ಏನೆ ಮನವಿತ್ತೆ ಲಲಿತಾಂಗಿ
*ಕನಕದಾಸರ ಪೌರಾಣಿಕ ಕಥೆಗಳ ಹಿನ್ನೆಲೆಯುಳ್ಳ, ನಿಂದಾಸ್ತುತಿಯ ಮುಂಡಿಗೆ*
ಏನೆ ಮನವಿತ್ತೆ ಲಲಿತಾಂಗಿ ಅಸಮಾನ ಗೋವಳ ಕುಲವಿಲ್ಲದವನೊಳು (ಪ)
ಮಗಗೆ ಮೈದುನನಾದ ಮಗಳಿಗೆ ಪತಿಯಾದ ಮಗಳಿಗಳಿಯನಾದ ಅಳಿಯಗಳಿಯನಾದ (ಚ-1)
ಮಗಳ ಮಗಗೆ ಮೈದುನನಾಗಿ ಮಾವನ ಜಗವರಿಯಲು ಕೊಂದ ಕುಲಗೇಡಿ ಗೋವಳ (ಚ-2)
ಅತ್ತೆಗೆ ವಲ್ಲಭನಾದ ಭೃತ್ಯರಿಗಾಳಾದ ಚಿತ್ತ ಒಲಿದು ಚೆನ್ನಆದಿಕೇಶವನೊಳು (ಚ-3)
_________________
ಭಾವಾರ್ಥ — ನಿನಗೆ ಸರಿಸಮಾನನಲ್ಲದ ಈ ಗೋವಳ ಗೋಪಾಲನಿಗೆ ಏಕಮ್ಮ ನೀನು ಮನವನ್ನಿತ್ತೆ ಲಕ್ಷ್ಮೀ?
(1)
ಮಗಗೆ ಮೈದುನನಾದ — ನರಕಾಸುರ ಮತ್ತು ಸೀತೆ ಭೂದೇವಿಯ ಮಕ್ಕಳು.
ಭೂದೇವಿಯು ವಿಷ್ಣುವಿನ ಹೆಂಡತಿಯೂ ಹೌದು. ಆಗ ನರಕಾಸುರನು ವಿಷ್ಣುವಿನ ಮಗನೂ ಆದಂತಾಯಿತು. ರಾಮಾವತಾರದಲ್ಲಿ ಸೀತೆಯನ್ನು ಮದುವೆಯಾದ್ದರಿಂದ ನರಕಾಸುರನಿಗೆ ಮೈದುನ - ಭಾವನಾದಂತಾಯಿತು.
ಮಗಳಿಗೆ ಪತಿಯಾದ — ಭೂದೇವಿಯ ಮಗಳಾದ ಸೀತೆ ವಿಷ್ಣುವಿಗೂ ಮಗಳಾದಂತಾಯ್ತು.
ರಾಮಾವತಾರದಲ್ಲಿ ಸೀತೆಯನ್ನು ಮದುವೆಯಾದ್ದರಿಂದ ಪತಿಯಾದಂತಾಯ್ತು.
ಮಗಳಿಗೆ ಅಳಿಯನಾದ - ವಿಷ್ಣುವಿನ ಪಾದದಿಂದ ಗಂಗೆ ಉದ್ಭವವಾದ್ದರಿಂದ ವಿಷ್ಣುವಿಗೆ ಮಗಳಾದಂತಾಯ್ತು, ಅವಳು ಸಮುದ್ರರಾಜನ ಪತ್ನಿಯಾಗುತ್ತಾಳೆ. ಸಾಗರನ ಮಗಳು ಲಕ್ಷ್ಮಿಯನ್ನು ವಿಷ್ಣು ಕೈ ಹಿಡಿದದ್ದುಂದ ಸಾಗರನಿಗೆ ಅಳಿಯನಾದಂತಾಯಿತು.
ಆಗ ಮಗಳಾದ ಗಂಗೆಗೂ ಅಳಿಯನಾದಂತಾಯ್ತು.
ಅಳಿಯಗಳಿಯನಾದ — ವಿಷ್ಣುವಿನ ಮಗಳಾದ ಗಂಗೆಯನ್ನು ಸಾಗರ ಮದುವೆ ಯಾದ್ದರಿಂದ ಸಾಗರ ವಿಷ್ಣುವಿಗೆ ಅಳಿಯನಾದ, ಸಾಗರನ ಮಗಳು ಲಕ್ಷ್ಮಿಯನ್ನು ತಾನು ಮದುವೆಯಾದ್ದರಿಂದ ಅಳಿಯನಾದ ಸಾಗರನಿಗೆ ವಿಷ್ಣುವು ಅಳಿಯನಾದಂತಾಯಿತು.
(2)
ಮಗಳ ಮಗಗೆ ಮೈದುನನಾಗಿ — ಲಕ್ಷ್ಮಿ, ಚಂದ್ರ ಇಬ್ಬರೂ ಸಾಗರನ ಮಕ್ಕಳು. ವಿಷ್ಣುವಿನ ಪುತ್ರಿ ಗಂಗೆಯು ಸಾಗರನ ಹೆಂಡತಿಯಾದ್ದರಿಂದ ಚಂದ್ರ ಅವಳಿಗೂ ಮಗನಾದಂತಾಯಿತು. ಚಂದ್ರನ ಸಹೋದರಿಯಾದ ಲಕ್ಷ್ಮಿಯನ್ನು ವಿಷ್ಣುವು ಮದುವೆಯಾದ್ದರಿಂದ ವಿಷ್ಣುವು ಚಂದ್ರನಿಗೆ ಮೈದುನ =ಭಾವನಾದಂತಾಯಿತು.
ಮಾವನ ಕೊಂದ ಕುಲಗೇಡಿ ಗೋವಳ— ಮಾವನಾದ ಕಂಸನನ್ನು ಕೊಂದ ಕುಲಕಂಟಕನಾದ ಕೃಷ್ಣ
(3)
ಅತ್ತೆಗೆ ವಲ್ಲಭನಾದ — ವಿಷ್ಣುವು ರಾಮಾವತಾರದಲ್ಲಿ ಸೀತೆಯನ್ನು ಮದುವೆಯಾದ್ದರಿಂದ ಸೀತೆಯ ತಾಯಿಯಾದ ಭೂದೇವಿ ಅತ್ತೆಯಾಗಬೇಕು. ಆದರೆ ಭೂದೇವಿ ವಿಷ್ಣುವಿಗೆ ಹೆಂಡತಿಯೂ ಆದದ್ದರಿಂದ ಅತ್ತೆಗೆ ಗಂಡನಾದಂತಾಯ್ತು.
ಭೃತ್ಯರಿಗಾಳಾದ — ಸೇವಕರಾದ ಪಾಂಡವರಿಗೆ ಬಂಡಿಯ ಬೋವನಾಗಿ ಕೆಲಸ ಮಾಡುವ ಸೇವಕನಾದ ಶ್ರೀಕೃಷ್ಣ
ಮುಂಡಿಗೆಯು ಒಗಟಿನಂತಹ ವಿಶಿಷ್ಟವಾದ ರಚನೆ. ಹರಿದಾಸರಲ್ಲಿ ಮುಂಡಿಗೆಗಳ ರಚನೆಯನ್ನು ಆರಂಭಿಸಿದ್ದು ಶ್ರೀ ಕನಕದಾಸರು.
ಕೃಪೆ: Rohini Subbarathnam 🌷🙏🌷
ಕಾಮೆಂಟ್ಗಳು