ಎಂ.ಆರ್. ಭಗವತಿ
ಎಂ.ಆರ್. ಭಗವತಿ
ಎಂ.ಆರ್. ಭಗವತಿ ಅವರು ಭವ್ಯ ಛಾಯಾಗ್ರಾಹಕಿ, ಬರಹಗಾರ್ತಿ ಮತ್ತು ಪ್ರಕೃತಿಪ್ರೇಮಿ.
ಜನವರಿ 7, ಭಗವತಿ ಅವರ ಜನ್ಮದಿನ. ಇವರು ಮೂಲತಃ ಚಿಕ್ಕಮಗಳೂರಿನವರು. ಪ್ರಸಕ್ತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದಿರುವ ಇವರು ಕೆಲಕಾಲ ಬೋಧನೆ ನಡೆಸಿದ್ದರು.
ಛಾಯಾಗ್ರಹಣದಲ್ಲಿ ಹವ್ಯಾಸವಿರುವ ಭಗವತಿ ಅವರು ವಿಶೇಷವಾಗಿ ಹಕ್ಕಿಗಳ ಛಾಯಾಗ್ರಹಣದಲ್ಲಿ ತಲ್ಲೀನತೆ ಸಾಧಿಸಿದ್ದು ನಿಯತಕಾಲಿಕಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಹಕ್ಕಿಗಳ ಕುರಿತು ಮನಸೆಳೆಯುವಂತೆ ಬರೆಯುತ್ತ ಬಂದಿದ್ದಾರೆ. ನಾಡಿನ ಹಲವೆಡೆ ಇವರ ಹಲವಾರು ಛಾಯಾಚಿತ್ರ ಪ್ರದರ್ಶನಗಳು ನಡೆದಿವೆ. ಖಗೋಳ ವಿಜ್ಞಾನ ಇವರ ಮತ್ತೊಂದು ಅನುಪಮ ಆಸಕ್ತಿ.
“ಅತ್ತುಬಿಡೇ ಗೆಳತಿ” ಸಂಕಲನ ಸುಧಾಶರ್ಮ ಚವತ್ತಿ ಮತ್ತು ಸಿ.ಎಸ್. ಸವಿತಾ ಅವರೊಂದಿಗೆ ಜಂಟಿಯಾಗಿ), ಚಂಚಲ ನಕ್ಷತ್ರಗಳು, ಏಕಾಂತದ ಮಳೆ. ಮುಂತಾದವು ಭಗವತಿ ಅವರ ಕೃತಿಗಳಲ್ಲಿ ಸೇರಿವೆ. ಸರಸ್ವತಿ ಶ್ರೀನಿವಾಸರಾಜು ಹೇಳಿದ ಆತ್ಮಕಥನ 'ಸೋಜಿಗದ ಬಳ್ಳಿ' ಇವರ ಮತ್ತೊಂದು ಸಂಪಾದನೆ. 'ಅಂತರ್ಜಲ' ಎಂಬ ಚಿ. ಶ್ರೀನಿವಾಸರಾಜು ಅಭಿನಂದನಾ ಗ್ರಂಥದ ಸಂಪಾದಕರಲ್ಲಿ ಒಬ್ಬರಾಗಿದ್ದರು. ಚಿಲ್ಡ್ರನ್ಸ್ ಇಂಡಿಯಾದ ಆರನೆಯ ಅಂತಾರಾಷ್ಟ್ರೀಯ ಮಕ್ಕಳ ಸಿನೆಮಾ ಉತ್ಸವ 2010 ಕೆಟಲಾಗಿನ ಸಂಪಾದಕಿಯಾಗಿದ್ದರು.
ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಭಗವತಿ ಅವರ ಅಂಕಣ ಬರಹ, ಕವಿತೆ, ಕತೆ, ಪುಸ್ತಕ ಪರಿಚಯ, ವಿಮರ್ಶಾ ಲೇಖನಗಳು ಪ್ರಕಟಗೊಂಡಿವೆ. ಕೆಲವೊಂದು ಕಥಾಸ್ಪರ್ಧೆ ಮತ್ತು ಛಾಯಾಚಿತ್ರ ಸ್ಪರ್ಧೆಗೆ ತೀರ್ಪುಗಾರರಾಗಿಯೂ ಕೆಲಸ ಮಾಡಿದ್ದಾರೆ.
ಭಗವತಿ ಅವರ ಮೊದಲ (1999) ಸಂಕಲನ 'ಏಕಾಂತದ ಮಳೆ'ಗೆ ಬಿಎಂಶ್ರೀ ಸಾಹಿತ್ಯ ಪ್ರಶಸ್ತಿ ಮತ್ತು ಎರಡನೆಯ (2005) ಸಂಕಲನ 'ಚಂಚಲ ನಕ್ಷತ್ರಗಳು' ಕೃತಿಗೆ 'ಹರಿಹರಶ್ರೀ' ಪ್ರಶಸ್ತಿಗೆ ಸಂದಿವೆ. ಕ್ರೈಸ್ಟ್ ಕಾಲೇಜು ಕನ್ನಡ ಸಂಘದ ಕಾವ್ಯ, ಲೇಖನ ಸ್ಪರ್ದೆ, ಗುಡಿಬಂಡೆ ಪೂರ್ಣಿಮಾ ದತ್ತಿನಿದಿ ಬಹುಮಾನ, ಸಂಚಯ, ಸಂಕ್ರಮಣ ಸಾಹಿತ್ಯ ಸ್ಪರ್ಧೆಗಳ ಬಹುಮಾನಗಳು ಸೇರಿದಂತೆ ಅನೇಕ ಪ್ರಶಸ್ತಿ, ಗೌರವ, ಬಹುಮಾನಗಳು ಇವರಿಗೆ ಸಂದಿವೆ.
ಸಾಧಕಿ ಎಂ.ಆರ್. ಭಗವತಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday M R Bhagavathi 🌷🌷🌷
ಕಾಮೆಂಟ್ಗಳು