ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸತೀಶ್ ಚಪ್ಪರಿಕೆ


 ಸತೀಶ್ ಚಪ್ಪರಿಕೆ


’ಬುಕ್ ಬ್ರಹ್ಮ’ ಡಿಜಿಟಲ್ ಮಾಧ್ಯಮ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾಗಿ ಅದರ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಸತೀಶ್ ಚಪ್ಪರಿಕೆ ಪತ್ರಿಕೋದ್ಯಮಿ, ಪತ್ರಕರ್ತ, ಬರಹಗಾರ ಹೀಗೆ ಬಹುಮುಖಿ ಸಾಧಕರು. 

ಜೂನ್ 30, ಸತೀಶ್ ಅವರ ಜನ್ಮದಿನ. ಮೂಲತಃ ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಚಪ್ಪರಿಕೆ ಎಂಬ ಗ್ರಾಮದವರು. ಕೃಷಿ ಕುಟುಂಬದಲ್ಲಿ ಹುಟ್ಟಿದ ಅವರು, ತಂದೆಯ ಹೊಟೇಲ್ ಉದ್ಯಮದ ಹಿನ್ನಲೆಯಲ್ಲಿ ಕ್ರಮೇಣ ಬೆಂಗಳೂರಿಗೆ ಬಂದು ನೆಲಸಿದವರು.  ಸಸ್ಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ‘ಪ್ರಜಾವಾಣಿ’ ದಿನಪತ್ರಿಕೆ ಸೇರಿ, ಅಲ್ಲಿ ಪತ್ರಕರ್ತ ಜೀವನ ಆರಂಭಿಸಿದರು. ಸುಮಾರು ಹತ್ತು ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿದ ನಂತರ ‘ಟಿವಿ೯’, ‘ದಿ ಸಂಡೆ ಇಂಡಿಯನ್’ ನಿಯತಕಾಲಿಕದ ಸಹಾಯಕ ಸಂಪಾದಕರಾಗಿದ್ದರು. ಈ ನಡುವೆ ‘ಪ್ರಜಾವಾಣಿ’ ಮತ್ತು ‘ಹಫಿಂಗ್ಟನ್ ಪೋಸ್ಟ್’ (ಇಂಗ್ಲಿಷ್)ನಲ್ಲಿ ಅಂಕಣಗಳನ್ನು ಬರೆದರು. 'ಬ್ರಿಟಿಷ್ ಶಿವ್ನಿಂಗ್ ಸ್ಕಾಲರ್‌ಷಿಪ್’ ಪಡೆದರು.  ಲಂಡನ್‌ನ ವೆಸ್ಟ್ ಮಿನಿಸ್ಟರ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದ ಉನ್ನತ ವ್ಯಾಸಂಗ ಮಾಡಿದರು.  ಒಂದು ವರ್ಷ ಕಾಲ ‘ಸಿಂಬಯಾಸಿಸ್ ವಿಶ್ವವಿದ್ಯಾಲಯ’ದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದರು. ನಂತರ ‘ವಿಆರ್‌ಎಲ್ ಮಿಡಿಯಾ’ ಸಂಸ್ಥೆಯ ಪ್ರಧಾನ ಸಂಪಾದಕರಾಗಿ ಸ್ವಲ್ಪ ಕಾಲ ಕಾರ್ಯ ನಿರ್ವಹಿಸಿದ್ದರು. ಪತ್ರಿಕಾ ವ್ಯವಸಾಯಕ್ಕೆ ವಿದಾಯ ಹೇಳಿದ ಮೇಲೆ, ಬೆಂಗಳೂರು ಮೂಲದ ಅಂತರ್ ರಾಷ್ಟ್ರೀಯ ಸಂಸ್ಥೆ ‘ಫರ್ಬೆಂಡನ್ ಕಮ್ಯುನಿಕೇಷನ್ ಪ್ರೈವೇಟ್ ಲಿಮಿಟೆಡ್’ನ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. 2021ರಲ್ಲಿ ಬುಕ್ ಬ್ರಹ್ಮ ಆರಂಭಗೊಂಡು ಬೃಹತ್ತಾಗಿ ಪಸರಿಸುತ್ತಿದೆ. 

‘ಪ್ರಜಾವಾಣಿ’ ದೀಪಾವಳಿ ಕಥಾ ಸ್ಪರ್ಧೆಗಳ ಮೂಲಕ ಬೆಳಕಿಗೆ ಬಂದ ಕತೆಗಾರರಾದ ಸತೀಶ್ ಚಪ್ಪರಿಕೆ ಅವರ ‘ಮತ್ತೊಂದು ಮೌನಕಣಿವೆ’ (ಪರಿಸರ ಲೇಖನಗಳು=೧೯೯೭), ‘ಹಸಿರು ಹಾದಿ’ (ಅ.ನ.ಯಲ್ಲಪ್ಪ ರೆಡ್ಡಿ ಆತ್ಮಕತೆ-೧೯೯೯), ವಿಶ್ವಕಪ್ ಕ್ರಿಕೆಟ್ (ಕ್ರಿಕೆಟ್ ಕುರಿತಾದ ಕೃತಿ-೨೦೦೦), ಬೇರು (ಕಥಾ ಸಂಲಕನ-೨೦೦೨), ಥೇಮ್ಸ್ ತಟದ ತವಕ ತಲ್ಲಣ (ಪ್ರವಾಸ ಕಥನ-೨೦೦೯), ದೇವಕಾರು (ಜನಪರ ಲೇಖನಗಳ ಸಂಗ್ರಹ-೨೦೧೦), ಮುಸಾಫಿರ್ (ಅಂಕಣ ಬರಹಗಳ ಸಂಗ್ರಹ-೨೦೧೬) ಮತ್ತು ‘ಖಾಂಜಿ ಭಾಯ್’ (ಇಂಗ್ಲಿಷ್ ಕೃತಿ- ಆತ್ಮ ಚರಿತ್ರೆ ೨೦೧೯) ಮುಂತಾದ ಕೃತಿಗಳು ಪ್ರಕಟವಾಗಿವೆ. ಈ ಪೈಕಿ ‘ಥೇಮ್ಸ್ ತಟದ ತವಕ ತಲ್ಲಣ’ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ. ಹದಿನೆಂಟು ವರ್ಷಗಳ ದೀರ್ಘ ಕಾಲದ ನಂತರ ಅವರ ಎರಡನೇ ಕಥಾ ಸಂಕಲನ ‘ವರ್ಜಿನ್ ಮೊಹಿತೊ’ (೨೦೨೦) ಪ್ರಕಟವಾಗಿದೆ. ಕೋವಿಡ್ ಆತಂಕದ ನಡುವೆಯೂ ಪ್ರಕಟವಾದ ಒಂದೇ ತಿಂಗಳಲ್ಲಿ ಎರಡನೇ ಮುದ್ರಣ ಕಂಡ ಕೃತಿ ‘ವರ್ಜಿನ್ ಮೊಹಿತೊ’, ’ಮತ್ತೊಂದು ಮೌನ ಕಣಿವೆ’, ’ಹಸಿರು ಹಾದಿ’, ’ಬೇರು’, ’ಥೇಮ್ಸ್ ತಟದ ತವಕ ತಲ್ಲಣ’, ’ದೇವಕಾರು’, ’ಮುಸಾಫಿರ್-೧’, ’ಮುಸಾಫಿರ್- ೨’, ’ವರ್ಜಿನ್ ಮೊಹಿತೊ’ ಮತ್ತು ’ಸಂಚಲನ’ ’ಮೈಲಾಂಗ್ಸ್’ನಲ್ಲಿ ಇ-ಪುಸ್ತಕಗಳಾಗಿ ಪ್ರಕಟವಾಗಿವೆ.  ಇವರ 'ಘಾಂದ್ರಕ್' ಕಾದಂಬರಿ ಕನ್ನಡವಲ್ಲದೆ ಬಹುಭಾಷೆಗಳಲ್ಲಿ ಮೂಡಿಬಂದಿದೆ. 

ಸಾಹಸಿ, ಸಾಧಕರಾದ ಸತೀಶ್ ಚಪ್ಪರಿಕೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.

Happy birthday Satish Chapparike 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ