ರೇಷ್ಮಾ ಭಟ್
ರೇಷ್ಮಾ ಭಟ್
ಕನ್ನಡತಿ ವಿದುಷಿ ರೇಷ್ಮಾ ಭಟ್ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತದಲ್ಲಿ ಹೆಸರಾಗಿದ್ದಾರೆ.
ಜೂನ್ 8, ರೇಷ್ಮಾ ಭಟ್ ಅವರ ಜನ್ಮದಿನ. ಅವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಮುರೂರು ಎಂಬ ಸಣ್ಣ ಹಳ್ಳಿಯವರು. ರೇಷ್ಮಾ ಅವರನ್ನು ಅವರ ತಾಯಿ ಆಶಾ ಭಟ್ ಮತ್ತು ತಂದೆ ರಾಮಚಂದ್ರ ಭಟ್ ಅವರು ಹಿಂದೂಸ್ತಾನಿ ಸಂಗೀತಕ್ಕೆ ಪರಿಚಯಿಸಿದರು. ಅವರು ಅಪರೂಪದ ಮಾಧುರ್ಯದೊಂದಿಗೆ ಸುಮಧುರ ಧ್ವನಿಯನ್ನು ಹೊಂದಿದ್ದಾರೆ. ರೇಷ್ಮಾ ಅವರು 10 ನೇ ವಯಸ್ಸಿನಿಂದ ಪ್ರಸಿದ್ಧ ಹಿಂದೂಸ್ತಾನಿ ಗಾಯಕರಾದ ಡಾ. ಅಶೋಕ್ ಹುಗ್ಗಣ್ಣವರ್ ಅವರ ಶಿಷ್ಯೆಯಾಗಿ ಆಳವಾದ ಸಂಗೀತ ಮಾರ್ಗದರ್ಶನವನ್ನು ಗಳಿಸಲಾರಂಭಿಸಿದರು.
ರೇಷ್ಮಾ ಅವರು ಆಕಾಶವಾಣಿಯಲ್ಲಿ ಲಘು ಶಾಸ್ತ್ರೀಯ ಸಂಗೀತದಲ್ಲಿ “ಎ” ದರ್ಜೆಯ ಕಲಾವಿದೆ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ “ಎ” ದರ್ಜೆಯ ಕಲಾವಿದೆಯಾಗಿದ್ದು, ರೇಡಿಯೋ ಧಾರವಾಡ ಕೇಂದ್ರದಿಂದ ಕಾರ್ಯಕ್ರಮ ನೀಡುತ್ತ ಬಂದಿದ್ದಾರೆ. ರೇಷ್ಮಾ ತಮ್ಮ ಗಾಯನದ ಮೂಲಕ ಸಂಗೀತ ಪ್ರಿಯರ ಹೃದಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಅವರು ಭಾರತದಾದ್ಯಂತ ಹಾಗೂ ವಿದೇಶಗಳ ಅನೇಕ ಪ್ರಸಿದ್ಧ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಇವರ ಸಹೋದರಿ ರಮ್ಯಾ ಅವರೂ ಹೆಸರಾಂತ ಸಂಗಿತಗಾರ್ತಿಯಾಗಿದ್ದು, ಈ ಸಹೋದರಿಯರು ಜೊತೆಯಾಗಿ ನೀಡುವ ಸಂಗೀತ ಕಾರ್ಯಕ್ರಮಗಳಿಂದಲೂ ಹೆಸರಾಗಿದ್ದಾರೆ.
ರೇಷ್ಮಾ ಅವರು ಕಂಪ್ಯೂಟರ್ ಸೈನ್ಸ್ನಲ್ಲಿ ಪದವೀಧರೆಯಾಗಿದ್ದು, ಜಿಯೋಇನ್ಫರ್ಮ್ಯಾಟಿಕ್ಸ್ನಲ್ಲಿ ಎಂ.ಟೆಕ್ ಪದವಿಯನ್ನು ಸಹಾ ಗಳಿಸಿದ್ದಾರೆ. ಅವರು ವಿದುಷಿ ಶುಭ್ರ ಗುಹಾ ಅವರ ಮಾರ್ಗದರ್ಶನದಲ್ಲಿ ಕೋಲ್ಕತ್ತಾದ ಐಟಿಸಿ ಸಂಗೀತ ಸಂಶೋಧನಾ ಅಕಾಡೆಮಿಯ ವಿದ್ವಾಂಸರಾಗಿದ್ದರು.
ರೇಷ್ಮಾ ಅವರು SPIC MACAY ಮತ್ತು ದೂರದರ್ಶನ ಆಯೋಜಿಸಿದ್ದ ‘ನಾದ ಭೇದ್’ ಶಾಸ್ತ್ರೀಯ ಸಂಗೀತದ ರಿಯಾಲಿಟಿ ಶೋನಲ್ಲಿ ಫೈನಲಿಸ್ಟ್ಗಳಲ್ಲಿ ಒಬ್ಬರು. ಇವರಿಗೆ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದಿಂದ ರಾಷ್ಟ್ರೀಯ ವಿದ್ಯಾರ್ಥಿವೇತನ ಲಭಿಸಿತ್ತು. ಇವರಿಗೆ ಮಂಗಳೂರಿನ ಸಂಗೀತ ಭಾರತಿ ಫೌಂಡೇಶನ್ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಂದಿತ್ತು. ಆಲ್ ಇಂಡಿಯಾ ರೇಡಿಯೋ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಂದಿತ್ತು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ವಿದ್ಯಾರ್ಥಿವೇತನ ಸಂದಿತ್ತು. ಧಾರವಾಡದ ಡಾ. ಮಲ್ಲಿಕಾರ್ಜುನ ಮನ್ಸೂರ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ ರಾಜ್ಯ ಮಟ್ಟದ ಹಿಂದೂಸ್ತಾನಿ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಂದಿತ್ತು. ಕುಂದಾಪುರದ ಸಂಗೀತ ಭಾರತಿ ಟ್ರಸ್ಟ್ ಆಯೋಜಿಸಿದ್ದ ರಾಜ್ಯ ಮಟ್ಟದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಂದಿತ್ತು.
ರೇಷ್ಮಾ ಅವರ ಹೆಸರಿನಲ್ಲಿ ಅನೇಕ ಸಂಗೀತದ ಆಲ್ಬಮ್ಗಳಿವೆ. ಇವರ ಕನ್ನಡ ಭಾವಗೀತೆ ಆಲ್ಬಂಗಳಲ್ಲಿ ಮೂಡುಬೆಳಕು, ಮಧುಗಂಗೆ, ಅರಳುವ ಹೂಗಳು, ಕನಸಿನ ಹಂದರ, ಇಂಗ್ಲೀಷ್ ಗೀತೆಗಳು ಸೇರಿವೆ. ಇವರ ಭಕ್ತಿಗೀತೆಯ ಆಲ್ಬಂಗಳಲ್ಲಿ ಕರಿಕಾನಮ್ಮ, ಶ್ರವಣ ಮಂಗಲ, ವಾಣಿ ವಿನಾಯಕ ಮುಂತಾದವು ಸೇರಿವೆ.
ರೇಷ್ಮಾ ಅವರ ಪ್ರತಿಭೆಯನ್ನು ಗುರುತಿಸಿ ಅನೇಕ ಪ್ರಶಸ್ತಿಗಳು ಬಂದಿವೆ. ಇವುಗಳಲ್ಲಿ ಧಾರವಾಡದ ಡಾ.ಮಲ್ಲಿಕಾರ್ಜುನ ಮನ್ಸೂರ್ ರಾಷ್ಟ್ರೀಯ ಯುವ ಪುರಸ್ಕಾರ, ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನದಿಂದ “ಗಾನ ಜ್ಯೋತಿ ಪುರಸ್ಕಾರ”, ಗುಲ್ಬರ್ಗಾದ ಮಹಾಂತ್ ಜ್ಯೋತಿ ಪ್ರತಿಷ್ಠಾನದ "ಕಲಾ ಜ್ಯೋತಿ ಪುರಸ್ಕಾರ”, ಸೊರಬದ ಸಂಗೀತ ಸೇವಾ ಸಮಿತಿಯಿಂದ "ಯುವ ಪ್ರತಿಭಾ ಪುರಸ್ಕಾರ" ಮುಂತಾದ ಅನೇಕ ಗೌರವಗಳು ಸಂದಿವೆ.
ವಿದುಷಿ ರೇಷ್ಮಾ ಭಟ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Vidushi Reshma Bhat 🌷🙏🌷
ಕಾಮೆಂಟ್ಗಳು