಯನ್ನು ಮದುವೆಯಾದ್ದರಿಂದ ಸೀತೆಯ ತಾಯಿಯಾದ ಭೂದೇವಿ ಅತ್ತೆಯಾಗಬೇಕು. ಆದರೆ ಭೂದೇವಿ ವಿಷ್ಣುವಿಗೆ ಹೆಂಡತಿಯೂ ಆದದ್ದರಿಂದ ಅತ್ತೆಗೆ ಗಂಡನಾದಂತಾಯ್ತು. 


ಭೃತ್ಯರಿಗಾಳಾದ — ಸೇವಕರಾದ ಪಾಂಡವರಿಗೆ ಬಂಡಿಯ ಬೋವನಾಗಿ ಕೆಲಸ ಮಾಡುವ ಸೇವಕನಾದ ಶ್ರೀಕೃಷ್ಣ 


ಮುಂಡಿಗೆಯು ಒಗಟಿನಂತಹ ವಿಶಿಷ್ಟವಾದ ರಚನೆ. ಹರಿದಾಸರಲ್ಲಿ ಮುಂಡಿಗೆಗಳ ರಚನೆಯನ್ನು ಆರಂಭಿಸಿದ್ದು ಶ್ರೀ ಕನಕದಾಸರು.


ಕೃಪೆ: Rohini Subbarathnam 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ