ಸೀತಮ್ಮ
ಹತ್ತು ಮಕ್ಕಳ ತಾಯಿ ನನ್ನಮ್ಮ ಸೀತಮ್ಮ 😇
(ಅಣ್ಣ ಗೋಪಾಲ್ Thiru Srinivasachar Gopal ಪತ್ರಿಕೆಯೊಂದಕ್ಕೆ ಬರೆದ ಅಮ್ಮನ ನೆನಪು)
ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಕೆಳಮಧ್ಯಮವರ್ಗಕ್ಕೆ ಸೇರಿದ ಎಲ್ಲ ಹಿಂದೂ ಕುಟುಂಬಗಳ ಸ್ಥಿತಿಗತಿಯೂ ಹೆಚ್ಚುಕಡಿಮೆ ಒಂದೇ ರೀತಿಯದ್ದಾಗಿರಬಹುದೆಂದು ನನ್ನ ಊಹೆ. ಆಂಧ್ರಪ್ರದೇಶದ ಕುಪ್ಪಂ ಸಮೀಪದ ಗ್ರಾಮೀಣ ಪರಿಸರದ ಬ್ರಾಹ್ಮಣಕುಟುಂಬದಲ್ಲಿ ಜನಿಸಿದ ಸೀತಮ್ಮ(1926-2007) ಹನ್ನೆರಡು ಮಕ್ಕಳ ಪೈಕಿ ಹಿರಿಯಕ್ಕನ ಕೀರ್ತಿಗೆ ಪಾತ್ರಳಾದವಳು. ಈ ಸ್ಥಾನಮಾನದ ಮುಖ್ಯ ಹೊಣೆಗಾರಿಕೆ ಎಂದರೆ, ತಾಯಿಯ ಬಾಣಂತನ ನಡೆದಾಗಲೆಲ್ಲ ಒಡಹುಟ್ಟಿದ ಕಿರಿಯರ ಯೋಗಕ್ಷೇಮದ ನಿರ್ವಹಣೆ. ದನಕರು, ಜಮೀನು ಕೆಲಸಕ್ಕೆ ಬರುವ ಆಳುಗಳನ್ನು ಗಮನಿಸುವುದೂ ಇದ್ದೇ ಇರುವುದು. ಮನೆಮಾತು ತಮಿಳಿನ ಜೊತೆಗೆ ಪ್ರಾಥಮಿಕ ಶಾಲೆಯಲ್ಲಿ ಪ್ರಾದೇಶಿಕ ತೆಲುಗು ಕಲಿತು ಏಳನೆಯ ತರಗತಿ ದಾಟುವ ಹೊತ್ತಿಗೆ ಹಿರಿಯರು ಮದುವೆ ಮಾತುಕತೆ ನಡೆಸಿದ್ದರು. ಬೆಂಗಳೂರು ಸೀಮೆಯಲ್ಲಿ ಕನ್ನಡ ಪಂಡಿತರಂತೆ, ಇತ್ತೀಚೆಗೆ ಹೆಂಡತಿ ತೀರಿಕೊಂಡಳಂತೆ, ನಾಲ್ಕು ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲ. (ಸೀತಾ ವಯಸ್ಸಿನಲ್ಲಿ ಚಿಕ್ಕವಳಾದರೂ ತನ್ನ ತಮ್ಮತಂಗಿಯರನ್ನು ಎಷ್ಟು ಚೆನ್ನಾಗಿ ಅಕ್ಕರೆಯಿಂದ ನೋಡಿಕೊಳ್ಳುತ್ತಾಳಲ್ಲ!) ಸುಸಂಸ್ಕೃತ ಶ್ರೀವೈಷ್ಣವ ಕುಟುಂಬ, ದೊಡ್ಡ ಊರಿನಲ್ಲಿ ವಾಸ, ಸರ್ಕಾರಿ ಉದ್ಯೋಗ- ತಮ್ಮ ಹಿರಿಯ ಮಗಳಿಗೆ ಸರಿಯಾದ ಸಂಬಂಧ ಎಂದು ಹಿರಿಯರು ನಿರ್ಧರಿಸಿದರು. ಮೈಸೂರು ವಿದ್ವಾಂಸರ ಮನೆತನದ ಶ್ರೀನಿವಾಸಾಚಾರ್ಯರೊಡನೆ ಸೀತಮ್ಮ ವಿವಾಹವಾಗಿ ಕನ್ನಡನಾಡಿಗೆ ಕಾಲಿಟ್ಟಾಯಿತು. ಪತಿಯ ನಾಲ್ವರು ಮಕ್ಕಳಲ್ಲಿ ಹಿರಿಯವಳು ತನ್ನದೇ ವಯಸ್ಸಿನವಳಾದರೂ ಸೀತಮ್ಮ ತನ್ನ ಹೊಣೆಯರಿತು ಕುಟುಂಬನಿರ್ವಹಣೆಗೆ ತೊಡಗಿಕೊಂಡರು.
ಮೊದಲ ಸಮಸ್ಯೆಯಿದ್ದುದು ಮಧುಗಿರಿಯ ನೆರೆಹೊರೆಯವರೊಡನೆ ಭಾಷೆಯ ಸಂವಹನದಲ್ಲಿ. ಮನೆಯಾಚೆ ಕಂಡ ಪಕ್ಕದವರು "ಊಟ ಆಯ್ತಾ? ಏನು ಅಡುಗೆ?" ಎಂದು ಪ್ರಶ್ನೆ ಪೂರ್ತಿಮಾಡುವುದರೊಳಗೆ ಮನೆಯೊಳಗೆ ಓಡುವಷ್ಟು ಸಂಕೋಚ, ಅಪರಿಚಿತ ಭಾವನೆ. ಕನ್ನಡ- ತೆಲುಗು ಲಿಪಿಗಳಲ್ಲಿ ಸಾಮ್ಯವಿದ್ದುದರಿಂದ ಕನ್ನಡ ಭಾಷೆಯ ಪತ್ರಿಕೆ ಓದಲು ಕಷ್ಟವಿಲ್ಲವೆಂದು ಅರಿವಾಯಿತು. ಈ ಕುತೂಹಲವೇ ಕನ್ನಡವನ್ನು ಓದಿ ಬರೆಯುವುದಕ್ಕೆ ಇಂಬುಕೊಟ್ಟಿತು.
ಹಿರಿಯ ಮಕ್ಕಳ ವಿದ್ಯಾಭ್ಯಾಸ, ಮದುವೆ ಜವಾಬ್ದಾರಿಯ ಜೊತೆಜೊತೆಗೇ ತನ್ನದೇ ಮಕ್ಕಳ ಬಸಿರುಬಾಣಂತನಗಳಲ್ಲಿ ವರ್ಷಗಳು ಉರುಳಿದವು. ಹೆತ್ತ ಹತ್ತು ಮಕ್ಕಳ ಪೈಕಿ ಉಳಿದವು ಆರು.
ಆ ಕಾಲದ ಜನಜೀವನದ ಸಾಮಾನ್ಯ ಲಕ್ಷಣವೆಂದರೆ, ಮಧ್ಯಮವರ್ಗದ ಬಹುತೇಕ ಎಲ್ಲ ಕುಟುಂಬಗಳೂ ಆರ್ಥಿಕವಾಗಿ ದೀನಸ್ಥಿತಿಯಲ್ಲಿದ್ದರೂ ಸಂತಾನಭಾಗ್ಯದಿಂದ ತುಂಬಿ ತುಳುಕುತ್ತಿದ್ದುವು. ನಮ್ಮ ತಂದೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಪಂಡಿತರಾಗಿದ್ದವರು. ಸರ್ಕಾರಿ ಉದ್ಯೋಗವಾದುದರಿಂದ ಊರಿಂದೂರಿಗೆ ವರ್ಗಾವಣೆ ಸಹಜವಾಗಿತ್ತು. ನಾನು ಹುಟ್ಟುವ ವೇಳೆಗೆ ನಮ್ಮ ಕುಟುಂಬ ಹಾಸನದಲ್ಲಿ ನೆಲೆಸಿತ್ತು. ಅಲ್ಲಿನ ಸಾಮಾಜಿಕ ಸಾಂಸ್ಕೃತಿಕ ಶೈಕ್ಷಣಿಕ ಪರಿಸರಕ್ಕೆ ಮನೆಮಕ್ಕಳೆಲ್ಲ ಅಚ್ಚುಕಟ್ಟಾಗಿ ಹೊಂದಿಕೊಂಡರು. ಹೀಗಾಗಿ ತಂದೆಯವರು ತಮಗೆ ದೂರದೂರಿಗೆ ವರ್ಗವಾದರೂ ಕುಟುಂಬದ ನೆಲೆಯನ್ನು ಹಾಸನದಲ್ಲಿಯೇ ಮುಂದುವರಿಸಿದರು. ಅವರು ಸೇವಾನಿವೃತ್ತರಾಗುವವರೆಗೆ ಕುಟುಂಬದ ಪೂರ್ಣ ಹೊಣೆ ಹೊತ್ತು ಮಕ್ಕಳ ಶಿಕ್ಷಣದ ಮೇಲ್ವಿಚಾರಣೆಯನ್ನು ತಾಯಿ ಸೀತಮ್ಮನವರೇ ವಹಿಸಿಕೊಂಡರು.
ಇಲ್ಲಿ ಗಮನಾರ್ಹ ಅಂಶವೇನೆಂದರೆ, ಹೊರರಾಜ್ಯದಿಂದ ಬಂದ ಗೃಹಿಣಿಯೇ ಮನೆಮಕ್ಕಳಿಗೆಲ್ಲ ಕನ್ನಡ ಕಲಿಸಿದ್ದು . ತಂದೆತಾತಂದಿರ ಪರಂಪರೆಯನ್ನು ಅನುಸರಿಸಿ, ಒಡಹುಟ್ಟಿದವರಲ್ಲಿ ನಾವು ಮೂವರು ಕನ್ನಡ ಶಿಕ್ಷಕರಾದುದರಲ್ಲಿ ತಾಯಿಯ ಪಾತ್ರವೂ ಹಿರಿದಾಗಿಯೇ ಇದೆ. ಸೀತಮ್ಮನವರು ಕಿಂಚಿತ್ತೂ ತಪ್ಪಿಲ್ಲದೆ ಕನ್ನಡ ಅಕ್ಷರಗಳನ್ನು ಮುದ್ದಾಗಿ ಬರೆಯುವ ಶೈಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಮಾತ್ರವಲ್ಲ, ಮನೆಯ ಅಂಗಳದಲ್ಲಿ ಬಂದು ಸೇರುತ್ತಿದ್ದ ಪ್ರವಚನಾಸಕ್ತರೆದುರು ಅವರು ರಾಮಾಯಣ, ಮಹಾಭಾರತ, ಪುರಾಣಗಳನ್ನು ಭಾವಪೂರ್ಣವಾಗಿ ಓದುತ್ತಿದ್ದ ರೀತಿಯು ವಾಚನನೈಪುಣ್ಯದ ಸೊಗಸಾದ ಮಾದರಿಯೆನ್ನುವುದರಲ್ಲಿ ಉತ್ಪ್ರೇಕ್ಷೆಯಿಲ್ಲ. ಈ ಕಥನ, ಕಥಾವಸ್ತುಗಳೆಲ್ಲ ನನ್ನ ಮತ್ತು ನನ್ನ ಸೋದರಿಯರ ಅಧ್ಯಾಪನವೃತ್ತಿಗೆ ಸಾಕಷ್ಟು ಪುಷ್ಟಿ ನೀಡಿವೆ.
ಆರ್ಥಿಕ ಸಂಕಷ್ಟವನ್ನು ನಿರಂತರವಾಗಿ ಎದುರಿಸಿಯೂ ನೆಮ್ಮದಿಯ ಕುಟುಂಬ ನಿರ್ವಹಣೆ ಸರಳಸಾಧ್ಯವೆಂಬುದನ್ನು ಸೀತಮ್ಮನವರಿಂದ ಅನೇಕರು ಕಲಿತಿದ್ದಾರೆ. ಹಿರಿಯ ಮಗನ ದುರಂತ, ನಿಕಟಬಂಧುಗಳ ಅಗಲಿಕೆ, ಅನಾರೋಗ್ಯವೂ ಸೇರಿದಂತೆ ಕಾಡಿದ ಹಲವು ಕಷ್ಟಗಳನ್ನು ಸಹಿಸಿ ಬದುಕನ್ನು ಮುನ್ನಡೆಸಬಲ್ಲ ತಾಯಿಯ ಧೈರ್ಯ, ಸಹನಶೀಲತೆಗಳು ಮಕ್ಕಳಿಗೆ ಮಾತ್ರವಲ್ಲ, ಕಷ್ಟಗಳ ಭಾರದಿಂದ ಕಂಗೆಡುವ ಎಲ್ಲ ಗೃಹಿಣಿಯರಿಗೂ ಮಾರ್ಗದರ್ಶಕವಾಗಿವೆ ಎಂದು ನಾನು ಭಾವಿಸಿದ್ದೇನೆ.
😇

ಕಾಮೆಂಟ್ಗಳು