ಜೈಮಿನಿ ಭಾರತ
ಜೈಮಿನಿ ಭಾರತ 17
ಎಂಟನೆಯ ಸಂಧಿ ಮೊದಲ ಭಾಗ
ಪದ್ಯ ,1 ರಿಂದ 25
ಅರ್ಜುನನ ಪಯಣ
ನಿರೂಪಣೆ: ಸುಬ್ಬುಲಕ್ಷ್ಮಿ
ಸಂಕ್ಷಿಪ್ತ ರೂಪ
ಅನುಸಾಲ್ವನೊಂದಿಗೆ ಸೆಣಸಿದ ನಂತರ ಶಾಸ್ತ್ರೋಕ್ತವಾಗಿ ಯಾಗಶಾಲೆಯ ನಿರ್ಮಾಣ ಕಾರ್ಯ ನಡೆಯಿತು. ವಸಂತ ಋ ತು ಬಂದಿತು. ಎಲ್ಲೆಲ್ಲೂಹಸಿರು. ಚಿಗುರು ಕಾಣಿಸಿತು. ಕಂಪು ಬೀರುವಗಾಳಿ, ಪಕ್ಷಿಗಳ ಕೂಜನ, ಭ್ರಮರಗಳ ಹಿಂಡು ಎಲ್ಲವೂ ವಿರಹಿಗಳ ಎದೆಯಲ್ಲಿ ನೋಯಿಸುವಂತೆ ಇದ್ದವು.
ಎಲ್ಲೆಲ್ಲೂ ಮನ್ಮಥನ ದರ್ಬಾರು ನಡೆದಿತ್ತು.
ಮಲ್ಲಿಗೆ, ಸಂಪಿಗೆ, ಕೆಂದಾವರೆಗಳು, ಚಿಗುರಿದ ಅಶೋಕೆ, ಬಣ್ಣಬಣ್ಣದ ಹೂಗಳು ತುಂಬಿ ಆ ಮಧುಮಾಸ ಶೋಭಿಸಿತು. ಆ ಚೈತ್ರಮಾಸವು ಧರ್ಮಜನ ಕೀರ್ತಿಯನ್ನು ಎಲ್ಲೆಡೆಗೂ ಹೊತ್ತು ಒಯ್ಯುವಂತೆ ಮಂದಾನಿಲದಿಂದ ಕೂಡಿತ್ತು.
ನಂತರ ಧರ್ಮಜನು ವ್ಯಾಸರ ಅನುಜ್ಞೆಯಂತೆ ಎಲ್ಲ ಮುನಿಗಳನ್ನು ಕರೆಸಿ ಯಜ್ಞ ಶಾಲೆಯನ್ನು ರಚಿಸಿ ದೀಕ್ಷೆಯನ್ನು ವಹಿಸಿದನು. ಯಾಗದ ಕುದುರೆಯನ್ನು ಅಲಂಕರಿಸಿ ಅದರ ಹಣೆಯಲ್ಲಿ ಸುವರ್ಣಪಟ್ಟಿಕೆಯಲ್ಲಿ ಯಾಗದ ಕುದುರೆಯಿದು ಎಂದು ಬರೆಸಿದನು. ನಂತರ ಪೂಜಿಸಿ ಬೀಳ್ಕೊಟ್ಟರು. ಧರ್ಮಜನು ವ್ರತನಿಷ್ಠನಾದನು.
ಅದರ ರಕ್ಷಣೆಗೆ ಅರ್ಜುನನನ್ನು ನೇಮಿಸಿದನು. ಅವನೊಂದಿಗೆ ಅನುಸಾಲ್ವ, ಯೌವನಾಶ್ವ, ಕರ್ಣಜ, ಸಾತ್ಯಕಿ, ಪ್ರದ್ಯುಮ್ನ ಮೊದಲಾದವರು ಹೊರಟರು. ಅವರವರ ರಾಣಿಯರು ತಮ್ಮ ಕಾಂತರನ್ನು ಆರತಿ, ಸೇಸೆಯೊಂದಿಗೆ ಬೀಳ್ಕೊಟ್ಟರು. ರಾಣಿಯರನ್ನು ಮುದ್ದಿಸಿ, ಮುಂಗುರುಳು ತೀಡಿ ಇವರುಗಳು ಹೊರಟರು.
ಆ ಹಯವು ಸ್ವೇಚ್ಛೆಯಿಂದ ನಡೆಯುತ್ತ ತೆಂಕ ಮುಖವಾಗಿ ನಡೆಯಿತು. ಅಲ್ಲಿ ಮಾಹಿಷ್ಮತೀ ನಗರವು ಎದುರಾಯಿತು. ನೀಲಧ್ವಜನೆಂಬುವನು ಅದರ ಅರಸು. ಅವನ ಮಗ ಪ್ರವೀರ. ರಾಣಿಯರೊಡಗೂಡಿ ಉದ್ಯಾನದಲ್ಲಿ ವಿಹಾರಕ್ಕೆ ಬಂದಿದ್ದರು.
ಕರ್ಣಕಾರವನ್ನು, ಸಂಪಗೆಯನ್ಬು ಕುರುಳುಗಳಲ್ಲಿ ಮುಡಿದ ಸುಂದರಿಯರ ತನುಪರಿಮಳಕ್ಕೆ ದುಂಬಿಗಳು ಮುತ್ತಿದುವು.
ಅವರು ಹೂಗಳನ್ನು ಕೊಯ್ದು, ಚಿಗುರುಗಳನ್ನು ತಳೆದ ತರುಗಳಂತೆ ಶೋಭಿಸಿದರು. ಅವರ ತೋರ ಮೊಲೆಗಳ ಭಾರವನ್ನು ಸೈರಿಸಲಾರದೆ ನಡು ಬಡವಾಯಿತೇನೋ ಎಂಬಂತೆ ಇತ್ತು. ಕಣ್ಣಬೆಳಕು ಎಲ್ಲೆಲ್ಲೂ ಕಂಗೊಳಿಸಿತು. ನಡುವಿನ ಗಟ್ಟಿತನಕ್ಕೆ ಪಟ್ಟಿಯೋ ಎಂಬಂತೆ ತ್ರಿವಳಿಗಳು ಸುಳಿದವು. ಕಾಲಿನ ಗೆಜ್ಜೆಗಳ ಶಬ್ದ ಮೋಹಕವಾಗಿತ್ತು. ಹೀಗೆ ಅಲ್ಲಿ ವಿಹಾರಕ್ಕೆಂದು ಬಂದಿದ್ದ ಹೆಣ್ಣುಗಳನ್ನು ನಾನಾ ವಿಧವಾಗಿ ವರ್ಣಿಸಿದ್ದಾನೆ ಕವಿ. ಅವರು ಅಶ್ವಮೇಧದ ಕುದುರೆಯನ್ನು ಕಂಡರು. ಅವರಲ್ಲಿ ಮದನಮಂಜರಿ ಅದರ ಹಣೆಯ ಮೇಲಿದ್ದ ಫಲಕವನ್ನು ಓದಿದಳು. ಯಮಸುತನ ಅಗ್ಗಳಿಕೆಯನ್ನು ಕಂಡು ತನ್ನ ಪತಿಗೆ ಈ ವಿಷಯವನ್ನು ತಿಳಿಸಲು ಕನಲಿದ ಅರಸನು ಪರಿವಾರವನ್ನು ಅರಮನೆಗೆ ಕಳಿಸಿ ಕುದುರೆಯನ್ನು ಕಟ್ಟಿಹಾಕಿ ಸೇನೆಯನ್ನು ಬರಹೇಳಿದನು. ಪ್ರವೀರನಿಗೆ ಅಗ್ನಿಯ ಬಲವಿತ್ತು. ಅದರಿಂದಾಗಿ ಕುದುರೆಯನ್ನು ಕಟ್ಟಿದನು. ಅಗ್ನಿಯು ಅವರ ಮನೆಯ ಅಳಿಯ.
ಎಂಟನೆಯ ಸಂಧಿ ಮೊದಲ ಭಾಗ
ಪದ್ಯ 1 ರಿಂದ 25
ಸೂಚನೆ | ಅಧ್ವರೋಪಕ್ರಮದೊಳಮಲಹಯಮ್ಮೆದೆ ನೀ | ಲಧ್ವಜನ ಪಟ್ಟಣದೊಳಗ್ನಿಯಂ ಕಂಡರಿಬ | ಲದ್ಧಂಸಿ ಪಾರ್ಥನವನು ಜಯಿಸೆ ಭಂಗದಿಂ ತನ್ನ ಪುರಮಂ ಪೊಕ್ಕನು |
ರಾಯ ಕೇಳನುಸಾಲ್ವನಂ ಕೂಡಿಕೊಂಡು ಕಮ | ಲಾಯತಾಂಬಕನಖಿಳಯಾದವರ ಗಡಣದಿಂ । ದಾ ಯುಧಿಷ್ಠಿರನೃಪನ ಸನ್ಮಾನಮಂ ತಳೆಯುತಿರೆ ಜಾಹ್ನವೀತಟದೊಳು|| ಆಯಿತಧ್ವರಶಾಲೆ ಶಾಸ್ತ್ರ ವಿಶ್ರುತದ ವಿವಿ | ಧಾಯಿತ ವಿಚಿತ್ರ ವೈಭವದಿಂದ ಬಳಿಕಾ ಮ | ಹಾ ಯಾಗದನುಪಮ ಪ್ರಾರಂಭಕಾಲದ ವಸಂತರ್ತು ಸಂಭವಿಸಿತು||೧||
ಒಂದೆಡೆಯೊಳಂ ತನಗೆ ನಿಲವಿಲ್ಲದತಿವೇಗ | ದಿಂದೆ ನಿರುತಂ ಪ್ರಬಲವಾಗಿ ಬೀಸುವ ಗಾಳಿ | ಚಂದನದ್ರು ಮಮಂ ತೊಡರ್ದಹಿಗಳಾಹಾರವಂ ಕೊಂಡುಕೊಂಡು ಮಿಕ್ಕು | ಮಂದತ್ವಮಂ ತಳೆದು ಮಲಯಾಚಲದ ಸೀಮೆ | ಯಿಂದೆ ಸರಸಿಜದೊಳ್ ಭ್ರಮಿಸುವ ಮರಿದುಂಬಿಗಳ | ವೃಂದಮಂ ಕೂಡಿಕೊಂಡಲೆವೆಲರ್ ಬಂದುದು ವಿರಹಿಗಳೆದೆಯಾರುವಂತೆ ||೨||
ಮಿರುಗುವ ತಳಿರ್ದೊರಣಂಗಳಂ ಕಟ್ಟಿಸುತೆ | ಮರಿಗೋಗಿಲೆಗಳ ಬಾಯ್ಗಳ ಬಲಿದ ಬಂಧನದ | ಸೆರೆಗಳಂ ಬಿಡಿಸುತ್ತೆ ತುಂಬಿಗಳ ದಳಕೆ ಕಮ್ಮಲರ್ಗಳಂ ಸೂರೆವಿಡುತೆ || ಕಿರುವೆಲರೊಳೆತ್ತಲುಂ ಸಾರಿಸುತೆ ವಿರಹಿಗಳ | ನೆರಗಿಸುತೆ ಜೊನ್ನದ ಜಸಂ ಪೆರ್ಚೆ ಮಧುನೃಪಂ | ಪೊರಮಟ್ಟು, ಮಾಗಿಯನ್ನು ಡುಗಿಸಿ ಸಮಸ್ತ ವನರಾಷ್ಟ್ರಮಂ ಕೈಕೊಂಡನು || ೩ ||
ಪೊಸಮಾವಶೋಕೆಯೊಳ್ ಮರಿದುಂಬಿ ಕೋಗಿಲೆಯೊ | ಳೆಸೆವ ಸಂಪಗೆ ಪೊಚ್ಚ ಪೊಂದಾವರೆಯೊಳೊಳ್ ! ಡಸಿದ ಮಲ್ಲಿಗೆಯಲರ್ ಬೆಳತ ಬೆಳ್ದಿಂಗಳೊಳ್ ಗಿಳಿವಿಂಡು ಬನಸಿರಿಯೊಳು || ಎಸೆದುವೊಂದೊಂದರೊಳ್ ಮಧುಮಾಸಕಂಗಜನ | ದೆಸೆಯಂತೆ ಖತಿಯಂತೆ ಧನದಂತೆ ಜಸದಂತೆ | ಪಸುರ್ವೆಳಸಿನಂತೆ ಕೆಂಪಸಿತಂ ಪಳದಿ ಪಳುಕುಪಚ್ಚೆಗಳ ಬಣ್ಣದಿಂದೆ||೪||
ತಳಿತೆಸೆವ ತರುಗಳ ನೆಳಲ್ಗಳಂ ಸಾರ್ದು ಶೀ | ತಳದ ನಿರ್ಮಲಸುವಾರಿಯನೀಂಟಿ ನವ್ಯ ಪರಿ | ಮಳದಿಂದ ಸೊಗಸ ತೀಡುವ ತೆಳುವೆಲರ್ಗೆ ಮೈಯೊಡ್ಡಿ ಮಾರ್ಗಶ್ರಮವನು|| ಕಳೆದರಧ್ವರಗರೋಪದೊಳ್ ನೆರೆದು ವಿರಹಿಗಳ್ | ಮಲಯಜದ ಘನಸಾರದೊಳ್ ತಂಪುವೆತ್ತು ನಿ | ಚ್ಚಳದ ಕರುವಾಡದೊಳ್ ಭೋಗಿಸಿದರಂದು ಚೈತ್ರಾಗಮದ ಸಂಭ್ರಮದೊಳು ॥ ೫॥
ಆ ಚೈತ್ರಮಾಸಮೆಸೆದುದು ಧರ್ಮಜನ ಕೀರ್ತಿ | ಭೂಚಕ್ರಮಂ ಮುಸುಕಿದಂತೆ ಬೆಳುದಿಂಗಳಿರೆ | ಯಾಚಕರನೆತ್ತಲುಂ ಕೂಗಿ ಕರೆವಂತುಲಿಯೆ ಕೋಗಿಲೆಗಳಿಳೆಯ ಜನದ || ಲೋಚನಕುದಯಿಸುವ ಪಸದಂತೆ ಚೂತಾಂಕುರಂ | ಗೋಚರಿಸೆ ಪಾತಕಕ್ಷಯದಂತೆ ಮಾಗಿಯ ವಿ | ಮೋಚನಂ ಕಾಣಿಸಲ್ ಪುಣ್ಯವಾಸನೆಯಂತೆ ದಕ್ಷಿಣದ ವಾಯು ಸುಳಿಯೆ ॥ ೬ ॥
ಧಾತ್ರೀಶ ಕೇಳ್ ಬಳಿಕ ಧರ್ಮಜಂ ತಾಮರಸ | ನೇತ್ರ ವೇದವ್ಯಾಸರಾಜ್ಞೆಯಿಂದಖಿಳರ್ಷಿ ! ಗೋತ್ರದ ಮುನಿಗಳೆಲ್ಲರಂ ಕರೆಸಿ ಮೇಲವರನುಜ್ಞೆಯಿಂದಾ ಯಜ್ಞದ || ಸೂತ್ರಪ್ರಕಾರದಿಂದಾರಾಜಿಸುವ ಬಹಿಃ | ಕ್ಷೇತ್ರದದ್ವರಶಾಲೆಯೊಳ್ ದೀಕ್ಷೆಯಂ ತಳೆದು | ಚೈತ್ರಸಿತಪೌರ್ಣಮಾಸಿಯ ದಿನದೆ ಬಿಟ್ಟ ನರ್ಚಿಸಿ ಹಯವನುತ್ಸವದೊಳು | ೭ |
ಇಂದುಕುಲದಗ್ಗಳೆಯ ಪಾಂಡುವಸುಧಾಪಾಲ | ನಂದನ ಯುಧಿಷ್ಠಿರ ನರೇಂದ್ರನಧ್ವರಹಯಮಿ | ದಂ ದಿಟ್ಟ ರಾರಾದೊಡಂ ಕಟ್ಟಿಕೊಳ್ಳಲಾರ್ಪೊಡಿಳೆಯೊಳೆಂಬೀ ಲಿಪಿಯನು | ಸಂದಿಸಿ ಬರೆದ ಕನಕಪಟ್ಟ ಮನದರ ಪಣೆಯೊ । ಳೊಂದಿಸಿ ತುರಂಗಮವನಮಲವಸ್ತ್ರಾಭರಣ | ದಿಂ ದಿವ್ಯ ಗಂಧಮಾಲ್ಯಾಕ್ಷತೆಗಳಿಂದಲಂಕರಿಸಿ ಬಿಟ್ಟರ್ ಶುಭದೊಳು||೮||
ಶ್ಲಾಘ್ಯದಿಂದಾದ ಮಜ್ಜನಭೋಜನದ ಸದಾ | ರೋಗ್ಯದಿಂ ತಾಂಬೂಲ ವಸ್ತ್ರ ಭೂಷಣದ ಸೌ । ಭಾಗ್ಯದಿಂ ಕುಸುಮ ಪರಿಮಳಲೇಪನಂಗಳಿಂ ಸ್ತ್ರೀಪುರುಷರೇಕಾಂತಕೆ| | ಯೋಗ್ಯವಹ ಸಜ್ಜೆ ವನೆಯೊಳಗೀರ್ವರುಂ ದಿವ್ಯ | ಭೋಗ್ಯಮೆನಿಪೊಂದು ಮಂಚದೊಳೊರಗಿ ಕಾಮ | ರಾಗ್ಯವಾಗಿರ್ಪುದಸಿಪತ್ರವ್ರತಂ ತದ್ವ್ರ ತದೊಳರನಸ ನಿರುತಿರ್ದನು||೯||
ತದ್ಯಾಗವೊಂದು ಬರಿಸಕೆ ಮುಗಿವುದನ್ನೆ ಗಂ! ಸದ್ಯಾಜಮಾನದೀಕ್ಷೆಯನವನಿಪಂ ತಾಳ | ನುದ್ಯುಕ್ತರಾದರರ್ಜುನನೊಡನೆ ಹಯರಕ್ಷೆಗಸುರಹರನಾಜ್ಞೆಯಿಂದೆ || ಉದ್ಯತ್ಪರಾಕ್ರಮಿಗಳನುಸಾಲ್ವ ಸಾತ್ಯಕಿ | ಪ್ರದ್ಯುಮ್ನ ಕೃತವರ್ಮ ಯೌವನಾಶ್ವಾತಿಬಲ | ಖದ್ಯೋತಸುತನು ಮೊದಲಾದ ವೀರರೊದಗಿತು ಚಾತುರಂಗದೊಡನೆ ||೧೦||
ಇಭಮುಖಾರ್ಚನೆಯಂ ನವಗ್ರಹದ ಪೂಜೆಯಂ | ವಿಭವದಿಂ ಮಾಡಿ ಧರ್ಮಜ ಭೀಮ ಕುಂತಿಗ | ಳ್ಗಭಿನಮಿಸಿ ಕೃಷ್ಣನ ಪದಾಂಬುಜಕ್ಕೆರಗಿ ದಿಕ್ಷಾಲರಂ ಬೇಡಿಕೊಂಡು|| ಶುಭಮಹೂರ್ತದೊಳರಸಿಯರ ಸೇಸೆವೆತ್ತು ಮುನಿ | ಸಭೆಗೆ ವಂದಿಸಿ ಪರಕೆಗೊಂಡು ಪಾಠಕರ ಜಯ | ರಭಸದಿಂದೆಸೆವ ಮಂಗಳವಾದ್ಯ ಘೋಷದಿಂದರ್ಜುನಂ ಪೊರಮಟ್ಟನು||೧೧||
ಮುರಹರನ ರಾಣಿಯರ್ ಧುರಧೀರ ಕರ್ಣಸುತ | ನರಸಿಯೆಂದೆನ್ನ ಪೊಗಳ್ವಂತೆ ಮಿಗೆ ಸಂಗರದೊ | ಳರಿಗಳಂ ಗೆಲ್ವುದೆಂದಾರತಿಯನೆತ್ತಿ ಮುತ್ತಿನ ಸೇಪೆಗಳನೆ ಸೂಸಿ ॥ ಭರದಿಂದ ಬಂದಪ್ಪಿದಂಗನೆಯ ಮೊಗನೋಡಿ | ಕುರುಳುಗಳನುಗುರ್ಗಳಿಂ ತಿದ್ದಿ ಮುದ್ದಿಸಿ ತನ್ನ | ಬೆರಳುಂಗುರಂಗೊಟ್ಟು ಸಂತೈಸಿ ವೃಷಕೇತು ಕಾಂತೆಯಂ ಬೀಳ್ಕೊಂಡನು ||೧೨||
ಅಂಕೆಯಿಂದರ್ಜುನಂಗಂದು ಯಾದವಸೈನ್ಯ! ಮಂ ಕೂಡಿಕೊಟ್ಟು ದಳಪತಿಯಾಗಿ ತನಯನಂ । ಮುಂಕೇಳಿಸಿ ಕರ್ಣಜ ಸುವೇಗಾನುಸಾಲ್ವರ ಸಹಾಯಮಂ ಕೈವರ್ತಿ ಸಿ ॥ ಪಂಕರುಹಲೋಚನಂ ಪೊರಮಟ್ಟನಿಬರೆಲ್ಲ | ರಂ ಕಳುಹಿ ತಿರುಗಿದಂ ಸ್ಟೇಚ್ಛೆಯಿಂದಾ ಹಯಂ | ತೆಂಕಮೊಗವಾಗಿ ನಡೆದುದು ಕರಿತುರಗರಥಪದಾತಿಗಳ್ ಸಂದಣಿಸಲು |೧೩|
ಊಹಿಸುವೊಡರಿದೆನೆ ತುರಂಗಮದ ಕೂಡೆ ಸ | ನ್ನಾಹದಿಂ ಮೇರೆದಪ್ಪಿದ ಮಹಾರ್ಣವದ ಪ್ರ | ವಾಹಮೆನೆ ತಳ್ತಿಡಿದ ತರುಗುಲ್ಕಲತೆಗಳಿಂ ನಡೆಗೊಂಡ ಕಾನನವೆನೆ || ಮೋಹರಂ ಭೂತಳಮನೊಳಕೊಂಡು ಬರುತಿರ್ದು | ದಾಹಯಂ ಬಳಿಕ ದಕ್ಷಿಣದಿಶಾಮುಖವಾಗಿ 1 ಮಾಹಿಷ್ಮ ತೀಪಟ್ಟಣದ ಬಹಿರ್ಭಾಗದುಪವ ನದೆಡೆಗೆ ನಡೆತಂದುದು||೧೪||
ಆ ನಗರದರಸು ನೀಲಧ್ವಜಂ ಮೇಣವನ | ಸೂನು ಪ್ರವೀರನೆಂಬವನಾಗಳಲ್ಲಿಗು | ದ್ಯಾನಕೇಳಿಗೆ ಬಂದನೊಲವಿಂದ ಮದನಮಂಜರಿಯೆಂಬ ಕಾಂತೆಯೊಡನೆ|| ಆ ನಳಿನಲೋಚನೆಯ ಕೆಳದಿಯರ್ ಬಿಡಯದಿಂ । ದಾನಂದನದೊಳು ಸಂಚರಿಸುತಿರ್ದರ್ ಒಳಿಕ | ಮಾನಕೇತನ ಮಹೀಪಾಲನರಮನೆಯ ಸೊಕ್ಕಾನೆಗಳ ತಂಡದಂತೆ||೧೫||
ನೋಡಿ ತಿಲಕವನಪ್ಪಿ ಕುರುವಕವನೆಳನಗೆಯೊ | ಕೂಡಿ ಸಂಪಗೆಯಂ ಪ್ರಿಯಂಗುವಂ ಸೋಂಕಿ ಮುರಿ | ದಾಡಿ ಚೂತಮನೊದೆದಶೋಕೆಯಂ ಬಕುಳಮಂ ಮುಕ್ಕುಳಿಸಿ ಮದ್ಯದಿಂದ|| ಪಾಡಿ ಪುನ್ನಾಗಮಂ ಕರ್ಣಕಾರವನೆ ಕೊಂ| ಡಾಡಿ ಮಂದಾರಮಂ ಜಾಣ್ಣುಡಿದು ಪುಷ್ಪಿ ತಂ । ಮಾಡಿ ತೋರಿದರಂಬುಜಾಕ್ಷಿಯರ್ ನಾನಾವಿಲಾಸದಿಂದಾ ಬನದೊಳು||೧೬||
ಮುಟ್ಟಲ್ ಪ್ರಿಯಂಗು ಪೂವಹ ತರಳೆಯರ ಕೈಗೆ | ನಿಟ್ಟಿಸಲ್ ತಿಲಕಮಲರಹ ನೀರೆಯರ ಕಣ್ಗೆ| ಮೆಟ್ಟಿದೊಡಶೋಕಮಂಕುರಮಪ್ಪ ಬಾಲೆಯರ ಮೆಲ್ಲಡಿಗೆ ಮಿಗೆ ಬೆಳ್ಳಗೆ || ಪುಟ್ಟ ಸಂಪಗೆ ಮುಗುಳ್ದೋರ್ಪ ಸುದತಿಯರ | ಬಟ್ಟ ಮೊಗಕೆಣೆಯಹವೆ ತಾವರೆಗಳೆಂದವಂ | ಬಿಟ್ಟು ತುಂಬಿದ ಜೌವನೆಯರ ತನುಪರಿಮಳಕೆ ಕವಿದುವಾ ಬನದಳಿಗಳು ॥೧೭॥
ಸಣ್ಣ ನಡು ಸೈನಿಮಿರೆ ತೋಳಮೊದಲೊಸೆಯೆ | ತಿಣ್ಣ ಮೊಲೆಗಳ ಪೊದಳೆ ಬೆನ್ನ ಸೋರ್ಮುಡಿಯಲೆಯೆ | ಕಣ್ಣ ಬೆಳಗಾಗಸವನಾವರಿಸೆ ಮೊಗಮೆತ್ತಿ ತುದಿಗಾಲ್ಗಳಿಂದೆ ನಿಂದು || ಬಣ್ಣವಳಿಯದ ಪೂಗಳಂ ಕೊಯ್ದು ಬೆಂಡಾಗಿ | ತಣ್ಣಿಲರ್ಗೊಡ್ಡಿ ಮೈಬೆಮರನಾರಿಸಿಕೊಂಡು | ಪೆಣ್ಣು ವಿಂಡಾ ಬನದೊಳಲರ್ಗಳಂ ತಮ್ಮ ತನುವಿನ ಕಂಪಿನಿಂ ಪೊರೆದರು ॥೧೮॥
ನಿಲುಕಿ ಪೂಗೊಯ್ವ ಲಲಿತಾಂಗಿಯರ ಬಟ್ಟ ಬ | ಲ್ಗೊಲೆಗಳಂ ಪೊರಲಾರದಸಿಯ ಸೆಳೆನಡುವಿದು ಶಿ | ಥಿಲವೆಂದು ಹರಿನೀಲದೆಸೆವೊಂದು ಸಣ್ಣ ಸರಳಂ ಮನೋಜಂ ನಿರ್ಮಿಸಿ | ನಿಲಿಸಿ ಬಿಗಿದನೊ ಮೂರು ಕಟ್ಟ ನಡೆಗೆಡೆಗೆನಲ್ | ಸಲೆ ರಾಜಿಸಿತು ವಳಿಯದ ಚೆಲ್ವಿಕೆಯಿಂದೆ | ಲಲನೆಯರ ಮಧ್ಯದೊಳೊಗೆದ ಬಾಸೆ ಕುಸುಮಾಪಚಯಸಮಯದೊಳ್ ಪೊಸಶೆನೆ||೧೯||
ತುಂಬಿಗಳನೋಡಿಸದ ಚಂಪಕಂ ಸೊಕ್ಕಾನೆ | ಯಂ ಬೆದರಿಸದ ಸಿಂಗಮಿಡಿದಂಧಕಾರಮಂ । ತುಂಬಿಸದ ಚಂದ್ರಮಂಡಲಮಿರಲ್ ಕಂಡಿಲ್ಲಿ ನಾವು ಮಿರ್ದೊಡೆ ನಮ್ಮನು|| ಶಂಬರಾರಿಯ ತರಂ ಕಾಡದಿರುಳಿನ ವಿರಹ | ಕೆಂಬ ನಿಶ್ಚಯದೊಳಗಲದೆ ಬಾಲಿಕೆಯರುರವ | ನಿಂಬುಗೊಂಡೆಣೆವಕ್ಕಿಯೆನಲೆಸೆದುವಲರ್ಗೊಯ್ವ ನೀರೆಯರ ನೆಲೆಮೊಲೆಗಳು||೨೦||
ಮೊಳೆವಲ್ಲ ಮೊಲ್ಲೆಯಂ ಚೆಂದುಟಿಯ ಬಂದುಗೆಯ |ನೆಳನಗೆಯ ಮಲ್ಲಿಗೆಯ ನೆಸಳ್ಗಣ್ಣ ನೈದಿಲಂ । ನಳಿತೋಳ ಸಿರಿಸಮಂ ಸೆಳ್ಳುಗುರ ಕೇತಕಿಯ ನುಣ್ಮೊಗದ ತಾವರೆಯನು || ತೊಳಗುವ ಸುನಾಸಿಕದ ಸಂಪಗೆಯನವಯವದೊ | ಳಳವಡಿಸಿ ಕುಸುಮಗಂಧಿಯರೇತಕಿನ್ನು ಪೂ | ಗಳನರಸಿ ಕೊಯ್ವರೆಂದವರ ನಡು ಚಿಂತಿಸಿಯೇ ಬಡವಾದುದೆನಲೆಸೆದುದು |೨೧||
ಕರವೀರವರ್ಗಮುಂ ಬಾಗಿಸಿದರದಟರಂ | ತಿರದೆ ಪುನ್ನಾಗಮಂ ಪತ್ತಿರಂಜಿಸಿದರ್ ಚ | ದುರಮಾವುತಿಗರಂತೆ ಜಾತಿಯಂತರವನರಿದಾಯ್ದ ರವನೀತರಂತೆ || ಸುರಗಿಯಂ ತುಡುಕಿದರ್ ಭಟರಂತೆ ಬಗೆಗೆಳಸಿ । ಪರಿದರ್ ಸುವಿಟರಂತೆ ಪಾದರಿಯನರಸಿ ಪಿಡಿ | ದುರವಣಿಸಿದರ್ ನಗರಶೋಧನೆಯ ತಳವಾರರಂತೆ ಬನದೊಳ್ ಪೆಣ್ಣಳು ||೨೨||
ಜಾತಿ ಸೇವಂತಿಗೆ ಶಿರೀಷಮೊದಲಾದ ಪೂ | ಜಾತಿಗಳೊಳಿಂತಲರ್ಗೊಯ್ಯುತುಪವನದೊಳ್ ನಿ। ಜಾತಿಶಯಲೀಲೆಯಿಂದಿರುತಿರ್ದಳಾ ಮದನಮಂಜರಿ ಕೆಳದಿಯರೊಡನೆ || ಭೂತಳದೊಳಿದು ಶುಭಾಕಾರದಿಂದಾಶ್ಚರ್ಯ| ಭೂತಮೆನೆ ಮೈದೋರಿತಾಗಳಮರೇಂದ್ರ ಸಂ| ಭೂತನ ತುರಂಗಮಮದಂ ಕಂಡು ಮುತ್ತಿದರ್ ಮತ್ತಗಜಗಾಮಿನಿಯರು ॥೨೩||
ವನಿತೆಯರೊಳಾ ಮದನಮಂಜರಿ ಹಯದ ಪಣಿಯ | ಕನಕಪಟ್ಟದ ಲೇಖನವನೋದಿಕೊಂಡು ಯಮ । ತನುಜನಗ್ಗಳಿಕೆಯಂ ಕಂಡು ನಸುನಗುತೆ ನಿಜಪತಿಗಾಗಳದನುಸಿರಲು || ಕನಲ್ದಿ ನಿಯಳಂ ನೋಡುತವನೆದ್ದು ಕಾಣಬಹು | ದೆನುತೆ ಪಿಡಿದಶ್ವಮಂ ಕಟ್ಟಿ ಪಟ್ಟಣಕೆ ಮಾ | ನಿನಿಯರಂ ಕಳುಹಿ ಪರಿವಾರಮಂ ಕರೆಸಿ ನರನೊಳ್ ಕಾದಲನುವಾದನು ||೨೪||
ಭೂಲೋಲ ಕೇಳಗ್ನಿ ಮನೆಯಳಿಯನಾಗಿಹಂ। ನೀಲಧ್ವಜಂಗದೆಂತೆನೆ ಮುನ್ನ ವನ ಮಗಳ್ | ಮೂಲೋಕದೊಳ್ ಸುಭಗರಾರೆಂದರಸಿ ನೋಂತು ಪಾವಕನ ನೊಲಿಸೆ ಮೆಚ್ಚಿ ಬಾಲಿಕೆಯನಂದುಮೊದಲಾಗಿ ವೈಶ್ವಾನರಂ | ಪಾಲಿಪಂ ಪತಿರೂಪದಿಂದಾ ಪುರದೊಳವನ | ಮೂಲ ಬಲದಿಂ ಪ್ರವೀರಂ ಪಿಡಿದು ಕಟ್ಟಿದಂ ಪಾರ್ಥನ ತುರಂಗಮವನು ||೨೫||
ಜೈಮಿನಿ ಭಾರತ 18
ಎಂಟನೆಯ ಸಂಧಿ ಕೊನೆಯ ಭಾಗ
ಪದ್ಯ 26 ರಿಂದ 49
ಅಗ್ನಿಯ ಪ್ರಾಬಲ್ಯ
ನಿರೂಪಣೆ: ಸುಬ್ಬುಲಕ್ಷ್ಮಿ
ಸಂಕ್ಷಿಪ್ತ ರೂಪ
ಕಟ್ಟಿದ್ದ ಕುದುರೆಯನ್ನು ಕಂಡ ಭಟರು ಅರ್ಜುನನಿಗೆ ವರದಿ ಮಾಡಲು ಅವನು ನಸುನಕ್ಕು ತನ್ನ ಸೈನ್ಯವನ್ನು ಸಜ್ಜುಗೊಳಿಸಿದನು. ಚತುರಂಗ ಸೈನ್ಯದ ಆಘಾತಕ್ಕೆ ಭೂಮಿ ನಡುಗಿತು. ರಣಭೇರಿಗಳು ಮೊಳಗಿದವು. ಉಕ್ಕಿದ ಸಮುದ್ರದಂತೆ ಇತ್ತು ಪಾರ್ಥನಸೇನೆ. ಪ್ರವೀರನನ್ನು ಮುಸುಕಿತು. ಪ್ರವೀರನ ಸೈನ್ಯವೂ ಜೋರಾಗಿದ್ದಿತು. ಅವನ ಬಾಣಗಳು ಸುವೇಗ, ಯೌವನಾಶ್ವ, ವೃಷಕೇತು, ಸಾತ್ಯಕಿ ಕೃತವರ್ಮರನ್ನು ತಾಕಿದವು. ಬಾಣಗಳ ಮಳೆಯೇ ಸುರಿಯಿತು.ಇವನು ಕಾಳಗ ನಡೆಸುತ್ತಿರುವಾಗ ನೀಲಧ್ವಜನ ಸೇನೆಯೂ ಪುರದಿಂದ ಹೊರ ಬಂದು ಸೇರಿತು. ಇಡೀ ಭೂಮಿಯು ಧೂಳಿನಿಂದ ಆವೃತವಾಯಿತು.
ಆ ಮಹಾ ಸೈನ್ಯವನ್ಬು ಪಾಂಡವರ ಸೇನೆಯು ಎದುರಿಸಿತು. ರಕ್ತದ ಹೊಳೆಯೇ ಹರಿಯಿತು.ಹೆಣಗಳ ರಾಶಿ , ಮರುಳುಗಳ ಕೋಲಾಹಲ ಮೇರೆಮೀರಿತು. ಒಬ್ಬರಿಗೊಬ್ಬರು ಮೂದಲಿಸುತ್ತ ಕಾದಿದರು. ಕೇಶಾಕೇಶಿ ಯುದ್ಧ ನಡೆಯಿತು.
ಕೃತವರ್ಮನ ಕೆಚ್ಚು, ಪ್ರದ್ಯುಮ್ನನ ಕೆಚ್ಚು, ಸಾತ್ಯಕಿಯ ಶೌರ್ಯ, ಸಾಲ್ವನ ಉಬ್ಬಟೆ ಇತ್ಯಾದಿ ಆರ್ಭಟಗಳಿಂದ ನೀಲಧ್ವಜನ ಸೇನೆ ಧೃತಿಗೆಟ್ಟಿತು. ಅರ್ಜುನನ ಬಾಣಗಳೂ ಸೇರಿ ಅವನ ಸೈನ್ಯ ಕೆದರಿತು. ಅರ್ಜುನನ ಕೋಪಕ್ಕೆ ಸಿಕ್ಕು ಪುಡಿಯಾಗತೊಡಗಿತು.
ಮತ್ತೆ ತಂದೆಮಕ್ಕಳ ಶೌರ್ಯ ಮೇಲಾಯಿತು. ಎದುರು ಬಂದವರನ್ನೆಲ್ಲ ಹೊಡೆಯುತ್ತ ಸಾಗಿದರು. ಅರ್ಜುನನು ಕನಲಿ ಅವರನ್ನು ತಡೆಯಲು ನೀಲಧ್ವಜನು ಅಳಿಯನಾದ ಅಗ್ನಿಯನ್ನು ಕುರಿತು ನೀನಿದ್ದೂ ನಾವು ಹೀಗೆ ವ್ಯಥೆಪಡಬೇಕೆ? ಎನ್ನಲು ಅಗ್ನಿಯು ಪಾರ್ಥನ ಸೈನ್ಯವನ್ನು ಸುಡತೊಡಗಿದನು.
ಛತ್ರ, ಚಾಮರ, ಸೀಗುರಿ, ರಥಗಳು, ದ್ವಜಗಳು, ವಾಹನಗಳು, ವಸ್ತ್ರಗಳು ಸುಡತೊಡಗಿದವು. ಬೆಂಕಿಯ ಜ್ವಾಲೆ ಗಗನಕ್ಕೆ ಚಿಮ್ಮಿತು. ಧಗಧಗನೆ, ನೆಗೆನೆಗೆದು, ಚಟಚಟನೆ, ಮೊಗೆಮೊಗೆದು, ದುಗುದುಗುಸಿ ಇತ್ಯಾದಿ ಪದಗಳ ಸಮೂಹ ಬೆಂಕಿಯ ತೀವ್ರತೆಯನ್ನು ಸೂಚಿಸುತ್ತದೆ. ( ಪದ್ಯ 39 )
ರಾಮನ ಕೋಪಕ್ಕೆ ಸಿಕ್ಕ ಸಮುದ್ರ ತೊಳಲಿದಂತೆ ಅಗ್ನಿಯ ಉರುಬೆಗೆ ಪಾರ್ಥನ ಸೈನ್ಯ ಬೆಂದು ಬಸವಳಿಯಿತು. ಕೆಲವರು ಸುಟ್ಟು ಬೂದಿಯಾದರು. ಹಲವರು ಗಾಯಗೊಂಡರು. ಕವಚ ಸುಟ್ಟು ನಗ್ನರಾದರು. ಪಾವಕನ ಈ ಆರ್ಭಟ ಕಂಡು ಅರ್ಜುನನು ಚಿಂತಿಸಿದನು.
ಶುಚಿಯಾಗಿ ಕುಳಿತು ಅಗ್ನಿಸೂಕ್ತಗಳಿಂದ ಅಗ್ನಿಯನ್ನು ಪ್ರಾರ್ಥಿಸಿದಾಗ ಅಗ್ನಿಯು ಪ್ರತ್ಯಕ್ಷನಾದನು. ಅವನಿಗೆ ನಮಿಸಿ ಏಕೆ ಈ ಮುನಿಸು ? ಮೂರುಲೋಕಕ್ಕೂ ನೀನೇ ಬೇಕಾದವನು, ದಾರಿ ತೋರು ಎಂದು ಪ್ರಾರ್ಥಿಸಿದನು. ಆದಿನ ನೀನೇ ನನಗೆ ಗಾಂಡೀವವನ್ನು ಕೊಟ್ಟಿದ್ದೆಯಲ್ಲವೆ ಎಂದನು. ಅಲ್ಲದೆ ಪಾಂಚಾಲಿ ನಿನ್ನಿಂದ ಬಂದವಳಲ್ಲವೆ ಎಂದನು. ಅಗ್ನಿಯು ಮೆಚ್ಚಿ ನಾವು ನಿನಗೆ ಮುಳಿಯೆವು. ಹರಿಯ ಒಲವಿರಲು ಈ ಯಾಗದ ಅವಶ್ಯಕತೆಯೇಕೆ ಎಂದು ಕೇಳಿದನು. ಅದಕ್ಕೆ ಇದು ಮುನಿಯ ಆಜ್ಞೆಯೆಂದೂ, ಇದಕ್ಕೆ ಹರಿಯೂ ಸಮ್ಮತಿ ನೀಡಿರುವನೆಂದು ಉತ್ತರಿಸಲು ಅಗ್ನಿಯು ಶಾಂತನಾದನು.ಆಗ ಅವನು ನೀಲಧ್ವಜನಿಗೆ ಯುದ್ಧ ಬೇಡವೆಂದು ತಿಳಿಸಿದನು.
ಆ ವೇಳೆಗೆ ಸೂರ್ಯಾಸ್ತದ ಸಮಯವಾಯಿತು. ಆಕಾಶದಲ್ಲಿ ಎಲ್ಲೆಡೆಯೂ ಕೆಂಪು ಹರಡಿತು. ಪಕ್ಷಿಗಳು ಗೂಡು ಸೇರಿದವು. ಕತ್ತಲೆಯ ಕಿಡಿಗಳಂತೆ ಕಪ್ಪು ಕವಿಯಿತು. ಕಮಲಗಳು ಮುಚ್ಚಿಕೊಂಡವು. ಗೂಗೆಗಳು ಎಚ್ಚತ್ತವು. ನೀಲಧ್ವಜನು ತನ್ನ ನಗರದೆಡೆಗೆ ತಿರುಗಿದನು.
ಎಂಟನೆಯ ಸಂಧಿ ಕೊನೆಯ ಭಾಗ
ಪದ್ಯ 26 ರಿಂದ 49
ಕಟ್ಟಿರ್ದ ಕುದುರೆಯಂ ಕಂಡು ಕಾಪಿನ ಭಟರ್ | ದಟ್ಟಿಸಿದೊಡಾ ಪ್ರವೀರಂ ಕೆರಳ್ತಾಹವಂ | ಗೊಟ್ಟೆ ನಾರ್ಪೊಡೆ ಬರಲಿ ತನ್ನೊಡನೆ ಕಾಳಗಕೆ ಪಡೆಸಹಿತ ಪಾರ್ಥನೆಂದು || ತೊಟ್ಟಂ
ಶರಾಸನದೊಳಂಬನವನೀ ಮಾತು | ಮುಟ್ಟಿದುದು ಫಲುಗುಣಂಗೆಳನಗೆಯ ಕೋಪದಿಂ | ದಟ್ಟಿ ನೋಡಿದೊಡಾಗ ನಡೆದುದು ಚತುರ್ಬಲಂ ಸರ್ವಸನ್ನಾಹದಿಂದ ||೨೬|
ಚೂಳಿಯ ಚತುರ್ಬಲದ ಧಾಳಿ ನಗರಿಗೆ ನಭಕೆ | ದೂಳಿ ದೆಸೆದೆಸೆಗಳೆ ಘೀಳಿಡುವವಾದ್ವರವ | ದೋಳಿ ನೆರೆ ಮುಸುಕಿತೊಂದೇ ಬಾರಿ ಪುರಜನಕೆ ರವಿಗೆ ದಿಕ್ಷಾಲಕರ್ಗೆ | ಬಾಳುವೆ ಮಹಾತೇಜಮತಿತಯದ ಪದವಿಗಳ್ | ಕಾಳಹುದು ಮಸುಳಿವುದು ಚಲನಮಹುದೆಂದು ಹೇ | ರಾಳಭಯದಿಂ ಶಂಕೆಯಿಂದದ್ಭುತಂಗಳಿಂ ಧೃತಿ ಗತಿ ಮತಿಗಳಳಿದುವು||೨೭|ا
ಮೇರೆದಪ್ಪಿದ ಮಹಾರ್ಣವದಂತೆ ಭುವನಸಂ | ಹಾರಕಾಲದ ಮೇಘಚಯದಂತೆ ಭರದಿಂದೆ ಪ್ರ | ವೀರನಂ ಮುಸುಕಿತರ್ಜುನನ ಮುಂಚೂಣಿಯ ಚತುರ್ಬಲಂ ದೆಸೆದೆಸೆಯೊಳು || ತೇರೈನದಿರ್ದನವನತಿಸತ್ವದಿಂದ ಸಂ | ಸಾರಪ್ರಲಾಪಮಾಲಾಕುಲಮನಧ್ಯಾತ್ಮ | ಸಾರದಿಂ ತಡೆವ ಯೋಗೀಶ್ವರನ ಚಿತ್ತದಂತೆಚ್ಚರಿನ ಧಾತುಗೆಡದೆ||೨೮||
ಮೇಗೆ ಮುಸುಕಿದ ಚೂಣ್ಇಯನಿತು ಚಾತುರ್ಬಲವ | ನಾಗಳೊರ್ವನೆ ಚಾರಿವರಿವರಿದು ಬಾಣಪ್ರ | ಯೋಗಂಗಳಿಂ ಪ್ರದ್ಯುಮ್ನ ಸಾತ್ಯಕಿ ವೃಷಧ್ವಜ ಸು || ಯೋಗಂಗಳಿಂ ಪ್ರವೀರಂ ಕೊಲ್ವುದಂ ಕಂಡು ಬಿಲ್ಗೊಂಡು ಕೋಪದಿಂದೆ| ವೇಗಾನುಸಾಲ್ವ, ಕೃತವರ್ಮಾದಿ ಪಟುಭಟರ್ | ತಾಗಿದರ್ ಕಲ್ಪ ಮೇಘಂಗಳಿಂ ತಡೆವಿಟ್ಟ ಮಳೆಯೆನಲ್ ಕಣಿಗರೆಯುತೆ||೨೯||
ಆ ಪ್ರವೀರಂ ಬಳಿತನಿದರೆಲ್ಲರೊಡನೆ ನಾ| ನಾಪ್ರಕಾರದ ಸಮರದೊಳ್ ಕಾದಲಿತ್ತ ಸೇ | ನಾಪ್ರತತಿಸಹಿತ ನೀಲಧ್ವಜಂ ನಗರಮಂ ಪೊರೆಮಟ್ಟನೇ ಪೇಳ್ವೆನು || ಈ ಪ್ರಭಾಕರಕಿರಣವಮೀ ವಾಯುಸಂಚರಣ । ಮೀ ಪ್ರವಹಿಸುವ ನದಿಗಳೀ ಗಗನಮೀ ದರೆ ಮ | ಹಾಪ್ರಳಯಕಡಗುವಂತಡಗಿ ಭುವನತ್ರಯಂ ಬರಿದೂಳಿಮಯವಾಗಲು ॥೩೦||
ಬೊಗಸಿದರ್ ಪರಬಲವನಾಗ ಪ್ರವೀರನಂ । ತೆಗೆಸಿದರ್ ಪಿನ್ನೆಲೆಗೆ ರಿಪುಸೈನ್ಯದಳವಿಯಂ 1 ತೆಗೆಸಿದರ್ ತಮತಮಗೆ ಕೈಕೊಂಡು ವಾರಣ ವರೂಥ ವರವಾಜಿಗಳನು || ಪುಗಿಸಿದರ್ ವೈರಿಮೋಹರದೊಳಗೆ ಸಾಹಸಂ | ಮಿಗಿಸಿದರ್ ಪೊಯ್ದಾಡಿ ತನಿವೀರರನದಿಂದ | ಸೊಗಸಿದರ್ ಧುರಧೀರ ನೀಲಧ್ವಜನ ಮನೆಯ ಚತುರ ಚತುರಂಗದವರು |೩೧||
ಮಗ್ಗಿದರ್ ಮಸಗಿದಂಬುಧಿಯ ತೆರೆಯಂತೆ ಸಲೆ | ಮುಗ್ಗಿದರ್ ಮುಗಿಲಮೊಗ್ಗ ರದಂತೆ ಭೋಂಕರಿಸು | ತೊಗ್ಗಿದರ್ ಕವಿದು ಜೇನ್ನೊಣದಂತೆ ಪೊಯ್ದಾಡಿ ರಿಪುಸೈನ್ಯಕಾನನವನು | ನೆಗ್ಗಿರ್ದ ನೆಲೆಗೆಡಿಸಿ ಬಿರುಗಾಳಿಯಂತೈದೆ | ನುಗ್ಗಿದರ್ ನುಚ್ಚು ನುರಿಯಾಗೆ ಬರಸಿಡಿಲಂತೆ |ಹಿಗ್ಗಿದರ್ ಪೆಚ್ಚಿ ವೀರಾವೇಶದಿಂದ ಪಟುಭಟರಾಗಳಾಹವದೊಳು||೩೨||
ಪೊಯ್ದಾಡಿ ಮಡಿದ ಕಲಿಗಳ ಶರೀರಂಗಳಂ | ಪೊಯ್ದೆಳೆದು ಪರಿತಿಂಬ ಮರುಳ್ಳ ಳಂ ಮೇಣವರ | ನೊಯ್ದಲ್ಲಿ ದಿವ್ಯತನುಗಳೊಳಪ್ಪಿ ಚುಂಬಿಸುವ ಸುರಸತಿಯರಂ ಕಾಣುತೆ|| ಮೆಯ್ದೆಗೆದಪರೆ ವೀರರೆಂದೊರ್ವರೊರ್ವರಂ | ಬಯ್ದು ಮೂದಲಿಸಿ ರಣರಂಗದೊಳ್ ಪಟುಭಟರ್ | ತರುತಿರ್ದರೊಡವೆರಸಿ ಕೇಶಾಕೇಶಿಯುದ್ಧದಿಂದಳವಳಿಯದೆ||೩೩||
ಕೃತವರ್ಮನುರವಣಿಯನನುಸಾಲ್ವನುಬ್ಬಟೆಯ | ನತಿಬಲಸುವೇಗನ ಪರಾಕ್ರಮವನಾದಿತ್ಯ | ಸುತಸುತನ ಶೌರ್ಯಮಂ ಸಾತ್ಯಕಿಯ ವೀರ್ಯಮಂ ವರಯೌವನಾಶ್ವನೃಪನ || ಅತುಳವಿಕ್ರಮವನನಿರುದ್ಧ ನಾಟೋಪಮಂ । ಪ್ರತಿಭಟಭಯಂಕರ ಪ್ರದ್ಯುಮ್ನನದಟನು | ನ್ನತಿಗೆಡಿಸಿತಾಗ ನೀಲಧ್ವಜನ ಪರಿವಾರಮೇವೇಳ್ವೆನಾಹವದೊಳು||೩೪||
ಅರ್ಜುನಂ ಕಂಡನಹಿತ ಪ್ರಬಲಬಲಮಸುರ | ನಿರ್ಜರರ್ಗರಿದೆನೆ ಕಠೋರವಾಗಲ್ ತನ್ನ | ವರ್ಜಯಿಸಲರಿಯರೇನೆಂದು ಕಡುಗೋಪದಿಂ ಚಾಪಮಂ ಪಿಡಿದು ಮಿಡಿದು 1| ಗರ್ಜನೆಯೊಳೆಯ್ದೆ ಕಡೆಗಾಲದೊಳ' ಮಳೆಗರೆವ | ಪರ್ಜನ್ಯನಂತಾರ್ದಿಸುತೆ ನಡೆ ಯಲಿದಿರಾಂತ | ವರ್ಜಗದೊಳುಂಟೆ ಮುರಿದುದು ಪುರಕೆ ನೀಲಧ್ವಜನ ಸೇನೆ ಕೆಟ್ಟು ಕೆದರಿ |೩೫|
ಮುರಿದು ಬಹಸೇನೆಯಂ ಕಂಡಾ ಪ್ರವೀರನುರೆ ಜರೆದು ಕೋದಂಡಮಂ ಕೊಂಡು ಕೌಂತೇಯನಂ | ತರುಬಲಡಹಾಯ್ದು ವೃಷಕೇತು ಬರಲಾತನೊಳ್ ಸರಿಯಾಗಿ ಕಾದುತಿರಲು|| ಪೆರಗಿಕ್ಕಿ ಕರ್ಣಿಯಂ ಮುಂದೆ ನಿಂದನುಸಾಲ್ವ ನುರುಬಿದೊಡವಂ ನೋಯೆ ನೀಲಧ್ವಜಂ ತಾನೆ | ತುರುಗಿದಗ್ಗದ ಸಕಲಬಲ ಸಹಿತ ನೂಕಿದಂ ಫಲುಗುಣನ ಪಡೆಯ ಮೇಲೆ |೩೬|
ವಾನರವರಧ್ವಜಂ ಮುಳಿದು ನೀಲಧ್ವಜನ | ಸೇನೆಯಂ ತಡೆಗಡಿಯುತಾತನಂ ಮುಸುಕಿದನ | ನೂನಶರಜಾಲದಿಂ ಬಳಿಕವಂ ಕಂಗೆಟ್ಟು ಪಾವಕಂ ಪೊರೆಯೊಳಿರಲು || ನೀನಳಿಯನಾಗಿರ್ದುಮೆನಗಿನಿತಪಾಯಮೇ | ಕೀನರನ ದೆಸೆಯ ಭಯಮಂ ಬಿಡಿಸಬೇಕೆನೆ ಕೃ | ಶಾನು ಕೇಳ್ದಾಗ ಸುಡತೊಡಗಿದಂ ತಾನೆ ಪೊಕ್ಕರ್ಜುನನ ಸೈನಿಕವನು ॥೩೭॥
ಛತ್ರ ಚಾಮರ ಹರಿಗೆ ಹಕ್ಕರಿಗೆ ಹಲ್ಲಣ ವಿ | ಚಿತ್ರದ ಪತಾಕೆ ಸೀಗುರಿ ಸಿಂಧ ಸೀಸಕ ತ । ನುತ್ರ ರಂಜಿಕೆ ಪಾಶ ವಸ್ತ್ರ ವಾಹನ ವಾದ್ಯ ಕೈದು ಬತ್ತಳಿಕೆ ಬಂಡಿ || ಪತ್ರ ಬಂದುರ ಬಾಣ ಕೋದಂಡ ರಥ ರಥಾಂ | ಗ ತ್ರಿವೇಣುಕ ಯುಗಾಕ್ಷಂಗಳುರಿಗೊಳೆ ಪಾಂಡು | ಪುತ್ರ ಸೇನೆಯೊಳೆಲ್ಲರುಂ ಬೆದರಿದರ್ ಕೆಟ್ಟು ಕೆದರಿದರ್ ಕಿಡಿಯನೊದರಿ ॥೩೮||
ಹೊಗೆಹೊಗೆದು ಹೊಗೆ ಸುತ್ತಿ ಹೊಗುವ ದೆಸೆ ದೆಸೆಗಳಂ | ಮೊಗೆಮೊಗೆದು ಮೊಗಸಿ ಪಲಮೊಗದೊಳವ್ವಳಿಸಿ ಪುಟ | ನೆಗೆನೆಗೆದು ನೆಗಳು ಸೋನೆಗಳಾಗಿ ಸುರಿವ ಕಿರುಗಿಡಿಗಳ ತುಷಾರದಿಂದೆ | ಧಗಧಗಧಗನೆ ಪೊತ್ತುವಾ ಜ್ವಾಲೆಗಳ ಮಾಲೆ | ಮುಗುರುಗುಭುಗಿಲ್ಬುಗಿಲ್ಬುಗಿಲೆಂದು ಡಾವರಿಸೆ | ತೆಗೆತೆಗೆದು ತಗುಳ್ದಲ್ಲರಂ ದಹಿಸತೊಡಗಿದವು ದಳ್ಳುರಿ ನರನ ಬಲದೊಳು |೩೯||
ಕಟ್ಟು ಗ್ರ ಕೋಪದಿಂ ಮುಳಿದಂದು ರಾಘವಂ | ತೊಟ್ಟ ಬಾಣದ ಮೊನೆಯ ದಳ್ಳುರಿಯ ಜಳಕೆ ಕಂ | ಗೆಟ್ಟು ಸಿಡಿಮಿಡಿಗೊಂಡ ಸಾಗರದ ಜೀವಾಳಿಯಂತೆ ಪಾಂಡವನ ಸೇನೆ | ಅಟ್ಟಿ ಸುಡುವನಲ ಧೂಮಜ್ವಾಲೆಯೊಡನೆ ಗೋ | ಳಿಟ್ಟು ಹೊದಕುಳಿಗೊಂಡು ಹೊರಳುತಿರಲುಬ್ಬೆಗಂ । ಬಟ್ಟು ಪಾರ್ಥ೦ ಚಿಂತಿಸಿದನೆತ್ತಣದ್ಭುತಮಿದೆಂದು ಪಾವಕನುರುಬೆಗೆ||೪೦||
ಭಗ್ನ ರಾದರ್ ಕೆಲರ್ ಕವಚಾದಿಗಳ್ ಬೆಂದು | ನಗ್ನ ರಾದರ್ ಕೆಲರ್ ಹೆಚ್ಚಿದುರಿಗಿಚ್ಚಿನೊಳ್ ಮಗ್ನರಾದರ್ ಕೆಲರ್ ತನ್ನ ಸೇನೆಯೊಳಕಟ ಧರ್ಮಜನ ಹಯಮೇಧಕೆ 1 ವಿಘ್ನು ಮಾದುದೆ ಶಿವಶಿವೆನುತೆ ಚಿಂತಿಸಿದನಿದ | ಕಗ್ನಿ ಯಂ ಭಜಿಸಿ ನೋಡುವೆನೆಂದು ನಿಜ ಕರ ವಿ | ಲಗ್ನ ಚಾಪವನಿಳುಹಿ ಶುಚಿಯಾಗಿ ಪಾವಕನನರ್ಜುನಂ ಪ್ರಾರ್ಥಿಸಿದನು ॥೪೧||
ಬಳಿಕನಲ ಸೂಕ್ತಗಳಿಂದ ನುತಿಗೆಯು ಭೂ | ತಳಕೊಂದಿ ಸಾಷ್ಟಾಂಗದಿಂದೆರಗಿ ನಿಂದು ನೀಂ | ಮುಳಿಯಲೇಕೀ ಮಖಂ ನಿನಗೈಸಲೇ ನಿನ್ನ ದೆಸೆಯಿಂದಖಿಳ ಸುರರ್ಗೆ | ತಳೆವುದು ಹವಿರ್ಭಾಗಮೀ ಚರಾಚರದ ಪೊರೆ | ಗೊಳಗೆಲ್ಲಮುಂ ನೀನೆ ನಿನ್ನಿಂದೆ ಮೂಲೋಕ | ದಳಿವುಳಿವು ಸಾಕದಂತಿರಲೆನಗೆ ಮಾರ್ಗಮಂ ಕೊಟ್ಟುಳುಹಬೇಕೆಂದನು ||೪೨||
ದೇವ ನೀನಂದು ಗಾಂಡೀವಮಂ ತನಗಿತ್ತೆ ! ಭಾವಿಸಲ್ ಪಾಂಚಾಲೆ ನಿನ್ನೊಳುದ್ಭವಿಸಿದಳ್ | ನಾವು ಲೋಗರೆ ನಿನಗೆ ಪೇಳೆಂದು ನುತಿಸಿ ಕುಂತೀಸುತಂ ಬೇಡಿಕೊಳಲು | ಪಾವಕಂ ಮೆಚ್ಚಿ ನುಡಿದಂ ಪಾರ್ಥ ಕೇಳಾದೊ | ಡಾವು ಮುಳಿಯೆವು ನಿಮಗೆ ಹರಿ ಸಮೀಪದೊಳಿರ್ದು | ಮೀ ವಾಜಿಮೇಧಮೇಕಮೃತಮಿರಲಳೆಗೆಳೆಸಿದಂತಾಯ್ತು ನಿಮಗೆಂದನು ॥೪೩|
ಅಹುದು ನೀವೆಂಬುದಂ ಮೀರಬರ್ಪುದೆ ಹರಿಯ | ಸಹವಾಸಮೇ ಸಾಕು ಜಗದೊಳ್ ಸ್ವಧರ್ಮಮಂ | ವಹಿಸದವರಾರು ಮುನಿವರನಾಜ್ಞೆ ಯಾದಪುದು ಮೇಣಂತುವಲ್ಲದೆಮಗೆ | ವಿಹಗೇಂದ್ರ ವಾಹನಂ ಮಾಡವೇಳೆಂದನು | ಗ್ರಹಿಸಿದಂ ಮುಖಮನಿದಕೆಂತೆಂದು ನರನೆನಲ್ | ದಹಿಪುದಂ ಮಾಣ್ದೆನೆಂದಭಯಮಿತ್ತಗ್ನಿ ನೀಲಧ್ವಜಂಗಿಂತೆಂದನು||೪೪||
ಸಂಗರಂ ಬೇಡ ನರನೊಡನೆ ಸಾಕಾತನ ತು | ರಂಗಮವ ಬಿಡು ನಡೆ ನಗರಕೆಂದು ವೈಶ್ವಾನ | ರಂ ಗುಣದೊಳರಸನಂ ತಿರುಗಿಸಿದನತ್ತಲರ್ಜುನನುರಿಯ ಡಾವರವನು || ಭಂಗಿಸಿದನೆಚ್ಚು ನಾರಾಯಣಾಸ್ತ್ರದೊಳನ್ನೆ | ಗಂ ಗಗನ ಮಣಿ ಪಶ್ಚಿಮಾಂಗನೆಯ ಬೈತಲೆಯ | ರಂಗು ಮಾಣಿಕದಂತೆ ಕಣ್ಗೆ ಕಾಣಿಸುತಿರ್ದುದಸ್ತಗಿರಿ ಮಸ್ತಕದೊಳು||೪೫||
ರಂಜಿಸುವ ಪಶ್ಚಿಮಾಚಲ ಕಿರಾತಂ ತೊಟ್ಟ । ಗುಂಜಾಭರಣಮೊ ಮೇಣ್ ಗಗನಾಂಬುಧಿಯ ತಡಿಯ | ಮಂಜು ವಿದ್ರುಮ ಲತೆಯೊ ಮೇಣಪರ ದಿಗ್ವಧುವಿನಂಗ ಕುಂಕುಮ ಲೇಪವೋ|| ಆಂಜನೇಭದ ಸಿಂಧುರವೊ ಶಿವನ ಮಸ್ತಕದ | ಕೆಂಜೆಡೆಯೊ ವಿಷ್ಣು ಪದ ಪಂಕರುಹದರುಣತೆಯೋ | ಸಂಜೆವೆಣ್ಣುಟ್ಟ ರಕ್ತಾಂಬರವೊ ಹೇಳೆನಲ್ಕಾ ಬೈಗುಗೆಂಪೆಸೆದುದು||೪೬||
ಬಿಚ್ಚು ವೆಣಿವಕ್ಕಿಗಳ ಹೃದಯಮಂ ಬೇಯಿಸುವ | ಪೊಚ್ಚ ಪೊಸಕೆಂಡಂಗಳೆನೆ ಲೋಕಮಂ ನುಂಗ ಲಿಚ್ಚಯಿಸಿ ಬಪ್ಪ ಕತ್ತಲೆಯೆಂಬ ಕಾಳರಕ್ಕಸಿ ಕೋಪದಿಂದುಗಳ || ಕಿಚ್ಚಿನ ಕೆದರ್ಗಿಡಿಗಳೆನೆ ತನ್ನ ಬಾಳುವೆಗೆ | ನಚ್ಚಿನವಳೇ ರಾತ್ರಿ ವಧುವೆಂದು ಹಿಮಕರಂ | ಮೆಚ್ಚಿ ಮುಂಗಳು ವಿದೆಳಮಾಣಕಗಳೆಂಬಂತೆ ಸಂಜೆದಾರೆಗಳೆಸೆದುವು||೪೭||
ಓಡಿದುವು ಪಕ್ಷಿಗಳ್ ಗೂಡಿಂಗೆ ದೆಸೆಗಳಂ| ನೋಡಿದುವು ಘೂಕಂಗಳಳಿಗಳಂ ಸೆರೆಗೆಯ್ದು ! ಪೂಡಿದುವು ಬಾಗಿಲಂ ಕಮಲಂಗಳರಲ್ದು ವಿಂದೀವರಂಗಳ್ ನಭದೊಳು|| ಮೂಡಿದುವು ತಾರೆಗಳ್ ಚಕ್ರವಾಕಂಗಳಂ| ಕಾಡಿದುವು ವಿರಹತಾಪಂಗಳಿಳೆಯೆಲ್ಲಮಂ | ತೀಡಿದುವು ಕತ್ತಲೆಗಳಲ್ಲಿಗಲ್ಲಿಗೆ ಮನೆಮನೆಗೆ ಸೊಡರ್ ಕಣ್ಗೆಸೆದುವು || ೪೮ |
ರವಿ ಪಶ್ಚಿಮಾದ್ರಿಯಂ ಮರೆಗೊಳೆ ತಮಸ್ತೋಮ | ಮವನಿಯಂ ಮುಸುಕಿ ತೆರೆದೊಳಸಿತಧ್ವಜಂ | ಬವರದೊಳ್ ಮುರಿದು ಭಂಗಿತನಾಗಿ ತಿರುಗಿದಂ ತನ್ನ ಪಟ್ಟಣಕಿತ್ತಲು || ಪವನ ಸಖನಂ ಬೇಡಿಕೊಂಡು ನಾರಾಯಣಾ | ಸ್ತ್ರವನೆಚ್ಚು ಪೆರ್ಚದುರಿಯಂ ಕಿಡಿಸಿ ನಿಜ ಸೈನಿ । ಕವನೆಲ್ಲ ಬಿಡಿಸಿದಂ ದೇವಪುರ ಲಕ್ಷ್ಮೀಪತಿಯ ಮೈದುನಂ ಮುದದೊಳು ||೪೯||
ಜೈಮಿನಿ ಭಾರತ 19
ಒಂಬತ್ತನೆಯ ಸಂಧಿ
ಪದ್ಯ 1 ರಿಂದ 34
ಜ್ವಾಲಾ ಪ್ರಕರಣ
ಸಂಕ್ಷಿಪ್ತ ರೂಪ
ನೀಲದ್ವಜನ ಹೆಂಡತಿ ಜ್ವಾಲೆಯು ತನ್ನ ಪತಿಯು ಕುದುರೆಯನ್ನು ಅರ್ಜುನನಿಗೆ ಹಿಂದಿರುಗಿಸುವುದನ್ನು ತಡೆದಳು
ಈ ನಡುವೆ. ಜನಮೇಜಯನು ಅಗ್ನಿಯು ಈ ಮನೆಯ ಅಳಿಯ ಹೇಗಾದ ಎಂದು ವಿವರವಾಗಿ ಹೇಳಿರೆನ್ನಲು ಆ ವೃತ್ತಾಂತ ಬರುತ್ತದೆ. ನೀಲದ್ವಜನಿಗೆ ಸ್ವಾಹಾ ಎಂಬ ಲೋಕಸುಂದರಿ ಗುಣವತಿ ಪುತ್ರಿಯಿದ್ದಳು. ಪ್ರಾಪ್ತ ವಯಸ್ಸಿಗೆ ಬರಲು ವಿವಾಹದ ಪ್ರಯತ್ನ ನಡೆಯಿತು. ಅವಳು ಯಾರನ್ನೂ ಒಪ್ಪಲಿಲ್ಲ. ಕೊನೆಗೆ ಅಗ್ನಿಯನ್ನು ಮೆಚ್ಚಿದಳು . ಅದಕ್ಕಾಗಿ ಉದ್ಯಾನದಲ್ಲಿ ತಪವನ್ಬು ಆಚರಿಸಿ ಅಗ್ನಿಯನ್ನು ಪ್ರಾರ್ಥಿಸಿದಳು. ಅಗ್ನಿಯು ಇದೇ ವೇಳೆಗೆ ಬ್ರಾಹ್ಮಣನ ವೇಷ ಧರಿಸಿ ರಾಜನಲ್ಲಿಗೆ ಬಂದು ತನಗೆ ಕನ್ಯಾದಾನ ಮಾಡಬೇಕೆಂದು ಕೇಳಿದನು. ಆಗ ರಾಜನು ಅವಳು ಅಗ್ನಿಯನ್ನು ಮೆಚ್ಚಿರುವ ವಿಚಾರ ತಿಳಿಸಲು ತಾನೇ ಅಗ್ನಿಯೆಂದು ಹೇಳಿದನು. ಪರೀಕ್ಷಿಸಲು ಹೊರಟ ರಾಜನ ಗಡ್ಡ ಮೀಸೆಗಳು ಉರಿದವು. ರಾಣಿಯ ದುಕೂಲ ಸುಟ್ಟಿತು. ನಂತರ ರಾಜನು ಅಗ್ನಿಯನ್ನು ತನ್ನ ಮನೆಯಲ್ಲಿಯೇ ಇರಲು ಕೇಳಿಕೊಂಡನು. ಅಗ್ನಿಯು ಒಪ್ಪಿದನು. ವಿವಾಹವಾಯಿತು. ಹೀಗೆ ಅಗ್ನಿಯು ಅಳಿಯನಾದನೆಂದು ವಿವರಿಸಿದರು.
ಮರುದಿನ ಬೆಳಗಾಯಿತು. ಮತ್ತೆ ಪಾರ್ಥನ ಸೇನೆಯನ್ನು ಮುತ್ತಿದರು. ಅಗ್ನಿಯ ರೋಷವನ್ನೇ ತಡೆದವನಿಗೆ ಇದಾವ ಮಹಾ? ಅರ್ಜುನನ ಬಾಣಗಳಿಗೆ ಸಿಕ್ಕಿ ನೀಲದ್ವಜನ ಸೇನೆ ನುಚ್ಚು ನೂರಾಯಿತು. ಸುತನೂ ಅಳಿದನು. ಆಗ ನೀಲದ್ವಜನು ಸೋತು ಶರಣಾಗಿ ಕುದುರೆಯೊಂದಿಗೆ ಧನಕನಕ ಸಮಸ್ತವನ್ನೂ ಒಪ್ಪಿಸಿದನು. ತನ್ನ ಹೆಂಡತಿಯನ್ನು ದೂಷಿಸಿ ಮನೆಯಿಂದ ಹೊರಗೆ ಅಟ್ಟಿದನು. ಅವಳು ತನ್ನ ತಮ್ಮನಲ್ಲಿಗೆ ಹೋಗಿ ಅರ್ಜುನನನ್ನು ಕೊಲ್ಲಲು ಹೇಳಿದಾಗ ಕೃಷ್ಣನ ಬಲವಿರುವ ಅವನನ್ನು ಗೆಲ್ಲಲು ಸಾಧ್ಯವೆ? ಅಪಾಯ ನಮಗೇ ಆಗುತ್ತದೆಂದು ಅವಳನ್ನು ಹಿಂದಕ್ಕೆ ಕಳಿಸಿದನು.
ನಂತರ ಗಂಗಾ ತೀರಕ್ಕೆ ಬಂದು ಅಲ್ಲಿದ್ದ ನಾವಿಕರನ್ಬು ಒಂದು ಹನಿ ನೀರು ಸೋಕದ ಹಾಗೆ ಆ ಕಡೆಯ ದಡಕ್ಕೆ ಕರೆದುಕೊಂಡು ಹೋಗಿರಿ ಎನ್ನಲು ಅವರು ಚಕಿತರಾದರು. ಎಲ್ಲರ ಪಾಪಗಳನ್ಬು ತೊಳೆಯುವ, ಶಿವನ ಜಟೆಯಿಂದ, ಹರಿಯ ಪಾದದಿಂದ ಬಂದ ಸುರಗಂಗೆಯ ಬಗ್ಗೆ ಹೀಗೆ ಹೇಳುತ್ತಾಳಲ್ಲ ಎಂದು ಕಾರಣ ಕೇಳುವರು. ತಾನು ನೇರವಾಗಿ ಗಂಗೆಗೇ ಉತ್ತರಿಸುವುದಾಗಿ ಹೇಳಲು ಮುನಿದ ಗಂಗೆ ರೋಷದಿಂದ ಪ್ರತ್ಯಕ್ಷಳಾದಳು.
ಮಕ್ಕಳಿಲ್ಲದವರ ಸ್ಪರ್ಶ ಬೇಡವೆಂದೆ ಎನ್ನಲು ಕೆರಳಿದ ಗಂಗೆ ಭೀಷ್ಮನಂತಹ ಮಗ ನನಗಿರಲಿಲ್ಲವೆ ಎನ್ನಲು ಹೌದು, ಅದು ಗೊತ್ತು. ಆದರೆ ಆ ಅರ್ಜುನ ಅವನನ್ನು ಸಾಯುವಂತೆ ಮಾಡಿದನಲ್ಲ. ಈಗ ನನ್ನ ಮಗನನ್ನೂ ಕೊಂದಿದ್ದಾನೆ ಎನ್ನುವಳು. ಹೀಗೆ ಗಂಗೆಯನ್ನು ಕೆರಳಿಸಿದಾಗ ಅವಳು ಅರ್ಜುನನಿಗೆ ತನ್ನ ಮಗನಿಂದ ಮರಣ ಬರಲಿ ಇನ್ನು ಆರು ತಿಂಗಳಲ್ಲಿ ಎಂದು ಶಾಪ ಕೊಡುವಳು. ಜ್ವಾಲೆಯು ಅಲ್ಲಿ ಅಗ್ನಿಪ್ರವೇಶ ಮಾಡಿ ಬಭ್ರುವಾಹನನ ಬತ್ತಳಿಕೆಯಲ್ಲಿನ ಒಂದು ಬಾಣವಾಗಿ ಸೇರಿಕೊಳ್ಳುವಳು. ಮುಂದೆ ಶ್ರೀಹರಿಯು ಇದನ್ನು ಹೇಗೆ ಪರಿಹರಿಸುವನೋ ಎಂಬಲ್ಲಿಗೆ ಈ ಸಂಧಿ ಮುಗಿಯುತ್ತದೆ
ಒಂಬತ್ತನೆಯ ಸಂಧಿ ಮೊದಲಭಾಗ
ಪದ್ಯ 1 ರಿಂದ 34
-ಜ್ವಾಲೆ ನಿಜ ಕಾಂತನಂ ಚಲದಿಂದೆ ಬಿಟ್ಟು ತ | ನ್ನಾಲಯದೊಳಿರದೆ ಪೊರಮಟ್ಟು ಬಂದರ್ಜುನನ | ಮೇಲೆ ತಂತ್ರವನಿಕ್ಕಿ ಶಾಪಮಂ ಕುಡಿಸಿದಳ್ ದೇವ ನದಿಯಂ ಕೆರಳ್ಚಿ
ಕುಲತಿಲಕ ಜನಮೇಜಯ ನರೇಂದ್ರ ಕೇ | ಳಂದು ನೀಲಧ್ವಜಂ ತಿರುಗಿ ತನ್ನ ರಮನೆಗೆ | ಬಂದು ವೈಶ್ವಾನರನನುಜ್ಞೆಯಿಂ ಪಾರ್ಥನ ತುರಂಗಮಂ ಬಿಡುವೆನೆಂದು || ನಿಂದು ಮಂತ್ರಿಗಳ ಕರಸಲ್ಕದಂ ಕೇಳ್ದು ನಡೆ | ತಂದು ನುಡಿದಳ್ ಜ್ವಾಲೆಯೆಂಬರಸಿ ಪತಿಗೆ ನೀ ! ನಿಂದು ಸಿತವಾಹನಂಗೀಯದಿರ್ ಕುದುರೆಯಂ ಬೆದರದಿರೆನುತೆ ತಡೆದಳು||೧||
-ಅನ್ನೆಗಂ ಕೇಲ್ದು ಜನಮೇಜಯ ನರೇಶ್ವರಂ | ತನ್ನ ಮನದೊಳ್ ಸಂದೆಗಂಬಟ್ಟು ಬೆಸಗೊಂಡ | ನಿನ್ನೊಮ್ಮೆ ತಿಳಿಪೆಲೆ ಮುನೀಂದ್ರ ಪಾವಕನೇತಕಾ ಪಟ್ಟಣದೊಳಿರ್ದನು || ಮನ್ನಣೆಯ ಮನೆಯಳಿಯನೆಂತಾದನಾ ನೃಪನ | ಕನ್ನಿಕೆಯದೇನ ಮಾಡಿದಳಿದರ ವೃತ್ತಾಂತ | ಮನ್ನಿರೂಪಿಸವೇಳ್ವುದೆನೆ ಮತ್ತೆ ಜೈಮಿನಿ ಧರಾಧಿಪಂಗಿಂತೆಂದನು||೨||
ಆಲಿಸಿನ್ನಾದೊಡೆಲೆ ಭೂಪ ನೀಲಧ್ವಜಂ | ಜ್ವಾಲೆಯೆಂಬರಸಿಯೊಳ್ ಪಡೆದನತಿರೂಪ ಗುಣ | ಶೀಲಗಳಿಂದೆದೆಸೆವ ತನುಜೆಯಂ ಸ್ವಾಹಾಭಿಧಾನದಿಂ ಬಳೆಯುತಿರುವ ॥ ಆ ಲೋಲ ಲೋಚನೆಗೆ ಜೌವನಂ ಬರೆ ಪಿತಂ ।ಮೂಲೋಕದೊಳಗುಳ್ಳ ಪುರುಷರ್ಕಳಂ ಪಟದ | ಮೇಲೆ ರೂಪಿಸಿ ತೋರಿಸಿದನಿದರೊಳಾರ್ ನಿನಗೆ ವಲ್ಲಭಂ ಪೇಳ್ವುದೆಂದು ||೩||
ವಿಫುಲ ಗಂಧರ್ವ ಯಕ್ಷೋರಗ ಸುರಾಸುರರ ನಪಹಾಸ್ಯಮಂ ಮಾಡಿ ಸಕಲ ಭೂಮಂಡಲದ | ನೃಪ ವರ್ಗಮಂ ಪಳಿದು ಹರಿ ಹರ ವಿರಿಂಚಿ ಶಕ್ರಾದಿಗಳನಿಳಿಕೆಗೆಯ್ದು ॥ ತಪನೇಂದು ಮನ್ಮಥ ವಸಂತರ್ಕಳಂ ಜರೆದ | ನುಪಮ ದಿಕ್ಪಾಲಕರ ನಡುವೆ ಕುಳ್ಳಿರ್ದು ರಾ | ಜಿಪ ನೀತಿಹೋತ್ರನಂ ಕಂಡವಳ್ ತೋರಿಸಿದಳೆನಗಿವಂ ಕಾಂತನೆಂದು||೪||
ಆ ನೀಲಕೇತು ನೃಪನವಳ ನುಡಿಗೇಳ್ದುಣುಗೆ | ನೀನಘಟಿತದ ವರನಮನ್ನಿಸಿದೆ ಹೇಳ್ಕೊಡಿ | ನ್ನೇನಪ್ಪುದೆಂದು ಚಿಂತಿಸುತಿರ್ಪ ತಾತನಂ ಜರೆದು ಬೀಳ್ಕೊಂಡು ಬಳಿಕ || ಮಾನಿಸಿ ಪುರೋದ್ಯಾನದೊಳ್ ಪ್ರವಹಿಸುವ ವರ | ದಾ ನದಿಗೆ ಬಂದಲ್ಲಿ ಮಿಂದು ಸುವ್ರತೆಯಾಗಿ | ನಾನಾ ವಿಧಾನದಿಂದರ್ಚಿಸಿದಳಗ್ನಿ ಯಂ ಭಕ್ತಿಯಿಂದನುದಿನದೊಳು||೫||
ಪಾವಕಂ ಬಳಿಕ ಮೆಚ್ಚಿದನವಳ ನೋಂಪಿಗೆ ಮ | ಹೀ ವಿಬುಧ ವೇಷಮಂ ತಾಳ್ದು ನೀಲಧ್ವಜನ | ಚಾವಡಿಗೆ ಬರಲಾತನಿದಿರೆದ್ದು ಸತ್ಕರಿಸಿ ಕೈಮುಗಿದು ವಿನಯದಿಂದ || ನೀವು ಬಿಜಯಂಗೈದ ಕಾರ್ಯಮಂ ಬೆಸಸಿಮೆನ | ಲಾವು ಕನ್ಯಾರ್ಥಿಗಳು ಕುಡು ನಿನ್ನ ಸುತೆಯೆ೦ದ | ಕಾವೆಣಿಕೆ ಬೇಡ ಭೂಭುಜರೀಯಬಹುದು ವಿಪ್ರರ್ಗೆಂದೊಡಿಂತೆಂದನು||೬||
ಕನಾರ್ಥಿಯಾಗಿ ನೀಂ ಬಂದು ಬೇಡುವುದಿಳೆಯೊ | ಳನ್ಯಾಯಮಲ್ಲ ವಿಪ್ರರ್ಗೆ ಕೊಡಬಹುದು ರಾ | ಜನ್ಯರದಕೇನೊಂದು ಚಲದಿಂದೆ ತನ್ನ ಕುವರಿಗೆ ಮರುತ್ಸಖನಲ್ಲದೆ || ಅನ್ಯರಂ ಪತಿಯಾಗಿ ವರಿಸಬೇಕೆಂಬ ಚೈ | ತನ್ಯ ಮಿಲ್ಲೇನು ಮಾಡುವೆನಿನ್ನು ನಿನಗೀವ | ಧನ್ಯತೆಗೆ ಬಾಹಿರಂ ತಾನಾದೆನೆನಲಾ ಕಪಟ ವಿಪ್ರನಿಂತೆಂದನು||೭||
ಪ್ರಾಪ್ತವಾದುದು ನಿನ್ನ ಮಗಳೆಣಿಕೆ ಸುವ್ರತ ಸ | ಮಾಪ್ತಿಯಂ ಮಾಡಿಸಿನ್ನಾನಗ್ನಿ ಸಂಶಯ | ವ್ಯಾಪ್ತಿಯಿಂ ಬಿಡು ಕುಡು ನಿಜಾತ್ಮಜೆಯನೆನೆ ನಂಬದಾನೃಪಂ ಬಳಿಕ ತನ್ನ || ಆಪ್ತ ಮಂತ್ರಿಯೊಳೀಗಳಿವನಂ ಪರೀಕ್ಷಿಸೆನೆ | ಗೋಪ್ತಾರನಾಜ್ಞೆಯಿಂ ಬಂದವಂ ನೋಡೆ ಶಿಖಿ | ದೀಪ್ತಿಯಂ ತೋರರೆವೆ ಗಡ್ಡ ಮೀಸೆಗಳುರಿಯಲನಲನೆಂದರಿದನಂದು||೮||
ಸಪ್ತರಸನಂ ತಪ್ಪದೆಂದಾ ನೃಪಂ ತಿಳಿದು | ಗುಪ್ತದಿಂದ ತನ್ನ ಸತಿಯನುಜೆಯಂ ಕರಸಿ ಲೋ| ಲುಪ್ತಿಯಿಂ ಬಂದವಗೀಯಬೇಕಣುಗಿಯಂ ಶಿಖಿಯಹುದೆ ನೋಡೆನ ॥ ದೃಪ್ತ ಭಾವದೊಳಾಕೆ ನಡೆ ತಂದು ನಿಟ್ಟಿಸಲ್ | ತಪ್ತ ಮಾದುದು ಮೇಲುದಿನ ವಸನಮಾಗಳಾ | ಕ್ಷಿಪ್ತ ಮಂ ಮಾಡಿ ನಗುತಿರ್ದನಾ ಭೂವರಂ ಸಭೆಯೊಳ್ ವಿನೋದದಿಂದೆ||೯||
ಭೂಕಾಂತ ಕೇಳ್ ಬಳಿಕ ನೀಲಧ್ವಜಾವನಿಪ | ನಾ ಕಪಟ ವಿಪ್ರನಂ ಕರೆದಗ್ನಿ ನೀನಾದೆ | ಡೀ ಕುವರಿಯಂ ಕುಡುವೆನಿಂದು ಮೊದಲಾಗಿ ಮಾಹಿಷ್ಮತಿಯ ಪಟ್ಟಣಕ್ಕೆ ॥ ಪ್ರಾಕಾರವಾಗಿ ಯೆನ್ನರಮನೆಯೊಳೆಂದುಮಿರ | ಬೇಕೆಂದು ಬೇಡಿಕೊಳಲೊಪ್ಪಿ ಪವಮಾನ ಸಖ | ನಾ ಕಮಲವದನೆಯಂ ಮದುವೆಯಾದಂ ವಿಧಿ ವಿಧಾನ ವಿಭವಂಗಳಿಂದೆ ॥೧೦||
ಶ್ರೀ ಹೈವವತಿ.ಪುರಂ ದುಗ್ದಾಬ್ದಿ ಹಿಮಗಿರಿಗ । ಳಾ ಹರಿಹರರ್ಗೆ ಕೊಟ್ಟಿಂಬಿಟ್ಟು ಕೊಂಡಿಹವೊ | ಲೀ ಹುತವಸಂಗಾತ್ಮಜೆಯನಿತ್ತು ನಿಲಿಸಿಕೊಂಡು ನೀಲಕೇತು ಬಳಿಕ 1 ಸ್ವಾಹಾ ವನಿತೆಯ ಸಮ್ಮೇಳದತಿಸೌಖ್ಯದಿಂ। ಮಾಹಿಷ್ಮತಿ ಪಟ್ಟಣದೊಳಿರ್ದ ನನಲಂ ಮ | ನೋಹರದ ವಿವಿಧ ಭೋಗದೊಳಂದು ಮೊದಲಾಗಿ ಸಂದು ಸಂತೋಷದಿಂದೆ ||೧೧॥
ಅಲ್ಲಿ ಪಾವಕನಿರ್ಪ ಕಾರಣಮಿದೀಗ ಮುಂ ದಿಲ್ಲಿಯ ಕಥಾಂತರವನರಸ ಕೇಳಾ ರಾತ್ರಿ | ಯಲ್ಲಿ ನೀಲಧ್ವಜಂ ಮನೆಯೊಳಾ ಜ್ವಾಲೆಯ ನಿರೂಪಮಂ ಶಿರದೊಳಾಂತು ||ಸಲ್ಲಲಿತ ವಾಜಿಯಂ ಬಿಡನೆನ್ನೊಡನೆ ಕಾದಿ | ದಲ್ಲದೆಂದಾ ಕಿರೀಟಿಗೆ ಪೇಳಿಸಿದನಿತ್ತ | ಪಲ್ಲವಿಸಿತಮಲ ಪೂರ್ವಾಶಾ ಲತಿಕೆಯೆನಲ್ ಕೆಂಪಡರ್ದುದು ಮೂಡಲು ||೧೨||
ತನ್ನ ಪಗೆಯಾದ ಕತ್ತಲೆಯ ಸಾರೂಪ್ಯದಿಂ | ದಿನ್ನಿ ರ್ದೊಡೆಮಗಿನಂ ಮುಳಿಯದಿರನೆಂದಂಜಿ | ಕನ್ನೆಯ್ದಿಲೆಯ ಮೊಗಂ ಬಾಡಿದುದು ಕೂಡೆ ನಗುತಿರ್ದುವರವಿಂದಂಗಳು|| ಗನ್ನದೊಳ್ ನೆರೆವ ಜಾರೆಯರ ಕುಂಟಣಿಯಂತೆ | ಸನ್ನೆ ಗೈದುವು ತಾಮ್ರ ಚೂಡಂಗಳೊಂದಿದುವು! ಮುನ್ನಿನಂತಿರೆ ಜಕ್ಕವಕ್ಕಿಗಳ್ ಪಾಡಿದುವು ತುಂಬಿಗಳ ಬಂಡನರಸಿ||೧೩||
ರಾಹು ಮುನ್ನೊಮ್ಮೆ ತನ್ನಂ ತುಡುಕಿ ಬಿಟ್ಟನೆ | ಬಾಹಗೆಯ ಮಗುಚಲೆ.ಒಳವೊಕ್ಕು ಪಾತಾಳದ ಮ | ಹಾಹಿ ಸಂಕುಲಮನಾಕ್ರಮಿಸಿ ಪೆಡೆಮಣಿಗಳಂ ತೆಗೆದುಕೊಂಡಾಗಳವನು ॥ ಸಾಹಸಂ ಮಿಗೆ ದೆಸೆದೆಸೆ ಗೆ ಚೆಲ್ಲುತರ್ಪ | ನೋ ಹರಿದ್ವಾಜಿ ಪೇಳೆನೆ ಪಸುಳೆಬಿಸಿಲ ಪ್ರ| ವಾಹಂಗಳೆತ್ತಲುಂ ಪರಿವಿನಂ ದಿನಪನುದಯಂಗೈದು ಬರುತಿರ್ದನು||೧೪||
ಇತ್ತಲವನೀತ ಕೇಳುದಯವಾಗದ ಮುನ್ನ ! ಮತ್ತೆ ಮಾಹಿಷ್ಮತಿಯ ಪಟ್ಟಣದ ಕೋಟೆಯಂ ಮುತ್ತಿಕೊಂಡುದು ನರನ ಚತುರಂಗಮೋಜೆಯೊಳ್ ನೀಲಕೇತುವಿನ ಸೇನೆ|| ಒತ್ತಿ ಕವಿದುದು ವೀರರೊದಗಿದರ್ ಪೊಯ್ದಾಡಿ | ತಿತ್ತಂಡಮೊಡವೆರಸಿ ಚೂಣ್ಗಾಳಗದ ಭಟ |ರೆತ್ತಿದರ್ ಪಂತಪಾಡುಗಳನಸಿತಧ್ವಜಂ ನಡೆದನರ್ಜುನನಮೇಲೆ||೧೫||
ತರಣಿ ತೊಲಗಿದ ಬಳಿಕ ಮಿಂಚುಬುಳುವಿಗೆ ತಮಂ | ತೆರಳಬಲ್ಲುದೆ ಕೃಶಾನುಜ್ವಾಲೆಗಳುಕದಾ! ನರನುಳಿದ ವೀರರಂ ಬಗೆವನೇ ಪಡೆವೆರಸಿ ನೂಕಿದಂ ಕಣೆಗರೆಯುತೆ|| ಮುರಿದುದುರವಣಿಗವನ ಸೇನೆ ಬಳಿಕಳವಿಗರ್/ತರಹರಿಸಿ ಸುತ ಸಹೋದರ ಮಂತ್ರಿ ಬಾಂಧವರ್ | ಧುರದೊಳಾಂತಳಿದರರ್ಜುನನೊಳಾತಂ ಕಾದಿ ನೊಂದು ಮೂರ್ಛಿತನಾದನು||೧೬||
ಬಳಿಕ ಸಾರಥಿ ಮನೆಗೆ ತಂದನಾ ಭೂಪನಂ । ಪೊಳು ಪರ್ಬಾಗಿಲ್ಗಳಿಕ್ಕಿದುವು ಕೋಟೆ ಕೋ | ತಳದ ಕಾವಲ್ಗಳಂ ಬಲಿದರಲ್ಲಲ್ಲಿ ಗಜಬಜವಾಯ್ತು, ನಗರದೊಳಗೆ || ತಿಳಿದುದಾತನ ಮೂರ್ಛೆ ಕಣ್ಣಿರೆದು ನೋಡಿ ಕೊಳು | ಗುಳದ ಪರಿಭವಕೆ ಬೆಂಡಾಗಿ ನಿಜ ತನಯರಳಿ | ದಳಲಿನಿಂ ಬೈದನಸಿತಧ್ವಜಂ ಜ್ವಾಲೆಯಂ ಪ್ರತಿಕೂಲೆಯಂ ಖತಿಯೊಳು ||೧೭||
ನಿನ್ನೆ ಪಾರ್ಥನ ಹಯವನಾತಂಗೆ ಬಿಡಲೀಯ | ದೆನ್ನ ಕೆಡಿಸಿದೆಯಲಾ ಪಾತಕಿಯೆ ಸುತರಳಿದ | ರಿನ್ನೇನು ಘಾತಕಿಯೆ ಮತ್ತುಲಕರಿಷ್ಟೆ ನೀನತಿಕಷ್ಟೆ ಪೋಗು ದುಷ್ಟೆ || ಎನ್ನರಮನೆಯೊಳಿರದಿರೆಂದಾಗಳಾ ಜ್ವಾಲೆ! ಯನ್ನೀಲಕೇತು ದಟ್ಟಿಸಿ ಬೈದು ಬಳಿಕಶ್ಯ | ಮನ್ನರನೆಡೆಗೆ ಕಳುಪಿ ತಾನಾ ಕಿರೀಟಿಯಂ ಕಾಣಲ್ಕೆ ಪೊರಮಟ್ಟನು ||೧೮||
ಕೊಂಡು ಬರಿಸಿದನಖಿಳ ವಸ್ತುಗಳನಮಲ ಮಣಿ | ಮಂಡನಾಳಿಗಳಂ ವಿವಿಧ ದುಕೂಲಂಗಳಂ | ಹಿಂಡಾಕಳಂ ಮಹಿಷಿಗಳನುತ್ತಮ ಸ್ತ್ರೀಯರಂ ಗಜ ಹಯಾವಳಿಯನು | ಭಂಡಾರದರ್ಥಮಂ ಗುಡ ತೈಲ ಧಾನ್ಯಮಂ| ಬಂಡಿಗಳ ಮೇಲೆ ತುಂಬಿಸಿ ಪಾರ್ಥನಂ ಬಂದು | ಕಂಡನಸಿತಧ್ವಜಂ ಬಳಿಕವನನರ್ಜುನಂ ಪ್ರೀತಿ ಮಿಗೆ ಮನ್ನಿಸಿದನು||೧೯||
ವಾಜಿ ನಡೆದುದು ಬಳಿಕ ತೆಂಕಮೊಗವಾಗಿ ಸೇ | ನಾ ಜಾಲಸಹಿತ ನೀಲಧ್ವಜಂ ಪೊರಮೊಟ್ಟ । ನಾ ಜನಪನಂ ಕೂಡಿಕೊಂಡು ಮುಂದಕೆ ಸವ್ಯಸಾಚಿ ತೆರಳಿದನಿತ್ತಲು| | ತೇಜವಿಲ್ಲದೆ ಮನೆಯೊಳಿಂ ಪೆಣ್ಣೊಡಲ್ವೆಳಸು ವೀ ಜೀವಮೇತಕೆನಗೆನುತೆ ನಿಜ ವಲ್ಲಭನ | ರಾಜ ಗೃಹಮಂ ಬಿಟ್ಟು ಪೋದಳಾ ಜ್ವಾಲೆಯುನ್ನು ಖನೆಂಬ ತಮ್ಮ ನೆಡೆಗೆ |೨೦||
ಉನ್ಮುಖಂ ಕಂಡಿದಿರ್ಗೊಂಡಗ್ರಜಾತೆಯಂ ಸನ್ಮಾನಿಸಿದನೇಕೆ ಬಂದೆಯೆನೆ ಫಲುಗುಣಂ | ಮನ್ಮನೋರಥಮೆಲ್ಲಮಂ ಕಿಡಿಸಿ ಮಕ್ಕಳಂ ಕೊಂದು ಪತಿಯಂ ಗೆಲ್ದನು ||ತನ್ನ ರಣಕೊಂದು ದಾಯವನೆಸಗದಿರಲೆನ್ನ | ಜನ್ಮ ವೇತಕೆ ನಿನ್ನ ದೆಸೆಯಿಂದ ನರನ ವಿಲ | ಸನ್ಮಳಿ ಮಸ್ತಕವನರಿಸದಿರೆನೆಂದೊಡಾ ಜ್ವಾಲೆಗವನಿಂತೆಂದನು||೨೧||
ವಾಯಕರ್ಜುನನ ತಲೆ ಬೀಳ್ದಪುದೆ ಕೃಷ್ಣನ ಸ | ಹಾಯಮಿರಲೆಲೆ ಮರುಳೆ ಹರಿಯ ಹಗೆಗೊಂಡು ಕೆಡು | ವಾಯಸಂ ತನಗೇಕೆ ರಾಘವಂ ಮಾಡಿದುಪಹತಿಯಂ ದಶಾನನಂಗೆ | ದಾಯಮಂ ಪೇಳ್ದವನ ವಂಶಮಂ ಸವರಿಸಿದ | ಮಾಯಕಾತಿಯವೊಲೆನ್ನಾಲಯಕೆ ಬಂದೆನಗೆ | ಪಾಯಮಂ ತಾರದಿಲ್ಲಂದ ಪೋಗೆಂದವಳನನ್ನು ಖಂ ಕೋಪಿಸಿದನು||೨೨ا
ಜ್ವಾಲೆ ಬಳಿಕನುಜನಂ ಬೈದು ಕೋಪದೊಳಾತ | ನಾಲಯದೊಳಿರದೆ ಪೊರಮಟ್ಟು ನಡೆತರೆ ಮುಂದೆ | ಲೀಲೆ ಮಿಗೆ ನಲಿನಲಿದು ಸುಳಿದಿಳಿದು ಬೆಳೆದಳಿದು ತಳೆದೆಳೆದು ಪೊಳೆದು ಸೆಳೆದು|| ಮೇಲೆಮೇಲೊದಗುವ ಘನಪ್ರವಾಹದ ಸುಕ | ಲ್ಲೋಲ ಮಾಲಾಕುಲದ ಬುದ್ದುದದ ಜಲ ಜಂತು । ಜಾಲದ ಬಳಿಯ ಲುಳಿಯ ಲಹರಿಗಳ ವಿಸ್ತರದ ವರ ಗಂಗೆಯಂ ಕಂಡಳು | ೨೩ |
ತೆಳುವುಡಿಯ ಮಳಲಿಡಿಯಲಿತ್ತಡಿಯ ತಳಗಡಿಯ | ಪೊಳೆ ನೆರೆಯಲುರೆ ಪೊರೆಯಲೊಳೊರೆಯ ರೆಯ ಬೆಳ್ನೊರೆಯ| ತೊಳಪೆಳೆಯ ಮಾನೊಳೆಯಲಿರದೆಳೆಯಲೆಡೆ ಸೆಳೆಯ ತುಂತುರಿನ ತನಿಗೆದರಿನ|| ಸುಳಿಸುಳಿಯಸವ್ವಳಿಯ ಬೊಬ್ಬುಳಿಯ ಕಡಲುಳಿಯ | ಜಳಚರದ ತರತರದ ಶೀಕರದ ಭೀಕರದ | ತುಳ ಗಂಗೆ ಸುತರಂಗೆ ನೋಳ್ಪಂಗೆ ಸಲೆ ಕಂಗೆಸೆದಳಂದು ದಿವಿಜಸಿಂಧು |೨೪|
ಕೂರ್ತುಗಡಿಯಾಗಿರ್ಪ ಗುಣ್ಪಿಂದೆ ತನ್ನೆಡೆಯೊ ಳಾರ್ಮುಳುಗಲವರಿಂದ್ರರಹರೆಂಬ ಪೆಂಪಿಂದೆ| ಘೂರ್ಮಿಸುವ ಗಂಗಾಪ್ರವಾಹಮಂ ಕಂಡಳಾ ಜ್ವಾಲೆಲ ಬಳಿಕ ನಿಂದು ಧಾರ್ಮಿಕರಿವರೊಳುಂಟೆ ತನ್ನ ನೆಂತಾದೊಡಂ | ನೀರ್ಮುಟ್ಟದಂತೊಯ್ಯನಾ ತಡಿಗೆ ದಾಂಟಿಸುವ। ಕೂರ್ಮೆಯುಳ್ಳವರೆಂದೊಡಲ್ಲಿರ್ದ ನಾವಿಕರ್ ಕೇಳ್ದವಳ್ಗಿಂತೆಂದರು||೨೫||
ಬಿಂದುಮಾತ್ರಂ ಮೇಲೆ ಬೀಳಲ್ಕೆ ವಿಪ್ರನಂ| ಕೊಂದ ಪಾಪಂ ಪೋಪುದಿಲ್ಲಿ ಮಿಂದವನ ಗತಿ । ಯಂದಮಂ ಬಣ್ಣಿಸುವೊಡಜನ ಪವಣಲ್ಲ ನೀನಿಲ್ಲಿಗೇನಂ ಪ್ರಾರ್ಥಿಸಿ|| ಬಂದೆ ಗಂಗಾಂಬುವಂ ಮುಟ್ಟದಿರಬಹುದೆ ಪೇ! ಳೆಂದೊಡಾ ಜ್ವಾಲೆ ನುಡಿದಳ್ ಜಾಹ್ನವಿಗೆ ದೋಷ | ಮೊಂದಿಹುದು ನಿಮಗೊರೆವುದಿಲ್ಲಮವಳೆನಗೆ ಮೈದೋರಲುಸಿರುವೆನೆಂದಳು |೨೬|
ನೈಜದಿಂದಜನ ಕರಪಾತ್ರದಗ್ರೋದಕಂ । ವೈಜಯಂತೀಧರನ ಪಾದಾಂಬು ಶಿವನ ತಲೆ | ಹೈಜಡೆವೆಳಸಿಗೆರೆದ ಜೀವನಂ ತಾನಂತುಮಲ್ಲದತಿಪಾಪಂಗಳ || ಮೈಜೋಡನುಗಿದು ಬಿಸುಡುವ ಗಂಗೆ ಬೆದರಿದಳ್ | ಜಗದೊಳಪವಾದಕಂಜದವರುಂಟೆ ಕೇ| ಳೈ ಜನಪ ಜಲದೆ ಜಾಹ್ನವಿ ಕೇಳ್ದು ಪೊರಮಟ್ಟಳವಳೆಂದ ನುಡಿಗೆ ನಡುಗಿ ॥೨೭||
ಅಂಬುರುಹ ರೋಲಂಬ ಮತ್ಸ್ಯಕಚ್ಛಪ ವಾರಿ। ಕಂಬು ಶೀಕರ ಚಕ್ರವಾಕ ಶೈವಾಲ ಕಾ | ದಂಬ ಗಂಭೀರ ಸೈಕತ ಮೃಣಾಳಂಗಳಿವು ತನಗವಯವಂಗಳಾಗೆ|| ಇಂದಾದ ಸೌಂದರ್ಯಮೀ ನದಿಯ ನಡುವೆ ಪ್ರತಿ | ಬಿಂಬಿಸಿದೊಲರೆ ದಿವ್ಯ ರೂಪನಳವಡಿಸಿ ಜಗ | ದಂಬೆ ಜಾಹ್ನವಿ ಸಲಿಲ ಮಧ್ಯದಿಂದೆದ್ದು ಬಂದಾ ಜ್ವಾಲೆಯಂ ಕೇಳ್ದಳು || ೨೮ ||
ದೋಷ ಹರೆ ತಾನೆಂದು ವೇದ ಶಾಸ್ತ್ರಂಗಳುರೆ | ಘೋಷಿಪುವು ಮುಟ್ಟಲಾಗದು ತನ್ನನೆಂದು ನೀಂ| ದೂಷಿಸುವ ಕಾರಣಮದಾವುದೌ ಜ್ವಾಲೆ ಪೇಳೆಂದು ಜಾಹ್ನವಿ ನುಡಿಯಲು|| ದೂಷಣದ ಮಾತನಾಡುವಳಲ್ಲ ಲೋಕದ ಸು | ಭಾಷಿತವನುಸಿರಬೇಹುದು ಪುತ್ರರಿಲ್ಲದಿಹ | ಯೋಷೆಯ೦ಗಸ್ಪರ್ಶನಂ ಪಾಪಮೆಂಬರದಕಾಗಿ ಬೆದರಿದೆನೆಂದಳು||೨೯|
ಎಂದೊಡೆ ಕೆರಳು ಭಾಗೀರಥಿ ಸಮಸ್ತ ನೃಪ। ವೃಂದದೊಳ್ ತನ್ನ ಮಗನುದ್ದಾ ಮನಾಗಿರ್ಪ ನೆಂದುಮಳಿವವನಲ್ಲವಂ ಯದೃಚ್ಛಾ ಮರಣಿ ಭಾಗವತ ಮಸ್ತಕಮಣಿ || ವೃಂದಾರಕೋಪಮಂ ಸತ್ಯಸಂಧಂ ಭೀಷ್ಮ | ನೆಂದು ಮೂಲೋಕದೊಳ್ ಪ್ರಖ್ಯಾತನಾಗಿಹಂ | ಮಂದಮತಿ ನೀನೆನಗೆಸುತರಿಲ್ಲೆ ನಲ್ ಬಹುದೆ ಪೋಗೆಂದೊಡಿಂತೆಂದಳು|| ೩೦||
ಉಂಟು ನೀನಾಡಿದಿನಿತೆಲ್ಲಮುಂ ತಥ್ಯವಹು | ದೆಂಟಕೊಂದುಳಿದುದಂ ಬಲ್ಲೆನಾನದರಿಂದೆ | ವೆಂಟಣಿಸಿನ್ನೆಗಂ ನೀನ್ನೇಳ್ಗೆ ಮೂಜಗದೊಳೀಗ ದಾಯಾದ್ಯರೊಳಗೆ|| ಗಂಟಿಕ್ಕಿದಾಹವದೊಳರ್ಜುನಂ ತವ ನೂನು | ನಂ ಟಕ್ಕಿನಿಂ ಕೊಂದನಲ್ಲದಿರ್ದೊಡೆ ಮತ್ತೆ | ಕಂಟಕಮದೆತ್ತಣದು ಕೇಳ್ ತವಾಭ್ಯುದಯಕೆಂದಾಜ್ವಾಲೆ ಕಾಳ್ಗೆಡೆದಳು || ೩೧ ||
ಪಚ್ಚೆಲೆಯ ತರುವನೊಣಗಿದ ಪೊರೆಯ ಮರದ ಕಾ | ಳ್ಕಿಚ್ಚು ಕೊಂಡುರಿವವೊಲ್ ಜ್ವಾಲೆಯ ಮುಳಿಸಿನೊಡನೆ | ಪೆಚ್ಚಿ ತಮರಾಪಗೆಯ ಕೋಪಮೆತ್ತಿದ ಹಸ್ತದಿಂ ಭೀಷ್ಮನಂ ಧುರದೊಳು || ಎಚ್ಚು ಕೊಂದರ್ಜುನನ ತಲೆಯನಾತನ ಸುತಂ | ಕೊಚ್ಚಿ ಕೆಡಹಲಿ ತಿಂಗಳಾರಕಾಹವದೊಳೆಂ | ದುಚ್ಚರಿಸಿ ಶಾಪಮಂ ಕೊಟ್ಟಡಗಿದಳ್ ಜಲದ ಮಧ್ಯದೊಳ್ ದಿವಿಜ ತಟಿನಿ |೩೨||
ನಾರಿಯರ ಚಲಮೆಂತುಟೋ ಕೇಳ್ ಮಹೀಶ ಭಾ । ಗೀರಥಿಗೆ ಕೋಪಮಂ ಬರಿಸಿ ಕೊಡಿಸಿದಳತಿ ಕ | ಠೋರತರ ಶಾಪಮಂ ಜ್ವಾಲೆ ಬಳಿಕದು ಸಾಲದಾ ನರನ ತಲೆಯನರಿವ | |ಕೂರಲಗಿನಸ್ತ್ರವಾದಪೆನೆಂದು ಸುರನದಿಯ | ತೀರದೊಳ್ ವಹ್ನಿ ಪ್ರವೇಶಮಂ ಮಾಡಿ ಜಂ | ಭಾರಿ ತನಯನ ಸೂನು ಬಭ್ರುವಾಹನನ ಮೂಡಿಗೆಯೊಳಂಬಾಗಿರ್ದಳು | |೩೩||
ಬಂದುದು ನರಂಗೆ ವಾಯದೊಳೀಗ ಶಾಪಮೀ | ಪಮಂದಾಕಿನಿಯ ಮಾತು ತಾಗಿದಲ್ಲದೆ ಮಾಣ | ದಿಂದು ಕುಲಮಳಿವುದೀತನ ಕೂಡೆ ಧರಣಾದಿಗಳಸುವಿಡಿಯಲರಿಯರು | ಮುಂದೆ ಸುರಪುರದ ಲಕ್ಷ್ಮೀಕಾಂತನಾನ ತೆರ! ದಿಂದೆ ಪರಿಹರಿಸುವನೊ ತನ್ನ ಶರಣಾಗತರ | ನೊಂದುಪಾಯದೊಳುಳಿಪದಿರನೆಂದು ಧೈಯಮಂ ತಾಳ್ದರಿಂದ್ರಾದಿ ಸುರರು ॥೩೪||
ಜೈಮಿನಿ ಭಾರತ 20
ಹತ್ತನೆಯ ಸಂಧಿ ಮೊದಲ ಭಾಗ
ಪದ್ಯ 1 ರಿಂದ 25
ನಿರೂಪಣೆ: ಸುಬ್ಬುಲಕ್ಷ್ಮಿ
ಸೌಭರಿ ಮುನಿಯ ಆಶ್ರಮ
ಸಂಕ್ಷಿಪ್ತ ರೂಪ
ಅರ್ಜುನನು ಕುದುರೆಯ ಹಿಂದೆ ಸಕಲ ಸೈನ್ಯದೊಂದಿಗೆ ನಡೆಯುತ್ತಿರಲು ವಿಂಧ್ಯ ಪರ್ವತ ಎದುರಾಯಿತು. ಪಾಂಡವರೆಲ್ಲರ ಪ್ರತಿನಿಧಿಯಂತೆ ಇದ್ದ ಅರ್ಜುನ ಪರ್ವತದ ಸೌಂದರ್ಯ, ಅಗಾಧತೆ ಗಳನ್ನು ಕಂಡನು. ಗಗನ ಮಂಡಲವನ್ನು ಚುಂಬಿಸುವಂತಿರುವ ಶೃಂಗಗಳಿಂದ, ನಾನಾ ವಿಧದ ತರುಗಳಿಂದ, ಖಗ ಮೃಗಗಳಿಂದ, ಗೈರಿಕಾದಿ ಧಾತುಗಳಿಂದ ಶೋಭಾಯಮಾನವಾಗಿತ್ತು ಆ ಪರ್ವತಶ್ರೇಣಿ. ಅಲ್ಲಲ್ಲಿ ಪುಣ್ಯಾಶ್ರಮಗಳು ಕಾಣುತ್ತಿದ್ದವು. ಹಕ್ಕಿಗಳ ಕಲರವ ಮಧುರವಾಗಿತ್ತು. ಮರದಿಂದ ಮರಕ್ಕೆ ನೆಗೆಯುತ್ತ ಚೇಷ್ಟೆ ಮಾಡುತ್ತಿದ್ದ ಕೋತಿಗಳೂ ಬಹಳಷ್ಟು ಇದ್ದವು. ಅಲ್ಲಿ ಬೀಸುತ್ತಿದ್ದ ಗಾಳಿಯು ವಿವಿಧ ಹೂಗಳ ಕಂಪನ್ನು ಹೊತ್ತು ತರುತ್ತಿತ್ತು.
ಅಲ್ಲಿ ವಿವಿಧ ನಾಗಗಳಿದ್ದರೂ ಶಿವನಲ್ಲ, ಬಿಳಿ ಮಂಜಿದ್ದರೂ ಹಾಲ್ಗಡಲಲ್ಲ, ಮಹಿಷಿಗಳಿದ್ದರೂ ರಾಜಗೃಹವಲ್ಲ ಇತ್ಯಾದಿ ಪದಗಳ ಚಮತ್ಕಾರ ಇಲ್ಲಿನ ವರ್ಣನೆಗಳಲ್ಲಿ ಮೂಡಿದೆ.
ಬಹಳ ಕಾಲದಿಂದ ಮಳೆಗರೆದ ನಭಕ್ಕೆ ಉತ್ತರಿಸುವಂತೆ ಪಾರ್ಥನ ಸೈನ್ಯದ ಬಹುಳತೆಯಿಂದ ಅಲ್ಲಿ ಆಕಾಶದವರೆಗೆ ಧೂಳೆದ್ದಿತು. ನೆಲ ನಡುಗಿತು. ಕ್ರಿಮಿಕೀಟಗಳು, ಮೃಗಪಕ್ಷಿಗಳು, ತರುಲತೆಗಳು, ನದನದಿಗಳು ಎಲ್ಲವನ್ನೂ ನೋಡುತ್ತ ಸೇನೆ ಮುನ್ನಡೆಯಿತು.
ಅಲ್ಲಿನ ದುರ್ಮಾರ್ಗವು ಸನ್ಮಾರ್ಗವಾಯಿತು.ಅಂಧಕಾರ ತೊಲಗಿ ಸುಪ್ರಸನ್ನ ಕಾಂತಿ ಬೆಳಗಿತು. ಇಲ್ಲಿ ಹರಿ ಎಂಬುದು ಕೃಷ್ಣ ಮತ್ತು ಕುದುರೆ ಎರಡೂ ಅರ್ಥವನ್ನು ಹೊಂದಿದೆ.
ಕುದುರೆಯು ಹೆಜ್ಜೆಯಿಟ್ಟ ನೆಲ ವಿಷ್ಣುಪದಮಾಯ್ತು ಎಂದು ಹೇಳುತ್ತ ಎರಡೂ ಅರ್ಥಗಳನ್ನು ಸಮನ್ವಯ ಮಾಡಿರುವುದು ಸೊಗಸಾಗಿದೆ.
ಮುಂದೆ ಸಾಗಿದ ಕುದುರೆ ದೊಡ್ಡದೊಂದು ಬಂಡೆಯನ್ನು ಕಂಡು ಅಲ್ಲಿ ಕಾಲಿಟ್ಟಿತು. ತಕ್ಷಣ ಅದು ಶಿಲೆಯಂತೆ ಕದಲಲಾರದೆ ನಿಂತುಬಿಟ್ಟಿತು. ಸ್ವಲ್ಪವೂ ಚಲಿಸಲಾಗಲಿಲ್ಲ. ಈ ವಿಚಿತ್ರವನ್ನು ಭಟರು ಅರ್ಜುನನಿಗೆ ತಿಳಿಸುದರು. ಅವನೂ ಇದನ್ನು ಕಂಡು ಚಕಿತನಾದನು. ಚಿಂತಿಸಿದನು.
ಇಲ್ಲಿ ಯಾರಾದರೂ ಮುನಿಯ ಆಶ್ರಮವಿರಬಹುದೆಂದು ಭಾವಿಸಿದ ಅರ್ಜುನ ದೂತರನ್ನು ಅಟ್ಟಿದನು. ಅವರು ಬಹಳ ಬೇಗ ಬಂದು ಅಲ್ಲೊಂದು ಆಶ್ರಮವಿರುವಬಗ್ಗೆ ತಿಳಿಸಿದರು. ತನ್ನ ಆಪ್ತರೊಂದಿಗೆ ನಡೆದನು. ಅಲ್ಲಿ ಪ್ರಶಾಂತ ವಾತಾವರಣ ಇತ್ತು.
ಯಾವುದೇ ವೈರವಿಲ್ಲದೆ ಎಲ್ಲ ಪ್ರಾಣಿಗಳಿದ್ದವು. ಅಲ್ಲಿ ಎಲ್ಲ ಋತುಗಳೂ ಮೇಳೈಸಿದ್ದಂತೆ ಇತ್ತು.
ಅರ್ಜುನನು ಅಲ್ಲಿದ್ದ ಮುನಿಗೆ ನಮಸ್ಕರಿಸಿದನು. ಅವರು ಇವನನ್ನು ಸತ್ಕರಿಸಿದರು.
ಕುಲಬಾಂಧವರನ್ನು ಕೊಂದ ಪಾಪದ ಪ್ರಾಯಶ್ಚಿತ್ತಕ್ಕಾಗಿ ಕೈಗೊಂಡಿರುವ ಅಶ್ವಮೇಧದ ಬಗ್ಗೆ ಹೇಳಿ ಕುದುರೆಯು ಶಿಲೆಯಲ್ಲಿ ಸಿಲುಕಿರುವ ವಿಷಯ ಹೇಳಿದನು. ಹರಿಯ ಕರಣೆಯಿರಲು ಯಾಗದ ಸಂಗೇಕೆ ಎಂದು ಮುನಿಯು ಹೇಳಲು ಹರಿಯನ್ನು ಮರೆವವರಲ್ಲ ನಾವು. ಅವನನ್ನು ಮುಂದೆ ಇಟ್ಟುಕೊಂಡೇ ಈ ಕಾರ್ಯ ಕೈಗೊಂಡಿರುವುದಾಗಿ ಹೇಳಿ ಕುದುರೆಯನ್ನು ಬಿಡಿಸಬೇಕಾಗಿ ಪ್ರಾರ್ಥಿಸಿದನು. ಕೃಷ್ಣನ ಸ್ಮರಣೆಯನ್ನು ಮಾಡಿ ಕುದುರೆಯನ್ನು ಮುಟ್ಟು. ಅದು ಚಲಿಸುವುದು ಎನ್ನಲು ಸಂತಸವಾಯಿತು. ಇಲ್ಲಿನ ವಿಚಿತ್ರದ ಬಗ್ಗೆ ಹೇಳೆನ್ನಲು ಮುನಿಯು ಚಂಡಿ ಉದ್ದಾಲಕರ ಕಥಾಭಾಗವನ್ನು ಹೇಳಲು ಆರಂಭಿಸಿದನು.
ಉದ್ದಾಲಕನ ಸತಿ ಚಂಡಿಯೆಂಬವಳು ಚಂಡಿತನದಲ್ಲಿಯೇ ಇದ್ದಳು. ಗೃಹಕೃತ್ಯ, ಮನೆವಾಳ್ತೆ, ಅತಿಥಿಸತ್ಕಾರ ಹೀಗೆ ಯಾವುದನ್ಬು ಮಾಡೆಂದರೂ ಮಾಡುವುದಿಲ್ಲ ಎಂದು ಚಂಡಿತನ ತೋರಿಸುತ್ತಿದ್ದಳು. ಮುಳ್ಳು ಹಿಡಿದ ಮರವನ್ನು ಹತ್ತಿದಂತಾಗಿ ಉದ್ದಾಲಕನು ಸದಾ ಚಿಂತಿಸುವಂತಾಯಿತು.
ಹೀಗಿರಲು ಕೌಂಡಿನ್ಯನೆಂಬ ಮುನಿ ಅಲ್ಲಿಗೆ ಬಂದು ಇವನ ಚಿಂತೆಯ ಕಾರಣ ಅರಿತು ಅವಳ ಒಡನೆ ವಿಪರೀತವಾಗಿ ನಡೆದುಕೋ ಮಾಡಬೇಡ ಎಂದರೆ ಮಾಡುವಳು ಎಂದು ಉಪಾಯ ಹೇಳಿಕೊಟ್ಟನು. ಹೀಗೇ ಸಾಗುತ್ತಿತ್ತು.
ಹತ್ತನೆಯ ಸಂಧಿ ಮೊದಲ ಭಾಗ
ಪದ್ಯ 1 ರಿಂದ 25
ಸೂಚನೆ : ಹರಿ ಶಿಲೆಯಮೇಲೆ ನಡೆಗಿ ಸವ್ಯಸಾಚಿ ಸೌ । ಭರಿಯ ದೆಸೆಯಿಂದ ಮುದ್ದಾಲಕನ ಕಥೆಗೇಳು| ತಿರದೆ ಹಂಸಧ್ವಜನ ಪಟ್ಟಣಕೆ ಬರಲವಂ ಕಾದಲ್ಕೆ ಪೊರಮಟ್ಟನು |
ಆಲಿಸೆಲೆ ಜನಮೇಜಯಕ್ಷಿತಿಪ ಮುಂದಣ ಕ | ಥಾಲಾಪ ಕೌತುಕವನುಚಿತದಿಂ ಫಲು`ಗುಣಂ 1 ನೀಲಧ್ವಜನ ಕಂಡ ಬಳಿಕಾತನಂ ಕೂಡಿಕೊಂಡಖಿಳ ಸೇನೆಸಹಿತ | |ಮೇಲೆ ನಡೆದಂ ತೆಂಕಮೊಗವಾಗಿ ಹಯದೊಡನೆ | ಕಾಲಿಡುವ ಮಂದಿಗಿಂಬಿಲ್ಲ ನೆಲನಾಗಸಂ | ಸಾಲದೇಳುವ ಧೂಳಿಗೆಣ್ದೆಸೆ ಕಠೋರ ವಾದ್ಯಧ್ವನಿಗೆ ನೆರೆಯದೆನಲು||೧||
ಸಹದೇವನಾಗಿ ಸಮುದಿತ ನಕುಲನಾಗಿ ಸ | ನ್ನಿಹಿತಾರ್ಜುನನುಮಾಗಿ ವರ ವೃಕೋದರನಾಗಿ | ಮಹದಿಳಾ ಭದ್ರಾಜನಾಗಿ ಶಶಿಕಾಂತ ಕುಲದಿಂದೆ ಪಾಂಡವನುವಾಗಿ || ಅಹಿತರುಗಳಂ ಧಾರ್ತರಾಷ್ಟ್ರರಂ ಕೂಡಿಕೊಂ | ಡಿಹುದರಿಂದಚಲನಾಗಿಹೆನೆಂದು ಹರಿಯೊಡನೆ | ಬಹ ಪಾರ್ಥನಂ ಕರೆದು ಮೂದಲಿಪ ತೆರದಿಂದೆ ವಿಂಧ್ಯಾದ್ರಿ ಮುಂದೆಸೆದುದು||೨||
ಎಸೆದುದಾ ಗಿರಿ ಗಗನ ಮಂಡಲವನಂಡಲೆನ | ಲಸದುನ್ನತದ ಶೃಂಗದುಷ್ಕರದ ಸತ್ಕರದ | ಶಶಿಕಾಂತಮಯವಾದ ರಮಣೀಯ ಕಮನೀಯ ಕಂದರದ ಸೌಂದರದೊಳು|| ಮುಸುಕಿ ತಪ್ಪಲ ಮೇವ ಮಂಜುಗಳ ನಂಜುಗಳ | ದಶನದುಗ್ರಾಹಿಗಳ ಪುತ್ತುಗಳ ಮುತ್ತುಗಳ | ಬೆಸಲಾದ ಪೆರ್ಬಿದಿರ ಕಾಡುಗಳ ಬೀಡುಗಳ ಶಬರಿಯರ ಸಂಕುಲದೊಳು ||೩||
ಪಕ್ಷಿ ಮೃಗಜಾತಿಗಳು ಲೀಲೆ ಮಿಗೆ ರಮಿಸುತಿಹ | ಯಕ್ಷ ಕಿನ್ನರ ಕಿಂಪುರುಷ ಗಂಧರ್ವ । ರಕ್ಷೋಗಣಂಗಳಿಂದಲ್ಲಲ್ಲಿಗೆಸೆವ ಪುಣ್ಯಾಶ್ರಮದ ಮುನಿಗಳಿಂದೆ || ಯಕ್ಷ ವಾನರ ಕುಲದ ವಿವಿಧ ಚೇಷ್ಟೆಗಳಿಂದೆ | ವೃಕ್ಷ ಲತೆಗಳ ಕುಸುಮ ಫಲ ಸಮೃದ್ಧಿಗಳಿಂದ 1 ಮಕ್ಷಿಗಚಂದ್ರಮೆಸೆದಿರ್ದುದು ಪುಳಿಂದಿಯರ ತನುಗಂಧ ಬಂಧುರದೊಳು||೪||
ಅಭಿಲಾಷೆಯಂತಿರೆ ಸದಾನವಂ ಸಿರಿಯಂತೆ ! ವಿಭವಾಸ್ಪದಂ ಕಲಾ ನಿಧಿಯಂತೆ ಮೃಗಧರಂ | ನಭದಂತೆ ಕುಜಯುತಂ ದ್ವಿಜನಂತೆ ವಂಶ ಪರಿಶೋಭಿತಂ ಸ್ವರ್ಗದಂತೆ| | ಶುಭ ಸುರಭಿ ಸಂಭ್ರತಂ ರಣದಂತೆ ಶರವೃತಂ | ನಭೆಯಂತೆ ಚಿತ್ರ ಪತ್ರಾನ್ವಿತಂ ದಿನಕರ | ಪ್ರಭೆಯಂತೆ ಪುಂಡರೀಕೋಲ್ಲಾಸಕರವಾಗಿ ತಚ್ಚೈಲಮೆಸೆದಿರ್ದುದು ||೫||
ನಾಗಭೂಷಣನಾಗಿ ಶಿವನಲ ಹರಿಗಿರ್ಕೆ | ಯಾಗಿ ಪಾಲ್ಗ ಡಲಲ್ಲ ಶಿಖಿ ನಿವಾಸಸ್ಥಾನ | ಮಾಗಿ ದಿಗ್ಭಾಗಮಲ್ಲಪ್ಪಾ ಪದೋದ್ಯಾಸವಾಗಿ ನೈಪಥ್ಯಮಲ್ಲ | ಗೋ ಗಣಾತವಾಗಿ ವ್ರಜಮಲ್ಲ ಖಡ್ಡ ಧರ | ನಾಗಿ ಪಟುಭಟನಲ್ಲ ಮಹಿಷೀ ವಿಲಾಸಕರ | ಮಾಗಿ ನೃಪಗೇಹಮಲ್ಲೆನಿಸಿರ್ದುದಾಶ್ಚರ್ಯ ಸಾಂದ್ರ ಮಚಲೇಂದ್ರಮೆಸೆದು||೬||
ಶೃಂಗಮಯಮುರುಶಿಲಾ ಸಂಗಮಯಮಧಿಕ ಮಾ | ತಂಗಮಯಮನುಪಮ ಭುಜಂಗಮಯಮುನ್ನತ ಲ ।
ವಂಗಮಯಮಮಿತ ಸಾರಂಗಮಯಮದ್ಭು ತದ ಸಿಂಗಮಯ ಶರಭಮಯಮು|| ಶೃಂಗಮಯಮವಿರಳ ವಿಹಂಗಮಯವೊಪ್ಪುವ ಕು | ರಂಗಮಯಮಮರಿಯರನಂಗಮಯ ಕೇಳಿಗಳ | ಸಂಗಮಯಮೆನಿಪ ಗಿರಿ ಭಂಗಮಯವಲ್ಲದುತ್ತುಂಗಮಯ ಮಾಗಿರ್ದುದು||೭||
ಬಹು ಕಾಲಮೆನಗೆ ನೀರ್ಮಳೆಗರೆದ ಪುರುಷಾರ್ಥ | ಕಹಹ ಮೃದ್ಬಿಂದುಗಳನೀಗ ಸುರಿದಪೆನೆಂದು |ಮಹಿ ನಭಸ್ಥಳಕೂರ್ಧ್ವಮುಖವಾಗಿ ಸೂಸುವ ರಜದ ಸೋನೆಯೆನೆ ದೂಳಿಗೆ|| ಬಹುಳ ತರು ಗುಲ್ಮಲತೆ ಮೃಗ ಪಕ್ಷಿ ಕ್ರಿಮಿ ಕೀಟ | ಗುಹೆ ದೊಣೆ ಮೊರಡಿ ಪಳ್ಳ ಕೊಳ್ಳ ಜರಿ ಸರಿ ಜಲುಗು | ಗಹನ ಗಹ್ವರದ ವಿಂಧ್ಯಾದ್ರಿಯಂ ಫಲುಗುಣನ ಸೇನೆ ತುಳಿದಸಿಯರೆದುದು||೮||
ಹರಿಯ ಸೇವಕರ ಬರವಂ ಕಾಣುತಾ ವಿಂಧ್ಯ | ಗಿರಿಯ ದುರ್ಮಾರ್ಗಮುಂ ಸನ್ಮಾರ್ಗವಾಯ್ತು ದು | ರ್ಧರ ಹೃದಯ ವನಜಾಂಧಕಾರಮುಂ ಸುಪ್ರಕಾಶಿತಮಾಯ್ತು ವಿಕೃತಿಯಡಗಿ|| ಉರುತರ ಪ್ರಭವ ದವಮುಕ್ತ ಭಾವಿತವಾಯ್ತು | ನಿರುಪಮಾಶಾ ಪರಿಜ್ಞಾನವಾಯ್ತಿರದೆ ಗೋ | ಚರಮಾಯ್ತು ವಿಷ್ಣು ಪದಮೆನೆ ನಡೆದುದಾ ಹಯಂ ಬೆಂಬಿಡದ ಸೇನೆಸಹಿತ||೯||
ಮಂದಿ ಸಂದಣಿಸಿ ಬೆಂಕೊಂಡು ನಡೆತರೆ ಕುದುರೆ | ಮುಂದೆ ಬರೆವರೆ ಕಂಡುದೊಂದು ಯೋಜನದಗಲ | ದಿಂದೆಸೆವ ಶಿಲೆಯನದರೊಳ್ ಪೊರಳ್ದಪೆನೆಂಬ ತವಕದಿಂದತಿಭರದೊಳು|| ಬಂದಡರ್ದಾ ಕಲ್ಲ ಮೇಲೆ ಹರಿ ಕಾಲಿಟ್ಟು | ದಂದು ಹರಿ ಮೆಟ್ಟಿದೊಡೆ ಪೆಣ್ಣಾದುದಂತೆ ಮೇ | ಣಿಂದಾಗದಿರ್ದಪುದೆ ಪೇಳೆಂಬಿನಂ ಮಹೀಪಾಲ ಕೇಳದ್ಭುತವನು||೧೦||
ಕಾಲಿಡಲ್ಕಾ ಶಿಲೆಯೊಳಾ ತುರಂಗದ ಖುರಂ | ಕೀಲಿಸಿತು ಭಿನ್ನಿಸದೆ ಕೂಡೆ ಬೆಚ್ಚಂದದಿಂ | ಮೇಲೆ ನಡೆಗೆಟ್ಟು ನಿಂದುದು ದರಿದ್ರನ ಮನೋರಥದಂತೆ ನಿಜ ತನುವಿನ|| ಲೀಲೆಯಡಗಿರ್ದುದಾಕೃತಿಯ ಭಂಜಿಕೆಯೆನಲ್ | ಭೂಲೋಲ ಕೇಳ್ಳೆಕ್ಯಮಾಗಿರ್ದುದಾ ಕಲ್ಲೊ | ಳಾ ಲಲಿತ ವಾಜಿ ಪೂರ್ಣೀಂದು ಮಂಡಲದೊಳೊಪ್ಪುವ ಮೃಗಾಂಕದಂತೆ||೧೧||
ಗಾಳಿಯಂ ಮಿಕ್ಕು ನಡೆವಾ ಹಯಂ ಕಾಲ್ಗಳಂ | ಕೀಳಲಾರದೆ ನಿಂದುದರೆಯೊಳೇನಚ್ಚರಿಯೊ | ಪೇಳಬೇಕೆಂದು ಚಾರರೈ ತಂದು ಪಾರ್ಥಂಗೆ ಕೈಮುಗಿದು ಬಿನ್ನೈ ಸಲು|| ಕೇಳಿ ವಿಸ್ಮಿತನಾಗಿ ಬಂದು ನೋಡಿದನಲ್ಲಿ | ಗಾಳನಟ್ಟಿದನಬ್ಬರಿಸಿ ಸೆಳೆಗಳಿಂದ ಪೊ |ಯ್ದೇಳಿಸಿದೊಡದು ವಜ್ರ ಲೇಪವಾದುದು ಸಿಲ್ಕಿತಾ ಕುದುರೆ ಕಲ್ಲೆಡೆಯೊಳು||೧೨||
ಬಳಿಕ ಚಿಂತಿಸಿದನರ್ಜುನನಿದೇನಾದೊಡಂ | ಮುಳಿದ ಮುನಿಪನ ಶಾಪವಾಗಬೇಕೀ ವನ | ಸ್ಥಳದೊಳಾಶ್ರಮಮುಂಟೆ ನೋಳ್ಪುದಗಲದೊಳೆಂದು ಚಾರರಂ ಕಳುಹಲವರು|| ತೊಳಲಿ ನಿಮಿಷದೊಳರಸಿ ಬಂದು ಬಿನ್ನೈಸಲ್ಕೆ| ಫಲುಗುಣಂ ಪ್ರದ್ಯುಮ್ನ ವೃಷಕೇತು ಸಾಲ್ವಪತಿ || ಕಲಿ ಯೌವನಾಶ್ವ ನೀಲಧ್ವಜರನೈವರಂ ಕೂಡಿಕೊಂಡೈತಂದನು||೧೩||
ವೆಗ್ಗಳಿಸರಿನ ಚಂದ್ರ ಪವನ ಶಿಖಿ ಪರ್ಜನ್ಯ | ರೊಗ್ಗಿ ಹವು ವೈರವಿಲ್ಲದೆ ನಿಖಿಳ ಮೃಗಪಕ್ಷಿ | ಮೊಗ್ಗಲರ್ ಕಾಯ್ಪಣ್ತಿಳಿರ್ಗಳಿಂ ಬೀಯವೆಂದೆಂದುಮೆಲ್ಲಾ ತರುಗಳು|| ಸಗ್ಗದವರಂತೆ ಬೇಡಿದನೀವುವಾವಗಂ | ಸುಗ್ಗಿಯಾಗಿಹುವಾರು ಋತುಗಳುಂ ಸಲೆ ಪೆಚ್ಚು | ತಗ್ಗು ಶೀತೋಷ್ಣ ಸುಖದುಃಖಂಗಳೊಗೆ ಯದಾಶ್ರಮಮೊಂದು ಮುಂದೆಸೆದಿರ್ದು||೧೪||
ವೇದಶಾಸ್ತ್ರಾಗಮ ಸ್ಮೃತಿ ಪುರಾಣಾವಳಿಯ | ಮೋದಿಸುವ ಕಶ ಸಮಿತ್ಪುಷ್ಪ ಫಲ ಮೂಲ ಪ | ರ್ಮಾದಿಗಳನೊದವಿಸುವ ಜಪ ತಪಸ್ಸಾನಾಗ್ನಿ ಹೋತ್ರ ವಿಧಿ ವೇಳೆಗಳನು|| ಕಾಧಿಸುವ ರವಿ ನಮಸ್ಕಾರ ಹರಿ ಹರ ಸಮಾ |ರಾಧನೆಗಳಂ ಮಾಡುವತಿಥಿಗಳನಳ್ತಿಯಿಂ | ಅದರಿಪ ಯೋಗಮಾರ್ಗದೊಳೆಸೆವ ಮುನಿಗಳಾಶ್ರಮದೆಡೆಯೊಳಿರುತಿರ್ದರು||೧೫||
ಸುಡದಿರ್ದ ಪಾವಕನೊ ಬಿಸಿ ಮಾಣ್ದ ರವಿಯೊ ತಂ |ಪಿಡಿದಿರದ ಚಂದ್ರಮನೊ ವಿಷಕಂಠನಾಗದಿಹ |ಮೃಡನೊ ರಜಮಂ ಪೊರ್ದದಂಬುಜಾಸನನೊ ಫಣಿ ತಲ್ಪನಲ್ಲದ ವಿಷ್ಣುವೊ|| ಕಡುತೇಜದೊಬ್ಬುಳಿಯೊ ಶಾಂತಿಯ ನಿಜಾಕಾರ | ದೊಡಲೊ ಪೇಳೆಂಬ ಸೌಭರಿ ಮುನಿಪನಾಶ್ರಮದ | ನಡುವೆ ಕುಳಿರ್ದು ಸುಖಯೋಗದೊಳಿರಲ್ಕೆ ನಡೆತಂದರ್ಜುನಂ ಕಂಡನು||೧೬||
ಬಂದು ಸಾಷ್ಟಾಂಗದಿಂದೆರಗಿ ಸೌಭರಿ ಮುನಿಯ | ಮು೦ದೆ ಕೈಮುಗಿದು ನಿಲಲಾ ಪಾರ್ಥನಂ ಪ್ರೀತಿ | ಯಿ೦ದೆ ಸತ್ಕರಿಸಿ ಕುಶಲಂಗಳಂ ಕೇಳಿಲ್ಲಿಗೇಕೆ ಬರವಾಯಿತೆನಲು|| ಅಂದು ಕುಲಗೋತ್ರಮಂ ಕೊಂದ ಪಾಪಂ ಪೋಗ | ಲೆಂದಶ್ವಮೇಧಮಂ ತೊಡಗಿ ಯೆನ್ನಂ ಧರ್ಮ | ನಂದನಂ ಕಳುಹಿದಂ ಹಯ ರಕ್ಷೆಗದರೊಡನೆ ಬರೆ ಸಿಲ್ಕಿ ತದು ಶಿಲೆಯೊಳು||೧೭||
ಎಲೆ ಮುವೀಶ್ವರ ತವಾನುಗ್ರಹದೊಳಲ್ಲದೀ | ಶಿಲೆಯೊಳೊಂದಿದ ಹಯಂ ಬಿಡುವಂದಮಂ ಕಾಣೆ | ನುಳುಹಬೇಕೆಂದೆರಗಲರ್ಜುನನ ಮೊಗ ನೋಡಿ ನಗುತೆ ಸೌಭರಿ ನುಡಿದನು|| ಕಳುಹಿದಂ ಪಿಂತೆ ಭಾರತ ಯುದ್ಧ ಮಧ್ಯದೊಳ್ |ನಳಿನದಾಭಂ ನಿನಗೆ ಮತ್ತೆಯುಮಹಂಕಾರ | ಮಳಿದುದಿಲ್ಲಕಟ ಜಗದೊಳ್ ಕೊಲ್ವರಾರ್ ಕಾವರಾರ್ ಬಲ್ಲೊಡುಸಿರೆಂದ||೧೮||
ಶ್ರೀಕೃಷ್ಣನಿರೆ ಮುಂದೆ ವಂಶಮಂ ಕೊಂದೆನೆಂ | ಬೀ ಕೃತ್ಯದಿಂ ಪಾತಕಂ ಬಹುದೆ ನಿಮ್ಮೊಳ್ ಸ | ಸದಾ ಕೃಪಾನಿಧಿಯ ಸಾನ್ನಿಧ್ಯಮಿರುತಿರಲಾಗಿ ವಾಜಿಮೇಧಂ ಬೇಹುದೆ || ಆ ಕೃಕಾಂತಕ ನರಿದುದಿಲ್ಲಲಾ ಲೋಕದೊಳ್ |ಪ್ರಾಕೃ ತರ ತೆರದಿಂದ ಹರಿ ಮನೆಯೊಳಿಗೆ ಗರ್ವ|ದಾಕೃತಿಯಹರಿಯೊಡನೆ ಬಂದೆ ಸುರ ಭೂಜಮಿರೆ ಶಾಲ್ಮಲಿಯನರಸುವಂತೆ||೧೯||
ಕೊಟ್ಟಿಗೆಯ ಕಾಮಧೇನುವನೊಲ್ಲದಳ್ತಿಯಿಂ | ಕಟ್ಟರಣ್ಯದ ಪುಲಿಯನರಸಿ ಕರೆಯಲ್ಕೊದೆಯ | ಕಟ್ಟುವೆಯಲಾ ತುರಗಮೇಮೆಧೇಗೈವುದಾ ಹರಿಯ ಸಾನ್ನಿಧ್ಯಮಿರಲು || ಹುಟ್ಟಿತಿಲ್ಲವೆ ನಿನಗರಿವು ಧರ ಸೂನು ಮತಿ | ಗೆಟ್ಟಿಹನೆ ಶಿವಶಿವ ವೃಥಾ ಪರಿಭ್ರಮವೆ ನಿಮ | ಗಟ್ಟಿ ತೆಂದನರೇಂದ್ರ ತನಯನಂ ಜರೆದು ಸೌಭರಿ ನುಡಿದೊಡೆಂತೆಂದನು | ೨೦ ||
ಹರಿಯನುಳಿದಾವು ಬದುಕುವರಲ್ಲ ಚಿತ್ತದೊಳ್ | ಭರಿತನಾಗಿಹನಾವಗಂ ಧರ ಸೂನು ಮರೆ | ದಿರನಾ ಮುರಾರಿಯ ನಿರೂಪದಿಂ ತೊಡಗಿ ಮಾಡುವನೀ ಮಹಾಕೃತುವನು || ತರಳತೆಯ ಮೆರೆವೆಗಿಂತರಿವನುಪದೇಶಿಪೊಡೆ | ಗುರುಗಳಲ್ಲವೆ ನೀವು ಧನ್ಯರಾದಪೆವಿನ್ನು | ಕರುಣದಿಂದೀ ಶಿಲೆಯೊಳೊಂದಿದ ತುರಂಗಮಂ ಬಿಡಿಸಿಕೊಡಬೇಕೆಂದನು ||೨೧||
ಇನ್ನು ಚಿಂತಿಸದೆ ಕೃಷ್ಣಸ್ಮರಣೆಯಂ ಮಾಡಿ | ನಿನ್ನ ಹಸ್ತಸ್ಪರ್ಶನಂ ಗೈಯ್ದೊಡಾ ಕುದುರೆ | ಮುನ್ನಿನಂತವನಿಯೊಳ್ ನಡೆದಪುದು ಪೋಗು ನೀನೆಂದು ಸೌಭರಿ ನುಡಿಯಲು|| ತನ್ನೊಳಗೆ ತಾನೆ ವಿಸ್ಮಿತನಾಗಿ ಪಾರ್ಥನದ | ರುನ್ನತಿಯ ತುದಿ ಮೊದಲನರುಪೆನಲ್ ಜ್ಞಾನ ಸಂ | ಪನ್ನ ತಾಪಸನರ್ಜುನಂಗೆ ವಿಸ್ತರಿಸಿದಂ ಮತ್ತೆ ಪೂರ್ವಾಪರವನು اووا|
ಆಲಿಸರ್ಜುನ ಮುನ್ನ ವಿಪ್ರನುಂಟೋರ್ವನು | ದ್ದಾಲಕಾಖ್ಯಂ ತಿಳಿದನಖಿಳಶಾಸ್ತ್ರಂಗಳಂ ! ಮೇಲೆ ವೈವಾಹದೊಳ್ ವಧುವಾದಳಾತಂಗೆ ಚಂಡಿಯೆಂದಾಕೆ ಬಳಿಕ )| ಕಾಲಕಾಲದ ಜಪಾನುಷ್ಠಾನಪೂಜೆಗಳಿ | ಗಾಲಸ್ಯಮಂ ಮಾಡದೆನ್ನ ಪರಿಚರೈಗನು | ಕೊಲೆಯಾಗಿರ್ದು ಮನೆವಾಳ್ತೆಯಂ ಸಾಗಿಪುದು ನೀನೆಂದೊಡಿಂತೆಂದಳು ॥೨೩||
ಎಳ್ಳನಿತು ನಿನ್ನ ಮಾತಂ ಕೇಳ್ವಳೆಂದೆಣಿಕೆ | ಗೊಳ್ಳದಿರ್ ಪರಿಚರ್ಯೆ ಮನೆವಾಳ್ತೆಯೆಂದೆಂಬ | ತಳ್ಳಿಯವಳಲ್ಲ ನೀನೆಂದುದಂ ಮಾಡೆನೆಂದಾ ಚಂಡಿ ಚಂಡಿಪೋರೆ || ಮುಳ್ಳಿಡಿದ ಮರವೇರಿದಂತಾದುದಿಹಪರಕಿ | ದೊಳ್ಳಿತಾದಪುದೆ ಬಂದುದು ತಪೋಹಾನಿಯೆಂ | ದಳ್ಳೆಯೊಳ್ ಕೋಲ್ಗೊಂಡ ತೆರದೊಳುದ್ದಾಲಕಂ ಚಿಂತಿಪಂ ಪ್ರತಿದಿನದೊಳು||೨೪||
ಇಂತಿರುತ್ತಿರಲ್ಕೆ ಕೌಂಡಿನ್ಯನೆಂಬೊರ್ವಮುನಿ | ಪಂ ತನ್ನ ಮನೆಗೆ ಬರಲಾತನಂ ಸತ್ಕರಿಸಿ | ಚಿಂತೆವೆತ್ತಿರಲವನಿದೇನೆಂದು ಬೆಸೆಗೊಂಡೊಡವಳ ಪ್ರತಿಕೂಲತೆಯನು || ಅಂತರಿಸದೆಲ್ಲಮಂ ಪೇಳ್ದೊಡವನಿದಕೆ ನೀಂ | ಮುಂತೆ ವಿಪರೀತಮಂ ಮಾಡಲಾದಪುದೆಂದು | ಸಂತಾಪಮಂ ಬಿಡಿಸಿ ಬೀಳ್ಕೊಂಡನಂ ತೀರ್ಥಯಾತ್ರೆಗೈದಿದನಿತ್ತಲು | ೨೫ ||
ಜೈಮಿನಿ ಭಾರತ 21
ಹತ್ತನೆಯ ಸಂಧಿ ಮುಂದುವರೆದ ಭಾಗ
ಪದ್ಯ 26 ರಿಂದ 54
ಹಂಸಧ್ವಜನ ವಿಚಾರ
ನಿರೂಪಣೆ: ಸುಬ್ಬುಲಕ್ಷ್ನಿ
ಸಂಕ್ಷಿಪ್ತ ರೂಪ
ಉದ್ದಾಲಕನು ಒಮ್ಮೆ ಪಿತೃಕಾರ್ಯ ಮಾಡಬೇಕಾಗಿ ಬಂತು. ಅವನು ದಿನವನ್ನೂ, ಸಾಮಗ್ರಿಗಳನ್ಬೂ, ವಿಪ್ರರನ್ನೂ ಕರೆಯುವ ಬಗ್ಗೆ ವಿಪರೀತವಾಗಿ ಹೇಳಲು ಚಂಡಿಯು ಎಲ್ಲವನ್ನೂ ಸರಿಯಾಗಿಯೇ ಮಾಡಬೇಕೆಂದು, ದಾನ ದಕ್ಷಿಣೆ, ವಸ್ತ್ರ, ಭೋಜನ ಎಲ್ಲವೂ ಸರಿಯಾಗಿ ಆಗಬೇಕೆಂದೂ ಆಗ್ರಹಿಸಿ ತಯಾರಿ ನಡೆಸಿದಳು. ಎಲ್ಲವೂ ಸಾಂಗವಾಗಿ ಮುಗಿಯಿತು. ಪಿಂಡವನ್ಬು ನದಿಯಲ್ಲಿ ವಿಸರ್ಜಿಸಬೇಕೆಂದು ಬಾಯಿತಪ್ಪಿ ಸರಿಯಾಗಿ ಹೇಳಿ ಬಿಟ್ಟ ಉದ್ದಾಲಕ. ಚಂಡಿಯು ಅದನ್ಬು ಬೀದಿಗೆಸೆದಳು. ಮುನಿಯ ತಾಳ್ಮೆ ತಪ್ಪಿತು. ಅವಳನ್ನು ಶಿಲೆಯಾಗು ಎಂದು ಶಪಿಸಿದ. ಮತ್ತೆ ಕರುಣೆಯಿಂದ ವಿಮೋಚನೆಯ ಬಗೆಗೂ ಹೇಳಿದ.
ಅಶ್ವಮೇಧದ ಕುದುರೆ ಬಂದು ಬಿಂತಾಗ ಅರ್ಜುನನ ಸ್ಪರ್ಶದಿಂದ ಶಾಪದ ವಿಮೋಚನೆ ಎಂದು. ಅದರಂತೆ ಅರ್ಜುನ ಹರಿಯನ್ನು ಸ್ಮರಿಸಿ ಕುದುರೆಯನ್ನು ಮುಟ್ಡಲು ಅದಕ್ಕೆ ಚಲನೆ ಬಂತು. ಚಂಡಿಯು ನಮಿಸಿ ತಪಕ್ಕೆ ನಡೆದಳು. ಅರ್ಜುನನ ಸೈನ್ಯ ಮುಂದೆ ಸಾಗಿತು. ಚಂಪಕಾಪುರಕ್ಕೆ ಬಂದರು.
ಅಲ್ಲಿನ ರಾಜ ಹಂಸಧ್ವಜನಿಗೆ ವಿಷಯ ತಿಳಿಯಿತು. ಅವನಿಗೆ ಶ್ರೀ ಕೃಷ್ಣನನ್ನು ಇಲ್ಲಿ ಕಾಣುವಾಸೆ. ಅದಕ್ಕೇ ಕುದುರೆಯನ್ನು ಕಟ್ಟಿ ಹಾಕಿ ಯುದ್ಧಕ್ಕೆ ತಯಾರಾದನು. ಇವನ ಅರಮನೆ, ಕೋಟೆಗಳು ವೈಭವದಿಂದ ಕೂಡಿದ್ದವು. ಸುಭಿಕ್ಷವಿತ್ತು. ಎಲ್ಲರೂ ಧರ್ಮ ಪ್ರವರ್ತಕರು. ಪಂಡಿತರು. ರಾಜನ ಕರಾರಿನಂತೆ ಏಕಪತ್ನೀವ್ರತಸ್ಥರೂ, ಧರ್ಮಭೀರುಗಳೂ ಆಗಿದ್ದರು. ಯಾರೇ ತಪ್ಪಿ ನಡೆದರೂ ಶಿಕ್ಷೆ ಖಚಿತವಾಗಿತ್ತು. ಹಂಸಧ್ವಜನು ಹೊರಟರೆ ಅವನ ಹಿಂದೆ ಆನೆ, ಕುದುರೆ, ವರೂಥ, ಕಾಲಾಳುಗಳ ಅತಿ ದೊಡ್ಡ ಸೈನ್ಯವಿರುತ್ತಿತ್ತು. ಏಳು ಜನ ಅನುಜರು, ನಾಲ್ವರು ಮಕ್ಕಳು, ಮಂತ್ರಿಗಳು ಇದ್ದರು. ಪುರಸ್ತ್ರೀಯ ಸೊಂಟದ ಪಟ್ಟಿಯಂತೆ ಅವನ ಕೋಟೆ ಕಂಗೊಳಿಸುತ್ತಿತ್ತು. ಅವನ ಮನದಲ್ಲಿ ಯುದ್ಧಕ್ಕಿಂತ ಮಿಗಿಲಾಗಿ ಕೃಷ್ಣನನ್ನು ಕಾಣುವ ಬಯಕೆ. ಹೀಗಾಗಿ ಕುದುರೆಯನ್ನು ಕಟ್ಟಿಸಿದನು.
ಅವನಿಗೆ ಶಂಖ ಲಿಖಿತರೆಂಬ ಪುರೋಹಿತರಿದ್ದರು. ಒಮ್ಮೆ ಶಂಖ ಅಣ್ಣನ ಬಳಿಗೆ ಹೊದವನು ಅಲ್ಲಿದ್ದ ಹಣ್ಣನ್ನು ಕೇಳದೆ ತಿಂದ ತಪ್ಪಿಗೆ ಅವನ ಕೈ ಕತ್ತರಿಸಲಾಯಿತು. ಮತ್ತೆ ಅಣ್ಣನ ತಪೋಬಲದಿಂದ ಕೈ ಬಂದಿತ್ತು. ಅರಸನು ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ವಿಧಿಸುತ್ತಿದ್ದನು. ಸದಾ ಕುದಿಯುವ ಎಣ್ಣೆಯ ಕೊಪ್ಪರಿಗೆ ಇರುತ್ತಿತ್ತು. ಯಾರಾದರೂ ಅವನ ಆಜ್ಞೆಯನ್ನು ತಕ್ಷಣ ಪಾಲಿಸದೆ ಇದ್ದರೆ ಅವರನ್ನು ಆ ಕೊಪ್ಪರಿಗೆಯಲ್ಲಿ ಸುಡುತ್ತಿದ್ದರು.
ಅವನು ಯುದ್ಧಕ್ಕೆ ಹೊರಟಾಗ ರಾಣಿಯರು ಆರತಿಯನ್ಬು ಎತ್ತಿ ಹರಸಿ ಬೀಳ್ಕೊಂಡು ಕೃಷ್ಣನನ್ನು ನೋಡುವಾಸೆಯಿಂದ ಅವರವರ ಮನೆಗಳ ಮಹಡಿಯನ್ನು ಹತ್ತಿದರು. ಎಲ್ಲರಿಗೂ ಕಾತರ.
ಹತ್ತನೆಯ ಸಂಧಿ ಮುಂದುವರೆದ ಭಾಗ
ಪದ್ಯ 26 ,ರಿಂದ 54
ಉದ್ಧಾಲಕಂ ಬಳಿಕ ತನ್ನ ಮಂದಿರದೊಳಿರು ! ತಿದ್ದ ಸಮಯಕೆ ಪಿತೃಶ್ರಾದ್ದ ದಿವಸಂ ಬಂದೊ | ಡೆದ್ದು ಚಂಡಿಯೊಳೆಲಗೆ ನಾಳೆ ಪೈತೃಕಮದಂ ನಾಡಿದಲ್ಲದೆ ಮಾಡೆನು || ಕದ್ದು ತಹೆನಧಮಧಾನ್ಯ ವ್ರೀಹಿ ಶಾಕಮಂ | ಪೊದ್ದಲೀಯೆಂ ಶುದ್ಧ ವಸ್ತುಗಳ ನೊಂದುಮಂ ! ತದ್ದಿನಕೆ ಮರುದಿವಸದೊಳ್ ಪೇಳ್ದುಬಹೆನಪಾತ್ರಂಗೆಂದೊಡಿಂತೆಂದಳು | ೨೬॥
ನಾಳೆ ಮಾಡಿಸುವೆನಾಂ ಪೈತೃಕವನುತ್ತಮದ | ಶಾಲಿಧಾನ್ಯ ವ್ರೀಹಿ ಶಾಕಮಂ ಕೊಂಡು ಬಹೆ | ನಾಲಯವನತಿಶುದ್ಧವಾದ ವಸ್ತುಗಳಿನಲ್ಲದೆ ಕೂಡೆನಳ್ತಿಯಿಂದೆ | |ಹೇಳಿಸುವೆನಂದಿನ ದಿನದ ಮೊದಲ ರಾತ್ರಿಯೆ ವಿ | ತಾಲಗುಣಸಂಪನ್ನ ವೇದಪಾರಂಗತ ಸು | ಶೀಲರಹ ಸತ್ಪಾತ್ರದವನಿಯಮರರ್ಗೆನಲ್ ಚಂಡಿಗವನಿಂತೆಂದನು||೨೭||
ಆದೊಡೆ ಕುತುಪಕಾಲಮಂ ಬಿಡುವೆನರ್ಚನೆಯೊ | ಳಾದರಿಸೆನಾಂ ಬಂದ ವಿಪ್ರರಂ ಪಾಕದ ನ |ವೋದನ ಸುಪಾಯಸ ಗುಡಾಜ್ಯ ಮಧು ತೈಲ ಮೃದುಭಕ್ಷ್ಯ ಭೋಜ್ಯಾದಿಗಳನು|| ಸ್ವಾದುಫಲ ಶರ್ಕರ ವಿನುತ ಶಾಕ ನಿಷ್ಕಲ ಪ। ಯೋದಧಿಗಳಂ ಸಕುತಮಾಗದಂತೆ ಸಂ | ಪಾದಿಸಿ ಪಿತೃಶ್ರಾದ್ಧಮಂ ಮಾಡಿ ವಸ್ತ್ರದಕ್ಷಿಣೆಗಳಂ ಕೊಡೆನೆಂದನು ||೨೮||
ಎಂದೊಡೆ ಕುತುಪಕಾಲಮಂ ಮಾರಲೀಯೆನಾಂ | ಬಂದ ವಿಪ್ರರನಾದರಿಸಿ ಪೂಜೆಗೈಸದಿರೆ | ನಿಂದೊಲ್ಲೆನೆಂದೊಕ್ಕಣಿಸಿದಿನಿತನೆಲ್ಲಮಂ ಸಂಪಾದಿಸದೆ ಮಾಣಿನು || ತಂದಮಲವಸ್ತ್ರ ತಾಂಬೂಲ ವರದಕ್ಷಿಣೆಗೆ | ಳಿಂದ ಸತ್ಕರಿಸಿ ಕಳುಹಿಸದೆ ಬಿಡೆನೆನುತೆ ನಲ ! ವಿಂದೊದಪಿಸಿದಳಖಿಲಸದ್ದ ವ್ಯಮಂ ಬಳಿಕ ಚಂಡಿ ಪಾಕಂಗೈದಳು||೨೯||
ಕಂಡನೀತರನನುದ್ದಾಲಕಂ ಸಂತಸಂ | | ಗೊಂಡು ಮನದೊಳ್ ಪೊರಗೆ ತಾನೊಪ್ಪದವನಾಗಿ| ಚಂಡಿ ಹೇಳಿದವೊಲಾ ಶ್ರಾದ್ಧಮಂ ಮಾಡಿ ಸಂಪ್ರೀತಿಯಿಂ ವಿಪರೀತದ || ತೊಂಡುತೊಳಸಂ ಮರೆದು ಕರ್ಮಾಂಗವಾಗಿರ್ದ | ಪಿಂಡಮಂ ತೆಗೆದು ಮಡುವಿನೊಳೆ ಹಾಯ್ಕೆಂದೊಡು | ದು|ದ್ದಂಡದಿಂದೆತ್ತಿ ಬೀದಿಗೆ ಬಿಸುಡಲಾ ದ್ವಿಜಂ ರೋಷಭೀಷಣನಾದನು||೩೦||
ಎಲೆಗೆ ನಿನ್ನೊಡನೆ ನಾನೇಂ ಹರಿಯಹೋರುವೆಂ | ಛಲಿತನಕಲಿಸಿದೆ ನೀನರೆಯಾಗಿ ಹೋಗೆಂದು | ಸಲೆ ಮುಳಿದು ಶಾಪವಂ ಕೊಟ್ಟು ಕಾರುಣ್ಯದಿಂದಾ ದ್ವಿಜಂ ಕೂಡೆ ತಿಳಿದು || ಕೆಲವುಕಾಲಕೆ ನಿನ್ನೊಳಧ್ವರಹಯಂ ಬಂದು |ನಿಲಲರ್ಜುನಂ ಬಿಡಿಸಿದೊಡೆ ಮೋಕ್ಷಮಹುದೆಂದು | ತೊಲಗಿದಂ ಸಂನ್ಯಾಸಕವನತ್ತಲವನಿಯೊಳ್ ಕಲ್ಲಾದಳಿವಳಿತ್ತಲು||೩೧||
ಮೋಕ್ಷಮಹುದಾಗಿ ಚಂಡಿಗೆ ಶಾಪಮಾಗಳುಪ | ಸಾಕ್ಷಿಗೈತಂದು ನಿಂದುದು ಹಯಂ ನೀಂ ಮುಟ್ಟ | ಲಾಕ್ಷಣದೊಳೆದ್ದು ಪೋದಪುದು ಪೋಗಿನ್ನು ಮುಂದಣ ನೃಪರ್ ಬಲವಂತರು || ರಾಕ್ಷಸಾರಿಯನೆ ಮರೆಯದಿರೆಂದು ಸೌಭರಿ ನಿ। ರೀಕ್ಷಿಸಿ ಕೃಪಾವಲೋಕನದಿಂದ ವರಸಹ | ಸ್ರಾಕ್ಷನ ಕುಮಾರನಂ ಕಳುಹಲಾನತನಾಗಿ ವಿನಯದಿಂ ಬೀಳ್ಕೊಂಡನು ||೩೨||
ತದನಂತರದೊಳರ್ಜುನಂ ಬಂದು ಕುದುರೆಯಂ| ಮುದದಿಂದ ಮುಟ್ಟಲದು ಬಿಟ್ಟು ನಡೆದುದು ಮುಂದ| ಕೊದರಿಕೊಳ್ಳುತೆದ್ದು ನರನಂ ಕಂಡು ಚಂಡಿ ತಪಕಾಗಿ ಕಳುಹಿಸಿಕೊಂಡಳು || ಒದವಿದ ಸಮಸ್ತ ಜನವಾಗ ವಿಸ್ಕಿ ತಮಾದು | ದುದಿರಿತು ಕುಸುಮವೃಷ್ಟಿ ಬಳಿಕ ದಕ್ಷಿಣಕೆ ನಡೆ | ದುದು ವಾಜಿ ಚಂಪಕಾಪುರಕಂದು ಹಿಂದೆ ಬಹ ಪಡೆಸಹಿತ ವಹಿಲದಿಂದ || ೩೩ ||
ಘನಘೋಷದಿಂದ ವಾಹಿನಿಗಳೈತರುತ್ತಿರಲ್ | ವನಧಿ ಮೇರೆಯನತಿಕ್ರಮಿಸಿ ಬಂದಪುದೆಂದು | ಮುನಿದು ಭೂಮಂಡಲಮಿರದೆ ನಭಸ್ಥಳಕೆ ಪೋಪಂತೆ ದೂಳೇಳುತ್ತಿರಲು || ಅನುಸಾಲ್ವ, ಸಾತ್ಯಕಿ ಪ್ರದ್ಯುಮ್ನ ಯೌವನಾ | ಶ್ವನರೇಶ ವೃಷಕೇತು ನೀಲಧ್ವಜರ ಸೈನ್ಯ | ಮನುಪಮಿತವಾಗಿ ನಡೆದುದು ಚಂಪಕಾನಗರಿಗರ್ಜುನನ ಹಯದಕೂಡೆ | ೩೪ ||
ತವೆ ಸರ ಮಂಗಳಾಸ್ಪದಮಾದೊಡಂ ಪರಾ | ಭವಯುಕ್ತವಾಗಿರ್ಪುದೆಂದು ಕೈಲಾಸಾಚ | ಲವನತುಳಲಕ್ಷ್ಮಿನಿಳಯವಾದೊಡಂ ಭಂಗಸಹಿತವಾಗಿರ್ಪುದೆಂದು || ಅವಿರಳಪಯೋನಿಧಿಯನಟ್ಟಹಾಸಂ ಮಾಡು | ವವೊಲಿರ್ದುದಾಪುರಂ ಪ್ರಾಸಾದಕೋಟೆಗಳ | ಧವಳಿಮ ಸುಧಾಕೀರ ರುಚಿಗಳಿಂ ಪೊರೆಗೆ ನೋಡುವ ಜನರ್ಗೇವೇಳ್ವೆನು |೩೫||
ಇದು ಪುರಸ್ತ್ರೀಯ ಮಣಿಕಾಂಚೀವಲಯ ಭೂ ! ಸುದತಿಯ ಕೊರಳ ವಿರಾಜಿಪ ರತ್ನ ಮಾಲಿಕೆಯೊ | ಶ್ರೀದತಪತಿ ಗಿರಿಗಳಂ ಕಡಿವಂದು ತೆಗೆದಿಡುವೆನೆಂದು ತಿರುಪಿದ ಕುಲಶದಾ ।| ಪೊದರುವೆಳಗಿಳೆಗಿಳಿದು ವಜ್ರಮಯವಾಗಿ ನಿಂ । ದುದೊ ವಿಮಲಕೀರ್ತಿಚಂದ್ರಕೆಯಂ ಪರಪುವ ನಗ| ರದ ರಾಜಮಂಡಲದ ಪರಿವೇಷಮೋ ಪೇಳೆನರ್ ಕೋಟೆ ಕಣ್ಣಿ ಸೆದುದು| ೩೬ ||
ಆ ನಗರದರಸು ಹಂಸಧ್ವಜಂ ಕೇಳ್ದನೀ | ಸೇನೆಸಹಿತರ್ಜುನಂ ವರಮಖ ತುರಂಗ ರ ಕ್ಷಾನಿಮಿತ್ತಂ ಬಂದು ಸೀಮೆಯಂ ಪೊಕ್ಕುದಂ ದೂತಮುಖದಿಂದ ಬಳಿಕ || ಧ್ಯಾನಿಸಿದನೊಂದೆರಡುಗಳಿಗೆ ತನ್ನಾ ಪ್ರ | ಧಾನರೆಲ್ಲರನಾಗ ಕರೆಸಿಕೊಂಡವರೊಳ್ ನಿ | ಧಾನಿಸಿ ನುಡಿದನಂದು ಶ್ರದ್ಧಾಳು ಸುಮತಿ ಪ್ರಮತಿಯೆಂಬ ಮಂತ್ರಿಗಳ್ಗೆ |೩೭||
ಈ ಧನಂಜಯನ ತುರಗವನೀಗ ಕಟ್ಟಿದೊಡೆ । ಮಾಧವಂ ತಾನೆ ಮೈದೋರುವನೆಮಗೆ ಕೃಷ್ಣ | ನೀಧರೆಯೊಳಿರುತಿರ್ದವಿನ್ನೆಗಂ ಕಂಡುದಿಲ್ಲಚ್ಯುತನ ಮೂರುತಿಯನು || ಬಾಧಿಸುವುದೀ ದೇಹಮಂ ನರೆತೆರೆಗಳನ್ನು | ಸಾಧಿಸುವುದೇನಸುರರಿಪು ಬಂದು ತನ್ನೊಳವಿ ರೋಧಿಸಿದೊಡಿನಿತರಿಂದಳಿದೊಡೇನುಳಿದೊಡೇನೆಂದನಾ ನೃಪತಿ ನಗುತೆ | ೩೮ ||
ಆ ನರಾಧಿಪತಿ ನಿಶ್ಚೈ ಸಿದಂ ಕದನಮಂ । ಭೂನಾಥ ಕೇಳವನ ಕಟ್ಟಳೆಯನೆಲ್ಲಮಂ | ತಾನಾಳ್ವ ದೇಶದೊಳ್ ತನ್ನ ನಗರದೊಳೇಕಪತ್ನಿ ವ್ರತದೊಳಿರದೊಡೆ || ದಾನವಾರಿಯ ಪೂಜೆಗೈಯ್ಯದೊಡೆ ಸಂತತಂ । ` ದಾನಧರ್ಮಂಗಳಂ ಮಾಡದೊಡೆ ಗತಿಗೆಟ್ಟು ! ಹೀನಜಾತಿಗಳೊಡನೆ ಕೂಡಿದೊಡೆ ಸೈರಿಸಂ ಪರಿವಾರದೊಳ್ ಪ್ರಜೆಯೊಳು | ೩೯||
ಅಂತುಮದರಿಂದೆಲ್ಲರೇಕಪತ್ನಿ ವ್ರತರ | ನಂತಪೂಜಾರತರ್ ಸೌಭಾಗ್ಯಸಂಯುತರ್ | ಸಂತತಮಲಂಕಾರಮಂಡಿತರ್ ನೀತಿಶಾಸ್ತ್ರ ಸ್ಮೃತಿ ವಿಚಾರರತರು ॥ ಕಂತುಶರನಿರ್ಜಿತರ್ ಮದಲೋಭವರ್ಜಿತರ್ | ಸಂತೋಷಭಾಷಿತರ್ ಸದ್ಗುಣವಿಭೂಷಿತರ್ | ಚಿಂತಿತಫಲಾಗತರ್ ಸಕಲಭೋಗಾನ್ವಿತರ್ ಪರಿವಾರದೊಳ್ ಪ್ರಜೆಯೊಳು||೪೦||
ಏಕಪತ್ನಿ ವ್ರತಂ ಪ್ರಾಯತಂ ಕೋಮಲಂ ಮಾಕಾಂತ ಕಿಂಕರನಲಂಕಾರ ಪೂಜ್ಯಂ ಶು | ಭಾಕಾರನಾರೋಗ್ಯಪಟು ಕರಣನಿರ್ಮಲನಕೈತವಂ ಬಲವಂತನು|| ಭೀಕರ ಪರಾಕ್ರಮ ವಿಶಾರದಂ ಸಂಗರವಿ | ವೇಕಿಯೆಂಬಿನಿತುಗುಣಮೊರ್ವನೊಳಿರವನ | ನೇ ಕರೆದು ಮನ್ನಿಸುವನಲ್ಲದರನುಳಿವನಂತೆಲ್ಲರೀತೆರದ ನರರು||೪೧||
ಉಣಲುಡಲ್ ತೊಡಲೀಯ್ದಲಿರಲೆಯ ಲುಂಟಾಗಿ | ತಣಿದಿಹುದಲಂಕಾರಪೂಜ್ಯದಿಂ ವಸ್ತ್ರಭೂ | ಷಣ ಗಂಧ ಮಾಲ್ಯಾನುಲೇಪನಂಗಳ ಪರಿಮಳಂಗಳಿಂ ಸೊಗಸಿರ್ಪುದು|| ಸೆಣಸುಗಳ ಬಿರುದುಗಳ ಪಚ್ಚಿರ್ದ ಮುಡುಹುಗಳ 1 ಹೊಣಕೆಗಳ ತಡಹುಗಳ ಕಲಿತನದ ಕಡುಹುಗಳ | ರಣದವಕದಿಂ ಕುದಿಯುತಿಹುದು ಹಂಸಧ್ವಜನ ಪರಿವಾರಮನುದಿನದೊಳು||೪೩||
ಮಣಿಮಯ ವರೂಥಮೆಪ್ಪತ್ತೊಂದು ಸಾಸಿರಂ | ಗಣನೆಗೆಪ್ಪತ್ತೊಂದುಸಾಸಿರಗಜಂ ತುರಗ ಮೆಣಿಸುವೊಡೆ ಲಕ್ಕಂ ಪದಾತಿ ಸಾಸಿರಮುಳಿಯ ಲಕ್ಷಮೋರ್ವನ ಬಳಿಯೊಳು|| ಗಣಿತಕಿಹುದಿನಿತು ಬಲಮಿನಿತುಬಲದಿಂದ ವೆಂ ! ಟಣಿಸಿರ್ಪ ದಳಪತಿಗಳೆಪ್ಪತ್ತು ಮಂದಿ ಸಂ | ದಣಿಸಿ ಬರುತಿಹುದು ಹಂಸಧ್ವಜ ನೃಪಾಲಕಂ ಪೊರಮಟ್ಟು ನಡೆವೆಡೆಯೊಳು||೪೩||
ಆತಂಗೆ ಧನಬಲಂ ಚಂದ್ರಸೇನಂ ಚಂದ್ರ | ಕೇತು ವರಚಂದ್ರದೇವಂ ವಿಡೂರಥನತಿ | ಖ್ಯಾತನಹ ಧರ್ಮವಾಹಂ ನ್ಯಾಯವರ್ತಿಯೆಂಬಿವರನುಜರೇಳುಮಂದಿ|| ಜಾತರ್ ಸುದರ್ಶನ ಸುಧನ್ವ ಸುಮನಸ್ಸುರಥ ! ರೀತೆರದ ನಾಲ್ವರಿವರೆಲ್ಲರ್ ಸಮರ್ಥರ್ ಮ | ಹಾತಿಬಲರಮಲಧರ್ಮಜ್ಞ ರಪ್ರತಿಮರ್ ಪರಾಕ್ರಮಯುತರ್ ವೀರರು||೪೪||
ವರಶಂಖಲಿಖಿತರೆಂಬವರಣ್ಣ ತಮ್ಮಂದಿ ರಿರಲವರೊಳಾ ಲಿಖಿತನಾಶ್ರಮಕೆ ಶಂಖನೈ | ತರುತೆ ಹೇಳದೆ ಬಿದ್ದ ಪಣ್ಣನಾಸ್ವಾದಿಸಲ್ ಕರೆದಿವಂ ದೋಷಿಯೆಂದು| | ಅರಮನೆಗೆ ತಂದೊಪ್ಪಿಸಲ್ಕಾ ನೃಪಂ ಕರವ | ನರಿಸಸಲ್ಕೆ ಮತ್ತೆ ಲಿಖಿತನ ತಪೋಬಲದಿಂದೆ|ಮರಳಿ ಕೈಯಂ ಪಡೆದನಾ ಶಂಖನವರಿರ್ವರುಂ ಪುರೋಹಿತರವಂಗೆ||೪೫||
ಆ ಶಂಖಲಿಖಿತರೆಂದವೊಲಾತನಿರ್ದಪನಿ | ಕೇಶ ಕೇಳವನದಿನ್ನೊಂದು ಕಟ್ಟಳೆಯಂ ಹು | ತಾಶನಜ್ವಾಲೆಯಿಂ ಕಾಯ್ದುಕ್ಕು ವೆಣ್ಣೆಗೊಪ್ಪರಿಗೆಯೊಳ್ ತಾಂ ಸಮರಕೆ|| ಆಶುವಿಂ ಪೊರಮಡುವ ದುಂದುಭಿಯ ಸನ್ನೆಯ ಮ | ಹಾಶಬ್ದ ಮಂ ಕೇಳ್ದು ಹಿಂದುಳಿದ ಭಟನಂ ಪ್ರ। ವೇಶಮಂ ಮಾಡಿಸುವುದಲ್ಲದೊಡೆ ತನ್ನ ಭಾಷೆಗೆ ಭಂಗಮಪ್ಪುದೆಂದು||೪೬||
ಬಳಿಕ ನಿಬರೆಲ್ಲರಂ ಕರೆಸಿ ಹಂಸಧ್ವಜಂ | ಸೆಲವಿತ್ತು ಫಲುಗುಣನ ತುರಗಮಂ ಪಿಡಿತಂದು | ಪೊಳಲೊಳಗೆ ಕಟ್ಟಬೇಕೆಂದು ಸಾರಿಸಿ ಡಂಗುರಂಬೊಯ್ಸಿ ಪೊರಮಡುತಿರೆ|| ಮೊಳಗಿದುವು ಮೇಲೆ ನಿಸ್ಸಾಳಂಗಳಾಹವಕೆ | ದಳದುಳಿಸಿತಾಗ ಸುಭಟಪ್ರತತಿ ಜೋಡಿಸಿತ | ಖಿಳ ಕರಿ ರಥಾಶ್ವಕುಲಮೊದಗಿತು ಪದಾತಿ ಸನ್ನಾಹದಿಂದಾ ಕ್ಷಣದೊಳು||೪೭||
ಸುರಪಸುತನೆಂಬ ವೈರಕೆ ಧನಂಜಯನ ಮೇ | ಲಿರದೆ ಮುಳಿದೆದ್ದು ದೊ ಕುಲಾದ್ರಿಗಳ ಬಳಗಮೆನೆ | ಕರಿಘಟೆಗಳೈದಿದುವು ತನ್ನ ಮಗನಂ ಕೊಂದನೆಂದು ನರನೊಳ್ ಕನಲ್ದು|| ತರಣಿ ತಾಳ್ದನೋ ನಿಜಾಕಾರಕೋಟಿಗಳನೆನೆ | ತೆರಳಿದುವು ಮಣಿಮಯವರೂಥಂಗಳೀದುದೋ | ಧರೆ ಮಂದಿ ಕುದುರೆಗಳನೆನೆ ನಡೆದುದಾಹವಕೆ ಪರಿವಾರಮಾನೃಪತಿಯ||೪೮||
ಕಂಸಾರಿ ಬಾರದೆ ನರಂಗೆ ಸೋಲ್ಪವನಲ್ಲ | ಹಂಸಧ್ವಜಂ ಧುರದೊಳಿನ್ನು ಕೃಷ್ಣನ ದರ್ಶ | ನಂ ಸುಲಭಮೆಲ್ಲರ್ಗೆ ಸಂದೇಹವಿಲ್ಲ ದೇಹಮನಾಂತು ಜನಿಯಿಸಿರ್ದ || ಸಂಸಾರಕಿದು ಸಫಲಮಹುದೆಂದು ಪರಿತೋಷ | ದಿಂ ಸಮರಕೈ ದುತಿರ್ದುದು ಸಕಲಪಟುಭಟರ | ದಂ ಸತಿಯರೀಕ್ಷಿಸಿದರುಪ್ಪರಿಗೆಗಳ ಮೇಲಿನಿಯರನಾದರಿಸಿ ಕಳುಹಿ||೪೯||
ಅಳಿಲಾದ ನಿರಿಯ ಬಳಲಿದ ಮುಡಿಯ ಸೊಪ್ಪಾದ ! ತಿಳಕದ ಕೆದರ್ದ ಕಾಡಿಗೆಯ ಬೆಮರಿದ ಮೈಯ । ಪುಳಕದವಯವದ ಕೆಂಬಾಸುಳೇರುಗಳ ಪರೆದನುಲೇಪನದ ತೊಡಕಿದ || ಗಳದ ಹಾರದ ಕೆಂಪುಗದಡಿದಧರದ ನುಡಿಯ | ಕಳವಳದ ಕಡೆಗಣ್ಣ ಕೊಂಬೊಗರ ಕದಪುಗಳ | ಕಲೆಯ ಕೋಮಲೆಯರಿನಿಯರ್ಕಳಂ ಕಳಿಸಿ ನೆಲೆವಾಡವನಡರ್ದರಂದು | ೫೦||
ಇನ್ನು ಮರ್ಜುನಕೃಷ್ಣರೊಡನೆ ಸಂಗರಕೆ ಸಂ| ಪನ್ನ ಪಟುಭಟರೊದಗಿ ಗಾಯವಡೆಯದಮುನ್ನ | ನಿನ್ನ ಧರಕೆಂತಾದುದಬಲೆ ಕೃಷ ಕ್ಷತಂ ಪೇಳೆಂದಸಿಯಳೊರ್ವಳು || ಕನ್ನೆ ಮತ್ತೋರ್ವಳಂ ಕೇಳ್ಕೊಡವಳೆಂದಳೆಲೆ ಪನ್ನ ಗಸುವೇಳ್ ಕೃಷ್ಣಾಂಕವಿಲ್ಲದವದನ | ಮುನ್ನಿಸಲ್ ಬಿಲಕೆ ಸರಿಯೆಂಬುದಂ ನೀನರಿಯದಕಟ ಮರುಳಾದೆಯೆಂದು || ೫೧||
ಒದಗದಿನ್ನುಂ ಮುರಾರಿಯ ಸಮರಮರ್ಜುನನ | ಕದನಂ ಪ್ರವರ್ತಿಸದು ಪ್ರದ್ಯಕ್ಮ್ನನಾಹವಂ| ಮೊದಲೆ ತಲೆದೋರಿತಿಂದೂರೊಳೆಂದೊರ್ವಳೇ ಪೊಸವಾರ್ತೆಯಂ ಪೇಳಲು|| ಚದುರೆ ಮತ್ತೊರ್ವಳಿದು ಜಗದೊಳಚ್ಚರಿಯೆ ಹರೆ | ಯದರ ಕೈ ಮುಂಚುವುದು ವರಸಂಗರಂಜಿತವ | ಹುದು ವರ್ತಮಾನದೊಳ್ ಜನಜನಿತವಿಲ್ಲಿ ನೂತನದ ಮಾತೇನೆಂದಳು || ೫೨|
ಇಂದುಮಂಡಲದ ಸಿರಿಯಂ ಸೂರೆಯಾಡಿದರ್ | ಬಂದು ವಿಷಯದೊಳೂರುಗಳನಿರಿದರೊತ್ತಾಯ | ದಿಂದ ದುರ್ಗಂಗಳಂ ಕೈಕೊಂಡರೊದಗಿದರ್ ಸೆಳೆಸೂರೆಗಾತುರದೊಳು || ಮುಂದುವರಿದಂಕವೇರಿದರೀಗ ಪರಸುಭಟ | ರೆಂದು ಪೊಸವಾರ್ತೆಯಂ ಪ್ರೌಡೆಯೋರ್ವಳ ಪೇಳ್ದೊ | ಡಂದು ಬಾಲೆಯರಾಕೆಯಂ ಜರೆದರರಸನಿಲ್ಲವೆ ಗೆಲ್ಲೊಡೆಂದು ನಗುತೆ||೫೩||
ವಿಮಲ ದಧಿ ಲಾಜ ದೂರ್ವಾಕ್ಷತೆಗಳಂ ತಳಿದು | ಕ್ರಮದೊಳಾರತಿಗಳಂ ತಂದೆ ಯಕ್ಷ ಕ | ರ್ಧಮ ವಿಲೇಪನ ಕುಸುಮ ತಾಂಬೂಲಮಂ ಕೊಟ್ಟು ಪರಸಿ ಸೇಸೆಗಳನಿಟ್ಟು|| ರಮಣರಂ ತೆಗೆದು ಬಿಗಿಯಪ್ಪಿ ಶುಭವಾಕ್ಯದಿಂ । ಸಮರಭೂಮಿಗೆ ಕಳುಹಿ ಸತಿಯರ್ ಸುರತ್ನಕು | ಟ್ಟಿಮದ ಹರ್ಮ್ಯಂಗಳ ನಡರ್ದರ್ ದಿವಿಜಪುರದ ಲಕ್ಷ್ಮೀತನಂ ನೋಡಲು ||೫೪||
ಜೈಮಿನಿ ಭಾರತ 22
ಹನ್ನೊಂದನೆಯ ಸಂಧಿ
ಪದ್ಯ 1 ರಿಂದ 41
ಸುಧನ್ವನ ಪ್ರಸಂಗ
ನಿರೂಪಣೆ: ಸುಬ್ಬುಲಕ್ಷ್ಮಿ Lrphks Kolar
ಸಂಕ್ಷಿಪ್ತ ರೂಪ
ಯುದ್ಧಕ್ಕೆ ಹೊರಟ ಸುಧನ್ವನು ತಾಯಿಗೆ ನಮಸ್ಕರಿಸುತ್ತಾನೆ. ಅವಳು ಆ ಹರಿಯನ್ನು ಅಂದರೆ ಕೃಷ್ಣನನ್ನು ಹಿಡಿಯುವ ಬುದ್ಧಿ ಮಾಡು ಎನ್ನುವಳು. ಅರ್ಜುನನನ್ನು ನೋಯಿಸಿದರೆ ಹರಿಯು ಬಾರದಿಹನೆ? ಎನ್ನುವನು. ಅವನ ಸೋದರಿಯು ಬಂದು ಆರತಿಯೆತ್ತಿ ನೀನು ಗೆದ್ದುಬಾ. ಇಲ್ಲದಿದ್ದರೆ ನನ್ನ ಮಾವನ ಮನೆಯಲ್ಲಿ ನನ್ನ ಮಾನ ಹೋಗುತ್ತದೆ ಎನ್ನುವಳು. ಅಲ್ಲಿಂದ ಹೊರಟು ಹೆಂಡತಿ ಪ್ರಭಾವತಿಯೆಡೆಗೆ ಬಂದನು.
ಋತುಸ್ನಾತಳಾಗಿದ್ದ ಅವಳು ಚಂದ್ರಮಂಡಲದಂತೆ ಅವಳ ಮುಖವು ಕಂಗೊಳಿಸುತ್ತಿತ್ತು. ತಿಲಕ ಹೊಳೆಯುತ್ತಿತ್ತು. ಬೆಡಗಿನ ನಡೆಯ, ಬಡನಡುವಿನ, ಸೊಂಪಾದ ತೊಡೆಗಳ, ಕುಂಭ ಕುಚಗಳ ಉದ್ದ ಕೂದಲಿನ ಅಲಂಕಾರಗಳಿಂದ ಶೋಭಿಸುತ್ತಿದ್ದ ರಾಣಿ ಅವನೆದುರಿಗೆ ಬಂದಳು.
ಅವಳಿತ್ತ ಕುಸುಮಗಳನ್ನು ಕೊಂಡು ಕಾಳಗಕೆ ಹೊರಡುವೆನೆನ್ನಲು ಅವಳು ತಡೆದಳು. ಕೃಷ್ಣನಿಗೆ ಎದುರಾಗಿ ಕಾದಿದಲ್ಲಿ ಮುಕ್ತಿಯಲ್ಲದೆ ಬೇರೊಂದಿಲ್ಲ. ಹಾಗಾದರೆ ಸಂತಾನವಿಲ್ಲದೇ ಹೋಗುವುದು. ಅದ್ದರಿಂದ ನನಗೆ ಸಂತಾನಭಿಕ್ಷೆಯನ್ನು ಕರುಣಿಸಿ ಹೋಗು ಎಂದಳು. ಇದು ಸೂಕ್ತಕಾಲವಾಗಿದೆ ಎನ್ನಲು ತಂದೆಯು ಕಾಳಗಕ್ಕೆ ಕರೆದಾಗ ತಡಮಾಡಿದರೆ ಕಷ್ಡವೆಂದು ಹೇಳಿದರೂ ಅವಳು ಒಪ್ಪಲಿಲ್ಲ.ಕಾತರದಿಂದ ಮೇಲೆ ಬಿದ್ದು ಆಲಂಗಿಸಿ ಚುಂಬಿಸಿ ತನ್ನ ವಕ್ಷಗಳನ್ನು ಅವನೆದೆಗೆ ಒತ್ತಿ ಓಲೈಸಿ ಮಣಿಮಂಚಕ್ಕೆ ಕರೆದೊಯ್ದಳು. ವಿವಿಧ ಬಗೆಯ ಶೃಂಗಾರ ಚೇಷ್ಟೆಗಳಿಂದ ಅವನ ಮನ ಸೆಳೆದಳು. ಮೊದಲಿಗೆ ಅಳುಕಿದರೂ ಅವನು ನಂತರ ಅವಳಿಗೆ ಪೂರ್ಣ ಸುಖ ಕೊಡುವುದರಲ್ಲಿ ನಿರತನಾದನು. ಅವಳ ಅಂಗಸಂಗದಲ್ಲಿ, ಮದನನ ಬಾಣಕ್ಕೆ ಸೋತನು. ಇಬ್ಬರೂ ಇನ್ನಿಲ್ಲದಂತೆ ರತಿಕ್ರೀಡೆಯಲ್ಲಿ ತೊಡಗಿದರು.ಇದರಲ್ಲಿ ತಪ್ಪಿಲ್ಲವೆಂದೂ ಅವನು ನಿಶ್ಚಯಿಸಿದನು.
ಒಲವಿನ ಪಿಸುಮಾತುಗಳಿಂದ, ನಾನಾಬಗೆಯ ರತಿಕ್ರೀಡೆಗಳಿಂದ, ಮುತ್ತುಗಳಿಂದ ಪರಸ್ಪರ ರಂಜಿಸಿದರು. ಅವಳು ತೃಪ್ತಿ ಹೊಂದಿ ಬೆವರಿ ಬಸವಳಿದು ಸೊಪ್ಪಾದಳು.
ಇತ್ತ ಯುದ್ಧಕ್ಕೆ ಹೊರಟ ಹಂಸಧ್ವಜ ಮಗನನ್ನು ಕಾಣದೆ ಸೇವಕರನ್ನು ಅಟ್ಟಲು ಅವರು ಸುಧನ್ವನನ್ನು ಕಟ್ಟಿ ತಂದರು ಅವನನ್ನು ನೋಡಿ ತಂದೆಯ ಕೋಪ ಇನ್ನೂ ಹೆಚ್ಚಾಯಿತು. ತಡವಾಗಲು ಕಾರಣ ಕೇಳಿದನು ಸತಿಯು ಸಂತತಿಯನ್ನು ಬಯಸಿದುದರಿಂದ ತಾನು ನಿಲ್ಲಬೇಕಾಯಿತೆಂದು ತಿಳಿಸಿದನು. ಆಗ ತನ್ನ ಪುರೋಹಿತರುಗಳಾದ ಶಂಖ ಲಿಖಿತರನ್ನು ಕರೆಸಿ ಇದಕ್ಕೆ ದಂಡನೆ ಏನೆನ್ನಲು ಅವರು ಎಲ್ಲರಿಗೂ ಒಂದೇ ಶಿಕ್ಷೆ. ರಾಜ ತನ್ನ ಮಗನನ್ನು ರಕ್ಷಿಸಿದನು ಎಂದು ಜನ ಆಡಿಕೊಳ್ಳುವುದಿಲ್ಲವೆ ಎನ್ನಲು ಸುಧನ್ವನನ್ನು ಕುದಿಯುತ್ತಿದ್ದ ಎಣ್ಣೆಯ ಕೊಪ್ಪರಿಗೆಗೆ ತಳ್ಳಲು ಆಜ್ಞೆ ಮಾಡಿದನು. ಅದನ್ನು ನಡೆಸಲು ಅಂಜಿದ ಮಂತ್ರಿಗೆ ಧೈರ್ಯ ಹೇಳಿ ತಾನು ವಿಷ್ಣುವಿನ ಧ್ಯಾನದಲ್ಲಿ ತೊಡಗಿದನು. ಅವನನ್ನು ಎತ್ತಿ ಕೊಪ್ಪರಿಗೆಗೆ ಎಸೆದರು. ಜನತೆ ಭೋರೆಂದು ಗೋಳಾಡಿತು. ಮರುಗಿತು.ಪುರೋಹಿತರನ್ನು ಶಪಿಸಿತು.
ಸುಧನ್ವನು ಹರಿಯನ್ನು ಪ್ರಾರ್ಥಿಸಿದನು. ಹಿಂದೆ ಪ್ರಹ್ಲಾದನನ್ಬು ಪೊರೆದೆ, ದ್ರೌಪದಿಯನ್ನು ರಕ್ಷಿಸಿದೆ, ನಿನ್ನ ಭಕ್ತನನ್ನು ನೀನೇ ನೋಡಿಕೋ ಎಂದು ನಿರ್ಭಯದಲ್ಲಿದ್ದನು.ಒಂದೇ ಪದ್ಯದಲ್ಲಿ ಹರಿಯ ಇಪ್ಪತ್ತಕ್ಕೂ ಹೆಚ್ಚು ಹೆಸರುಗಳನ್ನು ಬಳಸಿರುವುದು ಕವಿಯ ಕುಶಲತೆಗೆ ಸಾಕ್ಷಿ. ( ಪದ್ಯ 36 )
ಆಶ್ಚರ್ಯವೆಂದರೆ ಅವನನ್ನು ಆ ಕುದಿಯುವ ಎಣ್ಣೆಯು ಸುಡಲಿಲ್ಲ. ಬದಲಿಗೆ ಶೀತಲಸ್ಪರ್ಶ ಆಯಿತು. ಎಲ್ಲರಿಗೂ ಅಚ್ಚರಿ.ಬೆರಗಾದರು ಅವನು ಧರಿಸಿದ್ದ ಹೂಗಳೂ ಬಾಡಲಿಲ್ಲ. ಇದನ್ನು ಕಂಡ ಲಿಖಿತನು ಎಳನೀರುಗಳನ್ನು ಸುರಿಸಿದರೂ ಎಣ್ಣೆಯು ಸಿಡಿಯಲಿಲ್ಲ. ಆಗ ಅವನು ಹರಿಭಕ್ತಿಯನ್ನು ಅರಿತು ತಾನೂ ಆ ಕೊಪ್ಪರಿಗೆಗೆ ಹಾರಿದನು. ಪ್ರಾಯಶ್ಚಿತ್ತಕ್ಕಾಗಿ. ಆದರೆ ಅವನಿಗೂ ಏನೂ ಆಗಲಿಲ್ಲ. ರಾಜನು ವಿಸ್ಮಿತನಾಗಿ ಇವರಿಬ್ಬರನ್ನೂ ಕೆಳಗೆ ತರಿಸಿ ಪ್ರೀತಿ ತೋರಿಸಿದನು. ಪನ್ನೀರಿನಲ್ಲಿ ಮಿಂದು ಪೀತಾಂಬರವನ್ನು ಧರಿಸಿ ಅಲಂಕೃತನಾಗಿ ತನ್ನನ್ನು ರಕ್ಷಿಸಿದ ಹರಿಯನ್ನು ಕೊಂಡಾಡುತ್ತ ಸುಧನ್ವ ಮುಂದಿನ ಕಾಳಗಕ್ಕೆ ಸಿದ್ಧನಾದನು.
ಹನ್ನೊಂದನೆಯ ಸಂಧಿ
ಪದ್ಯ 1 ರಿಂದ41
ಸೂಚನೆ | ಹಿಂದುಳಿದನಾಹವಕ್ಕೆಂದು ಹಂಸಧ್ವಜಂ | ನಂದನನನೆಣ್ಣೆ ಗಾಯ್ದಿರ್ದ ಕೊಪ್ಪರಿಗೆಯೊಳ್ 1 ತಂದು ಕೆಡಹಿಸಲಚ್ಯುತಧ್ಯಾನದಿಂ ತಂಪುವಡೆದನವನಚ್ಚರಿಯೆನೆ?
ಭೂಹಿತಚರಿತ್ತ ಕೇಳುಳಿಯದೆ ಸಮಸ್ತಭಟ | ರಾಹವಕೆ ಪೊರಮಟ್ಟ ಬಳಿಕ ಹಂಸಧ್ವಜನ | ಮೋಹದ ಕುಮಾರಂ ಸುಧನ್ವನಾಯತವಾಗಿ ಬಂದು ನಿಜಮಾತೆಯಡಿಗೆ || ಬಾಹುಯುಗಮಂ ನೀಡಿ ಸಾಷ್ಟಾಂಗಮೆರಗೆ ಸಿತ | ವಾಹನನ ಹರಿಯಂ ಪಿಡಿದು ಕಟ್ಟಿ ಕದನದೊಳ್ | ಸಾಹಸಂಮಾಳ್ಪೆನೆನ್ನಂ ಪರಸಿ ಕಳುಹೆಂದು ಕೈಮುಗಿದೊಡೆಂತಿಂದಳು ||೧||
ಕಂದ ಕೇಳ್ ಫಲುಗುಣಂ ಪಾಲಿಪಂ ನಾಲ್ಕಡಿಯ । ದೊಂದು ಹರಿಯಂ ನಿನಗದರ ಚಿಂತೆ ಬೇಡ ಸಾ | ನಂದದಿಂ ಪಾರ್ಥನಂ ರಕ್ಷಿಸುವ ಹರಿಯನ್ನೇ ಹಿಡಿವ ಬುದ್ದಿಯನೆ ಮಾಡು || ಹಿಂದೆ ನಾರದಮುನಿಯ ಮುಖದಿಂದೆ ಕೇಳ್ದೆಂ ಮು | ಕುಂದನ ವಿಶಾಲಲೀಲಾಮಾಲೆಯಂ ಕೃಷ್ಣ | ನಿಂದು ಮೈದೋರಿದೊಡೆ ಕಣ್ಣಾರೆ ಕಾಣಬಹುದೆಂದೊಡವನಿಂತೆಂದನು||೨||
ತಾಯೆ ಚಿತ್ತೈಸಾದೊಡೀ ಭಾಷೆಯಂ ಕೃಷ್ಣ | ರಾಯನಂ ತನ್ನೆಡೆಗೆ ಬರಿಸಿಕೊಳ್ಪುದಕೊಂದು | ಪಾಯಮಂ ಬಲ್ಲೆನಾಂ ಕಯ್ಯಂ ಪಿಡಿದೊಡೆ ಮೈ ತಾನೆ ಬಹುದಿಂದ್ರಜನನು || ನೋಯಿಸಿದೊಡಗಧರಂ ಬಾರದಿರನಾನತರ | ಪಾಯಮಂ ಸೈರಿಸಂ ಬಳಿಕ ತೋರುವೆನಂಬು | ಜಾಯತಾಕ್ಷನ ಮುಂದೆ ತನ್ನ ಪೌರುಷವನೆನಲಾಕೆ ಮಗುಳಿಂತೆಂದಳು
||೩||
ಕರುವನೆಳಗಂದಿ ತಾನರಸಿಕೊಂಡೈತರ್ಪ | ತೆರದಿಂದೆ ಬಂದಪಂ ಮುರಹರಂ ಪಾರ್ಥನೆಡೆ | ಗರಿವೆನಿದು ನಿಶ್ಚಯಂ ಮಗನೆ ನೀನಾ ಹರಿಗೆ ವಿಮುಖನಾದೊಡೆ ತನ್ನನು || ಜರಿವರಿಕ್ಕೆಲದ ಬಂಧುಗಳಿನ್ನು ಸಮರದೊಳ್ | ನೆರೆ ಕೃಷ್ಣನಂ ಗೆಲ್ವರುಂಟೆ ಸಾಕೆನ್ನೊಡಲ | ಮರುಕಮಂ ಬಿಟ್ಟೆನವನಂ ಕಂಡ ಬಳಿಕ ಹಿಮ್ಮೆಟ್ಟದಿರ್ ಪೋಗೆಂದಳು||೪||
ಎಂದೊಡೆಲೆ ತಾಯೆ ಕೇಳ್ ಚ ಕ್ರಿಗೆ ವಿಮುಖನಾಗಿ | ಬಂದೆನಾದೊಡೆ ನಿನ್ನ ಗರ್ಭದಿಂದುದಯಿಸಿದ | ನಂದನನೆ ಹಂಸಧ್ವಜನ ಕುಮಾರನೆ ಮೇಣು ಹರಿಕಿಂಕರನೆ ವೀರನೆ || ಕೊಂದಂ ಪಾರ್ಥನ ಪತಾಕಿನಿಯನವನದಟ | ನಂದಗೆಡಿಸುವೆನೆನ್ನ ವಿಕ್ರಮವನಚ್ಯುತನ | ಮುಂದೆ ತೋರಿಸುವೆನಿನಿತರಮೇಲೆ ಸೋಲುಗೆಲುವುದು ಪುಣ್ಯವಶಮೆಂದನು | ೫ ||
ಅನಿತರೊಳ್ ಕುವಲೆಯೆಂಬುವಳೋರ್ವಳಾ ಸುಧ | ನ ್ವ ಸಹೋದರಿ ತಂದಳಾರತಿಯನನುಜ ಕೇ | ಳನುವರದೊಳಿಂದು ಶೌರಿಗೆ ವಿಮುಖನಾಗಿ ನೀಂ ಬಂದೆಯಾದೊಡೆ ಮಾವನ || ಮನೆಯೊಳಾಂ ತಲೆಯೆತ್ತಿ ನಡೆವೆನೆಂತದರಿಂದ | ವನಜಾಕ್ಷನಂ ಮೆಚ್ಚಿ ಸಾಹವದೊಳೆಂದು ಚಂ | ದನದ ನು ಣ್ಪಿಟ್ಟು ಕಪ್ಪು ರವೀಳೆಯಂಗೊಟ್ಟು ಕಳುಹಿದಳ್ ಸೇಸೆದಳೆದು||೬||
ಅರಸ ಕೇಳಾ ಸುಧನ್ವಂ ಬಳಿಕ ಜನನಿಸೋ | ದರಿಯರಂ ಬೀಳ್ಕೊಂಡು ಪೊರಮಟ್ಟು ತನ್ನ ಮಂ | ದಿರದ ಪೊರೆಗೈ ತರ ಲ್ಕಿದಿರಾಗಿ ಪೊಂದಟ್ಟೆಯೊಳ್ ಸಂಪಗೆಯ ಪೂವನು || ಸರಸ ಪರಿಮಳಗಂಧ ಕರ್ಪೂರವೀಟಿಕೆಯ | ನಿರಿಸಿಕೊಂಡೊಲವಿಂದ ಬಂದಳಂಗಜನ ಜಯ | ಸಿರಿ ತಾನೆನಲ್ ಪ್ರಭಾವತಿಯೆನಿಪವನರಾಣಿ ಸುಶ್ರೇಣಿ ಸರ್ಪವೇಣಿ||೭||
ಚಂದ್ರಮಂಡಲ ಸದೃಶ ವದನದೆಳನಗೆಯ ನವ | ಚಂದ್ರಿಕೆಯೆನಲ್ ಮೇಲುದಿನ ದುಕೂಲಂ ಮೆರೆಯೆ | ಚಂದ್ರತಿಲಕದ ರಾಗಮುಂ ಚಿತ್ರದನುರಾಗಮಂ ಸೂಚಿಪಂತೆ ಸೊಗಸೆ || ಇಂದ್ರನೀಲದ ಮಣಿ ಮಿರುಗುವ ಲಲಿತಕಾಂತಿ | ಸಾಂದ್ರಮಾದವೊಲೆಸೆವಳಕಪಾಶದಿಂದ ನಯ | ನೇಂದ್ರಿಯವನುರೆ ಕಟ್ಟಿ ಕೆಡಪದಿರಳೆಂಬಿನಂ ರಂಜಿಸಿದಳಾ ಮೃಗಾಕ್ಷಿ||೮||
ಸ್ಪುರಿಸುವೊಳ್} ದೊಡೆಯ ಬೆಡಗಿನ ನಡೆಯ ನಿರಿಯ ಸಿಂ | ಗರದುಡೆಯ ತೆಳ್ವಾದಸಿಯ ಪೊಡೆಯ ಚೆಲ್ವುದಳೆ | ದುರದೆಡೆಯ ನಿಂಬುಗೊಂಡಿಟ್ಟೆಡೆಯ ಬಲ್ಮೊಲೆಯ ಪೊಳೆವ ಕಲರ ಕಡೆಯ| | ತ್ವರಿಪ ಭುಜವಲ್ಲರಿಯ ತೊಡವುಗಳ ಮೈಸಿರಿಯ | ಬಿರಿಮುಗುಳ ಕಬರಿಯ ಕಲೆಗಳಿಡಿದ ಸೌಂದರಿಯ | 'ದರಸಿ ನಿಜಪತಿಯ ಮುಂದಚ್ಚರಿಯ ಬಗೆಗೊಂಡಳಂದು ಬೇರೊಂದು ಪರಿಯ ॥೯||
ಮುಡಿಯ ಪೊಸಮಲ್ಲಿಗೆಯ ಸೂಸುವೆಳನಗೆಯ ಸವಿ | ನುಡಿಯ ಬಾಯ್ದೆರೆಯ ಹೊಳೆಹೊಳೆವ ದಶನದ ಮಿಸುಪ | ಕಡೆಗಣ್ಣ ತೊಳಗುವ ನಖಾವಳಿಯ ಥಳಥಳಿಪ ಕಂಠಮಾಲೆಯ ಮುತ್ತಿನ || ತೊಡವುಗಳ ಘನಸಾರದನುಲೇಪನದ ಸಣ್ಣ | ಮಡಿದುಕೂಲದ ಬೆಳ್ಳಿಗರ್ ಕೋಮಲಾಂಗದೊಳ್ | ಬಿಡದೆ ಪಸರಿಸೆ ಚಂದ್ರಕಾಂತದಿಂ ನಿರ್ಮಿಸಿದ ಪುತ್ತಳಿವೊಲವಳೆಸೆದಳು || ೧೦ |
ಕರಯುಗದೊಳಾಂತ ಪೊಂದಟ್ಟೆಯನದರ ಮೇಲೆ | ಪರೆಪಿರ್ದ ಸಂಪಗೆಯ ಪೂಗಳಂ ತನ್ನ ಮೆ | ಯೊರಗೆ ಸರಿಯಾದಪುವೆ ನೋಡೆಂದು ತೋರ್ಪಂತೆ ಕೊಂಡುಬಂದಿದಿರೆ ನಿಂದ ತರಳೆಯಿಂ ಕಡೆಗಳೊಯ್ಯನೀಕ್ಷಿಸಿ ನಗುತೆ | ಸರಸ ಪರಿಮಳ ನವ್ಯ ಕುಸುಮಂಗಳಂ ಕೊಂಡು | ಭರದಿಂದೆ ಕೊಳುಗುಳಕೆ ಪೊರಮಡುವ ಗಮನದಿಂ ಕಾಂತೆಗವನಿಂತೆಂದನು ||೧೧|l
ಕಾಂತೆ ಕೇಳಿಂದು ಸಮರದೊಳರ್ಜುನಂಗೆ ಮಾ | ರಾಂತವನ ಬಿಂಕಮಂ ಮುರಿವೆನಾ ಹರಿಬಕಸು | ರಾಂತಕಂ ಬಂದೊಡಾತನ ಮುಂದೆ ತೋರಿಸುವೆನೆನ್ನ ಭುಜವಿಕ್ರಮನು || ನಾಂ ತಳೆವೆನಾರ್ಪಿಂದೆ ವಿಜಯಮಂ ಮಾರ್ದೊಡೆ ಭ | ವಾಂತರವನ್ನೋದಿ ಸನ್ಮುಕ್ತಿಯಂ ಪಡೆದಪಂ | ನೀಂ ತಳಮಳಿಸದಿರೆಂದಿನಿಯಳಂ ಸಂತೈಸಿ ಪೊರಮಡಲ್ ತಡೆದೆಂದಳು || ೧೨||
ಯುಕ್ತ ಮಲ್ಲದು ರಮಣ ನಿನಗೆ ಕೇಳ್ ಕಾದುವಾ | ಸಕ್ತಿಯಿಂ ಚಕ್ರಿಗಭಿಮುಖನಾದ ಬಳಿಕಲ್ಲಿ | ಮುಕ್ತಿಯಲ್ಲದೆ ಬೇರೆ ಜಯಮುಂಟೆ ಜನಿಸದು ವಿವೇಕಸಂತತಿ ನಿನ್ನೊಳು || ವ್ಯಕ್ತದಿಂ ತನಗೊಂದಪತ್ಯಮುಲದಯಿಸದೊಡೆ ವಿ | ರಕ್ತಿಯಿಂ ಕೈವಲ್ಯವಾದಪುದೆ ಸಮರಕು | ದ್ಯುಕ್ತನಪ್ಪಾ ತಂಗೆ ಸಂತಾನವಿಲ್ಲದಿರಲಪ್ಪುದೇ ಹೇಳೆಂದಳು||೧೩||
ಅದರಿಂದಮಾತ್ಮ ಜವಿವೇಕವಿಲ್ಲದೊಡೆ ನನ | ಗಿದುವೆ ಜಲದೋದಯದ ಋತುಸಮಯವಿಾ ಪದದೊ | ಳುದುಭವಿಸುವುದು ನಿನ್ನ ಭೂಮಿಯೊಳ್ ಬೀಜಮಂ ಬಿತ್ತಿದೊಡೆ ಬೆಳೆ ಬಾಳ್ಕೆಗೆ || ಕದನಕೈ ದುವವೇಳೆಯಲ್ಲೆಲವಂ ಮುಂದೆ | ಬೆದೆಗಾಲಮುಂಟೆಂದೊಡವಳೆಣಿಸಿ ಮಳೆಗಳಂ | ತುದಿವಿಶಾಖೆಗೆ ಬಂದುದಿನ್ನು ಮೇಲಂಕುರಿಸಲರಿಯದೆನಲಿಂತೆಂದನು||೧೪||
ರಮಣಿ ನೀನೆಂಬುದನುನಯಮಪ್ಪುದಾದೊಡಂ | ಸಮಯಮಲ್ಲಿದು ಮೊಳಗುತಿದೆ ಭೇರಿ ಪೊರಮಟ್ಟು | ಸಮರಕಯ್ಯಂ ಪೋದನುಳಿದೆನಾದೊಡೆ ತಾತನಾಜ್ಞೆಗೊಳಗಾಗದಿರೆನು || ಕ್ರಮವನರಿಯದಳೆ ನೀನೆನಗೆ ಸೈರಿಸಲಳವೆ | ಗಮನಕನುಕೂಲೆಯಾಗೆನುತ ಗಲ್ಲಂಬಿಡಿದು ! ಕಮಲಾಕ್ಷಿಯಂ ಮುದ್ದು ಗೈದು ಬೀಳ್ಕೊಳ್ಳಿನಂ ಕಾತರಿಸಿ ಮೇಲ್ವಾಯ್ದಳು ||೧೫ ||
ಅಂಗವಿಲ್ಲದನ ಸಮರಂಗಮಂ ಪುಗಲಂಜಿ | ತುಂಗವಿಕ್ರಮವಿಜಯಸಂಗರಕೆಳಸುವೆನೆಂ | ಬಂಗವಣಿಯೆಂತುಂಟೆಂದಂಗನೆ ಬಲಾತ್ಕಾರದಿಂ ಗುರುಕುಚದ್ವಯವನು || ನಂಗಡಿಸುವಂತಾರ್ಪಿನಿಂ ಗಾಢತರದೊಳಾ | ಲಿಂಗನಂಗೈದು ಕುಡಿಗಂಗಳಿಂದವನ ಮೊಗ | ದಿಂಗಿತವನಾರೈವ ಶೃಂಗಾರಚೇಷ್ಟೆಯ ಬೆಡಂಗನದನೇವೇಳ್ವೆನು !|೧೬||
ಮಿಡಿದೊದೊಡೆವಂತಮೃತರಸದಿಂದೆ ಮೆರೆವ ಪೊಂ | ಗೊಡಮೊಲೆಯನವನ ವಕ್ಷಸ್ಥಳದೊಳಿಟ್ಟೊ ತ್ತಿ। ದೊಡೆ ಹಿಸಿದೊಳಗಣ ತನುಸುಧೆಯೊಸರ್ದು ತೊಟ್ಟಿಡುವ ಬಿಂದುಗಳ ಸಾಲಿದೆನಲು || ಕಡಿಕಿ ಪರಿದುಗುವ ಹಾರದ ಮುತ್ತುಗಳ ಮಣಿಗ | ಳೆಡೆವಿಡದೆ ಸೂಸುತಿರೆ ಸೊಕ್ಕು ದೆಕ್ಕೆಯಳ್ ಸೊಗಸು | ವಡೆದಳಾಕಾಂತೆ ಪ್ರಿಯನಂಗದೊಳ್ ಮೋಹನೋತ್ಸಂಗದೊಳ್ ಬಗೆಗೊಳಿಸುತೆ||೧೭||
ಪ್ರಿಯನ ತನುಚಂದನಮಹೀಜಮಂ ಸುತ್ತಿದ ಫ | ಣಿಯೊ ವಲ್ಲಭಾಂಗದಾಲಸ್ತಂಭಮಂ ತೊಡ | ರ್ದಯುಗತರಕರಿಯ ಸುಂಡಿಲೊ ಕಾಂತಕಾಯಬಲಮುಂ ಬಂಧಿಸಿದ ಮದನನ || ಜಯಪಾಶವೇ ರಮಣ ದೇಹ ಕಲ್ಪ ದ್ರುಮಾ | ಶ್ರಯದ ಕೋಮಲಲತೆಯೊ ಪೊಸತಾದುಂದೆಂಬಂತಿ | ನಿಯನನಪ್ಪಿದ ಹರಿಣಲೋಚನೆಯ ನಳಿತೋಳಳೆಸೆದುವತಿಗಾಢದಿಂದೆ || ೧೮ ||
ಕಣ್ಯಲರ್ ಕಾತರಿಸೆ ಮುಡಿ ಪೂಗಳಂ ಸೂಸೆ | ನುಣ್ಮೊಗಂ ಬೇರೊಂದು ಪಯಾಗೆ ನುಡಿ ದೈನ್ಯ | ಮುಣ್ ಹೀನಸ್ವರದೊಳೆಸೆಯೆ ಕೈ ಕಲೆಗಳೊಳೆ ಸೋಂಕೆ ಮೈ ಪುಳಕದಿಂದೆ || ಪೊಣೆ ಮದನಾತುರಂ ತಲೆದೋರೆ ಮೇಲುದಂ | ಬಿಳ್ಮೊಲೆಗಳೋಸರಿಸೆ ನಿರಿಯ ಬಿಗಿ ಪೈಸರಿಸೆ | ಪೆಣ್ಮಂಚದಂಚೆದುಪ್ಪುಳ್ವಾಸಿಗೆಳೆದೊಯ್ದಿ ನಿಯನಂ ಬ ಲ್ಪಿನಿಂದೆ||೧೯||
ನತಿಗೆ ಷೋಡಶದ ಋತುಸಮಯಮೇಕಾದಶೀ | ವ್ರತಮಲಂ ಘ್ಯ ಶ್ರಾದ್ಧ ಮಿನಿತೊಂದುದಿನ ಸಂ | ಗತಮಾದೊಡೆಂತು ಕರ್ತವ್ಯಮೆನೆ ಪೈತೃಕದ ಶೇಷಾನ್ನ ಮಾಘ್ರಾಣಿಸೆ|| ಕೃತಭೋಜ್ಯಮಾದಪುದು ನಡುವಿರುಳಳಿದಾ ವ | ನ ಇತೆಯನೊಡಗೂಡಬಹುದದರಿಂದ ದರ್ಮಪ | ಧೃತಿಯನೀಕ್ಷಿಸಲವಳನಿಂದು ಮೀರುವುದು ಮತವಲ್ಲೆಂದವಂ ತಿಳಿದನು || ೨೦ ||
ತಾತನಾಜ್ಞೆಯನುಳಿದು ಕೃಷ್ಣ ದರ್ಶನಕೈದ | ರೀತರಳೆಗಿಂದು ಋತುದಾನಮಂ ಮಾಡಿದೊಡೆ | ಪಾತಕಂ ತನಗಿಲ್ಲವೆಂದು ನಿಶ್ಚೈಸಿ ಬಳಿಕಾ ಸುಧನ್ವಂ ಮನದೊಳು || ಭೀತಿಯಂ ತೊರೆದು ಕಾಂತೆಯ ಕೂಡೆ ರಮಿಸಿದಂ | ಪ್ರೀತಿಯಿಂದುಗುರೊತ್ತು ಸರಸ ಚುಂಬನ ಲಲ್ಲೆ | ವಾತುಗಳರವ ನೇಮಗಲೆ ತಾಡವಫ್ರೌಢಿ ಬಂಧ ಸಮ್ಮೋಹನದೊಳು || ೨೧ ||
ನಾಣೀಸಲಳಿದವಯವದ ಭೇದಮಂ ಮರೆದು i ಜಾಳ್ಮೆಗಳ ಬಂಧಂಗಳೊಳ್ ಬಳಸಿ ಸೊಗಯಿಸುವ | ಗೋಣಿಳಗಿನಿಂಚರಂಗಳನೆಸಗಿ ಮೊನೆವಲ್ಲ ಕರ್ದುಂಕನುಗುರೊತ್ತನು || ಮಾಷ್ಮಾಣಿನಲ್ ಕೈಗೊಳಿಸಿ ಲಲ್ಲೆಗೈದೊಲವ | ನಾಣ್ಯಂಗೆ ಕಾಣಿಸಿದಳವಳೊಡನೆ ಕೊರ್ಮೆಯಿಂ | ಮೇಲ್ಮಾನಿನಿಗೆ ಮದನಕಲೆಗಳಂ ತೋರಿಸಿದನವನಂದು ಸಮರತಿಯೊಳು || ೨೨||
ಒದವಿದ ಸೊಬಗಿನ ಶೃಂಗಾರದಾತುರದ ವೀ | ರದ ಲಲ್ಲೆ ವಾತಿನ ಕರುಣದ ನಗೆಮೊಗದ ಹಾ | ಸ್ಯದ ನಖಕ್ಷತದ ರೌದ್ರದ ಕಾತುರದ ಭಯದ ಬೆಮರೊಗೆದ ಭೀಭತ್ಸದ | ಪುದಿದ ರೋಮಾಂಚದದ್ಭುತದ ಸೊಗಸಿನ ಮೋಹ | ನದ ಶಾಂತದೆಸೆವ ನವರಸದೊಳೆ ಯಾದ ಸುರ | ತದ ನವರಸವನುರೆ ಸವಿದು ಸೊಕ್ಕಿ ಮರೆದರನ್ಯೂನ್ಯಭಾವವನವರ್ಗಳು | ೨೩ ||
ಕೂರುಗುರ್ಗಳ ಗೆರೆಯ ಸೂತ್ರಬಂಧದೊಳೆಸೆವ | ತೋರಮೊಲೆಗಳ ಕುಂಭಸಂಸ್ಥಾಪನಂಗೈಯ್ದು | ಚಾರುತರ ಗಳರವದ ಮಂತ್ರದಿಂ ರೋಮಾಂಚನದ ಕುಶಾಗ್ರಂಗಳಿಂದ | ವೀರರತಿ ಸಾಮ್ರಾಜ್ಯ ಪಟ್ಟದೊಳ್ ಬೆಮರ್ವನಿಯ | ವಾರಿಸೇಚನದಿಂದ ಕೃತಕೃತ್ಯನಾದಂತೆ | ರಾರಾಜಿಸಿದನವಂ ವೆ.ಲಾಸಿನೊಳ್ ಮೆರೆವ ಮಣಿಮಂಚದಾನನದೊಳು || ೨೪ ||
ಪ್ರಕಟಿಸಿದ ಕಟಿ ತಳ್ಳುವಳ್ಳಿ ಬೆಂಡಾದ ಮೈ | ಸುಕಲೆಗಳನಾಂತ ಮೊಲೆ ಕದಡುಲೇಪದ ಬೆಮರ್ | ವಿಕಸಿತಸುಖದೊಳದ್ದ ಮನವೆದ್ದ ರೋಮಾಂಚಮನವಳಿದಕ್ಕೆ ಮಸುಳ್ವ || ಮಕರಪತ್ರದ ಕದಪು ಮಾ ರ್ದವದೊಳೊರಲ್ | ಮುಕುಳಿತವಿಲೋಚನಂ ನರುಸುಯ್ತಿನಿಮರ್ದ ನಾ | ಸಿಕಮಳಿದ ತಿಲಕಂ ಪರೆದ ಕುರುಳ್ ಸೊಪ್ಪಾದಧರನೊಪ್ಪಿ ತಾ ಕಾಂತೆಗೆ | ೨೫ |
ಮನ್ವಾದಿಋಷಿಗಳಭಿಮತವಿದೆಂದರಿದಾ ಸು | ಧನ್ವಂ ಋತುಸ್ನಾತೆಯಂ ಮೀರದೊಡಗೂಡಿ । ತನ್ವಿಯಂ ಬೀಳ್ಕೊಂಡು ಸಮರಕನುವಾಗಲಿರಲಿತ್ತ ಕುರುಕುಲದ ನೃಪರ || ಅನ್ವಯಕೆ ತೊಡವಾದ ನರನ ಹಯಮಂ ಕಟ್ಟು | ವನ್ನೇಷಣದೊಳಾಹವಕೆ ನಡೆಯುತತಿಬಲ ಸ | ಮನ್ವಿತಕುಮಾರನಂ ಸೇನೆಯೊಳ್ ಕಾಣದೆ ಕೆರಳಂ ಮರಾಳಕೇತು | ೨೬ |
ಪೊರೆಯೊಳಿಹ ಸಚಿವರಂ ನೋಡುತವರೊಳ್ ಸುಮತಿ | ಗರಸಂ ನಿರೂಪಿಸಲವಂ ಕಡುಗಡಿಕರಾದ | ಚರರನಟ್ಟಿದೊಡವರ್ ಬರೆಸೆಳೆದು ನಗುತಿಹ ಸುಧನ್ವನಂ ತುಡುಕಿ ಪಿಡಿದು || ಕರಯುಗಳಮಂ ನೇಣ್ಗಳಿಂ ಬಿಗಿದು ತಂದರತಿ | ಭರದಿಂದೆ ರಾಯನಿದ್ದೆಡೆಗಾಗಿ ಪೌರಜನ | ಪುರಜನಂ ಬೆರಗಾಗೆ ಕದ್ದಾತನಂ ಕೊಂಡು ಬರ್ಪಂತೆ ನಿಷ್ಠುರದೊಳು | ೨೭ |
ಕಟ್ಟು ಸಹಿತಾ ಸುಧನ್ವಂ ತಾತನಡಿಗೆ ಪೊಡ | ಮಟ್ಟೊಡೆ ಕೆರಳ್ದೆಲವೊ ಮೂಢಾತ್ಮ ನೀನೆನ್ನ | ಕಟ್ಟಳೆಯನರಿದು ಕೃಷ್ಣನ ದೀಕ್ಷೆಯಂ ಮರೆದು ರಣದುತ್ಸವವನೆ ತೊರೆದು || ಪಟ್ಟಣದೊಳೇಕೆ ತಳುವಿದೆಯೆಂದು ಕುವರನಂ | ಧಟ್ಟಿಸಿ ಮರಾಳಧ್ವಜಂ ಕೇಳ್ದೊಡಡಿಗಿಟ್ಟ | ದಿಟ್ಟಿಯಿಂದಂಜುತೊಯ್ಯನೆ ಲಜ್ಜೆ ವೆರಸಿ ಬಿನ್ನೈಸಿದನವಂ ಪಿತಂಗೆ||೨೮||
ಸತಿ ಸಂತತಿಗೆ ಬಯಸಿ ದಿನಗಳೆದುದಿನ್ನಿಲ್ಲ | ಋತುಸಮಯವೆಂದೆನಗೆ ಪೇಳ್ದೊಡಲ್ಲಿದ್ದೆನೆನೆ | ಕೃತಕಮಿದು ನೂಕೀತನಂ ಕೃಷ್ಣ ದರ್ಶನದ ಕಾಲಮೊದಗಿರಲಿತ್ತಲು| | ಇತರಧರ್ಮದ ವೇಳೆ ಗಡ ತನಗೆ ಕರೆ ಪುರೋ | ಹಿತ ಶಂಖ ಲಿಖಿತರಂ ಬೆಸಗೊಳ್ವೆವಿದಕೆ ನಿ | ಷ್ಕೃತಿಯನೆನಲರಸಾಜ್ಞೆಯೊಳವರ ಪೊರೆಗೆ ಚರರೈತಂದದಂ ಪೇಳ್ದರು || ೨೯ ||
ಆ ಚರರ ನುಡಿಗೇಳ್ದು ಶಂಖಲಿಖಿತರ್ ಬಂದು | ವಾಚಿಸಿದರೆಲೆ ಹಂಸಕೇತು ನೀನೇನನಾ | ಲೋಚಿಸುವೆ ನಿನ್ನ ತನಯನ ಮೇಲಣಾಶೆಯಿಂ ಭಾಷೆದಪ್ಪಿದೆಯಾದೊಡೆ || ಈ ಚಂಪಕಾಪುರದೊಳಿಹುದಿಲ್ಲ ನಾವು ಸ | ತ್ಯಾಚರಣೆಗಾಗಿ ರುಕ್ಕಾಂಗದ ಹರಿಶ್ಚಂದ್ರ | ಭೂಚಕ್ರಪಾಲರಾಜರ ಮೊಗನೋಡಿದರೆ ಹೇಳೆಂದು ನುಡಿದರವರು ॥ ೩೦ ||
ಬಳಿಕರಸನಾ ಸುಮತಿಯಂ ಕರೆದು ಪೇ ಳ್ದನೀ | ಖಳನಂ ಕಟಾಹ ಪೂರಿತ ತಪ್ತತೈಲದೊಳ್ | ಮುಳುಗಿಸೆನಲವನೊಡೆಯನಾಜ್ಞೆಯಂ ಮ ಮೀರದಾತನ ಕೈಗಳಂ ಕಟ್ಟಿಸಿ | ತಳಪಳನೆ ಕುದಿವೆಣ್ಣೆಗೊಪ್ಪರಿಗೆ ಕಾಯ್ವಲ್ಲಿ | ಗೆಳತರಿಸಿ ಮತ್ತೆ ಪೊತ್ತು ವೊಲುರಿವ ಪೆರ್ಗೊರಡು | ಗಳನಿಡಿಸಿ ಕಳಕಳಿಸುತಿಹ ಸುಧನ್ವಂಗೆ ಮರುಗುತೆ ಸಚಿವನಿಂತೆಂದನು ॥೩೧||
ತಾತ ನಿನಗಿಂತಾಗಬಹುದೆ ಲೋಕೈಕ ವಿ | ಖ್ಯಾತನಭಿಮಾನಿ ಹರಿಸೇವಕಂ ಸುಂದರಂ | ಮಾತಾಪಿತೃಪ್ರಿಯಂ ಕೋವಿದಂ ಕೋಮಲಂ ಸುಖ ಸಕಲಸಜ್ಜನಸಖಂ || ನೀತಿವಿದನಾಚಾರಸಂಪನ್ನ ನುತ್ತಮಂ । ಡಾತನೆಂಬಿನಿಸು ಗುಣಮುಳ್ಳ ಕುವರಂ ನಿನ್ನ | ನೀತಪ್ತತೈಲದೊಳಗೆಂತಕಟ ಬೀಳಿಸುವೆನೆಂದೊಡವನಿಂತೆಂದನು||೩೨||
ಅಂಜಬೇಡೆಲೆ ಸುಮತಿ ನೀನೀಗಳಿದಕೆ ಮನ | ಮಂ ಜರಿವಿಡುವನಲ್ಲ ತಾನಿನ್ನೆಗಂ ಧ ರ್ಮ | ಮಂ ಜಡಿದು ನಡೆದುದಿಲ್ಲಾಹವದೊಳಹಿತರೊಳ್ ಪೊಯ್ದಾಡಿ ಮಡಿವೊಡಲಿದು || 'ಜಂಜಡದೊಳಳಿವುದೆಂಬೊಂದು ಭಯಮಿಹುದಾದೊ | ಡಂ ಜನಾರ್ದನನಂ ಶರಣು ಗುವೆನಳುಕದೆ | ನ್ನಂ ಜನಕನಾಜ್ಞೆ ದಪ್ಪದೆ ಹಾಯ್ಕಿ ಸೆನಲವಂ ತೆಗೆದೆತ್ತಿ ಬಿಸುಡಿಸಿದನು ||೩೩||
ಭೋ ಯೆಂದುದಖಿಳ ಪರಿವಾರ ಮಡಿಗಡಿಗೆ ಹಾ । ಹಾ ಯೆಂದು ಮರುಗಿದುದು ನೀನಿಂತಳಿವರೆ ತಾ | ತಾ ಯೆಂದು ಪೊರ ಳ್ದು ದೊಡೆತನಕೆ ಬೇಸತ್ತು ಸತ್ತಾಯೆಂದು ಸೈಗೆಡೆದುದು || ವಾಯಕಿಂತಕಟ ಸುಕುಮಾರನಂ ಕೊಂದನೀ | ರಾಯನರಿವಂ ನೆರೆ ಸುಡಲಿ ಶಂಖಲಖಿತರೆಂ | ಬೀಯಮೋಪಮರೇಕೆ ಜನಿಸಿದರೋ ಭೂಸುರರೊಳೆಂದು ಮೊರೆಯಿಡುತ್ತಿರ್ದುದು||೩೪|
ಹಿಂದೆ ಪ್ರಹ್ಲಾದನಂ ಪಾಲಿಸಿದೆ ಗಡ ದ್ರುಪದ | ನಂದನೆಯ ಮಾನಮಂ ಕಾದೆ ಗಡ ಭಕ್ತರ್ಗೆ | ಬಂದೆಡರನಾವಗಂ ಪರಿಹರಿಪೆ ಗಡ ದೇವ ನಿನ್ನಂ ಪೆಸರ್ಗೊಂಡೊಡೆ ||ಇಂದು ಮೊರೆವೊಗುವೊಡಾರಂ ಕಾಣೆನಕಟ ಗೋ । ವಿಂದ ನೀನಲ್ಲದೆ ವಿಚಾರಿಸುವರಿಲ್ಲ ಸಲ | ಹೆಂದವಂ ಚಿತ್ತದೊಳ್ ಕೃಷ್ಣನಂ ಧ್ಯಾನಿಸುತೆ ನಿರ್ಭಯದೊಳಿರುತಿರ್ದನು || ೩೫ |
ಜಯಜಯ ಜನಾರ್ದನ ಮುಕುಂದ ಮುರಮರ್ದನ ವಿ | ಜಯಮಿತ್ರ ಗೋವಿಂದ ಪಕ್ಷಿವಾಹನ ಕಮಲ | ನಯನ ಪೀತಾಂಬರ ಘನಶ್ಯಾಮ ಹರಿ ಕೃಷ್ಣ ವೈಕುಂಠ ನಾರಾಯಣ || ಕ್ಷಯರಹಿತ ರಾಮ ಲಕ್ಷ್ಮೀರಮಣ ನತಸುರಾ | ಲಯಧೇನು ಭಕ್ತವತ್ಸಲ ಕೃಪಾಕರ ಮಹಾ | ಭಯನಿವಾರಣ ನೃಸಿಂಹ ತ್ರಾಹಿಯೆನುತಿರ್ದನಾ ಸುಧನ್ವಂ ಮರೆಯದೆ ॥ ೩೬||
ಅರನ ಕೇಳಾಶ್ಚರ್ಯಂ ನೋಡಲೆವೆ ಸೀವೊ |ಲುರಿಗೊಂಡು ಕಡುಗಾಯ್ದು ತಳಪಳದೆ ಕುದಿದುಕ್ಕಿ | ಮೊರೆವುರುಕಟಾಹತೈಲಂ ಮೈಗೆ ಸೊಗೆಯಿಸುವ ಬಾವನ್ನದಾಗಿರೆ || ಕೊರಗದಾತನ ರೋಮ ವಡಗದಂಗದ ಸೊಂಪು | ಕೊರಳ ತುಲಸಿಯ ದಂಡೆ ಬಾಡದು ಮುಡಿದ ಪೂಗ | ಳರೆಗಂದವರ ಳ್ದುದು ಸುಧನ್ವನ ಮುಖಾಂಬುಜಮಿನೋದಯದ ಕಮಲದಂತೆ||೩೭||
ಕಂಡು ಬೆರಗಾದುದೆಲ್ಲಾ ಜನಂ ಸ್ತುತಿಸಿದರ್ | ಪುಂಡರೀಕಾಕ್ಷನಂ ಬಳಿಕ ಲಿಖಿತಂ ಖಾತಿ | ಗೊಂಡಿವಂ ಬಲ್ಲನಗ್ನಿ ಸ್ತಂಭಮಂ ನಾರಿಕೇಳಂಗಳಂ ತರಿಸೆನೆ || ಕೊಂಡು ಬಂದೆಳನೀರ್ಗಳಂ ಸುರಿಯಲುರಿ ನ ಭೋ | ಮಂಡಲವನಪ್ಪಳಿಸೆ ಹೊಡೆದುವು ಪುರೋಹಿತರ | ಗಂಡಸ್ಥಳಂಗಳಂ ಸಿಡಿವೋಲ್ಗಳಾಗಳುಂ ನಗುತಿರ್ದನಾಕುವರನು||೩೮||
ನಿಶ್ಚಲಹೃದಯನಾಗಿ ವಿಷ್ಣು ನಾಮಂಗಳ ಪು | ನ ಶ್ಚರಣಿಯಿಂದವಂ ಸುಖದೊಳಿರುತಿರೆ ಕಂಡು | ಪಶ್ಚಾದ್ವಿವೇಕದಿಂದುರೆ ನೊಂದು ಹರಿಕಿಂಕರದ್ರೋಹಮಂ ಮಾಡಿದ | ದುಶ್ಚರಿತಕಾವುದು ನಿಷ್ಕೃತಿಗಳಿಲ್ಲೆಂಬ | ನಿಶ್ಚಯದೊಳಾಗ ಮರಣಾಂತವೇ ತನಗೆ ಪ್ರಾ | ಯಶ್ಚಿತ್ತವೆಂದಾಕಟಾಹದೊಳ್ ಕುದಿವೆಣ್ಣೆ ಯೊಳ್ ಬಿದ್ದನಾ ಲಿಖಿತನು 1೩೯||
ಆ ತಪ್ತತೈಲದ ಕಟಾಹದೆಡೆ ಲಿಖಿತಂಗೆ | ಶೀತಳಸ್ಥಳಮಾದುದಾ ಸುಧನ್ವನ ಸಂಗ | ಮೇತರತಿತಯಮೊ ಹರಿಭಕ್ತರಂ ಸಾರ್ದಂಗೆ ತಾಪಮಿರ್ದಪುದೆ ಬಳಿಕ | |ಆತಗಳ್ ಕುದಿವೆಣ್ಣೆಯೊಳ್ ಸುಖದೊಳಿರೆ ಹಂಸ | ಕೇತು ವಿಸ್ಮಿತನಾಗಿ ಮಂತ್ರಿಗಳೊಡನೆ ಬಂದು | ಪ್ರೀತಿಯಿಂದವರೀರ್ವರಂ ತೆಗೆದು ತಕ್ಕೈ ಸಿದಂ ಸುತಪುರೋಹಿತರನು | ೪೦ ||
ಪನ್ನೀರಮಿಂದು ದಿವ್ಯಾಂಬರವನುಟ್ಟು ಬಾ | ವನ್ನ ದಿಗುರಂ ಗೆಲ್ದು ಕಮ್ಮ ಲರ್ಗಳಂ ಸೂಡಿ | ಸನ್ನು ತ ಸುಯಕ್ಷಕರ್ದಮವೆನನುಕರಿಸಿ ಕತ್ತುರಿತಿಲಕವಿಟ್ಟು ಪಣಿಗೆ|| ರನ್ನ ದೊಡವುಗಳನಳವಡಿಸಿ ವೀಳೆಯಗೊಂಡು ; ತನ್ನ ನುಳುಹಿದ ದೇವಪುರದ ಲಕ್ಷ್ಮೀಪತಿಯ | ನಿನ್ನು ಕಂಡಪೆನೆಂಬ ಹರ್ಷದಿಂ ಕಳೆಯೇರಿ ಮೆರೆದಂ ಸುಧನ್ವನಂದು | ೪೧ ||
ಜೈಮಿನಿ ಭಾರತ 23
ಹನ್ನೆರಡನೆಯ ಸಂಧಿ ಮೊದಲ ಭಾಗ
ಪದ್ಯ 1 ರಿಂದ 25
ಸುಧನ್ವ ಮತ್ತು ವೃಷಕೇತು ಕಾಳಗ
ಸಂಕ್ಷಿಪ್ತ ರೂಪ
ಸುಧನ್ವನು ಹರಿಕೃಪೆಯಿಂದ ಪ್ರಾಣ ಉಳಿಸಿಕೊಂಡು ಬಂದ ನಂತರ ಯುದ್ಧಕ್ಕೆ ಅನುವಾದನು. ಲಿಖಿತನು ತನ್ನ ಅಹಂಕಾರಕ್ಕೆ ಪಶ್ಚಾತ್ತಾಪ ಪಟ್ಟು ಹರಿಯನ್ನು ಕೊಂಡಾಡಿದನು. ಸುಧನ್ವನು ತಂದೆಗೂ ಪುರೋಹಿತರಿಗೂ ನಮಿಸಿದನು. ಇಡೀ ನಾಡು ಧನ್ಯವಾಯಿತು ಎಂದು ಸಂತಸಪಟ್ಟರು. ಸುಧನ್ವನು ಮಣಿಮಯದ ರಥವನ್ಬು ಪೂಜಿಸಿ ಸಾರಥಿಯನ್ನು ಸತ್ಕರಿಸಿ ಕುದುರೆಗಳಿಗೆ ನಮಿಸಿ ರಥವೇರಿದನು
ಅವನೊಂದಿಗೆ ಸಕಲ ಸೈನ್ಯವೂ ಹೊರಟಿತು.
ಸೈನ್ಯದ ಪದಗತಿಯಿಂದ ಎದ್ದ ಧೂಳು ಆಕಾಶವನ್ನು ಮುಟ್ಟಿತು. ರಣವಾದ್ಯಗಳು ಮೊಳಗಿದವು. ಸೈನ್ಯದವರು ಧರಿಸಿದ್ದ ಆಭರಣಗಳು ಹೊಳೆದವು. ಪೂಸಿದ್ದ ಸುಗಂಧ ದ್ರವ್ಯಗಳ ಪರಿಮಳವು ಎಲ್ಲೆಡೆಯೂ ಪಸರಿಸಿತು. ಬಂದು ಪಾರ್ಥನಕುದುರೆಯನ್ನು ಹಿಡಿದು ತಮ್ಮ ಸೈನ್ಯವನ್ನು ಪದ್ಮವ್ಯೂಹದಲ್ಲಿ ನಿಲ್ಲಿಸಿ ಅದರ ನಡುವೆ ಕುದುರೆಯನ್ನು ಕಟ್ಟಿದರು. ಈ ವಿಷಯ ಪಾರ್ಥನಿಗೆ ಮುಟ್ಟಿತು.
ಪ್ರದ್ಯುಮ್ನನೊಂದಿಗೆ ಇದಾವುದೋ ಮತ್ತೆ ಅಪಾಯ ಬಂತೆನ್ನಲು ಅವನು ತಮ್ಮ ತಂದೆಯು ಕುದುರೆಯ ಮೈಗಾವಲಿಗೆ ನನ್ನನ್ನು ನಿನ್ನೊಂದಿಗೆ ಕಳಿಸಿದ್ದಾನೆ. ಚಿಂತೆ ಬೇಡ. ನಾನು ಹೋಗಿ ಕುದುರೆಯನ್ನು ಬಿಡಿಸಿಕೊಂಡು ಬರುತ್ತೇನೆಂದು ಹೇಳಿದನು. ಅವನೊಂದಿಗೆ ಯದುಕುಲದ ವೀರರೂ ಸಿದ್ಧರಾದರು.
ಒಂದೆಡೆ ನೀಲಧ್ವಜನ ಸೈನ್ಯ, ಮತ್ತೊಂದೆಡೆ ಆನುಸಾಲ್ವದವನ ಸೈನ್ಯ ಸೇರಿದವು. ಕೃತವರ್ಮ, ಸಾತ್ಯಕಿ ಮೊದಲಾದವರು ಹೊರಟರು. ಕರ್ಣನ ಮಗ ವೃಷಕೇತು ಬಂದು ಅರ್ಜುನನ ಬಳಿ ಸುಮ್ಮನೇ ಸೈನ್ಯವನ್ನು ಬಳಲಿಸುವುದೇಕೆ? ನನ್ನನ್ನು ಕಳಿಸಿಕೊಡು ಎಂದು ಪ್ರಾರ್ಥಿಸಿ ಅವನೂ ಹೊರಟನು.
ದೂರದಿಂದ ಇವನನ್ನು ನೋಡಿದ ಸುಧನ್ವನು ತನ್ನನ್ನು ಪರಿಚಯಿಸಿಕೊಂಡು ನೀನಾರೆಂದು ಕೇಳಲು ರವಿತನಯನ ಮಗನೆಂದು ವೃಷಕೇತು ಉತ್ತರಿಸಿದನು. ಇಬ್ಬರಿಗೂ ಯುದ್ಧ ಆರಂಭವಾಯಿತು. ಪುಂಖಾನುಪುಂಖವಾಗಿ ಇಬ್ಬರೂ ಬಾಣಗಳನ್ನು ಬಿಡತೊಡಗಿದರು. ಸಿಡಿಲು ಮಿಂಚುಗಳಂತೆ ಬಾಣಗಳು ಓಡಾಡಿದವು.ಪರಸ್ಪರ ತಮ್ಮ ತಮ್ಮ ಹೆಸರುಗಳನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತ ಮತ್ತಗಜಗಳಂತೆ ಹೋರಾಡಿದರು.
ಒಮ್ಮೆ ಸುಧನ್ವನ ರಥ, ಮುರಿಯಲು ಬೇರೆ ರಥ ಬಂದಿತು. ಇನ್ನೊಮ್ಮೆ ವೃಷಕೇತುವಿನ ರಥ ಮುರಿಯಿತು. ಬೇರೊಂದು ರಥ ಬರುವವರೆಗೂ ವಿವಿಧ ಆಯುಧಗಳಿಂದ ವೀರಾವೇಶದಿಂದ ಹೋರಾಡಿದನು.
ಹನ್ನೆರಡನೆಯ ಸಂಧಿ ಮೊದಲ ಭಾಗ
ಪದ್ಯ 1 ರಿಂದ 25
ಸೂಡನೆ ! ಅಪರಮಿತನ್ಯ ಸನ್ನಾಹದಿಂದರ್ಜುನನ | ಚಪಲಹಯಮಂ ಮರಾಳ ಧ್ವಜಂ ಪಿಡಿಯಲ್ಕೆ | ತಪನಸುತನಂದನ ಸುಧನ್ವರ್ಗೆ ಕಾಳಗಂ ಪೂಣ್ದು ದಾಡಂಬರದೊಳು !
ಇನ್ನು ಮೇಲಣ ಕಥೆಯನಾಲಿಸೈ ಭರತಕುಲ | ರನ್ನ ಜನಮೇಜಯ ಸುಧನ್ವನ ಕಟಾಹದುರಿ | ಯಂ ನಾರಸಿಂಹ ಜಪದಿಂ ಜಯಿಸೆ ಲಿಖಿತನೆಸಗಿದ ವೈಷ್ಣವದ್ರೋಹಕೆ || ತನ್ನ ರಿವನುರೆ ಜರೆದುಕೊಂಡಸುದೊರೆವೆನೆಂದು | ನನ್ನಿಯಿಂದಾ ತೈಲದೊಳ್ ಬೀಳಲವರ್ಗಳಂ | ಮನ್ನಿಸಿ ನೃಪಂ ತೆಗೆಸಲಾ ಪುರೋಹಿತನವನಿಪತಿಗೆ ಬಳಿಕಿಂತೆಂದನು:||೧||
ಭೂನಾಥ ಕೇಳ್ನಿನ್ನ ಸುತನ ದೆಸೆಯಿಂದ ನ | ಮ್ಯೀನೆಲಂ ಪ್ರಜೆ ನಾಡು ಬೀಡೂರು ಪರಿವಾರ | ಮಾನೆ ಕುದುರೆಗಳಿರ್ದ್ದ ಪಶು ಪಕ್ಷಿ ಮೃಗ ಕೀಟ ತರು ಗುಲ್ಮ ಲತೆಗಳೆಲ್ಲ| | ಈ ನಿರುದ್ಧಕೆ ಧನ್ಯವಾದುವೇಂ ಕೃತಿಯೊ ನೀಂ । ಭಾನುರಶ್ಮಿಗೆ ಕಂದೆರೆಯದ ಗೂಗೆಯವೊಲ | ಜ್ಞಾನಿ ದ್ವಿಜಾಧಮಂ ತಾನಾದೆನೀ ದ್ರೋಹಕೆಂದು ಲಿಖಿತಂ ನುಡಿದನು || ೨ ||
ಬಳಿಕಾತನಂ ಸುಮ್ಮನಿರಿಸಿ ನುಡಿದಂ ಶಂಖ | ನೆಲೆ ಮಹೀಪಾಲ ಹರಿಶರಣರ್ಗೆಡರ್ಗಳೆ | ಪ್ಪೊಳವು ಬೆಳುದಿಂಗಳೆ ಬೆಮರುಂಟೆ ಬೇಸಗೆಯೊಳಿವನ ನಿಜಮಂ ಕಾಣದೆ ॥ ಬಳಸಿದೆವು ಮೂರ್ಖತೆಯನರಿದು ಮರುಳಾದೆವಿ | ನ್ನುಳಿದ ಮಾತುಗಳೇಕೆ ಸಾಕೀ ಸುಧನ್ವನಂ | ಕಳುಹು ಕಾಳಗಕೆನಲ್ ಭೂಪನವನಂ ತೆಗೆದು ಬಿಗಿಯಪ್ಪಿದಂ ಮುದದೊಳು || ೩ ||
ತಂದೆಯ ಚರಣಕೆರಗಿ ಶಂಖಲಿಖಿತರ ಪದಕೆ | ವಂದಿಸಿ ಪರಕೆಗೊಂಡು ಸಾರಥಿಯನಾದರಿಸಿ | ಪೊಂದೇರನಳವಡಿಸಿ ತುರಗಂಗಳಂ ಪೂಡಿ ಸಿಂಧಮಂ ನಿಡಿದುಮಾಡಿ || ಗೊಂದಣದ ಝಲ್ಲಿಗಳ ಕನಕಮಾಲೆಗಳ ಪ್ರ| ಕಂದನ ವಿಭೂಷಣಾವಳಿಗಳಂ ಸಿಂಗರಿಸಿ | ಬಂದಡರ್ದಂ ಜಯರವದೊಳಾ ಸುಧನ್ವಂ ತಿರಸ್ಕೃತಕುಸುಮಧನ್ವನು ||೪||
ಕೇಳ್ಗುಣವಮಣಿ ಧರಣಿಪಾಗ್ರಣಿ ತನ್ನ ಮಗ | ವೇಳ್ಗೆಯಂ ಕಂಡುಬ್ಬಿದಂ ಮರಾಳಧ್ವಜಂ | ಸೂಳ್ದುವಾಗ ತಂಬಟೆ ಭೇರಿ ನಿಸ್ಸಾಳ ಕಹಳಾದಿ ವಾದ್ಯಂಗಳು | |ತೋ ಳ್ಗು ಟ್ಟು ತಾರ್ದು ಸುಮ್ಮಾನದಿಂ ಪಟುಭಟರ್ | ಕೇಳ್ಕೊಂಡು ಕುದಿಯುತಿರ್ದರು ಸಾರ್ಧಯೋಜನದೊ | ಳಾಳ್ಗಜ ತುರಂಗ ರಥವಿಟ್ಟಣಿಸಿ ನಡೆದುದುತ್ಸಾಹದಿಂ ನರನ ಮೇಲೆ ||೫||
ಬೆರೆಬೆದರಸುತ್ತಿಡಿದು ಮುಂದೆ ಭರದಿಂದೆ ನಡೆ | ವರಸರಸುಗಳ ಕಂಠಮಾಲೆಗಳ ತೋರಮು | ತ್ತೊರಸೊರಸು ಮಿಗೆ ಪರಿದವರ ಸೂನುದಂಬುಲದ ಚೆನ್ನೆಲದ ಮೇಲೊಕ್ಕಿರೆ|| ಪೊರೆದ ಸಂಧ್ಯಾರುಣದ ಗಗನಮಂಡಲದೊಳಂ | ಕುರಿಸಿದುಡುಗಣದಂತೆ ರಂಜಿಸಿತು ದೆಸೆದೆಸೆಗೆ | ಪರಿಮಳದೆಲರ್ ಪರಿದುದಗರುಚಂದನ ಯಕ್ಷಕರ್ದಮದ ಮೊಗವಾಸದ । ೬||
ಪಡೆಯನ್ನ್ಯೋನ್ಯ ಸಂಘರ್ಷಣದೊಳೊಗುವ ಪೊಂ | ದೊಡವುಗಳ ರೇಣುಗಳೊ ಮೈಗಳಂ ಸೋಂಕಿ ಪುಡಿ | ವಡೆದ ಕುಂಕುಮ ಸುಗಂಧಾನುಲೇಪನದ ಚೂರ್ಣಂಗಳೋ ಪದಘಾತಿಗೆ ॥ ಪೊಡವಿಯಿಂದಿರದೇಳ್ವರುಣರಜಂಗಳೇ ತಿಳಿದು | ನುಡಿಯಲರಿದೆಂಬಿನಂ ಮೇರುವಿನ ಬಣ್ಣಮಿಂ | ಪಿಡಿದ ದಿವಿಜರ ಭೋಗಮಜನ ಗುಣಮೆಚ್ಚರಿಸೆ ಕೆಂಧೂಳಿ ಮಸಗಿತಾಗ ॥ ೭||
ಮೊಗಗೈಗಳಿಂ ತಮ್ಮೊಡಲ ನೀರವಾನೆಗಳ್' | ತೆಗೆದು ಚೆಲ್ಲಲ್ ಪೊನಲ್ಪರಿದ ಮಡುಗಳ ಕೆಸರೊ ಳೊಗೆದ ನೃಪಮಂಡಲದ ಕನಕಾಭರಣ ಕಿರಣ ತರುಣಾತಪದೊಳಲರ್ದ | |ಮಿಗೆ ಸುಳಿವ ಚಾಮರಂಗಳ ರಾಜಹಂಸಾವ | ಳಿಗಳ ಸಂಚಾರಮಂ ಕೆಳೆಗೊಂಡ ಬೆಳುದಾವ | ರೆಗಳ ಹಂತಿಗಳಂತೆ ಪಡೆಯೊಳೆಸೆದುವು ತಳ್ತಿಡಿದ ಸತ್ತಿಗೆಯ ಸಾಲ್ಗಳು ॥ ೮ ||
ಮುಂಕೊಂಬ ಮಂದಿ ಕುದುರೆಗೆ ಧರಾಮಂಡಲಂ | ಸಂಕುಲದ ವಾದ್ಯಧ್ವನಿಗೆ ದಿಶಾಮಂಡಲಂ | ಸಂಖ್ಯೆಯಿಲ್ಲದೆ ಸಿಂಧ ಸೀಗುರಿ ಪತಾಕೆಗೆ ನಭೋಮಂಡಲಂ ಮೀರಿದ|| | ಬಿಂಕದಿಂದಿರಿವ ಕಲಿತನಕ್ಕೆ ರಣಮಂಡಲಂ | ಸಂಕೋಚಮೆನೆ ಬಂದು ಪಿಡಿದು ಪಾರ್ಥನ ತುರಗ | ಮಂ ಕಟ್ಟಿ ಬಳಸಿ ಪದ್ಮವ್ಯೂಹವಾಗಿ ನಿಂದಾರ್ದುದಾ ಸೇನೆ ನಲಿದು||೯||
ಸುತ್ತ ಪದ್ಮ ವ್ಯೂಹಮಂ ರಚಿಸಿ ನಡುವೆ ನರ | ನುತ್ತ ಮ ತುರಂಗಮಂ ಕಟ್ಟಿ ಕಾಳಗಕ್ಕೆ ಭಟ | ರೊತ್ತಾಗಿ ನಿಂದರರಿವೀರರಂ ಬರಹೇಳೆನುತ್ತರಸನಾಜ್ಞೆಯಿಂದೆ|| ಇತ್ತಪಾರ್ಥಂಗೆ ಚರರೈ ತಂದು ನುಡಿದರೀ | ವೃತ್ತಾಂತಮಂ ಬಳಿಕ ಪ್ರದ್ಯುಮ್ನ ನಂ ಕರೆದು | | ಮತ್ತೆ ಬಂದುದು ವಿಘ್ನ ಮಿದಕಿನ್ನು ಪಾಯವೇ ನೆಂದೊಡವನಿಂತೆಂದನು | ೧೦ ||
ನಿನ್ನಂ ಕಳುಹುವಂದು ಹಯದ ಮೇಲಾರೈಕೆ | ಗೆನ್ನನಟ್ಟಿ ದನಲಾ ಪಿತನಾತನಾಜ್ಞೆಯಂ | ಮನ್ನಿಸುವ ಕಾಲವಲ್ಲವೆ ತನಗೆ ನೀನಿದಕ್ಕೆಣಿಕೆಗೊಳ್ಳಬಹುದೆ ಬರಿದೆ| | ತನ್ನ ಭುಜಬಲದಿಂದೆ ಬಿಡಿಸಿ ತಂದಪೆನಪ್ಪ | ಮನ್ನೋಡು ಸಾಕೆನುತ ಪಾರ್ಥನಂ ಬೀಳ್ಕೊಂಡು | ಪನ್ನಗಾರಿಧ್ವಜನ ತನಯನೈದಿದನಹಿತಮೋಹರಕೆ ಸೇನೆಸಹಿತ||೧೧||
ಲಟಕಟಿಸುತಾಗ ಸಾತ್ಯಕಿ ನಾಂಬ ಕೃತವರ್ಮ | ತಠ ನಿಶಠ ರನಿರುದ್ಧ ಗದ ಮುಖ್ಯರಾದ ಪಟು ! ಭಟರಖಿಳ ಯಾದವ ಚತುರ್ಬಲಂ ಜೋಡಿಸಿತು ಸಮರಸನ್ನಾಹದಿಂದ || ದಿಟಮಿಂದಜಾಂಡಘಟ ದೊಡೆಯದಿರದೆಂಬಿನಂ | ಪಟಹ ಡಿಂಡಿಮ ಡೌಡೆ ಭೇರಿ ನಿಸ್ಸಾಳ ತಂ | ಬಟ ಮುರಜ ಡಕ್ಕೆ ಡಮರುಗ ಕೊಂಬು ಕಹಳೆಗಳ ಬಹುಳರವಳ್ಳಿರಿದುದು ||೧೨||
ಮೊಗಸಿತರಿಬಲವನನುಸಾಲ್ವಕನ ಸೇನೆಯೊ | ಮ್ಮೊಗದೊಳೊರೆಯುಗಿದ ಫಣಕುಲದಂತೆ ರಣದವಕ | ಮೊಗದೊದಗಿತಂಬುಧಿಯ ತೆರೆಯಂತೆ ಯೌವನಾಶ್ವನ ಸೈನ್ಯಮೊಂದೆಸೆಯೊಳು || ಯುಗದಂತ್ಯದಭ್ರದಂತೆದ್ದು ದುರವಣಿಸಿ ಸಂ | ಯುಗಕೆ ನೀಲಧ್ವಜನ ಸೈನಿಕಂ ಬಳಿಕ ಕರ | ಯುಗಳಂ ಮುಗಿದು ಕಿರೀಟಿಗೆ ವಿನಯದಿಂದ ಬಿನ್ನೈಸಿದಂ ಕರ್ಣಸೂನು | ೧೩ ||
ತಾತ ಚಿತ್ತೈಸು ಗೋಪ್ಪದಜಲಕೆ ಹರಿಗೋಲ 1 ದೇತಕೆ ವೃಥಾ ಕುದುರೆಮಂದಿಯಂ ನೋಯಿಸದಿ | ರೀತಗಳನೆಲ್ಲ ರಂ ತೆಗೆಸೆನಗೆ ಸೆಲವಿಂದಿನಾಹವಂ ಪರಬಲವನು || ಘಾತಿಸಿ ತುರಂಗಮಂ ತಾರದೊಡೆ ಬಳಿಕ ರವಿ | ಜಾತನ ಕುಮಾದಕನೆ ನೋಡು ಸಾಕೆನುತ ವೃಷ | ಕೇತು ಪಾರ್ಥನ ಬೆನಂಬಡೆದು ರಥವೇರಿದಂ ಮೀರಿದ ಪರಾಕ್ರಮದೊಳು ॥೧೪||
ತಾರಕಾಸುರನ ಪೆರ್ಬಡೆಗೆ ಮೈದೋರುವ ಕು | ಮಾರನಂ ತಾನಭ್ರಮಾರ್ಗದೋಳ್ ಸುಳಿವ ಮುಂ | ಗಾರಮಿಂಚಂ ತನ್ನ ಹೊಂದೇರುಗಿರಿಗೆರಗುವಶನಿಯಂ ತನ್ನ ಘಾತಿ ॥ ಪೇರಡವಿಗೈದುನ ದವಾಗ್ನಿ ಯಂ ತನ್ನ ಪ್ರ| ಚಾರಂ ನೆಗಳ್ದ ನಡುವಗಲ ರವಿಯಂ ತನ್ನ | ವೀರಪ್ರತಾಪಂ ತಿರಸ್ಕರಿಸೆ ವೃಷಕೇತು ರಿಪುಸೈನ್ಯಮಂ ಪೊಕ್ಕನು||೧೫||
ದೂರದೊಳ್ ಕಂಡಂ ಸುಧನ್ವನಾತನ ಬರವ | ನಾರಿವಂ ಪಾರ್ಥನಾದೊಡೆ ಕಪಿಧ್ವಜಮಿಹುದು | ದಾರವವೃ ಷಭಾಂಕಿತದ ಕೇತುದಂಡದ ಸುಭಟನಾವನೋ ಪಾಂಡವರೊಳು || ವೀರನಹನೆನುತ ಬಂದಿದಿರಾಗಿ ನಿಂದು ಪರಿ | ವಾರಮಂ ತೆಗೆಸಿ ಬಿಟ್ಟಿರುವನೊದರಿಸುತೆ ಕೈ| ವಾರಿಸುತೆ ನಸುನಗುತೆ ಬಾಣಮಂ ತೂಗುತಿನಸುತಜನಂ ಬೆಸಗೊಂಡನು | ೧೬ ||
ಎಲವೊ ನೀನಾರ್ ನಿನ್ನ ಹೆಸರದೇನಾವರ್ಷಿ I ಕುಲದನಂ ನಿನ್ನ ಪಿತನಾವಾತನೆಂಬುದಂ | ತಿಳಿಪೆನಗೆ ತಾನೀಗ ವೀರಹಂಸಧ್ವಜನೃಪನ ಕುಮಾರಂ ತನ್ನನು | ಇಳೆಯೊಳ್ ಸುಧನ್ವನೆಂಬರ್ ಮಧುಚ್ಛಂದಮುನಿ | ತಿಲಕನಿಂದಾಯ್ತಮ್ಮ ವಂಶಮೆನೆ ಕರ್ಣಜಂ | ಬಳಿಕ ನಸುನಗೆಯೊಳೆಡಗೈಯ್ಯ ಕೋದಂಡಮಂ ತಿರುಗಿಸುತ್ತಿಂತೆಂದನು | ೧೭ |
ಗೂಢವಾಗಿರ್ದಲರ ಪರಿಮಳಂ ಪ್ರಕಟಿಸದೆ | ರೂಢಿಸಿದ ವಂಶವಿಸ್ತಾರಮಂ ಪೌರುಷದ | ಮೋಡಿಯಿಂದರಿಯಬಾರದೆ ಸಮರಸಾಧನವಿದರೊಳಹುದೆ ನಿನಗಾದೊಡೆ || ಮೂಢ ಕೇಳ್ ಕಶ್ಯಪನ ಕುಲವೆನ್ನದೆಂಬರಾ | ರೂಢನಾಗಿಹ ದಿನಮಣಿಯ ತನಯ ನಾಹವ | ಪ್ರೌಢಕರ್ಣನ ಸುತಂ ಪೆಸರೆನಗೆ ವೃಷಕೇತುವೆಂದೊಡವನಿಂತೆಂದನು ॥ ೧೮ ||
ಕರ್ಣಸುತನಾದಡೊಳ್ಳಿತು ವೀರನಹುದು ನೀಂ | ನಿರ್ಣಯಿಸಬಲ್ಲೆ ರಣರಂಗಮಂ ಮೂಢರಾಂ | ವರ್ಣಕದ ಮಾತುಗಳನರಿಯೆವೆನುತೆಚ್ಚಂ ಸುಧನ್ವನೀತನ ಸರಿಸಕೆ || ಸ್ವರ್ಣಪುಂಖದ ಕ ಣೆಗಳೊದಿದುವು ಮಿಂಚಿನ ಪೊ | ಗರ್ನಭೋಮಂಡಲವನಂಡಲೆಯಲಾಕ್ಷಣಂ | ದುರ್ನಿರೀಕ್ಷಣಮಾಗಲೆಡೆಯೊಳವನೆಲ್ಲವಂ ತರಿದಿವಂ ಕೋಲ್ಗರೆದನು||೧೯||
ಬರಸಿಡಿಲ ಭರದಿಂದೆ ಮಿಂಚಿನ ಹೊಳಹಿನಿಂದೆ | ಬಿರುಬೆಳೆಗಳೊಂದೆ ಕರ್ಣ ಜಂ ಕ ಣೆಗಳಂ | ಕರೆಯುತಿರೆ ನಡುವೆ ಖಂಡಿಸಿದಂ ಸುಧನ್ವನಾತನ ಸರಳ್ಗನೆಡೆಯೊಳು | ತರಿದಂ ವೃಷಧ್ವಜಂ ಬಳಿಕವನ ಕೋಲ್ಗಳಂ | ಬರಿಕೈದನಾ ಮರಾಳಧ್ವಜನ ಸುತನಿಂತು । ತೆರಹುಗುಡದೊರ್ವರೊರ್ವರಮೇಲೆ ಮುಳಿದು ಜರೆದೆಚ್ಚಾಡಿದರ್ ಧುರದೊಳು||೨೦||
ಕ್ಷೋಣಿಗೆ ಸುಧನ್ವ ನಾನಿರೆ ನೀಂ ಸುಧನ್ವನೇ | ಮಾಣಿಸುವೆನೀ ಪೆಸರನೀಕ್ಷಣದೊಳೆಂದು ಪೊಸ | ಪಾಣಿಯಲಗಿನ ಸರ ಳ್ಗನೆಚ್ಚು ಕರ್ಣಜಂ ಪೋರ್ಗಳನವನ ಮೈಯೊಳು || ಕಾಣಿಸೆ ಕೆರಳೆ ಲವೊ ಮೇದಿನಿಗೆ ರಿಪುಪಂಚ | ಬಾಣ ವೃಷಕೇತು ತಾನಿರಲಾಗಿ ವೃಷಕೇತು | ಮೇಣುಂಟೆ ಹೇಳೆನು ತಿವಂ ಕಣಿಗರೆದನವನ ತನುವನುಚ್ಚಳಿಸುವಂತೆ || ೨೧ ||
ಭುಗಿಭುಗಿಸೆ ಕೋಪಾಗ್ನಿ ಮೂಡಿಗೆಯ ಕೋಲ್ಕ ಳಂ | ತೆಗೆತೆಗೆದು ಕರ್ಣ ತನಯಂ ಸುಧನ್ವನ ರಥವ | ಬಗೆಬಗೆಯೊಳಮರ್ದೆಸೆವ ಛತ್ರ ಚಾಮರ ಸಿಂದ ಸೀಗುರಿ ಪತಾಕೆಗಳನು || ಮೊಗಮೊಗಿಸಿ ಮುಂಬರಿನ ಕುದುರೆ ಸಾರಥಿಗಳಂ | ಝಗಝಗಿಪ ಕವಚಮಂ ತನ್ನ ಕ ಣೆಯಂ ನಡುವೆ | ತೆಗೆತೆಗೆವ ಕೋಲ್ಗಳಂ ತರಿದವನ ಬಿಲ್ಲನಿಕ್ಕಡಿಗೈದು ಬೊಬ್ಬಿರಿದನು ا |೨೨||
ತಂದರಾಗಳೆ ಸುಧನ್ವಂಗೆ ಮಣಿಮಯದ ಮ | ತ್ತೊಂದು ರಥಮಂ ಬಳಿಕೆ ಬಿ ಲ್ವಿಡಿದು ಜೇಗೈದು | ನಿಂದು ನಿಡುಗಣೆಗಳಂ ತೆಗೆದೆಚ್ಚು ಕರ್ಣಜನ ಕೈಮೆಗಿಂಮಿಗಿಲಾಗಲು| | ಸ್ಯಂದನ ತುರಂಗ ಸಾರಥಿಗಳಂ ಕವಚಮಂ | ಸಿಂಧ ಸೀಗುರಿ ಛತ್ರಚಾಮರ ಪತಾಕೆಗಳ | ನಂದು ಕತ್ತರಿಸಿ ವೃಷಕೇತುವಿನ ಕರದ ಕೋದಂಡಮಂ ಖಂಡಿಸಿದನು | ೨೩ ||
ವಿರಥನಾದೊಡೆ ಕರ್ಣನೂನು ಕೈಗೆಡದೆ ಸಂ | ಗರದೊಳಸಿ ಮು ದ್ಗರ ಮುಸುಂಡಿ ತೋಮರ ಖಡ 1 ಪರಶು ಗದೆ ಚಕ್ರ ಡೊಂಕಣಿ ಕುಂತ ಶೂಲ ಪಟ್ಟಸ ಭಿಂಡಿವಾಳ ಶಕ್ತಿ ॥ ಸುರಗಿ ಮೊದಲಾಗಿರ್ದ ಕೈದುಗಳ ಪರಿವಿಡಿಯೊ | ಳುರವಣಿಸಿ ಪೊಯ್ದು ಸುಧನ್ವನಂ ಮತ್ತವನ | ಪೊರೆಯ ಪರಿವಾರಮಂ ನಾನಾಪ್ರಹಾರದಿಂದೈದೆ ಘಾತಿಸುತಿರ್ದನು
||೨೪||
ಇತ್ತಲಿಂತಿರಲತ್ತಲವನ ಸಾರಥಿ ಬೇಗ ! ಮತ್ತೊಂದು ರಥಮಂ ತರಲ್ಕ ದನ ಡರ್ದು ಮಸೆ| ಬೆತ್ತ ಕೂರ್ಗಣೆಗಳಂ ಕರ್ಣಜಂ ತೆಗದೆಚ್ಚೊಡಾ ಸುಧನ್ವನ ಮೈಯೊಳು || ತೆತ್ತಿಸಿದುವೆಂಬೊಡಲಿ.ಳಿಡಿದ ತನಿವೀರರಸ | ಮೊತ್ತರಿಸಿ ಮೇಲುಕ್ಕುವಂದದಿಂ ಬಸಿವ ಬಿಸಿ | ನೆತ್ತರೆಸೆದಿರೆ ಕೆರಳ್ದವನೆಚ್ಚೊಡಾ ಕೋಲ್ಗಳಂ ತರಿಯುತಿವನೆಚ್ಚನು||೨೫||
ಜೈಮಿನಿ ಭಾರತ 24
ಹನ್ನೆರಡನೆಯ ಸಂಧಿ ಮುಂದುವರಿದ ಭಾಗ
ಪದ್ಯ 26 ರಿಂದ 51
ಪಾಂಡವರ ಕಡೆಯ ವೀರರೊಂದಿಗೆ ಸುಧನ್ವನ ಕಾಳಗ
ನಿರೂಪಣೆ: ಸುಬ್ಬುಲಕ್ಷ್ಮಿ Lrphks Kolar
ಸಂಕ್ಷಿಪ್ತ ರೂಪ
ಯುದ್ಧ ಮುಂದುವರಿಯುತ್ತದೆ. ಇಬ್ಬರೂ ಸಮಬಲರಾಗಿ ಕಾದಿದರು. ಪೂರಾ ಗಾಯಗೊಂಡ ವೃಷಕೇತುವನ್ನು ಸಾರಥಿಯು ಹಿಂದಕ್ಕೆ ತರಲು ಪ್ರದ್ಯುಮ್ನನು ಯುದ್ಧಕ್ಕೆ ಎದುರಾದನು. ಅಚ್ಯುತನ ಮಗನೆಂದು ತಿಳಿಯಿತು. ಎಂಟು ದಿಕ್ಕುಗಳಿಂದಲೂ ಮುತ್ತಿದರು ಹೋರಾಟ ನಡೆಯಿತು. ಅಸಮಸಾಯಕನೆಂದುಕೊಂಡು ಪರಸ್ಪರ ಮೂದಲಿಸಿದರು. ಬರಿಯ ಹೂವಿನ ಕೋಲಲ್ಲ ಬಾಣಗಳೆಂದರೆ ಎನ್ನುತ್ತ ಪ್ರದ್ಯುಮ್ನ ಬಾಣಗಳ ಬಿರುಮಳೆಗೈಯ್ದನು. ಅದನ್ನು ಎದುರಿಸಿದ ಸುಧನ್ವ ಅದಕ್ಕೆ ಮಿಗಿಲಾಗಿ ಶರಗಳ ಮಳೆ ಸುರಿಸಿ ಇವನ ಬಿಲ್ಲನ್ನು ಏಳು ತುಂಡುಗಳಾಗಿ ಕತ್ತರಿಸಿದನು. ಕೃತವರ್ಮನು ಮುಂದುವರಿದು ಬಂದನು. ಮತ್ತೆ ಭಯಂಕರ ಯುದ್ಧವಾಯಿತು. ಹತ್ತು, ಇಪ್ಪತ್ತು ಬಾಣಗಳಿಂದ ಸರ್ವಾಂಗಗಳೂ ನೊಂದವು.ಕುದುರೆಗಳ ಕಾಲುಗಳನ್ನು ಕಡಿಯಲು ಕೃತವರ್ಮನ ಸಹಾಯಕ್ಕೆ ಅನುಸಾಲ್ವನು ಎದುರಾದನು.
ಅವನ ಪರಾಕ್ರಮದ ಇದಿರು ಸುಧನ್ವನ ಸೈನ್ಯ ನುಗ್ಗಾಯಿತು. ರಥಗಳು ಮುರಿದವು. ಆದರೆ ಸುಧನ್ವನು ಧರ್ಮರಾಜನನ್ನುನೋಡುವ ಆಸೆಯನ್ನು ಹೇಳುತ್ತ ಮತ್ತೆ ಬಹಳ ಶೌರ್ಯದಿಂದ ಕಾದಿದನು. ಇಲ್ಲಿ ಒಡನೊಡನೆ, ಕಡಿಕಡಿದು, ಘುಡುಘುಡಿಸಿ ಮುಂತಾದ ಪದಗಳು ವೀರರಸಕ್ಕೆ ಸಾಕ್ಷಿ.ಒಂದು ಹಂತದಲ್ಲಿ ಬಾಣಗಳ ಮಳೆಗೆ ಮೈಯೆಲ್ಲ ನೆತ್ತರು ಸೋರಿ ಸುಧನ್ವ ಎಚ್ಚರ ತಪ್ಪಿದನು. ಆ ಸಮಯದಲ್ಲಿ ಸುಧನ್ವನ ಸೈನ್ಯವನ್ನು ಬಗ್ಗುಬಡಿದನು.
ಎಚ್ಚರ ತಿಳಿದೆದ್ದ ಸುಧನ್ವನು ಕಡುಕೋಪದಿಂದ ಸಾಲ್ವನ ತನುಜನ ಮೇಲೆ ಹರಿಹಾಯ್ದನು. ಅವನ ಪ್ರತಾಪದಲ್ಲಿ ಈಗ ಇವನು ಎಚ್ಚರತಪ್ಪಿದನು. ರಕ್ತದ ಹೊಳೆ ಹರಿಯಿತು. ರುಂಡಗಳು ಮುಂಡಗಳು ಚೆಲ್ಲಾಡಿದವು. ರಣರಂಗವು ಹದ್ದು ತೋಳ ಮುಂತಾದ ಪ್ರಾಣಿಪಕ್ಷಿಗಳಿಗೆ ಆಹಾರವಾಯಿತು. ಮರುಳುಗಳು ಕುಣಿದವು.
ಸಾತ್ಯಕಿಯು ಸುಧನ್ವನ ಕಡೆಗೆ ತನ್ನ ಸೈನ್ಯವನ್ನು ನಡೆಸಿದನು. ಅವನು ಮಹಾ ಪರಾಕ್ರಮಿ. ಯುದ್ಧ ನಡೆಯಿತು. ಮೂವತ್ತು ಬಾಣಗಳಿಂದ ಸುಧನ್ಬನನ್ನು ನೋಯಿಸಿದನು. ಅವನು ಮೂವತ್ತೈದು ಬಾಣಗಳನ್ನು ಪ್ರತಿಯಾಗಿ ಬಳಸಿದನು. ಇಬ್ಬರ ರಥಗಳೂ ಮುರಿದವು.
ನಿಂತು ಕಾದಿದರು. ವಿವಿಧ ಆಯುಧಗಳಿಂದ ಕಾದಿದರು. ಹೊಸ ರಥಗಳನ್ನು ಹತ್ತಿ ಮತ್ತೆ ಕಾದಿದರು. ಪರಸ್ಪರ ಸಮಬಲರಾಗಿ ಕಾದಿದರು. ಎರಡೂ ಕಡೆಯ ಸೈನ್ಯದೊಂದಿಗೆ ಕಾದಿದರು.ಕೊನೆಗೆ ಅತ್ಯಂತ ಉಗ್ರವಾಗಿ ಸುಧನ್ವನು ಸಾತ್ಯಕಿಯನ್ನು ಹೆಚ್ಚಿನ ಶರಗಳಿಂದ ಗಾಯಗೊಳಿಸಿದನು. ಕರ್ಣತನಯ, ಪ್ರದ್ಯುಮ್ನ, ಕೃತವರ್ಮ, ಅನುಸಾಲ್ವ, ಸಾತ್ಯಕಿ ಇವರೆಲ್ಲರ ಪರಾಭವವನ್ನು ಕಂಡ ಅರ್ಜುನ ಕೋಪದಿಂದ ಕೂಡಿ ತಾನೇ ರಣರಂಗಕ್ಕೆ ಹೊರಟನು. ರಥಕ್ಕೆ ಕುದುರೆಗಳನ್ನು ಹೂಡಿ ಅವುಗಳನ್ನು ನೇವರಿಸಿ ತಾನು ಕವಚ ಧರಿಸಿ ಸಿದ್ಧನಾಗಿ ಧ್ವಜದ ಹನುಮಂತನಿಗೆ ನಮಿಸಿ ವಿವಿಧ ವಾದ್ಯಗಳ ಕಲಕಲದೊಂದಿಗೆ ರಥವನ್ನು ಏರಿ ಹೊರಟನು.
ಹನ್ನೆರಡನೆಯ ಸಂಧಿ ಕೊನೆಯ ಭಾಗ
ಪದ್ಯ 26 ರಿಂದ 51
ನಭಕುಪ್ಪರಿಸಿ ನೆಲಕೆ ಪಾ ಯ್ದೆಡಬಲಕೆ ಮುರಿದು | ರಭಸದಿಂದಾರ್ದೊವರ್ವರೊರ್ವರಂ ಮಾರ್ದೊದಗಿ | ವಿಭವದಿಂದಖಿಳ ಶಸ್ತ್ರಾಸ್ತ್ರದಿಂ ಸಮ ವಿಷಮ ಸೋಲು ಗೆಲುವುಗಳಿಲ್ಲದೆ || ತ್ರಿಭುವನಕೆ ರಣರಂಗದೊಳ್ ಸುಭಟ ನರ್ತನವ | ನಭಿನಯಿಸುವಂತೆ ಲಾಘವ ದೃಷ್ಟಿ ಮುಷ್ಟಿಗಳೊ ! ಳುಭಯವೀರರ್ ಖತಿಯೊಳೆಚ್ಚಾಡಿದರ್ ಕರ್ಣನಂದನ ಸುಧನ್ವರಂದು ॥೨೬||
ಒತ್ತುವರಿಸುವರೆಚ್ಚ ಕ ಣೆಗಳಂ ಕಣೆಗಳಿಂ | ಕತ್ತರಿಸಿ ಮತ್ತುವರೊಡಲೊಳಂಬನ ಬನುರೆ | ಕಿತ್ತು ಬಿಸುಡುವರಸೃಗ್ವಾರಿಯಂ ವಾರಿಯಂ ತೊಳೆದೊಡನೆ ಕವಳಗೊಂಡು || ಮತ್ತೆ ಕೈಗೆಡದೆಚ್ಚು ಬೊಬ್ಬಿರಿವರೀತೆರದೊ | ಳಿತ್ತಂಡದಗ್ಗಳಿಕೆ ಸಮವಾಗೆ ಖತಿಯೊಳೊಂ । ಬತ್ತು ನಾರಾಚದಿಂದಾ ಸುಧನ್ವಂ ಕರ್ಣ ತ ನಯನಂ ಘಾತಿಸಿದನು||೨೭||
ರಾಯ ಕೇಳಾಗ ಪೂರಾಯ ಗಾಯದೊಳ ಸ್ರ | ತೋಯದಿಂದವಯವಂ ತೋಯಲಳವಳಿದು ರಾ | ಧೇಯಜಂ ಬಹಳಬಾಧೇಯನಾಗಲ್ಕವನ ಸಾರಥಿ ರಥವ ತಿರುಗಿಸೆ | ಜೇಯನೇರಿಸಿ ಬಿಲ್ಲ ಜೇಯ ಹರಿಸೂನು ಸಹ । ನಾಯತಿಕೆಯಿಂದ ನಿಜಸಾಯಕವನುಗಿಯುತಡ | ಹಾಯಿದಂ ಕರೆಕೊಳ್ ಸಹಾಯಿಗಳನೆನುತ ಕಡುಗಲಿ ಸುಧನ್ವನ ಸರಿಸಕೆ |೨೮||
ಅರಿದನಚ್ಯುತನಸುತನೆಂಬುದಂ ಟೆಕ್ಕೆಯದ | ಕುರುಪಿಂದೆ ನುಡಿದನವನಿಲ್ಲಿ ನಿನಗಬಲೆಯರ | ಮರೆಯಿಲ್ಲ ನಿನ್ನಿ ಸುಗೆಗಳುಕ ವರದಾರೆನುತ ಕಲಿಸುಧನ್ವಂ ಕಣೆಗಳ | ಬಿರುವಳೆಗರೆಯಲೆಡೆಯೊಳರಿದೆಲವೊ ಸಂಗರದೊ | ಳುರುವ ಜಯವದು ತನ್ನ ಭುಜದೊಳಿಹಳೆನುತೆ ಕೆಂ | ಗರಿಯ ಬಾಣಂಗಳು ಮುಸುಕಿದಂ ಪ್ರದ್ಯುಮ್ನ ನವನ ರಥದೆಣ್ದೆಸೆಯೊಳು ||೨೯|
ಅಸಮಸಾಯಕನೆಂದು ಬಣ್ಣಿಪರ್ ನಿನ್ನ ನಿ | ದಸಮನಾಯಕ ನಾನೊ ನೀನೊ ನೋಡೆನುತ ಪೊಸ | ಮನೆಯ ತಿಖರಗಳಿಂ ಸುರಿದಂ ಸುಧನ್ವನಾತನ ಕಣೆಗಳಂ ಖಂಡಿಸಿ || ವಸುಮತಿಗೆ ವೀರ ನೀನಸಮಸಾಯಕನಾದೊ | ಡುಸಿರೆನಗೆ ಸಮನಾಯಕರದಾರ್ ತ್ರಿಲೋಕದೊಳ್ | ಪುಸಿಯಬೇಡೆನುತ ಕೂರಂಬುಗಳನಂಬರಕೆ ತುಂಬಿದಂ ಶಂಬರಾರಿ||೩೦||
ಬರಿಯ ಪೂಗೋಲಿಸುಗೆಯಲ್ಲದಾಹವದೊಳು | ಕಿರುದು ಶರಸಂಧಾನಮುಂಟಲಾ ನಿನಗೆಂದು | ಜರೆದೆಂಟು ಬಾಣದಿಂದೆಚ್ಚಂ ಸುಧನ್ವನಾತನ ಕೋಳಂ ಸೈರಿಸಿ | |ಬಿರುಸರಳ ಸಾರದಿಂದವನ ಸರ್ವಾಂಗಮಂ | ತುರುಗಿದಂ ಕವಚ ಸೀಸಕ ಬಾಹುರಕ್ಷೆಗಳ | ಬಿರಿವಿನಿಂ ಕೆನ್ನೀರ್ಗಳೊರೆವಿನಂ ನೊಂದು ಮೈಮರೆವಿನಂ ಪ್ರದ್ಯುಮ್ನನು |೩೧||
ಕೃಷ್ಣ ಸುತನೆಂದಿನ್ನೆಗಂ ಸ್ಮೈರಿಸಿದೊಡೆ ನೀ | ನುಷ್ಣಮುಳ್ಳವನಾದೆ ತನ್ನ ಬಾಣಾವಳಿಯ | ತೃಷ್ಣೆ ಗರುಣಾಂಬುವಂ ನಿನ್ನೊಡಲೊಳೂಡಿಸದೆ ಬಿಡುವೆನೇ ಮೇಣಸುವನು || ಮುಷ್ಣ ಮಂ ಮಾಡಿಸದೆ ಮಾಪೆನೆ ಸಾಕಿನ್ನು | ಜಿಷ್ಣು ವಂ ಕರೆಸು ತೊಲಗೆನುತೊಂದುಸರಳಿಂದ | ವೃಷ್ಣಿ ಕುಲತಿಲಕನ ಕುಮಾರಕನ ಧನುವನೇಳ್ತುಂಡಾಗಿ ಖಂಡಿಸಿದನು||೩೨||
ಬಿಲ್ಮುರಿಯೆ ಕಾರ್ಷ್ಣಿ ಕಡುಗೋಪದಿಂದಾಕ್ಷಣಂ | ಪಲ್ಮೊರೆಯುತಸಿಫಲಗೆವಿಡಿದವನ ಮೇಲೆ ನಡೆ | ಯಲ್ಮುಂದಕಡಹಾಯ್ದ ನರಿಯಲಾ ರಿಪುರೌದ್ರಕರ್ಮ ಕೃತವರ್ಮಕನನು || ಬ ಬಲ್ಮೆ ಯುಳ್ಳವನಹೆ ವೃಷಧ್ವಜ ಪ್ರದ್ಯುಮ್ನ | ರೊಲ್ಮ ಹಾವೀರರಿಲ್ಲವೆರೊಳ್ ಪೊಣರ್ದೆ ನೀಂ । ನಿಲ್ಮದೀಯಾನ ವಿಸ್ತಾರಮಂ ನೋಡೆನುತ ತೆಗೆದೆಚ್ಚು ಬೊಬ್ಬಿರಿದನು||೩೩||
ಲೇಸಾದುದಖಿಳ ಯಾದವರೊಳಗೆ ಕೃತವರ್ಮ | ನೇ ಸಮರ್ಥ೦ ಕಾಣಬಹುದು ಕಾಳಗದೊಳೆನು | ತಾ ಸುಧನ್ವಂ ತೆಗೆದಿಸ ಲ್ಕವನ ಕಣೆಗಳಂ ಕಡಿದಿವಂ ಮಗುಳೆಸ್ಕೊಡೆ || ಆ ಸರಳಳವನಂ ತರಿದು ಹತ್ತಂಬಿನಿಂ | ಗಾಸಿಮಾಡಿದೊಡಿವಂ ಪದಿನೈದು ಮಾರ್ಗಣದೊ | ಲೋಸರಿಸದವನ ಸರ್ವಾಂಗಮಂ ಕೀಲಿಸಿದನರುಣಜಲದೊರತೆ ಮನಗೆ ॥೩೪||
ಹಾರ್ದಿಕ್ಯನಿಸುಗೆಯಿಂದುರೆ ನೊಂದು ಕೋಪದಿಂ | ದಾರ್ದಾ ಸುಧನ್ವನಿಪ್ಪತ್ತು ನಾಲ್ಕಂಬಿನಿಂ | ತೇರ್ದೆಗೆವ ಕುದುರೆಗಳ ಕಾಲ್ಗಳಂ ಗಾಲಿಗಳ ಕೀಲ್ಗಳಂ ಮೂಡಿಗೆಯನು ॥ ಮೀರ್ದಿಸುವ ಚಾಪಮಂ ಸಾರಥಿಯ ಕರಮಂ ಕ್ಷ ಣಾರ್ಧದೊಳ್ ಕಡಿಯೆ ಕೃತವರ್ಮನಳವಳಿದು ಕೆಲ | ಸಾರ್ದೊಡಾ ಪದದೊಳನುಸಾಲ್ವದಿರಾದನತಿವೇಗದಿಂದಿವನ ರಥಕೆ ॥೩೫||
ಸಾಾ ಲ್ವಾನುಜಂ ಕಣಾ ತಾನೆನ್ನೊಳಾಹವಕೆ | ಮೇಲ್ಪಾಡನುಪಮ ಸುರೇಂದ್ರನ ಪರಾಕ್ರಮಕೆ | ಸೋಲ್ವೊನೇ ತನ್ನೊಳ್ ಪೊಣರ್ದು ಸಾಯದೆ ಧರ್ಮರಾಜನವರಂ ಕಾಣ್ಬುದು || ತೇಲ್ವುದು ರಣಾಗ್ರದಿಂದಲ್ಲದೊಡುಳುಹೆನೆನುತ | ಕ ಕೋಲ್ಮಳೆಗರೆದನವಂ ಪ್ರಳಯಜೀಮೂತಮಂ | ಪೋಲ್ವನಂ ಮುಸುಕಿತು ಸುಧನ್ವನ ವರೂಥಮಂ ಬಹುಲತರಯೂಧಮಂ ದು||೩೬|
ಬಲ್ಲೆ ನನುಸಾಲ್ವನೆಂದಳವಿಯಂ ಬಿಟ್ಟೊಡಾಂ | ಬಿಲ್ಲಾಳೆ ಪೇಳ್ ಧರ್ಮರಾಜನವರಂ ಕಾಣ್ಬ | ನಲ್ಲ ಕಾಣಿಸುವೆನೀಗಳೆ ಧರ್ಮರಾಜನವರಂ ತರಹರಿಸು ನಿನ್ನನು | ಎಲ್ಲ ತೋರಿಸು ವಜ್ರಿಗಸದಳದ ಬಲ್ಮೆಯಂ | ಕೊಲ್ಲಬೇಕಾದೊಡಿದ್ದ ಪೆನೆನುತ ಕೋಲ್ಗಳಂ | ಚೆಲ್ಲಿದಂ ಹಂಸಧ್ವಜನ ಸುತಂ ಕಾಶಿರಾಜನ ಸುತಂ ಗಾಸಿಯಾಗೆ||೩೭||
ಫಡಫಡೆಲವೆಲವೊ ತೊಲತೊಲಗೆನುತೆ ರೋಷದಿಂ । ಫುಡಿಫುಡಿಸಿ ತೌರಿಡುವ ಕಾಯದಿಂದನುಸಾಲ್ವ | ನೊಡನೊಡನೆ ಪೊಳೆಪೊಳೆವ ಪೊ ರಮಸೆಯ ನಿಡುನಿಡುಸರಳ್ಗಳಂ ತೆಗೆದಿಸುತಿರೆ || ಎಡೆಯೆಡೆಯೊಳಡಿಗಡಿಗೆ ಹಂಸಧ್ವಜಾತ್ಮಜಂ | ಕಡಿಕಡಿದು ಮೀರಿದ ಪರಾಕ್ರಮದೊಳಸುರನಂ | ಬಿಡಬಿಡದೆ ಘಾತಿಸಿದನಿಪ್ಪತ್ತು ಬಾಣದಿಂ ಬಿಸಿಬಿಸಿಯ ನೆತ್ತರೊಸರೆ||೩೮||
ಮತ್ತೆ ಕಿಡಿಯಿಡೆ ಕೋಪಮನುಸಾಲ್ವನಬ್ದಿಯಂ | ತುತ್ತುಗೊಳ್ವುರಿಗೆ ಸರಿಯಾದೊಂದು ಬಾಣಮಂ | ಕಿತ್ತು ಹೂಡಿದನಿದಂ ತರಹರಿಸಿಕೊಳ್ಳೆನುತ ತೆಗೆದೆಚ್ಚು ಬೊಬ್ಬಿರಿಯಲು | ಕತ್ತರಿಸುವೆಡೆಗಣೆಗಳಂ ಮೀರಿ ನಡುವೆದೆಯ | ನುತ್ತರಿಸಿ ಕೋಲತ್ತಲಡಗಿತವನಿಯೊಳಾಗ | ಪುತ್ತುವುಗುವಹಿಯಂತೆ ಬಳಿಕ ಮೈಮರೆದಂ ಸುಧನ್ವನದನೇ ವೇಳ್ವೆನು ||೩ ೯||
ಎಲೆಲೆ ಕವಿಕವಿಯೆನುತವನ ಬಲಂ ಕಂಡು ಸಂ | ಕಲೆಗಡಿದ ಮುಗಿಲಂತಿವನ ಮೇಲೆ ಕೈದುಗಳ | ಮಳೆಗರೆಯುತ್ತಿಟ್ಟಣಿಸಿ ನೂಕಲನುಸಾಲ್ವನಂ ಕನಲ್ದು ಜಗದಳಿವಿದೆಂದು || ಸುಳಿವ ಬಿರುಗಾಳಿಯಂ ಸೋಲಿಸುವ ನಿಡುಸರ | ಳ್ಗಳ ಗರಿಯ ಭರದನಿಲಘಾತದಿಂ ಬಯಲಾದು | ದಳವಿಯೆನಲಿಸುಗೆಯಂ ಕೈಕೊಂಡು ಸವರಿದಂ ಬಂದ ರಿಫುಮೋಹರವನು ||೪೦|
ಕಂದೆರೆದು ಕಂಡಂ ಸುಧನ್ವಂ ಬಳಿಕ ಖಾತಿ | ಯಿಂದೆ ಕೋದಂಡಮಂ ಕೊಂಡೆಲವೊ ಕಲಿಯಾಗಿ | ನಿಂದಿದಂ ಸೈರಿಸಿದೆಯಾದೊಡಿನ್ನಿಸುವುದಿಲ್ಲಾವು ಹೋಗೆನುತೆ ಹೆದೆಗೆ | ಒಂದು ಸರಳಂ ಪೂಡಿ ಕಿವಿವರೆಗೆ ತೆಗೆದೊ । ಡಂದು ಸಾಲ್ವಾನುಜನ ಪೇರುರವನುಚ್ಚಳಿಸೆ | ನೊಂದಿಳೆಗುರುಳ್ದನಾದುದು ಮೂರ್ಛೆಪೊಕ್ಕನುರವಣಿಸಿ ಪಾರ್ಥನ ಪಡೆಯನು ||೪೧||
ಪೂ ಣೆಹೊಕ್ಕವನಿಸುವ ಬಾಣಂಗಳಂಭಟರ | ಗೋಣನರಿದುಚ್ಚಳಿಸೆ ಮಾಣದೆ ಗಗನಕೇಳ್ವ । ಶೋಣಿತದ ಧಾರೆಗಳ್ ಶೋಣಾದ್ರದಂತಿರಲ್ ಪ್ರಾಣಿಗಳ ದೃಷ್ಟಿಗಳ್ಗೆ|| ಕಾಣಿಸಿದುವಾಲಿಸೈ ಕ್ಷೋಣಿಪ ಸುಧನ್ವನ | ಕ್ಷೀಣವಿಕ್ರಮಶಿಖಿಯ ಚೂಣಿಯ ಮಹಾಜ್ವಾಲೆ | ಕೇಣಿಗೊಂಡರಿಬಲಶ್ರೇಣಿಯೆಂಬೊಂದೆಡವಿದಾಣವಂ ಹೊಕ್ಕಂತಿರೆ.||೪೨||
ಸಂದಣಿಸಿ ದಂತಿಗಳ ಘಟೆಗಳೊತ್ತರಿಸಿ | ಸಂದಣಿಸಿದಂ ಸರಳ ಸಾರದಿಂ ಕೆಡಹಿದಂ ಕೊಂದನುರವಣಿಸಿ ಕಾಲಾ ಲ್ಗಳಂ ಮುಳಿದು ಬಳಿಕೊಂದನುಳಿಯದೆ ರಣದೊಳು || ಬಂದ ವಾಜಿಗಳ ನಾನಳವಿಯೊಳ್ ಕಾ ಣೆವೆಂ | ಬಂದವಾಗಲ್ಕೆ ತಡೆಗಡಿದು ಮೆದೆಗೆಡಸಿದಂ | ಮುಂದಿಟ್ಟಣಿಸಿ ಬಿದ್ದುದಾಗ ರಥಿಕವಾತಮುಂ ದಿಟ್ಟನಿಸುಗೆಯಿಂದ ||೪೩||
ಕೆಡೆದೊಡಲ ಸೀಳಿಂದೆ ಕಡಿವಡೆದ ತೋಳಿಂದೆ | ತೊಡೆಮಡ ದ ತುಂಡಿಂದೆ ನೆಣವಸೆಯ ಜೊಂಡಿಂದೆ 1 ಬಿಡುವಿ ದುಳ ತುಂಡದಿಂ ತಂಡದಿಂ ರುಂಡದಿಂ ಮುಂಡದಿಂ ಖಂಡದಿಂದೆ || ಅಡಗುಗಳ ತಿರುಳಿಂದೆ ನಿಡುನರದ ಕರುಳಿಂದೆ | ಕಡಲಿಡುವ ನೆತ್ತರಿಂದೆಡವಿಡದೆ ಸತ್ತರಿಂ | ದಿಡಿದಿರ್ದುದಾ ರಣದಲೋರಣದ ಮಾರಣದ ಕಾರಣದ ಪೂರಣದೊಳು |೪೪|
ಕಾಕ ಬಕ ಗೃಧ್ರ ಗೋಮಾಯು ಸಂತತಿಗಳಿಂ | ಡಾಕಿನಿ ಪಿಶಾಚ ವೇತಾಳ ಭೂತಂಗಳಿಂ । ಭೀಕರದೊಳಂಜಿಸಿದುವಾರ್ದು ರಿಂಗಣಗುಣಿವ ಕಲಿಗಳ ಕಪಾಲಂಗಳು || ಲೋಕದಖಿಳ ಪ್ರಾಣಿಗಳನುಂಡಜೀರ್ತಿಯಿಂ ದೋಕರಿಸಿದನೊ ಕಾಲನೆಂಬಿನಂ ಕ ಣ್ಗೆ ಸೆದು | ದಾಕಳಂ ರೌಕುಳದ ಮಾಂಸ ಕರ್ದಮ ರುಧಿರ ನೆಣವಸೆ ಮಿದುಳ್ಗಳಿಂದ ॥೪೫||
ನೋಡಿದಂ ಸಾತ್ಯಕಿ ಸುಧನ್ವನಾಟೋಪಮಂ | ಮಾಡಿದಂ ಬದ್ಧ ಭ್ರುಕುಟಿಯಿಂದೆ ಕೋಪಮಂ | ತೀಡಿದಂ ತಿರುವನೇರಿಸಿ ಮಿಡಿದು ಚಾಪಮಂ ತಾಗಿದನವನ ರಥವನು || ಆಡಿದಂ ನಿಜನಾಮಧೇಯ ಪ್ರತಾಪಮಂ | ಪೂಡಿದಂ ತೆಗೆದಂಬನೆಚ್ಚಂ ಯಮೋಪಮಂ | ತೋಡಿದಂ ಮೂವತ್ತು ಬಾಣದಿಂ ತಾಪಮಂಕುರಿಸುವಂತವನೊಡಲೊಳು ॥೪೬॥
ಗಾಯವಡೆದೆಕ್ಕಲನ ತೆರದಿಂ ಕೆರಳು ಶೈ | ನೇಯನಂ ಮಗುಳೆ ಮೂವತ್ತೈದು ಕೋಲ್ಗಳಿಂ | ನೋಯಿಸಿದನಾ ಸುಧನ್ವಂ ಬಳಿಕ ಸಾತ್ಯಕಿ ಸಹಸ್ರ ಸಂಖ್ಯಾಕಮಾದ | ಸಾಯಕದೊಳಾತನ ವರೂಥ ಹಯ ಸಾರಥಿ ಯು | ಗಾಯತ ಧ್ವಜ ಛತ್ರ ಚಮರಮಂ ತರಿದೊಡವ | ನೀ ಯಾದವನ ತೇರನುರೆ ಮುರಿಯಲಿರ್ವರುಂ ವಿರಥರಾದರ್ ಧುರದೊಳು॥೪೭॥
ನಿಂದು ಕಾದಿದರೊಮ್ಮೆ ಕೈದುಕೈದುಗಳೊಳ್ಳೈ | ತಂದು ಕಾದಿದರೊಮ್ಮೆ ಮತ್ತೆ ಪೊಸತೇರ್ಗಳಿಂ | ಬಂದು ಕಾದಿದರೊಮ್ಮೆ ಕೂಡೆ ತಮತಮಗೊದಗಿದೆಡಬಲದ ಪಡಿಬಲವನು | ಕೊಂದು ಕಾದಿದರೊಮ್ಮೆ ತರತರದ ಹತಿಗಳಿಂ | ನೊಂದು ಕಾದಿದರೊಮ್ಮೆ ಚಳಚಳಿಕೆಯಿಂದ ಸಲೆ | ಸಂದು ಕಾದಿದರೊಮ್ಮೆ ಸಾತ್ಯಕಿಸುಧ ನ್ವರೋರೋರ್ವರ್ಗೆ ಸರಿಮಿಗಿಲೆನೆ||೪೮||
ಬವರಮಿರ್ವರ್ಗೆ ಸರಿಯಾಗೆ ಕಡುಗೋಪದಿಂ | ದವಗಡಿಸಿದಂ ಸುಧನ್ವಂ ಬಳಿಕ ಸಾತ್ಯಕಿಯ | ಸವಗ ಸೀಸಕ ಬಾಣ ಬತ್ತಳಿಕೆ ಸಿಂಧ ಸೀಗುರಿ ಛತ್ರಚಾಮರವನು || ಸವರಿ ಸಾರಧಿ ಹಯ ವರೂಥ ಯುಗಚಕ್ರಮಂ | ಕವಲಂಬುಗಳೊಳೆಚ್ಚು ಕತ್ತರಿಸಿ ಕರದ ಚಾ | ಪವನೈದು ಕಡಿಯಾಗಿ ಮಾಡಿ ಪೇರುರಕೆ ಮೊನೆಗ ಣೆಗಳಂ ಮೋಹಿಸಿದನು ||೪೯||
ಸತ್ಯಕಸುತಂಗೆ ಪರಿಭವಮಾಗೆ ಭುಜಬಲದೊ| ಳತ್ಯಧಿಕಯೌವನಾಶ್ವಾಸಿತಧ್ವಜಗದಾ | ದಿತ್ಯಭವನೂನು ಶಠ ನಿಶಠ ಕೃತವರ್ಮ ಸಾಂಬಾನುಸಾಲ್ವ ಪ್ರಮುಖರು || ಪ್ರತ್ಯೇಕವೀರರಿವರೆಲ್ಲರುಂ ಪಡೆಸಹಿತ । ಸತ್ಯ ವಿಕ್ರಮ ಸುಧನ್ವನ ಸಮ್ಮುಖಕೆ ನಡೆವ | ಕೃತ್ಯಮಂ ಕಂಡರ್ಜುನಂ ಕೋಪದಿಂದ ಕಾಳಗಕೆ ತಾನನುವಾದನು||೫೦||
ಮುಂಜೆರಗನಳವಡಿಸಿ ವೀರಪಳಿಯಂ ಬಿಗಿದು | ರಂಜಿಪ ತನುತ್ರ ಸೀಸಕವನಾಂತಮರಗಣ | ಕಂಜಳಿಯನೆತ್ತಿ ಪಳವಿಗೆಯ ಹನುಮಂಗೆರಗಿ ಬಲವಂದು ಮಣಿರಥವನು || ಮಂಜುಳಹಯಂಗಳಂ ಬ ಬೋಳೈಸಿ ಮಣಿದು ತೇ | ರಂ ಜಯನಿನಾದದಿಂದೇರಿದಂ ಸಮರಕೆ ಧ | ನಂಜಯಂ ಧ್ಯಾನಿನುತ ಮನದೊಳಗೆ ದೇವಪುರನಿಲಯ ಲಕ್ಷ್ಮೀಪತಿಯನು |॥೫೧||
ಜೈಮಿನಿ ಭಾರತ 25
ಹದಿಮೂರನೆಯ ಸಂಧಿ ಮೊದಲ ಭಾಗ
ಪದ್ಯ 1 ರಿಂದ 20
ಸುಧನ್ವ ಅರ್ಜುನರ ಕಾಳಗ
ಸಂಕ್ಷಿಪ್ತ ರೂಪ
ಅರ್ಜುನನು ಭರದಿಂದ ರಣರಂಗಕ್ಕೆ ಹೊರಟನು. ಸಿಡಿಲ ಘರ್ಜನೆಯಂತೆ ಅವನ ಸೈನ್ಯದ ಸದ್ದು ಆಕಾಶ ಮುಟ್ಟಿತು. ಕುದುರೆಗಳ ಖುರಪುಟ ಧ್ವನಿ, ದೇವದತ್ತ ಶಂಖದ ನಿನಾದ, ಹನುಮನ ಆರ್ಭಟ, ಗಾಂಡೀವದ ಝೇಂಕಾರ ಎಲ್ಲವೂ ಸೇರಿ ಭೀಕರವಾಗಿ ದಿವಿಜರೆಲ್ಲರೂ ಆಕಾಶದಲ್ಲಿ ನೆರೆದರು.
ಸುಧನ್ವನು ಇವನನ್ನು ಎದುರಿಸಿದನು. ಏಕೆ ನಮ್ಮೊಡನೆ ಕಲಹಕ್ಕೆ ಬಂದಿರುವೆ? ದೇವ ದೈತ್ಯ ಮಾನವರಲ್ಲಿ ನನ್ನನ್ನು ಎದುರಿಸಿ ಗೆದ್ದವರುಂಟೆ? ಕರ್ಣ, ದ್ರೋಣ ಭೀಷ್ಮ, ಮದ್ರ ಮುಂತಾದವರನ್ನು ಸೋಲಿಸಿದವನಲ್ಲವೆ? ಮರುಳು ನಿನಗೆ. ಹೋಗು ಎಂದು ಪಾರ್ಥನು ಜರಿದನು.
ಅದಕ್ಕೆ ಸುಧನ್ವನು ಸಾರಥಿಯ ನೆರವಿನಿಂದ ಅದೆಲ್ಲವೂ ಸಾಧ್ಯವಾಯಿತು. ಅದನ್ನು ಮರೆಯದಿರು. ಎಂದು ಹೇಳಿ ಅರ್ಜುನನ ರಥವನ್ನು ತಿರ್ರನೆ ತಿರುಗಿಸಿದನು. ಅದನ್ನು ಮೆಚ್ಚಿದ ಅರ್ಜುನನು ನೀನು ಇನ್ನೂ ತರಳ. ನಿನ್ನ ತಂದೆಯನ್ನು ಕಳಿಸು. ಸುಮ್ಮನೆ ಏಕೆ ಬಳಲುವೆತೆಂದನು. ಅದಕ್ಕೆ ಸುಧನ್ವನು ನಳಿನನಾಭನ ಸಹಾಯವಿಲ್ಲದೆ ಇರುವ ನಿನಗೆ ಹೆದರಿ ನಾನು ಕುದುರೆಯನ್ನು ಬಿಡುವವನಲ್ಲ. ವಾಪಸಾಗು. ನನ್ನ ತಂದೆ ಯಾಗವನ್ನು ಮಾಡುವನು. ಸಾಧ್ಯವಾದರೆ ಅವನನ್ನು ಎದುರಿಸು ಎಂದು ಮೂದಲಿಸುತ್ತ ಬಾಣಗಳನ್ನು ಬಿಟ್ಟನು.
ಈ ಬಿಲ್ಲು, ಈ ಬಾಣ, ಈ ಧ್ವಜ, ಈ ರಥ, ಈ ಕುದುರೆಗಳು ನಿನ್ನನ್ನು ಜಯಿಸದಿದ್ದರೆ ಏಕೆ ಎನ್ನುತ್ತೆದುರಿಸಲು ಏಳುನೂರು ಬಾಣಗಳಿಂದ ಸುಧನ್ವನು ಅರ್ಜುನನನ್ನು ನೋಯಿಸಿದನು.ಎಲ್ಲಾ ಇರಬಹುದು ಆದರೆ ಕೃಷ್ಣನಿಲ್ಲ ಎಂದು ಮತ್ತೆ ಮತ್ತೆ ಮೂದಲಿಸಿದನು.
ಪಾರ್ಥನು ಕೋಪಗೊಂಡು ಆಗ್ನೇಯಾಸ್ತ್ರವನ್ನು ಪ್ರಯೋಗಿಸಲು ಎಲ್ಲೆಡೆಯೂ ಬೆಂಕಿಯ ಝಳ ತಗುಲಿತು. ಅದಕ್ಕೆ ಪ್ರತಿಯಾಗಿ ಸುಧನ್ವನು ವರುಣಾಸ್ತ್ರ ಪ್ರಯೋಗ ಮಾಡಿದಾಗ ಎಲ್ಲ ನೀರಿನಲ್ಲಿ ನೆನೆದರು. ಬೆಂಕಿ ನಂದಿತು. ಅದನ್ನು ಹೋಗಿಸಲು ವಾಯುವ್ಯಾಸ್ತ್ರದ ಬಳಕೆ, ಇಂದ್ರಾಸ್ತ್ರ, ಕೊನೆಗೆ ಬ್ರಹ್ಮಾಸ್ತ್ರದ ಪ್ರಯೋಗವೂ ನಡೆಯಿತು. ಸುಧನ್ವನೂ ಪ್ರತಿಯಾಗಿ ಬ್ರಹ್ಮಾಸ್ತ್ರವನ್ನು ಬಳಸಿದನು. ಇವನನ್ನು ಗೆಲ್ಲುವ ಬಗೆ ಯಾವುದೆಂದು ಅರ್ಜುನನು ಚಿಂತಿಸಿದನು.ಅಕ್ಷಯಾಸ್ತ್ರವನ್ನು ಬಳಸಿ ಸುಧನ್ವನ ರಥ, ಸೇನೆ ಎಲ್ಲವನ್ನೂ ಮುಚ್ಚಿದನು. ಸುಧನ್ವನ ಶರಗಳೂ ಬಂದು ಇವನನ್ನು ಮುಚ್ಚಿದುವು. ಕವಚಗಳು ಬಿಚ್ಚಿದವು. ಈಶ್ವರನೊಂದಿಗೆ ಕಾದಿದ ಪರಾಕ್ರಮ, ನಿವಾತಕವಚರೊಂದಿಗೆ ಯುದ್ಧ, ಭೀಷ್ಮ, ದ್ರೋಣ ಕರ್ಣರೊಡನೆ ನಡೆಸಿದ ಕಾಳಗ ಎಲ್ಲ ಆ ಶೌರಿ ಯಿಂದ ಆದುದು. ಅವನನ್ನು ಕರೆಸು ಎಂದನು ಸುಧನ್ವ. ಪಾರ್ಥದ ರಥವು ಕುಲಾಲ ಚಕ್ರದಂತೆ ತಿರುಗಿತು. ಹನುಮನು ಭ್ರಮೆಗೊಳಗಾಗುವಂತೆ. ಎರಡೂ ಕಡೆ ಸೈನ್ಯವು ಕಾದಿತು. ಧನಂಜಯನ ದೇಹದಲ್ಲಿ ಅಂಬುಗಳು ನಾಟಿದವು.
ಹದಿಮೂರನೆಯ ಸಂಧಿ ಮೊದಲ ಭಾಗ
ಪದ್ಯ 1 ರಿಂದ 20
ಸೂಚನೆ | ಹಂಸಧ್ವಜನ ಸುತನ ಸಮರಮರಿದಾಗಿ ಬರೆ ! ಕಂಸಾರಿ ಬಂದು ಸಾರಥಿಯಾಗಿ ನರನ ಶರ | ದಿಂ ಸುಧನ್ವನ ಶಿರವನರಿಸಿದಂ ಮೇಲೆ ಸುರಗಣ ಮೈದೆ ಕೊಂಡಾಡಲು |
ಕೇಳೆಲೆ ನೃಪಾಲಕುಲಮೌಳಿ ಬಳಿಕರ್ಜುನಂ | ಕಾಳಗಕೆ ನಡೆವ ಭಟರಂ ನಿಲಿಸಿ ಮುಂದುವರಿ | ವಾಳಪಡೆಯಂ ತೆಗೆಸಿ ಭರದಿಂದೆ ನೂಕಿದಂ ಕಲಿಸುಧನ್ವನ ಸರಿಸಕೆ| | ಗಾಳಿಯ ಜವಂ ಪೊಡೆವ ಸಿಡಿಲ ಗರ್ಜನೆ ರವಿಯ | ಮೇಳಮುಂ ದಾವಾಗ್ನಿ ಯಾಟೋಪಮಂತಕನ | ಕೋಳಾಹಳಂ ಕೂಡಿಕೊಂಡೊಂದು ರೂಪಾದವೋಲ್ ಕಾಣಿಸುವ ರಥವನು|| ೧ ||
ಕುದುರೆಗಳ ಖುರಪುಟಧ್ವನಿ ನಿಜವರೂಥ ಚ | ಕ್ರದ ರವಂ ದೇವದತ್ತದ ಘೋಷಮೆಸೆವ ಸಿಂ | ಧದ ತುದಿಯ ಕಪಿಯಬ್ಬರಣೆ ಧನುರ್ಷ್ಯಾನಾದವೊಂದಾಗಿ ಭೀಕರದೊಳು || ಪದಿನಾಲ್ಕು ಲೋಕಮಂ ಬೆದರಿಸಲ್ಕಿದು ನರನ | ಕದನದಾರವವೆಂದು ತಿಳಿದಂಬುಜಾಸನಂ | ಮೊದಲಾದ ನಿರ್ಜರರ್ ತಂತಮ್ಮ ವಾಹನವಿಮಾನದಿಂದೈತಂದರು||೨||
ವಾನರಸಮುನ್ನತ ಧ್ವಜವರೂಥದೊಳೈದು | ವಾ ನರ ಸಮರ ಭರವನರಿದು ಕಾಳಗಕೆ ತಾ | ವಾನರಸಮರ್ಥರೆಂದರ್ಜುನಂ ಬಹನೆಂದು ನಿಜಸಾರಥಿಗೆ ಸೂಚಿಸಿ || ದಾನವರನಾನಿಮಿಷರೊಳ್ ನೀನೆ ಭಟನಹ ನಿ | ದಾನವನನೇಕಮುಖದಿಂ ಕೇಳು ಸಂಗ್ರಾಮ | ದಾನವನರಸಿ ಬಂದೆನೆಂದೆಚ್ಚ ನಾ ಸುಧನ್ವಂ ಪಾರ್ಥನಂ ಧುರದೊಳು||೩||
ಕ್ರುದ್ಧನಾದಂ ಧನಂಜಯನಿದೇಕೆಮ್ಮೊಡನೆ | ಯುದ್ಧವನಪೇಕ್ಷಿಸುವೆ ಶಿವಶಿವಾ ನೀನಪ್ರ | ಬುದ್ಧನಲ್ಲವೆ ದೇವದೈತ್ಯಮಾನವರೊಳ್ ಮದೀಯವೈರದೊಳೆ ಬಾ ಳ್ವ || ಉದ್ದ ತಪರಾಕ್ರಮಿಗಳುಂಟೆ ಸಂಗರಕೆ ಸ | ನ್ನದ್ಧರಾದಿನಸುತ ದ್ರೋಣ ಭೀಷ್ಮಾದಿ ಪ್ರ | ಸಿದ್ಧಭಟರೇನಾದರರಿಯಲಾ ಮರುಳೆ ಹೋಗೆನುತೆಚ್ಚನಾ ಪಾರ್ಥನು||೪||
ಸಾರಥಿಯ ಬ ಲ್ಪಿಂದೆ ಕೌರವಬಲದ ನಿಖಿಳ | ವೀರರಂ ಗೆಲ್ದೆಯಲ್ಲದೆ ನಿನ್ನ ನೀಧರೆಯೊ | ಳಾರರಿವರಕಟ ನೀಂ ಕೃಷ್ಣನಂ ಕರೆಸಿಕೊಂಡಳವಿಗುಡು ಬಳಿಕೆನ್ನೊಳು || ಸಾರನ್ನೆ ಗಂ ಬರಿದೆ ಬಳಲಬೇಡೆಮ್ಮಲ್ಲಿ| ಹಾರೈಸದಿ ರ್ ಜಯವನೆನುತೆಚ್ಚೊಡರ್ಜುನನ | ತೇರಿರದೆ ತಿರ್ರನೆ ತಿಗುರಿಯಂತೆ ತಿರುಗಿತದನೇನೆಂಬೆನದ್ಭುತವನು||೫||
ಪೂತುರೆ ಸುಧನ್ವ ಸತ್ಯಾತಿಶಯದಿಂದೆ ವಿ | ಖ್ಯಾತನಹೆ ಮದ್ರಥವನೀ ತೆರದೊಳಿಸುವರಂ | ಪಾತಾಳ ಸುರನಿಲಯಭೂತಳದ ಪಟುಭಟವಾತದೊಳ್ ಕಾ ಣೆನನ್ನು || ನೀ ತರಳನಕಟ ಬರಿದೇತಕಳಿದಪೆ ನಿನ್ನ | ತಾತನಂ ಬರಹೇಳು ಘಾತಿಸುವರಲ್ಲ ನಾ | ವಾ ತುರಂಗಮವ ಬಿಡು ಧಾತುಗೆಡಬೇಡೆನುತ್ತಾತನಂ ನರವೆಚ್ಚ ನು||೬||
ಇನ್ನು ಹಯಮಂ ಬಿಡುವನಲ್ಲ ನಿನಗೆಮ್ಮ ತಾ | ತಂ ನಳಿನನಾಭನ ಸಹಾಯವಿಲ್ಲದೆ ಬರಿದೆ | ತನ್ನನಳುಕಿಸಲಯೆ ಕಕ್ಕುಲತೆ ಬೇಡ ನಡೆ ಹಸ್ತಿನಾಪುರಕೆ ಮರಳಿ | | ಸನ್ನು ತ ತುರಂಗಮೇಧಾಧ್ವರಕೆ ದೀಕ್ಷೆಗೊಂ | ಬಂ ನರೇಂದ್ರಾಗ್ರಣಿ ಮರಾಳಧ್ವಜಂ ಬಳಿಕ | ನಿನ್ನ ವಿಕ್ರಮದಿಂದೆ ಜಯಿಸು ಭೂಮಂಡಲವನೆನುತವಂ ತೆಗೆದೆಚ್ಚನು||೭||
ಈ ಚಾಪಮೀ ಬಾಣಮೀದಿವ್ಯರಥಮೀ ವ | ನೇಚರಧ್ವಜಮೀ ಮಹಾಶ್ವಂಗಳೀ ಸವ್ಯ | ಸಾಚಿತ್ವಮಾ ದೇವದತ್ತ ಶಂಖಂ ತನಗಿದೇಕೆ ನಿನ್ನಂ ಜಯಿಸದೆ || ಈ ಚತುರ್ದಶಜಗವನಣುವೆಂದರಿವೆನಕಟ | ಗೋಚರವೆ ನೀನೆನಗೆ ಫಡಯೆನುತೆ ತೆಗಿದು ನಾ | ರಾಚವೇ ಳ್ನೂರನೆಚ್ಚಂ ಸುಧನ್ವನಮೇಲೆ ಪಾರ್ಥನೆಣ್ದೆಸೆ ಕಂಪಿಸೆ||೮||
ದಿವ್ಯಹಯ ರಥ ಚಾಪ ಶರ ಕೇತು ಕಂಬುಗಳ್ | ಸವ್ಯಸಾಚಿ ತ್ವಮಿವು ನಿನಗೊದಗಿದವು ರಣದೊ | ಳವ್ಯಯಂ ಸಾರಥ್ಯಮಂ ಮಾಡಲಿನ್ನು ಜಯವಹುದೆ ಹುಲುಸೂತನಿಂದೆ|| ಹವ್ಯವಾಹನಸಖಂ ತೊಲಗಿಸುವ ಬಹಳಮೇ ।ಘ ವ್ಯೂಹಸಂಘಾತದೊಡ್ಡವ ಣೆ ಮುರಿವುದೆ ಕೃ | ತವ್ಯಜನವಾತದಿಂದೆಲೆ ಮರುಳೆ ಹೋಗೆನುತವಂ ಕಿರೀಟಿಯನೆಚ್ಚನು||೯||
ಪಾಂಡವಂ ಬಳಿಕ ಬೇಸಗೆಯ ನಡುವಗಲ ಮಾ | ರ್ತಾಂಡನಂತಿಹ ಕಲಿಸುಧನ್ವನಂ ಕಂಡು ಮಿಗೆ | ಖಾಂಡವದಹನಲಬ್ಧವಾಗಿ ಮೂಡಿಗೆಯೊಳಿರ್ದಾಗ್ನಿಯಮಾರ್ಗಣವನು || ಗಾಂಡೀವಕಳವಡಿಸಿ ತೆಗೆವಿನಂ ಕರ್ಬೊಗೆಯ | ಜಾಂಡಮಂ ತೀವಿದುದು ಕಾದುವು ಕುಲಾದಿಗಳ್ | ಭಾಂಡಜಲದಂದದಿಂ ಕುದಿದುಕ್ಕಿದುದು ಕಡಲ್ ಹೇಳಲೇನದ್ಭು ತವನು | ೧೦ ||
ಆವಗಂ ಪೀರ್ವೊಡಾಸರ್ಗೊಂಡು ತೀರದ ಮ | ಹಾವಾರ್ಧಿಜಲವನೊಂದೇಸಾರಿ ಸುರಿಗೊಂಬ | ಡಾವರದೊಳೆದ್ದ ವಡಬಾಗ್ನಿಯೋ ವಿಲಯರುದ್ರನ ಪಣೆಯ ಕಣ್ಗಿಚ್ಚಿದೋ ॥ ಭಾವಿಸುವೊಡರಿದೆಂಬೊಲಾದುದು ಧನಂಜಯನ | ಪಾವಕಾಸ್ತ್ರಂ ಬಳಿಕ ತೆಗೆದು ಬೊಬ್ಬಿರಿದು ಗಾಂ | ಡೀವದಿಂ ಪಾರಿಸಿದೊಡಾ ಸುಧನ್ವನ ಸರಿಸಕಡರಿತುರಿ ಕಡುಭರದೊಳು || ೧೧ ||
ತೆಕ್ಕೆ ವರೆದೇಳ್ವ ಕರ್ರ್ಬೊಗೆಯ ಹೊರಳಿಗಳ ದಶ | ದಿಕ್ಕುಗಳನವ್ವಳದ ಕೇಸುರಿಯ ಚೂಣಗಳ | ಮಿಕ್ಕು ಸೂಸುವ ತೂರುಗಿಡಿಗಳಾ ಕೌರಿಡುವ ಪೊತ್ತುಗೆಗಳ | ಕೊಕ್ಕರಿಸುತುಗುವ ತನಿಗೆಂಡದಿಂಡೆಗಳ ಸಲೆ | ಮುಕ್ಕುಳಿಸಿ ಮೊಗೆವ ಪೊರ್ಗಿಚ್ಚುಗಳ ಬೆಂಕೆ ಮೇ | ಲಿಕ್ಕಿದುದು ಹಂಸಧ್ವಜನ ಸೇನೆ ಬೆಂದು ಬೇಗುದಿಗೊಂಡುದಾ ಕ್ಷಣದೊಳು ||೧೨||
ಕಾದವು ಭಟರ ಕೈದುಗಳ್ ಪಿಡಿಯಲರಿದೆನ | ಲ್ಕಾದವು ಶರಾಗ್ನಿ ಗಾಹುತಿ ಗಜಹಯಾದಿಗಳ್ | ಕಾದವು ಧನಂಜಯನ ಮುಂದೆಮ್ಮ ಬಲಗಳೆಂದಾ ಸುಧನ್ವಂ ಕೆರಳ್ದು || ಕೋದಂಡಕತಿವೇಗದೊಳ್ ವಾರಣಾಸ್ತ್ರಮಂ | ಕೋದಂಡಲೆವ ಶಿಖಿಜ್ವಾಲೆಯಂ ನಿಲಿಸಲದ | ಕೋ ದಂಡನೆನ್ನೊಳೆನುತಾರ್ದು ತೆಗೆದೆಚ್ಚನುರಿ ನಂದಿ ಜಲಮಯವಾಗಲು |೧೩||
ನಾದವು ಸಮಸ್ತ ಬಲಮಖಿಳವಾದ್ಯಗಳ ನಿ | ನಾದವುಡುಗಿತು ನನೆದು ಗ ಜವಾಜಿ ನಿಕರಮೇ | ನಾದವುದಕದೊಳೆಂಬುದಂ ಕಾಣೆನಾ ಸುಧನ್ವನ ವಾರುಣಾಸ್ತ್ರದಿಂದ || ತೋದಳವಳಿದರೆಲ್ಲ ರಂಬುಧಾರೆಗಳದೆಂ | ತೋ ದಳವನೊರಸಿದವರ್ಜುನಂ ಬೆರಗುವೆ | ತ್ತೋದಲಳವಡದ ವಟುವಂತಿರ್ದನಾಹವದೊಳರಸ ಕೇಳ್ ಕೌತುಕವನು | ೧೪ ||
ಬಳಿಕ ವಾಯವ್ಯಾಸ್ತ್ರದಿಂದೆ ಶೋಷಿಸಿದನಾ | ಜಲವನರ್ಜುನ ನದ್ರಿದಾಣಮಂ ಪೂಡಿದಂ। ಕಲಿ ಸುಧನ್ವಂ ತೊಟ್ಟ ನೈಂದ್ರಶರಮಂ ಫಲುಗುಣಂ ತಿಮಿರಸಾಯಕವನು || ಸೆಳದಂ ಮರಾಳ ಧ್ವಜನ ಸುತಂ ತೆಗೆದನು ! ಜ್ವಲರವಿಕಳಂಬಮಂ ಭೀಭತ್ಸು ತುಡುಕಿದಂ | ಮುಳಿದವಂ ಗರಳವಿಶಿಖವನುಗಿದನಾನರಂ ಗಾರುಡಶಿಲೀಮುಖವನು | ೧೫ |
ಈ ತೆರದೊಳಖಿಳ ದಿವ್ಯಾಸ್ತ್ರಂಗಳಿಸುಗೆಗಳ | ಚಾತುರ್ಯದಿಂದೊರ್ವರರಂ ಗೆಲ್ವ ಸ । ಸತ್ವಾತಿಶಯದಿಂದೆ ಕಾದಿದರಾ ಸುಧನ್ವಾರ್ಜುನರ್ ಬಳಿಕ ರೋಷದಿಂದ || ಭೀತಿಗೊಳೆ ಮೂಜಗಂ ತೆಗೆದು ಬ್ರಹ್ಮಾಸ್ತ್ರಮಂ | ಶ್ವೇತವಾಹನನಾರ್ದಿಸಿ ಹಂಸಧ್ವಜನ | ಜಾತಂ ಪ್ರತೀಕಾರಕಾ ಪಿತಾಮಹಶರವನೆ ಕ್ಕೊಡನೆ ಬೊಬ್ಬಿರಿದನು || ೧೬ ||
ಆ ವರ ಬ್ರಹ್ಮಾಸ್ತ್ರಂಗಳೆರಡುಂ ಪೊಣರ್ದಡಗ | ಲಾ ವಿಜಯನೆಟ ಣಿಕೆಗೊಂಡೀತನಂ ಗೆಲ್ವ ಬಗೆ | ಯಾವುದೆಂದುಗಿದು ಹೂಡಿದನಕ್ಷಯಾಸ್ತ್ರಮಂ ತನ್ನ ರಥಕವನ ತೇರ್ಗೆ ತೀವಿದುವು ಬಾಣಂಗಳಾಕಾಶಮಂ ಕಾಣೆ | ನೀವಸುಧೆಯೆತ್ತಣದು ಶಶಿರವಿ ಕುಲಾದ್ರಿ ತಾ | ರಾವಳಿಗಳೇನಾದು ವೆಣ್ದೆಸೆಯ ನರಿವರಾರೆಂಬಿನಂ ಕೈಗೈದನು||೧೭||
ಇಚ್ಚಾರಿಗೊಂಡು ನರವೆಚ್ಚ ಕೆಂಗರಿಗೋಲ | ಎಚ್ಚಳೆಯ ಪೊಸಮನೆಯ ನಿಚ್ಚಳದ ನಿಡುಸರಳ್ | ಪೆಚ್ಚಿದವು ನಿಮಿಷದೊಳ್ ಮುಚ್ಚಿದವು ಗಗನಮಂ ಕೊಚ್ಚಿದವು ಪರಬಲವನು || ಬಿಚ್ಚಿದವು ಕವಚಮಂ ಕಚ್ಚಿದವು ಖಂಡಮಂ | ಚಚ್ಚಿದವು ಕೂಡೆ ಥಟ್ಟುಚ್ಚಿದವು ಸೀಳಾಗಿ | ಪಚ್ಚಿದವು ಮೈಯೊಳಗೆ ಹೆಚ್ಚಿದವು ಹೊಗರಗಲು ಮಚ್ಚಿದವು ನೆಣವಸೆಯನು || ೧೮||
ಗೌರಿಯರಸನ ಕೂಡೆ ಕಾದಿದ ಪರಾಕ್ರಮದ | ಸೌರಂಭಮಿಂತುಟೆ ನಿವಾತಕವಚರನಿರಿದ ! ಗೌರವಮಿದೀಗಲೇ ಭೀಷ್ಮ ಕರ್ಣ ದ್ರೋಣ ಮಾದ್ರಪತಿ ಮೊದಲಾಗಿಹ ॥ ಕೌರವಬಲದೊಳಖಿಳ ವೀರಭಟರಂ ಗೆ ಲ್ದ| ಪೌರುಷಮಿನಿತೆ ಸಾಕು ಬರಿದೆ ಬಳಲಿಸಬೇಡ | ಶೌರಿಯಂ ಕರೆಸೆನುತೆ ಕಣೆಗಳಂ ಕಡಿದೆಚ್ಚನಾ ಸುಧನ್ವಂ ನರನನು||೧೯||
ಕೇಳವನಿಪಾಲಕ ಸುಧನ್ವನಿಸುವಿಸುಗೆಯಂ | ಹೇಳಲರಿಯೆಂ ತಿರುಗುತಿರ್ದುದು ವರೂಥಂ ಕು | ಲಾಲಚಕ್ರದ ವೊಲಸವಳಿದಂ ಕಪೀಶ್ವರಂ ಭ್ರಮ ಣೆಯಿಂ ಧ್ವಜದಮೇಲೆ || ಕಾಲಾಟವಡಗಿದುವು ಕುದುರೆಗಳ ಸೂತನಂ | ಕಾಲನೊ ಯ್ದಂ ಧನಂಜಯನೊಡಲೊಳಂಬುಗಳ | ಕೀಲಿಸಿದುವಿಕ್ಕೆಲದ ಸೇವೆಯಂ ನವರಿದುವು ಹೊಗರುಗುವ ಹೊಸಗಣೆಗಳು ||೨೦||
ಜೈಮಿನಿ ಭಾರತ 26
ಹದಿಮೂರನೆಯ ಸಂಧಿ ಮುಂದುವರೆದ ಭಾಗ
ಪದ್ಯ 21 ರಿಂದ 40
ಕೃಷ್ಣನ ಪ್ರವೇಶ
ನಿರೂಪಣೆ: ಸುಬ್ಬುಲಕ್ಷ್ಮಿ
ಸಂಕ್ಷಿಪ್ತ ರೂಪ
ಅರ್ಜುನನಿಗೆ ತುಂಬಾ ಖೇದವಾಯಿತು. ತನ್ನಂತಹವನನ್ನು ಕುಂತಿ ಏಕೆ ಹಡೆದಳೋ ಎಂದು ಅಳಲಿದ. ಸಾರಥಿಯೂ ಮರಣ ಹೊಂದಲು ತಾನೇ ರಥವನ್ನು ನಡೆಸುತ್ತಾ ಬಳಲಿದ. ಆಗ ಮನದಲ್ಲಿ ಕೃಷ್ಣನನ್ನು ಧ್ಯಾನಿಸಿದ.
ಹಸ್ತಿನಾಪುರದಲ್ಲಿದ್ದ ಕೃಷ್ಣನಿಗೆ ಎಲ್ಲವೂ ತಿಳಿಯಿತು. ಧರ್ಮಜನಿಗೆ ಹಂಸಧ್ವಜನ ಬಗ್ಗೆ ತಿಳಿಸಿ ತಾನು ತಕ್ಷಣ ಗರುಡ ವಾಹನನಾಗಿ ಬಂದು ಅರ್ಜುನನ ರಥದಲ್ಲಿ ಇಳಿದ. ಮುನಿವರರು ತಪಗೈಯ್ದರೂ ಸುಲಭವಾಗಿ ಸಿಗದ ಕೃಷ್ಣ ತನ್ನ ಭಕ್ತ ಅರ್ಜುನನಿಗೆ ಒಲಿದು ಬಂದ. ಅರ್ಜುನನು ಕೃಷ್ಣನಿಗೆ ನಮಿಸಿದ. ಕೃಷ್ಣ ಸಾರಥ್ಯವನ್ನು ವಹಿಸಿದ. ಇದೆಲ್ಲವನ್ನೂ ನೋಡುತ್ತಿದ್ದ ಸುಧನ್ವ ಕೃಷ್ಣನ ದಿವ್ಯಮೂರ್ತಿಯನ್ನು ನೋಡಿ ಪುಳಕಿತನಾದನು. ಕಮಲನೇತ್ರನನ್ನು ಪೀತಾಂಬರಧಾರಿಯನ್ನು, ವರ ತುಲಸೀಮಾಲೆಯನ್ನು ಧರಿಸಿದವನನ್ನು ಮನದಣಿಯೆ ನೋಡಿದನು.
ನಾನಾ ವಿಧವಾದ ಜಯಜಯಕಾರಗಳಿಂದ ಮನದಲ್ಲೇ ಸ್ತುತಿಸಿದನು. ತನ್ನನ್ನು ಸಂಸಾರಪಾಶದಿಂದ ಬಿಡಿಸಿ ರಕ್ಷಿಸು ಎಂದು ಬೇಡಿಕೊಂಡನು. ನಿನ್ನ ಸಹಾಯವಿಲ್ಲದೆಯೇ ಅರ್ಜುನನು ಏನು ಮಾಡಬಲ್ಲನು? ಅವನು ಪ್ರತಿಜ್ಞೆ ಮಾಡಲಿ ಎಂದಾಗ ಅರ್ಜುನನು ಹಿಂದೆ ಮುಂದೆ ಯೋಚಿಸದೆ ಮೂರು ಬಾಣಗಳಲ್ಲಿ ನಿನ್ನ ತಲೆಯನ್ನು ತರಿವೆನೆಂದು ಆಗದಿದ್ದರೆ ಪುಣ್ಯಲೋಕ ತಪ್ಪಲಿ ಎಂದೂ ಪ್ರತಿಜ್ಞೆ ಮಾಡಿದನು. ಕೃಷ್ಣನಿಗೆ ಕೋಪ ಬಂತು. ಗದರಿಸಿದನು. ಹಿಂದೆ ಜಯದ್ರಥನ ಬಗ್ಗೆ ಹೀಗೇ ಮಾಡಿದ್ದನ್ನು ನೆನಪಿಸಿದನು. ಆ ಮೂರು ಬಾಣಗಳನ್ನು ನಡುವೆ ತಡೆಯದಿದ್ದರೆ ಪಾತಕಿಯರ ಲೋಕ ಪಡೆವೆನೆಂದು ಸುಧನ್ವ ನುಡಿದನು.
ಇವನು ಏಕಪತ್ನೀವ್ರತಸ್ಥನು, ಪಿತೃವಾಕ್ಯ ಪರಿಪಾಲಕನು ಜೊತೆಗೆ ನನ್ನ ಭಕ್ತನು. ನನ್ನೊಂದಿಗೆ ಆಲೋಚಿಸದೆ ಪ್ರತಿಜ್ಞೆ ಮಾಡಿದ್ದು ತಪ್ಪು ಎಂದು ಕೃಷ್ಣನು ಪಾರ್ಥನನ್ನು ನಿಂದಿಸಿದನು.
ಸುಧನ್ವನು ಬೇಕೆಂದೇ ಕೃಷ್ಣನನ್ನು ಕೆರಳಿಸುವ ಮಾತಾಡಿದನು. ಅವನ ರಥವನ್ನು ನಾನ್ನೂರು ಮೊಳ ಹಿಂದೆ ಸರಿಯುವಂತೆ, ತಿರ್ರನೆ ತಿರುಗುವಂತೆ ಮಾಡಿದನು. ಪಾರ್ಥನು ಉಗ್ರ ಕೋಪದಿಂದ ಬಾಣ ತೆಗೆದನು. ಕೃಷ್ಣನು ಹಿಂದೆ ಗೋವರ್ಧನಗಿರಿಯನ್ನು ಎತ್ತಿ ಗೋವಳರನ್ನು ರಕ್ಷಿಸಿದ ಪುಣ್ಯ ವನ್ನು ಸೇರಿಸಿದನು. ಆದರೆ ಸುಧನ್ಬನು ಈ ಬಾಣವನ್ನು ತಡೆದನು.
ಎರಡನೇ ಬಾಣಕ್ಕೆ ಕೃಷ್ಣನು ತಾನು ಈ ಅವತಾರದಲ್ಲಿ ಭೂಮಿಯನ್ನು ಪೊರೆದ ಪುಣ್ಯವನ್ನು ನೀಡಲು ಅದೂ ವ್ಯರ್ಥವಾಯಿತು.
ಸುಧನ್ವನು ಕೃಷ್ಣನಿಗೆ ನುಡಿದನು ದೇವಾ, ನಿನ್ನ ಪುಣ್ಯ ಕೊಟ್ಟು ನೋಡಿದೆಯಲ್ಲವೆ? ಈಗ ಮೂರನೆಯ ಬಾಣವನ್ನು ಕತ್ತರಿಸದಿದ್ದರೆ ಭೋಗದಲ್ಲಿದ್ದ ವಸಿಷ್ಠ ಅರುಂಧತಿಯರನ್ನು ಕೊಂದವನ ದುರ್ಗತಿ ಬರಲಿ ಎಂದು ಸಿದ್ಧನಾದನು.
ಹದಿಮೂರನೆಯ ಸಂಧಿ ಮುಂದುವರೆದ ಭಾಗ
ಪದ್ಯ 21 ರಿಂದ 40
ವ್ಯಥಿಸಿದಂ ಗಾಯದಿಂ ಸೂತನಳಿಯಲ್ಕೆ ಸಾ | ರಥಿತನವನುಂ ತಾನೆ ಮಾಡುತಿದಿರಾದನತಿ | ರಥರೊಳಗ್ಗಳೆಯನರ್ಜುನನಾ ಸುಧನ್ವಂಗೆ ಬಳಿಕೀತನಂ ಧುರದೊಳು || ಮಥಿಸದಿರ್ದೊಡೆ ತನ್ನನೇಕೆ ಪಡೆದಳೊ ಬರಿದೆ | ಪೃಥೆ ನೆಲಕೆ ಪೊರೆಯಾಗಿ ಶಿವಶಿವಾ ಬಂದುದೇ | ಪೃಥಿವಿಪನ ಮ ಮಖಕೆಡರಕಟೆನುತೆ ಮನದೊಳಗೆ ಕೃಷ್ಣನಂ ಧ್ಯಾನಿಸಿದನು ||೨೧||
ಅರಸ ಕೇಳರ್ಜುನಂ ಧ್ಯಾನಿಸಲ್ಕಾಗಳಿಭ | ಪುರದೊಳರಿದಂ ಮುರಧ್ವಂಸಿ ಹಂಸಧ್ವಜನ | ಧುರಮಂ ಸುಧನ್ವನ ಪರಾಕ್ರಮವನೆಚ್ಚರಿಸಿ ಧರ್ಮತನಯಾದಿಗಳ್ಗೆ | ತೆರಳದು ಕಿರೀಟಿಗಾಹವಮೆಂದು ವಹಿಲದಿಂ | ಗರುಡವಾಹನನಾಗಿ ಬಂದನಾ ಕ್ಷಣಕಲ್ಲಿ | ಗರವಿಂದನಾಭನಾನತರ ನೆನಹಿಗೆ ನಿತ್ಯನೆಂಬುದಂ ತೋರುವಂತೆ ||೨೨||
ಕಶ್ಯಪ ವಸಿಷ್ಠಾದಿ ಪರಮಋಷಿಮುಖ್ಯರಾ | ಲಸ್ಯವಿಲ್ಲದೆ ಮಾಡುವ ಧ್ಯಾನಕ್ಕೊಮ್ಮೆ ಯುಂ | ದೃಶ್ಯಮಿಲ್ಲದ ಚಿನ್ಮಯಾನಂದರೂಪನೀಕುಂತೀಕುಮಾರಕರ್ಗೆ | |ವಶ್ಯನಾಗಿಹನೆಂತೊ ಶಿವಶಿವಾ ನೀಲಮೇ | ಘಶ್ಯಾಮಲನ ಲೀಲೆ ಪೊಸತೆಂದು ಸುರರುಲಿಯೆ | ಸ್ವಸ್ಯಾಲಕನ ರಥಾಗ್ರಕ್ಕೆ ಸುಪರ್ಣ ಸ್ಕಂಧದಿಂದೆ ಮುರಹರನಿಳಿದನು ||೨೩||
ಮೊಳಗಿದುವು ನಿನ್ನಾಳಕೋಟಿಗಳ್ ಫಲುಗುಣನ | ದಳದೊಳಗೆ ತನತನಗೆರಗುತಿರ್ದುದುತ್ಸವದ | ಲಳಿ ಮಸಗಿ ಕಳಕಳದ ಬೊಬ್ಬೆಯಿಂ ಮಿಕ್ಕುದು ರಭಸವದ್ಧಿ ಘೋಷಣವನು || ಬಳಿಕ ನಸುನಗುತೆ ಚರಣಕೆ ಮಣಿದ ಪಾರ್ಥನಂ | ಸೆಳೆದು ಬಿಗಿಯಪ್ಪಿ ಮೈದಡವಿ ಬೋಳ್ಳೆಸಿ ರಥ | ದೊಳಗೆ ಕುಳ್ಳಿರ್ದು ನಲವಿಂದೆ ಮುರರಿಪು ಕುದುರೆಗಳ ವಾಘೆಯಂ ಕೊಂಡನು ||೨೪||
ಇನಿತೆಲ್ಲಮಂ ನೋಡುತಿರ್ದ೦ ಸುಧನ್ವನನು | ದಿನಮಂತರಂಗದೊಳ್ ಧ್ಯಾನಿಸುವ ನಿರ್ಮಲಾ | ತ್ಮನ ದಿವ್ಯಮೂರ್ತಿಯಂ ಪಾರ್ಥನ ರಥಾಗ್ರದೊಳ್ ಕಂಡು ಪುಳಕೋದ್ಯಮದೊಳು|| ತನುವನೀಡಾಡಿ ಸಾಷ್ಟಾಂಗಪ್ರಣಾಮದಿಂ | ಮನದೊಳಗೆ ಹಿಗ್ಗಿ ತನ್ನಾ ಳ್ತನಕ್ಕೆ ಸಾಕಿನ್ನು | ನೆನೆದೆನಣಿಕೆ ಕೈಸಾರ್ದುದೆಂದು ಕಣ್ದಣಿಯದಚ್ಯುತನಂ ನಿರೀಕ್ಷಿಸಿದನು ||೨೫ ||
ಅತಸೀಕುಸುಮಗಾತ್ರನಂ ಕಮಲನೇತ್ರನಂ | ಸ್ಮಿತ ರುಚಿರ ಶುಭ ರದನನಂ ಚಾರು ವದನನಂ | ಕೃ ತಮೃ ಗಮ ದೋಲ್ಲಸತ್ಸುಲಲಾಟನಂ ಮಣಿಕಿರೀಟನಂ ಕಂಬುಗಳದಾ | |ಆತುಲ ತುಲಸೀಮಾಲನಂ ರಮಾಲೋಲನಂ । ದೃತಕೌಸ್ತು ಭೋ ದ್ಭಾಸನಂ ಪೀತವಾಸನಂ। ನುತಸಮಸ್ತಾಭರಣನಂ ಪುಣ್ಯಚರಣನಂ ಕಲಿಸುಧನ್ವಂ ಕಂಡನು||೨೬||
ಜಯ ಚತುರ್ಮುಖಜನಕ ಜಯ ಚಾರುಚಾರಿತ್ರ | ಜಯ ಚಿದಾನಂದ ಜಯ ಚೀರಾಂಬರ ಜ್ಞೇಯ! ಜಯ ಜಯ ಚ್ಯುತಿದೂರ ಜಯ ಚೂಡಬರ್ಹಶೋಭಿತ ಚೇತನಸ್ವರೂಪ ॥ ಜಯ ಚೈದ್ಯಮಥನ ಜಯ ಚೋದಿತಾಖಿಳಲೋಕ ! ಜಯ ಚೌರ್ಯಕೃತಲೀಲ ಜಯ ಚಂಡಶತಕಿರಣ | ಜಯ ಚಕ್ರಧರಯೆಂದು ಕೃಷ್ಣನಂ ಕಲಿಸುಧನ್ವಂ ಪೊಗಳ್ದಂ ಮನದೊಳು ||೨೭||
ಜೀಯ ಜಗದಂತರಾತ್ಮಕ ಸರ್ವಚೈತನ್ಯ | ಜೀಯ ಶುದ್ಧಾದ್ವಯ ನಿರಂಜನ ನಿರಾವರಣ | ಜೀಯ ನಿನ್ನೊಳಗೀ ಸಮಸ್ತ ಮಧ್ಯಸ್ತಮಾಗಿದೆ ನೀನೆ ಸತ್ಯರೂಪ || ಜೀಯ ನಾರಾಯಣ ಮುಕುಂದ ಮಾಧವ ಕೃಷ್ಣ | ಜೀಯ ಚಕ್ರಿಯೆ ಪೀತವಾಸ ಲಕ್ಷ್ಮೀಲೋಲ | ಜೀಯ ಸರ್ವಸ್ವತಂತ್ರನೆ ಬಿಡಿನು ಸಂಸಾರಪಾಶದಿಂದೆನ್ನನೆಂದು||೨೮||
ಭಯಭರಿತಭಕ್ತಿಯಿಂ ಭಾವಿಸಿದನಾ ಜಗ ! ನ್ಮಯನಂ ಬಳಿಕ ದೇವ ಕೇಳ್ ನಿನ್ನ ಸರ್ವಜ್ಞ | ತೆಯನೆನಗೆ ತೋರಿಸಿದೆ ಲೇಸಾಯ್ತು ನಿನ್ನ ಕೃಪೆಯಿಲ್ಲದೊಡೆ ಪಾಂಡವರ್ಗೆ ॥ ಜಯಮೆತ್ತಣದು ಲೋಕದೊಳ್ ಸಾಕದಂತಿರಲಿ | ಬಯಲ ಭಂಜನೆ ಬೇಡ ಮಾಡಲೊಂದು ಪ್ರತಿ | ಜ್ಞೆಯನರ್ಜುನಂ ನಿನ್ನ ಮುಂದೆನ್ನ ಮೇಲೆನುತ್ತಾ ಸುಧನ್ವಂ ನುಡಿದನು ||೨೯||
ಅರ್ಜುನಂ ಕೇ ಳ್ದನೆಲೆ ಮರುಳೆ ನೋಡಾದೊಡಿ | ನ್ನಾರ್ಜಿಸಿದ ಸುಕೃತಮೆಳ್ಳನಿತಿಲ್ಲದಿಹ ಪುಣ್ಯ | ವರ್ಜಿತನ ಲೋಕಮಾಗಲಿ ತನಗೆ ನಿನ್ನ ತಲೆಯಂ ಮೂರುಬಾಣದಿಂದೆ || ನಿರ್ಜರರ್ ಮೆಚ್ಚಲರಿಯದೊಡೆಂದು ನುಡಿಯ | ದುರ್ಜಯನಿವಂ ನಿನಗೆ ಸಾಧ್ಯನಲ್ಲೆಂದು ಹರಿ! ಗರ್ಜಿಸಿದನಾ ಪಾರ್ಥನಂ ಬಳಿಕ ಹಂಸಧ್ವಜನ ತನಯನಿಂತೆಂದನು ॥೩೦||
ಗರ್ವದಿಂ ನುಡಿದೆಲಾ ಪಾರ್ಥ ಕೃಷ್ಣನ ಮುಂದೆ | ಗೀರ್ವಾಣರೆಲ್ಲ ರುಂ ನೋಡುತಿರಲೀಗ ನೀಂ। ಸರ್ವಶಕ್ತಿಯೊಳಿಸುವ ಮೂರುಬಾಣಂಗಳಂ ನಡುವೆ ಖಂಡಿಸದಿರ್ದೊಡೆ || ಉರ್ವಿಯೊಳ್ ಪಾತಕಿಗಳಾಗಿರ್ದವರ ಗತಿಗ ! ಡರ್ವೆನೆಂದಾ ಸುಧನ್ವಂ ಬಳಿಕ ಮೇದಿನಿಯ | ದಿರ್ವಿನಂ ತೆಗೆದ ಎಚ್ಚನರ್ಜುನನ ತೇರೊಂದು ನಲ್ಪಮಾತ್ರಂ ತೊಲಗಲು | ೩೧||
ತೇರ್ಮಗುಳ್ದಳವಿಯಿಂ ತೊಲಗಿ ಬೆಂಡಾಗಿ ನಾ | ನೂ ರ್ಮೊಳಂ ಪೋಗಲ್ಕೆ ತಲೆದೂಗಿ ಮುರಹರಂ| ಕಾರ್ಮೊಳಗುವಂತಿರೆ ಸುಧನ್ವನಂ ಕೊಂಡಾಡಿ ನೋಡಿ ಪಾರ್ಥನ ಮೊಗವನು|| ಘರ್ಮಿಸಿದನಂದಿನ ಜಯದ್ರ ಥನ ಕಥೆ ಬಂದು ! ದಾರ್ಮುಳಿದೊಡಂ ಮಣಿವನಲ್ಲ ಮೇಣಿವನೊಡನೆ | ಮಾರ್ಮಲೆವರಿಲ್ಲ ನೀನೆನ್ನೊಳಾಲೋಚಿಸದೆ ನುಡಿದೆ ಭಾಷೆಯನೆಂದನು ||೩೨||
ಇವನೇಕಪತ್ನಿವ್ರತಸ್ಥನಾಗಿಹುದರಿಂ। ತವೆ ತಾತನಾಜ್ಞೆಯಂ ಯಂ ಪಾಲಿಸುತೆ ಬಹುದರಿಂ| ಕವಲಿಲ್ಲದೆಮ್ಮ ನರ್ಚಿಪ ಭಕ್ತನಹುದರಿಂದಜ ಭವ ಸುರೇಶ್ವರರ್ಗೆ || ಬವರದೊಳ್ ಮಣಿವನಲ್ಲ ವನ ಶೌರ್ಯಮಂ| ಜವಗೆಡಿಸಿ ನಮ್ಮ ನುರೆ ಬಳಲಿಸುವ ಧೈರ್ಯಮಂ | ಭುವನತ್ರಯವನೆಂಜಿಸುವ ವಿಪುಲವೀರಮಂ ನೋಡೆಂದು ಹರಿ ನುಡಿದನು ||೩೩||
ಅನಿತರೊಳ್ ಕಲಿಸುಧನ್ವಂ ಕೇಳ್ದು ನುಡಿದನೆಲೆ | ವನಜಾಕ್ಷ ಬೆಟ್ಟ ಮಂ ಕೊಡೆವಿಡಿದು ಪಟ್ಟಿ ಯಂ । ನನೆಯಲೀಯದವೊಲೀ ಪಾರ್ಥನಂ ರಕ್ಷಿಸುವೆ ನೀಂ ಕೃಪೆಯೊಳಾವು ಬರಿದೆ || ತೊನೆದೊಡೇನಹುದಿನ್ನು ರಣದೊಳೀ ದೇಹಮಂ। ನಿನಗೊಪ್ಪಿಸದೆ ಬಿಡೆಂ ಸಾಕದಂತಿರಲೊಮ್ಮೆ | ಮುನಿದು ನೋಡಳುಕಿದೊಡೆ ನಿನ್ನ ಕಿಂಕರನಲ್ಲೆನುತ ರಥವನೊಡೆಯೆಚ್ಚನು ||೩೪|
ಸುರ್ರನೆ ಸುಳಿದು ಸುತ್ತಿ ಬೆಂಡಾಗೆ ಕುದುರೆಗಳ್ /ಕಿರ್ರನೆ ಕಪೀಶ್ವರಂ ಪಲ್ಕಿರಿದು ಚೀರಿ | ಕರ್ರನೆ ಕವಿಯೆ ಕಣ್ ಕತ್ತಲೆ ಶಿರೋಭ್ರಮಣೆಯಿಂ ಕೃಷ್ಣ ಫಲುಗುಣರ್ಗೆ ॥ ಘರ್ರನೆ ಪೊರಳು ಗಾಲಿಗಳೇಳೆ ಧರಣಿಯಿಂ ತಿರ್ರನೆ ತಿರುಗುವ ಸುಟ್ಟುರೆಗಾಳಿಯಂದದಿ ಸರ್ರನೆ ಸರಿದುದು ಹಿಂದಕೆ ರಥಂ ಮತ್ತ ವನನಸುರಾರಿ ಬಣ್ಣಿಸಿದನು ॥ ೩೫॥
ಪೊಡವಿಪತಿ ಕೇಳ್ ಬಳಿಕ ಕಣ್ ಕೆಂಡದಂತಾಗೆ | ಕುಡಿಹುಬ್ಬು ಧೂಮಲತೆಯೆಂಬೊಲರೆ ಹುಂಕಾರ | ದೊಡನೆ ನಿಶ್ಚಾಸಮಂ ಬಿಡುವ ನಾಸಾಪುಟಂ ಜ್ವಾಲೆಯಂದದೊಳೊಪ್ಪಿರೆ || ಕಿಡಿಯಿಡುವ ಕೋಪಮಂ ತಾಳ್ದಂ ಧನಂಜಯಂ ಕಡೆಗಾಲದಂದಿನ ಧನಂಜಯಂ ತಾನೆನಲ್ | ಪಡೆ ನಡುಗೆ ಬೊಬ್ಬಿರಿದು ಪೂಡಿದಂ ಬಾಣಮಂ ಸೆಳೆದು ನಿಜಕಾರ್ಮುಕವನು[೩೬||
ಖತಿಯಿಂದ ಫಲುಗುಣಂ ಪೂಡಿದ ಮಹಾ ಸ್ತ್ರಮಂ | ಶತಪತ್ರಲೋಚನಂ ಕಂಡದಕೆ ಮುನ್ನ ತಾ | ನತುಲಗೋವರ್ಧನವನಾಂತು ಗೋಕುಲವನೋವಿದ ಸುಕೃತಫಲವನಿತ್ತು || ಅತಿಶಯದ ಶಕ್ತಿಯಂ ನೆಲೆಗೊಳಿಸಿ ದೇಗದಿಂ | ಪ್ರತಿಭಟನ ಶಿರವನಿಳುಹಿನ್ನೆಂದು ಬೆಸೆಸಲು | ನ್ನತಪರಾಕ್ರಮಿ ಧನಂಜಯನಾರ್ದು ಕಿವಿವರೆಗೆ ತೆಗೆದೆಚ್ಚನಾ ಶರವನು ॥ ೩೭||
ಅಹಹ ಮುರಹರ ಪಾರ್ಥನಿಸುವ ಬಾಣಕೆ ನಿನ್ನ ! ಬಹಳ ಸುಕೃತವನಿತ್ತೆ ಲೇನಾದುದಿದನರಿಯ| ಬಹುದೆ ನೋವಿಲ್ಲಲಾ ನಿನಗೆನುತ ತೀವ್ರದಿಂ ಕೊರಳ ಸರಿಸಕೆ ನಭದೊಳು | |ಬಹ ಸರಳನೆಚ್ಚು ನಿಮಿಷಾರ್ಧ ದೊಳ್ ಕಡಿದು ಗಹ | ಗಹಿಸುವ ಸುಧನ್ವನಂ ಕಂಡವನ ಸೈನ್ಯದೊಳ್ | ಕಹಳೆಗಳ್ ಸೂಳ್ಳೆಸಿದವು ಮೆಚ್ಚಿದರೆ ದಿವಿಜರಚ್ಯುತಂ ಬೆರಗಾದನು ||೩೮||
ಮೂರುಬಾಣದೊಳವನ ತಲೆಯನರಿದಪೆನೆಂದು | ತೋರಿಯಾಡಿದೆನಾಂ ಪ್ರತಿಜ್ಞೆಯನದರೊಳೊಂದು | ಮಾರಿಪೋದುದು ಕೋಲೆರಡರಿಂದೆ ರಿಪುಶಿರವನಿಳುಹಬೇಕೆನುತೆ ನರನು || ಏರಿಸಿದ ನಂಬಂ ಶರಾಸನಕೆ ಬಳಿಕದಕೆ | ಹೇರಿದಂ ಹರಿ ತನ್ನ ಕೃಷ್ಣಾವತಾರದೊಳ್ | ಮೀರಿ ಧರೆಯಂ ಪೊರೆದ ಪುಣ್ಯಮಂ ಮೇಲೆ ಫಲುಗುಣನೆಚ್ಚನಾ ಕಣಿಯನು |೩೯||
ಆಗಳತಿ ರೋಷದಿಂದಾಲಿಗಳ್ ಕೆಂಪಡರ! ಲೀಗಳರ್ಜುನನ ಬಾಣಕೆ ನಿನ್ನ ಪುಣ್ಯಮಂ | ನೀಗಿದೆಯಲಾ ದೇವ ನೋಡು ಬಹ ದಿವ್ಯಾಸ್ತಮಂ ಕತ್ತರಿಸದಿರ್ದೊಡೆ || ಭೋಗದೊಳರುಂಧತಿಯ ಕೂಡಿದ ವಸಿಷ್ಠನಂ | ಪೋಗಿ ಕೊಂದವನ ದುರ್ಗತಿಗೆ ತಾನಿಳಿವೆನೆನು | ತಾಗಸದೊಳರ್ಕನಂತಪ್ಪ ಸರಳಂ ಸುಧನ್ವನಿಕ್ಕಡಿಗೈದನು||೪೦||
ಜೈಮಿನಿ ಭಾರತ 27
ಹದಿಮೂರನೆಯ ಸಂಧಿ ಕೊನೆಯ ಭಾಗ
ಪದ್ಯ 41 ರಿಂದ 64
ಸುಧನ್ವನ ಮರಣ
ನಿರೂಪಣೆ: ಸುಬ್ಬುಲಕ್ಷ್ಮಿ Lrphks Kolar
ಸಂಕ್ಷಿಪ್ತ ರೂಪ
ಅರ್ಜುನನ ಎರಡು ಬಾಣಗಳೂ ಮುಗಿದವು. ಕೊನೆಯ ಬಾಣ ಪ್ರಯೋಗವಾಗಬೇಕಾಗಿದೆ. ಸುಧನ್ವನು ಕೂಡಾ ಇದನ್ನು ಕತ್ತರಿಸುವುದಾಗಿ ಹೇಳಿದ್ದಾನೆ. ಈಗ ಕೃಷ್ಣ ಇಬ್ಬರ ಮಾತನ್ನೂ ನಡೆಸಬೇಕಾಗಿದೆ.
ಅರ್ಜುನನ ಬಾಣಕ್ಕೆ ತ್ರಿಮೂರ್ತಿಗಳ ಶಕ್ತಿಯನ್ನು ಆಹ್ವಾನಿಸಿ ರಾಮಾವತಾರದಲ್ಲಿ ತಾನು ಆರ್ಜಿಸಿದ ಪುಣ್ಯವನ್ನು ಸೇರಿಸುತ್ತಾನೆ. ಕೋಟಿ ಸಿಡಿಲುಗಳು ಒಮ್ಮೆಗೇ ಬಂದಂತಾಗಿ ನೆಲ ನಡುಗಿತು. ಪರ್ವತಗಳು ಅಲ್ಲಾಡಿದವು. ಸಮುದ್ರ ಕುದಿಯಿತು. ದಿಗ್ಗಜಗಳು ಕಂಪಿಸಿದವು. ದೇವತೆಗಳು ಬೆದರಿದರು. ಹನುಮನು ಅಬ್ಬರಿಸಿದನು. ಸುಧನ್ವನು
ಕೃಷ್ಣನಿಗೆ ನಿನ್ನ ಪುಣ್ಯವನ್ನು ಸೂರೆಗೊಂಡವನು ನಾನೋ ಅರ್ಜುನನೋ ನೋಡು. ಇದನ್ನು ತಡೆಯದಿದ್ದರೆ ನಾನು ಅಪ್ಪನಿಗೆ ಮಗನೆಂದು ಹೆಂಡತಿಗೆ ಗಂಡನೆಂದು ಎನಿಸುವೆನೆ ಎಂದನು. ಇಲ್ಲದಿದ್ದರೆ ಎಲ್ಲ ರೀತಿಯ ಪಾಪಗಳೂ ತನಗೆ ಬರಲಿ ಎಂದನು
ತ್ರಿಮೂರ್ತಿಗಳ ಶಕ್ತಿ, ಮಂತ್ರಶಕ್ತಿ, ನಿಜಶಕ್ತಿಗಳಿಂದ ಕೂಡಿದ ಬಾಣವನ್ನು ಅರ್ಜುನ ಪ್ರಯೋಗಿಸಿದನು. ಎರಡೂ ಕಡೆಯ ಸೇನೆ ಬೆದರಿತು. ಸುರರ ಗುಂಪು ನಡುಗಿತು. ಆಗ ಸುಧನ್ಬನು ಅದನ್ನು ಕತ್ತರಿಸಲು ಅದರ ಒಂದು ತುದಿಯು ಭೂಮಿಯಲ್ಲಿ ನೆಟ್ಟು ಇನ್ನೊಂದು ತುದಿ ಕತ್ತರಿಸಿಕೊಂಡೆದ್ದು ಸುಧನ್ವನ ತಲೆಯನ್ನು ತರಿಯಿತು. ಇಬ್ಬರ ಮಾತುಗಳೂ ಉಳಿದವು. ಕೃಷ್ಣನ ಕರುಣೆ. ಆ ತಲೆಯು ಅಚ್ಯುತ, ಕೇಶವ ಮುರಾರಿ ರಾಮ ಎಂದು ಕೃಷ್ಣನನ್ನು ಜಪಿಸುತ್ತಲಿತ್ತು. ಅದು ಕೃಷ್ಣನ ಪಾದತಲಕ್ಕೆ ಬಂದು ನಮಿಸಿತು. ಉಳಿದ ಮುಂಡ ರಣರಂಗದಲ್ಲಿ ಹರಿದಾಡಿ ಸೈನ್ಯವನ್ನು ಎದುರಿಸಿ ಭಯ ತಂದಿತು. ದೇವತೆಗಳು ಬೆರಗಾದರು.
ಕಾಲ ಬಳಿ ಬಂದ ಶಿರವನ್ನು ಕೃಷ್ಣ ಎತ್ತಿಕೊಂಡು ನೋಡಿದನು. ಹೊಳೆಯುವ ಕಂಗಳು, ಕಮಲದ ಮುಖ, ನಸುನಗು, ಕುಂಡಲಗಳ ಕಾಂತಿಯಿಂದ ಕೂಡಿದ ಅದನ್ನು ತನ್ನ ಎದೆಗೆ ಒತ್ತಿಕೊಂಡನು. ಮೂಸಿನೋಡಲು ಅವನ ಆತ್ಮಜ್ಯೋತಿಯು ಅವನಿಂದ ಹೊರ ಟು ಇವನನ್ನು ಸೇರಿತು. ನಂತರ ಆ ಶಿರವನ್ನು ಹಂಸಧ್ವಜನ ಬಳಿಗೆ ಹೋಗುವಂತೆ ಕಳಿಸಿದನು.
ಹಂಸಧ್ಬಜ ಭೂಮಿಯಲ್ಲಿ ಬಿದ್ದು ಹೊರಳಿ ಬಹುವಾಗಿ ಶೋಕಿಸಿದನು. ಸುತ್ತಲಿನಕಲ್ಲು ಮರಗಳೂ ಕರಗುವಂತೆ. ನಿನ್ನನ್ನು ಕಳೆದುಕೊಂಡ ನಾನು ಪಾಪಿ. ಯಾವ ರೀತಿ ಸಾಯಲಿ,? ದಮ್ಮಯ್ಯ ಮಾತಾಡು, ಕಾಳಗಕ್ಕೆ ನಿನ್ನ ಕಳಿಸಿ ನಾ ಕೆಟ್ಟೆ. ಕಾದ ಎಣ್ಣೆಯಿಂದ ನಿನ್ನನ್ನು ಕಾದ ಕೃಷ್ಣ ಈಗೇಕೆ ಕಾಯಲಿಲ್ಲ? ಅಣ್ಣನಿಗಾಗಿ ಆರತಿ ಹಿಡಿದಿರುವ ಸೋದರಿಗೆ ಏನು ಹೇಳಲಿ? ನಿನ್ನ ತಾಯಿ, ಹೆಂಡತಿಯರಿಗೆ ಹೇಗೆ ಹೇಳಲಿ? ನಾನು ನಿನ್ನ ತಂದೆಯಲ್ಲವೆ? ನನ್ನೊಡನೆ ಏಕೆ ಮಾತಾಡುತ್ತಿಲ್ಲ ಎಂದು ಮುಂತಾದ ಮಾತುಗಳಿಂದ ಬಹಳವಾಗಿ ಶೋಕಿಸಿದನು.ಕಡಲ ಒಳಗಿನ ಬಡಬಾಗ್ನಿಯಂತೆ ಅವನ ಶೋಕ ಹೆಚ್ಚಿತು.
ಬಳಿಕ ಸುಧನ್ವನ ಸಹೋದರ ಸುರಥನು ಬಂದು ತಂದೆಯನ್ನು ಸಮಾಧಾನಗೊಳಿಸಿ ತಾನು ಯುದ್ಧವನ್ನು ಮಾಡುವೆನೆಂದನು. ಸುಧನ್ವನ ಶಿರವನ್ನು ಮತ್ತೆ ಕೃಷ್ಣನೆಡೆಗೇ ಕಳಿಸು ಎನ್ನಲು ಹಾಗೇ ಮಾಡಿದನು. ಕೃಷ್ಣನು ಅದನ್ನೆತ್ತಿ ಗಗನಕ್ಕೆ ತೂರಲು ಪರಶಿವನು ಅದನ್ನು ತನ್ನ ರುಂಡಮಾಲೆಯಲ್ಲಿ ಸೇರಿಸಿದನು. ಹೀಗೆ ಭಕ್ತ ಸುಧನ್ವನಿಗೆ ಮುಕ್ತಿ ದೊರೆಯಿತು. ಮುಂದೆ ಸುರಥನು ಯುದ್ಧಕ್ಕೆ ಅನುವಾಗಿ ಬಂದನು.
ಹದಿಮೂರನೆಯ ಸಂಧಿ ಕೊನೆಯ ಭಾಗ
ಪದ್ಯ 41 ರಿಂದ 64
ಕೂಡೆ ಮೊಳಗಿದುವು ನಿಸ್ಸಾಳಂಗದೆ ಕೊಂ | ಡಾಡಿದರ್ ಸುರರಭ್ರದೊಳ್ ಬಳಿಕ ಕೃಷ್ಣನಂ | ನೋಡಿ ನುಡಿದಂ ಪಾರ್ಥನೆರಡಂಬು ಮುರಿದುದಿನ್ನೊಂದರೊಳಿವನ ಶಿರವನು|| ರೂಢಿಯಿಂದರಿಯದೊಡೆ ಹರಿಹರ ವಿಭೇದಮಂ | ಮಾಡಿ ನಿಂದಿಸಿದವನ ಗತಿಯಾಗಲೆನಗೆನುತೆ | ಪೂಡಿದಂ ಮತ್ತೆ ಕೋದಂಡದೊಳ್ ಬಾಣಮಂ ನೃಪತಿ ಕೇಳ ದ್ಭುತವನು ॥೪೧||
ಆ ಹೂಡಿದರ್ಜುನನ ಮಾರ್ಗಣದ ಮೊದಲೊಳಾ | ವಾಹನಂಗೈದು ಕಮಲಜನಂ ನಿಲಿಸಿ ವೃಷಭ | ವಾಹನನ ಕೋ ಲ್ತು ದಿಗೆ ತಂದಿರಿಸಿ ಸಾಯಕದ ನಡುವೆ ತಾನೇ ವ್ಯಾಪಿಸಿ ॥ ಕಾಹುಗಳನುರೆ ಬಲಿದು ರಾಮಾವತಾರದೊಳ್ | ದೇಹಮುಳ್ಳನಿತುದಿನ ಮಾರ್ಜಿಸಿದ ಪುಣ್ಯಮಂ | ರೂಹುಗಾಣಿಸಿ ಕೊಟ್ಟು ಶಕ್ತಿಯಂ ನೆಲೆಗೊಳಿಸಿ ಮುರಹರಂ ತೋಳ್ಕೊಯ್ದನು ||೪೨||
ಕೋಟಿಸಿಡಿಲೊಮ್ಮೆ ಗರ್ಜಿಸುವೊಲೂದಿದನಾ ನಿ। ಶಾಟದಲ್ಲಣನತುಳಪಾಂಚಜನ್ಯವನಾ ಕಿ। ರೀಟಿ ಪಿಡಿದಂ ದೇವದತ್ತಮಂ ಸ ಪ್ತಾಬ್ಧಿ ರಭಸವೊಬ್ಬುಳಿಸುವಂತೆ || ಮೀಟಾಡಿಸಿತು ಭೂಮಿಯಂ ಮೇರುಶೈಲಮಂ | ದೂಟಾಡಿಸಿತು ರಾಶಿ ತಾರಾ ಗ್ರಹಂಗಳಂ | ತಾಟಾಡಿಸಿತು ಹನುಮನಬ್ಬರಣೆ ಲಗ್ಗೆ ವರೆ ಮೊಳಗಿದುವು ನಿಜಬಲದೊಳು [೪೩||
ಕಂಡ ನೀ ತೆರನಂ ಸುಧನ್ವನಿಂತೆಂದನೆಲೆ | ಪುಂಡರೀಕಾಕ್ಷ ನಿನ್ನಯ ಪುಣ್ಯಮಂ ಸೂರೆ | ಗೊಂಡವಂ ತಾನೋ ಧನಂಜಯನೊ ಪುಸಿಯದುಸಿರೆನಗೆ ಸಾಕಿನ್ನು ಬರಿದೆ || ಕೊಂಡಾಡಬೇಡ ಬಿಡಿಸಂಬನದನೆಡೆಯೊಳಾಂ | ಖಂಡಿಸದೊಡೆನ್ನಣುಗವೆಂಬಳೇ ಮಾತೆ ಸತಿ | ಗಂಡನೆಂದೆಣಿಸುವಳೆ ಸುತನೆ ತಾತಂಗೆ ತಾಂ ಕೇಳ್ ಪ್ರತಿಜ್ಞೆಯನೆಂದನು||೪೪|
ಭೂಸುರರ್ ಬಂದು ಕಾಶಿಯೊಳೆಸೆವ ಮಣಿಕರ್ಣಿ | ಕಾಸಲಿಲದೊಳ್ ಮಿಂದು ಶಾಸ್ತ್ರ ವಿಧಿಯಿಂದಮುಪ | ವಾಸಮಂ ಮಾಡಿ ಶಿವರಾತ್ರಿಯೋಳ್ ವಿರಚಿಸಿದ ವಿಶ್ವೇಶಪೂಜೆಗಳನು|| ಹೇಸದೆಡಗಾಲಿಂದೆ ನೂಕಿದನ ದೋಷಮೆನ | ಗೀ ಸಾಯಕವನೆಡೆಯೊಳರಿಯದಿರಲಾಗಲೆಂ | ದಾ ಸುಧನ್ವ ತನ್ನ ಭುಜಬಲದೊಳಾರ್ದು ನಿಜಧನುವನೊದರಿಸುತಿರ್ದನು ॥೪೫॥
ಅನಿತರೊಳು ತ್ರೈಮೂರ್ತಿಗಳ ದಿವ್ಯಶಕ್ತಿಯಿಂ | ವಿನುತ ರಾಮಾವತಾರದ ಪುಣ್ಯಶಕ್ತಿಯಿಂ | ದನುಪಮ ಧನುರೈದದುರುಮಂತ್ರಶಕ್ತಿಯಿಂ ತೀವಿದ ಮಹಾತರವನು || ತನಗೆ ಭುಜಬಲದೊಳುಂಟಾದ ನಿಜಶಕ್ತಿಯಿಂ | ಕನಲಿ ಕಿವಿವರೆಗೆ ತೆಗೆದಾರ್ದು ಪಲುಗುಣವೆಚ್ಚ | ನೆನಿತು ನತ್ಯಾಧಿಕನೊ ಕಲಿಸುಧನ್ವಂ ಧರೆಯೊಳೇನೆಂಬೆನ ದ್ಭು ತವನು || ೪೬ ||
ಹೆದರಿತುಭಯದ ಸೇನೆ ಕೆದರಿತು ಸುರಸ್ತೋಮ | ಮೊದರಿತಿನಮಂಡಲಂ ಬೆದರಿತು ಜಗ ತ್ರಯಂ | ಬಿದರಿತು ಕುಲಾದ್ರಿಚಯ ಮುದುರಿತುಡುಸಂದೋಹನದಿರಿತಿಳೆ ತ ಕ್ತ್ಷಣದೊಳು| | ಕದಡಿತು ಮಹಾರ್ಣವಂ ಕದಲಿದಂ ಕಚ್ಚಪಂ । ಪುದುಗಿತೆಣ್ದೆಸೆಯಾನೆ ಹುದುಗಿದಂ ಭೋಗಿಪಂ ! ಗದಗದಿಸಿತಾ ಸಾಯಕದ ಬಿಸಿಗೆ ಬ್ರಹ್ಮಾಂಡಮದನೇನ ಬಣ್ಣಿಸುವೆನು |೪೭ ||
ಬೆಚ್ಚಿದನೆ ಬೆದರಿದನೆ ಚಿತ್ತದೊಳ್ ಕಲಿತನದ | ಕೆಚ್ಚು ಕೊರಗಿತೆ ಬಹ ಮಹಾಶರವನಾಗಳಾ | ರ್ದೆಚ್ಚಂ ಸುಧನ್ವ ನಿಕ್ಕಡಿಯಾದುದಂಬು ಬಿದ್ದುದು ಹಿಂದಣರ್ಧಮಿಳೆಗೆ || ಉಚ್ಚಳಿಸಿ ಬಂದು ಕೋ ಲ್ತುದಿಯವನ ಕಂಠಮಂ | ಕೊಚ್ಚಿ ಹಾಯ್ದ ತ್ತಳಲ್ದುದು ಮೇದಿನಿಯೊಳಾಗ | ಅಚ್ಯುತ ಮುರಾರಿ ಕೇಶವ ರಾಮ ಯೆನುತಿರ್ದುದಾ ತಲೆ ಚಿಗಿದು ನಭದೊಳು||೪೮||
ಕಂದು ಕುಂದಿಲ್ಲದ ಸುವೃತ್ತದಿಂದೆಸೆವ ತನ | ಕೊಂದುಬಾರಿಯುಮಿನ್ನು ಪರಪೀಡೆ ಲೇಸಲ್ಲ | ಮೆಂದು ನಿಜವೈರಮಂ ಬಿಟ್ಟು ಕಮಲಂಗಳಂ ಸಂತೈಸೆ ಗಗನದಿಂದ | |ಬಂದಪನೊ ಸಂಪೂರ್ಣಕಲೆಗಳಿಂದಾ ರಾಜಿ | ಪಿಂದುವೆನೆ ಕೃಷ್ಣನ ಪದಾಂಭೋಜ ಯುಗಳಕ್ಕೆ | ತಂದು ಬಿದ್ದುದು ಸುಧನ್ವನ ಶಿರಂ ಹರಿಯ ನಾಮಾವಳಿಯನುಚ್ಚರಿಸುತೆ || ೪೯ |
ತಪ್ಪಿದನಲಾ ಚಕ್ರಿ ಹಾಯೆಂದು ಸುರರುಲಿಯ | ಲುಪ್ಪರಿಸಿ ತಲೆ ಚಿಗಿಯಲವನಟ್ಟೆ ತೋಳಂ | ಚಪ್ಪರಿಸಿಕೊಂಡೆದ್ದು ಬಂದು ರಣರಂಗದೊಳ್ ತಿರುತಿರುಗಿ ಚಾರಿವರಿದು || ಅಪ್ಪಳಿಸಿ ಹೊಮ್ಮೆಳೆದು ಸದೆದಿಟ್ಟೊಡಂ ಮೆಟ್ಟಿ | ಸೊಪ್ಪಿಸಿ ಪೊರಳ್ದರೆದು ತೆವರಿ ಪರಿದರೆಯಟ್ಟಿ| ಚಿಪ್ಪು ಚೀರಾಗಿಸಿತು ಸಕಲಪರಿವಾರಮಂ ಮುರಹರಂ ಬೆರಗಾಗಲು||೫೦||
ಹೊಳೆವ ಕುಂಡಲದ ಕದಪಿನ ಮುರಿದೆಸೆವ ಮೀಸೆ | ಗಳ ನಗೆಮೊಗದ ರದನಪಙ್ಕಿಗಳ ಬಿಟ್ಟ ಕಂ | ಗಳ ಬಿಗಿದ ಹುಬ್ಬುಗಳ ಪೆರೆನೊಸಲ ತಿಲಕದ ನವಿರ ಹಿಣಿಲ ಕಾಂತಿಯಿಂದೆ || ಕಳಕಳಿಪ ತನಿವೀರರಸದುರುಳಿಯಂತೆ ತೊಳ | ತೊಳಗುವ ಸುಧನ್ವನ ಶಿರವನೆರಡು ಕೈಗಳಿಂ | ನಳಿನದಳಲೋಚನಂ ಪಿಡಿದೆತ್ತಿಕೊಂಡು ನೋಡಿದನವನದೇಂ ಸುಕೃತಿಯೊ ॥೫೧॥
ಕೈದಳದೊಳೆಸೆವ ತಲೆಯಂ ನಾಸಿಕಾಗ್ರದೆಡೆ | ಗೊಯ್ದು ಮುರಮಥನನಾಫ್ರಾಣಿಸಿದನಾತನೇ | ಗೈದನೆಂಬುದನಚ್ಯುತನೆ ಬಲ್ಲನಾಗಳಾ ಮೊಗದಿಂದೆ ತನ್ನ ಮೊಗಕೆ || ಐದಿತವನಾತ್ಮವತಿತೇಜದಿಂ ಬಳಕಮರ | ರೈದೆ ಬಣ್ಣಿಸಿದರಾ ಶಿರವನಸುರಾಂತಕಂ | ಮೈದುನಂಗುರೆ ತೋರಿ ಹಂಸಧ್ವಜನ ಮುಂದಕಿಡಲಟ್ಟೆ ಬಿದ್ದು ದಿಳೆಗೆ | ೫೨ |
ಭೂಪಾಲ ಕೇಳ್ ನೋಡುತಿರ್ದಂ ಸುಧನ್ವನಾ | ಟೋಪಮಂ ತಲೆ ಪಾರ್ಥನ ಸ್ತ್ರದಿಂ ಪರಿಯೆ ಸಂ ತಾಪದಿಂ ಮರುಗುತಿಳೆಯೊಳ್ ಪೊರಳ್ವಿ ನಮಾಶಿರಂ ತನ್ನ ಬಳಿಗೆ ಬರಲು || ಹಾ ಪುತ್ರಯೆನುತೆತ್ತಿಕೊಂಡು ಮುಂಡಾಡಿ ಪ ಣೆ | ಗಾಪಣೆಯನೊಂದಿಸಿ ಪೊಸೆದು ಚೀರ್ದು ಬಹಳ ಪ್ರ | ಲಾಪದಿನಳಲ್ದಂ ಮರಾಳಧ್ವಜಂ ಪೊರೆಯ ಕಲ್ಮರಂ ಕರಗುವಂತೆ ॥೫೩||
ಬೀಳ್ವೆನೋ ಶೈಲಾಗ್ರದಿಂದ ಕರ್ಮಡುವಿನೊಳ ಗಾಳ್ವೆನೋ ನಿ ಟ್ಟಿಪ ತನ್ನ ಕಂಗಳಂ | ಕೀಳ್ವೆನೋ ಪರಸಿ ಪಡೆದೊಡಲನುರೆ ಸೀಳ್ವೆನೋ ನಿನ್ನ ನುಡಿಗಳನೆಂದಿಗೆ|| ಕೇಳ್ವೆನೋ ಜನ್ಮ ಜನ್ಮಾಂತರದೊಳಾದೊಡಂ | ಪೇಳ್ವೆನೋ ನಿನಗೆ ಬೆಸನಂ ಮಗನೆ ಶೋಕಮಂ | ತಾಳ್ವೆನೋ ತಾನೆನ್ನೊಳುಸಿರಲಾಗದೆ ಮನಮೇಕಕಟ ನಿನಗೆಂದನು | ೫೪||
ಕೊಳುಗುಳಕೆ ನಡೆತಂದೆ ಬಿಲ್ವಿಡಿಯುತ್ತೈತಂದೆ | ಫಲುಗುಣನೊಡನೆ ಹೋರಿ ಜಯಿಸಬೇಡವೆ ಹೋರಿ । ಕಲಿತನದೊಳುಕ್ಕಂದದಾತ ನೀನೇಕಂದವಳಿದೆ ರಣದೊಳಗೆ ಕಂದ || ನಿಲಯಕೆಂತಾಂ ಪುಗುವೆನುಳಿದು ನಿನ್ನ ಂ ಮಗುವೆ | ಸಲಹು ಬಾ ನಮ್ಮಯ್ಯ ಮಾತಾಡು ದಮ್ಮಯ್ಯ | ಬಳಲಿಸದಿರೆ ತಮ್ಮ ನೊಮ್ಮೆ ನೊಡೈ ತಮ್ಮ ಯಿಂದಳಲೊಳವನಾಳ್ದನು ॥ ೫೫ ||
ಮೋಹಮುಳ್ಳುಡೆ ತಪ್ತ ತೈಲಪೂರಿತ ಘನಕ | ಟಾಹದೊಳ್ ಕೆಡಪಿಸುವನೇ ತಂದೆ ತನಯನಂ | ಬಾಹಿರಂಗದ ಶೋಕವೆಂದು ಜರೆಯದೆ ಲೋಕಮಾಗ ಹಲುಬಲ್ ತನ್ನ ನು || ದ್ರೋಹಮಂ ಮಾಡಿದೆ. ನಿನಗೆನ್ನ ಮೇಲೆ ಮುಳಿ | ದಾವದೊಳಳಿದೈ ಸುಧನ್ವ ಕಾಯ್ದೆಣ್ಣೆಯೊಳ್ | ದೇಹಮಂ ಕಾದ ಕೃಷ್ಣಂ ಕಾದಲಹಿತನೇ ಕಾದನ್ಯ ನಿನಗೆಂದನು ||೫೬||
ಅಣ್ಣದೇವಂ ಕದನಮಂ ಜಯಿಸಿ ಬಹನೆಂದು | ಬಣ್ಣದ ಸೊಡರ್ಗಳಂ ಕೈಗೈಸುವನುಜೆಯಂ | ಹುಣ್ಣಿಮೆಯ ಶಶಿಯಂದದಾಸ್ಯ ದೆಳನಗೆಯೊಳ್ಳೆತಹ ನಿನ್ನ ವಲ್ಲಭೆಯನು || ಹಣ್ಣಿದುತ್ಸಾಹಮಂ ಕೇಳು ತನ್ನೊಡಲೊಳಗೆ | ತಣ್ಣನಂ ತಳ್ಳು ಬಹ ನಿನ್ನ ನಿಜಮಾತೆಯಂ | ಕಣ್ಣಾರೆ ಕಾಣ್ಬೆನೆಂತಕಟ ವಿಪರೀತವಾದೊಡೆ ತನಯ ಹೇಳೆಂದನು || ೫೭ ||
ತಾತನಲ್ಲವೆ ನಿನಗೆ ತಾನೆನ್ನೊಳಿಂತಕಟ | ಮಾತಾಡದಿಹರೆ ನಿನ್ನಂ ಪಡೆದಳಂ ವೀರ। ಮಾತೆಯೆಂಬರ್ ಕಟ್ಟು ನರನ ಹಯಮಂ ಕಾದು ನಡೆ ಕೃಷ್ಣ ಫಲುಗುಣರೊಳು| | ಏತಕೆ ಬರಿದೆ ಸುಮ್ಮನಿಹೆ ಕಂಠಮಾಲೆಯೊಳ್ | ಜಾತಿನಾಯಕರತ್ನಮಂ ತೆಗೆದು ಬಿಸುಟಂತೆ | ಧಾತುಗೆಟ್ಟಿದೆ ತಮ್ಮ ಬಲಮೆಂದು ಹಲುಬಿದಂ ಧರೆಯೊಳ್ ಪೊರ ಳ್ದು ಮರುಗಿ||೫೮||=
ಲಂಬಿಸಿದನತಿಶೋಕ ಭಾರದಿಂ ಮೊಗಮಿಟ್ಟು | ಚುಂಬಿಸಿದನಡಿಗಡಿಗೆ ನಾನಾಪ್ರಕಾರದಿಂ | ಪಂಬಲಿಸಿ ಸುತನ ಗುಣಶೀಲಂಗಳಂ ನೆನೆದು ಹಳವಳಸಿದಂ ಪೆರ್ಚಿದ || ಕಂಬನಿಯ ಕಡಲೊಳಗೆ ಡಾವರಿಪ ವಡಬಶಿಖಿ | ಮೆಂಬಿನಂ ಕಾಣಿಸುವಳ ಲ್ಗಿಚ್ಚಿ ಗವನೊಡಲ | ನಿಂಬುಗೊಟ್ಟಂ ಮರುಗುತಿರ್ದುದು ಸಮಸ್ತ ಪರಿವಾರಮಾತನ ಸುತ್ತಲು ॥೫೯||
ಕಾಳಗಕೆ ಮುಂಕೊಂಡು ನಡೆವರಾರಿನ್ನು ತಮ | ಗೂಳಿಗವನಿತ್ತು ಬೆಸಸುವರುಂಟೆ ನೀನೆ ಕ | ಟ್ಟಾಳೆಂಬರಿಗಳಿಂತಳಿದಪರೆ ದಾತಾರ ವೀರ ಸುಕುಮಾರ ಧೀರ || ಕಾಳಾದುದಕಟ ಚಂಪಕನಗರದರಸುಗಳ | ಬಾಳುವೆ ಮಹಾದೇವ ಹಾ ಯೆಂದೊದರ್ದು ಪಡೆ | ಗೋಳಿಟ್ಟು ದಾನೆ ಕುದುರೆಗಳೊರೆವ ಕಂಬನಿ ಬಳ ಗ್ವಿವಿಗಳಿಂ ಜೋಲ್ದುವು ॥೬೦||
ಬಳಿಕಾ ಸುಧನ್ವನ ಸಹೋದರಂ ಸುರಥಂ ಬ ಹಳಶೋಕಭಾರಮಂ ತಳೆದಿರ್ದವಂ ಕೂಡೆ | ತಿಳಿದು ಕಡುಗೋಪದಿಂ ಬಿಲ್ಗೊಂಡು ನುಡಿದನೆಲೆ ತಾತ ಕೇಳೀತನಿಂದು || ನಳಿನನಾಭನ ಮುಂದೆ ಭಾಷೆಯಂ ಪೂರೈಸಿ | ಕೊಳುಗುಳದೊಳಳಿದನಿದಕಿನ್ನು ದುಃಖಿಸಲೇತ | ಕಳಲದಿರ್ ಧುರದೊಳೆನ್ನಾ ಟೋಪಮಂ ನೋಡೆನಲ್ಕರಸನಿಂತೆಂದನು||೬೧||
ಉಂಟು ಕೃಷ್ಣನ ಮುಂದೆ ಭಾಷೆಯಂ ಪೂರೈಸಿ | ಟೆಂಟ ಣಿಸದೊಡಲಂ ತೊರೆದು ಮುಕ್ತಿ ರಾಜ್ಯಮಂ | ವೆಂಟಣಿಸಿಕೊಂಡಂ ಸುಧನ್ವನಿಂತಿದಕಾಗಿ ಧೃತಿಗೆಟ್ಟಳಲ್ವುದಿಲ್ಲ | ಕಂಠಮಂ ಕತ್ತರಿಸಲಾ ಶಿರಂ ತನ್ನೆಡೆಗೆ | ಬಂಟುಗೆಡದೈದಿದೊಡೆ ತೆಗೆದೆತ್ತಿಕೊಂಡು ವೈ i ಕುಂಠನೀಕ್ಷಿಸಿ ಮತ್ತೆ ಬಿಸುಟನೆಂಬುದಕೆ ಮರುಗುವೆನೆಂದೊಂಡಿತೆಂದನು |೬೨||
ತಾತ ಚಿತ್ತೈಸಿದರೋಳೇನಹುದು ತಿರುಗಿ ಬಿಸು | ಡೀತಲೆಯನುಸುರಾಂತಕನ ಚರಣದೆಡೆಗೆ ಸಹ | ಜಾತನಂ ಕೊಂದಾತನಂ ಕೊಲ್ವೆನೆಂದು ಸುರಥಂ ರಥಕಡರ್ದಬಳಿಕ || ಖಾತಿಯಿಂದಾ ಶಿರವನಾ ಮರಾಳಧ್ವಜಂ | ಪೀತಾಂಬರನ ಪೊರೆಗೆ ಹಾಯ್ಕಲಾ ಮುರಹರಂ | ಪ್ರೀತಿಯಿಂ ತೆಗೆದು ನಭಕಿಡಲದಂ ರುಂಡಮಾಲೆಯೊಳಾಂತನಲ್ಲಿ ಶಿವನು ||೬೩||
ಅಡಗಿತಾ ಶಿರಮಲ್ಲಿ ಹಂಸಧ್ವಜಂ ತನ್ನ | ಪಡೆಸಹಿತ ನಿಂದನಾಹವಕೆ ಸನ್ನಾಹದಿಂ | ದೊಡಹುಟ್ಟಿದಂ ಮಡಿದಳಲ್ಗೆ ಸುರಥಂ ರಥಕಡರ್ದು ನಿಜಕಾರು ಕವನು | ಮಿಡಿದು ಕೃಷ್ಣಾರ್ಜುನರ ಸರಿಸಕ್ಕೆ ತರಲವನ | ಕಡುಶೌರಮಂ ಕಂಡು ಶಂಕೆಯಿಂ ದೇವಪುರ | ದೊಡೆಯ ಲಕ್ಷ್ಮೀವರಂ ಮಾಡಿದಂ ತನ್ನ ಮೈದುನನೊಳಾಲೋಚನೆಯನು ||೬೪||
ಜೈಮಿನಿ ಭಾರತ 29
ಹದಿನೈದನೆಯ ಸಂಧಿ ಮೊದಲ ಭಾಗ
ಪದ್ಯ 1 ರಿಂದ 25
ಪಾರ್ವತಿಯ ತಪೋಭೂಮಿ
ಸಂಕ್ಷಿಪ್ತ ರೂಪ
ಕೃಷ್ಣನು ಹಸ್ತಿನಾವತಿಗೆ ತೆರಳಿ ಧರ್ಮಜನಿಗೆ ಎಲ್ಲ ವರದಿ ಹೇಳಿದನು. ಇತ್ತ ಅರ್ಜುನನ ಸೇನೆ ಮುಂದೆ ಸಾಗಿತು. ಬೇಸಗೆಯ ಕಾಲ ಬಂದಿತು. ಭೂಮಿಯು ಕಾದು ನೀರಿನ ಸೆಲೆಗಳು ಬತ್ತಿ ಮರಗಳು ಬಾಡಿ ಕಡುಕಷ್ಟದಿಂದ ಸೇನೆಯು ನಡೆಯಿತು. ಅಲ್ಲಲ್ಲಿ ಇದ್ದ ಅರವಟ್ಟಿಗೆಗಳಲ್ಲಿ ನೀರು ಕೊಡಲು ನೀರೆಯರಿದ್ದರು. ಅವರ ನೋಟದಲ್ಲಿ, ಬೇಟದಲ್ಲಿ ಸ್ವಲ್ಪ ಹಗುರಾದ ಪಾಂಥರು ಮತ್ತೆ ಮತ್ತೆ ಅಲ್ಲಿ ಸುಳಿಯುತ್ತಿದ್ದರು.
ಮೊದಲೇ ಹೆಚ್ಚು ಇದ್ದ ಸೈನ್ಯ ಹಂಸಧ್ವಜನ ಸೈನ್ಯವೂ ಸೇರಿ ಇನ್ನಷ್ಟು ಹೆಚ್ಚಾಗಿ ನಡೆಯಿತು.
ಒಂದೆಡೆಯಲ್ಲಿ ಹಯವು ಹೆಣ್ಣುಕುದುರೆಯಾಗಿ, ಹುಲಿಯಾಗಿ ಮತ್ತೆ ಮುರಾರಿಯ ಮಹಿಮೆಯಿಂದ ಮೊದಲಿನಂತೆ ಮುನ್ನಡೆಯಿತು ಎನ್ನಲು ಜನಮೇಜಯನು ಚಕಿತನಾಗಿ ಆ ವೃತ್ತಾಂತವನ್ನು ಪೂರ್ಣವಾಗಿ ಹೇಳಬೇಕು ಎಂದು ಪ್ರಾರ್ಥಿಸಿದನು.
ಹಿಂದೆ ಪಾರ್ವತಿಯು ಶಿವನನ್ನು ಒಲಿಸಲು ತಪವನ್ನು ಆಚರಿಸಲೆಂದು ಸೂಕ್ತ ಸ್ಥಳವನ್ನು ಅರಸುತ್ತಿದ್ದಾಗ ಒಂದೆಡೆಯಲ್ಲಿ ಸುಂದರವಾದ ಸ್ಥಳ ಕಂಡಿತು. ಹಿಮಾಲಯದ ತಪ್ಪಲಿನಲ್ಲಿದ್ದ ಆ ಜಾಗದಲ್ಲಿ ಅತ್ಯಂತ ಸುಂದರವಾದ ಸರೋವರ ಗೋಚರಿಸಿತು.
ಮಣಿರತ್ನ ಸೋಪಾನಗಳಿಂದ, ವಿವಿಧ ಬಗೆಯ ಕಮಲಗಳಿಂದ, ಕಂಪಿನ ಗಾಳಿಯಿಂದ, ಪಕ್ಷಿಗಳ ಕಲರವದಿಂದ, ಕೂಡಿತ್ತು. ಸುತ್ತಲಿನ ತರುಲತೆಗಳಲ್ಲಿ ಹೂಹಣ್ಣುಗಳು ಸೊಂಪಾಗಿ ಬೆಳೆದಿದ್ದವು. ಕೋಕಿಲಗಳ ಧ್ವನಿ ಇಂಪಾಗಿ ಕೇಳಿಬರುತ್ತಿತ್ತು. ಅಲ್ಲಿನ ಸರೋವರದಲ್ಲಿ ಪದ್ಮಿಗಳ ಚೆಲುವು ಹೆಚ್ಚಾಗಿತ್ತು .ತರಂಗಲೀಲೆಯಿಂದ ಕೊಳವು ಕಂಗೊಳಿಸುತ್ತಿತ್ತು. ದುಂಬಿಗಳ ಝೇಂಕಾರ ಅಲ್ಲೆಲ್ಲ ಹರಡಿತ್ತು.
ಅಲ್ಲಿ ಒಂದು ಆಶ್ರಮವನ್ನು ಮಾಡಿಕೊಂಡು ಪಾರ್ವತಿ ಶಿವನನ್ನು ಆರಾಧಿಸುತ್ತಿದ್ದಳು. ಅವಳಿಗೆ ಹಿತವಾಗುವಂತೆ ಋತುಗಳು ಸಹಕರಿಸುತ್ತಿದ್ದುವು. ಸದಾ ಕಾಲಕ್ಕೂ ಹೂಗಳು ಹಣ್ಣುಗಳು ಇರುತ್ತಿದ್ದವು. ಹಿತವಾದ ಗಾಳಿ ತಂಪಾಗಿತ್ತು.
ಅಲ್ಲಿ ಹಂಸಗಳು ಸದಾ ಇರುತ್ತಿದ್ದವು. ಆನೆಗಳು ಸಿಂಹಗಳ ಮರಿಗಳಿಗೆ ಹಾಲೂಡುತ್ತಿದ್ದವು. ಯಾವುದೇ ವೈರವಿಲ್ಲದೆ ಇಲಿ ಬೆಕ್ಕುಗಳಿದ್ದವು. ಕಮಲಗಳು ಮುದುಡದೆ ಇದ್ದವು. ಎಲ್ಲಿಯೂ ಪರಸ್ಪರ ವೈರವಿರಲಿಲ್ಲ. ಪಶು ಪಕ್ಷಿಗಳು ಅವಳ ಪರಿಚರ್ಯೆಯನ್ನು ಮಾಡುತ್ತಿದ್ದವು. ತರುಗಳು ಬಯಸಿದ್ದನ್ನು ಕೊಡುತ್ತಿದ್ದವು. ದೇವಿಯನ್ನು ಸೇವಿಸಲು ಸಪ್ತಮಾತೃಕೆಯರು, ಅಣಿಮಾದಿ ಸಿದ್ಧಿಗಳು, ದ್ಯುತಿ, ಮತಿ ಕಾಂತಿ ಮುಂತಾದ ಮಂತ್ರಶಕ್ತಿಗಳು ಅಲ್ಲಿ ನೆರೆದಿದ್ದರು. ಅವಳು ಶಿವನ ಭಜನೆಯಲ್ಲಿ ನಿರತಳಾಗಿದ್ದಳು. ಅವನಿಗೆ ಮಾನಸಿಕವಾಗಿಯೇ ಷೋಡಶೋಪಚಾರಗಳಿಂದ ಪೂಜಿಸುತ್ತಿದ್ದಳು. ಅವಳ ಈ ಬಗೆಯ ಕಠಿಣ ತಪಸ್ಸನ್ನು ಬ್ರಹ್ಮಾದಿ ದೇವತೆಗಳು ತಡೆಯಲು ಯತ್ನಿಸಿದರೂ ಬಿಡದೆ ಶಿವನ ಧ್ಯಾನದೊಳಿದ್ದಳು.
ಹದಿನೈದನೆಯ ಸಂಧಿ. ಮೊದಲ ಭಾಗ
ಪದ್ಯ 1 ರಿಂದ 25
ಸೂಚನೆ | ತಣ್ಗ ದಿರನನ್ವಯದ ಪಾರ್ಥನ ತುರಂಗಮದು | ಪೆಣ್ಗುದುರೆಯಾಗಿ ಪೆರ್ಬುಲಿಯಾಗಿ ಪಳಿಯಂತೆ | ಕಣ್ಗೊಳಿಸುವಮಲಾಶ್ವಮಾಗಿ ಯಾಶ್ಚರ್ಯದಿಂ ಸ್ತ್ರೀರಾಜ್ಯಮಂ ಪೊಕ್ಕುದು |
ವಿಸ್ತರಿಪೆನಿನ್ನು ಮೇಲ್ಗತೆಯನಾಲಿಸು ನೃಪರ | ಮಸ್ತಕದ ಮಳಿ ಜನಮೇಜಯ ಧರಾನಾಥ | ಹಸ್ತಿನಾಪುರಕೆ ಬಂದಸುರಾರಿ ಹಂಸಧ್ವಜನ ದೇಶದಿಂದೆ ತಂದ || ವಸ್ತುಗಳನವನಿಪತಿಗೊಪ್ಪಿಸಿದನಲ್ಲಿಯ ಸ | ಮಸ್ತವೃತ್ತಾಂತಮಂ ವಿವರಿಸಿದನಿತ್ತ ಸುಭ | ಟ ಸ್ತೋಮಸಹಿತರ್ಜುನಂ ಬಡಗಮುಂತಾಗಿ ತಿರುಗಿದಂ ತುರಗದೊಡನೆ ||೧||
ಅಲ್ಲಿಂದ ಮುಂದೆ ನಡೆದುದು ಗ್ರೀಷ್ಮ ಕಾಲದೊಳ್ | ಸಲ್ಲಲಿತವಾಜಿ ಪಾರಿಪ್ಲವಕೆ ಭೂತಲದೆ | ಳೆಲ್ಲಿಯುಂ ಕೆರೆತೊರೆಗಳೊರತೆ ಬರೆತುವು ನೀ ರ್ನೆಳ ಲ್ಗಳವರಸಿ ಪಾಂಥರು | ಘಲ್ಲಿಸುವ ಬೇಸಗೆಯ ಬಿಸಿಲಿಂದೆ ಮೂಜಗಂ | ತಲ್ಲಣಿಸಿತಿಳೆಯ ಕಾಹಿಳಿದು ಪಾತಾಳದಹಿ | ವಲ್ಲಭನ ಪಡೆವಣಿಯ ರುಚಿಗಳಾತಪದಂತೆ ಕಾಣಿಸದೆ ಮಾಣವೆನಲು||೨||
ಒಂದುಕಡೆಯೊಳ್ ಸೋವಲೊಂದುಕಡೆಯೊಳ್ ತಮಕೆ | ನಿಂದು ಮರೆಯಾಗಿರ್ಪ್ಪುದಿನ್ನಿದಂ ಕರಗಿಸುವೆ | ನೆಂದು ಕನಕಾಚಲವನುರಿಪುವನೊ ತರಣಿ ಕಿರಣದೊಳೆನೆ ಬಿಸಿಲ್ಗರೆಯಲು || ಬೆಂದು ಬೆಂಡಾಗಿ ಕುಲಶೈಲಂಗಳಾಸರಿಂ | ಕಂದರದ ಮೊಗದಿಂದೆ ಬಿಡುವ ಬಿಸುಸುಯ್ಯಲರ್ | ಬಂದಪುದೆನ ಲ್ಕೆ ಝಳದಿಂ ಬಿಡದೆ ಬೀಸುತಿರ್ದುದು ಗಾಳಿ ಬೇಸಗೆಯೊಳು||೩||
ಅವನಿಯೊಳ್ ಸಕಲ ಭೂ ಭ್ರುತ್ಕುಲದ ಸೀಮೆಗಳ | ನವಗಡಿಸಿ ಪೊಕ್ಕು ನಿಖಿಳಪ್ರಾಣಿಗಳ ತಾ | ಪವನೊದವಿಸುವ ದುರ್ಧರ ಗ್ರೀಷ್ಮ ರಾಜನ ನೆಗಳ ಚತುರಂಗಮೆನಲು || ರವಿಯ ಕಡುಗಾಯ್ತುಗಳ ತೆರೈಸಲೊತ್ತರಿಸಿ | ಕವಿದುವು ಬಿಲ್ಲು ದುರೆಗಳ ಕಾಯ್ದಿರಿಯ ಕರಿಗ | ಇವಧಿಯಿಲ್ಲಿದೆ ಮುಸುಕಿದುವು ಬಹಳ ತರುಗಳಿತ ದಳದಳಾಳಿಗಳಿಡಿದು||೪||
ಅರವಟ್ಟಿಗೆಯೊಳಿರ್ದು ನೀರೆರೆವ ತರಳೆಯರ | ಬರಿವೇಟಕೆಳಸಿ ತಪಿಸುವ ಪಥಿಕರಂ ಬಯ | ಲ್ದೊರೆಗಾಸೆಯಿಂ ಪರಿದು ಬಳಲುವ ಮೃಗಗಳಂ ಕರುವಾಡದೊಳ್ ದಳದೊಳು|| ಉರುವ ಕಾಂತೆಯರ ಕೂಟದ ಸೊಕ್ಕುದಕ್ಕೆ ಯೊಳ್ | ಮಿರುಗುವಧರಾಮೃತವನೀಂಟಿ ಸೊಗಸುವ ಸುಖಿಗ | ಳುರೆ ಜರೆವ ತನಿವೇಸಗೆಯ ದಿನದೊಳಧ್ವರಾಶ್ವದ ಕೂಡೆ ಪಡೆ ನಡೆದುದು||೫||
ಅನುಸಾಲ್ವ ಪ್ರದ್ಯುಮ್ನ ವೃಷಕೇತು ಯೌವನಾ | ಶ್ವನ ತನಯ ನೀಲಧ್ವಜರ್ ನರಂಗಿವರೈವ | ರನುವರ್ತಿಗಳ್ ಬಳಿಕ ಹಂಸಧ್ವಜನ ಸಖ್ಯವಾದುದದಕಿಮ್ಮಡಿಯೆನೆ || ತನತನಗೆ ಮುಂಕೊಂಡು ನಡೆದುದಾ ತುರಗದೊಡ | ನನಿಬರ ಚತುರ್ಬಲಂ ಬಹಳ ಗಿರಿ ಪುರ ದೇಶ | ವನ ಪಳ್ಳ ಕೊಳ್ಳಂಗಳಂ ತುಳಿದು ಕಣದ ಘಟ್ಟಣಿಯಂತೆ ಸಮಮಾಗಲು||೬||
ಹಯಮುತ್ತರಾಭಿಮು ಖವಾಗಿ ಪಾರಿಪ್ಲವ ಧ । ರೆಯೊಳ್ಳೆದಿ ಪೆಣ್ಗು ದುರೆಯಾಗಿ ಪುಲಿಯಾಗಿ ವಿ | ಸ್ಮಯದಿಂದೆ ಪಾರ್ಥನಂ ಬೆದರಿಸಿ ಮುರಾರಿಯ ಮಹಿಮೆಯಿಂದೆ ಮುನ್ನಿನಂತೆ|| ನಿಯಮಿತಮಖಾಶ್ವ ಮಾದತ್ತೆನಲ್ಕಾಗ ಸಂ | ಶಯದಿಂದೆ ಜನಮೇಜಯಂ ಮುನಿಪ ತಿಳಿಪು ನಿ | ಶ್ಚಯವನೀ ತುರಗಮಿಂತಾದ ಕಥನವನಿಂದು ಬೆಸಗೊಂಡೊಡಿಂತೆಂದನು ||೭||
ಧರಣಿಪತಿ ಕೇಳಾದೊಡಿನ್ನು ಪೂರ್ವದೊಳಿಂದು | ಧರನಂ ಮನೋಭಾವದಿಂದರ್ಚಿಸುವೆನೆಂದು | ಗಿರಿತನುಜೆ ತಪಕೆ ಪುಣ್ಯಾರಣ್ಯವಾವುದೆಂದರಸಿಕೊಂಡೈತರ ಲ್ಕೆ ॥ ಪರಿಶೋಭಿಸಿತು ಮುಂದೆ ಹಂಸ ಕಾರಂಡ ಮಧು | ಕರ ಕೋಕ ಮಧುರ ಮೃದುತರ ಕಲಮದೋತ್ಕರ | ಸ್ವರ ಕಮಲ ಕುವಲಯ ವಿರಾಜಿತಶ್ರೀಕರಂ ಪದ್ಮಾಕರಂ ಚೆಲ್ವೆನೆ||೮||
ಲಸದಮಲರತ್ನ ಸೋಪಾನದಿಂ ಮಾನದಿಂ | ಬಿಸವನಾಸ್ಪಾದಿಸುವ ಚಕ್ರದಿಂ ನಕ್ರದಿಂ | ದೆಸೆದೆಸೆಗೆ ಬೀರ್ವ ತನಿಗಂಪಿನಿಂ ತಂಪಿನಿಂ ತೊಳಪ ಹಿಮಕರಕಾಂತದ | ಪೊಸಸಣ್ಣಗೆವೊಲಿಡಿದ ಪುಳಿನದಿಂ ನಳಿನದಿಂ | ದೊಸೆದು ಬಿನದಿಪ ಹಂಸಕೇಳಿಯಿಂದೋಳಿಯಿಂ | ದೆಸೆವ ನೀರ್ವಕ್ಕಿಗಳ ಸಂಗದಿಂ ಶೃಂಗದಿಂದಾಕೊಳಂ ಕ ಣ್ಗೆಸೆದುದು||೯||
ತಳದೊಳೊಪ್ಪುವ ಪಸುರೆ ಗಳ ರೋಚಿಯಿಂ ನಡುವೆ | ತೊಳಪ ಕೆಂದಳದ ದೀಧಿತಿಯಿಂದ ಮೇಲೆ ಕಂ | ಗೊಳಿಪ ಹೊಂಗೇಸರದ ಕಾಂತಿಯಿಂದೆರಗುವ ಸಿತಾಳಿಯ ಮರೀಚಿಯಿಂದೆ || ಹೊಳೆಹೊಳೆವ ಕೋಕನದ ಪಂಜ್ಞೆಗಳ ಬಣ್ಣಮು | ಜ್ವಲದಿಂದ್ರಚಾಪದಾಕಾರಮಂ ಸಂತತಂ | ಪಳಿವಂತೆ ಕೊಳದೊಳಾರಾಜಿಸಿತು ತುಹಿನ ಗಿರಿ ರಾಜ ನಂದನೆಯ ಕಣ್ ।।೧೦||
ನಿರುತಂ ಕ.ಮುದಶೋಭಿ ನೈರುತ್ಯದಂತೆ ವಾ | ನರಸೈನ್ಯದಂತೆ ಕಮಲೋದರೋದ್ಭಾಸಿ ಭಾ | ಸುರ ಶುಕ್ಲ ಪಕ್ಷದಂತಹಿತಲ್ಪದಂತೆ ಕವಿಸೇವಿತಂ ಗಗನದಂತೆ || ಧರಣಪಾಲಯದಂತೆ ಸುಮನೋಹರಂ ನಿಶಾ | ಚರವಂಶದಂತೆ ಮಾಲಾಕಾರಜನದಂತೆ | ಹರಿಜನ್ಮ ಭೂಮಿ ಗೋಕುಲದಂತೆ ವನದಂತೆ ತತ್ಸರಂ ಕಂಗೊಳಿಸಿತು||೧೦||
ವನಮಾಲಿಯಂದದಿಂ ಪ ದ್ಮಿ ಪದ್ಮಿಯವೋಲ್ ಭು | ವನಕುಕ್ಷಿ ಭುವನಕುಕ್ಷಿಯ ತೆರದೆ ಹಂಸಲೋ | ಚನಶೋಭಿ ಹಂಸಲೋಚನಶೋಭಿಯಂತೆ ವರಚಕ್ರಿ ವರಚಕ್ರಿಯವೊಲು || ಅನಿಮಿಷಾಶ್ರಯಮೂರ್ತಿಯನಿಮಿಷಾಶ್ರಯಮೂರ್ತಿ | ಯೆನೆ ಕುವಲಯಾಧಾರಿ ಕುವಲಯಾಧಾರಿವೋಲ್ | ವನಮಾಲಿಯೆನಿಸಿ ರಂಜಿಸುವ ಕಾಸಾರಮಂ ಸರ್ವಮಂಗಳೆ ಕಂಡಳು ॥೧೧||
ಅಳಿಯ ವರ್ಗವನಾದರಿಸುತೆ ಮಿತ್ರಸ್ನೇಹ | ದೊಳೆ ಸಂದು ಸುತರಂಗಲೀಲೆಯಂ ಲಾಲಿಸುತೆ | ಕುಲಸದಭ್ಯುದಯಮಂ ನೆಲೆಗೆಯ್ದು ಕಾಂತನುಕೂಲರಮಣೀಯವಾಗಿ | ಲಲಿತ ಲಕ್ಷ್ಮೀನಿವಾಸ ಸ್ಥಾನಮೆನಿಸಿ ಮಂ | ಗಳವಿಭವಕಡೆಗೊಟ್ಟು ಸಕಲಸೌಭಾಗ್ಯಮಂ | ತಳೆದ ಸಾಂಸಾರಿಕನ ತೆರದಿಂದೆ ವಿಮಲಪದ್ಮಾಕರಂ ಕಣ್ಣಿ ಸೆದುದು ll೧೩||
ಕಳಹಂಸಮಾಕೀರ್ಣವಾಗಿರ್ದು ಕಾಳೆಗದ | ಕಳನಲ್ಲ ವಿಷಭರಿತವಾಗಿರ್ದು ಸರ್ಪಸಂ | ಕುಳಮಲ್ಲ ಕುಮುದಯುತವಾಗಿರ್ದು ಖಳರಂತರಂಗದಾಳಾಪವಲ್ಲ || ಅಳಿದುಳಿದು ಭಂಗಮಯವಾಗಿರ್ದು ಮುರಿದ ನೃಪ | ದಳಮಲ್ಲ ಬಹುವಿಚಾರಸ್ಥಾನಮಾಗಿರ್ದು | ತಿಳಿಯಲು ಪದ್ರವಸ್ಥಳಮಲ್ಲಮೆನಿಸಿರ್ದುದಾ ವಿಮಲಸರಸಿ ಕಣ್ಗೆ||೧೪||
ಆ ಸರಸ್ತಟದಲ್ಲಿ ಕಲ್ಪಿಸಿದಳಾಶ್ರಮ ನಿ । ವಾಸಮಂ ಭಕ್ತಿ ಯಿಂ ಭಜಿಸಿದಳಗೇಂದ್ರಜೆ ಸು | ಧಾಸೂತಿಮಳಿಯಂ ಮೆಚ್ಚಿದಂ ಶಂಭು ವರಮಂ ಕೊಟ್ಟನಿಲ್ಲಿ ನಿನ್ನ || ಮೀಸಲ ತಪಕ್ಕೆ ಡರ್ ಬಾರದಿರಲೆಂದು ಬಳಿ | ಕೇಸರಿಸದಲ್ಲಿ ಚಿರಕಾಲಮಿರುತಿರ್ದಳು | ಲ್ಲಾಸದಿಂ ಧೂರ್ಜಟಿಯ ರಾಣಿ ಯೋಗಿನಿಯೊ ತಾನೆಂಬ ತೆರದಿಂ ಬನದೊಳು||೧೫||
ಇಂದುಮೌಳಿಯ ಪದಧ್ಯಾನಮಂ ಮಾಡುವಾ | ನಂದಮಿ ನ್ನೇನತಿರತಶಯವೋ ಶಿವನರೆಮೆಯೊ | ಳೊಂದಿರ್ದಸೌಖ್ಯಮಂ ಮರೆದು ಪಾರ್ವತಿ ತಪಸ್ಸಿನಿಯಾಗಿ ತಿಳಿಗೊಳದೊಳು || ಮಿಂದನುದಿನಂ ಜಪ ತಪೋನಿಯಮ ಯೋಗಂಗ | ಳಿಂದೆ ಭಜಿಸಿದಳಂತರಾತ್ಮನಂ ಸಕಲಸುರ | ವೃಂದವಂದಿತ ಪಾದಪದ್ಮನಂ ಸುಜ್ಞಾನಸದನಂ ಕಾನನದೊಳು||೧೬||
ಬೀಸದು ಬಿರುಸುಗಾಳಿ ಬಿಸಿಯ ಬಿಸಿಲವನಿಯಂ | ಕಾಸದು ದವಾಗ್ನಿ ಪುಲ್ಗಳೊಳೊಂದನಾದೊಡಂ | ಬೇಸದು ಮುಗಿಲ್ಗಳವಿಭರದಿಂ ಸಿಡಿಲ್ಕಿಂಚುಗಳ ಕೂಡೆ ಪೆರ್ಮಳೆಯನು || ಸೂಸದು ತಳೆದ ಪೂತಳಿರ್ಗಳಿಂಪಿನ ಸೊಂಪು | ಮಾಸದು ತರುಗಳಲ್ಲಿ ಪ ಣ್ಗಾಗ್ಯಳಂ ಬೀಯ | ಲೀಸದು ಸಮಸ್ತಋತುಸಮಯಂಗಳಚಲೇಂದ್ರ ತನುಜೆ ತಪಮಿರೆ ಬನದೊಳು ||೧೭||
ಅಂಚೆಗಳುಡುಗವು ಮಳೆಗಾಲದೊಳ್ ಕೋಗಿಲೆಗ | ಳಿಂಚರವನುಳಿದಿರವು ಮಾಗಿಯೊಳ್ ಬೇಸಗೆಯೊ | ಳುಂ ಚಿಗುರಿದೆಳವುಲ್ ಮೃಗಂಗಳ್ಗೆ ಬೀಯದಗಲದು ಚಕ್ರಮಿಥನಮಿರುಳು || ಹೊಂಚದು ಪಗಲ್ ಗೂಗೆ ಸಂಪಗೆಯ ಲರ್ಗಳಂ | ಚಂಚರೀಕಂಗಳಡರದೆ ಮಾಣವೆಸೆವಕಮ | ಲಂ ಚಂದ್ರನುದಯಕು ತ್ಪಲಮಿನಕಿರಣಕೆ ಬಾಡದು ಬನದೊಳುಮೆ ಯಿರರಲ್ಕೆ ||೧೮||
ಕಾಡಾನೆಗಳ್ ಕೇಸರಿಗಳ ಮರಿಗಳ್ಗೆ ಮೊಲೆ | ಯೂಡುವುವು ಪುಲ್ಲೆ ಗಳ್ ಪೆರ್ಬುಲಿಗಳೊಳ್ ಸರಸ | ವಾಡುವುವು ಪಾವು ಮುಂಗುಲಿಗಳೊಡಗೂಡುವುವು ಮೂಷಕಂ ಮೇಲೆ ಬಿದ್ದು || ಕಾಡುವುವು ಮಾರ್ಜಾಲಮಂ ಮೊಲಂ ತೋಳನಂ | ಬೇಡುವುವು ಮೇವುಗಳನೊಂದುಬಳಿಯೊಳ್ ಗೂಡು | ಮಾಡುವುವು ಪದ್ದು ಕಾಗೆಗಳೆಂತೊ ಸಾತ್ವಿಕಮಪರ್ಣೆಯ ತಪೋವನದೊಳು||೧೯||
ಪರಿಚ ರ್ಯೆಯಂ ಮಾಡುವುವು ಕೋಡಗಂಗಳಿ | ರ್ದರಗಿಳಿಗಳಾಡುವುವು ಕೂಡೆ ಸರಸೋಕ್ತಿಯಂ | ಬರಿಕೈಗಳಂ ನೀಡಿ ಪಣ್ಗಾಯಲರ್ಗಳಂ ದಂತಿಗಳ್ ಕುಡುತಿರ್ಪುವು || ಪಿರಿದು ಬಯಸಿದ ವಸ್ತುಗಳನಿತ್ತಪುವು ಕಲ್ಪ | ತರುಗಳೆಡೆಯಾಟದಾಸರ್ಗಳಂ ಕಳೆದಪುವು | ಪರಿಮಳದಲರ್ಗಳಗಜೆಯ ತಪೋವನದೊಳಾವಾಸವಾಗಿರ್ಪವರ್ಗೆ||೨೦||
ಅಷ್ಟಯೋಗಿನಿಯರಣಮಾದಿಗಳ್ ವಿನುತ ಚೌ | ಷಷ್ಟಿ ಕಲೆಗಳ್ ಸಪ್ತಮಾತೃಗಳ ಜಗದೊಳು | ತ್ಕೃಷ್ಟ ನದಿಗಳ್ ದಿವಾರಾತ್ರಿಗಳ ತಿಥಿತಾರಕಾಪ್ಸ ರೋವಿಸರಂಗಳು || ತುಷ್ಟಿದಯಿ ಪುಷ್ಟಿ ಧೃತಿ ಮತಿ ಶಾಂತಿ ದಾಂತಿ ಕೃತಿ | ನಿಷ್ಠೆ ನುತಿಗಳ್ ಸಕಲವರಮಂತ್ರಶಕ್ತಿಗಳ್ | ಸೃಷ್ಟಿಯ ಸಮಸ್ತಾಭಿಮಾನದೇವತೆಯರಿರ್ದರು ದೇವಿಯಂ ಸೇವಿಸಿ||೨೧||
ಆ ವನದೊಳೆಸಗಿದಳ್ ಪಾವನಚರಿತ್ರನ ಕೃ | ಪಾವನಧಿಯ ವಿಶ್ವಸಂಭಾವನನ ಭಕ್ತಸಂ | ಜೀವನನ ತ್ರಿಜಗಮಂ ಕಾವನ ಸುವಾಂಛಿತವನೀವನ ಹಿಮಾಂಶುಧರನ || ದೇವ ನರ ನಾಗ ದೈತ್ಯಾವನತ ಪಾದರಾ | ಜೀವನ ಭವಾಂಭೋಧಿನಾವನ ದುರಿತ ವಿಪಿನ | ದಾವನ ಕಲತ ವಿಷಗ್ರೀವನ ಶಿವನ ಮಹಾದೇವನ ಭಜನೆಯನಗಜೆ||೨೨||
ನಿಜನಿರ್ಮಲಿತರೂಪನಂ ಪೂರ್ವಪೂರ್ವನಂ | ಗಜ ದಾನವ ಧ್ವಂಸಿಯಂ ಕಾಲಕಾಲನಂ | ರಜನೀಶ ಕೊಟೀರನಂ ಭಕ್ತಭಕ್ತನಂ ಬಹಳ ತೇಜೋಮಯನನು || ಅಜಿನಾಂಬರನನಖಿಳದಿಕ್ಪಾಲ ಪಾಲನಂ | ಭುಜಗ ಧರನಂ ಸಖೀಕೃತ ರಾಜ ರಾಜನಂ ।ಸುಜನರಕ್ಷಾ ಶೀಲನಂ ದೇವದೇವ ನಂ ಭಜಿಸಿದಳಗಜೆ ಬನದೊಳು||೨೩||
ಅಗುರು ಚಂದನ ಸುಗಂಧಾಕ್ಷತೆಯ ಪರಿಮಳದ | ಬಗೆಬಗೆ ಯ ಬಿರಿಮುಗಳ ಮಂಜರಿಯ ಗುಗ್ಗುಳದ | ಪೊಗೆಯ ಧೂಪದ ಬಹಳವರ್ತಿಗಳ ಕರ್ಪೂರ ನೀರಾಜನದ ಕಂಪಿನ || ಒಗುಮಿಗೆಯ ವಿವಿಧೋಪಹಾರದ ಸುವಾಸಿತದ | ಮೊಗಮಾಸದಮಲ ತಾಂಬೂಲದ ಪರಿಕ್ರಮದ | ಸೊಗಸಿನ ಕೃತೋಪಚಾರಂಗಳಿಂದರ್ಚಿಸಿದಳಭವನಂ ಕಾತ್ಯಾಯಿನಿ||೨೪||
ಮೋಕ್ಷದಾಯಕಿ ಸಕಲಮಂತ್ರನಾಯಕಿ ಮಾಯೆ | ಸಾಕ್ಷಾಜ್ಜಗನ್ಮಾತೆ ನಿಜಶಕ್ತಿ ತಾನೆಂಬ | ದಾಕ್ಷಾಯಣಿಗೆ ತಪಮಿದೇಕೆಂದು ಪಂಕಜಭವಾದಿ ನಿರ್ಜರಮುಖ್ಯರು || ಆಕ್ಷೇಪಿಸಿ ವಿಪಿನದೊಳಿಂತು ಬಿಡದೆ ಭಾ | ಳಾಕ್ಷನಂ ಧ್ಯಾನಿಸುತೆ ಗಿರಿಜೆಯಿರುತಿರಲೋರ್ವ | ರಾಕ್ಷಸಂ ಕಾಂತಾರಮಂ ತಿರುಗುತೈತಂದು ಕಂಡನಾ ಪಾರ್ವತಿಯನು ||೨೫||
ಜೈಮಿನಿ ಭಾರತ 30
ಹದಿನೈದನೆಯ ಸಂಧಿ ಕೊನೆಯ ಭಾಗ
ಪದ್ಯ 26 ರಿಂದ 50
ಪ್ರಮೀಳಾ ರಾಜ್ಯದ ಪರಿಚಯ
ನಿರೂಪಣೆ: ಸುಬ್ಬುಲಕ್ಷ್ಮಿ Lrphks Kolar
ಸಂಕ್ಷಿಪ್ತ ರೂಪ
ಪಾರ್ವತಿಯು ತಪಸ್ಸು ಮಾಡುತ್ತಿರುವಾಗ ರಾಕ್ಷಸನೊಬ್ಬ ಬಂದು ಅವಳಲ್ಲಿ ಅನುರಕ್ತನಾಗಿ ಕಾಡಿಸಲು ಅವಳು ತನ್ನ ತಪಸ್ಸಿನ ಶಕ್ತಿಯಿಂದ ಅವನನ್ನು ಸುಟ್ಟು ಬೂದಿ ಮಾಡಿದಳು. ಅಂದು ಮೊದಲಾಗಿ ಅಲ್ಲಿ ಬರುವ ಯಾವುದೇ ಪುರುಷರೂಪಿಯು ಸ್ತ್ರೀ ರೂಪವಾಗಲಿ ಎಂದು ಶಪಿಸಿದಳು. ಅರ್ಜುನನು ಈ ಬಗ್ಗೆಚಿಂತಿಸುತ್ತ ನಡೆಯಲು ಅಲ್ಲೊಂದು ಸರೋವರ ಸಿಕ್ಕಿತು. ಹೆಣ್ಣು ಕುದುರೆಯು ಅಲ್ಲಿ ಇಳಿದು ನೀರು ಕುಡಿದು ಹೊರಬಂದಾಗ ಹುಲಿಯಾಗಿ ಗರ್ಜಿಸಲು ಸೇನೆಯು ಬೆದರಿತು. ಅರ್ಜುನನು ಈ ವಿಚಿತ್ರವನ್ನು ಕಂಡು ಬಹಳ ವಿಚಲಿತನಾಗಿ ಕೃಷ್ಣನನ್ನು ಪ್ರಾರ್ಥಿಸಿದನು.
ಇದಕ್ಕೆ ಕಾರಣ ಹಿಂದೆ ಒಬ್ಬ ಭೂಸುರನು ಆ ಸರೋವರದಲ್ಲಿ ಸ್ನಾನಕ್ಕೆ ಇಳಿದಾಗ ಮೊಸಳೆಯೊಂದು ಕಾಲನ್ನು ಹಿಡಿದು ಎಳೆಯಲು ದೇವರ ಧ್ಯಾನದಿಂದ ತಪ್ಪಿಸಿಕೊಂಡು ಹೊರಬಂದು ಕೋಪದಿಂದ ಅದನ್ನು ಶಪಿಸಿದನು. ಇಲ್ಲಿ ಇಳಿದವರು ಹುಲಿಗಳಾಗಲಿ ಎಂದು. ಹೀಗೆ ಅರ್ಜುನನ ಕುದುರೆಯು ಹುಲಿಯಾಗಲು ಮುಂದೆ ತನ್ನ ಅಣ್ಣನ ಅಶ್ವಮೇಧದ ಗತಿಯೇನು ಎಂದು ಬಹಳ ಚಿಂತಿಸಿದನು. ಎಲ್ಲ ಕಷ್ಟಗಳನ್ನೂ ಪರಿಹರಿಸುವ ಕೃಷ್ಣನಿರಲು ಭಯವೇಕೆ ಎಂದು ಅವರನ್ಬು ಸಮಾಧಾನಗೊಳಿಸಿದನು. ವಿಧವಿಧವಾದ ಸ್ತೋತ್ರಗಳಿಂದ ಕೃಷ್ಣನನ್ನು ಸ್ತುತಿಸಿದನು.
ನಿನ್ನ ನೆನೆದ ಗಜವನ್ನು ಉಳಿಸಿದೆಯಲ್ಲವೆ? ಪನ್ನಗಶಯನ, ಗೋವಿಂದ, ಕೇಶವ, ಕಮಲನಾಭ, ಮುಕುಂದ ಮುಂತಾಗಿ ನಾನಾ ಪ್ರಕಾರದಿಂದ ಧ್ಯಾನಿಸಲು ಕೃಷ್ಣನ ಕೃಪೆಯಿಂದ ಕುದುರೆಯು ಮುನ್ನಿನಂತಾಯಿತು. ಸಕಲ ಸೈನ್ಯವೂ ಆನಂದದಿಂದ ನಲಿದಾಡಿತು.
ಮುಂದೆ ಸಾಗುತ್ತಿರುವಾಗ ಅಲ್ಲೊಂದು ರಾಜ್ಯ ಎದುರಾಯಿತು. ಅಲ್ಲಿದ್ದವರು ಎಲ್ಲರೂ ಸ್ತ್ರೀಯರೇ ಆಗಿದ್ದರು. ಪುರುಷರು ಪ್ರವೇಶಿಸಿದರೆ ಅವರನ್ನು ಮೋಹಗೊಳಿಸಿ, ಅವರೊಡನೆ ಸುಖಿಸಿ ಒಂದು ತಿಂಗಳ ನಂತರ ಅವರು ಮರಣಿಸುವಂತೆ ಮಾಡುತ್ತಿದ್ದ ಮೋಹನಾಂಗಿಯರಿದ್ದರು. ವಿಷಕನ್ಯೆಯರಿದ್ದರು. ಅಲ್ಲಿಯ ರಾಣಿಯೂ ಸುಂದರಿ. ಅಲ್ಲಿನ ಯುವತಿಯರು ತಮ್ಮ ಹಾವಭಾವ, ನರ್ತನ, ಸಂಗೀತ ಸರಸ ಸಂಭಾಷಣೆಗಳ ಮೂಲಕ ಪುರುಷರನ್ನು ವಶಪಡಿಸಿಕೊಂಡು ಸಂತಾನ ಪಡೆದು ತಮ್ಮ ಸಂತತಿಯನ್ನು ಬೆಳೆಸುತ್ತಿದ್ದರು. ನಾನಾಪ್ರಕಾರವಾದ ರತಿಕಲೆಗಳನ್ನು ಬಲ್ಲ ಅವರು ಪುರುಷರನ್ನು ತಮ್ಮ ಮೋಹದ ಬಲೆಯಲ್ಲಿ ಕಟ್ಡಿಹಾಕುತ್ತಿದ್ದರು. ಮಧುಪಾನದಲ್ಲಿ ಮುಳುಗಿಸುತ್ತಿದ್ದರು. ಭ್ರಮೆಗೆ ಒಳಗಾದ ಗಂಡಸರು ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಿ ಮಧುಪಾನದಲ್ಲಿ ಮುಳುಗಿ ಮೋಸಹೋಗಿ ಕೊನೆಯಲ್ಲಿ ತಮ್ಮ ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದರು. ಬಂಗಾರದ ಬಟ್ಟಲಿನಲ್ಲಿರುವ ಮಧುವನ್ನು ನಿಧಾನವಾಗಿ ಗುಟುಕರಿಸುತ್ತಿದ್ದರು. ತಮಗೆ ಮರಣ ಬರಬಹುದೆಂದು ಅರಿತ ಕೆಲವರು ತಿಂಗಳಿಗೆ ಮೊದಲೇ ಅಲ್ಲಿಂದ ಹೊರಡಲು ಯತ್ನಿಸಿದರೂ ಅದು ಆಗದಂತೆ ಅಲ್ಲಿನ ಯುವತಿಯರು ತಮ್ಮ ವಿಲಾಸಗಳಿಂದ ಮೈಮರೆಸಿಬಿಡುತ್ತಿದ್ದರು.
ಇದನ್ನು ತಿಳಿದ ಅರ್ಜುನನು ತನ್ನ ಪಡೆಯವರಿಗೆಲ್ಲ ಎಚ್ಚರಿಸಿದನು. ಇವರು ವಿಷಕನ್ಯೆಯರು. ಮೋಸ ಹೊಗದಿರಿ. ಮೋಹಕ್ಕೆ ಬೀಳದಿರಿ ಎಂದು ವೃಷಕೇತು ಮೊದಲಾದವರಿಗೆ ಎಚ್ಚರಿಸಿದನು.
ಹದಿನೈದನೆಯ ಸಂಧಿ ಮುಂದುವರೆದ ಭಾಗ
ಪದ್ಯ 26 ರಿಂದ 50
ಹೈಮವತಿಯಂ ಕಾಣುತಭಿವಂದಿಸದೆ ಖಳಂ | ಕೈಮಾಡುವಂಗಜನ ಪೂಗೋಲ ಗಾಯದಿಂ । ಮೈಮರೆದು ಕಾತರಿಸಿ ಮುಂದುಗೆಟ್ಟೆದೆಯಾರಿ ಬೇಟದ ಕಟಕಿಗಳಿಂದೆ|| ಐಮೊಗನ ರಾಣಿಯಂ ನುಡಿಸಿದೊಡೆ ಭೂಪ ಕೇ| ಳೈ ಮುಳಿದು ನೋಡಿದಳ್ ಭುವನಮಾತೆಯ ಖತಿಯ | ವೈಮನಸ್ಯದೊಳುಳಿವರಾರಸುರನುರಿದು ಪೋದಂ ಕೂಡೆ ಬೂದಿಯಾಗಿ ||೨೬||
ಬೆಂದುಪೋದಂ ದಾನವಂ ಬಳಿಕ ದೇವಿ ಖತಿ | ಯಿಂದ ನುಡಿದಳ್ ಶಾಪರೂಪದಿಂದೀ ವನ | ಕ್ಕಿಂದು ಮೊದಲಾಗಿ ಪುರುಷಪ್ರಾಣಿಗಳೊಳ್ ಪೊಕ್ಕೊಡಾಗಲೇ ಸ್ತ್ರೀತ್ವಮವಕೆ || ಬಂದು ಸಮನಿಸಲಿ ತನ್ನಾಜ್ಞೆ ತಪ್ಪದೆ ನಡೆಯ | ಲೆಂದು ಸಕಲ ಸ್ಥಾವರಾಧಿದೇವತೆಯರೊಡ | ನಂದು ಸಾರಿದಳಲ್ಲಿ ಚಿರಕಾಲವಿರ್ದು ಪೂರೈಸಿದಳ್ ಕಲ್ಪಿತವನು||೨೭||
ತನ್ನ ನರ್ಚಿಸಿದರ್ಗಭೀಷ್ಟಮಂ ಕುಡುವ ಸಂ | ಪನ್ನೆ ವರಗೌರಿ ತಪದಿಂದೊಲಿಸಲೀಶಂ ಪ್ರ | ಸನ್ನನಾದಂ ಕೆಲವುಕಾಲದಿಂ ಮೇಲೆ ಬಿಜಯಂಗೈದಳುತ್ಸವದೊಳು| | ಉನ್ನತದ ಕೈಲಾಸಗಿರಿ ಶಿಖರಕಂದುಮೊದ | ಲಿನ್ನು ಮಾ ವನಕೆ ಪೊಕ್ಕೊಡೆ ಗಂಡು ಪೆಣ್ಣಹುದು | ಪನ್ನಗ ಮೃಗಾದಿ ಪಶು ಪಕ್ಷಿಗಳ್ ಮುಂತಾದ ಜಂತುಜಾಲಂಗಳೆಲ್ಲ||೨೮||
ರಾಜೇಂದ್ರ ಕೇಳಾಗಳಾ ವನಕೆ ಪೊಕ್ಕಲ್ಲಿ | ರಾಜಿಸುವ ತಿಳಿಗೊಳದ ನೀರ್ಗುಡಿದು ಫಲುಗುಣನ | ವಾಜಿ ಪೊರಮಟ್ಟು ಬಂದಾಗಳದು ಪೆಣ್ಣುದುರೆಯಾಗಿರ್ದುದೇವೇಳ್ವೆನು || ಸೋಜಿಗವಿದೆಂದು ಸೈವೆರಗಾಗುತಿರ್ದುದೆ | ಲ್ಲಾ ಜನಂ ಪಾಂಡವಂ ಕಂಡು ಶಿವಶಿವ ಪೊಸತ | ಲಾ ಜಗದೊಳೀಕಥನವೆಂದು ವಿಸ್ಮಿತನಾಗಿ ಕೃಷ್ಣನಂ ಧ್ಯಾನಿಸಿದನು||೨೯||
ಎಣಿಕೆಗೊಳುತಿರ್ದನಾ ಪಾರ್ಥನಂದಿತ್ತ ಹಿಂ | ದಣ ಕೃತಯುಗದ ಮೊದಲ ಕಾಲದೊಳ್ ಸಕಲ ಧಾ | ರಿಣಿಯ ತೀರ್ಥಂಗಳಂ ಬಳಸಿ ಬರುತಕೃತವ್ರಣಾಖ್ಯ ಧೂಸುರನೋರ್ವನು | ಸರಕಿಳಿದು ವಾ | ರುಣಮಂತ್ರಮಂ ವಾರಿಯೊಳ್ ಜಪಿಸುತಿರ್ದನಾ | ಕ್ಷಣದೊಳವನಂಪ್ರಿಯಂ ಬಂದು ಪಿಡಿದುದು ನೆಗಳ ಬಿಗಿದು ದಂತಂಗಳಿಂದೆ||೩೦||
ತನ್ನ ಕಾಲ್ಪಿಡಿದು ನಡು ನೀರ್ಗೆಳೆವಜಂತು ವಿದು | ಪನ್ನಗನೋ ಮೇಣಸುರಮಾಯೆಯೋ ಜಲದೊಳು | ತ್ಪನ್ನ ಮತ್ಸ್ಯವೊ ಮಹಾಗ್ರಾಹಮೋ ಶಿವಶಿವಾ ದುಷ್ಪಭಾವಿತಮಾಯ್ತಲಾ || ಇನ್ನಿದಕುಪಾಯಮೇನೆಂದು ಚಿಂತಿಸಿ ವಿಪ್ರ | ನುನ್ನ ತ ತಪೋಬಲದೊಳಂಘ್ರಿಯಂ ಬಿದಿರಿ | ಭಿನ್ನಿಸದೆ ಬಿಗಿದಿರ್ದ ಬಲ್ಮೆಗಳ ದಂತಂಗಳುಡಿದುವದನೇ ನೆಂಬೆನು ॥೩೧॥
ಮಡುವಿನೊಳು ಮಡವಿಡಿದ ನೆಗಳು ಬಲಾತ್ಕರಿಸಿ | ಬಿಡಿಸಿಕೊಂಡೊಡಮುರಿದು ತಡಿಗಡರಿ ಕೋಪದಿಂ | ನುಡಿದನುದಕಸ್ಥ ಮಾಗಿರ್ದ ದೇವತೆಗಳೆ ದುಷ್ಪಭಾವದ ಜಲವಿದು || ಕಡುಭಯಂಕರದಿಂದೆನಗೆ ತೋರಿತದರಿಂದ | ಪೊಡವಿಗತಿಭೀತಿಯಂ ಮಾಡುವಂತಿಲ್ಲ ನೀ | ರ್ಗುಡಿದ ಜೀವಿಗಳನ್ನು ಪುಲಿಯಾಗಲಿಂದುಮೊದಲೆಂದು ಮುನಿ ಶಾಪಿಸಿದನು ||೩೨||
ಎಂದಾದುದಕ್ಷತವ್ರಣನ ಶಾಪಮಾ ಸರಿಸಿ | ಗಂದುಮೊದಲಾಗಿ ಭೀಕರಮೆನಿಸುತಿರ್ಪುದಿಳೆ | ಗೊಂದುಜೀವಿಗಳು ಮುದುಕ ಮನೊಲ್ಲವದರೊಳುಗ್ರ ವ್ಯಾಘ್ರಮಪ್ಪಭಯಕೆ ॥ ಅಂದು ಪೆ ಣ್ಗು ದುರೆಯಾಗಿರ್ದ ವಿಜಯನ ವಾಜಿ | ಬಂದು ಕೊಳನಂ ಪೊಕ್ಕು ನೀರ್ಗುಡಿದು ಪುಲಿಯಾಗಿ | ಮುಂದುಗೆಡಿಸಿತು ಮತ್ತೆ ಫಲುಗುಣಂ ಕುಡು ವಿಸ್ಮಿತನಾಗಿ ಚಿಂತಿಸಿದನು |೩೩||
ನೃಪನ ಹಯ ಮೇಧವಿನ್ನೆಂತಹುದೋ ಮೂಜಗದೊ । ಳಪಹಾಸಕೆಡೆಯಾದುದಾರ ಶಾಪದ ಫಲವೊ | ವಿಪರೀತಮಿದು ಶಿವಶಿವಾಯೆನುತ ನಡುನಡುಗಿ ಪಾರ್ಥನತಿಭೀತಿಯಿಂದ || ಕಪಟದೊಳ್ ಪಿಂತೆ ದುದ್ಯೋಧನಾದಿಗಳೆಸಗಿ | ದುಪಹತಿಗಳಂ ತೆಗೆಸಿ ತಲೆಗಾಯಯ್ದಲೈ ಕೃಷ್ಣ | ಕೃಪೆಮಾಡಬೇಹುದೆನಗೆಂದು ಮುರವೈರಿಯಂ ನೆನೆದು ಚಿಂತಿಸು ತ್ತಿರ್ದನು |೩೪|
ಭಯನಿವಾರಣ ಸಕಲಸೃಷ್ಟಿ ಕಾರಣ ಜಗ | ನ್ಮಯ ಜನಾರ್ದನ ದುಷ್ಟ ದೈತ್ಯಮರ್ದನ ನತಾ | ಶ್ರಯ ಧರಾಧರ ಕಮಲಸಂಭವೋದರ ಘನಶ್ಯಾಮ ಯದುಕುಲಲರಾಮ || ಲಯವಿವರ್ಜಿತ ಪುಣ್ಯನಾಮ ನಿರ್ಜಿತದುರಿತ | ಚಯ ವಿರಾಜಿತ ಸರ್ವಲೋಕ ಪೂಜಿತಪದ | ದ್ವಯ ಕೃಪಾಕರ ಕೃಷ್ಣ ಬಿಡಿಸು ಭೀಕರವನೆಂದರ್ಜುನಂ ಘೋಷಿಸಿದನು ॥ ೩೫ ||
ಪುಷ್ಕರ ಗದಾ ಶಂಖ ಚಕ್ರ ಶೋಭಿತ ಕರಚ | ತುಷ್ಕ ದಿಂ ಶ್ರೀವತ್ಸ ಕೌಸ್ತುಭಾಭರಣದಿ | ನಿಷ್ಕಳುಕೇಂದುಮಂಡಲ ಸದೃಶ ವದನದಿಂ ನವಪೀತವಾಸದಿಂದ || ಪುಷ್ಕಲಶ್ಯಾಮ ಕೋಮಲ ರಾಮಣೀಯಕ ವ | ಪುಷ್ಕಾಂತಿಯಿಂದೆಸೆವ ನಿನ್ನ ರೂಪರ್ದೆಯೊಳಿರೆ | ದುಷ್ಕಂಟಕದ ಭೀತಿಯೆಮಗದೇಕೆಲೆ ದೇವ ಸಲಹೆಂದನಾ ಪಾರ್ಥನು ॥೩೬॥
ನಿನ್ನೊಂದು ಪೆಸರ ಪೋಲ್ವೆಯೊಳಂದಜಾಮಿಳಂ | ತನ್ನ ಪಾತಕಕೋಟಿಯಂ ಪರಿಹರಿಸಿಕೊಂಡ | ನಿನ್ನು ನೀನೆಂದು ನಂಬಿರ್ದ ನಿಜತರಣರ್ಗೆ ಭಯಮುಂಟೆ ಮೂಜಗದೊಳು || ಎನ್ನ ಭೀತಿಯನೀಗ ಬಿಡಿಸುವೊಡೆ ಕೃಪೆಯೊಳ್ ಪ್ರ | ನನ್ನ ನಾಗಚ್ಯುತ ಮುಕುಂದ ಕೇಶವ ಕೃಷ್ಣ | ಪನ್ನಗಾರಿಧ್ವಜನೆ ಯೆನುತೆ ನರಹರಿಯ ನಾಮಂಗಳಂ ವಾಚಿಸಿದನು ||೩೭||
ಅದ್ಭುತವ್ಯಾಘ್ರಮಾದಶ್ವಮಂ ಕಾಣುತೆ ಮ | ಹ ದ್ಭಯದೊಳಸುರಾರಿಯಂ ಪಾರ್ಥ ನಿಂತಿಂತು | ಸದ್ಭಾವದಿಂ ಪ್ರಾರ್ಥಿಪನ್ನ ಗಂ ದೈವವಶದಿಂ ತನ್ನ ತಾನೆ ಬಳಿಕ || ಉದ್ಭವಿಸಿತಾ ಹಯಕೆ ಮುನ್ನಿ ನಾಕಾರಮಾ | ಪ ದ್ಭೀತಿ ಪಾಂಡವರ್ಗೆತ್ತಣದು ಮುರರಿಪು ನು | ಹೃದ್ಭಂಗಮಂ ಸೈರಿಸುವನೆನುತ್ತೆ ಕಟಕದ ಮಂದಿ ಕೊಂಡಾಡಲು || ೩೮ ||
ಆಟವಿಕನೊಂದೊಂದು ಬಹುರೂಪಮಂ ತಾಳ್ದು | ನಾಟಕವನಾಡಿ ಮುನ್ನಿನ ತನ್ನ ರೂಪದಿಂ | ನೋಟಕರ ಕಣ್ ಕಾಣಿಸುವಂತೆ ಪೆಷ್ಗುದುರೆಯಾಗಿ ಪುಲಿಯಾಗಿ ಮತ್ತೆ || ಘಟಕೋತ್ತಮವಾದುದೆಂದಿನಂದದೊಳಾ ನಿ | ಶಾಟದಲ್ಲಣನ ಪೊಗಳುದೆಲ್ಲಾ ಜನಂ | ಕೋಟಿಸಂಖ್ಯೆಯೊಳೊದರಿದುವು ನಿಖಿಲವಾದ್ಯಂಗಳುತ್ಸವದೆ ಪಾಳೆಯದೊಳು॥೩೯||
ಸೇವ್ಯಮಾಗಿರ್ದುದೆಂದಿನವೋಲ್ ತುರಂಗಂ ಮ | ಹಾ ವ್ಯಾಘ್ರರೂಪಡಗಿತಸುರಾರಿ ಭಕ್ತ, ರ | ಕ್ಷಾ ವ್ಯಸನಿಯೆಂಬುದಂ ಕಾಣಿಸಿದನಡಿಗೆ ಕಟಕದ ಸಮಸ್ತ ಜನರು || ಈ ವ್ಯಾಳರಾಜ ಶಾಯಿಗೆ ಬಂದಬಂದನಾ | ನಾ ವ್ಯಥೆಯನಪಹರಿಸಿ ಪಾಂಡುಸುತರಂ ಪೊರೆವು | ದೇ ವ್ಯವಹರಣಿಯೆಂದು ಕೃಷ್ಣನಂ ಕೊಂಡಾಡಲುಬ್ಬೇರಿದಂ ಪಾರ್ಥನು | ೪೦ ||
ಬಳಿಕ ಪಾರಿಪ್ಲವ ಧರಿತ್ರಿಯಿಂದಾ ಹಯಂ| ತಳರ್ದುದತಿವೇಗದಿಂ ಬಹಳ ದೇಶಂಗಳಂ | ಕಳೆಕಳೆದು ಬರಿಯ ವನಿತಾಮಯದ ರಾಜ್ಯದೊಳಸೀಮೆಗುತ್ಸಾಹದಿಂದೆ || ಫಲುಗುಣನ ಸೇನೆ ನಡೆದುದು ಕೂಡೆ ಭಾರದಿಂ । ದಿಳೆ ಮುಂದಕೊರ್ಗುಡಿಸಿ ಮುಗ್ಧಲೊಂದೆಸೆಯೊಳೊ | ಬ್ಬುಳಿಸಿದುವು ಮಂದಿ ಕುದುರೆಗಳೆಂಬ ತೆರದಿಂದೆ ಸಂದಣಿಸಿತೇವೇಳ್ವೆನು || ೪೧||
ರಾಯ ಕೇಳಾರಾಜ್ಯದೊಳ್ ಬರಿಯ ನಾರಿಯರ್ | ಪ್ರಾಯತೆಯರಾಗಿ ಮಧುಪಾನಮತ್ತೆ ಯರಾಗಿ | ಕಾಯಜ ಕಲಾಕೋವಿದೆಯರಾಗಿ ರೂಪ ಲಾವಣ್ಯ ವಿಲಸಿತೆಯರಾಗಿ || ಗೇಯ ನರ್ತನ ವೇಣು ವೀಣಾ ವಿನೋದ ರಮ | ಣೀಯಭೋಗಾ ನ್ವಿತೆಯರಾಗಿ ಮತ್ತದರೊಳಾ | ಸ್ತ್ರೀಯೋರ್ವಳರಸಾಗಿರವಳ ಕೆಳಗಾಗಿ ಬದುಕುವರ್ ಭಾಗ್ಯದಿಂದೆ||೪೨||
ಅಲ್ಲಿಗೈದಿದ ಪುರುಷರೋರ್ವರುಂ ಜೀವಿಸುವು | ದಿಲ್ಲ ಬಂದಾತನಂ ಕಂಡು ಲಲಿತಾಂಗಿಯ ರ್ | ಚೆಲ್ಲೆ ಗಂಗಳ ನೋಟಮಂ ಬೀರಿ ಸವಿವೇಟಮಂ ತೋರಿ ಮಿಗೆ ಸೊಗಸುವ || ಸೆಳ್ಳುಗುರ್ಗಳನ್ನೂರಿ ಮೆಲ್ಲಮೆಲ್ಲನೆ ಕೀರಿ | ಲಲ್ಲೆ ಗೈಯುತೆ ಮಾರಿ ಬ ಲ್ಮೊಲೆಗಳಂ ಪೇರಿ | ಫುಲ್ಲತರ ಕೇಳಿಯೊಳ್ ಮದವೇರಿಸುವರವರ್ ಮರುಳಹವೊಲರಿವು ಜಾರಿ | ೪೩ ||
ಸಮರತಿಯೊಳೊಮ್ಮೆ ಬೆರಸಿದ ಬಳಿಕ ವಿಷಯದಾ ಭ್ರಮೆಯಿಂದ ಮಗ್ನರಾಗಿಹರಾ ಪುರುಷರಲ್ಲಿ | ರಮಿಸುವರವರ ಕೂಡೆ ನಾನಾಪ್ರಕಾರದಿಂದಾ ಪಂಕರುಹಮುಖಿಯರು || ಕ್ರಮದೊಳೀ ತೆರದೆ ಸುಖಿಸುವರೊಂದು ತಿಂಗಳು | ತ್ತ ಮಸುಗಂಧಾನುಲೇಪನದಿಂದೆ ಮೊಗವಾಸ | ದಮಲತಾಂಬೂಲದಿಂ ಮಧುರ ಮಧುಪಾನದಿಂದೆಸೆವ ಸಂಯೋಗದಿಂದ || ೪೪ ||
ವಿಧವಿಧದೊಳೆಸೆವ ಕುಸುಮೋತ್ಕರದ ಪರಿಮಳದ | ಮಧುರಾನವಣೆ ತಮ್ಮ ಮುಖವಾಸದೊಳ್ಗಂಪಿ | ನಧರದಿನದಂ ಬೆರಸುವಂತೆ ಮೊಗಮಿಟ್ಟು ಪೊಂಬಟ್ಟಲೊಳ್ ಸವಿದು ಮಿಕ್ಕ|| ಮಧುವಂ ಮದಿರನೇತ್ರದಿಂ ನೋಡಿ ನಸುನಗೆಯ | ಸುಧೆಯನೊಯ್ಯನೆಸೂಸಿ ಸರಸದಿಂದಾದರಿಸಿ| ವಿಧುಬಿಂಬವನಿತೆಯರ್ ಕೊಟ್ಟರೀಂಟುವ | ಸೊಗಸಿಗೆಳಸದವರಾರಿಳಿಳೆಯೊಳು||೪೫|`
ಪೊಂಬಟ್ಟಲೋಳ್ ತೀವಿದಾಸವದ ರುಚಿಗಿರ್ವ | ರುಂ ಬಿಡದೆ ಮೊಗಮಿಟ್ಟಿರದರೊಳೆಸೆವ ಪಡಿ | ಬಿಂಬದಾನನದ ಭಾವಂಗಳಂ ಕಾಣುತ ನ್ನ್ಯೋನ್ಯಸಂಪ್ರೀತಿಯಿಂದ || ತುಂಬಿರ್ದ ಚಷಕಮಧು ತೀರ ಬಯಲಪ್ಪು | ದೆಂಬ ಶಂಕೆಯೊಳೊಯ್ಯನೊಯ್ಯನಾಸ್ವಾದಿಸಿ ವಿ | ಳಂಬಮಂ ಮಾಡುವರದೆಂತೊ ಪುರುಷಸ್ತ್ರೀಯರೊಂದಾಗಿ ಸವಿನ ಸೊಗಸು |`೪೬||
ಕವಿಸುವರ್ ಮೋಹನವನೆಸೆವ ರತಿಕೇಳಿಯೋಳ್ | ಸವಿಸುವರ್ ಚೆಂದುಟಿಯ ತನಿರಸವನಾಸರಂ | ತವಿಸುವರ್ ಬ ಲ್ಮೊಲೆಯೊಳೊತ್ತಿ ಬಿಗಿಯಪ್ಪಿ ದನಿಗೈವ ಪಾರಿವದಂತಿರೆ || ರಮಿಸುವರ್ ಕಂಠದೊಳ್ ಬಂಧಗಳ ಬಗೆಯನನು | ಭವಿಸುವರ್ ಕೂಲದೊಳ್ ಮನಮುಳುಗಿ ಸೌಖ್ಯದಿಂ | ದ್ರವಿಸುವ' ಕಾಮಕಲೆಯರಿದಂಗನೆಯರಲ್ಲಿ ದೊರೆಕೊಂಡ ಪುರುಷರೊಡನೆ|೪೪೭||
ಮರಣಮಹುದೆಂದರಿದು ನಡುವೆ ಮುರಿದೊಲ್ಲದನ | ಚರಣಕೆರಗುವರೊಡಂಬಡಿಸುವರ್ ದೈನ್ಯದಿಂ । ಕರುಣಭಾವಂಗಳಂ ತೋರುವರ್ ಮೀರಿದೊಡೆ ಚೀರುವರ್ ಘಾತಿಸುವರು ॥ ಆರುಣಾಧರದ ಚುಂಬನವನಿತ್ತು ಕರಜಪ್ರ | ಹರಣದಿಂ ಕಲೆಗಳಂ ತುಡುಕಿ ಸೊಗಸಂ ಬಲಿದು | ಹರಣಮಳಿವಲ್ಲಿಪರಿಯಂತರಂ ಬಿಡರವನನಲ್ಲಿಯ ವಿಷಾಂಗನೆಯರು||೪೮||
ಅಚ್ಚ ಸಂಪಗೆಯಲರ್ಗೆರಗಿದಾರಡಿಯಂತೆ | ಮೆಚ್ಚಿ ಮಡಿವಂ ಮಾಸಮಾತ್ರ ಮಾಗಲ್ಕನಂ । ಕಿಚ್ಚಿನೊಳ್ ಪುಗುವಳವಳಲ್ಲದೊಡೆ ಗರ್ಭಮಂ ಧರಿಸಿ ಸೆಣ್ಣಂ ಪಡೆವಳು || ಪೆಚ್ಚಿರ್ಪರಂತಲ್ಲಿ ನಾರಿಯರ್ ಬಳಿಕ ಬಂ | ದಚ್ಚರಿಯನರ್ಜುನಂ ಕೇಳ್ತಾಗ ತನ್ನ ಪಡೆ | ಗೆಚ್ಚರಿಕೆಯಾಗಿರ್ಪುದೆಂದೊರೆದು ಕೂಡೆ ಪಾಳೆಯದೊರೆಗೆ ಸಾರಿಸಿದರು |೪೯ ||
ವಿಷಕನ್ನಿಕೆಯರಿವರ್ ಕಂಡಮಾತ್ರದೊಳಾಕ | ರುಷಣಮಂ ಮಾಡುವರ್ ಬೆರಸಿದೊಡೆ ಪುರುಷನಾ | ಯುಷವನಪಹರಿಪರಿದು ನಿಶ್ಚಯಂ ನೀವಿಲ್ಲ ಮರೆದಾದೊಡಂ ಮನದೊಳು || ವಿಷಯಕೆಳಸದೆ ಬುದ್ದಿವಂತರಾಗಿಹುದೆಂದು | ವೃಷಕೇತು ಮೊದಲಾದ ವೀರರ್ಗೆ ಹೇಳುತನಿ | ಮಿಷನಗರದೊಡೆಯ ಲಕ್ಷ್ಮೀಪತಿಯ ಮೈದುನಂ ಕಟಕದೊಳ್ ಸಾರಿಸಿದನು | ೫೦||
ಜೈಮಿನಿ ಭಾರತ 31
ಹದಿನಾರನೆಯ ಸಂಧಿ ಮೊದಲಭಾಗ
ಪದ್ಯ 1 ರಿಂದ 20
ಪ್ರಮೀಳಾ ಪ್ರಕರಣ
ಸಂಕ್ಷಿಪ್ತ ರೂಪ
ಅರ್ಜುನನ ಕುದುರೆಯನ್ನು ಕಂಡ ತರುಣಿಯರು ತಮ್ಮ ರಾಣಿ ಪ್ರಮೀಳೆಯ ಬಳಿಗೆ ಹೋಗಿ ವಿವರಿಸಿದರು. ಆಗ ಅವಳು ಅದನ್ನು ಕಟ್ಟಲು ತಿಳಿಸಿ ತನ್ನ ಸ್ತ್ರೀ ಸೈನ್ಯವನ್ನು ಯುದ್ಧಕ್ಕೆ ಸಿದ್ಧಗೊಳಿಸಿದಳು. ಅವರುಗಳ ಕಣ್ಣ ಹೊಳಪಿನಲ್ಲಿ ಆಯುಧಗಳು ಮಂಕಾದುವು. ವಿವಿಧ ಅಲಂಕಾರಗಳಿಂದ ಶೋಭಿತರಾಗಿ ಬಂಗಾರದ ರಥಗಳನ್ನು ಏರಿ, ಆಯುಧಗಳಿಂದ ಕೂಡಿ ಬಂದ ಅವರನ್ನು ಕಂಡು ಅರ್ಜುನನ ಸೈನ್ಯ ಬೆರಗಾಯಿತು.
ಕಚ್ಚೆಯುಟ್ಟು, ಮೊಲೆಗಟ್ಟು ಬಿಗಿದು ಕಣ್ಣುಗಳ ಕಾಂತಿಯಿಂದ ಕೂಡಿದ ಆ ಸ್ತ್ರೀಯರನ್ನು ಕಂಡು ಬೆರಗಾದರು. ಆನೆಗಳ ಮೇಲೆ, ಕುದುರೆಗಳ ಮೇಲೆ, ರಥಗಳ ಮೇಲೆ ಬಂದು ನೆರೆದರು. ತಮ್ಮ ಅಂಗಸಂಗದಿಂದ ಸುಖ ಕೊಡುವ ಅಂಗನೆಯರು ಇಂದು ಸಮರಕ್ಕೆ ಸಿದ್ಧರಾಗಿರುವರು. ಪ್ರಮೀಳೆ ಬಂದು ಅರ್ಜುನನನ್ನು ಮಾತನಾಡಿಸಿದಳು.
ನಾರಿಯೊಂದಿಗೆ ಕದನವೆ? ಶಿವಶಿವಾ ಎಂದು ಅರ್ಜುನನು ಕಳವಳಪಟ್ಟು ಅವಳನ್ನು ನುಡಿಸಿದನು. ಸುಕೋಮಲೆಯಾಗಿ ಸುಖವನ್ನು ನೀಡುವ ನೀನು ಪರ್ಯಂಕವನ್ನು ಬಿಟ್ಟು ಇಲ್ಲಿಗೇಕೆ ಬಂದೆಯೆನ್ನಲು ಅವಳು ನೀನು ನನ್ನ ಪರ್ಯಂಕಕ್ಕೆ ಬಂದರೆ ಅಲ್ಲಿ ಸುಖ ಕೊಡುವೆ. ಶರಣಾಗದಿದ್ದರೆ ಯುದ್ಧ ಮಾಡುವೆ. ಸಿದ್ಧನಾಗು ಎನ್ನಲು ಅರ್ಜುನನು ಉಂಟೆ, ಕುದುರೆಯನ್ನು ಬಿಡು. ಎಂದನು. ಅವಳು ಒಪ್ಪದಿರಲು ಮುನಿದನು. ಅವಳು ಅವನೆಡೆಗೆ ಬಾಣಗಳನ್ನು ಹೂಡಿದಳು. ಶೂರ್ಪಣಕಿ ಲಕ್ಷ್ಮಣರ ವೃತ್ತಾಂತವನ್ನು ನೆನೆದನು. ಇವಳನ್ನು ಕೊಂದರೆ ತಪ್ಪಿಲ್ಲವೆಂದು ದಿವ್ಯ ಬಾಣಗಳನ್ನು ತೆಗೆದನು.
ಅಷ್ಟರಲ್ಲಿ ಅಶರೀರವಾಣಿ ಕೇಳಿಸಿತು. ಅವಳ ಮೇಲೆ ಅಸ್ತ್ರ ಪ್ರಯೋಗಿಸಬೇಡ. ಹೆಣ್ಣಿನ ಕೂಡ ಯುದ್ಧಬೇಡ. ನೂರು ವರ್ಷ ಕಾದಿದರೂ ಇದು ಮುಗಿಯದು. ಇವಳನ್ನು ವರಿಸು . ಮುಂದೆ ನಿನಗೆ ಒಳಿತಾಗುವುದು ಎಂದಿತು. ಅದನ್ನು ಎಲ್ಲರೂ ಕೇಳಿದರು. ಅದರಂತೆ ಅರ್ಜುನ ಅವಳನ್ನು ವಿವಾಹವಾದನು.
ಅವಳನ್ನು ಕುರಿತು ಧರ್ಮಜನ ಅಶ್ವಮೇಧ ಯಾಗದ ವಿಷಯ ತಿಳಿಸಿ ತಾವೆಲ್ಲರೂ ದೀಕ್ಷೆಯನ್ನು ಹೊಂದಿರುವುದರಿಂದ ಈಗ ಸ್ತ್ರೀ ಸಂಗ ಮಾಡುವಂತಿಲ್ಲವೆಂದೂ ಅವಳು ಹಸ್ತಿನಾವತಿಗೆ ಹೋಗಿ ಶ್ರೀ ಕೃಷ್ಣನ ದರ್ಶನ ಮಾಡಿದರೆ ಅವರೆಲ್ಲರ ವಿಷಕನ್ಯತ್ವದೋಷ ತೀರುವುದೆಂದೂ ಹೇಳಿ ತಾನು ಆ ನಂತರ ಅವಳನ್ನು ಸೇರುವೆನೆಂದನು.
ಅದರಂತೆ ಪ್ರಮೀಳೆಯು ಕುದುರೆಯನ್ನು ತರಿಸಿ ಕೊಟ್ಟು ತಾನು ತನ್ನ ಸಕಲ ಐಶ್ವರ್ಯದೊಂದಿಗೆ ಹಸ್ತಿನಾಪುರದತ್ತ ತೆರಳಿದಳು.
ನಂತರ ಅರ್ಜುನನು ಮುಂದುವರೆದನು.
ಸೂರ್ಯೋದಯ ಸೂರ್ಯಾಸ್ತ ಗಳು ಉರುಳಿದವು. ಮುಂದೆ ಸಾಗಿದಂತೆ ಚಿತ್ರ ವಿಚಿತ್ರ ಮಾನವರ ಪ್ರದೇಶಗಳನ್ನು ನೋಡಿದನು. ಒಂದೇ ಕಣ್ಣುಳ್ಳವರು, ಒಂದೇ ಕಾಲುಳ್ಳವರು, ಒಂದೇ ಕೈಯುಳ್ಳವರು, ನೀಳ ನಾಸಿಕದವರು, ಕುಳ್ಳರು, ಮೂರು ಕಣ್ಣುಳ್ಳವರು ಕತ್ತೆ, ಕುದುರೆ ಮೊಗದವರು ಇತ್ಯಾದಿ ಜನರುಳ್ಳ ದೇಶಗಳನ್ನು ನೋಡುತ್ತ ಮುಂದೆ ಸಾಗಿದನು.
ಜೈಮಿನಿ ಭಾರತ 31
ಹದಿನಾರನೆಯ ಸಂಧಿ ಮೊದಲಭಾಗ
ಪದ್ಯ 1 ರಿಂದ 20
ಪ್ರಮೀಳಾ ಪ್ರಕರಣ
______________________________
ಸಂಕ್ಷಿಪ್ತ ರೂಪ
ಅರ್ಜುನನ ಕುದುರೆಯನ್ನು ಕಂಡ ತರುಣಿಯರು ತಮ್ಮ ರಾಣಿ ಪ್ರಮೀಳೆಯ ಬಳಿಗೆ ಹೋಗಿ ವಿವರಿಸಿದರು. ಆಗ ಅವಳು ಅದನ್ನು ಕಟ್ಟಲು ತಿಳಿಸಿ ತನ್ನ ಸ್ತ್ರೀ ಸೈನ್ಯವನ್ನು ಯುದ್ಧಕ್ಕೆ ಸಿದ್ಧಗೊಳಿಸಿದಳು. ಅವರುಗಳ ಕಣ್ಣ ಹೊಳಪಿನಲ್ಲಿ ಆಯುಧಗಳು ಮಂಕಾದುವು. ವಿವಿಧ ಅಲಂಕಾರಗಳಿಂದ ಶೋಭಿತರಾಗಿ ಬಂಗಾರದ ರಥಗಳನ್ನು ಏರಿ, ಆಯುಧಗಳಿಂದ ಕೂಡಿ ಬಂದ ಅವರನ್ನು ಕಂಡು ಅರ್ಜುನನ ಸೈನ್ಯ ಬೆರಗಾಯಿತು.
ಕಚ್ಚೆಯುಟ್ಟು, ಮೊಲೆಗಟ್ಟು ಬಿಗಿದು ಕಣ್ಣುಗಳ ಕಾಂತಿಯಿಂದ ಕೂಡಿದ ಆ ಸ್ತ್ರೀಯರನ್ನು ಕಂಡು ಬೆರಗಾದರು. ಆನೆಗಳ ಮೇಲೆ, ಕುದುರೆಗಳ ಮೇಲೆ, ರಥಗಳ ಮೇಲೆ ಬಂದು ನೆರೆದರು. ತಮ್ಮ ಅಂಗಸಂಗದಿಂದ ಸುಖ ಕೊಡುವ ಅಂಗನೆಯರು ಇಂದು ಸಮರಕ್ಕೆ ಸಿದ್ಧರಾಗಿರುವರು. ಪ್ರಮೀಳೆ ಬಂದು ಅರ್ಜುನನನ್ನು ಮಾತನಾಡಿಸಿದಳು.
ನಾರಿಯೊಂದಿಗೆ ಕದನವೆ? ಶಿವಶಿವಾ ಎಂದು ಅರ್ಜುನನು ಕಳವಳಪಟ್ಟು ಅವಳನ್ನು ನುಡಿಸಿದನು. ಸುಕೋಮಲೆಯಾಗಿ ಸುಖವನ್ನು ನೀಡುವ ನೀನು ಪರ್ಯಂಕವನ್ನು ಬಿಟ್ಟು ಇಲ್ಲಿಗೇಕೆ ಬಂದೆಯೆನ್ನಲು ಅವಳು ನೀನು ನನ್ನ ಪರ್ಯಂಕಕ್ಕೆ ಬಂದರೆ ಅಲ್ಲಿ ಸುಖ ಕೊಡುವೆ. ಶರಣಾಗದಿದ್ದರೆ ಯುದ್ಧ ಮಾಡುವೆ. ಸಿದ್ಧನಾಗು ಎನ್ನಲು ಅರ್ಜುನನು ಉಂಟೆ, ಕುದುರೆಯನ್ನು ಬಿಡು. ಎಂದನು.ಅವಳು ಒಪ್ಪದಿರಲು ಮುನಿದನು. ಅವಳು ಅವನೆಡೆಗೆ ಬಾಣಗಳನ್ನು ಹೂಡಿದಳು. ಶೂರ್ಪಣಕಿ ಲಕ್ಷ್ಮಣರ ವೃತ್ತಾಂತವನ್ನು ನೆನೆದನು. ಇವಳನ್ನು ಕೊಂದರೆ ತಪ್ಪಿಲ್ಲವೆಂದು ದಿವ್ಯ ಬಾಣಗಳನ್ನು ತೆಗೆದನು.
ಅಷ್ಟರಲ್ಲಿ ಅಶರೀರವಾಣಿ ಕೇಳಿಸಿತು. ಅವಳ ಮೇಲೆ ಅಸ್ತ್ರ ಪ್ರಯೋಗಿಸಬೇಡ. ಹೆಣ್ಣಿನ ಕೂಡ ಯುದ್ಧಬೇಡ. ನೂರು ವರ್ಷ ಕಾದಿದರೂ ಇದು ಮುಗಿಯದು. ಇವಳನ್ನು ವರಿಸು . ಮುಂದೆ ನಿನಗೆ ಒಳಿತಾಗುವುದು ಎಂದಿತು. ಅದನ್ನು ಎಲ್ಲರೂ ಕೇಳಿದರು. ಅದರಂತೆ ಅರ್ಜುನ ಅವಳನ್ನು ವಿವಾಹವಾದನು.
ಅವಳನ್ನು ಕುರಿತು ಧರ್ಮಜನ ಅಶ್ವಮೇಧ ಯಾಗದ ವಿಷಯ ತಿಳಿಸಿ ತಾವೆಲ್ಲರೂ ದೀಕ್ಷೆಯನ್ನು ಹೊಂದಿರುವುದರಿಂದ ಈಗ ಸ್ತ್ರೀ ಸಂಗ ಮಾಡುವಂತಿಲ್ಲವೆಂದೂ ಅವಳು ಹಸ್ತಿನಾವತಿಗೆ ಹೋಗಿ ಶ್ರೀ ಕೃಷ್ಣನ ದರ್ಶನ ಮಾಡಿದರೆ ಅವರೆಲ್ಲರ ವಿಷಕನ್ಯತ್ವದೋಷ ತೀರುವುದೆಂದೂ ಹೇಳಿ ತಾನು ಆ ನಂತರ ಅವಳನ್ನು ಸೇರುವೆನೆಂದನು.
ಅದರಂತೆ ಪ್ರಮೀಳೆಯು ಕುದುರೆಯನ್ನು ತರಿಸಿ ಕೊಟ್ಟು ತಾನು ತನ್ನ ಸಕಲ ಐಶ್ವರ್ಯದೊಂದಿಗೆ ಹಸ್ತಿನಾಪುರದತ್ತ ತೆರಳಿದಳು.
ನಂತರ ಅರ್ಜುನನು ಮುಂದುವರೆದನು. ಸೂರ್ಯೋದಯ ಸೂರ್ಯಾಸ್ತ ಗಳು ಉರುಳಿದವು. ಮುಂದೆ ಸಾಗಿದಂತೆ ಚಿತ್ರ ವಿಚಿತ್ರ ಮಾನವರ ಪ್ರದೇಶಗಳನ್ನು ನೋಡಿದನು. ಒಂದೇ ಕಣ್ಣುಳ್ಳವರು, ಒಂದೇ ಕಾಲುಳ್ಳವರು, ಒಂದೇ ಕೈಯುಳ್ಳವರು, ನೀಳ ನಾಸಿಕದವರು, ಕುಳ್ಳರು, ಮೂರು ಕಣ್ಣುಳ್ಳವರು ಕತ್ತೆ, ಕುದುರೆ ಮೊಗದವರು ಇತ್ಯಾದಿ ಜನರುಳ್ಳ ದೇಶಗಳನ್ನು ನೋಡುತ್ತ ಮುಂದೆ ಸಾಗಿದನು.
ಜೈಮಿನಿ ಭಾರತ 32
ಹದಿನಾರನೆಯ ಸಂಧಿ ಕೊನೆಯ ಭಾಗ
ಪದ್ಯ 21 ರಿಂದ 46
ಭೀಷಣ ರಾಕ್ಷಸನೊಂದಿಗೆ ಕಾಳಗ
ನಿರೂಪಣೆ: ಸುಬ್ಬುಲಕ್ಷ್ಮಿ
ಸಂಕ್ಷಿಪ್ತ ರೂಪ
ಅರ್ಜುನನ ಕುದುರೆ ನಿಧಾನವಾಗಿ ಮುಂದುವರೆದು ಭೀಷಣನೆಂಬ ರಕ್ಕಸನ ನಗರವನ್ನು ಪ್ರವೇಶಿಸಿತು. ಅವನ ಬಳಿ ಬಹಳಷ್ಟು ರಾಕ್ಷಸರ ತಂಡವೇ ಇತ್ತು. ಎಲ್ಲರೂ ಘೋರ ರೂಪಿಗಳು. ಭೀಕರ ಮುಖದವರು. ಶೂರರು. ಮಾಯಾವಿಗಳು.
ಆಹಾರಕ್ಕೆಂದು ಅಡವಿಗೆ ಬಂದಿದ್ದ ಮೇದೋಹೋತನೆಂಬ ಅಸುರ ಪುರೋಹಿತನು ಅರ್ಜುನನ ಕುದುರೆಯನ್ನು ಕಂಡು ಅದರ ವಿವರವನ್ನು ತಿಳಿದು ರಾಜ ಭೀಷಣನಲ್ಲಿಗೆ ಬಂದು ವಿಷಯವನ್ನು ತಿಳಿಸಿದನು. ನಿನ್ನ ತಂದೆ ಬಕಾಸುರನನ್ನು ಕೊಂದವನ ತಮ್ಮ ಇಲ್ಲಿ ಬಂದಿದ್ದಾನೆ. ಅಪಾರವಾದ ಸೈನ್ಯವಿದೆ. ನೀನು ನರಮೇಧವನ್ನು ಮಾಡೆಂದು ಹೇಳಿದನು. ತನ್ನ ತಂದೆಯನ್ನು ಕೊಂದವನ ತಮ್ಮನನ್ನು ಯಜ್ಞಪಶುವಾಗಿ ಮಾಡುವೆನೆಂದು ರಾಜನು ಗರ್ಜಿಸಿದನು.
ಈ ಹಿಂದೆ ನರಮೇಧವನ್ನು ಯಾರು ಕೈಗೊಂಡಿದ್ದರು? ಋತ್ವಿಜರು ಯಾರು? ಯಾವ ಅಪೇಕ್ಷೆಯಿಂದ ಕೈಗೊಂಡರೆನ್ನಲು ಮೇದೋಹೋತನು ರಾವಣನು ಕೈಗೊಂಡನೆಂದು ಹೇಳಿದನು. ಅದನ್ನು ಮಾಡಿ ಮೂಜಗವನ್ನು ಗೆದ್ದನಲ್ಲವೆ ಎಂದನು.
ಸುರೆ ಮತ್ತು ನೆತ್ತರುಗಳಿಂದ ಚಾತುರ್ಮಾಸವನ್ನು ಕಳೆದವರಿದ್ದಾರೆ. ಮಿದುಳು ತಿಂದು ಮಾಸಗಳನ್ನು ಕಳೆದವರಿದ್ದಾರೆ. ಶ್ರಾವಣದಲ್ಲಿ ಯತಿಗಳ ಮಾಂಸವು ಆಹಾರವಾಗಿದ್ದಿದೆ. ಹೀಗೇ ಕರುಳು ಗಳನ್ನು ತಿಂದವರಿದ್ದಾರೆಂದು ಹೇಳಲು ಭೀಷಣನು ತಲೆದೂಗಿದನು. ಇದಲ್ಲದೆ ಮಹಾ ಬ್ರಹ್ಮರಾಕ್ಷಸರಿದ್ದಾರೆ. ಈಗ ನೀನು ನರಮೇಧವನ್ನು ಮಾಡೆಂದು ಹುರಿದುಂಬಿಸಿದನು. ಸಹಸ್ರ ದಾನವ ದಂಪತಿಗಳು ಪ್ರತಿನಿತ್ಯ ನರಭಕ್ಷಣೆ ಮಾಡಲಿ ಅಧ್ವರವನ್ನು ಮಾಡು ಎನಲು ಭೀಷಣನು ತಕ್ಷಣ ಯಾಗ ಮಂಟಪವನ್ನು ರಚಿಸೆಂದನು. ಮೇದೋಹೋತನೇ ಆಚಾರ್ಯನಾದನು.
ರಾಕ್ಷಸನ ಪಡೆ ಸಿದ್ಧವಾಯಿತು. ಸಾವಿರಾರು ರಕ್ಕಸಿಯರು ನರಮಾಂಸ ಭಕ್ಷಣೆಯ ಆಸೆಯಿಂದ ಗುಂಪುಗುಂಪಾಗಿ ಪರ್ವತಗಳ ಮೇಲೆ ನೆರೆದು ಅರ್ಜುನನ ಪಡೆಯನ್ನು ವೀಕ್ಷಿಸಿದರು.
ಅವರಲ್ಲಿ ಒಬ್ಬಳು ಕಪಿಧ್ವಜವನ್ನು ಕಂಡು ಬೆದರಿ ಹಿಂದೆ ಲಂಕೆಯನ್ನು ನಡುಗಿಸಿದ ಹನುಮಂತನನ್ನು ನೆನೆದು ಭಯಭೀತಳಾದಳು. ಅವನು ಊರು ಸುಟ್ಟಿದ್ದನ್ನು ನೆನೆದು ತನ್ನ ಮನೆಯ ರಕ್ಷಣೆಗೆ ಹೊರಟಳು. ಇನ್ನೊಬ್ಬಳು ನೆರಳನ್ನು ಎಳೆಯುವನೆಂದು ಅಡಗಿಕೊಂಡಳು. ಆಗಸಕ್ಕೆ ಎಗರಿ ರವಿಯನ್ನು ಹಿಡಿಯಹೊರಟ ಸಾಹಸಿ, ಬೆಟ್ಟಗಳನ್ನು ಹೊತ್ತು ತಂದವನು ಮುಂತಾದ ಸಾಹಸಗಳ ಹನುಮನನ್ನು ಬೆದರಿಸಿ ಬೀಳಿಸುವೆನೆಂದು ಒಬ್ಬಳು ಗರ್ಜಿಸಿದಳು. ತನ್ನ ಮೊಲೆಗಳ ತುದಿಯಿಂದಲೇ ಎಲ್ಲ ಸೈನ್ಯವನ್ನು ಸೋಲಿಸುವೆನೆಂದು ಯೋಜನಸ್ತನಿಯೆಂಬವಳು ನುಡಿದಳು. ಅಸುರಿಯರ ಪಡೆ ಪಾರ್ಥನ ಸೈನ್ಯದ ಮೇಲೆ ಬಿದ್ದಿತು.ವಿವಿಧ ಮೃಗಗಳ ರೂಪವನ್ನು ತಾಳಿ ಬಂದರು. ಭೀಷಣನು ಬಂದು ನಿನ್ನನ್ನು ನರಮೇಧದ ಪಶುವನ್ನಾಗಿಸುವೆ ಎಂದು ನುಡಿದನು. ಅರ್ಜುನನು ನಗುತ್ತ ರಕ್ಷೋಘ್ನ ಬಾಣವನ್ನು ಹೂಡಿ ಸದೆಬಡಿದನು.
ಕೆಲವರು ಮಡಿದರು. ಕೆಲವರು ಗಾಯಗೊಂಡರು. ಕೆಲವರು ಪಲಾಯನ ಮಾಡಿದರು. ಮರಗಿಡಗಳನ್ನು ಹತ್ತಿದರು. ಇತ್ತ ಹನುಮನು ಕಾದಲು ಬಂದ ರಕ್ಕಸಿಯರನ್ನು ಅಪ್ಪಳಿಸಿ ಎಸೆದು ಅಬ್ಬರಿಸಿ ದೆಸೆದೆಸೆಗೆ ಓಡಿಸಿದನು.
ಭೀಷಣನು ಮಾಯಾಜಾಲದಿಂದ ಒಂದು ಆಶ್ರಮವನ್ನು ರಚಿಸಿ ಮುನಿಯ ವೇಷ ಧರಿಸಿ ವಂಚಿಸಲು ನೋಡಿದನು. ಆದರೆ ಅರ್ಜುನನು ಅವನನ್ನು ಕಂಡುಹಿಡಿದು ತುಡುಕಿದನು. ನಂತರ ಹಯದೊಂದಿಗೆ ಇತರ ಸಂಪತ್ತಿನಸಹಿತ ಅಲ್ಲಿಂದ ಹೊರಟು ದೇಶ ದೇಶಗಳನ್ನು ನೋಡುತ್ತಾ ಮಣಿಪುರಕ್ಕೆ ಬಂದರು. ಅಲ್ಲಿ ಬಭ್ರುವಾಹನ ಇದ್ದನು.
ಹದಿನಾರನೆಯ ಸಂಧಿ ಕೊನೆಯ ಭಾಗ
ಪದ್ಯ 21 ರಿಂದ 46
ಅಲ್ಲಿಗಲ್ಲಿಗೆ ತುರಂಗದ ಕೂಡೆ ಕೌಂತೇಯ | ನಿಲ್ಲದಿಲ್ಲದ ಚಿತ್ರಮಂ ನೋಡುತೈತರಲ್ | ಮೆಲ್ಲಮೆಲ್ಲನೆ ಹಯಂ ಪೋಯ್ತು ಭೀಷಣನೆಂಬಸುರನ ಪುರಕದರೊಳವನ || ಸೊಲ್ಲುಸೊಲ್ಲಿಗೆ ಮಿಗೆ ಹಸಾದವೆನುತವನಿಯೊಳ್ | ನಲ್ಲನಲ್ಲದ ಕೃತ್ಯಮೆಲ್ಲಮಂ ನೆರೆ ಮಾಡ | ಬಲ್ಲ ಬಲ್ಲದ ರಕ್ಕಸರ್ ಮೂರುಕೋಟಿ ತಳ್ಳಿ ಹರತಿಭಯಂಕರದೊಳು ||೨೧||
ರಕ್ಕಸರನಿಬರೆಲ್ಲರುಂ ದೀರ್ಘ ದೇಹಿಗಳ್ | ವೆಕ್ಕಸದ ಕೋಪಿಗ ಳ್ ಮೇಲೆ ಪುರುಷಾದಕರ್ | ಕಕ್ಕಸದ ಮುಸುಡವರ್ ಬಹಳಮಾಯಾವಿಗಳ್ ನಿರ್ದಯರ್ ಕೊಲೆಗಡಿಕರು || ಹೊಕ್ಕ ಸಮರಕ್ಕೆ ಹಿಮ್ಮೆಟ್ಟರುನ್ಮತ್ತರೆನೆ | ಮಿಕ್ಕಸದಳವನದೇವೇಳ್ವೆನರ್ಜುನನ ಹಯ | ಮೆಕ್ಕ ರಸದೊಳ್ ಬಂದುದಲ್ಲಿಗವನೀಶ ಕೇಳಿನ್ನಾ ಮಹಾದ್ಭುತವನು ا|೨೨||
ಆಹಾರಕಡವಿಯಂ ತೊಳಲಿ ಬರುತಿರ್ದ ಮೇ | ದೋಹೋತನೆಂಬನಂ ದಾನವೇಂದ್ರಂಗೆ ಪೌ | ರೋಹಿತ್ಯಮಂ ಮಾಡುವಂ ಬ್ರಹ್ಮ ರಾಕ್ಷಸಂ ಕಂಡು ಪಾರ್ಥನ ಹಯವನು || ಊಹಿಸಿದನಿದು ಯಜ್ಞ ತುರಗಮಾ ದಳವಿದರ | ಕಾಹಿನದು ಮೇಣದಕೆ ಕರ್ತೃನರನೆಂದರಿದು | ಬಾಹುವಂ ಚಪ್ಪರಿಸಿಕೊಂಡುತ್ಸವದೊಳಸುರನೋಲಗಕೆ ಪರಿತಂದನು | ೨೩ ||
ನರವಿನುಪವೀತದಿಂ ಕಣ್ಣಾಲಿಗಳೊಳ್ ಕೋದ | ಕೊರಳ ತಾವಡದಿಂದೆ ನರರ ತಲೆಗಳ ಜಪದ | ಸರದಿಂದ ಪಂದೊವಲ ಧೋತ್ರದಿಂದೊಟ್ಟೆಯಲುಗಳ ಕುಂಡಲಂಗಳಿಂದ || ಕರಿ ಶಿರದ ಡೊಗೆಯ ಸಲಿಲದ ಕಮಂಡುಲದಿಂದ | ಯುರುಗಜದ ಬೆನ್ನ ಸ್ಥಿಯಪ್ಪಿಯಿಂ ಸಲೆ ಭಯಂ | ಕರರೂಪನಾದ ಮೇದೋಹೋತನೈ ತಂದೊಡಿದಿರೆದ್ದ ನಸುರೇಂದ್ರನು | ೨೪ ||
ಏನು ಬಿಜಯಂಗೈದಿರೆನಲಟ್ಟಹಾಸದಿಂ । ದಾನವಂಗೆಂದನೇತಕೆ ಸುಮ್ಮ ನಿರ್ದಪೆ ನಿ | ಧಾನವನೆಡಹಿ ಕಂಡವೋಲಾಯ್ತು ನಿಮ್ಮಯ್ಯ ಬಕನಂ ಕೊಂದ ಭೀಮನೆಂಬ || ಮಾನವನ ತಮ್ಮನರ್ಜುನನೀಗ ಬಂದನದೆ | ಕೋ ನಿನ್ನ ಪೊಲಸೀಮೆಗಾತನಂ ಪಿಡಿತಂದು | ನೀನುರುವ ನರಮೇಧಮಂ ಮಾಡೆನವಂಗಸುರೇಂದ್ರನಿಂತೆಂದನು | ೨೫ ||
ಮತ್ತಾತನಂ ಕೊಂದವನ ತಮ್ಮನಂ ಪಿಡಿದು | ಮತ್ತಾತನಂ ಸವೆನವನ ಹರಿಬಕೆ ಬಂದ | ಮತ್ತಾತನಂ ಪೀರ್ವೆನಂತಿರಲಿ ನೀನೆನ್ನೊಳೆಂದ ಯಜ್ಞದ ಪಶುವಿಗೆ | ಸತ್ತಾತನಾದವನೆ ಪೇಳ್ ಸಾಕು ನಿನ್ನಿಂದೆ| ಸತ್ತಾತನಾದಪನವಂ ನಿನ್ನ ನುಡಿಗೆ ಬೇ | ಸತ್ತಾತನಾದಪನೆ ನಾನಕಟ ನೋಡೆನುತೆ ಭೀಷಣಂ ಗರ್ಜಿಸಿದನು | ೨೬ ||
ರಾಕ್ಷಸೋತ್ತಮರೊಳಾರ್ ಪಿಂತೆ ನರಮೇಧಮಖ | ದೀಕ್ಷೆಯಂ ಕೈಕೊಂಡರಿದಕೆ ಋತ್ವಿಜರಾರ್ | ಪೇಕ್ಷಿತವದೇನಾರ್ಗೆ ಸಂತುಷ್ಟಿ ಪೇಳೆಂದು ಭೀಷಣಂ ಬೆನಗೊಳಲ್ಕೆ ॥ ರೂಕ್ಷವದನವನವಂ ತೆರೆದಟ್ಟಹಾಸದಿಂ । ದಾಕ್ಷೇಪಿಸುತೆ ನುಡಿದನೆಲೆ ಮರುಳೆ ರಾವಣಂ | ಸಾಕ್ಷಿಯಲ್ಲವೆ ತತ್ಕೃತುವನೆಸಗಿ ಮೂಜಗವನೈದೆ ಗೆ ಲ್ದುದಕೆಂದನು||೨೭||
ಸುರೆ ನೆತ್ತರಿಂದ ಚಾತುರ್ಯಾಸ್ಯಮಂ ಕಳೆದ | ಹಿರಿಯರಿದೆ ಮಾಸೋಪವಾಸಿಗಳ ತಲೆಮಿದುಳ | ನುರುತರಶ್ರಾವಣಕೊದಗಿಪರಿದೆ ಯತಿಮಾಂಸಮಂ ಭಾದ್ರಪದಕೆ ಬಿಡದೆ || ದೊರಯಿಸುವರಿದೆ ವರಾ ಶ್ವಿಜಕೆ ಜಡೆಮುಡಿಯವರ | ಕರುಳನಾರ್ಜಿಸುವರಿದೆ ಕಾರ್ತಿಕಕ್ಕೆಳವಣ್ಣ | ತುರದ ಗುಂಡಿಗೆಯನರಸುವ ಮಹಾವ್ರತಿಗಳಿದೆ ಬೊಮ್ಮ ರಕ್ಕಸರೆಂದನು | ೨೮ ||
ಇನ್ನು ಮಿವರಲ್ಲದೆ ಮಹಾಬ್ರಹ್ಮ ರಾಕ್ಷಸರ್ | ಮುನ್ನಿನ ಯುಗಂಗಳವರಿರ್ದಪರ್ ಪಿರಿಯರ್ ಸ | ಮುನ್ನತ ವಟದ್ರುಮ ನಿವಾಸಿಗಳನೇಕ ಪುರುಷಾದಕರ್ ದುರ್ದತ್ರರು | ನಿನ್ನ ನರಮೇಧಕಾರಿ ಜ್ಯಮಂ ಮಾಳ್ವರಿದ | ಕೆನ್ನನಾಚಾರನಾಗಿಯೇ ವರಿಸು ತದ್ಯಾಗ | ಮಂ ನೆಗಳ ಸುರರ್ಗೆ ತುಪ್ಪಿಯಪ್ಪುದು ಜಯಂ ನಿನಗೆ ನಮನಿಪುದೆಂದನು ||೨೯|
ದಾನವರ ದಂಪತಿಸಹಸ್ರಮಂ ಪ್ರತಿದಿನಂ | ಮಾನವರ ಮಾಂಸಭೋಜನದಿಂದೆ ತಣಿಸದೇ | ಕಾನವರನುಪಚರಿಪೆನಧ್ವರವನೆಸಗು ನೀಂ ಮಂಟಪವನಿಲ್ಲಿ ರಚಿಸು || ಸೇನೆಸಹಿತಾ ಪಾರ್ಥನಂ ಪಿಡಿದು ತಂದೊಡೆ ಸ | ಮಾನವಿಲ್ಲಸುರರೊಳ್ ನಿನಗೆ ನಡೆದಪುದು ಮಖ | ಮೇನೆಂಬೆನಿದರುತ್ಸವವನೆನೆ ಪುರೋಹಿತಂಗಾ ದೈತ್ಯನಿಂತಿಂದೆನು||೩೦||
ಪೊಕ್ಕು ಪಡೆಯೊಳ್ ವಿಜಯನಂ ಪಿಡಿದು ನರಮೇಧ | ಕಿಕ್ಕುವೆಂ ಬೇಗ ಕಟ್ಟಿಸು ಮಂಟಪವನೆಂದು | ಹೆಕ್ಕಳದೊಳಾತನಂ ಬೀಳ್ಕೊಂಡು ಭೀಷಣಂ ಮುಳಿದೆದ್ದು ನಡೆಯುತ್ತಿರಲು || ಮುಕ್ಕೋ ಟಿರಕ್ಕಸರ್ ಪೊರಮಟ್ಟರವನ ಕೂ | ಡಕ್ಕರಿಂ ಜಗವನೊಂದೇ ಬಾರಿ ಕೊಳ್ಳ ತವ | ಕಕ್ಕೆ ಬಹುರೂಪಮಂ ತಾಳ್ದನೋ ಕಾಲಭೈರವನೆಂಬ ತೆರನಾಗಲು||೩೧||
ಭೀಷಣನೊಡನೆ ಮೂರುಕೋಟಿ ದೈತ್ಯಯರತಿ | ರೋಷದಿಂದೈದುತಿರ್ದರು ಕಾಳಗಕೆ ಘೋರ | ವೇಷದ ಮಹಾರಾಕ್ಷಸಿಯರಂ ದೊಡಲ್ಗಳಂ ರುಧಿರಮಾಸಂಗಳಿಂದೆ || ಪೋಷಿಸುವ ತವಕದಿಂ ಪೊರಮಟ್ಟು ಬಂದು ಸಂ | ತೋಷದಿಂ ಬೆಟ್ಟದುದಿಗಳನಡರಿ ಕಂಡರು | ಧ್ಘೋಷದಿಂದ ಬ್ದಿಯಂ ಜರೆವಂತೆ ನಡೆದು ಬಹ ಪಾರ್ಥನ ಪತಾಕಿನಿಯನು||೩೨||
ಆ ರಾಕ್ಷಸಿಯರೊಳೋರ್ವಳ್ ಧನಂಜಯನ ಪೊಂ। ದೇರ ಪಳವಿಗೆದುದಿಯ ಹನುಮಂತನಂ ಕಂಡು | ದೂರಕೋಡಿದಳಂದು ಲಂಕಿಣಿ ಯನೊದೆದ ಕೋಡಗವೆಂದು ಮತ್ತೋರ್ವಳು || ಊರು ಸುಡುವುದೆಂದು ತನ್ನ ಸದನದ ಸರಕ | ನಾ ರೈವುದಕ್ಕೆ ಪೋದ ದನುಜೆ ಮತ್ತೋರ್ವ | ಲೋರೆಂತೆಣಿಸಿಕೊಂಡಳೀ ಕಪಿ ನೆಳಲ್ಗೆ ಸೈರಿಸದೆಂದು ಸೈವರಿದಳು||೩೩||
ಆಗಸಕೆ ಚಿಗಿದು ರವಿಯಂ ತುಡಿಕಿ ಧೀಂಕಿಟ್ಟು | ಸಾಗರಕೆ ಸೀತೆಯಂ ಕಂಡು ಬನಮಂ ಕಿ ಳ್ತು| ತಾಗಿದ ನಿಶಾಟರಂ ಸದೆದು ಲಂಕೆಯನುರುಪಿ ದಶವದನನಂ ಭಂಗಿಸಿ ಪೋಗಿ ಪಾತಾಳದನುರರನೊಕ್ಕಲಕ್ಕಿ ಪಿರಿ| | ದಾಗಿ ಬೆಟ್ಟಂಗಳಂ ಪೊತ್ತು ಮೀರಿದ ಕಪಿಯ | ನೀಗ ನಿಟ್ಟಿಸಿ ಬೆದರಿದಿರ್ಡ ಪೆನದೆಂತುಟೆಂದೊರ್ವರಕ್ಕಸಿ ನುಡಿದಳು||೩೪||
ಬೆದರದಿರಿ ಬರಿದೆ ನೀವೀ ಕೋತಿಯಂ ತನ್ನ । ತುದಿಮೊಲೆಗಳಿಂದಪ್ಪಳಿಸಿ ನರನ ಸೈನ್ಯಮಂ | ಸದೆದು ಕೆಡವುವೆನೆಂದು ಯೋಜನಸ್ತ ನಿಯೆಂಬ ರಕ್ಕಸಿ ನುಡಿಯ ಲಾಲಿಸಿ || ಗದಗದಿಸಬೇಡ ಬೇರೊಡಲೊಳಡಿಸುವೆನಿನಿತು | ಸದರಮಂ ನೋಡುತಿರಿ ಸಾಕೆಂದು ರೋಷದಿಂ । ಬೊದರಿದಳ್ ಮತ್ತೊರ್ವಳಸುರಿ ಲಂಬೋದರಿ ನಿಶಾಚರಿ ಮಹಾಭಯಕರಿ ॥೩೫||
ಬಳಿಕುಳಿದ ರಕ್ಕಸಿಯರೆಲ್ಲರುಂ ಪಲುಗುಣನ | ದಳಮಂ ಪೊಡೆದು ನುಂಗಲೆಂದು ಬಾಯ್ದೆರೆದು ಕಿಡಿ | ಗಳನುಗುಳುತಾರ್ಭಟಿಸುತ್ತೈದಿದರ್ ಕೂಡೆ ಲಂಬೋದರಿ ನರನ ಪಡೆಯನು || ಸೆಳೆದಣಲ್ಲ ಡಸಿಕೊಳುತಿರ್ದಳೊಡನೊಡನೆ ದಾಂ | ದಳಕಡರ್ದೇಳ್ದ ನಿಡುಮೊಲೆಗಳಿಂ ಬಲವನ | ಪ್ಪಳಿಸಿದಳ್ ತಿರುಗಿ ಬೀಸುತ್ತೆ ಯೋಜನಸ್ತನಿ ಕನಲ್ದಾ ಕ್ಷಣದೊಳು||೩೬||
ಅನುರಕೋಟಿತ್ರಯದೊಡನೆ ಬಂದು ಭೀಷಣಂ | ಮುಸುಕಿದಂ ಕೈದುಗಳ ಮಳೆಗಳಂ ಕರೆಯುತ್ತೆ | ಮ ಸಗಿದುರಿ ಪೊಗೆ ಸಿಡಿಲ್ಮಿಂಚು ಕತ್ತಲೆ ಗಾಳಿ ಮುಗಿಲೊಡ್ಡು ದೂಳ್ಗಳಿಂದೆ| ಬೆಸೆಗೆಡಿಸುತಪ್ಪಿ ಸಿಂಹ ಶರಭ ಗಜ ಭೇರುಂಡ | ಪಸಿದ ಪುಲಿ ಪಂದಿ ವೃಕ ವೃಷಭಂಗಳಾಗಿ ಗ | ರರ್ಜಿಸುತುಗ್ರ ಭೂತಂಗಳಾಗಿ ಬಾಯ್ದೆರೆದಬ್ಬರಿಸುತೆ ಪಾರ್ಥನ ಪಡೆಯನು ॥೩೭॥
ಮಸಗಿದಂ ಬಳಿಕ ರಣಭೀಷಣಂ ಭೀಷಣಂ | ವಸುಮತಿಗೆ ಕಾಲಾಂತಕೋಪಮಂ ಕೋಪಮಂ | ಪಸರಿಸಿದನರಿದಂ ನಿದಾನವಂ ದಾನವಂ ಫಲುಗುಣನ ಮುಂದೆ ನಿಂದು || ಒ ಸೆದೆನ್ನನೈದೆ ಪೆತ್ತಾತನಂ ತಾತನಂ । ಕುನುರಿದರಿದನಿಲಜನ ತಮ್ಮನೇ ತಮ್ಮನೇ । ಳಿಸುತೆ ಬಹೆ ನಿನ್ನೆ ಹದನಾವು ನಾವು ದೈತ್ಯರ್ ಕ್ಕೊಲ್ಲದಿರೆವೆಂದನು || ೩೮ |
ಈಗಳದರಿಂದ ನಿನ್ನಂ ಪಿಡಿದು ನರಮೇಧ | ಯಾಗಕ್ಕೆ ಪಶುಮಾಳ್ಪೆನೆಂದು ಫಲುಗುಣನ ರಥ | ಕಾಗಿ ಭೀಷಣನೆರಗಲರ್ಜುನಂ ನಗುತೆ ರಕ್ಷೋಘ್ನ ಬಾಣವನೆ ಪೂಡಿ | ಬೇಗದಿಂದಿಸಲಸುರನಳವಳಿದನವನ ಪಡೆ | ಸಾಗಿದುದು ಬಿರುಗಾಳಿ ಬೀಸಿದೊಡೆ ಬಿಡಿದ | ಮೇಘಸಂಕುಲವಿರದೆ ಪರಿವಂತೆ ಶರಘಾತಿಗೊಗ್ಗೊಡೆದು ಕಂಡಕಡೆಗೆ ॥ ೩೯ |
ಮಡಿದವರ್ ಕೆಲರಂಗಭಂಗದಿಂ ಕೈಕಾಲ್ಗ | ಕುಡಿದವರ್ ಕೆಲರೆಚ್ಚ ಕೂರ್ಗಣಿಗಳವಯವದೊ | ಆಡಿದವರ್ ಕೆಲರೇರ್ಗಳಿಂದೆ ವೇದನೆಗಳಂ ಸೇರಿಸದೆ ಗಳದಸುವನು || ಪಿಡಿದವರ್ ಕೆಲರಲ್ಲಿ ಗಿಡುಮರವನೆಡೆಗೊಂಡು | ಸಿಡಿದವರ್ ಕೆಲರೋಡಿ ಬದುಕಿದೆವು ತಾವೆಂದು | ನುಡಿದವರ್ ಕೆಲರಾದರರ್ಜುನನಿಸುಗೆಯಿಂದಮಾಕ್ಷಣಂ ರಾಕ್ಷಸರೊಳು [೪೦
ಓಡಿಸಿ ಲೌಘಮಂ ಬೀಸಿ ಬಿರುಮೊಲೆಗಳಿಂ | ತಾಡಿಸುವ ಯೋಜನಸ್ತನಿಯನುರೆ ಬಾಯ್ದೆರೆದು | ನಾಡೆ ಪಡೆಯಂ ತುತ್ತು ಗೊಂಬ ಲಂಬೋದರಿಯನುಳಿದಸುರಿಯರ ಕೃತ್ಯವ ॥ ನೋಡಿ ವಿಸ್ಕಿ ತನಾಗಿ ಪೂರ್ವವಂ ನೆನೆದು ಕೊಂ | ಡಾಡಿ ನಸುನಗುತೆ ದೆಸೆದೆಸೆಗೆ ವಾಲಾಗ್ರಮಂ | ನೀಡಿ ತೆಗೆತೆಗೆದಿಳೆಯೊಳಪ್ಪಳಿಸಿ ಕೊಂದನವರೆಲ್ಲರಂ ಕಲಿಚಹನುಮನು||೪೧||
ನರನ ಶರಜಾಲದಿಂ ಕಡಿವಡೆದು ವೀರವಾ | ನರನ ಲಾಂಗೂಲದಿಂ ಬಡಿವಡೆದು ರಕ್ಕಸರ | ನೆರವಿ ಹೇರಾಳದಿಂ ಪುಡಿವಡೆದು ಬಯಲಾಗೆ ಭೀಷಣಂ ಭೀತಿಗೊಂಡು || ವಿರಚಿಸಿದನೊಂದುಪಾಯಾಂತರವನಲ್ಲಿ ಮೈ | ಗರೆದನಾಗಳೆ ಮಾಯದಿಂದೆ ಮುನಿಯಾದವದು | ಸುರನದಿಯ ತೀರವಾದುದು ಕಣ್ಗೆ ಕಾಣಿಸಿತು ಪುಣ್ಯಾಶ್ರಮಂ ಪೊಸತೆನೆ |೪೨||
ಎಲ್ಲಿ ನೋಡಿದೊಡೆ ಗಂಗಾಪ್ರವಾಹದ ಸಲಿಲ | ವೆಲ್ಲಿ ನೋಡಿದೊಡೆ ಪುಣ್ಯಾಶ್ರಮಕುಟೀರಂಗ |ಳೆಲ್ಲಿ ನೋಡಿದೊಡೆ ನಿಬಿಡದ್ರುಮಚ್ಛಾಯೆಗಳ್ ಕುಸುಮಫಲಮೂಲಂಗಳು | ಎಲ್ಲಿ ನೋಡಿದೊಡೆ ಶುಕ ಪಿಕ ಮಯೂರ ಧ್ವನಿಗ | ಳೆಲ್ಲಿ ನೋಡಿದೊಡೆ ಸಾತ್ವಿಕವಾದ ಮೃಗನಿಕರ | ಮೆಲ್ಲಿ ನೋಡಿದೊಡೆ ಸಂಚರಿಪ ತಾಪಸವಟುಗಳೆಸೆದರರ್ಜುನನ ಕಣ್ಗೆ | ೪೩ ||
ಆ ದಿವ್ಯಋಷಿಗಳಾಶ್ರಮದಿಂದಮೊರ್ವಮುನಿ | ಸಾದರದೊಳೈತಂದು ಫಲುಗುಣನ ಮುಂದೆ ನಿಂ ! ದೀದನುಜರಂ ಕೊಂದಡೇನಹುದು ಪರಹಿಂಸೆ ಲೇಸಲ್ಲ ಬಲ್ಲವರ್ಗೆ || ಮಾಧವ ಮಹೇಶ್ವರಾರಾಧನತಪೋ ಜಪ ಸ | ಮಾಧಿಗಳನುತ್ತಮ ಸ್ವಾಧ್ಯಾಯಗತಿಗಳಂ | ಸಾಧಿಸುವೊಡಿದು ಪುಣ್ಯನದಿ ಗಂಗೆ ಶುದ್ದ ಪ್ರದೇಶವಿದು ನಿನಗೆಂದನು || ೪೪ |
ಬೆರಗಾದನರ್ಜುನಂ ದಾನವನ ಕೃತಕಮೆಂ | ದರಿದು ಮುನಿಯಾಗಿರ್ದವನ ತುಡುಕಲಾ ಮಾಯೆ | ಬರೆತು ಮುನ್ನಿನ ರಾಕ್ಷಸಾಕೃತಿಗೆ ನಿಲಲಾಗಿ ಪಿಡಿದಾಕ್ರಮಿಸಿ ಮನೆಯೊಳು || ತುರುಗಿರ್ದ ಸಕಲಭೂಷಣ ವಿವಿಧಮಣಿಗಳಂ | ತರತರದ ವಸ್ತುಗಳನುತ್ತ ಮಗಜಂಗಳಂ । ಮಿರುಪ ಹಯ ರತ್ನಂಗಳಂ ಕೊಂಡು ದೈತ್ಯರಂ ದೆಸೆಗೆಡಿಸಿದಂ ಪಾರ್ಥನು ॥೪೫॥
ಕೋಳೊಡವೆ ಮುಂತಾಗಿ ತಿರುಗಿದಂ ಫಲುಗುಣಂ | ಮೇಲೆ ನಡೆದುದು ಕುದುರೆ ತೆಂಕದೆಸೆಗೊಡನೆ ಕೆಂ | ದೂಳಿಡುತ ಬಹ ಬಹಳಬಲಸಹಿತ ಮಣಿನಗರವೆಂಬ ಪಟ್ಟಣದ ಬಳಿಗೆ || ಪೇಳಲೇನರ್ಜುನಸುತಂ ಬಭ್ರುವಾಹನಂ ಪಾಲಿಸುವನಾ ಪೊಳಲನೀ ನರಂ ಬಂದುದಂ | ಕೇಳಲೇಗೈದಪನೊ ದೇವಪುರನಿಲಯ ಲಕ್ಷ್ಮೀಪತಿಯ ಮೈದುನಂಗೆ | ೪೬||
ಜೈಮಿನಿ ಭಾರತ 34
ಹದಿನೇಳನೆಯ ಸಂಧಿ ಕೊನೆಯ ಭಾಗ
ಪದ್ಯ 31 ರಿಂದ 60
ಅರ್ಜುನ ಬಭ್ರುವಾಹನರ ಭೇಟಿ
ನಿರೂಪಣೆ: ಸುಬ್ಬುಲಕ್ಷ್ಮಿ
ಸಂಕ್ಷಿಪ್ತ ರೂಪ
ಎಲ್ಲವಿಷಯ ತಿಳಿದ ಬಭ್ರುವಾಹನನ ತಾಯಿ ಚಿತ್ರಾಂಗದೆ ಆಸ್ಥಾನಕ್ಕೆ ಬಂದು ಮಗನನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ನೀನು ಕುದುರೆಯನ್ನು ಕಟ್ಟಿದ್ದು ತಪ್ಪು ಎಂದು ಹೇಳಿ ಅವನು ನಿನ್ನ ತಂದೆಯೆಂದು ಹೇಳಿ ಅವನಿಗೆ ನಮಸ್ಕರಿಸಲು ಹೇಳುವಳು. ಅವಳ ಅಪಾರ ಶೋಕವನ್ನು ಕಂಡು ಬಭ್ರುವಾಹನನು ಸಂತೈಸಿ ಕ್ಷಮೆ ಬೇಡುವನು. ಅವಳು ಅರ್ಜುನನನ್ನು ಕಾಣಲು ಹಲವು ವರ್ಷಗಳಿಂದ ಕಾದಿದ್ದಳು. ಈಗ ಅವನು ಬಂದಿದ್ದಾನೆ. ತನ್ನಸರ್ವಸ್ವವನ್ನೂ ಅವನಿಗೆ ನೀಡುವುದಾಗಿ ನಿಶ್ಚಯಿಸುವನು.
ಎಲ್ಲವಿಧವಾದ ಸಂಪತ್ತುಗಳನ್ನೂ ಸಿದ್ಧಮಾಡಿ ಆಚಾರ್ಯ, ಪುರಜನ, ಅರಮನೆಯ ಪರಿವಾರ ಕಳಸ ಕನ್ನಡಿ ಅಕ್ಷತೆ ಮೊದಲಾದ ಎಲ್ಲವನ್ನೂ ಸಜ್ಜುಗೊಳಿಸಲು ಹೇಳುವನು. ಸುಬುದ್ಧಿಯೂ ಅದನ್ನೇ ಸಮರ್ಥಿಸಿದನು. ಆನೆ, ಕುದುರೆ, ರಥಗಳು, ಪರಿಪರಿಯ ದ್ರವ್ಯಗಳು, ಚತುರಂಗ ಬಲ, ಛತ್ರ ಚಾಮರ ಮುಂತಾದ ಸಾಮಗ್ರಿಗಳು. ಬೆಳಗಾಯಿತು. ವಾದ್ಯಗಳು ಮೊಳಗಿದುವು. ತಂಗಾಳಿ ಬೀಸಿತು. ಕಮಲಗಳು ಅರಳಿದವು. ಕತ್ತಲೆ ಮಾಯವಾಯಿತು. ಸೂರ್ಯನ ಆಗಮನವಾಯಿತು. ಹೂಗಳು ಅರಳಿದವು.
ಬೆಳಗಿನ ಸ್ನಾನಾದಿ ಸತ್ಕರ್ಮಗಳನ್ಬು ಮುಗಿಸಿ ಅರ್ಜುನನ ಕಡೆಗೆ ಬಭ್ರುವಾಹನ ಹೊರಟನು. ಇತ್ತ ಅರ್ಜುನನೂ ಬೆಳಗಿನ ಕರ್ಮಗಳನ್ನು ಮುಗಿಸಿ ಮಾಧವನ ಚರಣಗಳನ್ನು ಮನದಲ್ಲಿ ನೆನೆದು ನಮಿಸಿ ವೃಷಕೇತು ಮುಂತಾದ ವೀರರನ್ನು ಕುದುರೆಯನ್ನು ಬಿಡಿಸಿಕೊಳ್ಳಲು ಹೊರಡಲು ಕರೆದನು. ಎಲ್ಲ ವೀರರ ಸೇನೆಯೂ ಉತ್ಸಾಹದಿಂದ ಒಗ್ಗೂಡಿತು. ರಣವಾದ್ಯಗಳು ಮೊಳಗಿದವು.
ಆ ವೇಳೆಗೆ ಬಭ್ರುವಾಹನನು ಕುದುರೆ ಮತ್ತು ಸಕಲ ಸಾಮಗ್ರಿಗಳೊಂದಿಗೆ ಪರಿವಾರಸಮೇತ ಬಂದನು. ಬಂದು ಕಾಣಿಕೆಯೊಪ್ಪಿಸಿ ನಮಿಸಿದ ಇವನನ್ನು ಕಂಡು ಅರ್ಜುನನು ವಿಸ್ಮಿತನಾಗಿ ನೀನು ಯಾರು ಎನ್ನಲು ನಿನ್ನ ಮಗನೆಂದು ಉತ್ತರಿಸಿದನು. ನನ್ನ ತಾಯಿ ಚಿತ್ರಾಂಗದೆ. ತಿಳಿಯದೆ ಕುದುರೆ ಕಟ್ಟಿದೆ. ಮನ್ನಿಸು ಎಂದನು.
ಎಲ್ಲರೂ ವಿಸ್ಮಯದಿಂದ ನೋಡುತ್ತಿರಲು ಅರ್ಜುನನು ಇವನನ್ನು ಆದರಿಸದೆ ಮಾತಾಡಿಸದೆ ಬಿಗುವಾಗಿದ್ದನು. ಅವರುಗಳು ಪಾರ್ಥನನ್ನು ಸುಮ್ಮನಿರಲು ಕಾರಣವೇನು ಎಂದರು. ಇವನು ನಿನ್ನ ಮಗ. ಪರಾಕ್ರಮಿ. ನಿನ್ನನ್ನೇ ಹೋಲುತ್ತಿರುವನು. ಎಂದೆಲ್ಲ ಹೇಳಿದರು.
ಕೋಪದಿಂದ ಅರ್ಜುನನು ಬಭ್ರುವಾಹನನಿಗೆ ಹೇಡಿಯೆಂದೂ ಕುದುರೆಯನ್ನು ಕಟ್ಟಿ ಈಗ ಯುದ್ಧ ಮಾಡಲು ಆಗದೆಂದು ಕಥೆ ಕಟ್ಟುತ್ತಿದ್ದಾನೆಂದೂ ಹಳಿದನು. ನನ್ನ ಮಗ ಅಭಿಮನ್ಯು ಯುದ್ಧದಲ್ಲಿ ಅಪ್ರತಿಮವಾಗಿ ಹೋರಾಡಿ ವೀರಮರಣವನ್ನು ಹೊಂದಿದನು. ಅವನೇ ತನ್ನ ಮಗನೆಂದನು. ಸಿಂಹದ ಹೊಟ್ಟೆಯಲ್ಲಿ ನರಿಯು ಹುಟ್ಟುವುದೆ? ಎಂದು ಮೂದಲಿಸಿದನು. ಈ ಚತುರಂಗ ಬಲವೇಕೆ, ಈ ಪರಿವಾರವೇಕೆ ಎಂದನು. ಎಲ್ಲ ನಾಟಕವೆಂದು ಕಟುವಾಗಿ ಟೀಕಿಸಿದನು.
ಇದನ್ನು ಕೇಳಿ ಕನಲಿದ ಬಭ್ರುವಾಹನ ಕುದುರೆ ಮತ್ತು ಪರಿವಾರದೊಂದಿಗೆ ವಾಪಸಾಗುತ್ತ ನಿನ್ನ ತಲೆಯನ್ನು ಬಲಿಗೊಡುವೆ. ನನ್ನ ತಾಯಿಯ ಬಗ್ಗೆ ಹೀನಾಯವಾಗಿ ನುಡಿದೆಯಾ ಎಂದು ಬಹುವಾಗಿ ಮಿಡುಕಿದನು. ತರುಣಿಯರನ್ನು ಒಳಗೆ ಕಳಿಸಿ ಸಕಲ ಸಂಪತ್ತನ್ನೂ ತೆಗೆದಿರಿದಿ ಸೇನೆಯನ್ನು ಯುದ್ಧಕ್ಕೆ ಸಜ್ಜುಗೊಳಿಸಲು ಹೇಳಿದನು. ಅವನ ಸೈನ್ಯದ ಆರ್ಭಟಕ್ಕೆ ಕತ್ತಲೆ ಕವಿದು ರಾತ್ರಿಯಾಯಿತೆಂದು ಭಾವಿಸಿ ಕಮಲಗಳು ಮುಚ್ಚಿದವು.
ಹಿಂದೆ ಇಂದ್ರನಿಗೂ ಅರ್ಜುನನಿಗೂ ಮತ್ತು ರಾಮನಿಗೂ ಅವನ ಮಕ್ಕಳಿಗೂ ನಡೆದ ಸಂಗ್ರಾಮದಂತೆ ಎನ್ನುತ್ತಿರುವಾಗ ಜನಮೇಜಯನು ಕುತೂಹಲವನ್ನು ತಾಳಿ ರಾಮನ ಕಥೆಯನ್ನು ಕೇಳಬಯಸಿದಾಗ ಮುನಿಯು ಪ್ರೀತಿಯಿಂದ ಹೇಳತೊಡಗಿದನು.
ಹದಿನೇಳನೆಯ ಸಂಧಿ ಮುಂದುವರೆದ ಭಾಗ
ಪದ್ಯ 31 ರಿಂದ 60
ಇಂತೆಲ್ಲ ನಡೆದಖಿಲವೃತ್ತಾಂತಮಂ ಕೇಳ್ದ | ಳಂತಃಪುರದೊಳರ್ಜುನನ ಗುಣಾವಳಿಗಳಂ | ಸಂತತಂ ನೆನೆದು ಚಿಂತಿಪ ಬಭ್ರುವಾಹನನ ನಿಜಮಾತೆ ಚಿತ್ರಾಂಗದೆ || ಸಂತೋಷಮಂ ತಾ ಳ್ದು ತನಯನೋಲಗಕೆ ಭರ | ದಿಂ ತಳರ್ದಿದಿರೇಳ್ವ ಕುವರನಂ ತೆಗೆದಪ್ಪಿ | ಕುಂತೀಸುತನ ವಾಜಿಯಂ ಕಟ್ಟಿದ್ಯೆ ಮಗನೆ ಲೇಸುಮಾಡಿದೆ ಯೆಂದಳು | ೩೧ ||
ಕ್ಷುದ್ರಬುದ್ಧಿಯನೆಲ್ಲಿ ಕಲಿತೆ ನೀನೀಪರಿ ಗು | ರುದ್ರೋಹಕೆಂತು ತೊಡರ್ದುದು ನಿನ್ನ ಮನಮಕಟ | ಮದ್ರಮಣನಾಗಮಂ ನಿನಗೆ ವಿರಹಿತವಾದುದಾತನುದರದೊಳೆ ಜನಿಸಿ || ಉದ್ರೇಕದಿಂದೆ ಕಟ್ಟಿದೆಯಲಾ ತುರಗಮಂ | ಭದ್ರವಾದುದು ರಾಜಕಾ ರ್ಯರ್ಮಿಮದಮೃತಕೆ ಸ | ಮುದ್ರವಂ ಮಥಿಸೆ ವಿಷಮುದಿಸಿದವೊಲಾಯ್ತು ನಿನ್ನುದ್ಭವಂ ತನಗೆಂದಳು |೩೨||
ಮಾತೆಯ ನುಡಿಗೆ ನಡುನಡುಗಿ ಬಭ್ರುವಾಹನಂ | ಭೀತಿಯಿಂದಡಿಗೆರಗಿ ಕ್ಷತ್ರಿಯರ ಪಂತದಿಂ । ದಾತನ ತುರಗಮಂ ಕಟ್ಟಿದೆಂ ನಿಮ್ಮ ಚಿತ್ರಕೆ ಬಾರದಿರ್ದ ಬಳಿಕ || ನೀತಿಯಾದಪುದೆ ತನಗಿನ್ನು ನಿಮ್ಮಡಿಗೆ ಸಂ | ಪ್ರೀತಿಯೆಂತಾದಪುದದಂ ಬೆಸಸಿದೊಡೆ ಮಾಳ್ಪೆ | ನೇತಕಾತುರವೆಂದು ಕೈಮುಗಿದೊಡಾಗ ಚಿತ್ರಾಂಗದೆ ನಿರೂಪಿಸಿದಳು ॥ ೩೩ |
ಮಗನೇ ಕೇಳೆನ್ನನಂದರ್ಜುನಂ ಬಿಟ್ಟು ನಿಜ | ನಗರಿಗೈದಿದನಂದು ಮೊದಲಾಗಿ ತಾನವನ | ನಗಲ್ದ ಸಂತಾಪದಿಂ ತಪಿಸುತಿರ್ದೆಂ ಪುಣ್ಯವಶದಿಂದೆ ಬಂದನಿಂದು || ಬಗೆಯದಿರ್ದಪೆನೆಂತು ಕಾಂತನಂ ನೀನಿಂದು | ಮೊಗದೋರಿ ನಿನ್ನ ಸರ್ವಸ್ವಮಂ ತಾತನಂ | ಫ್ರಿಗೆ ಸಮರ್ಪಿಸಿದೊಡಾಂ ಮಾಡಿದ ತಪೋನಿಷ್ಠೆ ಸಫಲವಾದವುದೆಂದಳು |೩೪||
ಕಂದ ನೀನಿಂದು ನಿನ್ನ ಖಿಳ ಪ್ರಕೃತಿಗಳಂ | ತಂದೆಗೊಪ್ಪಿಸಿ ಯುಧಿಷ್ಠಿರನೃಪನ ವೈರಿಗಳ | ಮುಂದೆ ತೋರಿಸು ನಿನ್ನ ಶೌಯಮಂ ತನುಧನಪ್ರಾಣಂಗಳವರದಾಗೆ || ನಿಂದೆಗೊಳಗಾಗದಿರ್ ದುಷ್ಟ ಸಂತಾನದಂ। ತೊಂದಿಸದಿರಗತಿಯಂ ತನ್ನ ಪಾತಿವ್ರತ್ಯ। ಕೆಂದು ಸೂನುಗೆ ಬುದ್ದಿಗಲಿಸಿ ಪಾರ್ಥನ ಬರವಿಗುಬ್ಬಿದಳ್ ಚಿತ್ರಾಂಗದೆ ||೩೫||
ಜನನಿಯಂ ಮನೆಗೆ ಮನ್ನಿಸಿ ಕಳುಹಿ ಬಭ್ರುವಾ | ಹನನಾ ಸ.ಬುದ್ದಿಯಂ ನೋಡಿ ಪಿತನಂ ಕಾಣ್ಬು| ದನುಚಿತವೊ ಮೇಣುಚಿತಮಾದಪುದೊ ಪೇಳಿದರ ನಿಶ್ಚಯವನೀಗಳೆನಲು || ನಿನಗೆಣಿಕೆ ಬೇಡ ಮೊದಲರಿಯದಾದೆವು ಧರ್ಮ | ತನಯಂಗೆ ನಿಮ್ಮಯ್ಯನನುಜನಾತನ ರಕ್ಷೆ | ವಿನುತಹಯಕದನ್ನು ಕಲಿತನದೆ ಕಟ್ಟುವುದು ನೀತಿಪಥಮಲೆಂದನು | ೩೬ ||
ಇನ್ನು ಕಟ್ಟಿಸು ಗುಡಿಗಳಂ ಬೇಗ ಪಟ್ಟಣಕೆ | ನಿನ್ನ ಖಿಳ ರಾಜ್ಯಪದವಿಯನೊಪ್ಪಿ ಸಯ್ಯಂಗೆ | ಮನ್ನೆಯ ಚಾತುರಂಗದ ಸೇನೆ ನಾಗರಿಕಜನ ಮಲಂಕರಿಸಿಕೊಳಲಿ || ಕನ್ನೆಯರ್ ಲಾಜ ದಧಿ ದೂರ್ವಾಕ್ಷತೆಗಳಿಂದೆ | ಕನ್ನಡಿ ಕಳಸವಿಡಿದು ಬರಲಿ ಸಂದರ್ಶನಕೆ | ಸನ್ನುತ ಸುವಸ್ತುಗಳನೆಲ್ಲಮಂ ತೆಗೆಸು ತಡವೇಕೆಂದನಾ ಸುಬುದ್ಧಿ||೩೭||
ವರಸುಬುದ್ದಿಯ ಬುದ್ಧಿಯಂ ಕೇ ಳ್ದನಾ ಪಾರ್ಥಿI ದೊರೆದೊರೆಗಳೆಲ್ಲರಂ ಕಳುಪಿದಂ ಮನೆಗಳ್ಗೆ | ಪುರದೊಳಗೆ ಡಂಗುರಂಬೊಯ್ಸಿದಂ ಕೋಶದ ಸುವಸ್ತುಗಳನ್ನು || ತರಿಸಿದಂ ಕನಕಪೂರಿತ ಶಕಟನಿಕರಮಂ | ತರುಣಿ ಗೋಮಹಿಷಿ ಮದ ಕುಂಜರ ಕುಲಾಶ್ವಮಣಿ | ವಿರಚಿತ ರಥಂಗಳಂ ರಜತ ಕಾಂಚನ ಮಯದ ಪಲವು ಕೊಪ್ಪರಿಗೆಗಳನು ॥ ೩೮ ||
ನವ್ಯಚಿತ್ರಾಂಬರಾಭರಣಂಗಳು ವಿವಿಧ | ದಿವ್ಯರತ್ನಂಗಳಂ ಪರಿಪರಿಯ ಪರಿಮಳ | ದ್ರವ್ಯಂಗಳಂ ಕನಕ ಖಟ್ಟ ನುತಹಂಸತೂಲದ ಮೃದುಲ ತಲ್ಪಗಳನು|| ಸುವ್ಯಜನ ಚಾಮರ ಸಿತಾತಪತ್ರಂಗಳಂ | ಸವ್ಯಸಾಚಿಯ ಕಾಣಿಕೆಗೆ ತರುವುದೆಂದು ಕ | ರ್ತವ್ಯದಿಂ ಜೋಡಿಸಿದನಾ ಬಭ್ರುವಾಹನಂದಿರುಳಖಿಳ ವಸ್ತುಗಳನು||೩೯||
ಸ್ವರಗೈದುದನಿತರೊಳ್ ಚರಣಾಯುಧಂ ಜಾರೆ | ಯರ ಮನಂ ಬೆಚ್ಚಿದುದು ಮೂಡದೆಸೆ ಬೆಳತುದು ಪ | ಸರಿದುದು ತಂಗಾಳಿ ಖಗನಿಕರಮುಲಿದೆದ್ದು ವರಳಿದುವು ತಾವರೆಗಳು!| ಮೊರೆದುದಾರಡಿ ನೆರೆದುವೆ ಣೆವಕ್ಕಿ ತಾರೆಗಳ | ಪರಿದುವಿಡಿದಿರ್ದ ಕತ್ತಲೆ ತೊಲಗಿತುತ್ಸಲಂ | ಕೊರಗಿದುದು ಜನದ ಕಣ್ಣೆವೆದೆರೆದುದೊದರಿದುವು ದೇಗುಲದ ವಾದ್ಯಂಗಳು ||೪೦||
ಅರ ಳ್ವ ಶೋಣಾಂಬುಜಚ್ಛಾಯೆಗಳಡರ್ದುವೆನೆ | ಭರದಿಂದ ಕತ್ತಲೆಯ ಮೇಲೆ ಬಹ ರವಿಯ ರಥ | ತುರಗ ಖುರಪುಟದಿಂದ ಮೇಳ್ವ ಕೆಂದೂಳ್ಗಳೆನೆ ಪ್ರಾಚೀ ನಿತಂಬವತಿಗೆ || ಸರಸದಿಂ ತರ ಣಿಯೊಳ್ ನೆರೆವ ಸಮಯದೊಳಾದ | ಕರರುಹಕ್ಷತದ ಕಿಸುಬಾಸುಳ್ಗಳೆನೆ ಸವಿ | ಸ್ತರದ ಸಂಧ್ಯಾರಾಗಮೈದೆ ರಂಜಿಸುತಿರ್ದುದಂದು ಮೂಡಣದೆಸೆಯೊಳು ॥೪೧||
ಜಿತತಮಂ ಭುವನಮಧ್ಯ ಪ್ರಕಾಶಂ ವಿರಾ | ಜಿತ ವರಾಹ ಶ್ರೀಧರಂ ಪಂಚಮುಖಮೂರ್ತಿ | ನತಕಾಶ್ಯಪಂ ರಾಜತೇಜೋಹರಂ ದೂಷಣಾರಿ ಗೋಕುಲಜಾತನು || ಅತಿಕಾಂತಿ ಶೋಭಿತ ದಿಗಂಬರಂ ಕಲಿತಾಪ | ಹೃತಕುವಲಯಂ ಚಕ್ರಿಯವತಾರದಶಕದು | ನ್ನತಿಗಳಂ ತಳೆದೆಸೆವ ದಿನಪನುದಯಂಗೈದನಂದು ಪೂರ್ವಾಚಲದೊಳು | ೪೨ ||
ಒಂದು ಮಾರ್ಗದೊಳೆ ನಡೆಯದೆ ಸದಾ ದ್ವಿಜನಿಕರ | ದಂದಮಂ ಕಿಡಿಸಿ ಗುರುಬುಧ ಮಂಗಳೋನ್ನತಿಗೆ | ಕುಂದನಿತ್ತುದರಿಂದ ಸಾರಥಿ ಹೆಳವನಾದನಾತ್ಮಜಂ ಲೋಕವರಿಯೆ || ಮಂದನಾದಂ ನಿನ್ನ ಪತಿಗೆಂದು ಪ ದ್ಮಿ ನಿಯ | ಮುಂದೆ ನಗುವಸಿತೋತ್ಪ ಲಂಗಳಿನನುದಯದೊಳ್ | ಕಂದಿದುವು ಪರನಿಂದೆಗೈದರ್ಗೆ ಪರಿಭವಂ ಕಯ್ಯೊಡನೆ ತೋರದಿಹುದೆ | ೪೩ ||
ಆದಿತ್ಯನುದಯದೊಳ್ ಫಲುಗುಣನ ಸೂನು ಸಂ | ಧ್ಯಾದಿಗಳನಾಚರಿಸಿ ವಸ್ತುಗಳನೈದೆ ಸಂ | ಪಾದಿಸಿ ಕಿರೀಟಿಯಂ ಕಾಣಲನುವಾದರ್ಜುನನಿತ್ತ ಪಾಳೆಯದೊಳು ॥ ಸಾಧಿಸಿ ಸಕಲ ನಿತ್ಯಕೃತ್ಯಮಂ ಮಾಡಿ ಮಧು | ಸೂದನನ ಚರಣಮಂ ನೆನೆದು ವೃಷಕೇತು ಮೊದ | ಲಾದ ವೀರರ್ಕಳಂ ಕರೆಸಿದಂ ಹಯಮಂ ಬಿಡಿಸಿಕೊಂಬ ತವಕದಿಂದೆ||೪೪||
ಅನುಸಾಲ್ವಕನ ಸೇನೆ ಯಾದವರ ಚತುರಂಗ । ಮಿನಸುತನ ನುವಿನ ಮೋಹರಂ ಯವನಾ | ಶ್ವನ ಪಾಯದಳ ಮತುಲಹಂಸಕೇತುವಿನ ಪಡೆ ನೀಲಧ್ವಜನ ವಾಹಿನಿ | ದನುಜಾರಿ ನಂದನನ ನೇಮದಿಂ ಸಂಗ್ರಾಮ | ಕನುವಾಗಿ ಪೊರಮಟ್ಟುದಾಗ ದಾಗ ಸನ್ನಾಹದಿಂ । ಘನವಾದ ರಭಸದಿಂದರ್ಜುನಂ ಬಂದು ನಿಂದಂ ಮುಂದೆ ದೊರೆಗಳೊಡನೆ ॥೪೫||
ಆ ಸಮಯದೊಳ್ ಬಭ್ರುವಾಹನಂ ಪೊರಮಟ್ಟ | ನಾ ಸುಬುದ್ದಿ ಪ್ರಮುಖ ಮಂತ್ರಿಗಳ ಗಡಣದಿಂ । ದಾಸಕಲ ವಸ್ತು ಸಹಿತಾ ಕುದುರೆಯಂ ಕೊಂಡು ನಿಖಿಳ ಚತುರಂಗದೊಡನೆ || ಭಾಸುರದ ಕಳಸ ಕನ್ನಡಿವಿಡಿದು ನಡೆತಹ ವಿ | ಲಾಸಿನಿಯರೊಗಿ ನಿಂ ಸಂದಣಿಯ ಪುರಜನದ | ಭೂಸುರಸ್ತೋಮದಿಂ ಗುಡಿತೋರಣಾವಳಿಯ ಸಿಂಗರದ ಪದಪಿನಿಂದೆ ॥೪೬||
ಎಲ್ಲ ಕೌಂತೇಯನಿರ್ದಪನಲ್ಲಿಗಾಗಿ ನಿಂ | ದಲ್ಲಿನಿಲ್ಲದೆ ಸಂಭ್ರಮದೊಳೆ ನಡೆತಂದು ಮೈ ಭುಲ್ಲವಿಸೆ ಹರ್ಷದಿಂ ಪಾರ್ಥನಂ ಕಂಡು ನಿಜಮೌಳಿಯಂ ತೆಗೆದು ನರನ | ಮೆಲ್ಲಡಿಗನರ್ಥ್ಯ ರತ್ನಂಗಳಂ ಸುರಿದು ಕರ | ಪಲ್ಲವದ್ವಿತಯಮಂ ಮುಗಿದು ಭಯಭಕ್ತಿಯಿಂ | ಚೆಲ್ಲಿದನೊಡಲನಿಳೆಯೊಳಾ ಬಭ್ರುವಾಹನಂ ನೀಡಿ ಸಾಷ್ಟಾಂಗದಿಂದೆ ॥ ೪೭ ||
ಅರಸ ಕೇಳಾ ಬಭ್ರುವಾಹನನೊಡನೆ ಬಂದ | ಪರಿವಾರಮಾ ಪುರಜನಂಗಳಾ ಕಾಮಿನಿಯ | ರರಳ ಮಳೆ ಮುಕ್ತಾಫಲಂಗಳಂ ಸುರಿದರರ್ಜುನನ ಮಸ್ತಕದಮೇಲೆ || ವರಸುಬುದ್ಧಿ ಪ್ರಮುಖ ಮಂತ್ರಿಗಳ್ ಬಂದರೊ | ತರಿಸಿ ಕಾಣಿಕೆಗೊಂಡು ಬಳಿಕ ವಿಸ್ಮಿತನಾಗಿ | ನರನೆಲೆ ನೃಪಾಲ ನೀನಾರೆನಲ್ಕವನೆದ್ದು ಕೈಮುಗಿಯುತಿಂತೆಂದನು||೪೮||
ತಾತ ಚ ಇತ್ತೈಸು ನಿನ್ನಾ ತ್ಮಜಂ ತಾನೆನ್ನ | ಮಾತೆ ಚಿತ್ರಾಂಗದೆ ಸಲಹಿದವಳುಲೂಪಿ ಸಂ | ಪ್ರೀತಿಯಿಂದಿವರಾದರರಸಿಯರ್ ನೀನಂದು ತೀರ್ಥಯಾತ್ರೆಗೆ ಬಂದಿರೆ|| ಜಾತನಾದೆಂ ಬಭ್ರುವಾಹನಂ ತಾನೀಗ ಳೀತುರಗಮಂ ಪಿಡಿದು ಕಟ್ಟಿ ತಪ್ಪಿದೆ ಗುಣಾ | ತೀತಮಂ ಕ್ಷಮಿಸೆಂದು ಮಗುಳೆರಗಿದಂ ಪಾರ್ಥ ನಡಿಗವಂ ಭೀತಿಯಿಂದೆ | ೪೯||
ಮಗುಳೆ ಮಗುಳಡಿಗೆರಗಿ ಭಯ ಭರಿತಭಕ್ತಿಯಿಂ | ಮಿಗೆ ಬೇಡಿಕೊಳುತೆ ಕಾಲ್ಪಿಡಿದಿರ್ಪ ತನಯನಂ | ಮೊಗನೋಡಿ ಮಾತಾಡಿಸದೆ ಬೆರಗುವಡೆದಂತೆ ಕೆತ್ತುಗೊಂಡಿಹ ವಿಜಯನ ॥ ಬಗೆಯನೀಕ್ಷಿಸಿ ಹಂಸಕೇತು ನೀಲಧ್ವಜಾ | ದಿಗಳೆಲ್ಲರುಂ ಸವಿಸ್ಮಯರಾಗಿ ಚಿಂತಿಸಿ ಕ | ರಗಿ ದರತಿ ಕರುಣರಸಭಾವದಿಂದೇನೆಂಬೆನಪಕೃತದ ಸೂಚಕವನು||೫೦||
ಪ್ರದ್ಯುಮ್ಮ ಹಂಸಧ್ವಜಾದಿಗಳ್ ಬಳಿಕಿದೇ | ನುದ್ಯೋಗಮೆಲೆ ಪಾರ್ಥ ನಿನ್ನ ತನುಭವ ನೀತ | ನುದ್ಯತ್ಪರಾಕ್ರಮ ಮಹಾವೈಭವಶ್ಚಾಘ್ಯನಭಿಮಾನಿ ಮಾನ್ಯನಿಳೆಗೆ || ಖದ್ಯೋತಸನ್ನಿಭಂ ನಿನ್ನ ಹೋಲುವೆಯ ನಿರ | ವದ್ಯರೂಪಂ ಪದಾವನತನಾಗಿರ್ನಪಂ | ಹೃದ್ಯನಿವನಂ ಪರಿಗ್ರಹಿಸಿ ಮನ್ನಿಸದೇಕೆ ಸುಮ್ಮನಿರ್ದಪೆಯೆಂದರು||೫೧||
ಭೂಪ ಕೇಳಿವರಿಂತನ ಲ್ಕೆ ಬಳಿಕರ್ಜುನಂ | ಕೋಪದಿಂದವನ ನಿಟ್ಟಿಸುತೆಂದನಾಗ ತಲೆ | ಪೋಪುದಕೆ ತನ್ನ ಕಾಲ್ಪೊಣೆಯೆಂಬ ಧರೆಯ ನಾಣ್ಣುಡಿ ತಪ್ಪದಾದುದೆನಲು || ಆ ಪುತ್ರನಹ ಬಭ್ರುವಾಹನನನೊದೆದೆಲವೊ | ನೀ ಪಂದೆ ಲೋಕದೊಳ್ ತನಗೆ ಸಂಭವಿಸಿದವ | ನೀಪರಿಯೊಳಂಜುವನೆ ಮೊದಲಶ್ವಮಂ ಕಟ್ಟಿ ಮತ್ತೆ ಬಿಡುವನೆ ಕಾದದೆ | ೫೨ ||
ಚಿತ್ರಾಂಗದೆಗೆ ವೈತ್ಯನಿಂದೆ ಸಂಭವಿಸಿರ್ದ | ಪುತ್ರನಲ್ಲದೆ ತನಗೆ ಜನಿಸಿದೊಡೆ ಬಿಡುವೆಯಾ | ಕ್ಷತ್ರಿಯರ ಮತಮಂ ಸುಭದ್ರೆಗೆನ್ನಿಂ ಜನಿಸಿದಭಿಮನ್ಯು ತಾನೋರ್ವನೆ || ಶತ್ರುಗಳ ವಿಗಡಚಕ್ರವ್ಯೂಹದಲ್ಲಿಗೆ ದ | ರಿತ್ರೀಶನಂ ಮೀರಿ ನಡೆದು ಸಂಗ್ರಾಮದೊಳ್ | ಮಿತ್ರಭಟರಂ ಗೆಲಿದನಾತನಲ್ಲದಾತ್ಮಜರುಂಟೆ ತನಗೆಂದನು||೫೩||
ಜಂಬುಕಂ ಜನಿಸುವುದೆ ಸಿಂಗದುದರದೊಳಕಟ | ಹೆಂಬೇಡಿ ನೀನೆಲವೊ ಕುಲಗೇಡಿ ತನ್ನ ಬಸಿ | ರಿಂ ಬಂದವನೆ ಖಳ ಕುದುರೆಯಂ ಕಾದದೇತಕೆ ತಂದೆ ಪಂದೆ ನಿನಗೆ || ಡೊಂಬಿನ ಚತುರ್ಬಲಮಿದೇಕೆ ಭೂಪಾಲರಾ | ಡಂಬರದ ಛತ್ರಚಮರಂಗಳೇತಕೆ ಬಯಲ | ಡಂಬಕದ ಕೈದುಗಳಿವೇಕೆ ಸುಡು ಬಿಡು ಜೀವದಾಸೆಯಂ ಪೋಗೆಂದನು || ೫೪ ||
ಅಹಹ ನರ್ತಕಿಯಲಾ ಗಂಧರ್ವನಾಯಕನ | ದುಹಿತ್ಯವಲ್ಲಾ ನಿನ್ನ ಮಾತೆ ಚಿತ್ರಾಂಗದೆಯೆ /ವಿಹಿತಮಲ್ಲಿದು ನಿನಗೆ ಭೂಮಿಪರ ವೇಷಮಂ ತಳೆದ ನಾಟಕದ ರಚನೆ | |ಬಹಳ ಪೌರುಷಮಾದುದಿಂದು ಹಯಮಂ ತಡೆದ | ರಹಣಿ ರಾಯರಮುಂದೆ ಹೋಗೆಂದು ದುಷ್ಕೃತಿಯ | ಕುಹಕದಿಂ ಬೈದು ಭಂಗಿಸಿ ಜರೆದನಾತ್ಮ ಜನನರ್ಜುನಂ ಕೋಪದಿಂದೆ ೫೫||
ಬಿರುನುಡಿಗಳಿಂ ತನ್ನ ಮೊಗನೋಡದರ್ಜುನಂ | ಜರೆದೊಡಾತನ ಬಗೆಯನಾ ಸುಬುದ್ದಿಗೆ ತೋರು ! ತುರೆ ಕನ ಲ್ದಿರದೆದ್ದು ಪಳಿದೆಲಾ ಮಾತೆಯಂ ನನಗೆ ಸೀವರಿಸಿದೆಯಲಾ || ಅರಿಯಬಹುದಿನ್ನು ಕೇಳ್ ನಿನ್ನ ತಲೆಗೆಡಹದೊಡೆ। ಕುರುಹಿಟ್ಟು ನೀನಾಡಿದಿನಿತೆಲ್ಲಮುಂ ದಿಟಂ | ಮರೆಯದಿರ್ ಸಾಕೆಂದು ತಿರುಗಿದಂ ಬಭ್ರುವಾಹನನಂದು ಕುದುರೆಸಹಿತ ॥೫೬||
ತೆಗೆಸಿದಂ ತಂದಖಳವ ಸ್ತುವಂ ಕುದುರೆಯಂ | ಬಿಗಿಸಿದಂ ಲಾಯದೊಳ್ ಪುರಜನಸ್ತ್ರಿಯರಂ । ಪುಗಿಸಿದಂ ಪಟ್ಟಣಕೆ ಕರೆಸಿದಂ ಸಚಿವರಂ ಸೇನಾಧಿನಾಯಕರನು || ಜಗಿಸಿದಂ ಚತುರಂಗಮಂ ನೆರಸಿ ಧಾತ್ರಿಯಂ | ಮಿಗಿಸಿದಂ ವಾದ್ಯರವದಿಂದ ಘೋಷಮಂ | ಮುಗಿಸಿದಂ ತಾವರೆಯನಾ ಬಭ್ರುವಾಹನಂ ಧೂಳಿನನಂ ಮುಸುಕಲು ||೫೭||
ಕೇಳೆಲೆ ನೃಪಾಲಕುಲತಿಲಕ ಮುಂದದ್ಭುತ ಕ| ಥಾಳಾಪಮಂ ಬಳಿಕ ಪೂಡಿದುದು ಕರ್ಕ ಶದ | ಕಾಳಗಂ ಸವ್ಯಸಾಚಿಗೆ ಬಭ್ರುವಾಹನನ ಕೂಡೆ ಮಹದಾಹವದೊಳು || ಹೇಳಲೇನಂದು ಸುರಪಂಗೆ ಪಾರ್ಥನೊಳಾದ | ಕೋಳಾಹಳದ ಕದನದಂತೆ ಮುನ್ನಧ್ವರದ | ಬೇಳಂಬದಿಂದೆ ರಾಮಂಗೆ ಕುಶಲವರೊಡನೆ ಬಂದ ಸಂಗ್ರಾಮದಂತೆ | ೫೮ ||
ಆಲಿಸಿದನೆಲ್ಲ ಪರಿಯಂತ ಜನಮೇಜಯಂ। ಮೇಲಣ ಕಥೆಯನೊಲ್ದು ಬೆಸಗೊಂಡನೆಲೆ ಮುನಿಪ | ಹೋಲಿಸಿ ನುಡಿದೆ ಸುರಪಫಲುಗುಣರ ಸಮರಮಂ ಕೇಳ್ದೆದನಾಂ ನಿನ್ನೊಳು | ಹೇಳಬೇಹುದು ರಾಘವಂಗೆ ಸುತನೊಡನಾದ | ಕಾಳಗದ ಸಂಗತಿಯನೆನಗೆಂದೆನೆ ಭೂ ! ಪಾಲಂಗೆ ವಿರಚಿಸಿದನೀ ತೆರದೊಳಾ ತಪೋನಿಧಿ ಬಳಿಕ ಸಂತಸದೊಳು ॥೫೯||
ಪ್ರೇಮದಿಂದೈದೆ ವಿಸ್ತರಿಸಿದಂ ನೃಪಕು ಲೋ |
ದ್ದಾಮ ಜನಮೇಜಯಂ ಬೆಸಗೊಳಲ್ ಜೈಮಿನಿ ಮ ।ಹಾಮುನೀಂದ್ರಂ ಕೂರ್ತು ಕೇಳ್ವರ್ಗೆ ರೋಮಾಂಚನಂ ಪೊಣ್ಮೆ ಹರುಷಮು ॥ರಾಮಾವತಾರದೊಳ್ ದೇವಪುರನಿಲಯ ಲಕ್ಷ್ಮೀ ಮನೋವಲ್ಲಭಂ ತನ್ನ ಸುತರೊಡನೆ ಸಂಗ್ರಾಮದೊಳ್ ಕಾದಿದ ಕಥಾಮೃತವನದರ ಕಾರಣಸಹಿತ ತುದಿಮೊದಲ್ಗೆ |೬೦||
ಜೈಮಿನಿ ಭಾರತ 35
ಹದಿನೆಂಟನೆಯ ಸಂಧಿ ಮೊದಲಭಾಗ
ಪದ್ಯ 1 ರಿಂದ 32
ರಾಮನ ಕಥಾನಕ
ನಿರೂಪಣೆ: ಸುಬ್ಬುಲಕ್ಷ್ಮಿ
ಸಂಕ್ಷಿಪ್ತ ರೂಪ
ರಾಮಾಯಣದ ಕಥೆಯನ್ನು ಸಂಕ್ಷಿಪ್ತವಾಗಿ ಹೇಳತೊಡಗಿದ್ದಾರೆ. ದಶರಥನ ಮಗ ರಾಮ ವಿಶ್ವಾಮಿತ್ರರಲ್ಲಿ ಹೋಗಿದ್ದು, ತಾಟಕಿ ಮುಂತಾದವರ ಮರಣ, ಅಹಲ್ಯೆಯ ಶಾಪವಿಮೋಚನೆ, ಶಿವಧನುಸ್ಸು ಭೇಧಿಸಿ ಸೀತೆಯೊಂದಿಗೆ ಮದುವೆ, ಪಟ್ಟಾಭಿಷೇಕದ ಸಮಯದಲ್ಲಿ ಕೈಕೆಯ ಕೋಪ, ಸೀತಾಲಕ್ಷ್ಮಣರೊಡನೆ ವನವಾಸ, ಶೂರ್ಪಣಕೆಯ ಪ್ರಕರಣ, ಕನಕಮೃಗದ ವಿಷಯ, ಸೀತಾಪಹರಣ, ಜಟಾಯುಮರಣ...ಇಷ್ಟೂ ನಾಲ್ಕು ಪದ್ಯಗಳಲ್ಲಿ ಅಡಕವಾಗಿವೆ.
ಮುಂದಿನ ಐದು ಪದ್ಯಗಳಲ್ಲಿ ಶಬರಿ, ಸುಗ್ರೀವನ ಸಖ್ಯ, ವಾಲಿಯ ವಧೆ, ಹನುಮಂತನ ಸ್ವಾಮಿಭಕ್ತಿ, ಸೀತಾನ್ವೇಷಣೆ, ಸಾಗರೋಲ್ಲಂಘನ, ಸೀತೆಯ ದರ್ಶನ, ಲಂಕಾದಹನ ಮತ್ತೆ ರಾಮನ ಭೇಟಿ. ನಂತರ ಸೈನ್ಯ ಒಟ್ಟುಗೂಡಿಸಿ ನಡೆದು ಸಮುದ್ರಕ್ಕೆ ಸೇತುವೆ ಕಟ್ಟಿ ರಾವಣನೊಂದಿಗೆ ಯುದ್ಧ, ರಾವಣನ ಮರಣ, ವಿಭೀಷಣನಿಗೆ ಪಟ್ಟ ಕಟ್ಟಿ ಅಗ್ನಿಮುಖದಿಂದ ಸೀತೆಯನ್ನು ಪಡೆದು ಪುಷ್ಪಕವಿಮಾನದ ಮೂಲಕ ಭರತನಲ್ಲಿಗೆ ಆಗಮನ.ಅರಮನೆಗೆ ಬಂದು ಸೋದರರು, ಮಾತೆಯರು, ಪ್ರಜೆಗಳು ಎಲ್ಲರಿಗೂ ಕಾಣಿಸಿಕೊಂಡು ಸಂತೈಸಿದ ಪ್ರಸಂಗ. ಇಷ್ಟೂ ಸರಳವಾಗಿ ಬಂದಿವೆ.
ನಂತರ ಶುಭಮುಹೂರ್ತದಲ್ಲಿ ಪಟ್ಟಾಭಿಷೇಕ ನಡೆದು ರಾಮರಾಜ್ಯದ ಆಡಳಿತದ ವಿವರಣೆ. ಎಲ್ಲೆಲ್ಲೂ ಸಮೃದ್ಧಿ. ಯಾವುದಕ್ಕೂ ಕೊರತೆಯಿರಲಿಲ್ಲ. ಗೋವುಗಳು ಹೇರಳವಾಗಿದ್ದವು. ಮೂರೂ ಲೋಕಗಳಲ್ಲಿ ರಾಮನ ಕೀರ್ತಿ ಹರಡಿತು. ಹೂ ಹಣ್ಣುಗಳಿಲ್ಲದ ಮರಗಳಿರಲಿಲ್ಲ. ಹಾಲುಕೊಡದ ಹಸುಗಳಿರಲಿಲ್ಲ. ಜಗಳಗಳಿಲ್ಲ ಹೀಗೆ ಎಲ್ಲವೂ ಸುಭಿಕ್ಷವಾಗಿತ್ತು. ನದಿಗಳೂ ತುಂಬಿ ಹರಿಯುತ್ತಿದ್ದವು. ಅಕಾಲ ಮರಣ ಎಂಬುದು ಇರಲಿಲ್ಲ. ರಾಮನು ಹಲವಾರು ವರ್ಷಗಳ ಕಾಲ ರಾಜ್ಯಭಾರ ಮಾಡಿದನು ಸಂತಾನವಿಲ್ಲ ಎಂಬ ಕೊರಗು ಕಾಡತೊಡಗಿತು. ಏನಿದ್ದರೇನು? ವಂಶ ಬೆಳೆಯಲು ಮಕ್ಕಳು ಬೇಕು ಎಂದು ಸೀತೆಯೊಂದಿಗೆ ಕೊರಗಿದ. ನೀರು ತುಂಬಿದ್ದ ಸರೋವರದಲ್ಲಿ ಕಮಲಗಳಿಲ್ಲದಂತೆ, ತಾರೆಗಳಿದ್ದ ಗಗನಕ್ಕೆ ಚಂದ್ರಮನಿಲ್ಲವಂತೆ, ಯೌವನವಿದ್ದ ಹೆಣ್ಣಿಗೆ ಇನಿಯನಿಲ್ಲದಿದ್ದಂತೆ ವಂಶಕ್ಕೆ ಮಕ್ಕಳಿಲ್ಲದಿದ್ದರೆ ಏನು ಸುಖ? ಎಂದು ಬಹುವಾಗಿ ನೊಂದನು. ನಾವು ಪಡೆಯುವ ಪುಣ್ಯವಿದ್ದರೆ ಆಗುತ್ತದೆ ಎಂದು ಸೀತೆ ಸಮಾಧಾನ ಹೇಳಿದಳು. ಕಂದನ ಬಾಲಲೀಲೆಗಳನ್ನು ನೋಡುವ, ಬಾಲಭಾಷೆ ಕೇಳುವ, ಮೃದುವಾದ ಅಂಗಗಳನ್ನು ಮುಟ್ಟುವ, ತಲೆಯನ್ನು ಆಘ್ರಾಣಿಸುವ, ಚುಂಬಿಸುವ ಆಸೆ ಯಾರಿಗೆ ಇರುವುದಿಲ್ಲ? ಇಲ್ಲಿ ಪಂಚೇಂದ್ರಿಯಗಳನ್ನು ಅಳವಡಿಸಿಕೊಂಡಿದ್ದಾನೆ. ( ಪದ್ಯ 20 )
ಆಗ ವಸಿಷ್ಠ ಮುನಿ ಬಂದು ಸಂತಾನಯೋಗವಿದೆ ಚಿಂತಿಸಬೇಡ ಎಂದು ಸಮಾಧಾನ ಹೇಳುವರು. ವಸಂತಋತು ಬಂದಿತು. ವನಗಳು ಶೋಭಿಸಿದವು. ನೆರಳನ್ಬು ಹುಡುಕಿಕೊಂಡು ವಿರಹಿಗಳು ಅಲೆದರು ಸೀತೆಗೆ ಋತುಕಾಲ ಬಂದಿತು. ವಸಂತಲಕ್ಷ್ಮಿಯ ರೀತಿ ಶೋಭಿಸುತ್ತಿದ್ದಳು.
ನಾಲ್ಕನೆಯ ದಿನ ಅವಳು ಅತ್ಯಂತ ಸುಂದರವಾಗಿ ಅಲಂಕರಿಸಿಕೊಂಡು ಲಜ್ಜೆಯಿಂದ ಪ್ರೀತಿಯಿಂದ ಸಿಂಗರಿಸಿದ ಮಣಿಮಯ ಹಂಸತೂಲಿಕ ತಲ್ಪದಲ್ಲಿ ರಾಮನೊಂದಿಗೆ ಸಂಗಮಿಸಿ ಶೋಭಿಸಿದಳು ಇಬ್ಬರೂ ಏಕಭಾವದಿಂದ ಸುಖಿಸಿ ಮೈಮರೆತರು. ಸಮರತಿಯಲ್ಲಿ ಕ್ರೀಡಿಸಿದರು.
ಹದಿನೆಂಟನೆಯ ಸಂಧಿ ಮೊದಲ ಭಾಗ
ಪದ್ಯ 1 ರಿಂದ 32
ಸೂಚನೆ ! ಸಾಮ್ರಾಜ್ಯಮಂ ತಾಳ್ಮೆ ಸವ ರಾಘವೇಂದ್ರನಿಂ | ದಾಮ್ರಪ್ರವಾಳದಂತಿರೆ ವಿರಾಜಿಸುತಿರ್ಪ | ತಾಮ್ರಾಧರೆಯರ ಸೀಮಂತಮಣಿ ಸೀತಾರಮಣಿ ಗರ್ಭಮಂ ತಾಳ್ದಳು |
ಭೂಪಾಲ ಕೇಳಾದೊಡಿನ್ನು ಪೂರ್ವದೊಳವನಿ | ಜಾಪತಿಯ ಕುಶಲವರ ಸಂಗರದ ಕೌತುಕವ | ನಾಪನಿತನೊರೆವೆನಿಕ್ಷ್ವಾಕು ಮೊದಲಾದ ರವಿಕುಲದ ನೃಪರೇಳ್ಗೆಗಳನು || ವ್ಯಾಪಿಸಿದ ಸಂಪದಕೆ ನೆಲೆವನೆಯೆನಿಪ್ಪ ಯೋ! ಧ್ಯಾಪುರದೊಳವತರಿಸಿದಂ ಮಹಾವಿಷ್ಣು ಸುತ | ರೂಪದಿಂ ರಾಮಾಭಿಧಾನದೊಳ್ ಪುತ್ರಕಾಮೇಷ್ಠಿಯಿಂ ದಶರಥಂಗೆ||೧||
ತೊಳೆದು ಜನನಿಯ ಜಠರಮಂ ಜನಿಸಿ ಭವನದೊಳ್ | ಬಳೆದು ಲಕ್ಷ್ಮಣ ಭರತ ಶತ್ರುಘ್ನು ರೊಡಗೂಡಿ | ತಳೆದು ಕೌಶಿಕನ ಮಖಮಂ ಕಾದು ತಾಟಕಿಯನೊರಸಿ ಮುನಿಸತಿಯಘವನು || ಕಳೆದು ಮಿಥಿಲೆಗೆ ಪೋಗಿ ಭಾರ್ಗವನ ಗರ್ವಮಂ | ಸೆಳೆದು ಹರಚಾಪಮಂ ಮುರಿದೊಲಿಸಿ ಸೀತೆಯಂ | ತಳೆದುತ್ಸವದೊಳಯೋಧ್ಯಾಪುರಿಗೆ ದಶರಥನೊಡನೆ ರಾಘವಂ ಬಂದನು ||೨||
ವರ್ಧಿಪ ಕುಮಾರಂಗೆ ಭೂಮೀಶ್ವರಂ ಬಳಿಕ | ಮೂರ್ಧಾಭಿಷೇಚನಂ ಮಾಡಲನುಗೈಯೆ ನೃಪ | ನರ್ಧಾಂಗಿ ತಡೆಯೆ ಪೊರಮಟ್ಟು ಬನಕೈದೆ ನರಪತಿ ಪುತ್ರಶೋಕದಿಂದ || ಸ್ಪರ್ಧಾಮಕಡರೆ ಕೇಳುತೆ ಭರತನಂ ಕಳುಹಿ | ದುರ್ಧರದರಣ್ಯ ಪ್ರವೇಶಮಂ ಮಾಡಿದಂ | ಸ್ಪರ್ಧಿಸುವ ದನುಜರಂ ಮುರಿದು ಮುನಿಗಳನೋವಿ ಸತಿಸಹಿತ ಕಾಕುತ್ಸ್ಥನು॥೩॥
ದಂಡಕಾರಣ್ಯದೊಳಿರಲ್ಕೆ ಶೂರ್ಪಣಖೆ ಬಂ | ದಂಡಲೆಯಲಾಕೆಯಂ ಭಂಗಿಸಿ ಖರಾದ್ಯರಂ | ಖಂಡಿಸಿ ಕನಕಮ್ಮಗ ವ್ಯಾಜ್ಯದಿಂದೈದೆ ಲಕ್ಷ್ಮಣನಗಲೆ ಕಪಟದಿಂದೆ| ಕೊಂಡೊಯ್ಯೆ ರಾವಣಂ ಸೀತೆಯಂ ಕಾಣದುರೆ | ಬೆಂಡಾಗಿ ವಿರಹದಿಂ ಬಿದ್ದಿಹ ಜಟಾಯುವಂ । ಕಂಡು ಪೊಲಬಂ ಕೇಳ್ದು ಸೌಮಿತ್ರಿಸಹಿತ ನಡೆದಂ ಮುಂದೆ ರಘುನಾಥನು || ೪ ||
ಪಥದೊಳ್ ಕಬಂಧನಂ ಕೊಂದು ಶಬರಿಯ ಮನೋ | ರಥಮಂ ಸಲ್ಲಿಸಿ ಕರುಣದಿಂದಾಂಜನೇಯನಂ | ಪ್ರಥಮದೊಳ್ ಕಂಡು ಸುಗ್ರೀವಂಗೆ ಕೈಗೊಟ್ಟು ವಾಲಿಯಂ ಬಾಣದಿಂದೆ || ಮಥಿಸಿ ರಾವಣನ ಮೇಲಣ ರಾಜಕಾರಿಯದ | ಕಥನಕಾಳೋಚಿಸಿ ಕರಡಿಕಪಿಗಳಂ ನರಪಿ | ಪೃಥಿವಿಜೆಯನ ಲ್ಕೆ ವೀರಹನುಮಂತನಂ ಕಳುಹಿದಂ ಕಾಕುತ್ಸ್ಥನು||೫||
ಧೀಂಕಿಟ್ಟು ಶರಧಿಯಂ ದಾಂಟಿ ಮೇದಿನಿಯ ಸುತೆ | ಗಂಕಿತದ ಮುದ್ರಿಕೆಯನಿತ್ತು ಬೀಳ್ಕೊಂಡು ನಿ । ಶ್ಯಂಕೆಯೊಳಶೋಕವನಮಂ ಕಿತ್ತು ದನುಜರಂ ಸದೆದಕ್ಷನಂ ಮರ್ದಿಸಿ || ಅಂಕದೊಳ್ ಬಳಿಕಿಂದ್ರಜಿತುವಿನ ಬ್ರಹ್ಮಾಸ್ತ್ರ | ದಂಕೆಯೊಳ್ ನಿಂದು ವಾಲಧಿಗಿಕ್ಕಿದುರಿಯಿಂದೆ | ಲಂಕೆಯಂ ಸುಟ್ಟು ಬಂದೊಸಗೆವೇ ಳ್ದ ನಿಲಜನನಸುರಾರಿ ಮನ್ನಿಸಿದನು | ೬ ||
ಗಣನೆಯಿಲ್ಲದ ಕಪಿಗಳಂ ಕೂಡಿಕೊಂಡು ತೆಂ | ಕಣಕಡಲ ತೀರದೊಳ್ ಬಿಟ್ಟು ಬಂದೊಡೆ ವಿಭೀ | ಷಣನಂ ಪರಿಗ್ರಹಿಸಿ ಲಂಕಾಧಿಪತ್ಯಮಂ ಕೊಟ್ಟು ಜಲಧಿಯನೆ ಕಟ್ಟಿ || ರಣದೊಳಸುರರ ಕುಲದ ಹೆಸರುಳಿಯ ದಂತೆ ರಾ | ವಣ ಕುಂಭಕರ್ಣ ಮೊದಲಾದ ರಕ್ಕಸರನುರೆ | ಹಣಿದವಾಡಿದನುರವಣಿಸಿ ಧೂಳಿಗೋಟೆಯಂ ಕೊಂಡನಾ ರಘುವೀರನು || ೭ ||
ರಾವಣನ ಪದಮಂ ವಿಭೀಷಣಂಗೊಲಿದಿತ್ತು | ದೇವರ್ಕಳಂ ಪೊರೆದು ಸೆರೆಯಿರ್ದ ಸೀತೆಯಂ | ಪಾವಕನ ಮುಖದಿಂ ಪರಿಗ್ರಹಿಸಿ ಮೂಜಗಂ ಮೆಚ್ಚೆ ವಿಜಯೋತ್ಸವದೊಳು || ಭೂವರಂ ಸೌಮಿತ್ರಿ ದಶಮುಖಾವರಜ ಸು | ಗ್ರೀವಾದಿಗಳ ಗಡಣದಿಂದಯೋಧ್ಯಾಪುರಿಗೆ | ದೂವಾಳಿಸಿದನಮಲ ಮಣಿಪುಷ್ಪಕದ ಮೇಲೆ ಭರತನಂ ಪಾಲಿಸ ಲ್ಕೆ||೮||
ವರಪುಷ್ಪಕವನಿಳಿದು ಭರತಶತ್ರುಘ್ನ ರಂ| ಕರುಣದಿಂ ತೆಗೆದಪ್ಪಿ ಕೌಶಿಕವಸಿಷ್ಠಾದಿ | ಗುರುಗಳಂ ಸತ್ಕರಿಸಿ ಕೈಕೆಮೊದಲಾಗಿರ್ದ ಮಾತೃಜನಕೈದೆ ನಮಿಸಿ || ಅರಮನೆಯ ಸತಿಯರಂ ಸಚಿವರಂ ಪ್ರಜೆಗಳಂ | ಪರಿಜನಪ್ರಕೃತಿಗಳನಿರದೆ ಕಾಣಿಸಿಕೊಂಡು | ಬರವನೇ ಹಾರೈಸಿ ಕೃ ಷೆಯಾದ ಕೌಸಲೆಗೆ ರಾಮನಭಿವಂದಿಸಿದನು||೯||{
ಕಯ್ದಳದೊಳೊಯ್ಯನೊಯ್ಯನೆ ಘನಸ್ನೇಹದಿಂ | ಮೆಯ್ದಡವಿ ತನಯನಂ ತಕೈಸಿ ಮುಂಡಾಡಿ | ಕಯ್ದುಗಳ ಗಾಯಮಂ ಕಂಡು ಕರಗುತೆ ಮಗನೆ ನಿನ್ನ ಕೋಮಲತನುವನು || ಪೊಯ್ದವರದಾರಕಟ ಬೆಂದುದೆನ್ನೊಡಲೆಂದು | ಸುಯ್ದು ಮುಗ್ಧಾಭಾವದಿಂ ತನ್ನ ಸವತಿಯಂ | ಬಯ್ದು ಮರುಗುವ ಮಾತೆಯಂ ನೋಡಿ ನಗುತೆ ಸಂತೈಸಿದಂ ರಾವಣಾರಿ||೧೦||
ಮೇಲೆ ತಾಳ್ದಂ ಶುಭಮುಹೂರ್ತದೊಳ್ ವಾರಿನಿಧಿ | ವೇಲೆಯಾದವನಿಯಂ ಪಟ್ಟಾಭಿಷೇಚನದ | ಕಾಲದೊಳ್ ಕಂಡರು ಸಮಸ್ತಮುನಿ ಗೀರ್ವಾಣ ವಾನರ ದನುಜ ಮನುಜರು || ಮೂಲೋಕಮ್ಮೆದೆ ಕೊಂಡಾಡೆ ಬಳಿಕುರ್ಪಿಯಂ| ಪಾಲಿಸುತಿರ್ದನೊಂಬತ್ತು ಸಾಸಿರವರ್ಷ | ಮೋಲೈಸಿದುದು ರಾಘವೇಂದ್ರನಂ ನಿಖಿಳ ಭೂಪತಿಚಯಂ ಪ್ರಿತಿಯಿಂದ || ೧೧ ||
ಯೂಪಮಯವಾಯ್ತು ಧರೆಯೆಲ್ಲಮುಂ ವರಜಾತ | ರೂಪಮಯವಾಯ್ತು ಮನೆಯೆಲ್ಲಮುಂ ಶುಕಪಿಕಾ | ಲಾಪಮಯವಾಯ್ತು ವನಮೆಲ್ಲಮುಂ ವರ್ಧಿಪ ಪ್ರಜೆಗಳಿಂ ಸಂಚರಿಸುವ || ಗೋಪ ಮಯವಾಯ್ತು ಗಿರಿಯೆಲ್ಲಮುಂ ರತ್ನ ಪ್ರ | ದೀಪಮಯವಾಯ್ತು, ತಮಮೆಲ್ಲಮುಂ ರಘುಜಪ್ರ | ತಾಪಮಯವಾಯ್ತು ಮೂಜಗಮೆಲ್ಲಮಂ ದಾಶರಥಿ ರಾಜ್ಯಮಂ ಪಾಲಿಸೆ | ೧೨ ||
ಪಣ್ಗಾಯಿ ಪೂ ತಳಿರ್ ಬೀತ ತರುಲತೆಯಿಲ್ಲ | ತಣ್ಗೊಳಂ ಕರೆಕಾಲ್ಬೆಳೆಗಳೀ ದಿಳೆಯಿಲ್ಲ | ಹೆಣ್ಗಂಡುಗಳೊಳೊರ್ವರುಂ ನಿಜಾಚಾರ ವಿರಹಿತರಾಗಿ ನಡೆವರಿಲ್ಲ | ಬಿಣ್ಗೆಚ್ಚಲಿಕ್ಕಿ ಕೊಡವಾಲ್ಕರೆಯದಾವಿಲ್ಲ | ನುಣ್ಗಾಡಿವೆತ್ತಿರದ ಪಶುಪಕ್ಷಿ ಮೃಗವಿಲ್ಲ | ಕಣ್ಗೊಳಿಪ ರಾಮರಾಜ್ಯದೊಳಕಾಲ ಮರಣಮಿಲ್ಲಖಿಳಜೀವಿಗಳ್ಗೆ ॥೧೩||
ಕಾಳಿಂದಿ ಸುರನದಿಗೆ ಕೃಷ್ಣನಮೃತಾಬ್ಬಿಗಳ | ಕಾಳಿ ವಾಣಿಗೆ ಕಳಂಕಿಂದುಮಂಡಲಕೆ ವರ | ಕಾಳಿ ಕಾಪಾಲಿಗೆ ಮದಂ ದೇವಗಜಕೆ ನಂಜಹಿಪತಿಗೆ ತೊಡವಾಗಿರೆ || ಕಾಳಿಮದ ಕೂಟಮೆನಗಿಲ್ಲೆಂಬ ಮುಳಿಸತಿವಿ | ಕಾಳಿಸಲಮಳಕೀರ್ತಿಕಾಂತೆ ಪೊರಮಟ್ಟ) ಲೋ |ಕಾಳಿಯಂ ತಿರುಗುವಳೆನಲ್ಕೆ ರಾಮನ ಯಶೋವಿಸ್ತರವನೇ ವೊಗಳ್ವೆನು | ೧೪ ||
ಕನ್ನಡ ಜೈಮಿನಿ ಭಾರತ
ಸರ್ವಸಂಪತ್ಸಮೃದ್ಧಿ ಗಳಿಂ ಸ್ವಧರ್ಮದಿಂ | ನಿರ್ವಿಘ್ನ ಮಾಗಿ ಸಕಲಪ್ರಕೃತಿ ಜಾತಿ ಚಾ | ತುರ್ವಣ್ಯ್ರಮಂ ಬಿಡದೆ ಪೊರೆವಲ್ಲ ನೀತಿಶಾಸ್ತ್ರಂಗಳೆ ಪಳಿವೊರಿಸದೆ || ಉರ್ವಿಯಂ ನವಸಹಸ್ರಾಬ್ದ ಮುರೆ ಪಾಲಿಸಿದ ನುರ್ವಸಂತಾನಮಂ ಕಾಣದಿಕ್ಷಾಕುಕುಲ | ನಿರ್ವಾಹಮಂ ನೆನೆದು ರಘುವರಂ ನುಡಿದನೇಕಾಂತದಿಂ ಜಾನಕಿಯೊಳು || ೧೫॥
ಕಾಂತೆ ಕೇಳಿಕ್ಷಾಕುವಂಶವೆನ್ನಲ್ಲಿ ಬಂ | ದಾಂತುದಿಲ್ಲಂದೆ ಸಂತತಿ ನಡೆಯದಿರ್ದೊಡೆ ಕು | ಲಾಂತಕಂ ತಾನಾದಪೆಂ ಸಾಕದಂತಿರಲಿ ಮನುಜರ್ಗೆ ಸಂಸಾರದ ಭ್ರಾಂತಿಯಂ ಬಿಡಿಸುವೊಡಪತ್ಯ ದೇಳೆ ಗಳೆ ವಿ | ಶ್ರಾಂತಿಯಲ್ಲದೆ ಪೆರತದೇನುಂಟು ಮುಂದೆ ಪು | ತ್ರಾಂತರವನೆದದಿರ್ದಪೆನೆಂತೊ ಪೇಳೆಂದು ದಾಶರಥಿ ಬಿಸುಸುಯ್ದನು | ೧೬ |
ಸಂತಾನಮಂದಾರದೊಳ್ ಪಡೆದತುಳವಿಭವ | ಮಂ ತಳೆದು ನಂದನೋತ್ಸವದಮೃತಪಾನದ | ತ್ಯಂತಸೌಖ್ಯವನೈದಿ ದೇವೇಂದ್ರನಂತೆ ಸುಮ್ಮಾನಮಾಗಿರದೆ ಬರಿದೆ ! ಸಂತತಂ ಜಾತರೂಪವನೆ ಕಾಣದೆ ತಾಪ | ದಿಂ ತೊಳಲಿ ಬಳಲುವ ದರಿದ್ರನಂದದೊಳ್ಳೆದೆ | ಚಿಂತಿಸುವ ಸಂಸಾರಮೇಕೆ ಮಾನವಜನ್ಮ ಕೆಂದು ರಘುಪತಿ ನುಡಿದನು ॥ ೧೭ |
ನೀರಿರ್ದ ಕಾಸಾರಕರವಿಂದಮಿಲ್ಲದೊಡೆ | ತಾರಕೆಗಳಿರ್ದ ಗಗನಕೆ ಚಂದ್ರನಿಲ್ಲದೊಡೆ | ಚಾರುಯೌವನಮಿರ್ದ ಹೆಣ್ಣಿ ನಿಯನಿಲ್ಲದೊಡೆ ನನ್ನು ತಪ್ರಜೆಗಳಿರ್ದ | ಧಾರಿಣಿಗೆ ಧರ್ಮದರಸಿಲ್ಲದೊಡೆ ಸಿರಿಯಿರ್ದು ! ದಾರವಂಶಕೆ ಕುವರನಿಲ್ಲದೊಡೆ ಮೆರೆದಪುದೆ | ನಾರಿ ಪೇಳೆನೆ ಲಜ್ಜೆಯಿಂದೆ ತಲೆವಾಗಿ ನಿಜಪತಿಗೆ ಜಾನಕಿ ನುಡಿದಳು | ೧೮ |
ಕಾಂತ ನೀಂ ಪೇಳ್ಕೊಡೇಂ ಪುತ್ರವತಿಯಹುದು ಜ | ನ್ಮಾಂತರದ ಪುಣ್ಯಮೈಸಲೆ ಪೆಣ್ಣೆ ಮುನ್ನ ತಾಂ | ನೋಂತುದಲ್ಲದೆ ಬಂದವುದೆ ಬರಿದೆ ಬಯಸಿದೊಡೆ ಸುಕುಮಾರನಂ ಪೊಡೆಯೊಳು ಆಂತೊಳಗೆ ಪುದಗಿರ್ದ ಪರಿಮಳದೊಳೊಪ್ಪುವ ಲ | ತಾಂತಕುಟ್ಟಲದಂತೆ ವರ ಗರ್ಭಲಾಂಛನದ | ಕಾಂತಿಯಂ ತಳೆವುದಂಗನೆಯರೆಲ್ಲರ್ಗೆ ದೊರವುದೆ ಮೇದಿನಿಯೊಳೆಂದಳು | ೧೯ |
ಹದಿನೆಂಟನೆಯ ಸಂಧಿ
QUE
ಕಂದನಾಡುವ ಬಾಲಲೀಲೆಯಂ ನೋಡಿ ತೊದ | ಲೊಂದಿದಿನವಾತನರೆ ಕೇಳು ಮುದ್ದಿನ ಮುದ್ದೆ | ಯಂದದಂಗವನೆತ್ತಿಕೊಂಡು ನಳಿತೋಳಳಿಂದಪ್ಪಿ ಕೆಂಗುರುಳ್ಳ ಳೊಲೆವ ॥ ಮುಂದಲೆಯ ಕಂಪನಾಮ್ರಾಟಿಸಿ ತೊರೆದ ಜೊಲ್ಲ | ಚೆಂದುಟಿಯ ಬಾಯ್ದೆರೆಯನೈದೆ ಚುಂಬಿಸಿ ಸೊಗಸು | ಗುಂದದಾಯಿಂದು ಪಂಚೇಂದ್ರಿಯಪ್ರೀತಿಯಂ ಪಡೆವರಿನ್ನಾವ ಕೃತರೆ ॥೨೦॥
ತೇಲ್ಲೋಸರಿಸಿ ಮೇಲುದಂ ಸೆಳೆವ ಕಮಲಮಂ | ಪೋಲ್ಡ ಕಣ್ಮನೆಯಿಂದೆ ತಾಯ ಮೊಗಮಂ ನೋಳ್ | ಕಾಲ್ಲು ದಿಗಳಂ ಬಿದಿರಿ ತಡವರಿಸಿ ಕೈಯ್ಯಡುವ ಬಾಲಂಗೆ ಮೋಹದಿಂದ | ದೋಲೊಲೆನ ಹಾರಮಂ ತೆಗೆದು ಮುಯ್ಲಿಗೆ ಸಾರ್ಚಿ ಪಾಲ್ಗೊರೆವ ಮೊಲೆಯೂಡಿ ಕೂಡೆ ತೊಟ್ಟಿಲೊಳಿಟ್ಟು | ಸಾಲ್ದ ಸೈವಿಂದೆ ಜೋಗುಳವಾಡಿ ತೂಗುವಳದೇಂ ಸುಕೃತಿಯೇ ಧರೆಯೊಳು
ಇಂತು ಸುತರಿಲ್ಲದಾಸರೊಳವರ್ಗಳಿರ್ವರುಂ | ಚಿಂತಿಸುವ ಸಮಯಕೆ ವಸಿಷ್ಠ ಮುನಿಪತಿ ಬಂದು | ಸಂತಾನದಭ್ಯುದಯವಾದವುದು ಮುಂದೆ ನಿಮಗೆಂದು ಸಂಪ್ರೀತಿಯಿಂದ | ಸಂತೈಸೆ ಬಳಿಕ ರಘುಕುಲ ಸಾರ್ವಭೌಮನ | ತ್ಯಂತ ಹರ್ಷಿತನಾಗಿರಿ ತಲೆದೋರಿತು ವ | ಸಂತಕಾಲಂ ವಿರಾಜಿತ ರಸಾಲಂ ವಿರಹಿ ಹೃದಯಶೂಲಂ ತಾನೆನೆ الدوا
ಅರಸಂಚೆ ಸರಸಿಯಂ ಕಲಪಿಕಂ ತಳಿತ ಮಾ | ಮರನಂ ಚಕೋರತತಿ ಚಂದ್ರಿಕೆಯನಳಿಕುಲಂ | ಬಿರಿಮುಗಳ ನರಗಿಳಿ ಬನಂಗಳಂ ವಿರಹಿಗಳ ಕೂರ್ಪರಂ ಸಾರ್ದೆಸೆಯಲು || ಧರೆಯೊಳೆಳಗಾಳಿಯಂ ಸೀತಳದ ವಾರಿಯಂ | ತರುಗಳ ನೆಳಲ್ಕ ಳಂ ಸೇರತೊಡಗಿತು ಜನಂ । ಪರಿವೃತ ವಸಂತಕಾಲದೊಳಿಂತಿರಲ್ ಬಳಿಕ ಸೀತೆ ಋತುಮತಿಯಾದಳು ||೨೩||
ಮಲ್ಲಿಕಾಸ್ಮಿ ತರುಬರೆ ಕುಂದಕುಟ್ಟಲರದನೆ | ಪಲ್ಲವಾಧರೆ ಭಂಗಕುಂತಳೆ ಕುಸುಮಗಂಧಿ | ಸಲ್ಲಲಿತಕೋಕಿಲಾಲಾಪೆ ಚಂಪಕವರ್ಣಿ ಮೃದುಮಧುರ ಕೀರವಾಣಿ || ಪುಲ್ಲಲೋಚನೆ ಚಾರು ಚಂದ್ರಬಿಂದಾನನೆ ಲ | ಸಲ್ಲತಾಗಾತ್ರಿ ಜಾನಕಿ ವಿರಾಜಿಸಿದಳ್ ಸ | ಮುಲ್ಲಾಸದಿಂ ಪುಷ್ಪವತಿಯಾಗಿ ವಿಕಸಿತ ವಸಂತಲಕ್ಷ್ಮಿಯ ತೆರದೊಳು ||೨೪||
ಕನ್ನಡ ಜೈಮಿನಿ ಭಾರತ
ಮೊಡವಿ ಮೂಡಿದ ಮೊಗಂ ಸೊಗಡು ಗಂಪೊಗೆದ ವೈ | ಮುಡಿಯದ ಬಳಲು ರುಬು ನಿಚ್ಚಳದ ಕಣ್ಯಲರ್ ತೊಳಪ್ಪ ಪಣಿ ಮಿರುಪ ಕದಪು | ತೊಡವುಗಳ ತೊಡಕಿಲ್ಲದವಯಂ ಪೂಗಳಂ | ಕಡುಬಿಡಿದ ಕೆ.ಚಂ ಮಾಧವೀಲತೆ ಖ ಬೆಳೆ | ವಿಡಿದಕ್ಕೆ ನಿರಿ.ಳಿದ ನಸುಮಾಸಿದಂಬರಂ | ಕುಡಿವರವ ಲಜ್ಜೆ ಸಿಂಗರಕೆ ಮಿಗಿಲಾಯ್ತವನಿಸುತೆಗೆ ಋತುಮತಿಯಾಗಲು [೨೫]
ಸಮುಚಿತ ಸ್ತ್ರೀಧರ್ಮದಿಂದೆ ನಾಲ್ಕನೆಯದಿನ | ದಮಲ ಮಜ್ಜನದಲಂಕಾರದೊಳೆಸೆದಳಂದು | ನಿಮಿಷದೊಳ್ ತ್ರಿಜಗಮಂ ಗೆಲ್ವೆನೆಂದಂಗಜಂ ಮಸೆದಡಾಯುಧವೊ ಮೇಣು | ಕ್ರಮದಿಂದೆ ಮನ್ಮಥಂ ಕಲುಪಮಂ ತೋರಿಸಿದ | ರಮಣೀಯ ಸೌಂದಯ್ಯಸಾರಮೋ ಸ್ಮರನ ನೀರು | ಪಮಯಶಯ ಸಾಕಾರಮೋ ಪೇಳೆನಲ್ ಸೀತೆ ರಾಘವನ ಕಣ್ಣೆ |೨೬೯
ಸ್ಪುರದುತ್ಕಟಾಕ್ಷ ಚಂಚಲದಿಂದೆ ಚಾರು ಪೀ | ವರಪಯೋಧರದಿಂದೆ ಪರಿವೃತ ಸುಮೇಖಲಾ | ತರಳ ಸತ್ಕಲ ಕಿಂಕಿಣೀ ಘನಸ್ವರದಿಂದೆ ಶಿವ ಕಂಕಣಂಗಳಿಂದೆ | ಸರಸತರ ಲಾವಣ್ಯಪೂರ ಪ್ರವಾಹದಿಂ | ಭರಿತ ಕಬರೀಬರ್ಪಿ ಲೀಲೆಯಿಂ ಮಳೆಗಾಲ | ದಿರವನೆಚ್ಚರಿಪರಸಿಯಂ ಕಂಡು ರಾಮನ ಮನಶ್ಚಾತಕಂ ನಲಿದುದು
ಮಂದಗಮನೆಯ ಮಂದಹಾಸದ ವಿಲಾಸಮಂ | ಕುಂದರದನೆಯ ಕುಂದದವಯವದ ಸೌಂದರ್ಯ 1 ದಂದಮಂ ವಕ್ರ ಕುಂತಳೆಯ ವಕಾವಲೋಕನದ ಭಾವದ ಬಗೆಯನು | ಚಂದನ ಸುಗಂಧಿನಿಯ ಚಂದ್ರಾಸ ದೆಸಕಮಂ | ಬಂದುಗೆದುಟಿಯಳ ಬಂಧುರದ ಸಿಂಗರವನೇ | ನೆಂದು ಬಣ್ಣಿಸಬಹುದು ರಾಮಣೀಯಕನಾದ ರಾಮನ ಮಡದಿಯಿರವನು||೨೮|
2
ನೊಸಲೊಳಾ ರಾಜಿಸುವ ತಿಲಕದಿಂದಲಕದಿಂ । ಮಿಸುಪ ಮೈ ನಸುದೋರ್ಪ ವಸನದಿಂ ದತನದಿಂ | ಪಸರಿಪೆಳನಗೆಯ ತೆಳದಪಿನಿಂ ಪದಪಿನಿಂದಮರ್ದ ಪೊಂದುಡುಗೆಯಿಂದ | ಅಸಿವೆರಲ್ಗಳೊಳೊಪ್ಪುವುಗುರ್ಗಳಿಂ ತಿಗುರ್ಗ೪ಂ | ಪೊಸತೆನಿಪ ಕುಂಕುಮದ ಕಂಪಿನಿಂದಿಂಪಿನಿಂ | ತ್ರಿಸರದೊಳ್ ಮೆರೆವ ಗುರುಕುಚದಿಂದೆ ಕಾಂತೆ ಕಣ್ಣಿ ಸೆದಿರ್ದಳುll
ಹದಿನೆಂಟನೆಯ ಸಂಧಿ
ಪಜ್ಜಳಿಪ ರತ್ನ ಪ್ರದೀಪಂಗಳಿಂದೆ ಪೊಸ | ಬಜ್ಜರದ ಮಣಿಮಂಚದಿಂದಂ ಚೆದುಪ್ಪಳಿನ | ನಜ್ಜು ಕದಲರ್ಗಳಿಂದೆ ಶಿವ ಮೇಲ್ವಾಸಿನಿಂ ರಾಜೋಪಭೋಗ್ಯವಾದ | ಸಜ್ಜೆ ವನೆಯೊಳ್ ವಿರಾಜಿಪ ಕಾಂತನೆಡೆಗೆ ನಸು | ಲಜ್ಜೆ ಮಂದಸ್ಮಿತಂ ಕಿರುಬೆಮರ್ ಕಾತರಂ | ಪಜ್ಜೆ ದೋರರ್ ಮೊಗದೊಳ್ಳೆ ತಂದು ಸಾರ್ದಳೊಯ್ಯನೆ ಮತ್ತಗಜಗಾಮಿನಿ॥೩೦॥
ಸಾಗರದ ನಡುವೆ ಫಣಿತಲ್ಪದೊಳ' ಸಿರಿಯೊಡನೆ | ಭೋಗಿಸುವ ತೆರದಿಂ ಮಿಥಿಳೇಂದ್ರಸುತೆಯ ಸಂ | ಭೋಗದಿಂ ರಘುಕುಲ ಲಲಾಮನೆಸೆದಂ ಮನುಜಲೀಲೆಗಿದು ಸಾರ್ಥಮೆನಲು | ರಾಗರಸದಿಂಜಿ ಪುಳಕಂ ಪೊಸ್ಕ್ ನಲಿದು ಮದ | ನಾಗಮಢಿಯಿಂ ಸಕಲ ರತಿಕಲೆಗಳಂ | ಪಾಗಲ್ ಪರಸ್ಪರ ವಿಚಾರಮಂ ಮರೆದೈಕ್ಯಭಾವದಿಂ ಸೊಗಸುಗೊಳಿಸಿ 120
ಬೆಂಗೊಡದೆ ಮೋಸವೋಗದೆ ತವಕಮುಡುಗಿ ಪೆರ | ಪಿಂಗದೆ ವಿಘಾತಿಗಳುಕದೆ ಕೈಮರೆಯದೆ ಚದು | ರಿಂಗದೆ ನೆಗಳ ಪುಳಂ ಬಿಡದೆ ತಳ್ಳಳರಡಗದಲಸಿಕೆದೋರದೆ | ಅಂಗಜಶ್ರಮವ ನಿಟ್ಟಿಸದೆ ನಲೆ ರಂಜಿಸುವ | ಸಂಗರ ಸದಾಳಾಪದಿಂದೆಸದರೊಂದಿನಿಸು | ಭಂಗವಿಲ್ಲದೆ ವೀರಭಟರೊದಗುವಂತೆ ಸಮರತಿಯೊಳಾ ದಂಪತಿಗಳು
ಜೈಮಿನಿ ಭಾರತ 36
ಹದಿನೆಂಟನೆಯ ಸಂಧಿ ಕೊನೆಯ ಭಾಗ
ಪದ್ಯ ,33 ರಿಂದ 64
ರಾಮನಿಂದ ಗರ್ಭಿಣಿ ಸೀತೆಯ ಪರಿತ್ಯಾಗ
ನಿರೂಪಣೆ: ಸುಬ್ಬುಲಕ್ಷ್ಮಿ
ಸಂಕ್ಷಿಪ್ತ ರೂಪ
ಸೀತೆಯಲ್ಲಿ ಬಸಿರಿನ ಚಿಹ್ನೆಗಳು ತೋರಿದವು. ಮುಖ ಬಿಳುಪೇರಿತು. ಸಣ್ಣ ನಡುವಿನ ತ್ರಿವಳಿಗಳು ಮುಚ್ಚಿದವು. ಕಣ್ಗಳ ಸುತ್ತ ಕಪ್ಪು, ಕುಚಗಳ ತುದಿಯ ಕಪ್ಪು ತಲೆದೋರಿದವು. ನಡಿಗೆಯಲ್ಲಿ ಆಲಸ್ಯ, ಕಣ್ಣ ಮಿಂಚು, ಮುಖದ ಇಮ್ಮಡಿಸಿದ ಕಾಂತಿಯಿಂದ ಬೆಳಗಿದಳು. ಚಂದ್ರಮುಖಿಯ ಜಠರದಲ್ಲಿ ಚಂದ್ರಕಾಂತ ಶಿಲೆಯಂತೆ ಗರ್ಭಾಂಕುರವಾಯಿತು. ನಾಲ್ಕನೆಯ ತಿಂಗಳಲ್ಲಿ ವಸಿಷ್ಠ ವಿಶ್ವಾಮಿತ್ರ ಮೊದಲಾದವರನ್ನು ಕರೆಸಿ ಪುಂಸವನ ಸೀಮಂತವನ್ನು ವೈಭವದಿಂದ ನಡೆಸಿ ಎಲ್ಲರಿಗೂ ತಾಂಬೂಲ ಉಡುಗೊರೆಗಳನ್ನಿತ್ತು ಗೌರವಿಸಿದನು. ಹನುಮಂತ, ಸುಗ್ರೀವ, ವಿಭೀಷಣ ಮುಂತಾದ ಮಿತ್ರರಿಗೆ ಸತ್ಕರಿಸಿ ಕಳಿಸಿಕೊಟ್ಟನು. ಮುನಿಗಳು ಸೀತೆಯು ತನ್ನ ಕಾಂತನಿಲ್ಲದೆಡೆಯಲ್ಲಿ ಹೆರುವಳೆಂದು ಸೂಚನೆ ಕೊಟ್ಟರೂ ಅದನ್ನು ರಾಮನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.
ಸೀತೆಯು ರಾಮನಲ್ಲಿ ತನಗೆ ಋಷಿಪತ್ನಿಯರನ್ನು ಕಂಡು ಬರುವ ಬಯಕೆಯಾಗಿದೆಯೆಂದು ಹೇಳಿಕೊಂಡಳು. ಆಯಿತು ಎಂದನು ರಾಮ. ಅವನಿಗೆ ಕನಸಿನಲ್ಲಿ ಸೀತೆಯು ಗಂಗೆಯನ್ನು ದಾಟಿ ತಡಿಯಲ್ಲಿ ಕ್ಷೀಣಳಾಗಿ ನರಳುತ್ತಿರುವಂತೆ ಕಂಡು ಬೆಚ್ಚಿದನು. ಮುನಿಗಳು ಇದು ಕೆಟ್ಟದೆಂದರು. ಬೇಸರದಿಂದ ಒಂದೆರಡು ದಿನ ಸುಮ್ಮನಿದ್ದು ನಂತರ ಸಾಮಾನ್ಯವೇಷದಲ್ಲಿ ನಗರ ಸಂಚಾರ ಮಾಡಲು ಹೊರಟನು. ಒಬ್ಬ ಚಾರನನ್ನು ಕರೆಸಿ ರಾಜ್ಯದ, ಪ್ರಜೆಗಳ ವಿಷಯವನ್ನು ಕೇಳುತ್ತಿರುವಾಗ ಅವನು ಎಲ್ಲರೂ ನಿನ್ನನ್ನು ಹೊಗಳುತ್ತಿದ್ದಾರೆಂದೂ ಸುಖವಾಗಿರುವರೆಂದೂ ಹೇಳುವಾಗ ಅವನ ಮುಖದಲ್ಲಿ ತೋರಿದ ಅಲ್ಪ ಬದಲಾವಣೆ ಗಮನಿಸಿ ಸತ್ಯ ಹೇಳು ಎಂದನು. ಸುಮ್ಮನಿದ್ದು ನಂತರ ಸಾಮಾನ್ಯವೇಷದಲ್ಲಿ ನಗರಸಂಚಾರ ಮಾಡಲು ಹೊರಟನು. ಚಾರನನ್ನು ಗಮನಿಸಿ ಸತ್ಯ ಹೇಳಲು ಒತ್ತಾಯಿಸಿದಾಗ ಮಡಿವಾಳನೊಬ್ಬ ತನ್ನನ್ನು ಬಿಟ್ಟು ಹೋಗಿದ್ದ ಹೆಂಡತಿಯನ್ನು ಮತ್ತೆ ಸೇರಿಸಲು ನಾನೇನೂ ರಾಮನಲ್ಲ ಎಂದಿದ್ದು ತಿಳಿಯಿತು.
ಲೋಕಾಪವಾದಕ್ಕೆ ಅಂಜಿದ ರಾಮನು ಬಹಳ ಚಿಂತೆಗೊಳಗಾದನು. ಹುತ್ತವನ್ನು ಹಾವು ಹೊಗುವಂತೆ ಅಂತ; ಪುರವನ್ನು ಹೊಕ್ಕನು.
ಭರತ ಲಕ್ಷ್ಮಣ ಶತ್ರುಘ್ನರು ಬಂದು ನಮಿಸಿ ಮೌನದಲ್ಲಿ ನಿಂತರು. ರಾಮನು ಅವರಿಗೆ ತನ್ನ ಅಳಲನ್ನು ವಿವರಿಸಿದನು. ಪತಿವ್ರತೆ ಸೀತೆಯ ಬಗ್ಗೆ ಅವನಿಗೆ ಸಂದೇಹವಿಲ್ಲ. ಆದರೆ ಜನದ ಮಾತನ್ನು ಬಿಡುವಂತಿಲ್ಲ. ಅಂತಹಾ ಶೀಲವಂತೆಯನ್ನು ಹೇಗೆ ಬಿಡುವೆ? ಅಕಟಾ ಎಂದು ಸೋದರರು ಮರುಗಿದರು.
ಅಗ್ನಿಯೇ ಅವಳನ್ನು ಒಪ್ಪಿಸಿದ್ದನಲ್ಲವೆ?
ಹುಲುಮನುಜರ ಮಾತಿಗೆ ಹೆದರಿ ಕುಲಪತ್ನಿಯನ್ನು ತೊರೆಯುವುದು ತರವಲ್ಲ ಎಂದು ಅಣ್ಣನಿಗೆ ಹೇಳಿದರು.
ಭರತ ಲಕ್ಷ್ಮಣರು ಬಹಳವಾಗಿ ಹೇಳಿದರು ಶತ್ರುಘ್ನನಂತೂ ಉರಿದುಬಿದ್ದನು.ಅವರೆಲ್ಲರ ಮಾತು ಕೇಳಿ ರಾಮನು ಸುಮ್ಮನಿದ್ದು ಭರತ ಶತ್ರುಘ್ನರನ್ನು ಕಳಿಸಿ ಏಕಾಂತದಲ್ಲಿ ಲಕ್ಷ್ಮಣನಿಗೆ ಹೇಳಿದನು. ಇದುವರೆಗೆ ನೀನು ನನ್ನ ಯಾವ ಮಾತನ್ನೂ ತೆಗೆದುಹಾಕಿದವನಲ್ಲ. ಸೀತೆಯು ವನವನ್ನು ಕಾಣುವ ಬಯಕೆ ಹೇಳಿದ್ದಳು. ಇದೇ ನೆಪದಲ್ಲಿ ಅವಳನ್ನು ಅರಣ್ಯಕ್ಕೆ ಬಿಟ್ಟು ಬಾ ಎಂದನು. ಲಕ್ಷ್ಮಣನಿಗೆ ತಲೆತಿರುಗಿತು. ಅಣ್ಣನ ಆಜ್ಞೆಯನ್ನು ಮೀರಲಾರ. ಬಹಳವಾಗಿ ಶೋಕಿಸಿದನು.
ರಥವನ್ನು ಸಿದ್ಧಗೊಳಿಸಿ ಸೀತೆಯ ಬಳಿ ಬಂದು ತಲೆಬಾಗಿ ರಾಮನು ನಿನ್ನನ್ನು ವನಕ್ಕೆ ಕಳಿಸೆಂದು ನನಗೆ ಹೇಳಿರುವನು. ಹೊರಡು ಎನ್ನಲು ಸೀತೆಗೆ ಬಹಳ ಸಂತೋಷವಾಯಿತು. ರಾಮನು ತನ್ನ ಬಯಕೆಯನ್ನು ಈಡೇರಿಸುತ್ತಿರುವನೆಂದು ಬಗೆದಳು. ಕೌಸಲ್ಯೆ, ಸುಮಿತ್ರೆ, ಕೈಕೇಯಿಯರಿಗೆ ನಮಿಸಿ ಸಖಿಯರಿಗೆ ಹೇಳಿ ಆಶ್ರಮದ ಋಷಿಪತ್ನಿಯರಿಗೆ ಕೊಡಲು ಸೌಭಾಗ್ಯದ ವಸ್ತುಗಳು, ಬಾಗಿನ ವಸ್ತ್ರ ಮುಂತಾದುವುಗಳನ್ನು ರಥದಲ್ಲಿ ಇರಿಸಿ ಲಕ್ಷ್ಮಣನೊಡನೆ ಹೊರಟಳು.
ಹದಿನೆಂಟನೆಯ ಸಂಧಿ ಕೊನೆಯ ಭಾಗ
ಒದ್ಯ 33 ರಿಂದ 64
ಇಂತೆಸೆವ ಸಮರತಿಯ ಸೊಬಗಿನಿಂದವವರೀರ್ವ | ರುಂ ತೊಳಗುತಿರೆ ಬಳಿಕ ವರವಿಷ್ಣು ನಕ್ಷತ್ರ | ದಂತದೊಳ್ ವೈದೇಹಿಗಾಯ್ತು, ಗರ್ಭಾದಾನ ಮದರ ಫಲಮಂ ನೋಡಲು | | ಎಂತಾದೊಡಂ ತನ್ನ ಕಾಂತನನಗಲ್ದುಸೀ । ಮಂತಿನಿ ಪರಸ್ಥಳದೊಳಣುಗರಂ ಪಡೆದಪಳ | ದಂ ತಿಳಿಯದುತ್ಸವದೊಳಿರ್ದಳಾಕಾಂತೆ ಬಸಿರಾದ ಲಾಂಛನವನಾಂತು ॥೩೩॥
ಸಣ್ಣನಡು ಬಳೆಯೆ ತಿವಳಿಗಳಡಗೆ ತೆಳ್ವಾಸೆ | ನುಣ್ಣಗೆ ಪೊಗರ್ವಡೆಯೆ ಚೂಚಕದ ಕಪ್ಪುಣ್ಮೆ | ತಿಣ್ಣ ಮೊಲೆ ಬಿಣ್ಪಡರೆ ಕಾಲ್ಮಂದಗತಿಗಲಸೆ ನಗೆಮೊಗಂ ಬೆಳ್ಪುದೋರೆ | |ಕಣ್ಣೆವೆಯ ಪುರ್ಬಿನ ನವಿರ್ಮಿಂಚುದಳೆಯೆ ತನು | ತಣ್ಣಸದೊಳೆಸೆಯೆ ಪೊಸಗಾಡಿವೆತ್ತಿರ್ದಳೇ | ವಣ್ಣಿಸುವೆನುಲ್ಲಸತ್ಕಾಂಚನಲತಾಂಗಿ ಸುತ ಲಾಂಛನದ ಗರ್ಭದಿಂದೆ ॥೩೪||
ಬೆಳ್ದಾವರಿಯೊಳೆರಗಿದಳಿಕುಲಂ ಗಗನಾಗ್ರ | ದೊಳ್ದಿನದಿನಕೆ ಬೆಳೆವ ಚಂದ್ರಕಲೆ ಕನಕಾದ್ರಿ | ಯೊಳ್ದಿಟ್ಟಿ ಗೊಳಿಸುವ ಸಿತಾಂಬುಜಂ ರಾರಾಜಿಸುವ ತೆರದೊಳಾ ಕಾಂತೆಯ ॥ ಒಳ್ದಳೆದ ಚೆಲ್ವಿನಾನನದೊಳುರೆ ಮಿರುಗುವ ಕು | ರುಳ್ದೊಂಗಲಸಿನಡುವಿನೊಳ್ ಪೊಳೆವ ಗರ್ಭಂ ನೆ | ಗಳ್ದ ಕುಚದೊಳ್ ಮಸುಪ ಚೂಚಕದ ಕಪ್ಪು ಚೆಲ್ವಿಂದೆ ಕಣ್ಗೆಸೆದಿರ್ದುದು ||೩೫||
ಚಂದ್ರಮುಖಿಯಾದ ವೈದೇಹಿಯ ಜಠರ ಮೆಂಬ | ಚಂದ್ರಕಾಂತದ ಮಣಿಯ ಮಧ್ಯದೊಳ್ ತವೆ ರಾಮ|ಚಂದ್ರನೆಂಬಖಿಳ ಲೋಕಾನಂದಕರವಾದ ಸಂಪೂರ್ಣ ಕಲೆಗಳುಳ್ಳ|| ಚಂದ್ರನ ವಿರಾಜಿಪ ಪ್ರತಿಬಿಂಬ ಮಾಗಿರ್ದ | ಚಂದ್ರನೆನೆ ಶಿಶು ಗರ್ಭದೊಳ್ ತೊಳಗೆ ಕೂಡಿರ್ದ | ಚಂದ್ರಿಕೆ ವೋಲಂಗರುಚಿ ಬೆಳ್ಪಡರಲೊಳ್ಪಿನಿಂದೊಪ್ಪಿರ್ದಳುತ್ಪ ಲಾಕ್ಷಿ||೩೬||
ಕಾಂಚನಲತಾ ಕೋಮಲಾಂಗಿ ಗರ್ಭಿಣಿಯಾದ | ಲಾಂಛನವನಿನಕುಲಾಧೀಶ್ವರಂ ಕಂಡು ರೋ | ಮಾಂಚನದ ಹರ್ಷದಿಂ ನಾಲ್ಕನೆಯ ತಿಂಗಳೊಳ್ ವಿಭವದಿಂ ಭೂಸುರರ್ಗೆ || ವಾಂಛಿತವನಿತ್ತು ಪುಂಸವನ ಸೀಮಂತಮಂ | ತಾಂ ಚಾರು ಲೋಚನೆಗೆ ವಿಸ್ತರಿಸಿದಂ ಚಿತ್ತ | ಚಾಂಚಲ್ಯವಿಲ್ಲದೆ ವಸಿಷ್ಠ ವಿಶ್ವಾಮಿತ್ರರುಕ್ತದಿಂ ಮಾಡಿಸ ಲ್ಕೆ||೩೭||
ಯೋಜನತ್ರಯದಗಲದುತ್ಸವದ ಶಾಲೆಯಂ | ರಾಜಿಸಲ್ ಕೈಗೈಸಿ ಬಳಿಕಲ್ಲಿ ನೆರೆದ ನಾ | ನಾಜನಕ ದಿವಿಜರ್ಗೆ ಸುಗ್ರೀವ ಮೊದಲಾದ ಕಪಿಗ ಳ್ಗೆ ಭೂಸುರರ್ಗೆ | ರಾಜವರ್ಗಕೆ ವಿಭೀಷಣಮುಖ್ಯ ದೈತ್ಯರ್ಗೆ | ಭೋಜನ ಸುಗಂಧ ತಾಂಬೂಲ ಪುಷ್ಪಾಕ್ಷತೆಯ | ಪೂಜೆ ವಸ್ತ್ರಾಭರಣದುಡುಗೊರೆಗಳಂ ಕೊಟ್ಟು ರಾಘವಂ ಮನ್ನಿಸಿದನು ||೩೮||
ಉತ್ಸವಕೆ ಬಂದನಿಬರೆಲ್ಲರಂ ಶರಣಜನ | ವತ್ಸಲಂ ಸತ್ಕರಿಸಿ ಬೀಳ್ಕೊಟ್ಟು ರಾಜನಂ | ಪತ್ಸುಖದೊಳಿರ್ವ ನಿತರೊಳ್ ಬಳಿಕ ಸೀತೆ ನಿಜಕಾಂತನೇಕಾಂತಕೈದಿ ॥ ಕುತಂ ಪೊರ್ದದಾಶ್ರಮದ ಋಷಿಪತ್ನಿಯರ | ಸತ್ಸಂಗದೊಳ್ ತನ್ನ ಬೇಸರಂ ತವಿಸುವೆ ನಿ | ದುತ್ಸಕಂ ತನಗದರಿನ್ನೊಮ್ಮೆ ಬನಕೆ ತನ್ನಂ ಕಳುಹಬೇಕೆಂದಳು||೩೯||
ಆ ಕ್ಷಿತಿಜಿ ಬಯಕೆಯಂ ಬಿನೈಸೆ ಕೇಳು ನಗು | ತಾಕ್ಷೇಪದಿಂದ ಕಳುಹುವನಾಗಿ ಸಂತೈಸಿ | ರಾಕ್ಷಸಾಂತಕ ನಿರಲ್ಲೊಂದಿರುಳ್ ಕನಸುಗಂಡೇಳುತೆ ವಸಿಷ್ಠ ನೊಡನೆ || ಈ ಕ್ಷೋಣಿಸುತೆ ಗಂಗೆಯಂ ಕಳೆದು ಕಾಡೊಳ್ ಮ | ಹಾ ಕ್ಷೀಣೆಯಾಗಿ ದೇಸಿಗರಂತೆ ದೆಸೆದೆಸೆಯ 1 ನೀಕ್ಷಿಸುತೆ ಮರುಗುತಳುತಿರ್ದುದಂ ಕಂಡೆನಿದು ಲೇಸಹುದೆ ಪೇಳೆಂದನು ॥vol|
ಎನೆ ಕನಸಿದೊಳ್ಳಿತಲ್ಲೆಂದದಕೆ ಶಾಂತಿಯಂ | ಮುನಿವರ ವಸಿಷ್ಠಂ ನೆಗ ಳ್ಚಿದಂ ಬಳಿಕ ಮನ | ದನುತಾವದಿಂ ಪ್ರಜೆಯ ನಾರೈವುದಂ ಮರೆದೆರಡು ಮೂರುದಿವಸವಿರ್ದು || ಜನಮಲಸಿದಪುದೆಂದು ರಾತ್ರಿಯೊಳ್ ಪೊರಮುಟ್ಟು |ದಿನಪ ಕುಲತಿಲಕನೇಕಾಂತದೊಳ್ ನಗರ ಶೋ | ಧನೆಯ ಚಾರರೊಳೋರ್ವನಂ ಕರೆಸಿ ಕೇ ಳ್ದ ನಿಂತೆಂದು ವಿನಯೋಕ್ತಿಯಿಂದೆ ॥೪೧|
ನಿಂದಿಸರಲೇ ಪ್ರಜೆಗಳಿನ್ನ ಗಂ ತನ್ನ ಗುಣ | ಕೊಂದಿಸಿರಲೇ ಪಳಿವನಮಲತರ ಕೀರ್ತಿಯಂ | ಕಂದಿಸರಲೇ ದೂಸರಿಂದ ಭುಜವಿಜಯ ಪ್ರತಾಪ ತೇಜವನಿಳೆಯೊಳು || ನಂದಿಸರಲೇ ಜರೆದು ನಿಜವಂತದೇ ಳ್ಗೆಯಂ | ಕುಂದಿಸರಲೇ ಬೋಡಿಗಳೆದು ವಹಮಾನದೊಳ್ | ಸಂಧಿಸರಲೇ ಕೊಂಕುಕೊರತೆಗಳನೆಂದವನನಸುರಾರಿ ಬೆಸಗೊಂಡನು||೪೨||
ದೇವ ನಿನ್ನಂ ಪೆಸರಿಸಿದನೀತನಾದಪಂ | ಸೇವಿಸಿದನಂ ಚತುರ್ಮುಖನಾಗಲುಳ್ಳವಂ | ಕಾವುದೆಂದೈದೆ ಮರೆಹೊಕ್ಕಂ ಜಗದೊಳಾಚಂದ್ರಾರ್ಕವಾಗಿ ಬಾಳ್ವಂ || ಶ್ರೀವಿಭವದಿಂ ಶಕ್ರ ಪದವಿಯಂ ಜರೆದಪಂ | ಭೂವಲಯದೊಳ್ ನಿಂದಿಸುವರುಂಟೆ ತರಣಿಯಂ । ಕಾವಳಂ ಮುಸುಕಿರ್ದೊಡೇನಪ್ಪುದೆಂದವಂ ಬಿ ನ್ನೈಸಿ ಕೈಮುಗಿದನು||೪೩||
ಏನಾದೊಡಂ ಕಟಕಿಯಾಗಿರ್ಪುದೀಮಾತು | ಭಾನುವಂ ಕಾವಳಂ ಮುಸುಕಲೆನೆನಲೆನ್ನ | ಧೀನವಾದರಸುತನಕಾವುದೂಣಿಯವೆಂಬರೆಂದು ರಘುಪತಿ ಕೇಳಲು || ನೀನೆ ಪಾವನರೂಪನೆಂಬುದಂ ಮುನಿಯವದು | ತಾನೆ ತೋರಿಸಳೆ ಲೋಕದ ಜನಕೆ ಜಗದೊಳ | ಜ್ಞಾನಿಗಳ್ ನುಡಿದ ನಿಂದೆಯನುಸಿರಲಮ್ಮೆ ನೆಂದವನೆರಗಿದಂ ಪದದೊಳು||೪೪||
ಏಳಂಜಬೇಡಿನ್ನು ಮಾಜದಿರ್ ತನ್ನಾ ಣೆ | ಹೇಳೆಂದು ರಘುಕುಲಲಲಾಮನೊತ್ತಾಯದಿಂ | ಕೇಳಲವನೆಂದನವಧರಿಸೊರ್ವ, ಮಡಿವಾಳಿ ಮಲಿನಮಂ ತೊಳೆವನಾಗಿ|| ಕಾಳುಗೆಡದಂ ಜೀಯ ಸದ್ಗುಣಚರಿತ್ರನಾ | ಮಾಳಿಯಿಂ ಜಗಮಂ ಪುನೀತಮಂ ಮಾ ನಿ | ನ್ನೇಳಿಗೆಯನವನೆ ಬಲ್ಲ ನೆನೆಲೇನೆಂದನೆನಲಾತನಿಂತೆಂದನು||೪೫||
ಪೆಂಡತಿ ತವರ್ಮನೆಗೆ ಮುಳಿದು ಹೇಳದೆ ಪೋದ | ಚಂಡಿತನಕವಳ ತಾಯ್ತಂದೆಗಳ್ ಕಳುಹಬಂ ! ದಂಡಲೆದೊಡಿನ್ನೊಲ್ಲೆನಗಲಿರ್ದ ಮಡದಿಯಂ ಮತ್ತೆ ರಘುನಾಥನಂತೆ || ಕೊಂಡಾಳುವವನಲ್ಲ ತಾನೆಂದು ರಜಕ ನು | ದ್ದಂಡದೊಳ್ ನುಡಿಯೆ ಕಿವಿಮುಚ್ಚಿ ಕೊಳುತೆಯ್ದಿದೆನ | ಖಂಡಿತದ ಮಂತ್ರಪೂತದ ಹವಿಯನರಿದೆಂಜಲಿಪುದೆ ವಾಯಸಮೆಂದನು||೪೬||
ಎಂದು ಬಿನ್ನೈಸೆ ಕೇಳ್ದಾತನಂ ಕಳುಹಿ ರಘು | ನಂದನಂ ಬಂಧನಕ್ಕೊಳಗಾದ ಮತ್ತಗಜ | ದಂದದಿಂ ನಿಜಶಿರವನೊಲೆದು ಮೂಗಿನಮೇಲೆ ಬೆರಳಿಟ್ಟು ಮೌನದಿಂದೆ || ನಿಂದು ಸೈವೆರಗಾಗಿ ನೆನೆ ನೆನೆದು ಚಿತ್ರದೊಳ್ | ನೊಂದು ಬಿಸುಸುಯ್ದು ಕಡುವಳಿದು ಕಾತರಿಸಿ ಕಳೆ | ಗುಂದಿ ದುಮ್ಮಾನದಿಂ ಪೊಕ್ಕನಂತಃಪುರಕೆ ಪುತ್ತವುಗುವಹಿಪನಂ ತೆ||೪೭||
ಓಲಗಂಗುಡದೆ ಬಾಗಿ ಬಂದಖಿಳ ಭೂ | ಪಾಲರಂ ಕರೆಸಿ ಕಾಣಿಸಿಕೊಳದೊಳಗೆ ಚಿಂ | ತಾಲತಾಂಗಿಯ ಕೇಳಿಗೆಡೆಗೊಟ್ಟು ರಾಜೇಂದ್ರನಿರೆ ಕೇ ಳ್ದು ಭೀತಿಯಿಂದೆ|| ಆ ಲಕ್ಷ್ಮಣಾದಿಗಳ್ ಪೊಕ್ಕ ರಂತಃಪುರವ | ನಾಲಿಂಗಿಸಿದ ಜಾಡ್ಯದಿಂದ ಜಡಿದವಯವ | ನೀರಾಂಗನಂ ಕಂಡು ಕಾಲ್ಗೆರಗಿ ನುಡಿಸಲಮ್ಮದೆ ಸುಮ್ಮನಿರುತಿರ್ದರು||೪೮||
ಎದ್ದು ಕುಳಿರ್ದು ಕರುಣಾಳುಗಳ ಬಲ್ಲಹಂ | ಮುದ್ದು ಗೈದನುಜರಂ ಕರೆದಿಳೆಯೊಳಿಂದೆನಗೆ | ಪೊದ್ದಿದಪವಾದಮಂ ನೀವರಿದುದಿಲ್ಲಕಟ ಸಾಕಿನ್ನು ನೆರವಿಗಳೊಳು || ಕದ್ದ ಕಳ್ಳನವೊಲಾಡಿಸಿಕೊಳ್ಳಲಾರೆನೊಡ | ಲಿದ್ದಲ್ಲಿ ನಿಂದೆಗೊಳಗಾಗಿ ಬದುಕುವನಲ್ಲ | ತಿದ್ದಿ ತೀರದ ವಿಲಗಕಂಜುವೆಂ ಸೀತೆಯಂ ಬಿ ತಿಲ್ಲದಿರೆನೆಂದನು||೪೯||
ಇವಳಯೋನಿಜೆ ರೂಪ ಗುಣ ಶೀಲಸಂಪನ್ನೆ | ಭುವನವಾವನೆ ಪುಣ್ಯಚರಿತೆ ಮಂಗಳ ಮಹೋ| ತ್ಸವೆ ಪತಿವ್ರತೆಯೆಂಬುದಂ ಬಲ್ಲೆನಾದೊಡಂ ನಿಂದೆಗೊಳಗಾದಬಳಿಕ || ಅವನಿಸುತೆಯಂ ತನಗೆ ಬಿಡುವುದೇ ನಿಶ್ಚಯಂ | ರವಿಕುಲದ ರಾಯರಪಕೀರ್ತಿಯಂ ತಾಳ್ದಪರೆ | ಕುವರನಾಗಿರ್ದ ತನ್ನಂ ತಾತನುಳಿದುದಿಲ್ಲವೆ ಸತ್ಯಭಾಷೆಗಾಗಿ||೫೦||
ಕಲಿಯುಗದ ವಿಪ್ರರಾಚಾರಮಂ ಬಿಡುವಂತೆ । ಹಲವುಮಾತೇನಿನ್ನು ಸೀತೆಯಂ ಬಿಟ್ಟೆನೆನೆ | ಬಲುಗರವಿದೆತ್ತಣದೋ ಕಾರುಣ್ಯನಿಧಿಗೆನುತೆ ನಡನಡುಗಿ ಭೀತಿಯಿಂದೆ || ನೆಲೆಗೊಂಡ ವೇದಮಂ ಧರೆಯ ಪಾಷಂಡಿಗಳ್ | ಸಲೆ ನಿಂದಿಸಿದೊಡದಂ ಮಾ ಣ್ದಪರೆ ದ್ವಿಜರಕಟ | ಕುಲವರ್ಧಿನಿಯನೆಂತು ಬಿಡುವೆ ನೀಂ ಪೇಳೆಂದರನುಜಾತರಗ್ರಜಂಗೆ||೫೧||
ಭಯಶೋಕದಿಂದೆ ಗದ್ಗದಿತ ಕಂಠದೊಳತ್ರು | ನಯನದೊಳ್ ತುಳಕೆ ಭರತಂಕರೆವ ಕಪಿಲೆಯಂ | ನಯವಿದರ್ ಪೊಡೆದಡವಿಗಟ್ಟುವರೆ ಪಾವಕನೊಳರಸಿಯಂ ಪುಗಿಸಿದಂದು|| ಪ್ರಿಯೆ ನಿನಗೆ ಪರಿಶುದ್ದೆ ಕುಲಕೆ ಮಂಗಳೆ ಸುತೋ | ದ ಯಕೆ ನಿರ್ಮಲೆ ತನಗೆ ಗತಿಗುಡುವ ಸೊಸೆಯೆಂದು | ಬಯಸಿದೊಡೆ ಬಂದಯ್ಯನಾಡನೆ ಸುರಾಸುರರ ಮುಂದೆ ಕವಿಕಟಕವರಿಯೆ॥೫೨||
ಅದನೆಲ್ಲಮಂ ಮರೆದು ಹುಲುಮನುಜ ರಜಕನಾ | ಡಿದ ದೂಸರಂ ನೆನೆದು ಕುಲಪತ್ನಿಯಂ ಬಿಡುವ | ಹದನಾವುದಕಟ ಗುರುಲಘುವಿನಂತರವನೆನ್ಸಿಸದೆ ಬರಿದೆ ಮೂಢರಂತೆ || ಎದೆಗೆಟ್ಟು ದೇವಿಯಂ ದೋಷಿಯೆಂದರೆ ಜೀಯ | ಪದುಳವಿಹುದೆಂದು ವಿನಯದೊಳಗ್ರಜಾತನಂ | ಕದುಬಿ ನುಡಿದಂ ಭರತನಾತನಂ ನೋಡುತೊಯ್ಯನೆ ಭೂಪನಿಂತೆಂದನು ॥೫೩||
ತಮ್ಮ ನೀನಾಡಿದಂತವನಿಸುತೆ ನಿರಜೆಯಹು | ದುಮ್ಮಳಿಸಬೇಡ ಸೈರಿಸಲಾರೆ ನೀದೂ ಸ| ರಂ ಮಹಿಯೊಳುಳಿದರೆ ಪೃಥು ಪುರೂರವ ಹರಿಶ್ಚಂದ್ರಾದಿ ನರಪತಿಗಳು || ಸುಮ್ಮನಪಕೀರ್ತಿಗೊಳಗಾಗಲೇತಕೆ ಮಮತೆ | ಯಂಮಹಾಯೋಗಿ ಬಿಡುವಂತಿವಳನುಳಿವೆನೆನೆ | ಹಮೈಸಿ ಲಕ್ಷ್ಮಣಂ ಕಂಪಿಸುತೆ ಕಿವಿಮುಚ್ಚುತಗ್ರಜಂಗಿಂತೆಂದನು||೫೪||
ಕಾಯಸುಖಕೋ ಸುಗಂ ಕೃತಧರ ಮಂ ಬಿಡುವೊ | ಲಾಯತಾಕ್ಷಿಯ ಭಾವಶುದ್ಧಿಯಂ ತಿಳಿದಿರ್ದು | ವಾಯದಪವಾದಕಿಂತರಸಿಯಂ ತೊರೆಯಬೇಕೆಂಬರೇ ಕರುಣವಿಲ್ಲದೆ || ಜೀಯ ತುಂಬಿದಬಸುರ ಬೆಸಲಾದ ದೇವಿಯಂ | ಶ್ರೀಯದಿಂದಾರೈದು ಸಲಹಬೇಕೆಂದು ರಘು | ರಾಯಂಗೆ ಲಕ್ಷಣಂ ಬಿನ್ನೆಸೆ ಮೇಲ್ಪಾ ಯ್ದು ಶತ್ರುಘ್ನ ನಿಂತೆಂದನು [೫೫]
ಬಿಡುವರೆಂತಿಕ್ಷ್ವಾಕು ವಂಶದವರರಸಿಯಂ | ನುಡಿವರೆಂತಿಳೆಯೊಳಾರಾದೊಡಂ ದೂಸರಂ | ಪಡೆವರೆಂತಮಲ ಸರ್ತಿಯಂ ಬುದ್ಧಿ ವೇಳ್ವುದಕೊಡೆಯರಿಲ್ಲವಾಗಿ || ಕಡಿವರೆಂತೇಳೆಯಂ ಪೆಣ್ಣಳಂಕಿಯಿಂ! ನುಡುವರೆಂತನ್ವಯದ ಬಾಳೆಯನಿದಕ್ಕೆ ಕಿವಿ| ಗುಡುವರೆಂತೀಗಳೆನ್ನೊಡಹುಟ್ಟಿದವರೆನುತ ಶತ್ರುಘ್ನನುರಿದೆದ್ದನು||೫೬||
ಅ ರಸ ಕೇಳನುಜರಾಡಿದ ನುಡಿಗೆ ತಲೆವಾಗಿ |ತರಣಿಕುಲ ತಿಲಕನೊಯ್ಯನೆ ದೈನ್ಯಭಾವದಿಂ ! ತರಹರಿಸಬಾರದಪವಾದ ಹೃದ್ಛೂಲಮಂ ತನಗೆ ಜಾನಕಿಯನುಳಿದು|| ಪೆರೆಯುರ್ಚಿದುರಗನಂತಿರ್ದ ಪೆಂ ಸಾಕು ನಿಮ| ಗೊರೆದೊಡೇನಹುದೆಂದು ಬೇಸರಿಂಮನೆಗ ಳ್ಗೆ | ಭರತ ಶತ್ರುಘ್ನ ರಂ ಕಳುಹುತೇಕಾಂತದೊಳ್ ಸೌಮಿತ್ರಿಗಿಂತೆಂದನು | ೫೭ ||
ತಮ್ಮ ಬಾ ನೀನಿಂದುವರೆಗೆ ನಾನೆಂದಮಾ | ತಮ್ಮೀರಿದವನಲ್ಲ ಕೆಲಬಲವನಾರಯ್ಯು | ತಮ್ಮ ರುಗದಿರು ತನ್ನ ಕೊರಳಿಗಿದೆ ಖಡ್ಗ ಮಲ್ಲದೊಡೀಗ ಜಾನಕಿಯನು || ಉಮ್ಮಳಿಸದೊಯ್ದು ಗಂಗೆಯ ತಡಿಯರಣ್ಯದೊಳ್ |ಸುಮ್ಮನೆ ಕಳುಹಿ ಬರ್ಪುದವಳೆನ್ನೊಳಾಡಿರ್ಪ | ಳೊಮ್ಮೆ ಕಾನನಕೈದಬೇಕೆಂದು ಬಯಕೆಯಿಂದದೆ ನೆವಂ ನಿನಗೆಂದನು | ೫೮ ||
ಎನೆ ರಾಘವೇಂದ್ರ ನಿನ್ನಾಜ್ಞೆಯಂ ಮೀರಿ | ತನಗೆ ಗೌರವಮಪ್ಪುದೆಂದುದಂ ಮಾಡಿ | ಜನನಿಯ೦ ಕೊಂದುಗ್ರಗತಿಯ ಪ್ಪು ದೇಗೈವೆನೆಂದು ಕಡುಶೋಕದಿಂದೆ || ತನು ಝಂಪಿಸಿ ಸೆರೆಬಿಗಿದು ಕಂಬನಿಯಿಂದೆ| ನ ವೆದಳಲ್ದೊರೆಯೊಳಾಳ್ವನುಜಂ ಘೂರ್ಮಿಸುತೆ | ನಿನಗೆ ದೋಷಮೆ ತಾನಿರ ಲ್ಕೆ ನಡೆ ಕಳುಹೆಂದರಸನೇಂ ದಯೆ ದೊರೆದನೊ||೫೯||
ಅಣ್ಣ ದೇವನೊಳಿಡಿದ ವಾತ್ಸಲ್ಯವೆಂಬ ಬ | ಲ್ಗಣ್ಣಿ ಯೊಳ್ ಕಟ್ಟುವಡೆದಲ್ಲಿ ನಲರಿಯದೆ ನಿ | ರ್ವಿಣ್ಣ ಭಾವ ದೊಳಂದು ಲಕ್ಷ್ಮಣಂ ತುರಗಗಳ್ ಸಾರಥಿಕೇತನಂಗಳಿಂದೆ || ಹಣ್ಣಿ ದ ವರೂಥಮಂ ತರಿಸಿ ಪೊರರಿಸಿ ನೆಲ | ವೆಣ್ಣಮಗಳಿರುತ್ತಿರ್ದ ರಾಜಮಂದಿರಕೈದಿ | ಕ ಣ್ಣೊಳೀಕ್ಷಿಸದೆ ತಲೆವಾಗಿ ದೂರದೊಳೆ ನಿಂದಾ ಸೀತೆಗಿಂತೆಂದನು||೬೦||
ತಾಯೆ ನೀನೇತಕೆಳಿಸಿದೆ ನಿನ್ನ ನೀಗ ರಘು । ರಾಯಂ ತಪೋವನಕೆ ಕಳುಹಿ ಬರ ಹೇಳಿದಂ |ಪ್ರೀಯಮುಳ್ಳಡೆ ರಥಂ ಪ ಣ್ಣಿ ಬಂದಿದೆಕೊ ಬಿಜಯಂಗೈವುದೆಂದು ಮರುಗಿ|| ಛಾಯೆಗಾಣಸಿ ಸುಮಿತ್ರಾತ್ಮಜಂ ನುಡಿದಭಿ। ಪ್ರಾಯಮಂ ತಿಳಿಯದ ತಿ ಸಂಭ್ರಮಾನ್ವಿತೆಯಾದ | ಳಾಯತಾಂಬಕಿ ತನ್ನ ಭೀಷ್ಟವಂ ಸಲಿಸುವಂ ಕಾಂತನೆಂಬುತ್ಸವದೊಳು | ೬೧ ||
ಅಂಬುಜಾನನೆ ಬಳಿಕ ಪಯಣಮಂ ನಿ ಶ್ಚೈಸಿ | ನಂಬಿದರಭೀಷ್ಟಮಂ ಸಲ್ಲಿಸುವ ಕೃಪಾಳು ತಾ । ನೆಂಬುದಂ ಕಾಣಿಸಿದನಿಂದೆನ್ನ ಕಾಂತನೆನಗೆಂದು ಕೌಸಲೆಗೆ ಪೇಳ್ದು|| | ಮುಂಬರಿದೊಡಂಬಡಿಸಿ ಬಲವಂದು ಕಾಲ್ಗೆ ರಗಿ ! ತುಂಬಿದ ಪರಕೆವೆತ್ತು ಕೈಕೆಯಾದೇವಿಗೆ ಶಿ|ರಂಬಾಗಿ ವರಸುಮಿತ್ರೆಗೆ ನಮಿಸಿ ಸಖಿಯರಂ ಸಂತೈಸಿ ಬೀಳ್ಕೊಂಡಳು || ೬೨ ||
ಮಿಗೆ ತಪೋವನದ ಋಷಿಗಳ್ಗೆ ಮುನಿಪತ್ನಿಯ | ರ್ಗಗರು ಚಂದನ ಕುಂಕುಮಾನುಲೇಪನಗಳಂ | ಬಗೆಬಗೆಯ ದಿವ್ಯಾಂಬರಗಳಂ ವಿವಿಧ ಮಣಿಭೂಷಣಸುವಸ್ತುಗಳನು || ತೆಗೆದು ಕಟ್ಟಿಸಿ ರಥದೊಳಿಂಬಿಟ್ಟು ರಾಮನಂ | ಫ್ರಿಗಳ ಚೆಂಬೊನ್ನ ಪಾವುಗೆಗಳಂ ತರಿಸಿಕೊಂ | ಡೊಗುಮಿಗೆಯ ಹರುಷದೊಳಡರ್ದ ಳಂಗನೆ ಮಣಿರೂಧಮಂ ನಿಜಮಿದೆಂದು||೬೩||
ಅಗ್ರಜಂ ತರಿಸಂದು ತನ್ನೊಳಾಡಿದ ಕಜ್ಜ | ದುಗ್ರಮಂ ಬನಕೆ ಪೋದಪನೆಂಬದೇವಿಯ ಸ। ಮಗ್ರಸಂತೋಷಮಂ ಕಂಡು ಸೌಮಿತ್ರಿ ಮನದೊಳ್ ಮರುಗಿ ಕಂಬನಿಯನು || ನಿಗ್ರಹಿಸಿಕೊಂಡು ಸಾರಥಿಗೆ ಸೂಚನೆಗೈದು | ವ್ಯಗ್ರದಿಂದೈದಿಸಿದನಾರಥವನಾಗ ದೇ | ವಗ್ರಾಮ ನಿಲಯ ಲಕ್ಷ್ಮೀಶನುಂಗುಟದೊಳೊಗೆದಮಲಜಾಹ್ನವಿಯ ತಡಿಗೆ ||೬೪||
ಜೈಮಿನಿ ಭಾರತ 37
ಹತ್ತೊಂಬತ್ತನೆಯ ಸಂಧಿ ಮೊದಲಭಾಗ
ಪದ್ಯ 1 ರಿಂದ. 30
ಸೀತಾ ಪರಿತ್ಯಾಗ
ನಿರೂಪಣೆ: ಸುಬ್ಬುಲಕ್ಷ್ಮಿ
ಸಂಕ್ಷಿಪ್ತ ರೂಪ
ರಥ ವೇಗವಾಗಿ ಮುಂದುವರೆಯಿತು. ಪ್ರಜೆಗಳು ಗುಸುಗುಸು ಮಾತನಾಡಿಕೊಳ್ಳುತ್ತಿದ್ದರು. ಅದು ಸೀತೆಗೆ ತಿಳಿಯದಂತೆ ಇನ್ನಷ್ಟು ವೇಗವಾಗಿ ಹೊರಟ ಲಕ್ಷ್ಮಣ. ಅವನ ಮನದಲ್ಲಿ ನೋವು, ಶೋಕ ಮಡುಗಟ್ಟಿದೆ. ತಾನು ಇಂತಹ ಕೆಲಸ ಮಾಡಬೇಕಾಗಿದೆಯಲ್ಲ ಎಂಬ ಸಂಕಟ. ಏನೂ ಮಾತನಾಡದೆ ಇದ್ದಾನೆ. ದಾರಿಯಲ್ಲಿ ಅಪಶಕುನಗಳಾಗಿದ್ದನ್ನು ಕಂಡು ಸೀತೆ ತಕ್ಷಣ ರಾಮನಿಗೆ ಒಳಿತಾಗಲಿ ಎನ್ನುವಳು. ಮುಂದೆ ಬೆಳ್ನೊರೆಯ ಗಂಗಾನದಿ ಕಾಣಿಸಿತು. ಅವಳು ಅದನ್ನು ಪೂಜಿಸಿದಳು. ಬಾಗಿನ ಅರ್ಪಿಸಿದಳು.ನದಿಯ ಇಕ್ಕೆಲಗಳಲ್ಲಿಯೂ ವಿಧವಿಧವಾದ ಹಣ್ಣುಗಳ ಮರಗಳಿದ್ದವು.
ನಂತರ ಸಾಗಿದ ಮಾರ್ಗವು ದುರ್ಗಮವಾಗಿತ್ತು. ಕಷ್ಟಕರವಾಗಿತ್ತು. ನೀರವತೆ, ಭೀಷಣತೆಗಳಿಂದ ಕೂಡಿತ್ತು ಕ್ರೂರ ಮೃಗಗಳು, ಹಾವುಗಳು, ಕ್ರಿಮಿ ಕೀಟಗಳು, ನಿರ್ಜನತೆಗಳಿಂದ ಭಯಾನಕ ವಾಗಿತ್ತು. ಇರುಳೆಂಬಂತೆ ತೋರುವ ದಟ್ಟಡವಿ ಜಾನಕಿಗೆ ಘೋರವಾಗಿ ಕಂಡಿತು. ಅವಳು ಸೌಮಿತ್ರಿಯನ್ನು ಕುರಿತು ಇಲ್ಲಿ ಪುಣ್ಯಾಶ್ರಮಗಳಿಲ್ಲ, ಮುನಿವಧುಗಳಿಲ್ಲ, ವೇದಗಳ ಸ್ವರವಿಲ್ಲ. ಇಂತಹ ಸ್ಥಳಕ್ಕೆ ಏಕೆ ಬಂದೆ? ಎಂದಳು.
ರಾಮನ ಆಜ್ಞೆಯನ್ನು ಹೊತ್ತು ಬಂದ ಲಕ್ಷ್ಮಣನಿಗೆ ಅದನ್ನು ಹೇಳುವುದು ಹೇಗೆ ಎಂಬ ಚಿಂತೆ. ತಡವಾದರೆ ಅವನು ಕೋಪಿಸಿಕೊಂಡರೆ ಎಂದು ಭಯ. ಸೀತೆಯನ್ನು ಇಲ್ಲಿ ಬಿಡಬೇಕಲ್ಲ ಎಂಬಸಂಕಟ. ಕಣ್ಣೀರು ಸುರಿಸಿದನು. ಅದನ್ನು ಕಂಡು ಸೀತೆ ಬೆದರಿದಳು. ಕಾರಣವನ್ನು ಹೇಳೆಂದಳು.
ನಿನ್ನ ಮೇಲೆ ಜನರಾಡಿದ ಅಪವಾದದ ಮಾತಿಗೆ ತಲೆಬಾಗಿ ರಾಮನು ನಿನ್ನನ್ನು ಕಾಡಿಗೆ ಬಿಟ್ಟು ಬರಲು ತನ್ನನ್ನು ಕಳಿಸಿದ್ದಾನೆಂದು ಹೇಳಿದ ಕೂಡಲೆ ಬುಡ ಕಡಿದ ಬಾಳೆಯ ಗಿಡದಂತೆ ನೆಲದಲ್ಲಿ ಬಿದ್ದು ಎಚ್ಚರತಪ್ಪಿದಳು.ಎಲೆಯಲ್ಲಿ ನೀರು ತಂದು ಉಪಚರಿಸಿ ತನಗೆ ಬಂದ ಸ್ಥಿತಿಗಾಗಿ ರೋಧಿಸಿದನು ಲಕ್ಷ್ಮಣ.
ಒಮ್ಮೆಲೇ ಖಡ್ಗವನ್ನು ಕೊಟ್ಟು ಕೊರಳು ಕತ್ತರಿಸು ಎನ್ನದೆ ತನ್ನನ್ನು ಈ ಕಾಡಿಗೆ ಅಟ್ಟಿದನೆ ರಾಘವ ಎಂದು ಅತಿ ದೈನ್ಯದಿಂದ ಸೀತೆಯು ಅಳಲಿದಳು. ನನ್ನನ್ನು ಬಿಟ್ಟನೆ? ನಾನು ಕೆಟ್ಟೆನು. ಈ ದಟ್ಟಡವಿಯಲ್ಲಿ ಹೇಗಿರಲಿ ಎಂದು ಅತ್ತಳು. ಅಂದು ವಿಶ್ವಾಮಿತ್ರನೊಂದಿಗೆ ಬಂದು ನನ್ನನ್ನು ವರಿಸಿದಂದಿನಿಂದ ನನ್ನ ಜೊತೆಗೆ ಇದ್ದವನು. ರಾವಣ ನನ್ನನ್ನು ಅಪಹರಿಸಿದಾಗ ನೊಂದವನು, ದುರುಳನನ್ನು ಕೊಂದು ಅಗ್ನಿಮುಖದಿಂದ ಮತ್ತೆ ಪಡೆದವನು ಇಂದು ನನ್ನಲ್ಲಿ ದೋಷವನ್ನು ಎಣಿಸಿದನೆ ಎಂದು ಗೋಳಾಡಿದಳು.
ರಾಮನ ಚೆಲುವನ್ನು ಬಣ್ಣಿಸಿ ಮರುಗಿದಳು. ಅವನನ್ನು ನೋಡದೆ ಹೇಗಿರಲಿ ಎಂದು ಪರಿತಪಿಸಿದಳು. ನಯನಾಭಿರಾಮನನ್ನು, ಭುವನಾಭಿರಾಮನನ್ನು ಕಾಣದೆ ಹೇಗಿರಲಿ? ಹೀಗೆ ವಿಧವಿಧವಾಗಿ ಗೋಳಿಡುತ್ತ ಮತ್ತೆ ಮತ್ತೆ ಎಚ್ಚರದಪ್ಪುತ್ತ, ಅಳುತ್ತ ಇರುವ ಸೀತೆಯನ್ನು ಬಿಟ್ಟು ಹೋಗಲಾರದೆ, ಹೋಗದೆ ಇರಲಾರದೆ ಲಕ್ಷ್ಮಣ ಶೋಕದಿಂದ ಗದ್ಗದನಾದನು.
ಕೌಸಲ್ಯೆಗೆ ನಾನು ನಮಿಸಿದೆನೆಂದೂ, ನನ್ನದು ಏನೂ ತಪ್ಪಿಲ್ಲದೆ ಅವಳ ಕಂದ ನನ್ನನ್ನು ಬಿಟ್ಟುದನ್ನು ಹೇಳು ಎಂದಳು.. ಏಕೆ ನಿಂತಿರುವೆ? ವಾಪಸಾಗು ಎಂದಳು. ಭರತ ಮೊದಲಾದವರು, ಇತರ ಮಂತ್ರಿಗಳು ಇದಕ್ಕೆ ಒಪ್ಪಿದರೆ? ವಿಭೀಷಣ ಹನುಮ ಸುಮ್ಮನಿದ್ದರೆ ಮುಂತಾಗಿ ಕೇಳುತ್ತ ಮತ್ತೆ ಗೋಳಾಡಿದಳು. ಯಾರಿದ್ದರೆ ಏನು? ನನ್ನ ಹಣೆಬರಹವಿದು ಎಂದು ಪೇಚಾಡಿದಳು.ಕೊನೆಗೆ ಕರುಣಾಳು ರಾಘವನಲ್ಲಿ ತಪ್ಪಿಲ್ಲವೆನ್ನುವಳು.
ಕಡುಪಾಪವನ್ನು ಮಾಡಿ ಹೆಣ್ಣಾಗಿ ಹುಟ್ಟಿರುವ ತನ್ನದೇ ತಪ್ಪು. ಇನ್ನು ನಿಲ್ಲದೆ ಹೊರಡು. ತಡಮಾಡದಿರು. ನಿನಗೆ ದಾರಿಯಲ್ಲಿ ಏನೂ ತೊಂದರೆಯಾಗದಿರಲಿ. ಪ್ರಯಾಣ ಸುಖವಾಗಿರಲಿ ಎಂದು ಹರಸುವಳು.
ಸೌಮಿತ್ರಿಯು ವನದ ಅಭಿಮಾನಿ ದೇವತೆಗಳಿಗೆ, ವೃಕ್ಷಗಳಿಗೆ, ಪಶುಪಕ್ಷಿಗಳಿಗೆ, ತರುಲತೆಗಳಿಗೆ ಮೊರೆಯಿಟ್ಟು ಸೀತೆಯನ್ನು ರಕ್ಷಿಸಬೇಕೆಂದು ಪ್ರಾರ್ಥಿಸಿದನು. ಗಂಗೆಗೆ ಕೈ ಮುಗಿದನು. ದಿಕ್ಕುಗಳಿಗೆ ನಮಿಸಿದನು. ನಿನ್ನ ಮಗಳನ್ನು ಕಾಪಾಡು ಎಂದು ಭೂಮಾತೆಯನ್ನು ಕೇಳಿಕೊಂಡನು. ದೇವಿಯನ್ನು ಬಲವಂದು ನಮಿಸಿ ಲಕ್ಷ್ಮಣನು ಅಡಿಗಡಿಗೆ ಹಿಂತಿರುಗಿ ನೋಡುತ್ತ ಅಳುತ್ತ ಮುಂದುವರಿದನು. ಕ್ಷಣಕ್ಷಣಕ್ಕೂ ಗೋಳಿಡುವ, ಬೀಳುವ ಎಚ್ಚರತಪ್ಪುವ ಬೆದರುವ ಸೀತೆಯನ್ನು ನೋಡುತ್ತ ದಾರಿಗೆಟ್ಟವನಂತೆ ಕಂಗೆಟ್ಟು ನೋಡುತ್ತ ಹೊರಟನು.
ಹತ್ತೊಂಬತ್ತನೆಯ ಸಂಧಿ ಕೊನೆಯ ಭಾಗ
ಪದ್ಯ 31 ರಿಂದ 55
ತಾಯನೆಳೆಗರು ಬಿಚ್ಚುವಂತೊಯ್ಯನೊಯ್ಯನ | ತ್ಯಾಯಾಸದಿಂದಗಲ್ದ ಮಾನದಿಯಂ ದಾಂಟಿ | ರಾಯಕೇಳ್ ದುಃಖಾರ್ತನಾಗಿ ಸೌಮಿತ್ರಿ ಸಾಗಿದನತ್ತಲವಳಿತ್ತಲು || ಬಾಯಾರಿ ಕಂಗೆಟ್ಟು ಲಕ್ಷ್ಮಣನ ತಲೆ ಮರಸ | ಲಾಯಿಂದೊರಲ್ದು ಭಯಶೋಕದಿಂದಸವಳಿದು | ಕಾಯಮಂ ಮರೆದವನಿಗೊರಗಿದಳ್ ಬೇರ್ಗೊಯ್ದು ಬಿಸುಟೆಳೆಯ ಬಳ್ಳಿಯಂತೆ||೩೧||
ಅರಸ ಕೇಳಲ್ಲಿರ್ದ ಪಕ್ಷಿ ಮೃಗ ಜಂತುಗಳ್ । ಧರಣಿಸುತೆಯಂ ಬಳಸಿ ನಿಂದು ಮೈಯುಡಗಿ ಜೋ | ಲ್ದಿರದೆ ಕಂಬನಿಗರೆದು ನಿಜವೈ ರಮಂ ಮರೆದು ಪುಲ್ಮೇವುಗಳನೆ ತೊರೆದು || ಕೊರಗುತಿರ್ದುವು ಕೂಡೆ ವೃಕ್ಷಲತೆಗಳ್ ಬಾಡಿ | ಸೊರಗುತಿರ್ದುವು ಶೋಕಭಾರದಿಂ ಕಲ್ಗಳುಂ | ಕರಗುತಿರ್ದುವು ಜಗದೊಳುತ್ತಮರ ಹಾನಿಯಂ ಕಂಡು ಸೈರಿಸುವರುಂಟೆ |೩೨||
ಮೊರೆಯಲೊಲ್ಲವು ತುಂಬಿ ಕುಣಿಯಲೊಲ್ಲವು ನವಿಲ್ | ಬೆರೆಯಲೊಲ್ಲವು ಕೋಕಿ ನಡೆಯಲೊಲ್ಲವು ಹಂಸೆ | ಕರೆಯಲೊಲ್ಲವು ಏಕಂ ನುಡಿಯಲೊಲ್ಲವು ಶುಕಂ ನಲಿಯಲೊಲ್ಲವು ಚಕೋರಿ 1| ನೆರೆಯಲೊಲ್ಲವು ಹರಿಣಿಯೊರೆಯಲೊಲ್ಲವು ಕರಿಣಿ | ಪೊರೆಯಲೊಲ್ಲವು ಚಮರಿ ಮೆರೆಯಲೊಲ್ಲವು ಸಿಂಗ | ಮರರೆ ಜಾನಕಿಯ ಶೋಕ ತಮ್ಮದೆಂದಾಕೆಯಂಗಮಂ ನೋಡಿನೋಡಿ |೩೩||
ಬೀಸಿದುವು ಬಾಲದೊಳ್ ಚಮರಿಗಳ್ ಚಮರಮಂ | ಪಾಸಿದುವು ಕರಿಗಳೆಳೆದಳಿರ ಮೃದುತಲ್ಪಮಂ | ಸೂಸಿದುವು ಸಾರಸಂಗಳ್ ತಮ್ಮ ಗರಿಗಳಂ ತೋದು ತಂದಂಬುಗಳನು || ಆ ಸಿರಿಮೊಗಕ್ಕೆ ಬಿಸಿಲಾಗದಂತಾಗಸದೊ | ಲೋಸರಿನದಂಚೆಗಳೆರಂಕೆಯನಗಲ್ಟಿನೆಳ | ಲಾಸೆಗೈದುವು ರಾಘವನ ರಾಣಿ ದುಃಖಸಂತ ಪ್ತೆಯಾಗಿರುತಿರಲ್ಕೆ||೩೪||
ಸುರನದಿಯ ತೆರೆತೆರೆಯ ನಡುನಡುವೆ ಬಿದ್ದೆದ್ದು | ಬರಲಾರದಿರ್ದೊಡಂ ಮತ್ತೆ ಗಂಗೆಯೊಳಲ | ರ್ದರವಿಂದಗಂಧದತಿ ಭಾರವಂ ಪೊರಲಾರದಿರ್ದೊಡಂ ಧರಣಿಸುತೆಯ || ಪರಿತಾಪಮಂ ತವಿಸದಿರಬಾರದೆಂದು ತರ | ಹರದೊಳೊಯ್ಯನೆ ತಂದು ಬೀಸಿತು ಸುಖ | ಸ್ವರುಶವಾತಂ ಜಗದೊಳುಪಕಾರಿಯಾದವಂ ತನ್ನ ನೋಂ ವಂ ನೋಳ್ಪನೆ |೩೫॥
ಪೃಥಿವಿಯಾತ್ಮಜೆ ಬಳಿಕ ಚೇತರಿಸಿ ತನಗಿನ್ನು ! ಪಥಮಾವುದೆಂದು ದೆಸೆದೆಸೆಗಳಂ ನೋಡಿ ಸಲೆ | ಶಿಥಿಲಮಾದವ ಯವದ ಧೂಳಿಡಿದ ಮೈಯ್ಯ ಬಿಡುಮುಡಿಯ ವಿಕೃತಿಯನೆಟ್ನದೆ | ಮಿಥಿಲೇಂದ್ರವಂತದೊಳ್ ಜನಿಸಿ ರಘುಕುಲದ ದಶ | ರಥನೃಪನ ಸೊಸೆಯಾಗಿ ತನಗೆ ಕಟ್ಟಡವಿಯೊಳ್ | ವ್ಯಧಿಸುವಂತಾಯ್ತಕಟ ವಿಧಿಯೆಂದು ಹಲುಬಿದಳ್ ಕಲ್ಮರಂ ಕರಗುವಂತೆ |೩೬|
ಕೇಣಮಂ ಬಿಟ್ಟಾತ್ಮಘಾತಕದೊಳೀ ಕ್ಷಣಂ | ಪ್ರಾಣಮಂ ತೊರೆದಪೆನೆ ಬಂದಪುದು ಗರ್ಭದಿಂ | ಭ್ರೂಣಹತ್ಯಾದೋಷಮೇಗೈವೆನಾರ್ಗೊರೆವೆನೆಂದೊಯ್ಯನೆದ್ದು ಬಳಿಕ | ಏಣಾಕ್ಷಿ ನಡೆದಳಡವಿಯೊಳುಪಲ ಕಂಟಕ | ಶ್ರೇಣಿಗಳ ಸೋಂಕಿ ಮೆಲ್ಲಡಿಗಳಿಂ ಬಸಿವ ನವ | ಶೋಣಿತಂ ನೆಲದೊಳ್ ಪೊನಲ್ವರಿಯಲರಸ ಕೇಳ್ ಪೆಣ್ಣೊಡಲ್ಪಿಡಿಯಬಹುದೆ ||೩೭||
ಅನ್ನೆಗಂ ಮಖಕೆ ಯೂಪವನರಸುತಾ ಬನಕೆ | ಸನ್ನು ತ ತಪೋಧನ ವಾಲ್ಮೀಕಿ ಮುನಿವರಂ | ತನ್ನ ಶಿಷ್ಯರ್ವೆರಸಿ ನಡೆತಂದು ಕಾಡೊಳೊರ್ವಳೆ ಪುಗಲ್ದೆಸೆಗಾಣದೆ || ಬನ್ನದಿಂ ಬಗೆಗೆಟ್ಟು ಪಾಡಳಿದು ಗ್ರೀಷ್ಮ ಋತು | ವಿನ್ನವೆದ ಕಾಂತಾರದಧಿದೇವಿ ತಾನೆನಲ್ | ಸನ್ನ ಗದ್ಗದಕಂಠೆಯಾಗಿ ರೋದಿಸುತಿರ್ದ ವೈದೇಹಿಯಂ ಕಂಡನು||೩೮||
ಆರಿವಳಿದೇತಕಿರ್ದ ಪಳೀ ವನಾಂತರದೊ | ಳಾರೈವೆನಿದನೆಂದು ನಡೆತಂದು ಕರುಣದಿಂ | ದಾರುಷಿ ನುಡಿಸಿದನೆಲೆ ತಾಯೆ ನೀನಾವಳೌ ಕಂಡ ಕುರುಪಾಗಿರ್ಪುದು || ಘೋರತರ ಗಹನಕೊರ್ವಳೆ ಬಂದೆಯೆಂತಕಟ | ಬೀರು ಹೇಳಾ ಹೆದರಬೇಡ ವಾಲ್ಮೀಕಿ ನಾಂ | ಭೂರಿಶೋಕಾರ್ತರಾಗಿರ್ದರಂ ಕಂಡು ಸುಮ್ಮನೆ ಪೋಪನಲ್ಲೆಂದನು||೩೯|
ಹರುಷಮೊತ್ತರಿಸಿದುದು ಶೋಕವಿಮ್ಮಡಿಸಿದುದು | ಬೆರಸಿದುದು ಲಜ್ಜೆ ಭೂಮಿಜೆಗಂದು ಗದ್ಗದ | ಸ್ವರದಿಂದ ಸೀತೆ ತಾಂ ಲೋಕಾಪವಾದಕಪರಾಧಿಯಲ್ಲದ ತನ್ನನು || ತರಣಿಕುಲಸಂಭವಂ ಬಿಟ್ಟನೆಂದೀವನದೊ | ಳಿರಿಸಿ ಪೋದಂ ಸುಮಿತ್ರಾತ್ಮಜಂ ಜೀವನಂ | ಪೊರೆಯವೇಳ್ಪುದೆ ಗರ್ಭಮೊಡಲೊಳಿಹುದೇಗೈವೆನೆಂದೆರಗಿದಳ್ ಮುನಿಪದದೊಳು||೪೦||
ದೇವಿ ಬಿಡು ಶೋಕಮಂ ಪುತ್ರಯುಗಮಂ ಪಡೆವೆ | ಭಾವಿಸದಿರಿನ್ನು ಸಂದೇಹಮಂ ಜನಕಂಗೆ | ನಾವನ್ಯರಲ್ಲ ನಮ್ಮಾ ಶ್ರಮಕೆ ಬಂದು ನೀಂ ಸುಖದೊಳಿರ್ದೊಡೆ ನಿನ್ನನು || ಅವಾವ ಬಯಕೆ ಯುಂಟೆಲ್ಲಮಂ ಸಲಿಸಿ ತಾ | ನೋವಿಕೊಂಡಿರ್ಪೆನಂಜದಿರೆಂದು ಸಂತೈಸಿ | ರಾವಣಾರಿಯ ರಾಣಿಯಂ ನಿಜತಪೋವನಕೆ ವಾಲ್ಮೀಕಿ ಕರೆತಂದನು||೪೧||
ಚಿತ್ರಮಯವಾಗಿ ಕಟ್ಟಿತು ಪರ್ಣಶಾಲೆ ಶತ | ಪತ್ರಲೋಚನೆಗೆ ಬಳಿಕಲ್ಲಿ ಋಷಿಪತ್ನಿಯರ | ಮಿತ್ರತ್ವಮಂ ತಳೆದು ವಾಲ್ಮೀ ಕಿಮುನಿಪನಾರೈಕೆಯಿಂ ಸೀತೆ ತನ್ನ 1 ಪುತ್ರೋದಯದ ಕಾಲಮಂ ನೋಡುತಿರ್ದಳ್ ಧ | ರಿತ್ರಿಯೊಳ್ ದೃಢಪತಿವ್ರತೆಯರ್ಗೆ ನಿರ್ಮಲ ಚ | ರಿತ್ರಮೆಂತಾದೊಡಂ ವಿಪರೀತವಾದಪುದೆ ಭೂಪಾಲ ಕೇಳೆಂದನು.||೪೨||
ಜಾತಿವೈರಂಗಳಿಲ್ಲದ ಪಕ್ಷಿಮೃಗದ ಸಂ | ಘಾತದಿಂ ಋತುಭೇದವಿಲ್ಲದ ಲತಾದ್ರುಮ | ವ್ರಾತದಿಂ ಪಗಲಿರುಳು ಶಂಕೆಯಿಲ್ಲದ ಪೂ ಗೊಳಂಗಳ ವಿಕಾಸದಿಂದೆ || ಶೀತೋಷ್ಣದಾಸರಿಲ್ಲದ ಸುಸ್ಥಳಂಗಳಿಂ | ಪ್ರೀತಿವಿರಹಿತ ದುಃಖಸುಖದ ಜಂಜಡವಿಲ್ಲ | ದಾ ತಪೋವನದೊಳಗೆ ಋಷಿವಧುಗಳೊಡನೆ ವೈದೇಹಿ ಪದುಳದೊಳಿರ್ದಳು[೪೩]|
ಮುನಿವಟುಗಳೆಡೆಯಾಡಿ ಪರಿಚರ್ಯೆಯಂ ಮಾಳ್ಪ | ರಿನಿದಾದವಸ್ತುವಂ ಋಷಿವಧುಗಳಿತ್ತಪರ್ | ತನತನಗೆ ಸತ್ಕರಿಸುವರ್ ತಾಪಸೋತ್ತಮರ್ ವಾಲ್ಮೀಕಿ ಸಾದರದೊಳು || ದಿನದಿನಕೆ ಬೇಕಾದ ಬಯಕೆಯಂ ಸಲಿಸುವಂ | ಬನದೊಳಿಂತಿರುತಿರ್ದಳವನಿಸುತೆ ರಾಘವೇಂ | ದ್ರನ ಚರಣಕಮಲಮಂ ಧ್ಯಾನಿಸುತೆ ಮರೆದಖಿಲ ರಾಜವಿಭವ ಶ್ರೀಯನು ॥೪೪|
ಅವನಿಜೆಯ ಗರ್ಭಕ್ಕೆ ತುಂಬಿದುದು ನವಮಾಸ | ದವಧಿ ಬಳಿಕೊಂದಿರುಳ ಶುಭಲಗ್ನದೊಳ್ ಪಡೆದ | ಳವಳಿಮಕ್ಕಳನುಪಚರಿಸೆ ವಿದಗ್ದಾಂಗನೆಯರಾ ನೂತಿಕಾಗೃಹದೊಳು || ತವಕದಿಂದೈ ತಂದು ಮುನಿವೆಟುಗಳುಸಿರಲು | ತ್ಸವದಿಂದೆ ವಾಲ್ಮೀಕಿಮುನಿ ಬಂದು ನೋಡಿ ಕುಶ | ಲವದಿಂದೆ ಸೇಚನಂಗೈದು ಕುಶಲವರೆಂದು ಪೆಸರಿಟ್ಟನರ್ಭಕರ್ಗೆ||೪೫||
ದೆಸೆಗ ಳ್ ಪ್ರಸನ್ನತೆಯೊಳೆಸೆದ ವಾಗಸದೊಳುಡು | ವಿಸರಂಗಳೊಪ್ಪಿದುವು ಪೊಸಗಂಪಿಡಿದು ಗಾಳಿ | ಪಸರಿಸಿತು ತವೆ ಸುಪ್ರದಕ್ಷಿಣದೊಳುರಿದುದಗ್ನಿ ಜ್ವಾಲೆ ಕಡಲುಕ್ಕಿತು || ವಸುಧೆ ನಲಿದುದು ತಿಳಿದು ಪರಿದುವು ನದಿಗಳೆಂದು | ಶಶಿರವಿಗಳುದಯಿಸಿದರೇಕಕಾಲದೊಳೆನಲ್ । ಶಿಶುಗಳಾಶ್ರಮದ ಮುನಿಗಳ ಕ ಣ್ಗೆ ಕಾಣಿಸಿದರೊಸಗೆ ಮೂಜಗಕಾದುದು ॥೪೬॥
ಬಾಲದೊಡಿಗೆಗಳೆಲ್ಲಮಂ ತುಡಿಸಿ ನೋಡುವಂ | ಬಾಲಲೀಲೆಗಳನಾಡಿಸಿ ಮುದ್ದು ಮಾಡುವಂ | ಬಾಲಕರ್ಗಿನಿದಾದ ವಸ್ತುವಂ ಕೊಡುವಂ ತನ್ನ ತೊಡೆಮಡಿಲೊಳಿಟ್ಟು || ಲಾಲಿಸುವನಾವಗಂ ಜಪ ಸಮಾಧಿ ತಪಗಳ | ಕಾಲಮಂ ಬಗೆಯದೆ ಮುನೀಶ್ವರಂ ಕುಶಲವರ | ಮೇಲಣಕ್ಕರೊಳಿರ್ದನಾಶ್ರಮದೊಳುತ್ಸವಂ ಪೆರ್ಚಿದುದು ದಿನದಿನದೊಳು ||೪೭||
ದಶರಥ ನೃಪಾಲ ಸುತರಮನೆಯ ಬೆಳವಿಗೆಯ | ಶಿಶುಗಳ್ಗೆ ಕಾಂತಾರವಾಸದೊಳ್ ನವೆವ ಕ | ರ್ಕಶವಿದೆತ್ತಣದೆಂದು ಮಿಥಿಲೇಂದ್ರ ಸಂಭೂತೆ ಚಿತ್ತದೊಳ್ ಮರುಗದಂತ|| ವಿಶದಮಾನಸನಾಗಿ ವಾಲ್ಲಿ ಕಿಮುನಿವರಂ । ಕುಶಲವರನೋವಿದಂ ವಿವಿಧವೈಭವದಿಂದೆ | ಶಶಧರನ ಕಳೆಯ ತೆರದೊಳಾರಾಘವಾತ್ಮಜರ್ ದಿನದಿನಕೆ ವರ್ಧಿಸಿದರು ||೪೮||
ಚೆಲ್ವೆರಡುರೂಪಾ ಯ್ತೊ ವಿಮಲತೆ ಕವಲ್ತುದೋ | ಗೆಲ್ವದೆಸೆ ಗೆಳೆಗೊಂಡಡರ್ದಪುದೊ ಕೀರ್ತಿಯ ಮ | ಡಲ್ವಸುಧೆಯೊಳ್ ದ್ವಿಧಾಕೃತಿಯಾಯ್ತೊ ಸಂತಸದ ಬೆಳಸಿನ ಬೆಳೆದ ಪಸುಗೆಯೊ || ಸಲ್ಪ ಕುಲದೇಳ್ಗೆಯ ಸಸಿಯ ಕೋಡೊ ಮೋಹನದ | ಬಲ್ಪೊನಲ ಸವಡಿಯೋ ಸೊಗಸಿನವಳಿಯ ಫಲವೊ | ಸೊಲ್ಗೊಡಿದು ಪೊಸತೆನಲ್ ಕುಶಲವರ್ ಕುಶಲದಿಂ ಕಣ್ಗೆಸೆದರಾಶ್ರಮದೊಳು||೪೯|
ತೊಟ್ಟಿಲೊಳ' ನ ಲಿವ ನೆವವಿಲ್ಲದೆ ನಗುವ ಬಾಯ್ಗೆ | ಬೆಟ್ಟಿಕ್ಕಿ ಪೀರ್ವ ಪಸಿದೊಡೆ ಚೀರ್ವ ಮೊಲೆಯುಂಬ| ಪಟ್ಟಿರಿಸೆ ಪೊರಳ್ವಂಬೆಗಾಲಿಡುವ ಮೊಳೆವಲ್ಲ ಜೊಲ್ಲುಗೆ ತೊದಳಿಸಿ ನುಡಿವ|| ದಟ್ಟಡಿಯಿಡುವ ನಿಲ್ಪ ತೊಡರ್ವ ಬೇಡುವ ಪರಿವ | ಬಟ್ಟೆಯೊಳೊರಗುವ ಕಾಡುವ ಕುಣಿವ ಲೀಲೆಯಂ | ನೆಟ್ಟನೆ ಕುಮಾರಕರ್ ತೋರಿದರ್ ಜಾನಕಿಗೆ ವಾಲ್ಮೀಕಿ ಮುನಿವರಂಗೆ ||೫೦||
ಬಿಡದೆ ಪಾ ಲ್ಪೀರ್ವುದಂ ಕಳೆಯೊರೋರಗೆ ಮಕ್ಕ | ಳೊಡನೆ ಧೂಳಾಟ ಮೊದಲಾದ ಲೀಲೆಗಳ ಪರಿ | ವಿಡಿಯಿಂದೆಸೆವ ಕುಮಾರರ್ಗೆ ಮುನಿಪತಿ ಚೌಲಕರ್ಮಂಗಳಂ ಮಾಡಿಸಿ || ತೊಡಗಿಸಿದನಕ್ಷರಾಭ್ಯಾಸಮಂ ಬಳಿಕ ನಡೆ | ನುಡಿಯ ಜಾ ಣ್ಮೆಯ ಕಲೆಯ ರಾಜಲಕ್ಷಣದ ಚೆ | ಲ್ವಿಡಿದ ಲಲಿತಾಂಗದಿಂ ಕುಶಲವರ್ ಕ.ಶಲ ವರ್ಧನರಾಗಿ ರಂಜಿಸಿದರು ॥೫೧||
ಶ್ರೀಮಾಧವನ ಮನೋಹರದ ಸೌಂದ ರ್ಯ ಮಂ | ಕಾಮನ ಜನಕನ ಕಮನೀಯ ಲಾವಣ್ಯಮಂ | ರಾಮ ಚಂದ್ರನ ರಾಮಣೀಯಕದ ರೂಪಮಂ ತಾಳ್ತೊಗೆದ ಸುಕುಮಾರರ || ಕೋಮಲಾಂಗದ ಸೊಬಗನಭಿವರ್ಣಿಸುವರುಂಟೆ | ಭೂಮಿಯೊಳ: ಚೆಲ್ವಿಗೆ ವಸಂತನಂ ಮದನನಂ | ಸೋಮನಂ ಪಡಿಯಿಡಲ್ ಪುನರುಕ್ತ ಮಪ್ಪುದೆನೆ ಕುಶಲವರ್ ಕ ಣ್ಗೆಸೆದರು ॥೫೨||
ದ್ವಾದಶಾಬ್ದದ ಮೇಲೆ ಮುನಿಪಂ ಕುಮಾರರ್ಗೆ | ವೇದೋಕ್ತದಿಂದಮುಪನಯನಂಗಳಂ ಮಾಡಿ | ಭೂದೇವನಿಕರಕೆ ವಸಿಷ್ಠನೊಳ್ ವರಕಾಮಧೇನುವಂ ಬೇಡಿ ತಂದು || ಆದರಿಸೆ ಭೋಜನ ಸುಗಂಧಾಕ್ಷತೆಗಳಿಂದ | ಮಾದುದತಿವಿಭವದಿಂದುತ್ಸವಂ ಬಳಿಕ ತರು | ಣಾದಿತ್ಯ ಸನ್ನಿಭರ್ ತೊಳಗಿದರ್ ಜಾನಕಿಯ ಚಿತ್ತಕಾನಂದಮಾಗೆ||೫೩||
ಸರ್ವಕರ್ಮದ ವಿಧಿಯನ ಖಿಳ ನಿಗಮದ ಕಡೆಯ | ನುರ್ವ ಶಾಸ್ತ್ರದ ಬಗೆಯನುದಿತಧದ ನೆಲೆಯ | ನುರ್ವಿಶ ನೀತಿಗಳ ನಿಶ್ಚಯವನೈದೆ ಸಾಂಗೋಪಾಂಗವಾಗಿ ಬರಿಸಿ|| ತರ್ವಾಯೊಳಾ ಕುಮಾರರ್ಗೆ ಮುನಿನಾಥಂ ಧ|ನುರ್ವೆದಮಂ ಶಿಕ್ಷೆಗೈದು ರಾಮಾಯಣವ | ನಿರ್ವರುಂ ಪಾಡುವಂತೋದಿಸಿದನತಿಮಧುರಭಾವದಿಂ ತುದಿ ಮೊದ ಲ್ಗೆ ||೫೪||
ಸೀತೆ ನಲಿವಂತೆ ವಾಲ್ಮೀಕಿ ಮೆಚ್ಚುವ ತೆರದೊ |
ಳಾತಪೋವನದ ಮುನಿಗಣಮ್ಮೆದೆ ಕೊಂಡಾಡ ಲಾ ತರುಣರೀ ರ್ವರುಂ ಮಧುರವೀಣೆಗಳ ಮೇಳಾಪದಾಲಾಪಂಗಳ|| ಗೀತದೊಳ್ ಸಂಕೀರ್ಣ ಶುದ್ದ ಸಾಳಗದಿಂ ರ |
ಲಸಾತಿಶಯಮನೆ ಪಾಡುವರ್ ದೇವನಗರೀ ನಿ।ಕೇತನ ಶ್ರೀಪತಿಯ ಚಾರಿತ್ರಮಪ್ಪ ರಾಮಾಯಣವನನುದಿನದೊಳು||೫೫||
ಜೈಮಿನಿ ಭಾರತ 38
ಹತ್ತೊಂಬತ್ತನೆಯ ಸಂಧಿ ಕೊನೆಯ ಭಾಗ
ಪದ್ಯ 31 ರಿಂದ 55
ಲವಕುಶರ ಜನನ
ನಿರೂಪಣೆ: ಸುಬ್ಬುಲಕ್ಷ್ಮಿ
ಸಂಕ್ಷಿಪ್ತ ರೂಪ
ಲಕ್ಷ್ಮಣನು ಹೊರಟ ನಂತರ ದಿಕ್ಕು ತೋರದವಳಾಗಿ ಸೀತೆ ಭೂಮಿಯಲ್ಲಿ ಬಿದ್ದು ಹೊರಳಿದಳು. ಬೇರು ಕೊಯ್ದುಬಿಸುಟ ಬಳ್ಳಿಯಂತೆ. ಅಲ್ಲಿದ್ದ ಪಶುಪಕ್ಷಿಗಳು ಅವಳ ದುಃಖದಲ್ಲಿ ಭಾಗಿಯಾದವು. ನಿಜವೈರವನ್ನು ಮರೆತು ಎಲ್ಲವೂ ಅವಳನ್ನು ಸುತ್ತುವರಿದು ನಿಂತು ಕಣ್ಣೀರು ಸುರಿಸಿದವು. ಜಗತ್ತಿನಲ್ಲಿ ಉತ್ತಮರ ಹಾನಿಯನ್ನು ಕಂಡು ಸೈರಿಸುವವರುಂಟೆ? ದುಂಬಿಗಳು ಹಾಡಲೊಲ್ಲವು. ಗಿಳಿಗಳು ನುಡಿಯಲೊಲ್ಲವು. ನವಿಲುಗಳು ಆಡಲೊಲ್ಲವು. ಹೀಗೆ ಎಲ್ಲವೂ ತಂತಮ್ಮ ಚಟುವಟಿಕೆಗಳನ್ನು ಮರೆತು ಜಾನಕಿಯ ಶೋಕದಲ್ಲಿ ಪಾಲುಗೊಂಡವು. ಚಮರಿ ಮೃಗಗಳು ಗಾಳಿ ಬೀಸಿದವು. ಹಂಸಗಳು ರೆಕ್ಕೆಯಿಂದ ನೀರು ತಂದು ಚಿಮುಕಿಸಿದವು. ಎಚ್ಚೆತ್ತ ಸೀತೆಯು ಎಲ್ಲಿ ಹೋಗುವುದು ತಿಳಿಯದೆ ಹಲುಬುತ್ತಿದ್ದಳು. ಪ್ರಾಣ ತೆಗೆದುಕೊಳ್ಳಬೇಕೆಂದರೆ ಗರ್ಭಿಣಿ. ಸುರನದಿಯ ಮೇಲಿನಿಂದ ಬೀಸಿದ ಸುಖಸ್ಪರ್ಶದ ಗಾಳಿಯು ಸ್ವಲ್ಪ ತಂಪು ನೀಡಿತು.
ಮಿಥಿಲೆಯ ರಾಜಕುಮಾರಿ, ದಶರಥನ ಸೊಸೆ ಇಂದು ದಿಕ್ಕುಗಾಣದೆ ಅರಣ್ಯದಲ್ಲಿ ಅಳುತ್ತಿದ್ದಾಳೆ. ಕಲ್ಲು ಕೂಡ ಕರಗುವಂತೆ.
ಆ ವೇಳೆಗೆ ಯಾಗಕ್ಕಾಗಿ ಸಮಿತ್ತನ್ನು ಅರಸುತ್ತ ಬಂದ ವಾಲ್ಮೀಕಿಯು ಇವಳ ಅಳು ಕೇಳಿ ಚಕಿತನಾಗಿ ಬಳಿಗೆ ಬಂದನು. ಎಲ್ಲೋ ನೋಡಿದ ನೆನಪು. ವಿಚಾರಿಸಲು ಎಲ್ಲ ವಿಷಯ ತಿಳಿಯಿತು.
ಶೋಕವನ್ನು ಬಿಡು, ನನ್ನ ಬಳಿಗೆ ಬಾ. ಆಶ್ರಮದಲ್ಲಿ ಇರು. ಎಂದು ಸಮಾಧಾನ ಮಾಡಿ ಕರೆದೊಯ್ದನು. ಅವಳಿಗೆ ಒಂದು ಪರ್ಣಶಾಲೆ ನಿರ್ಮಿತವಾಯಿತು. ಎಲ್ಲರೂ ಬಹಳ ಪ್ರೀತಿಯಿಂದ ಅವಳನ್ನು ನೋಡಿಕೊಂಡರು. ಅಲ್ಲಿನ ಮರಗಪಕ್ಷಿಗಳೂ ಇವಳ ಜೊತೆಗೆ ಪ್ರೀತಿಯಿಂದ ವರ್ತಿಸಿದವು.
ನವಮಾಸ ಕಳೆಯಿತು. ಅವಳಿ ಮಕ್ಕಳಿಗೆ ಸೀತೆ ಜನ್ಮವಿತ್ತಳು. ವಾಲ್ಮೀಕ ಮಹರ್ಷಿಗಳು ಅವರಿಗೆ ಕುಶಲವರೆಂದು ನಾಮಕರಣ ಮಾಡಿದರು.
ಪುರ್ಣಚಂದ್ರನಂತೆ ಬೆಳೆದರು ಬಾಲಕರು. ಅವರಾಟಪಾಠಗಳಲ್ಲಿ, ಅವರ ಆರೈಕೆಯಲ್ಲಿ ಸೀತೆ ತನ್ನ ಮನದ ನೋವನ್ನು ಅದುಮಿಕೊಂಡಳು. ಆಶ್ರಮದ ತುಂಬಾ ಈ ಮಕ್ಕಳದೇ ಆಟಗಳು. ಬಾಲಕರಿಗೆ ಉಡುಗೆ ತೊಡುಗೆಗಳನ್ನು ತೊಡಿಸಿ ನೋಡಿ ಎಲ್ಲರೂ ಸಂತಸಪಟಟ್ಟರು. ಚೆಲುವು ಎರಡು ರೂಪಾಗಿರುವುದೋ ಎಂಬಂತೆ ದಿನ ದಿನಕ್ಕೆ ವರ್ಧಿಸಿದರು.
ಅಕ್ಷರಾಭ್ಯಾಸವಾಯಿತು. ನಡೆನುಡಿ, ಜಾಣ್ಮೆಯ ರಾಜಲಕ್ಷಣದ ಆಡಳಿತ ಕಲೆಗಳನ್ನು ಕಲಿಸಿದರು. ಹನ್ನೆರಡು ವರ್ಷಗಳಾಗಲು ಉಪನಯನವನ್ನು ಬಹಳ ವೈಭವದಿಂದ ನೆರವೇರಿಸಿದರು. ವಸಿಷ್ಠರಿಂದ ಸುರಭಿಯನ್ನು ತಂದು ಬೇಕಾದ್ದನ್ನೆಲ್ಲ ಪಡೆದು ಕಾರ್ಯಕ್ರಮ ನಡೆಸಿದರು. ವೇದಾಬ್ಯಾಸದ ಜೊತೆಗೆ ಬಿಲ್ವಿದ್ಯೆಗಳನ್ನೂ ಕಲಿಸಿದರು. ರಾಮಾಯಣ ಕಾವ್ಯವನ್ನು ರಾಗವಾಗಿ ಹಾಡುವುದನ್ನು ಹೇಳಿಕೊಟ್ಟರು. ವೀಣೆಯೊಂದಿಗೆ ಹಾಡುವ ಅವರ ಮಧುರ ಧ್ವನಿ ಪಸರಿಸತೊಡಗಿತು.
ಹತ್ತೊಂಬತ್ತನೆಯ ಸಂಧಿ ಕೊನೆಯ ಭಾಗ
ಪದ್ಯ 31 ರಿಂದ 55
ತಾಯನೆಳೆಗರು ಬಿಚ್ಚುವಂತೊಯ್ಯನೊಯ್ಯನ | ತ್ಯಾಯಾಸದಿಂದಗಲ್ದ ಮಾನದಿಯಂ ದಾಂಟಿ | ರಾಯಕೇಳ್ ದುಃಖಾರ್ತನಾಗಿ ಸೌಮಿತ್ರಿ ಸಾಗಿದನತ್ತಲವಳಿತ್ತಲು || ಬಾಯಾರಿ ಕಂಗೆಟ್ಟು ಲಕ್ಷ್ಮಣನ ತಲೆ ಮರಸ | ಲಾಯಿಂದೊರಲ್ದು ಭಯಶೋಕದಿಂದಸವಳಿದು | ಕಾಯಮಂ ಮರೆದವನಿಗೊರಗಿದಳ್ ಬೇರ್ಗೊಯ್ದು ಬಿಸುಟೆಳೆಯ ಬಳ್ಳಿಯಂತೆ||೩೧||
ಅರಸ ಕೇಳಲ್ಲಿರ್ದ ಪಕ್ಷಿ ಮೃಗ ಜಂತುಗಳ್ । ಧರಣಿಸುತೆಯಂ ಬಳಸಿ ನಿಂದು ಮೈಯುಡಗಿ ಜೋ | ಲ್ದಿರದೆ ಕಂಬನಿಗರೆದು ನಿಜವೈ ರಮಂ ಮರೆದು ಪುಲ್ಮೇವುಗಳನೆ ತೊರೆದು || ಕೊರಗುತಿರ್ದುವು ಕೂಡೆ ವೃಕ್ಷಲತೆಗಳ್ ಬಾಡಿ | ಸೊರಗುತಿರ್ದುವು ಶೋಕಭಾರದಿಂ ಕಲ್ಗಳುಂ | ಕರಗುತಿರ್ದುವು ಜಗದೊಳುತ್ತಮರ ಹಾನಿಯಂ ಕಂಡು ಸೈರಿಸುವರುಂಟೆ |೩೨||
ಮೊರೆಯಲೊಲ್ಲವು ತುಂಬಿ ಕುಣಿಯಲೊಲ್ಲವು ನವಿಲ್ | ಬೆರೆಯಲೊಲ್ಲವು ಕೋಕಿ ನಡೆಯಲೊಲ್ಲವು ಹಂಸೆ | ಕರೆಯಲೊಲ್ಲವು ಏಕಂ ನುಡಿಯಲೊಲ್ಲವು ಶುಕಂ ನಲಿಯಲೊಲ್ಲವು ಚಕೋರಿ 1| ನೆರೆಯಲೊಲ್ಲವು ಹರಿಣಿಯೊರೆಯಲೊಲ್ಲವು ಕರಿಣಿ | ಪೊರೆಯಲೊಲ್ಲವು ಚಮರಿ ಮೆರೆಯಲೊಲ್ಲವು ಸಿಂಗ | ಮರರೆ ಜಾನಕಿಯ ಶೋಕ ತಮ್ಮದೆಂದಾಕೆಯಂಗಮಂ ನೋಡಿನೋಡಿ |೩೩||
ಬೀಸಿದುವು ಬಾಲದೊಳ್ ಚಮರಿಗಳ್ ಚಮರಮಂ | ಪಾಸಿದುವು ಕರಿಗಳೆಳೆದಳಿರ ಮೃದುತಲ್ಪಮಂ | ಸೂಸಿದುವು ಸಾರಸಂಗಳ್ ತಮ್ಮ ಗರಿಗಳಂ ತೋದು ತಂದಂಬುಗಳನು || ಆ ಸಿರಿಮೊಗಕ್ಕೆ ಬಿಸಿಲಾಗದಂತಾಗಸದೊ | ಲೋಸರಿನದಂಚೆಗಳೆರಂಕೆಯನಗಲ್ಟಿನೆಳ | ಲಾಸೆಗೈದುವು ರಾಘವನ ರಾಣಿ ದುಃಖಸಂತ ಪ್ತೆಯಾಗಿರುತಿರಲ್ಕೆ||೩೪||
ಸುರನದಿಯ ತೆರೆತೆರೆಯ ನಡುನಡುವೆ ಬಿದ್ದೆದ್ದು | ಬರಲಾರದಿರ್ದೊಡಂ ಮತ್ತೆ ಗಂಗೆಯೊಳಲ | ರ್ದರವಿಂದಗಂಧದತಿ ಭಾರವಂ ಪೊರಲಾರದಿರ್ದೊಡಂ ಧರಣಿಸುತೆಯ || ಪರಿತಾಪಮಂ ತವಿಸದಿರಬಾರದೆಂದು ತರ | ಹರದೊಳೊಯ್ಯನೆ ತಂದು ಬೀಸಿತು ಸುಖ | ಸ್ವರುಶವಾತಂ ಜಗದೊಳುಪಕಾರಿಯಾದವಂ ತನ್ನ ನೋಂ ವಂ ನೋಳ್ಪನೆ |೩೫॥
ಪೃಥಿವಿಯಾತ್ಮಜೆ ಬಳಿಕ ಚೇತರಿಸಿ ತನಗಿನ್ನು ! ಪಥಮಾವುದೆಂದು ದೆಸೆದೆಸೆಗಳಂ ನೋಡಿ ಸಲೆ | ಶಿಥಿಲಮಾದವ ಯವದ ಧೂಳಿಡಿದ ಮೈಯ್ಯ ಬಿಡುಮುಡಿಯ ವಿಕೃತಿಯನೆಟ್ನದೆ | ಮಿಥಿಲೇಂದ್ರವಂತದೊಳ್ ಜನಿಸಿ ರಘುಕುಲದ ದಶ | ರಥನೃಪನ ಸೊಸೆಯಾಗಿ ತನಗೆ ಕಟ್ಟಡವಿಯೊಳ್ | ವ್ಯಧಿಸುವಂತಾಯ್ತಕಟ ವಿಧಿಯೆಂದು ಹಲುಬಿದಳ್ ಕಲ್ಮರಂ ಕರಗುವಂತೆ |೩೬|
ಕೇಣಮಂ ಬಿಟ್ಟಾತ್ಮಘಾತಕದೊಳೀ ಕ್ಷಣಂ | ಪ್ರಾಣಮಂ ತೊರೆದಪೆನೆ ಬಂದಪುದು ಗರ್ಭದಿಂ | ಭ್ರೂಣಹತ್ಯಾದೋಷಮೇಗೈವೆನಾರ್ಗೊರೆವೆನೆಂದೊಯ್ಯನೆದ್ದು ಬಳಿಕ | ಏಣಾಕ್ಷಿ ನಡೆದಳಡವಿಯೊಳುಪಲ ಕಂಟಕ | ಶ್ರೇಣಿಗಳ ಸೋಂಕಿ ಮೆಲ್ಲಡಿಗಳಿಂ ಬಸಿವ ನವ | ಶೋಣಿತಂ ನೆಲದೊಳ್ ಪೊನಲ್ವರಿಯಲರಸ ಕೇಳ್ ಪೆಣ್ಣೊಡಲ್ಪಿಡಿಯಬಹುದೆ ||೩೭||
ಅನ್ನೆಗಂ ಮಖಕೆ ಯೂಪವನರಸುತಾ ಬನಕೆ | ಸನ್ನು ತ ತಪೋಧನ ವಾಲ್ಮೀಕಿ ಮುನಿವರಂ | ತನ್ನ ಶಿಷ್ಯರ್ವೆರಸಿ ನಡೆತಂದು ಕಾಡೊಳೊರ್ವಳೆ ಪುಗಲ್ದೆಸೆಗಾಣದೆ || ಬನ್ನದಿಂ ಬಗೆಗೆಟ್ಟು ಪಾಡಳಿದು ಗ್ರೀಷ್ಮ ಋತು | ವಿನ್ನವೆದ ಕಾಂತಾರದಧಿದೇವಿ ತಾನೆನಲ್ | ಸನ್ನ ಗದ್ಗದಕಂಠೆಯಾಗಿ ರೋದಿಸುತಿರ್ದ ವೈದೇಹಿಯಂ ಕಂಡನು||೩೮||
ಆರಿವಳಿದೇತಕಿರ್ದ ಪಳೀ ವನಾಂತರದೊ | ಳಾರೈವೆನಿದನೆಂದು ನಡೆತಂದು ಕರುಣದಿಂ | ದಾರುಷಿ ನುಡಿಸಿದನೆಲೆ ತಾಯೆ ನೀನಾವಳೌ ಕಂಡ ಕುರುಪಾಗಿರ್ಪುದು || ಘೋರತರ ಗಹನಕೊರ್ವಳೆ ಬಂದೆಯೆಂತಕಟ | ಬೀರು ಹೇಳಾ ಹೆದರಬೇಡ ವಾಲ್ಮೀಕಿ ನಾಂ | ಭೂರಿಶೋಕಾರ್ತರಾಗಿರ್ದರಂ ಕಂಡು ಸುಮ್ಮನೆ ಪೋಪನಲ್ಲೆಂದನು||೩೯|
ಹರುಷಮೊತ್ತರಿಸಿದುದು ಶೋಕವಿಮ್ಮಡಿಸಿದುದು | ಬೆರಸಿದುದು ಲಜ್ಜೆ ಭೂಮಿಜೆಗಂದು ಗದ್ಗದ | ಸ್ವರದಿಂದ ಸೀತೆ ತಾಂ ಲೋಕಾಪವಾದಕಪರಾಧಿಯಲ್ಲದ ತನ್ನನು || ತರಣಿಕುಲಸಂಭವಂ ಬಿಟ್ಟನೆಂದೀವನದೊ | ಳಿರಿಸಿ ಪೋದಂ ಸುಮಿತ್ರಾತ್ಮಜಂ ಜೀವನಂ | ಪೊರೆಯವೇಳ್ಪುದೆ ಗರ್ಭಮೊಡಲೊಳಿಹುದೇಗೈವೆನೆಂದೆರಗಿದಳ್ ಮುನಿಪದದೊಳು||೪೦||
ದೇವಿ ಬಿಡು ಶೋಕಮಂ ಪುತ್ರಯುಗಮಂ ಪಡೆವೆ | ಭಾವಿಸದಿರಿನ್ನು ಸಂದೇಹಮಂ ಜನಕಂಗೆ | ನಾವನ್ಯರಲ್ಲ ನಮ್ಮಾ ಶ್ರಮಕೆ ಬಂದು ನೀಂ ಸುಖದೊಳಿರ್ದೊಡೆ ನಿನ್ನನು || ಅವಾವ ಬಯಕೆ ಯುಂಟೆಲ್ಲಮಂ ಸಲಿಸಿ ತಾ | ನೋವಿಕೊಂಡಿರ್ಪೆನಂಜದಿರೆಂದು ಸಂತೈಸಿ | ರಾವಣಾರಿಯ ರಾಣಿಯಂ ನಿಜತಪೋವನಕೆ ವಾಲ್ಮೀಕಿ ಕರೆತಂದನು||೪೧||
ಚಿತ್ರಮಯವಾಗಿ ಕಟ್ಟಿತು ಪರ್ಣಶಾಲೆ ಶತ | ಪತ್ರಲೋಚನೆಗೆ ಬಳಿಕಲ್ಲಿ ಋಷಿಪತ್ನಿಯರ | ಮಿತ್ರತ್ವಮಂ ತಳೆದು ವಾಲ್ಮೀ ಕಿಮುನಿಪನಾರೈಕೆಯಿಂ ಸೀತೆ ತನ್ನ 1 ಪುತ್ರೋದಯದ ಕಾಲಮಂ ನೋಡುತಿರ್ದಳ್ ಧ | ರಿತ್ರಿಯೊಳ್ ದೃಢಪತಿವ್ರತೆಯರ್ಗೆ ನಿರ್ಮಲ ಚ | ರಿತ್ರಮೆಂತಾದೊಡಂ ವಿಪರೀತವಾದಪುದೆ ಭೂಪಾಲ ಕೇಳೆಂದನು.||೪೨||
ಜಾತಿವೈರಂಗಳಿಲ್ಲದ ಪಕ್ಷಿಮೃಗದ ಸಂ | ಘಾತದಿಂ ಋತುಭೇದವಿಲ್ಲದ ಲತಾದ್ರುಮ | ವ್ರಾತದಿಂ ಪಗಲಿರುಳು ಶಂಕೆಯಿಲ್ಲದ ಪೂ ಗೊಳಂಗಳ ವಿಕಾಸದಿಂದೆ || ಶೀತೋಷ್ಣದಾಸರಿಲ್ಲದ ಸುಸ್ಥಳಂಗಳಿಂ | ಪ್ರೀತಿವಿರಹಿತ ದುಃಖಸುಖದ ಜಂಜಡವಿಲ್ಲ | ದಾ ತಪೋವನದೊಳಗೆ ಋಷಿವಧುಗಳೊಡನೆ ವೈದೇಹಿ ಪದುಳದೊಳಿರ್ದಳು[೪೩]|
ಮುನಿವಟುಗಳೆಡೆಯಾಡಿ ಪರಿಚರ್ಯೆಯಂ ಮಾಳ್ಪ | ರಿನಿದಾದವಸ್ತುವಂ ಋಷಿವಧುಗಳಿತ್ತಪರ್ | ತನತನಗೆ ಸತ್ಕರಿಸುವರ್ ತಾಪಸೋತ್ತಮರ್ ವಾಲ್ಮೀಕಿ ಸಾದರದೊಳು || ದಿನದಿನಕೆ ಬೇಕಾದ ಬಯಕೆಯಂ ಸಲಿಸುವಂ | ಬನದೊಳಿಂತಿರುತಿರ್ದಳವನಿಸುತೆ ರಾಘವೇಂ | ದ್ರನ ಚರಣಕಮಲಮಂ ಧ್ಯಾನಿಸುತೆ ಮರೆದಖಿಲ ರಾಜವಿಭವ ಶ್ರೀಯನು ॥೪೪|
ಅವನಿಜೆಯ ಗರ್ಭಕ್ಕೆ ತುಂಬಿದುದು ನವಮಾಸ | ದವಧಿ ಬಳಿಕೊಂದಿರುಳ ಶುಭಲಗ್ನದೊಳ್ ಪಡೆದ | ಳವಳಿಮಕ್ಕಳನುಪಚರಿಸೆ ವಿದಗ್ದಾಂಗನೆಯರಾ ನೂತಿಕಾಗೃಹದೊಳು || ತವಕದಿಂದೈ ತಂದು ಮುನಿವೆಟುಗಳುಸಿರಲು | ತ್ಸವದಿಂದೆ ವಾಲ್ಮೀಕಿಮುನಿ ಬಂದು ನೋಡಿ ಕುಶ | ಲವದಿಂದೆ ಸೇಚನಂಗೈದು ಕುಶಲವರೆಂದು ಪೆಸರಿಟ್ಟನರ್ಭಕರ್ಗೆ||೪೫||
ದೆಸೆಗ ಳ್ ಪ್ರಸನ್ನತೆಯೊಳೆಸೆದ ವಾಗಸದೊಳುಡು | ವಿಸರಂಗಳೊಪ್ಪಿದುವು ಪೊಸಗಂಪಿಡಿದು ಗಾಳಿ | ಪಸರಿಸಿತು ತವೆ ಸುಪ್ರದಕ್ಷಿಣದೊಳುರಿದುದಗ್ನಿ ಜ್ವಾಲೆ ಕಡಲುಕ್ಕಿತು || ವಸುಧೆ ನಲಿದುದು ತಿಳಿದು ಪರಿದುವು ನದಿಗಳೆಂದು | ಶಶಿರವಿಗಳುದಯಿಸಿದರೇಕಕಾಲದೊಳೆನಲ್ । ಶಿಶುಗಳಾಶ್ರಮದ ಮುನಿಗಳ ಕ ಣ್ಗೆ ಕಾಣಿಸಿದರೊಸಗೆ ಮೂಜಗಕಾದುದು ॥೪೬॥
ಬಾಲದೊಡಿಗೆಗಳೆಲ್ಲಮಂ ತುಡಿಸಿ ನೋಡುವಂ | ಬಾಲಲೀಲೆಗಳನಾಡಿಸಿ ಮುದ್ದು ಮಾಡುವಂ | ಬಾಲಕರ್ಗಿನಿದಾದ ವಸ್ತುವಂ ಕೊಡುವಂ ತನ್ನ ತೊಡೆಮಡಿಲೊಳಿಟ್ಟು || ಲಾಲಿಸುವನಾವಗಂ ಜಪ ಸಮಾಧಿ ತಪಗಳ | ಕಾಲಮಂ ಬಗೆಯದೆ ಮುನೀಶ್ವರಂ ಕುಶಲವರ | ಮೇಲಣಕ್ಕರೊಳಿರ್ದನಾಶ್ರಮದೊಳುತ್ಸವಂ ಪೆರ್ಚಿದುದು ದಿನದಿನದೊಳು ||೪೭||
ದಶರಥ ನೃಪಾಲ ಸುತರಮನೆಯ ಬೆಳವಿಗೆಯ | ಶಿಶುಗಳ್ಗೆ ಕಾಂತಾರವಾಸದೊಳ್ ನವೆವ ಕ | ರ್ಕಶವಿದೆತ್ತಣದೆಂದು ಮಿಥಿಲೇಂದ್ರ ಸಂಭೂತೆ ಚಿತ್ತದೊಳ್ ಮರುಗದಂತ|| ವಿಶದಮಾನಸನಾಗಿ ವಾಲ್ಲಿ ಕಿಮುನಿವರಂ । ಕುಶಲವರನೋವಿದಂ ವಿವಿಧವೈಭವದಿಂದೆ | ಶಶಧರನ ಕಳೆಯ ತೆರದೊಳಾರಾಘವಾತ್ಮಜರ್ ದಿನದಿನಕೆ ವರ್ಧಿಸಿದರು ||೪೮||
ಚೆಲ್ವೆರಡುರೂಪಾ ಯ್ತೊ ವಿಮಲತೆ ಕವಲ್ತುದೋ | ಗೆಲ್ವದೆಸೆ ಗೆಳೆಗೊಂಡಡರ್ದಪುದೊ ಕೀರ್ತಿಯ ಮ | ಡಲ್ವಸುಧೆಯೊಳ್ ದ್ವಿಧಾಕೃತಿಯಾಯ್ತೊ ಸಂತಸದ ಬೆಳಸಿನ ಬೆಳೆದ ಪಸುಗೆಯೊ || ಸಲ್ಪ ಕುಲದೇಳ್ಗೆಯ ಸಸಿಯ ಕೋಡೊ ಮೋಹನದ | ಬಲ್ಪೊನಲ ಸವಡಿಯೋ ಸೊಗಸಿನವಳಿಯ ಫಲವೊ | ಸೊಲ್ಗೊಡಿದು ಪೊಸತೆನಲ್ ಕುಶಲವರ್ ಕುಶಲದಿಂ ಕಣ್ಗೆಸೆದರಾಶ್ರಮದೊಳು||೪೯|
ತೊಟ್ಟಿಲೊಳ' ನ ಲಿವ ನೆವವಿಲ್ಲದೆ ನಗುವ ಬಾಯ್ಗೆ | ಬೆಟ್ಟಿಕ್ಕಿ ಪೀರ್ವ ಪಸಿದೊಡೆ ಚೀರ್ವ ಮೊಲೆಯುಂಬ| ಪಟ್ಟಿರಿಸೆ ಪೊರಳ್ವಂಬೆಗಾಲಿಡುವ ಮೊಳೆವಲ್ಲ ಜೊಲ್ಲುಗೆ ತೊದಳಿಸಿ ನುಡಿವ|| ದಟ್ಟಡಿಯಿಡುವ ನಿಲ್ಪ ತೊಡರ್ವ ಬೇಡುವ ಪರಿವ | ಬಟ್ಟೆಯೊಳೊರಗುವ ಕಾಡುವ ಕುಣಿವ ಲೀಲೆಯಂ | ನೆಟ್ಟನೆ ಕುಮಾರಕರ್ ತೋರಿದರ್ ಜಾನಕಿಗೆ ವಾಲ್ಮೀಕಿ ಮುನಿವರಂಗೆ ||೫೦||
ಬಿಡದೆ ಪಾ ಲ್ಪೀರ್ವುದಂ ಕಳೆಯೊರೋರಗೆ ಮಕ್ಕ | ಳೊಡನೆ ಧೂಳಾಟ ಮೊದಲಾದ ಲೀಲೆಗಳ ಪರಿ | ವಿಡಿಯಿಂದೆಸೆವ ಕುಮಾರರ್ಗೆ ಮುನಿಪತಿ ಚೌಲಕರ್ಮಂಗಳಂ ಮಾಡಿಸಿ || ತೊಡಗಿಸಿದನಕ್ಷರಾಭ್ಯಾಸಮಂ ಬಳಿಕ ನಡೆ | ನುಡಿಯ ಜಾ ಣ್ಮೆಯ ಕಲೆಯ ರಾಜಲಕ್ಷಣದ ಚೆ | ಲ್ವಿಡಿದ ಲಲಿತಾಂಗದಿಂ ಕುಶಲವರ್ ಕ.ಶಲ ವರ್ಧನರಾಗಿ ರಂಜಿಸಿದರು ॥೫೧||
ಶ್ರೀಮಾಧವನ ಮನೋಹರದ ಸೌಂದ ರ್ಯ ಮಂ | ಕಾಮನ ಜನಕನ ಕಮನೀಯ ಲಾವಣ್ಯಮಂ | ರಾಮ ಚಂದ್ರನ ರಾಮಣೀಯಕದ ರೂಪಮಂ ತಾಳ್ತೊಗೆದ ಸುಕುಮಾರರ || ಕೋಮಲಾಂಗದ ಸೊಬಗನಭಿವರ್ಣಿಸುವರುಂಟೆ | ಭೂಮಿಯೊಳ: ಚೆಲ್ವಿಗೆ ವಸಂತನಂ ಮದನನಂ | ಸೋಮನಂ ಪಡಿಯಿಡಲ್ ಪುನರುಕ್ತ ಮಪ್ಪುದೆನೆ ಕುಶಲವರ್ ಕ ಣ್ಗೆಸೆದರು ॥೫೨||
ದ್ವಾದಶಾಬ್ದದ ಮೇಲೆ ಮುನಿಪಂ ಕುಮಾರರ್ಗೆ | ವೇದೋಕ್ತದಿಂದಮುಪನಯನಂಗಳಂ ಮಾಡಿ | ಭೂದೇವನಿಕರಕೆ ವಸಿಷ್ಠನೊಳ್ ವರಕಾಮಧೇನುವಂ ಬೇಡಿ ತಂದು || ಆದರಿಸೆ ಭೋಜನ ಸುಗಂಧಾಕ್ಷತೆಗಳಿಂದ | ಮಾದುದತಿವಿಭವದಿಂದುತ್ಸವಂ ಬಳಿಕ ತರು | ಣಾದಿತ್ಯ ಸನ್ನಿಭರ್ ತೊಳಗಿದರ್ ಜಾನಕಿಯ ಚಿತ್ತಕಾನಂದಮಾಗೆ||೫೩||
ಸರ್ವಕರ್ಮದ ವಿಧಿಯನ ಖಿಳ ನಿಗಮದ ಕಡೆಯ | ನುರ್ವ ಶಾಸ್ತ್ರದ ಬಗೆಯನುದಿತಧದ ನೆಲೆಯ | ನುರ್ವಿಶ ನೀತಿಗಳ ನಿಶ್ಚಯವನೈದೆ ಸಾಂಗೋಪಾಂಗವಾಗಿ ಬರಿಸಿ|| ತರ್ವಾಯೊಳಾ ಕುಮಾರರ್ಗೆ ಮುನಿನಾಥಂ ಧ|ನುರ್ವೆದಮಂ ಶಿಕ್ಷೆಗೈದು ರಾಮಾಯಣವ | ನಿರ್ವರುಂ ಪಾಡುವಂತೋದಿಸಿದನತಿಮಧುರಭಾವದಿಂ ತುದಿ ಮೊದ ಲ್ಗೆ ||೫೪||
ಸೀತೆ ನಲಿವಂತೆ ವಾಲ್ಮೀಕಿ ಮೆಚ್ಚುವ ತೆರದೊ |
ಳಾತಪೋವನದ ಮುನಿಗಣಮ್ಮೆದೆ ಕೊಂಡಾಡ ಲಾ ತರುಣರೀ ರ್ವರುಂ ಮಧುರವೀಣೆಗಳ ಮೇಳಾಪದಾಲಾಪಂಗಳ|| ಗೀತದೊಳ್ ಸಂಕೀರ್ಣ ಶುದ್ದ ಸಾಳಗದಿಂ ರ |
ಲಸಾತಿಶಯಮನೆ ಪಾಡುವರ್ ದೇವನಗರೀ ನಿ।ಕೇತನ ಶ್ರೀಪತಿಯ ಚಾರಿತ್ರಮಪ್ಪ ರಾಮಾಯಣವನನುದಿನದೊಳು||೫೫||
![]() |
ಜೈಮಿನಿ ಭಾರತ 39
ಇಪ್ಪತ್ತನೆಯ ಸಂಧಿ ಮೊದಲಭಾಗ
ಪದ್ಯ 1 ರಿಂದ 30
ಲವನ ಸಾಹಸ
ನಿರೂಪಣೆ: ಸುಬ್ಬುಲಕ್ಷ್ಮಿ
ಸಂಕ್ಷಿಪ್ತ ರೂಪ
ವಾಲ್ಮೀಕಿ ಮಹರ್ಷಿಗಳು ಮಕ್ಕಳಿಗೆ ಸಮಸ್ತ ಕಲೆಗಳನ್ನೂ ಕಲಿಸಿದರು. ಇತ್ತ ಅಯೋಧ್ಯೆಯಲ್ಲಿ ರಾಮನು ರಾವಣನನ್ನು ಕೊಂದದ್ದರಿಂದ ಬಂದ ಬ್ರಹ್ಮಹತ್ಯಾ ದೋಷ ನಿವಾರಣೆಗಾಗಿ ಅಶ್ವಮೇಧಯಾಗವನ್ನು ಮಾಡಲು ನಿಶ್ಚಯಿಸಿ ಮುನಿಗಳನ್ನು ಕರೆಸಿದನು. ನಿಜಪತ್ನಿ ಇರಬೇಕು ಎನ್ನಲು ಸುವರ್ಣದ ಸೀತೆಯನ್ನು ಮಾಡಿಸಿದನು. ಅಶ್ವವನ್ನು ಶತ್ರುಘ್ನನೊಂದಿಗೆ ಕಳಿಸಿದನು. ಯಾಗಶಾಲೆಯು ನಿರ್ಮಾಣವಾಯಿತು.
ಕುದುರೆಯು ನಡೆಯುತ್ತ ಬಂದು ವಾಲ್ಮೀಕಿಯ ಆಶ್ರಮವನ್ನು ಪ್ರವೇಶಿಸಿತು. ಅಲ್ಲಿಗೆ ತನ್ನ ಸ್ನೇಹಿತರೊಂದಿಗೆ ಬಂದ ಲವ ಅದನ್ನು ನೋಡಿ, ಅದರ ಹಣೆಯಲ್ಲಿದ್ದ ಪಟ್ಟಿಯ ಬರಹ ಓದಿ ಕೋಪದಿಂದ ಸಂಗಾತಿಗಳು ಬೇಡವೆಂದರೂ ಕೇಳದೆ ಕುದುರೆಯನ್ನು ತನ್ನ ಉತ್ತರೀಯದಿಂದ ಒಂದು ಬಾಳೆಗಿಡಕ್ಕೆ ಕಟ್ಟಿ ಹಾಕಿ ಯುದ್ಧಕ್ಕೆ ಸನ್ನದ್ಧನಾಗಿ ನಿಂತನು. ರಾಮನೊಬ್ಬನೇ ಶೂರನೆಂದು ತಾನೇಕೆ ಒಪ್ಪಿಕೊಳ್ಳಲಿ ಎಂದು ಅವನ ಮತ.
ಕಾವಲ ಭಟರು ಬಂದು ಹುಡುಗರ ಆಟವೆಂದು ಅವರನ್ನು ಗದರಿಸಿದಾಗ ಬೆದರಿದ ವಟುಗಳು ನಾವಲ್ಲ ಇವನು ಎಂದು ಲವನ ಕಡೆ ಕೈತೋರಿದರು. ಲವನು ಕುದುರೆಯನ್ನು ಬಿಡಲು ಒಪ್ಪಲಿಲ್ಲ ಬದಲಿಗೆ ತನ್ನ ಬಾಣಗಳ ರುಚಿ ತೋರಿಸಿದನು. ಭಟರ ಕೈಗಳನ್ನು ಕತ್ತರಿಸಿದನು. ಕದನ ಮೊದಲಾಯಿತು.
ತುರಗ, ರಥ, ಪದಾತಿಗಳು ಬಾಲಕನ ಮೇಲೆ ಕವಿದರೂ ಒಬ್ಬನೇ ಎದುರಿಸಿದನು. ತನ್ನ ಸೈನ್ಯದ, ದಳಪತಿಯ ಸೋಲನ್ನು ಕಂಡ ಶತ್ರುಘ್ನನು ಕೋಪದಿಂದ ಕಿಡಿಕಿಡಿಯಾಗಿ ಬಂದು ನೀನು ಇನ್ನೂ ಹಸುಳೆ, ಬಿಡುವೆನು ಹೋಗು ಎನ್ನಲು ಲವನ ಬಾಣಗಳು ಬಂದು ಮುತ್ತಿದವು.
ತರಳನ ಪರಾಕ್ರಮವನ್ನು ಕಂಡು ಮೆಚ್ಚಿದನು ಶತ್ರುಘ್ನ. ಆದರೆ ತನ್ನ ಬಾಣಗಳನ್ನು ಹೂವಿನ ಕೋಲುಗಳೆಂಬಂತೆ ಎದುರಿಸುತ್ತಿದ್ದ ಲವನ ಮೇಲೆ ದಿವ್ಯಾಸ್ತ್ರಗಳನ್ನು ಪ್ರಯೋಗಿಸಲು ತನ್ನ ಮಾತೆಯನ್ನು ಸ್ಮರಿಸಿಕೊಂಡು ಲವ ಅವುಗಳನ್ನೂ ಎದುರಿಸಿದನು. ಆಶ್ಚರ್ಯ ದಿಂದ ಶತ್ರುಘ್ನನು ಲವನ ಇಕ್ಕೆಡೆಗಳಲ್ಲಿಯೂ ಎಡೆಬಿಸದೆ ಬಾಣಗಳನ್ನು ಪ್ರಯೋಗಿಸಿದನು. ಅದರಲ್ಲಿ ಅರ್ಧ ಭೂಮಿಗೆ ಬಿದ್ದವು. ಉಳಿದವು ಲವನ ಕಾರ್ಮುಕವನ್ನು ಕತ್ತರಿಸಿ ಅವನ ಮೈಯಲ್ಲಿ ನೆಟ್ಟವು. ಲವನು ಮೈಮರೆತನು.
ಅವನ ಬಳಿಗೆ ಬಂದ ಶತ್ರುಘ್ನ ಅವನಲ್ಲಿ ರಾಮನ ಹೋಲಿಕೆಯನ್ನು ಗಮನಿಸಿ ಅಚ್ಚರಿ ತಾಳಿದನು. ಮೋಹವು ಆವರಿಸಿತು. ಕುದುರೆಯೊಂದಿಗೆ ಲವನನ್ನು ರಥದಲ್ಲಿ ಕರೆದುಕೊಂಡು ಹೊರಟನು.
ವಟುಗಳು ಓಡಿ ಬಂದು ಸೀತೆಗೆ ಎಲ್ಲ ವೃತ್ತಾಂತ ಹೇಳಿದರು. ಅವಳು ಬೆಚ್ಚಿದಳು. ಹಲುಬಿದಳು. ತನ್ನ ಮಗನ ಪರಾಕ್ರಮ ಗುಣ ಶೀಲಗಳನ್ನು ಹೇಳಿಕೊಳ್ಳುತ್ತ ಏನಾದನೋ ಎಂದು ಶೋಕಿಸಿದಳು.
ಅಷ್ಟರಲ್ಲಿ ಕುಶನು ಅಲ್ಲಿಗೆ ಬಂದನು. ತಾಯಿ ಅಳುತ್ತಿರುವುದನ್ನು ಕಂಡು ವಿಚಾರಿಸಲು ಅವನಿಗೆ ಎಲ್ಲ ವಿಷಯವನ್ನು ತಿಳಿಸಿದರು ಅದಕ್ಕೆ ಕುಶನು ಕೋಪಗೊಂಡು ಶೋಕವೇಕೆ ಇದಕ್ಕೆ ಎನ್ನುತ್ತ ಆಯುಧಗಳೊಂದಿಗೆ ಸಿದ್ಧನಾದನು. ಸೀತೆಯು ಅವನನ್ನು ಹರಸಿ ಬೀಳ್ಕೊಟ್ಟಳು.
ವೇಗದಿಂದ ಶತ್ರುಘ್ನನನ್ನು ಹಿಂಬಾಲಿಸಿ ಬಂದ ಕುಶನು ನಿಲ್ಲು ನಿಲ್ಲು ಎಂದು ಕೂಗಿ ಯುದ್ಧಕ್ಕೆ ಆಹ್ವಾನಿಸಿದನು. ಶತ್ರುಘ್ನನ ಸೇನೆಯು ಮತ್ತೆ ತಿರುಗಿತು. ಕುದುರೆಸಹಿತ ಲವನನ್ನು ಬಿಡು ಎಂದು ಕುಶನು ಕೂಗುತ್ತ ಬಾಣ ಪ್ರಯೋಗ ಮಾಡತೊಡಗಿದನು.
ದಳಪತಿಯನ್ನು ಇವನ ಮೇಲೆ ಕಳಿಸಲು ಪರಾಕ್ರಮದಿಂದ ಹೋರಾಡಿ ಅವನನ್ನು ಸಾರಥಿ ಸಹಿತ ಕೊಂದನು. ಆಗ ಅವನ ತಮ್ಮನು ಬರಲು ಅವನನ್ನೂ ಹಿಮ್ಮೆಟ್ಟಿಸಿದನು. ಅವನ ಹಸ್ತವನ್ನು ಕತ್ತರಿಸಲು ಎಡಗೈಯಿಂದಲೇ ಕಾದಲು ಬಂದ ಅವನನ್ನು ಕುಶನು ಬೆದರದೆ ಅವನ ತೊಡೆಗಳನ್ನು ಕತ್ತರಿಸಿದನು. ಅವನ ಶಿರವು ಶಿವನ ರುಂಡಮಾಲೆಗೆ ಸೇರಿತು. ಕುಶನನ್ನು ಎದುರಿಸಲು ಸ್ವತ; ಶತ್ರುಘ್ನನೇ ಬರಬೇಕಾಯಿತು. ಕುಶನ ಬಾಣಗಳ ಧಾಳಿಗೆ ಅವನ ಆಯುಧಗಳು ಸೋತವು. ರಥದಿಂದ ಭೂಮಿಗೆ ಬಿದ್ದನು ಶತ್ರುಘ್ನ.
ಇಪ್ಪತ್ತನೆಯ ಸಂಧಿ ಮೊದಲ ಭಾಗ
ಪದ್ಯ 1 ರಿಂದ 30
ಸೂಚನೆ : ರಘುವರನ ತುರಗಮೇಧಾಧ್ವರದ ಕುದುರೆಯನ | ಲಘು ಪರಾಕ್ರಮಿ ಲವಂ ತರಳತನದಿಂ ಕಟ್ಟ ! ಲಘಟತಮೆನಿಸಿತು ಶತ್ರುಘ್ನ ಲಕ್ಷ್ಮಣರ ತಳತಂತ್ರಕ್ಕೆ ಬಡಿಸಿ ಕೊಳಲು |
ಹಿಮಕರಕುಲೇಂದ್ರ ಕೇಳ್ ವಾಲ್ಮೀಕಿ ಮುನಿಪನಾ । ಶ್ರಮದೊಳ್ ಸಮಸ್ತ ಕಲೆಗಳನರಿದು ಕಾಕ ಪ | ಕ್ಷಮನಾಂತು ಜಾನಕಿಯ ಶುಶ್ರೂಷೆಯೊಳ್ ಸಂದು ಋಷಿಯ ಚಿತ್ತಕ್ಕೆ ಬಂದು|| ಯಮಳರಿರೆ ಕಂಡು ಸಂಪ್ರೀತಿಯಂ ತಾಪಸೋ| ತ್ತಮನಿತ್ತನಿಷುಚಾಪ ಚರ್ಮ ಖಡ್ಗಂಗಳಂ | ರಮಣೀಯ ಕವಚ ಕುಂಡಲ ಕಿರೀಟಂಗಳಂ ತನ್ನಯ ತಪೋಬಲದೊಳು ॥೧||
ಅವರ್ಗಳಂತಿರಲಯೋದ್ಯಾಪುರದೊಳಿತ್ತ ರಾ| ಘವನ ಖಿಳ ಧರಣಿಯಂ ಪಾಲಿಸುತ ಸೌಖ್ಯಾನು | ಭವದೊಳೊಂದಿಸದೆ ರಾವಣವಧೆಯೊಳಂದು ಬಂದಾ ಬ್ರಹ್ಮಹತಿ ತನ್ನನು || ಅವಗಡಿಸಲದಕೆ ನಿಷ್ಕೃತಿ ಯಾವುದೆಂದು ಸಾ | ರುವ ನಿಗಮದರ್ಥಮಂ ತಿಳಿದು ಹಯಮೇಧನಂ | ತವೆ ನೆಗ ಳ್ಚುವನಾಗಿ ನಿಶ್ಚೈಸಿ ಕರೆಸಿದಂ ವರವಸಿಷ್ಠಾದಿಗಳನು||೨||
ವಾಮದೇವಾತ್ರಿ ಗಾಲವ ಗುರು ವಸಿಷ್ಠ ವಿ । ಶ್ವಾಮಿತ್ರರಂ ಕರೆಸಿ ಹಯಮೇಧಲಕ್ಷಣವ | ನಾ ಮುನಿಗಳಂ ಕೇ ಳ್ದನುಜ್ಞೆಗೊಳಲವರಿದಕೆ ನಿಜಪತ್ನಿ ವೇಳ್ವುದೆನಲು || ಹೇಮ ನಿರ್ಮಿತವಾದ ಜಾನಕಿಯನಿರಿಸಿಕೊಂ | ಡೀ ಮಹಾಯಜ್ಞಮಂ ನಡೆಸುವೆಂ ತಾನೆಂದು | ರಾಮಚಂದ್ರಂ ನಿಖಿಳಋಷಿಗಳನೊಡಂಬಡಿಸಿ ಶಾಲೆಯಂ ಮಾಡಿಸಿದನು||೩||
ಬಳಿಕ ವೇದೋಕ್ತ ಪ್ರಕಾರದಿಂ ದೀಕ್ಷೆಯಂ| ತಳೆದು ರಘುನಾಥಂ ತುರಂಗಮಂ ಪೂಜೆ ಗೈ । ದಿಳೆಯೊಳ್ ಚರಿಸಲದರ ಪಣೆಗೆ ತನ್ನಗ್ಗಳಿಕೆಯಂ ಬರೆದ ಪತ್ರಿಕೆಯನು || ಆಳವಡಿಸಿ ಕೂಡೆ ಮೂರ ಕ್ಷೌಹಿಣೀ ಮೂಲ | ಬಲಸಹಿತ ವೀರಶತ್ರುಘ್ನನಂ ಕಾವಲ್ಗೆ | ಕಳುಹಿಬಿಡಲಾ ಹಯಂ ತಿರುಗುತಿರ್ದುದು ಧರೆಯಮೇಲಖಿಳ ದೆಸೆದೆಸೆಯೊಳು||೪||
ಬ ಲ್ಗಯ್ಯ ನೃಪರಂಜಿ ತಡೆಯದೆ ರಘದ್ರಹನ | ಸೊಲ್ಗೇಳಿ ನಮಿಸಲಿಳೆಯೊಳ್ ಚರಿಸುತದ್ವರದ | ನಲ್ಗುದುರೆ ಬಂದು ವಾಲ್ಮೀಕಿಯ ನಿಜಾಶ್ರಮದ ವಿನಿಯೋಗದುಪವನದೊಳು || ಪುಲ್ಗಳ ಪನುರ್ಗೆಳಸಿ ಪೊಕ್ಕೊಡಾ ತೋಟಗಾ | ವಲ್ಗೆ ತನ್ನೊಡನಾಡಿಗಳ ಕೂಡಿ ಲೀಲೆ ಮಿಗೆ | ಬಿಲ್ಗೊಂಡು ನಡೆತಂದವಂ ಕಂಡನರ್ಚಿತ ಸುವಾಜಿಯಂ ವೀರ ಲವನು ||೫||
ಎತ್ತಣ ತುರಂಗವಿದು ಪೊಕ್ಕು ಪೂದೋಟಮಂ | ತೊತ್ತಳದುಳಿದುದು ವಾಲ್ಮೀಕಿಮುನಿನಾಥ ನೇ | ಪೊತ್ತು ಮಾರೈವುದೆಂದೆನಗೆ ನೇಮಿಸಿ ಪೋದನ ಬ್ಧಿಪಂ ಕರೆಸಲಾಗಿ || ಮತ್ತೆ ವರುಣನ ಲೋಕದಿಂ ಬಂದು ಮುಳಿದವನೆ | ನುತ್ತ ಹಯದೆಡೆಗೆ ನಡೆತಂದು ನೋಡದರ | ನೆತ್ತಿಯೊಳ್ ಮೆರೆವ ಪಟ್ಟದ ಲಿಖಿತಮಂ ಕಂಡು ಲವನೋದಿಕೊಳುತಿರ್ದನು ||೬||
ಉರ್ವಿಯೊಳ್ ಕೌಸಲ್ಯ ಪಡೆದ ಕುವರಂ ರಾಮ | ನೊರ್ವನೇ ವೀರನಾತನ ಯಜ್ಞ ತುರಗವಿದು | ನಿರ್ವಹಿಸಲಾರ್ಪರಾರಾದೊಡಂ ತಡೆಯಲೆಂದಿರ್ದ ಲೇಖನವನೋದಿ || ಗರ್ವಮಂ ಬಿಡಿಸದಿರ್ದೊಡೆ ತನ್ನ ಮಾತೆಯಂ | ಸರ್ವಜನಮುಂ ಬಂಜೆಯೆನ್ನದಿರ್ದಪುದೆ ತನ | ಗುರ್ವತೋಳಳವೇತಕೆಂದು ಸಲೆ ವಾಸಿಯಂ ತೊಟ್ಟು ಲವನುರಿದೆದ್ದನು ॥೭॥
ತೆಗೆದುತ್ತರೀಯಮಂ ಮುರಿದು ಕುದುರೆಯ ಗಳಕೆ | ಬಿಗಿದು ಕದಳೀದ್ರುಮಕೆ ಕಟ್ಟ ಲ್ಕೆ ಮುನಿಸುತರ್ ! ಮಿಗೆ ನಡುಗಿ ಬೇಡಬೇಡರಸುಗಳ ವಾಜಿಯಂ ಬಿಡು ಬಡಿವರೆಮ್ಮ ನೆನಲು || ನಗುತೆ ಪಾರ್ವರ ಮಕ್ಕಳಂಜಿದೊಡೆ ಜಾನಕಿಯ | ಮಗನಿದಕೆ ಬೆದರುವನೆ ಪೋಗಿ ನೀವೆಂದು ಲವ | ನಗಡುತನದಿಂದೆ ಬಿ ಲ್ದಿರುವನೇರಿಸಿ ತೀಡಿ ಜೇಗೈದು ನಿಂತಿರ್ದನು||೮||
ಕುದುರೆಗಾವಲ ಸುಭಟರನಿತರೊಳೊದಗಿ ಬಂದು | ಕದಳೀದ್ರುಮಕೆ ಕಟ್ಟಿದ ತುರಂಗಮಂ ಕಂಡು | ಸದಮಲ ಬಹ್ಮಚಾರಿಗಳನಾರ್ಭಟಿಸಿ ವಾಜಿಯನೇಕೆ ಬಿಗಿದಿರೆನಲು || ಬೆದರಿ ನಾವಲ್ಲವಂ ಬೇಡಬೇಡೆನೆ ಬಂಧಿ । ಸಿದನೆಂದು ಲವನಂ ಕರಾಗ್ರದಿಂ ತೋರಿಸಿದ | ರದಟರೀತಂ ತರಳ ನರಿಯದೆಸೆಗಿದನೆಂದು ಬಿಡಹೇಳಿ ಗರ್ಜಿಸಿದರು||೯||
ವಿಕ್ರಮವಿದೇಕೆ ಬಿಡೆನಪ್ಪಮಂ ಮೇಟ್ಟಿಲು | ಪಕ್ರಮಿಸಿದವರ್ಗಳ ಕರಮನರಿವೆನಲವರ | ತಿಕ್ರಮಿಸಿ ವಾಜಿಯಂ ಬಿಡುವೊಡೈ ತರಲವರ ಕೈಗಳಂ ಕೋಪದಿಂ || ವಕ್ರಮಿಲ್ಲದೆ ಕೋಲ್ಗ ಳಿಂದೆಚ್ಚು ಕಡಿದೊಡನೆ | ತಕ್ರನದ್ರಿಯ ಮೇಲೆ ಮಳೆಗರೆವೊಲಾ ಸೈನ್ಯ | ಚಕ್ರಮಂ ಮುನುಕಿದಂ ವೀರ ಲವನಾಕ್ಷಣದೊಳೇನೆಂಬೆನದ್ಭುತವನು | ೧೦ ||
ಬಾಲಕನ ಮೇಲೆ ಕವಿದುದು ಬಳಿಕ ಮುಳಿದು ಹಯ | ಪಾಲಕ ಬಲು ಕರಿ ತುರಗ ರಥ ಪದಾತಿಗಳ | ಜಾಲಕವನೋರ್ವನೆನ್ನದೆ ಬಾಣ ಪರಶು ತೋಮರ ಶಕ್ತಿ ಸುರಗಿಗಳೊಳು || ಕಾಲಕ ಖಿಳ ಪ್ರಾಣಿಗಳನೈದೆ ಸಂಹರಿಪ | ಶೂಲಕರನೆನೆಲವಂ ಕೊಲುತಿರ್ದನನಿಬರಂ | ಕೋಲ ಕಡುವಳೆಗರೆದು ಮುನಿಪನಿತ್ತಕ್ಷಯ ನಿಷಂಗಮೆಸೆದಿರೆ ಬೊನ್ನೊಳು ||೧೧||
ಸಂಖ್ಯೆಯಿಲ್ಲದೆ ಮೇಲೆ ಬೀ ಳ್ವ ಕೈದುಗಳೆಲ್ಲ | ಮಂ ಖಂಡಿಸುತ್ತೊಡನೆ ಮುತ್ತಿದರಿ ಚತುರಂಗ | ಮಂ ಖಾತಿಯಿಂದ ಸಂಹರಿಸುತೊಂದೊಂದು ರಿಪುದಾಣಕೈದಂಬುಗಳನು || ಪುಂಖಾನುಪುಂಖದಿಂದಿಸುವ ಬಾಲಕನಿಸುಗೆ | ಯಿಂ ಖಿಲಪ್ರಾಯವಾಗಿರ್ದ ನಿಜಬಲಜಾಲ | ಮಂ ಖರಾಂತಕನನುಜನೀಕ್ಷಿಸಿ ಕನ ಲ್ದೇರಿದಂ ಮಹಾಮಣಿರಥವನು||೧೨||
ದುರಿತ ಗಣಮಿರ್ದಪುದೆ ಗೌತಮಿಯೊಳಾ ಳ್ದಂಗೆ | ಪರಮಯೋಗಿಗೆ ಭವದ ಬಂಧನಂ ಬಂದಪುದೆ | ಪರಸೈನ್ಯದುರುವೆ ರಘುಕುಲಜರ್ಗೆ ತೋರುವುದೆ ಪೇಳವನಿಪಾಲತಿಲಕ || ತರಳನಾದೊಡೆ ಲವಂ ಬೆದರುವನೆ ನಿಮಿಷದೊಳ್ | ಪರಿಗಡಿದನನಿತು ಚತುರಂಗಮಂ ಶತ್ರುಘ್ನ | ನುರವಣಿಸೆ ತಡೆದನೆರಗುವ ಸಿಡಿಲ ಗರ್ಜನೆಗೆ ಮಲೆವ ಮರಿಸಿಂಗದಂತೆ | ೧೩ ||
ಒತ್ತಿಬಹ ಶತ್ರುಘ್ನ ನುರುಬೆಗೆ ಲವಂ ತನ್ನ | ತತ್ತದೊಳ್ ಮಹೇಶಮಂತ್ರಮಂ ಸ್ಮರಿಸುತ್ತೆ | ಮತ್ತೆ ನಿರ್ಭಯನಾಗಿ ಮಾರಾಂತನಾತನೆಲನೆಲವೊ ನೀಂ ಪಸುಳೆ ನಿನಗೆ || ತೆತ್ತಿಗರದಾರಕಟ ಸಾಯದಿರ್ ಪೋಗೆನುತೆ | ಹತ್ತು ಶರದಿಂದೆಕ್ಕೊಡವನ ಬಾಣಂಗಳಂ | ಕತ್ತರಿಸಿ ಕೂಡೆ ಭರತಾನುಜನ ಕಾರ್ಮುಕದ ಹೆದೆಯನಿಕ್ಕಡಿಗೆಯ್ದನು || ೧೪||
ತರಳನ ಪರಾಕ್ರಮಕೆ ಮೆಚ್ಚಿದಂ ಮತ್ತೊಂದು | ತಿರುವನಳವಡಿಸಿದಂ ಕಾರ್ಮುಕಕೆ ಶತ್ರುಘ್ನ | ನಿರದೆ ಕ ಕಣೆಮೂರರಿಂ ಬಾಲಕನ ಪಣೆಯನೆಕ್ಕೊಡೆ ನಗುತೆ ಪರಿಮಳಿಸುತೆ || ವಿರಹಿಗಳನಂಜಿಸುವ ಪೂಗೋಳ್ ವೊ ಲಾಯ್ತು, ನಿ | ನ್ನು ರವಣೆಯ ಬಾಣಂಗಳೆನುತ ಭರತಾನುಜನ | ತುರಗ ಸಾರಥಿ ವರೂಥ ಧ್ವಜ ಶರಾಸನಂಗಳನವಂ ತಡೆಗಡಿದನು||೧೫||
ಕೋಪದಿಂ ಪೊಸರಥಕಡರ್ದು ಶತ್ರುಘ್ನ ನುರು | ಚಾಪಮಂ ಕೊಂಡು ದಿವ್ಯಾಸ್ತ್ರದಿಂದೆಸುತ ಬರ | ಲಾಪಥದೊಳೆಣಿಕೆಗೆಯ್ದಣ್ಣನಂ ಮಾತೆಯಂ ನೆನೆದು ಮನದೊಳು ಮರುಗುತ || ಆ ಪಸುಳೆ ಮತ್ತೆ ಕಡುಧೈರ್ಯಮಂ ತವೆ ತಾಳ್ದಿ | ನೋಪಮದೊಳೆಯ್ದುವ ಪಗೆಯ ಶರವನೆಡೆಯೊಳ್ ಪ್ರ | ತಾಪದಿಂ ಕತ್ತರಿಸಿ ಕೆಡಹಲ್ಕೆ ಬಯಲಾಯ್ತು ಕೂಟಸಾಕ್ಷಿಯ ಸಿರಿಯೊಲು ॥೧೬॥
ವಿಸ್ಮಯಾತನಾದನಂದು ಶತ್ರುಘ್ನ ನಾ | ಕಸ್ಮಿಕದ ಪಸುಳೆಯ ಪರಾಕ್ರಮಕೆ ಬಳಿಕ ವಿಲ | ಯಸ್ಮರಾಂತಕನ ಪಣೆಗಣ್ಣಿಂದ ಪೊರಮಡುವ ದಳ್ಳುರಿಯತೆರದೊಳೆಸೆವ || ರಶ್ಮಿಗಳನುಗುಳಳ್ವಮೋಘದ ಬಾಣಮಂ ಪೂಡು | ತಸ್ಮದಿಷುಘಾತಮಂ ನೋಡೆನುತಿರಲ್ಕೆ ಮಂ| ದಸ್ಮಿತದೊಳಾಸರಳನೆಚ್ಚು ಲವನೆಡೆಯೊಳಿಕ್ಕಡಿಗೆಯ್ದ ನೇವೇಳ್ವೆನು||೧೭||
ಅರಸ ಕೇಳಾಶರದೊಳರ್ಧಮವನಿಗೆ ಕೆಡೆದು | ದಿರದೆ ಮೇಲ್ವಾ ಯ್ದ ರ್ಧಮಿಾ ಲವನ ಕಾರ್ಮುಕವ | ನರಿದುಕೊಂಡೆರ್ದೆಯನುಚ್ಚಳಿಸೆ ಮೈಮರೆದೊರಗಿದಂ ಪಸುಳೆ ಮೂರ್ಧೆಯಿಂದೆ|| ಹರುಷದಿಂದಾರ್ದುದುಳಿದರಿಬಲಂ ನಡೆತಂದು | ಕರುಣದಿಂ ತರಳನಂ ನೋಡಿ ರಾಮಾಕೃತಿವೊ | ಲಿರೆ ಮೋಹದಿಂ ತನ್ನ ರಥದ ಮೇಲಿರಿಸಿಕೊಂಡೈದಿದಂ ಶತ್ರುಘ್ನನು | ೧೮ ||
ಕದಳಿಯೊಳ್ ಕಟ್ಟಿರ್ದ ಕುದುರೆಯಂ ಬಿಡಿಸಿ ನಗ | ರದ ಕಡೆಗೆ ಪಡೆವೆರಸಿ ತಿರುಗಿದಂ ಶತ್ರುಘ್ನ | ನುದಧಿಘೋಷದೊಳಿತ್ತಲೋಡಿದರ್ ತಾಪಸವಟುಗಳವನಿಸುತೆಯ ಪೊರೆಗೆ || ಕದನದೊಳ್ ನಡೆದ ವೃತ್ತಾಂತಮಂ ಪೇಳ ಲ್ಕೆ | ರುದಿತದಿಂ ಕೈವೆರಲ್ಗಳನೊತ್ತಿಕೊಳುತ ನಿಜ | ಸದನಮಂ ಪೊರಮಟ್ಟು ಹಲುಬಿದಳ್ ಸುತನ ಗುಣಶೀಲರೂಪಗಳನೆಣಿಸಿ ||೧೯||
ಒದರಿದುವು ಕಂಬನಿಗಳಂಗಲತೆ ಕಂಪಿಸಿತು| ಪೊಸೆದಳೊಡಲಂಕುಡೆ ಕುಡೆ ಸುತಮೋಹದಿಂ| ದಸವಳಿದು ಕಂದನೆಲ್ಲಿರ್ದಪಂ ಕಾದಿದನೆ ಪಡೆಯ ಕೈಗೊಳಗಾದವೇ || ಪಸುಳೆಗೇನಾಯ್ತೊ ಮಗನೆಂತು ನೊಂದನೋ ತರಳ|ನಸುವಿಡಿದಿಹವ ನೊ ಬಾಲಕನ ಮುದ್ದು ಮೊಗಮೆನ್ನ | | ದನೆಗೆ ಸೈರಿನದೊ ಜೀವಿಸಿ ಕೆಟ್ಟೆನೆಂದು ಹಲುಬಿದಳೆಂಬುಪಾಕ್ಷಿ ಮರುಗಿ ||೨೦||
ಅನ್ನೆಗಂ ಬಂದನಗ್ಗದ ಸಮಿ ತ್ಸುಸ್ವಂಗ) ಳನ್ನೆತ್ತಿಯೊಳ್ ಪೊತ್ತು ಕೊಂಡು ಕುಶನಳುತಿರ್ಪ | ತನ್ನ ತಾಯಂ ಕಂಡಿದೇನನ್ನುತಪ್ಪಳಾಪಂ ನಿನಗೆ ಪೇಳೆನ ಲ್ಕೆ || ಬನ್ನಮಂ ಕೇಳ್ ಮಗನೆ ಹಯವೊಂದು ಬರಲದಂ | ನಿನ್ನ ತಮ್ಮ ಕಟ್ಟಲರಸುಗಳ್ ಪಿಡಿದುಯ್ದ | ರಿನ್ನೇವೆನೆಂದು ಜಾನಕಿ ನುಡಿಯೆ ರೋಷದಿಂದಾ ಕುವರನಿಂತೆಂದನು ||೨೧|
ಶೋಕಮೇಕಿದಕೆ ಹರಣವನೊಯ್ದೊಡಂತಕನ | ಲೋಕವಂ ಸುಡುವೆನಲ್ಬಹುದೆಂದೊಡಜ ಹರಿ ಪಿ | ನಾಕಿಗಳನುರುವುವೆಂ ಮಿಕ್ಕರಸುಗಿರಸುಗಳ ಪಾಡಾವುದೀಗ ತನಗೆ || ಆ ಕವಚ ಖಡ್ಗ ಧನು ತರ ಮಕುಟಂಗಳಂ | ತಾ ಕಳವಳಿಸದಿರೆಂದವ ನಿಜೆಗೆ ನುಡಿದೊಡವ | ಳಾಕುತಂಗೊಳಗಳಿಂದಂಗಿಯಂ ತಂದಳವಡಿಸಿ ಪರಸಿ ಬೀಳ್ಕೊಟ್ಟಳು | ೨೨ ||
ರಾಯ ಕೇಳ್ ಕುಶನ ವಿಕ್ರಮವನಭಿವರ್ಣಿಸಲ | ಜಾಯುವುಳ್ಳನ್ನೆ ಗಂ ತನಗೆ ತೀರದು ಬಳಿಕ | ತಾಯಂಘ್ರಿಗೆರಗಿ ಬೀಳ್ಕೊಂಡು ತಾರಕನ ಪೆರ್ಬಡೆಗೆ ಗುಹನೆಯ್ದುವಂತೆ || ವಾಯುವೇಗದೊಳೊದಗಿ ವೀರಭರತಾನುಜನ | ಪಾಯದಳಂ ಪೋಗಬೇಡ ಬೇಡೆನುತ ಬೆಲೆ | ಸಾಯಕದ ಮಳೆಗಳಂ ಕರೆಯ ಲ್ಕೆ ತಿರುಗಿದುದು ಮತ್ತೆ ಶತ್ರುಘ್ನ ಸೇನೆ | ೨೩ ||
ಪ ದ್ದೆರಗಿದುವು ಭಟರ ಮಂಡೆಗಳ ಮೇಲುಡಿದು ! ಬಿದ್ದುವು ಚಲಧ್ವಜಪತಾಕೆಗಳ ಕೂಡೆ ದೂ 1 ಳೆದ್ದು ಬಿರುಗಾಳಿ ಬೀಸಿದುದು ಕಂಬನಿ ಕರೆದುವಂದಾನೆಕುದುರೆಗಳ್ಗೆ || ಪೊದ್ದಿದುತ್ಸಾತಭಯಕಾ ಬಲಂ ಗಜಬಜಿಸು । ತಿದ್ದು ಪೀಡೆಯೊಳೀ ಕು ಶಂ ಪೋಗದಿರಿ ನಿಲ್ಲಿ! ಕದ್ದೈದುವರೆ ತುರಗಸಹಿತ ಲವನಂ ಬಿಟ್ಟು ನಡೆಯಿ ನೀವೆನುತೆಚ್ಚನು | ೨೪ ||
ಆ ಬಾಲಕನ ಬಾಣಘಾತದಿಂದಳವಳಿದು | ದೀಬಲದ ಮಂದಿ ಮ ತ್ತೀಗಳವನೊರ್ವನಿದೆ | ಕೋ ಬಂದನೆಂದಿಸುವ ಬೆಸೆಗಳ್ಗೆ ದೆಸೆಗೆಟ್ಟು ಸೇನೆ ಗಜಬಜಿಸೆ ಕಂಡು || ಶಾಬಮೃಗಮಂಜಿ ಪುದು ಗಡ ಪುಲಿಯನೆನುತಾ ಮ | ಹಾಬಾಹು ಶತ್ರುಘ್ನು ನಾಗ ನಿಜದಳಪತಿಯ | ನೇ ಬೇಗ ಕಳುಹಿದೊಡವಂ ನಕಲಸೇನೆಸಹಿತೈದಿದಂ ಕುಶನಮೇಲೆ । |೨೫||
ಬಳಿಕ ಶತೃಘ್ನನ ನಿರೂಪದಿಂ ತಿರುಗಿದಂ | ದಳಪತಿ ಸಮಸ್ತ ಬಲಸಹಿತಾ ಕುಮಾರನಂ | ಬಳಸಿದಂ ತಮತಮಗೆ ವಿವಿಧಾಯುಧಂಗಳಂ ಜಾಳಿಸುತೆ ವಹಿಲದಿಂದೆ || ಆಳವಿಯೊಳ್ ತೀವಿದುವು ಕುದುರೆ ತೇರಾನೆಯಾಳ್ | ಕೊಳುಗುಳದೊಳನಿತುಮಂ ಸವರಿ ಸೇನಾನಿಯಂ | ಕಳುಹಿದಂ ಜವವೊಳಲ್ಲವನ ಸಾರಥಿರಥಾತ್ಪಂವೆರಸಿ ವೀರಕು ಶನು ||೨೬||
ಆ ದಳಪತಿಯ ತಮ್ಮ ನೊರ್ವ ನಗನೆಂಬನಂ | ಕಾದಿ ಮಡಿದಣ್ಣನಂ ಕಾಣುತ್ತ ಖತಿಯಿಂ ಮ | ಹಾದಂತಿಯಂ ಕು ಶನ ಮೇಲೆಯಂಕುಶದಿಂದಿರಿದು ನೂಕಿದಂ ಕುಶನದ | ಜೋದಗಾಳಗದಿಂದ ಬಳಿಕೆರಡುಸೀಳಾಗಿ | ಮೇದಿನಿಗೆ ಬೀಳ್ಕೊಂತಿಭವ ನೆಚ್ಚವನ ಧನು | ಶ್ಛೇದಮಂ ಮಾಡಲಾತಂ ಪಲಗೆ ಕಡುಗಮಂ ಕೊಂಡವಂಗಿದಿರಾದನು | ೨೭ ||
ಕಿತ್ತಡಾಯುಧದೊಳೆದುವನ ಘನ ಹಸ್ತಮಂ | ಕತ್ತರಿಸಲೆಡಗೈಯೊಳೊಂದು ಗದೆಯಂ ಕೊಂಡು | ಮತ್ತೆ ಮೇಲ್ಪಾ ಯ್ದೊಡಾ ಕರಮಂ ಕಡಿಯೆ ಬಾಹುಗಳಿಂದೆ ಪೊಯ್ಯನೆಂದು || ಒತ್ತಿ ನಡೆತರಲೆರಡು ತೋ ಳ್ಗಳಂ ಕೂರ್ಗಣೆಯೊ | ಳುತ್ತರಿಸೆ ಕಾಲ್ಗಳಿಂದೊದೆದು ಕೆಡವುವ ಭರದೊ | ಳೆತ್ತಲಾ ತೊಡೆಗಳನವಂ ಬೇಗದಿಂದೆಯೇ ಕುಶನೆಚ್ಚು ತುಂಡಿಸಿದನು |೨೮||
ಬಾಹುಯುಗಮೂರುದ್ವಯಂ ಪೋದ ಕಾಯದಿಂ । ಸಾಹಸಂಗೈದವಂ ಮೇಲ್ವಾಯ್ತು ಚಂದ್ರಂಗೆ | ರಾಹುವಂಗೈಸುವಂತುರವಣಿಸೆ ಕುಶನಳುಕದೆಚ್ಚವನ ತಲೆಯನರಿಯೆ|| ಮಾಹೇಶ್ವರಾಭರಣದೊಳ್ ಮೆರೆದುದಾ ಶಿರಂ | ಕಾಹುರದ ಕುವರನದಟಂ ಕಂಡು ಖಾತಿಯಿಂ 1 ದಾಹವಕೆ ಬಿ ಲ್ದುಡುಕಿ ತರಳನಂ ಕೆಣಕಿದಂ ಬಂದು ಕಲಿ ಶತ್ರುಘ್ನನು |೨೯||
ಕಡುಮುಳಿದು ಶತ್ರುಘ್ನ ನೊಂಬತ್ತು ಬಾಣದಿಂ | ಬಿಡದೆ ಚ್ಚೊಡಾ ಕುಶಂ ಕೋಪದಿಂದವನ ತೇ | ರ್ಪುಡಿಯಾಗೆ ಸಾರಥಿರಥಾಶ್ವಂಗಳೆಡೆಗೆಡೆಯೆ ಬಿಲ್ಲುಡಿಯ ಪೇರುರದೊಳು || ನಿಡುಸರಲಿಸಲ್ ಕರೆದನಂಬುಗಳನೊಡ | ನೊಡನೆ ಕೂರ್ಗಣಿಗಳಾರಂ ಮತ್ತೆ ವಕ್ಷದೊಳ್ ! ತುಡಿಸಿದಂ ಕುಶನದರ ಘಾತಿಗೆ ವರೂಥದಿಂ ಭರತಾನುಜಂ ಬಿದ್ದನು || ೩೦||
ಜೈಮಿನಿ ಭಾರತ 40
ಇಪ್ಪತ್ತನೆಯ ಸಂಧಿ ಕೊನೆಯ ಭಾಗ
ಪದ್ಯ 31 ರಿಂದ 62
ಕುಶಲವರ ಪರಾಕ್ರಮ
ನಿರೂಪಣೆ: ಸುಬ್ಬುಲಕ್ಷ್ಮಿ
ಸಂಕ್ಷಿಪ್ತ ರೂಪ
ಕುಶನ ಬಾಣಗಳು ಸೈನ್ಯವನ್ನು ನುಚ್ಚುನೂರಾಗಿಸಿದವು. ಮೂರ್ಛೆ ತಿಳಿದೆದ್ದ ಲವನು ಅಣ್ಣನನ್ನು ಕಂಡು ತಾನೂ ಸೇರಿದನು.
ಇತ್ತ ಯಾಗಶಾಲೆಯಲ್ಲಿ ತಂಡುಲ, ದೂರ್ವಿ, ವ್ರೀಹಿ ಇತ್ಯಾದಿ ವಸ್ತುಗಳೋಂದಿಗೆ ಮುನಿಗಳ ಸಹಿತ ದೀಕ್ಷೆಯಲ್ಲಿದ್ದ ರಾಮನ ಬಳಿಗೆ ಬಂದ ಭಟರು ಅಂಜುತ್ತಲೇ ಸಮರದ ಸುದ್ದಿಯನ್ನು ತಿಳಿಸಿದರು. ರಾಮನು ಮೊದಲು ನಂಬಲಿಲ್ಲ. ಲವಣಾಸುರನನ್ನು ಸಂಹರಿಸಿದ ಶತ್ರುಘ್ನನಿಗೆ ಬಾಲಕರಿಂದ ಪರಾಭವವೆ ಎಂದು ಅಚ್ಚರಿಪಟ್ಟನು. ಅನುಜ ಲಕ್ಷ್ಮಣ ನನ್ನು ಸೇನೆಯ ಸಹಿತ ಹೋಗೆಂದನು. ಲಕ್ಷ್ಮಣನು ಬಹು ದೊಡ್ಡ ಬಲದೊಡನೆ ಕಾಲಜಿತುವೆಂಬ ದಳಪತಿಸಹಿತ ಅಣ್ಣನಿಗೆ ನಮಿಸಿ ಹೊರಟನು.
ಆ ಸೈನ್ಯದ ನಡೆಗೆ ಭೂಮಿ ಸವೆಯಿತು. ಧೂಳು ಅಂಬರವನ್ನು ಮುಟ್ಟಿತು. ರಣವಾದ್ಯಗಳ ಅಬ್ಬರಕ್ಕೆ ದಿಕ್ಕುಗಳು ನಡುಗಿದವು. ಪತಾಕೆಗಳು ಹಾರಾಡಿದವು.
ಸೈನ್ಯ ಬಂದುದನ್ನು ಕಂಡ ಲವಕುಶರು ಬರಲಿ ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡು ಸಿದ್ಧರಾದರು. ಲವನು ಆದಿತ್ಯನನ್ನು ಸ್ತುತಿಸಿ ದಿವ್ಯ ಕೋದಂಡವನ್ನು ಪಡೆಯಲು ನಿಶ್ಚಯಿಸಿದನು. ಸೂರ್ಯನನ್ನು ವಿವಿಧ ನಾಮಗಳಿಂದ ಸ್ತುತಿಸಲು ಮೆಚ್ಚಿದ ಅವನು ದಿವ್ಯ ಧನುವನ್ನು ನೀಡಿ ಹರಸಿದನು.
ಹತ್ತು ದಿಕ್ಕುಗಳನ್ನು ಬೆಳಗಿಸುವೆ, ಹನ್ನೆರಡು ರಾಶಿಗಳಲ್ಲಿ ಸಂಚರಿಸುವೆ, ಸಾವಿರ ಕಿರಣಗಳಿಂದ ಲೋಕಕ್ಕೆ ಬೆಳಕಾಗಿರುವೆ ಎಂದೆಲ್ಲ ಆದಿತ್ಯನನ್ನು ಸ್ತುತಿಸಿದನು ಲವ. ನಂತರ ಲವಕುಶರು ಗಾಳಿ ಮತ್ತು ಬೆಂಕಿಯಂತೆ ಕೂಡಿ ಕಾಳಗಕ್ಕೆ ತೊಡಗಿದರು.
ನೂರು ಆಳಿಗೊಂದು ಹಯ, ನೂರು ಹಯಗಳಿಗೊಂದು ರಥ, ನೂರು ರಥಗಳಿಗೊಂದು ಆನೆ, ಇಂತಹ ಸಹಸ್ರ ಆನೆಗಳಿಗೆ ಒಂದು ಭ್ರಮಿಯಂತೆ ಸೈನ್ಯದ ಒಂದು ಅಳತೆ. ಇಂತಹ ನೂರಾರು ಭ್ರಮಿಗಳಿಂದ ಕೂಡಿದ ಸೈನ್ಯವನ್ನು ಲವಕುಶರು ಅತ್ಯಂತ ಸಹಜವಾಗಿ ಎಂಬಂತೆ ಮಣಿಸಿದರು.
ಬಡನಾಗ್ನಿಯಂತೆ ಬಿದ್ದ ಕಾಲಜಿತುವಿನ ಮೇಲೆ ಅಂಬುಗಳ ಮಳೆಗರೆದರು. ಸಕಲ ಸೇನೆಯು ಮುಳಿದು ಹೊಯ್ದಾಡಿತು. ತರಿದುವು ಕವಚಗಳು. ಉರುಳಿದವು ದೇಹಗಳು.
ಆ ವೇಳೆಗೆ ಮದಿರಾಕ್ಷನೆಂಬ ರಾಕ್ಷಸನು ಬೆಂಬತ್ತಲು ಲವನು ಮುನಿಗಳು ಕೊಟ್ಟಿದ್ದ ಅಗ್ನಿ ಮಂತ್ರವನ್ನು ಸ್ಮರಿಸಲು ಅವನ ಕೈಗೆ ಚಕ್ರ ಬಂದಿತು. ಅದನ್ನು ಬಳಸಿ ಮದಿರಾಕ್ಷನನ್ನು ಗಗನದಲ್ಲಿ ತುಡುಕಲು ಅವನಪಡೆ ಕಂಗೆಟ್ಟಿತು. ದಶರಥ ನೃಪತಿಯ ಮಂತ್ರಿಯ ಮಕ್ಕಳು ಲವನನ್ನು ಮುತ್ತಿದರು. ಬಾಲಕನ ಹಾವಳಿಯನ್ನು ತಡೆದರು.ಚಕ್ರವು ಹೋಗಲು ಪರಿಘಾಯುಧವನ್ನು ಹಿಡಿದು ಸೆಣಸಿದನು.ಅಸುರನನ್ನು ಕೆಡವಿ ಚತುರಂಗ ಬಲವನ್ನು ಮೆಟ್ಟಲು ಪಡೆ ದಿಕ್ಕುದಿಕ್ಕಿಗೆ ಚೆದರಿತು. ಲಕ್ಷ್ಮಣನ ರಥ ಎರಡು ಗಳಿಗೆ ನಿಲ್ಲದೆ ತಿರ್ರನೆ ತಿರುಗಿತು. ರೋಷದಿಂದ ಮತ್ತೊಂದು ರಥವನ್ನು ಹತ್ತಿ ಕಾದತೊಡಗಿದನು. ಹಸುಳೆ ಎಂದು ಸುಮ್ಮನಿದ್ದರೆ ಇದು ಭಯಂಕರವಾಯಿತು. ಅಗ್ನಿ ವರುಣ ವಾಯುವ್ಯ ಮುಂತಾದ ಅಸ್ತ್ರಗಳು ಪ್ರತ್ಯಸ್ತ್ರಗಳು ಪ್ರಯೋಗವಾದವು.
ಅಕಾಲದಲ್ಲಿ ಶಿವನ ಮೂರನೆಯ ಕಣ್ಣು ತೆರೆದಂತೆ ಯುದ್ಧ ಭೀಕರವಾಯಿತು. ಕುಶನೂ ಸೇರಿಕೊಂಡು ಬಾಣಗಳ ಮಳೆಯನ್ನೇ ಸುರಿಸಿದರು.
ಲಕ್ಷ್ಮಣನ ರಥ, ತುರಗ, ಚಾರರು, ಸಾರಥಿ ಎಲ್ಲವನ್ನೂ ಕೆಡಹಿದರು. ಮುನಿಗಳು ತಮಗೆ ಕೊಟ್ಟಿದ್ದ ದಿವ್ಯಾಸ್ತ್ರಗಳನ್ನು ಬಳಸಿದರು. ಅದರಿಂದ ಲಕ್ಷ್ಮಣನು ಭೂಮಿಯ ಮೇಲೆ ಬಿದ್ದನು. ಕುಶನು ಸಮಗ್ರಸೇನೆಯನ್ನು ತರಿಯತೊಡಗಿದನು.ಅಳಿದುಳಿದ ಭಟರು ರಾಮನಲ್ಲಿಗೆ ಓಡಿದರು.
ಇಪ್ಪತ್ತನೆಯ ಸಂಧಿ ಕೊನೆಯ ಭಾಗ
ಪದ್ಯ 31 ರಿಂದ 62
ಗಿರಿತಟದೊಳೊಂದೊಂದರೊಳ್ ಪೆಣಗಿ ಸೋಲ್ತ ಮದ | ಕರಿ ಧರೆಗುರುಳ್ವಂತೆ ಪೊರಾಯ ಗಾಯದಿಂ । ದಿರದೆ ಶತ್ರುಘ್ನಂ ಮಹೀತಳಕೆ ರಥದಿಂದ ಬೀಳನಿತರೊಳ್ ಪಡೆಯೊಳು || ದೊರೆದೊರೆಗಳೆಲ್ಲರುಂ ಕೈಕೊಂಡು ಕಾದಿ ಸಂ| ಗರದೊಳ್ ಪತಿತರಾದರಾ ಕುಶನ ಬಾಣದಿಂ | ಪಿರಿದು ಕನ್ಯಾವಿಕ್ರಯಂಗೈದು ಜೀವಿಸುವ ಮಾನವನ ಪಿತೃಗಳಂತೆ ॥೩೧||
ಬಹುದುರಿತಮಂ ಸ್ವಧರ್ಮದೊಳೊ ರಸುವಂತೆ ಕುಶ | ನಹಿತರಂ ತನ್ನ ಭುಜಬಲದಿಂದ ಸವರಿದಂ | ಮಹದಾಹವದ ಮೂರ್ಛೆ ತಿಳಿದನಿತರೊಳ್ ಕಂಡನಣ್ಣನಂ ಬಳಿಕ ಲವನು || ಸಹಜಾತರಿರ್ವರುಂ ಕೂಡಿದರ್ ಪವನ ಹುತ | ವಹರಂತೆ ಮತ್ತೆ ಹಯಮಂ ಕಟ್ಟಿಕೊಂಡು ವಿ | ಗ್ರಹಕೆ ನಿಲಲರಸನಲ್ಲಿಗೆ ದೂತರಂ ಕಳುಹಿದರ್ ಬಲದೊಳುಳಿದಭಟರು |೩೨||
ಚರು ಪುರೋಡಾಶ ತಂಡುಲ ತಿಲ ಸ್ನೇಹಿ ಮೃತ | ದುರು ಹವಿರ್ಧೂಮದಿಂದರುಣಲೋಚನನಾಗಿ | ಪರಿಮೇಖಲಾಶೃಂಗ ಮೃಗಚರ್ಮಧರನಾಗಿ ನವನೀತಲಿಪ್ತನಾಗಿ || ಪರಮ ಮುನಿಗಳೆರಸಿ ಕನಕ ಜಾನಕಿಸಹಿತ | ಭರತಲಕ್ಷ್ಮಣರೊಡನೆ ಕೃತಯಜ್ಞ ಶಾಲೆಯೊಳ್ | ವರದೀಕ್ಷೆಯಿಂದೆ ಕುಳಿರ್ದೆಸೆವ ರಾಮನಂ ಕಂಡು ಚರರಿಂತೆಂದರು||೩೩||
ಅವಧರಿಸು ಜೀಯ ನಿನ್ನ ಧ್ವರದ ಚಾರು ಹಯ | ಮವನಿಯೊಳವಿ ಘ್ನದಿಂ ತಿರುಗಿ ಬಂದುದು ಬಳಿಕ | ಲವನೆಂಬ ಬಾಲಕಂ ಕಟ್ಟಿದಂ ಕಡುಗಿದೊಡೆ ಬಲಮೆಲ್ಲಮಂ ಕೊಂದನು || ಬವರದೊಳ್ ಶತ್ರುಘ್ನ ನಾತನಂ ಪಿಡಿದು ತರ | ಲವನ ಬಳಿವಿಡಿದೊರ್ವನೆಯ್ತಂದು ನಿನ್ನನುಜ | ನವಗಡಿಸೆ ಕೆಡೆಯೆಚ್ಚು ಬೀಳ್ಚಿದಂ ಪೇಳಲಂಜುವೆವೆಂದು ಕೈಮುಗಿದರು | ೩೪ ||
ಕೇಳುತೆ ಕನಲೆಲವೊ ಶತ್ರುಘ್ನು ನಂ ಜಯಿಸು | ವಾಳುಂಟೆ ಲೋಕದೊಳ್ ಪೋಗಿವರ್ ಮರುಳರೆಂ | ದಾಳವಾಡಲ್ ಜೀಯ ನಿಮ್ಮಡಿಗಳಾಣೆ ಪುಸಿಯಲ್ಲೆಂದು ಮತ್ತೆ ಚರರು || ಕೇಳಲ್ಕೆ ಬೆರಗಾಗಿ ಮರುಗಿ ಲವಣಾಸುರಂ | ಕಾಳಗದೊಳೀತನಿಂದಳಿದನಾ ಬಾಲಕರ | ತೋಳ ಬಲ್ವೆಂತೊ ಲಕ್ಷ್ಮಣ ಸೇನೆಸಹಿತ ನಡೆಯೆಂದು ರಘುಪತಿ ನುಡಿದನು ॥೩೫॥
ಬಳಿಕ ರಾಘವನಂಫ್ರಿಗೆರಗಿ ಕಳುಹಿಸಿಕೊಂಡು | ತುಳತಂತ್ರಸನ್ನಾಹದಿಂ ಕಾಲಜಿತುವೆಂಬ | ದಳಪತಿಸಹಿತ ಸುಮಿತ್ರಾತ್ಮಜಂ ನಗರಮಂ ಪೊರಮಟ್ಟು ನಡೆವ ಭರಕೆ || ಇಳೆ ಸವೆದುದೇಳ್ವ ಕೆಂದೂಳ್ಗಳಿಂದಂಬರ | ಸ್ಥಳಮೈದುತ್ತಿರಲ್ ಪತಾಕಾ ಧ್ವಜಂಗಳ್ಗೆ ದಿ| ಗ್ವಳಯಮಿಂಬಿಲ್ಲ ಘೀಳಿಡುವ ವಾದ್ಯಧ್ವನಿಗೆ ಪೊಸತಿದೆಂಬಂತಾಗಲು||೩೬||
ಪೊಡವಿಯಗಲದೊಳೆಯು ವಾನೆಗಳ ಸೇನೆಗಳ | ಕಡುಗಿ ಮುಂಬರಿವ ರಥರಾಜಿಗಳ ತೇಜಿಗಳ | ಬಿಡದೆ ಗಗನದೊಳಿಡಿದ ಸತ್ತಿಗೆಯ ಮುತ್ತಿಗೆಯ ಢಾಳಿಸುವ ಚಮರಂಗಳ || ನಿಡುಪತಾಕೆಯ ವಿವಿಧ ಧಾತುಗಳ ಕೇತುಗಳ | ಜಡಿವ ಕೈದುಗಳ ಪೊಸರೋಚಿಗಳ ವೀಚಿಗಳ | ಪೊಡೆವ ತಂಬಟ ಪಟಹ ಭೇರಿಗಳ ಭೂರಿಗಳ ಪದಪಿಂದೆ ಪಡೆ ನಡೆದುದು || ೩೭ |
ಪ್ರಾಣವಿಲ್ಲದೆ ಚೇತರಿಸಿಕೊಳಲ್ ತನುವಿನೊಳ್ | ತ್ರಾಣವಿಲ್ಲದೆ ನೊಂದು ಗಾಯದಿಂ ಮರವೆಯಂ | ಕೇಣಿಗೊಂಡೊರಗಿ ಶತ್ರುಘ್ನನಳಿದುಳಿದ ಬಲದೊಡನೆ ರಾಹುಗ್ರಸ್ತದ || ಏಣಧರನಂತಿರಲ್ ಪಡೆಸಹಿತ ಲ ಕ್ಷ್ಮಣಂ | ಕ್ಷೋಣಿಪತಿ ಕೇಳ್ ಬಂದು ಕಂಡು ಸೈತಿಟ್ಟಿನ್ನು | ಕಾಣಬಹುದೆನುತೆ ಕೈಬೀಸಿದಂ ಕಾಲಜಿತು ಮುಖ್ಯಸೇನಾನಿಗಳ್ಗೆ||೩೮||
ಕಂಡರೀಚೆಯೊಳರಿಬಲವ್ಯೂಹಮಂ ಬರಲಿ | ಖಂಡಿಸುವೆನೆಂದೊರ್ವರೋರ್ವರೊಳ್ ಮಾತಾಡಿ | ಕೊಂಡರವರೊಳ್ ತನ್ನ ಬಿಲ್ಮು ರಿದುದಾಹವದೊಳಂದು ಲವನಗ್ರಜಂಗೆ || ಚಂಡಮುನಿಪತಿ ಮಾಡಿದುಪದೇಶದಿಂದೆ ಕೋ | ದಂಡಮಂ ಪಡೆವೆನೀಕ್ಷಣದೊಳೆಂದೊರೆದು ರವಿ | ಮಂಡಲವನೀಕ್ಷಿಸುತೆ ತರಣಿಯಂ ಪ್ರಾರ್ಥಿಸಿದನನುಪಮ ಸ್ತುತಿಗಳಿಂದೆ | ೩೯ ||
ಮಿತ್ರಾಯ ಸೂರ್ಯಾಯ ಹಂಸಾಯ ಪೂಷ್ಣೇ ಸ। ವಿತ್ರೇ ಜಗಚ್ಚಕ್ಷುಷೇ ಚಂಡಪ್ಪಣಯೇ ಪ | ವಿತ್ರಾಯ ಪಿಂಗಾಯ ಪುರುಷಾಯ ಭಾನುವೇ ಜ್ಯೋತಿಷೇ ಭಾಸ್ಕರಾಯ|| ಸ ತ್ರೈಕರೂಪಾಯ ವಿಮಲಾಯ ವಿಶ್ವರ | ಕ್ಷಿತ್ರೇ ಸಹಸ್ರಕಿರಣಾಯ ರವಯೇ ಮಂದ | ಪಿತ್ರೇ ದಿವಾಕರಾಯ ಬ್ರಹ್ಮ ವಿಷ್ಣು ರುದ್ರಾತ್ಮನೇ ತುಭ್ಯಂ ನಮಃ ॥೪೦||
ಜಗಕೆ ನೀನೊಂದು ಕಣ್ಣಾಗಿರ್ಪೆ ಮೇ ಣೆರಡು | ಬಗೆಯ ಪಥದೊಳ್ ನಡೆವೆ ತಿಳಿಯಲ್ಕೆ ಮೂರು ಮೂ | ರ್ತಿಗಳನೊಳಗೊಂಡಿರ್ಪೆ ಸಲೆ ಸಂದ ನಾಲ್ಕು ವೇದಂಗಳೊಡಲಾಗಿ ತೋರ್ಪೆ || ಅಗಲದೈದಂಗದೊಳ್ ಕಾಣಿಸುವೆ ಪರಿಪರಿಯೊ | ಳೊಗೆದಾರು ಋತುಗಳೊಳ್ ವರ್ತಿಸುವೆ ಸಂತತಂ । ಗಗನಕೇಳ ಷ್ಟಮಂ ಕೊಂಡೇಳೈ ದೇವ ಬಿಲ್ಲೊಟ್ಟುಳುಹಬೇಕೆಂದನು ॥೪೧||
ಪತ್ತು ದೆಸೆಯಂ ಬೆಳಗಿಸುವೆ ಪನ್ನೆರಡು ರಾಶಿ | ಗೊತ್ತಾಸೆಯಾಗಿರ್ಪೆ ಶತಪತ್ರಮಿತ್ರನಹೆ | ಮತ್ತೆ ಸಾಸಿರಕಿರಣದಿಂದೆಸೆವೆ ಲಕ್ಷಯೋಜನದಳತೆಯೊಳ್ ತೊಳಗುವೆ|| ಬಿತ್ತರದನಂತದೊಳ್ ಸಂಚರಿಪೆ ದೇವ ನಿ | ನ್ನು ತ್ತಮ ಗುಣಾವಳಿಯನೆಟ ಣಿಸಲೆನ್ನಳವೆ ಬಿ | ಲ್ಲಿತ್ತು ಳುಹಬೇಕೆಂದು ದಿನಮಣಿಯನಾ ಲವಂ ನುತಿಸಿದಂ ಭಕ್ತಿಯಿಂದ || ೪೨ ||
ಅವನೀಶ ಕೇಳ್ ಬಳಿಕ ಲವನ ವಿಮಲಸ್ತುತಿಗೆ | ರವಿ ಮೆಚ್ಚಿ ಕೊಟ್ಟನಾತನ ಕೈಗೆ ದಿವ್ಯಚಾ | ಪವನದಂ ಕೊಂಡಗ್ರಜಂಗೆ ತೋರಿಸಿ ಮುನಿಪ ವಾಲ್ಮೀಕಿ ಬಾಳುಗೆನುತೆ || ಪವಣನಾರೈದು ಬಿ ಲ್ದಿರುವನೊದರಿಸಿದನು । ತ್ಸವದಿಂದೆ ಕುಶನುಗ್ರಕೋದಂಡಮಂ ಪಿಡಿದ | ನವರೀರ್ವರುಂ ಮತ್ತೆ ಪವನ ಪಾವಕರಂತೆ ಪೊಕ್ಕರರಿಬಲವನುರುಬಿ||೪೩||
ನೂರಾಳಿಗೊಂದು ಹಯಮಿರುತಿರ್ಪುದಾ ಹಯಂ | ನೂರಕಿರುತಿಹುದು ಮೇಲೊಂದು ರಥ ಮಾರಥಂ | ನೂರಕಿಭವೊಂದಿರ್ವುದಿಂತಿದ್ದ ಸಹಸ್ರಮಿರೆ ಭ್ರಮಿಯೆಂದೆನಿಸಿಕೊಳ್ಳುದು || ಮಾರಿ ಯೋಜನದಗಲದೊಳ್ ಭ್ರಮಿಗಳೀರೈದು | ನೂರಿಟ್ಟಣ್ಣಿಸಿ ನಡೆದು ಬಂದೊಡಾ ಸೇನೆಯಂ| ತಾರು ತಟ್ಟಾಗಿ ಕೆಡಹಿದರೊಂದು ನಿಮಿಷದೊಳ್ ಕುಶ ಲವರದೇವೇಳ್ವೆನು |೪೪ ||
ಹೂಣೆವೊಕ್ಕಿಸುತ ಡಾಲಕರೈದೆ ಲಕ್ಷ್ಮಣಂ| ಕಾಣುತಿದಿರಾದಂ ಕುಶಂಗಖಿಳವಾಹಿನೀ | ಶ್ರೇಣಿಸಹಿತುರುಬಿದಂ ಕಾಲಜಿತುವಾ ಲವನ ಮೇಲೆ ವಡಬಾಗ್ನಿ ಯೆಡೆಗೆ || ಮಾಣದೆರಗುವ ಕಡಲಜಲದಂತೆ ಕವಿದುದು ಕೃ | ಪಾಣ ತೋಮರ ಪರತು ಕುಂತ ಮುಷ್ಕರ ಚಕ್ರ | ವಾಣ ಶಕ್ತಿಗಳ ಘೋರಪ್ರಹಾರಂಗಳಿಂದಾ ಸಕಲಸೇನೆ ಮುಳಿದು||೪೫||
ಏಸು ಭಟರಂಬುಗಳನಿಸುವರೈ, ಸಂಬುಗಳ | ನಾಸುಭಟರಂಗದೊಳ್ ಕಾಣಿಸಿದೆನಾ ಬಲದೊ | ಳೇಸು ಕೈದುಗಳೊಳೊದಗಿದರೆ ಕೈದುಗಳನೆಲ್ಲಮಂ ತಡೆಗಡಿದನು || ಏಸಾನೆಕುದುರೆಗಳ ಕವಿದುವೈಸಂ ಸೀಳ್ದ | ನೇಸು ತೇರುರವಣಿಸಿತೈಸುರಥಮಂ ಮುರಿದ | ನೇಸುಮಂದಿಗಳುರುಬಿತೈಸುಮಂ ಕೊಂದ ನಿನ್ನೇಸು ಸಾಹಸಿಯೊ ಲವನು ॥೪೬||
ಜಾನಕಿಯ ಸುತನ ಬಾಣಾವಳಿಯ ಹಾವಳಿಯ | ನೇನೆಂಬೆನಹಿತರಂ ಕವರಿದುವು ಸವರಿದುವು | ಬಾನೆಡೆಯೊಳಿಟ್ಟಣಿಸಿ ಹರಿದುವು ತರಿದುವು ಕೊಂದುವರಿದುವು ಪರಿದುವು || ಆನೆ ಕುದುರೆಗಳನುರೆ ಸೀಳಿದುವು ತೂಳಿದುವು | ನಾನಾ ಪ್ರಕಾರದಿಂ ಕೆಡಹಿದುವು ಕೊಡ ಹಿದುವು | ಸೇನೆಗಳೊಡಲ್ಗಳಂ ಪಚ್ಚಿದುವು ಕೊಚ್ಚಿದುವು ತಲೆಗಳಂ ತತ್ಕ್ಷಣದೊಳು || ೪೭॥
ಭೂರಿಬಾಣದೊಳಹಿತಸೇನೆಯೊಳ್ ಮುಳಿದು ಚ | ತ್ವಾರಿಂಶದನುಪಮ ಭ್ರಮಿಗಳಂ ತಡೆಗಡಿದು | ವೀರ ಲವನಲ್ಲಿ ಕುಶನಂ ಕಾಣದೆಡಬಲದೊಳರಸೆ ರುಧಿರಾಕ್ಷನೆಂಬ || ಶೂರಾಸುರಂ ಲವಣ ದಾನವನ ಮಾತುಲಂ | ಶ್ರೀರಾಮ ಚರಣ ಶರಣಾಗತಂ ಸೀತಾಕು | ಮಾರಕನ ಕರದ ಕೋದಂಡಮಂ ತುಡುಕಿದಂ ಮೇಲ್ಪಾಯ್ತು ರೋಷದಿಂದ ॥೪೮||
ಕರದ ಬಿಲ್ಲಂ ಕಿತ್ತು ಕೊಂಡೋಡುವ ಸುರನಂ | ಭರದಿಂದೆ ಬೆಂಬತ್ತಿ ಪೋಗದಿ ರ್ ಪೋಗದಿರ್ |ತಿರುಗೆನುತ ವಾಲ್ಮೀಕಿಮುನಿಪನಿತ್ತಗ್ನಿ ಮಂತ್ರಧ್ಯಾನಮಂ ಮಾಡಲು || ದೊರೆಕೊಂಡುದೊಂದು ಚಕ್ರಂ ಬಳಿಕ ಲವನದಂ । ಧರಿಸಿ ಚಕ್ರಾಯುಧಂ ತಾನೆನಲ್ ಕಂಗೊಳಿಸು | ತುರವಣಿಸಿ ರುಧಿರಾಕ್ಷನಂ ಗಗನದೊಳ್ ಪಿಡಿಯೆ ಕಂಡವನ ಪಡೆ ಕವಿದುದು | ೪೯||
ಮತ್ತು ರುಬಿದನಿತು ಬಲಮಂ ಕರದ ಚಕ್ರದಿಂ | ತತ್ತರವರಿದು ರಾಕ್ಷಪೇಂದ್ರನಂ ಬಿಡದೆ ಲವ | ನೊತ್ತಾಯಮಂ ಮಾಡುತಿರೆ ಕಂಡು ದಶರಥ ನೃಪತಿಯ ಮಂತ್ರಿಯ ತನುಜರು| ಹತ್ತು ಮಂದಿ ಪ್ರಸಿದ್ಧ ಪ್ರಧಾನಿಗಳಾಗ |ಹತ್ತು ಹತ್ತಂಬುಗಳನೊರೆರ್ವರೆಚ್ಚು ಕಡಿ | ಹತ್ತು ಹತ್ತಾಗೆ ಬಾಲಕನ ಪಾರುಂಬಳೆಯನಾಕ್ಷಣಂ ಖಂಡಿಸಿದರು ॥ ೫೦||
ಕರದ ಚಕ್ರಂ ಪೋಗೆ ಪರಿಘಮಂ ಕೊಂಡು ಲವ | ನುರವಣಿಸಿ ಹೊಯ್ದ ನಿಬರಂ ಕೆಡಣೆ ಮತ್ತೆ ಬಂ | ಧುರು ಗದಾದಂಡಮಂ ಕೊಂಡು ರುಧಿರಾಕ್ಷನೀತನ ಪ ಣೆಯನಪ್ಪಳಿಸಲು || ಇರದೆ ಮೂರ್ಛಿತನಾಗಿ ಬಾಲಕಂ ಕೂಡೆ ಚೇ! ತರಿಸಿಕೊಂಡೆದ್ದು ಕುಂತದೊಳಾ ಮಹಾಸುರನ | ಶಿರವನರಿದಾದಿತ್ಯನಿತ್ಯ ನಿಜಚಾಪಮಂ ತೆಗೆದುಕೊಂಡಂ ಧುರದೊಳು ॥೫೧||
ಬಿಡದೆ ರುಧಿರಾಕ್ಷ ರಾಕ್ಷಸನಂ ರಣಾಗ್ರದೊಳ್ | ಕೆಡಹಿ ನಿಜಚಾಪ ಚಾಪಲಹಸ್ತನಾಗಿ ಲವ|ನಡೆಸಿದರಿಚತುರ ಚತುರಂಗಮಂ ಸಂಹರಿಸತೊಡಗಿದಂ ಮತ್ತೆ ಮುಳಿದು| ತೊಡವುಗಳ ಕಾಯಕಾಯತವಾದ ಜೋಡುಗಳ್ || ಕಡಿಮೆ ಕುಣಪಕ್ಕೆ ಪಕ್ಕೆಗಳಾಗೆ ಪಟುಭಟರ್ | ಪೊಡೆಗೆಡೆದರಾಗ ರಾಗದೊಳಮರನಾರಿಯರ್ ತಕ್ಕೆ ಸಲಂಬರದೊಳು ||೫೨||
ಪಡೆ ಮಡಿಯುತ್ತಿರ್ದುದು ಲವಾಸ್ತ್ರದಿಂದಿತ್ತ ಕುಶ | ನೊಡನೆ ಸೌಮಿತ್ರಿಗಾದುದು ಯುದ್ಧಮಾಗ ಕಿವಿ | ಗಡಿಗೆ ತೆಗೆದೆಚ್ಚ ನೈದಂಬುಗಳನಿದಿರಾಗಿ ಭೂಮಿಜೆಯ ಸುತನ ಮೇಲೆ || ಕಡುಗಿ ಖಾತಿಯೊಳೀತನೊಂದು ಸರಳಂ ಪೂಡಿ | ಬಿಡಲೂರ್ಮಿಳಾವಲ್ಲಭನ ತೇರೆರಡು ಗಳಿಗೆ | ಬಿಡದೆ ತಿರುಗಿತು ಬವಣಿಗೊಂಡು ರಥವಾಜಿಗಳ ಪೊಡೆಗೆಡೆದುವೇನೆಂಬೆನು॥ ೫೩ ||
ಮೆಚ್ಚಿದಂ ಬಾಲಕನ ವಿಕ್ರಮಕೆ ಲ ಕ್ಷ್ಮಣಂ | ಪೆಚ್ಚಿದತಿರೋಪದಿಂ ಮತ್ತೊಂದು ರಥಕಡ | ರೆಚ್ಚನೆರಡಂಬಿನಿಂದೀತನ ಕಿರೀಟಮಂ ಕವಚಮಂ ಮೂರರಿಂದ || ಕೊಚ್ಚಿ ಕೆಡಸಿದನಾಗ ಜಾನಕಿಯ ಸೂನು ಪೆರೆ | ಯುಚ್ಚಿ ದಹಿಪತಿಯಂತೆ ಶೌರ್ಯ ವಿಮ್ಮಡಿಸೆ ನಗು | ತುಚ್ಚರಿಸಿದಂ ವಿನಯಪೂರ್ವಕದೊಳರಸ ಕೇಳಾ ರಾಘವಾನುಜಂಗೆ||೫೪||
ಧುರದೊಳ್ ಕಿರೀಟ ಕವಚದ ಪೊರೆಯಿದೇಕೆಂದು | ಪರಿಹರಿಸಿದುಪಕಾರಕಪಕಾರಮಂ ಮಾಡೆ | ನುರುಸೈನ್ಯಭಾರಮಂ ನಿನಗೆ ಬಿಡಿಸುವೆನೀಗ ನೋಡಾದೊಡೆನುತೆ ಕುಶನು || ವರವ ಸೂಕ್ತದೊಳಥರ್ವಮಂತ್ರದ ಪುನ | ತರಣಿಯಿಂದನಲಾಸ್ತ್ರ ಮಂ ಪೂಡಿ ತೆಗೆದಿನ | ಲ್ಕು ರಿದುದು ಚತುರ್ಬಲಮಕಾಲದೊಳ' ಪುರಹರಂ ಪ ಣೆಗಣ್ಣಿರೆದನೆನೆ ॥ ೫೫ ||
ಬಲಮೆಲ್ಲಮಂ ಸುಡುವ ಪಾವಕ ಜ್ವಾಲೆಯಂ | ಕಲಿಲ ಕ್ಷ್ಮಣಂ ಕಂಡು ವರುಣಾಸ್ತ್ರದಿಂದದಂ | ನಿಲಿಸಿ ಬಾಲಕಂ ಮತ್ತೆ ನಸುನಗುತೆ ವಾಯವ್ಯಮಾರ್ಗಣವನೆಸಲು || ಕುಲಶೈಲಮಂ ಕಿತ್ತು ಬಿಸುಡುವಂದದ ಗಾಳಿ | ಸಲೆ ಬಡಿದು ಪಡೆಗಳಂ ಕೆಡಹುತಿರೆ ನಡೆತಂದು | ಸೆಲವುಗೊಂಡೂರ್ಮಿಳಾಕಾಂತನಂ ಪೆರಗಿಕ್ಕಿ ಕಾಲಜಿತುವಿದಿರಾದನು||೫೬||
ಭುಜಬಲಕೆ ಪಾಡಲ್ಲ ತರಳನೆಂದುಳುಹಿದೊಡೆ | ವಿಜಯನಾದಪೆ ಬೇಡ ಹೋಗೆಲವೊ ಕಾರುಣ್ಯ | ರುಜುವಲ್ಲ ತಾನೆನುತ ಕಾಲಜಿತುವೆಚ್ಚಡಾತನ ಬಾಣಮಂ ಖಂಡಿಸಿ || ಅಜಗಳಸ್ತನದಂತೆಸೆವ ನಿನ್ನ ಪೌರುಷಂ | ನಿಜವಾದೊಡಾಂ ಸೈರಿಸುವೆನಲ್ಲದಿರ್ದೊಡಾ | ರಜದಿಂದ ಪುಸಿವೇ ನಾಲಗೆಯನರಿವೆನೆಂದಾಕು ಶಂ ಕೋಲ್ಗರೆದನು||೫೭||
ಎಸುಗೆಯೆಂತುಟೊ ಕು ಶನ ಕಣೆ ರಣದೊಳಾರ್ದು ಗ | ರ್ಜಿಸುವ ನಾಲಗೆಯ ನರಿದುದು ಬಳಿಕ ಮಾನದಿಂ | ಮಸಗಿ ರೋಪದೊಳುಬ್ಬಿ ಕಾಲಜಿತುವೆಚ್ಚಡಾ ಜಾನಕಿಯ ಸೂನು ನಗುತೆ ॥ ನಿಶಿತಾಸ್ತ್ರದಿಂದೆ ಕೈಕಾಲ್ ತಲೆಗಳಂ ಕೂಡೆ | ಕುಸುರಿದರಿಯಲ್ ಕಂಡು ಖತಿಯಿಂದೆ ಲಕ್ಷ್ಮಣಂ | ಮುಸುಕಿದಿಂ ಕೋಲ್ಗಳಂ ಬಾಲಕನಮೇಲೆ ಮೂಲೋಕದಾಲೋಕಮಡಗೆ |೫೮||
ವೀರಲಕ್ಷ್ಮಣನಿಸುವ ಕೂರಂಬನೆಲ್ಲಮಂ | ವಾರುವಂ ನಾಲ್ಕು ಮಂ ತೇರಂ ಸುಕೇತುವಂ | ನಾರಿಯಂ ಚಾಪ ತೂಣೀರಂಗಳಂ ಕೆಲದ ಚಾರರಂ ಸಾರಥಿಯನು || ಚಾರು ಕವಚವನೆಚ್ಚು ಧಾರಿಣಿಗೆ ಕೆಡಹ ಲ್ಕೆ | ತೋರಗದೆಗೊಂಡೂರ್ಮಿಳಾರಮಣ ನೈತರಲ್ | ಧೀರನಹ ಸೀತಾಕುಮಾರಕಂ ಸಾಯಕದ ಸಾರದಿಂ ಪುಡಿಗೈದನು||೫೯||
ಚರ್ಮಖಡ್ಗಂಗಳಿಂ ವಿವಿಧಾಯುಧಂಗಳಿಂ | ದೂರ್ಮಿಳಾಕಾಂತನೊದಗಿದೊಡನಿತನೆಲ್ಲಮಂ | ನಿರ್ಮಲಾಸ್ತ್ರಂಗಳಿಂ ಕತ್ತರಿಸಿ ವಾಲ್ಮೀಕಿ ಮುನಿವರಂ ತನಗೆ ಕೊಟ್ಟ || ಮರ್ಮಭೇದಿಗಳಾದುವೈದಂಬುಗಳ ನಿಸಲ್ | ಸ್ಪರ್ಮಣಿ ಧರಾತಳಕ್ಕೆ ನಭದಿಂದುರುಳ್ವಂತೆ | ಪೆರ್ಮರವೆಗೊಂಡು ಬೀಳ್ವನಿತರೊಳ್ಕೊತೋಳ್ಕೊಯ್ದು ಕುಶನಾರ್ದು ಬೊಬ್ಬಿರಿದನು||೬೦||
ಆ ಘೋರತರದ ಸಂಗ್ರಾಮದೊಳ್ ತಾನೆಚ್ಚ | ಮೋಘವಾಗಿರ್ದ ಮುನಿ ಕೊಟ್ಟ ದಿವ್ಯಾಸ್ತ್ರದ ಮ | ಹಾಘಾತಿಯಿಂದ ಕಡುನೊಂದು ಮೂರ್ಛಿತನಾಗಿ ಬಿದ್ದು ಭೂಳತದಮೇಲೆ || ರಾಘವಾನುಜನಿರೆ ಕುಶಂ ಬಳಿಕ ನಿಜಹಸ್ತ | ಲಾಘವದೊಳಲ್ಲಿರ್ದರಂ ನಡೆದು ಲವನಂ ಬ। ಲೌಘಮೊತ್ತಾಯದಿಂ ಮುತ್ತಿಕೊಂಡಿರ್ದ ಕೋಲಾಹಲವನಾಲಿಸಿದನು ॥ ೬೧||
ತರ ಚಾಪ ಚರ್ಮ ಖಡಂಗಳಂ ಕೊಂಡು ಕುಶ | ನಿರದೆ ಲವನಿದ್ದೆಡೆಗೆ ಬಗಿದನಲ್ಲಂ ಖಗೇ ! ಶ್ವರನಂತೆರಗಿದನದನೇವೇಳ್ವೆ ನಳಿದುಳಿದ ರಿಪುವಾಹಿನೀ ಭ್ರಮಿಗಳು || ಪರೆದುವೆ ಣ್ದೆಸೆಗಳ್ಗೆ ಸೀತಾಕುಮಾರಕರ್ | ತಿರುಗಿದರ್ ತುರಗಮಿಹ ಬನಕಾಗಿ ದೇವಪುರ ! ದರಸ ಲಕ್ಷ್ಮೀಶ ರಾಘವನಲ್ಲಿಗೈದಿದರ್ ದೂತರತಿವೇಗದಿಂದೆ||೬೨||
ಜೈಮಿನಿ ಭಾರತ. 41
ಇಪ್ಪತ್ತೊಂದನೆಯ ಸಂಧಿ ಮೊದಲಭಾಗ
ಪದ್ಯ 1 ರಿಂದ _35
ರಣರಂಗದಲ್ಲಿ ರಾಮ
ನಿರೂಪಣೆ: ಸುಬ್ಬುಲಕ್ಷ್ಮಿ
ಸಂಕ್ಷಿಪ್ತ ರೂಪ
ದೀಕ್ಷೆಯಲ್ಲಿದ್ದ ರಾಮ ಭರತನ ಬಳಿ ಲಕ್ಷ್ಮಣಶತ್ರುಘ್ನರ ಬಗ್ಗೆ ಕೊರಗುತ್ತಾನೆ. ಏನಾದರೋ ಹೇಗಿರುವರೋ ಎಂದು. ಗೆದ್ದರೋ, ಸೋತರೋ, ಕುದುರೆಯನ್ನು ತರುವರೋ ಇಲ್ಲವೋ ಎಂದೆಲ್ಲ ಚಿಂತಿಸುವನು. ಸುದ್ದಿ ತಿಳಿಯಲು ಭರತನು ದೂತರನ್ನು ಕಳಿಸಲು ಅವರು ಬಂದು ಹೇಳಿದರು.
ಜೀಯ ಬಿಡು ದೀಕ್ಷೆಯಂ. ನಡಿ. ಅಲ್ಲಿ ನಿನ್ನನ್ನು ಹೋಲುವ ಬಾಲಕರು ಇಡೀ ಸೈನ್ಯವನ್ನು ಅಡಗಿಸುತ್ತಿದ್ದಾರೆ. ಶತ್ರುಘ್ನ ಲಕ್ಚ್ಮಣರು ಮೈ ಮರೆತಿದ್ದಾರೆ. ದಳಪತಿಗಳ ಸಾವು, ಚತುರಂಗಬಲದ ನಾಶವಾಗುತ್ತಿದೆ ಎನ್ನಲು ರಾಮನು ಕೇಳಿ ಮೂರ್ಛಿತನಾದನು. ಬಳಿಕ ಚೇತರಿಸಿಕೊಂಡೆದ್ದು ಯಾವ ಲಕ್ಷ್ಮಣ ಎಲ್ಲೆಡೆಯಲ್ಲಿಯೂ ತನ್ನೊಂದಿಗೆ ಇದ್ದವನು ಈಗ ಈ ಸ್ಥಿತಿಯೇ ಎಂದು ಅಳಲಿದನು. ಭರತನು ಅಣ್ಣನನ್ನು ಸಂತೈಸಿ ತಾನು ಹೋಗಿ ಬರುವೆನೆಂದನು. ಜಾಂಬವ, ಸುಷೇಣ ಹನುಮಂತ, ಅಂಗದ, ನೀಲ, ಶತಬಲಿ ಮುಂತಾದ ವೀರರ ಪಡೆಯೊಂದಿಗೆ ಹೊರಟು ಹನುಮಂತನನ್ನು ರಣರಂಗವನ್ನು ನೋಡಿ ತಿಳಿದುಬರಲು ಕಳಿಸಿದನು.
ಹಾರಿದ ಹನುಮನು ರಣರಂಗದ ಕೋಲಾಹಲವನ್ನು ಕಂಡನು. ಪಡೆಯ ಅಳಿವನ್ನು ನೋಡಿದನು. ಎಚ್ಚರ ತಪ್ಪಿದ ಲಕ್ಷ್ಮಣ ಶತ್ರುಘ್ನರನ್ನು ಕಂಡನು. ಅವರನ್ನು ಎತ್ತಿಕೊಂಡು ಬಂದು ರಥದಲ್ಲಿ ಮಲಗಿಸಿ ಕುದುರೆಯನ್ನು ಕದಳಿಗೆ ಕಟ್ಟಿರುವುದನ್ನೂ ಹೇಳಿದನು. ಯೋಜನದಗಲಕ್ಕೆ ಎಲ್ಲಿಯೂ ಸ್ಥಳವಿಲ್ಲದ ಹಾಗೆ ಶರಮಯವಾಗಿತ್ತು. ಬಾಲಕರ ಮೇಲೆ ಕನಲಿ ಭರತನು ಕೋದಂಡವನ್ನು ಜೇಗೆಯ್ದನು. ಬಾಲಕರು ಶತ್ರುಸೈನಿಕರ ತಲೆಗಳನ್ನು ಚೆಂಡಾಡಿದರು. ಸುರರು ಇವರ ಪರಾಕ್ರಮ ಕಂಡು ಹೂಮಳೆಗರೆದರು.
ಕುಶಲವರ ಮುಂದೆ ನಿಂತು ಗೆಲ್ಲುವ ಭಟರನ್ನು ಕಾಣದಂತಾಯಿತು. ಚತುರಂಗ ಬಲ ಅಲ್ಲಾಡಿತು.
ಹನುಮನು ಭರತನಿಗೆ ಬಾಲಕರ ಆಕೃತಿ ರಾಮನಂತಿದೆ ನೋಡು ಎನ್ನಲು ನೋಡಿದನು. ಅವನೆದೆಯಲ್ಲಿ ಸ್ನೇಹವು ಮೂಡಿತು. ನಿಧಾನವಾಗಿ ಮಾತನಾಡಿಸಿದನು. ನೀನಾರು? ಇವನಾರು? ಕುದುರೆಯನ್ನು ಏಕೆ ಕಟ್ಟಿದಿರಿ ಇತ್ಯಾದಿ.ಕಟ್ಟಿದ ಹಯವನ್ನು ಬಿಡುವವರಲ್ಲ. ವಾಲ್ಮೀಕಿಗಳ ಆಶೀರ್ವಾದದ ಬಲವಿದೆ. ಮೊದಲು ಯುದ್ಧ ಮಾಡು ಎಂದು ಕುಶ ಉತ್ತರಿಸಿದನು. ಕುದುರೆಯ ಬಳಿಗೆ ತಮ್ಮನನ್ನು ಕಳಿಸಿ ತಾನು ಭರತನ ಚತುರಂಗದಳವನ್ನು ಕೆದರಾಡಿದನು.
ಭರತ, ನಳ ಹನುಮ ಎಲ್ಲರ ಮೇಲೂ ಬಾಣಗಳ ಮಳೆಗರೆದನು. ರಥಕುದುರೆಗಳು ತರಿದು ವೆಲ್ಲಾಡಿದವು. ಭರತನೂ ಎಚ್ಚರ ತಪ್ಪಿ ನೆಲಕ್ಕೆ ಬಿದ್ದನು. ಹನುಮನು ಅವನನ್ನು ಎತ್ತಿ ತಂದನು.
ಭಟರು ಈ ವಿಷಯವನ್ನು ರಾಮನಿಗೆ ತಿಳಿಸಿದರು. ಕೇಳಿ ಪರಿತಾಪಪಟ್ಟು ಸುಗ್ರೀವ ಮತ್ತು ವಿಭೀಷಣರೊಂದಿಗೆ ತಾನೇ ಹೊರಟನು. ಬಂದು ರಣರಂಗವನ್ನೂ, ಮಲಗಿದ್ದ ತಮ್ಮಂದಿರನ್ನೂ, ಕುದುರೆಯನ್ನು ಕಟ್ಟಿದ ಬಾಲಕಗನ್ನೂ ಕಂಡು ವಿಸ್ಮಿತನಾಗಿ ಮಾತನಾಡಿಸಿದನು.
ಮಕ್ಕಳಿರಾ, ನೀವು ಯಾರು? ನಿಮಗೆ ಈ ವಿದ್ಯೆಯನ್ನು ಕಲಿಸಿದವರಾರು? ತಂದೆತಾಯಿಯರಾರು? ಏಕೆ ನಮ್ಮ ಸೇನೆಯನ್ನು ಜಯಿಸುವ ಛಲ?ಇತ್ಯಾದಿ ಪ್ರಶ್ನಿಸಿದನು. ಕುದುರೆಯನ್ನು ಬಿಡಿಸಿಕೊಳ್ಳುವ ಪ್ರಯತ್ನ ಮಾಡು. ವ್ಯರ್ಥ ಮಾತುಗಳೇಕೆ? ಎಂಬ ಉತ್ತರ ಬಂತು. ನಿಮ್ಮನ್ನು ನೋಡಿದರೆ ಕದನಕ್ಕೆ ಮನ ಬರುತ್ತಿಲ್ಲ. ನಿಮ್ಮ ಜನನಸ್ಥಿತಿಯೇನು? ಹೇಳಿ ಎಂದು ಒತ್ತಾಯಿಸಲು ತಾವು ಸೀತೆಯ ಮಕ್ಕಳೆಂದೂ ವಾಲ್ಮೀಕಿ ಮಹರ್ಷಿಗಳು ತಮ್ಮ ಗುರುಗಳೆಂದೂ ಎಲ್ಲ ವಿದ್ಯೆಗಳನ್ನೂ ಕಲಿಸಿ ರಾಮಾಯಣವನ್ನೂ ಕಲಿಸಿರುವರು ಎಂದು ಹೇಳಲು ಅದನ್ನು ಕೇಳಿ ಇವರು ತನ್ನ ಮಕ್ಕಳೆಂದು ತಿಳಿದನು. ಸೀತೆಯ ಹೆಸರು ಕೇಳಿ ಮೂರ್ಛೆ ಹೋದನು. ಮತ್ತೆ ಎದ್ದು ಸುಗ್ರೀವನಿಗೆ ಇನ್ನೊಮ್ಮೆ ನೋಡು ಎನ್ನಲು ಇಂತಹ ಸತ್ವ ನಿಮ್ಮ ಮಕ್ಕಳಿಗಲ್ಲದೆ ಮತ್ತೆ ಯಾರಿಗೆ ಬರುವುದು ಎಂದನು.
ಇತ್ತ ನೀಲನು ಕುದುರೆಯ ಬಳಿಗೆ ಬರಲು ಕುಶನು ಅವನನ್ನು ಎದುರಿಸಿದನು. ಕೋಟಿರೂಪದಲ್ಲಿ ನೀಲ ಕಾಣಿಸಲು ಕುಶನು ರವಿಯನ್ನು ಆರಾಧಿಸಿ ಇವರೆಲ್ಲರನ್ನೂ ನಿಗ್ರಹಿಸುವಂತಹ ಬಾಣಗಳನ್ನು ಪಡೆದನು
ಇಪ್ಪತ್ತೊಂದನೆಯ ಸಂಧಿ ಮೊದಲ ಭಾಗ
ಪದ್ಯ 1 ರಿಂದ 35
ಸೂಚನೆ ತನಯರೊಳ್ ಕಾದಿ ಮೂರ್ಛಿತನಾದ ರಾಮನಂ | ಮುನಿಮೌಳಿ ವಾಲ್ಮೀಕಿ ಬಂದು ಸಂತೈಸ ಲ್ಕೆ | ವಿನುತಾಶ್ವ ಮೇಧಮಂ ಪೂರೈಸಿ ಸೀತೆಸಹಿತವನಿಯಂ ಪಾಲಿಸಿದನು ।
ಅರಸ ಕೇಳ್ ಜಾಹ್ನವಿಯ ತೀರದೊಳ್ ದೀಕ್ಷೆಗೊಂ | ಡಿರುತಿರ್ದ ರಾಘವಂ ಚಿತ್ತದನುತಾಪದಿಂ ಭರತನಂ ಕರೆದು ಶತ್ರುಘ್ನ ನೇಗೈದನೆಂಬುದನುಸಿರ್ಪರಾರುಮೆನಗೆ || ತರಳರಂ ಪಿಡಿದಪನೆ ಕೊಂದ ಪನೊ ಲಕ್ಷ್ಮಣಂ| ಧುರದೊಳ್ ಬಳಲ್ದಪನೊ ಗೆಲ್ದ ಪನೊ ಸೋಲ್ದ ಪನೊ । ತುರಗಮಂ ಬಿಡಿಸಿ ತಂದಪನೊ ನಾನರಿಯೆನೆಂದಸುರಾರಿ ಚಿಂತಿಸಿದನು | ೧ ||
ಕನಸಿನೊಳ್ ಸೋ ಲ್ದು ದಿಲ್ಲಾ ರ್ಗೆಯುಂ ಲಕ್ಷ್ಮಣಂ| ವನಚಾರಿ ಬಾಲಕರ ಪಾಡಾವುದೀಗ ಮುಳಿ | ದನುವರದೊಳಿರ್ವರಂ ಘಾತಿಸದೆ ಸಮ್ಮೋಹನಾಸ್ತ್ರದೊಳ್ ಮರವೆಗೊಳಿಸಿ || ತನಗೆ ತಂದೊಪ್ಪಿಸುವ ತೆರದೊಳತಿಬಲ ಚರರ | ನನುಜನೆಡೆಗಟ್ಟೆಂದು ರಾಘವಂ ಭರತನೊಡ|ನೆನಲವಂ ದೂತರಂ ಕಳುಹಲವರರಿದು ಬಂದವನಿಪತಿಗಿಂತೆಂದರು||೨||
ದೇವ ಬಿಡು ದೀಕ್ಷೆಯಂ ಕಾದು ನಡೆ ಕು ಶನೊಳ್ ಮ | ಹಾವೀರನಾತನಾ ಲವನಿಂದೆ ಬಲ್ಲಿದಂ । ಜೀವಸಂದೇಹವಾಗಿರ್ಪುದ್ಯೆ ಶತ್ರುಘ್ನ ಲಕ್ಷ್ಮಣರ ಖಿಳಸೇನೆ || ಭಾವಿಸೆ ತವಾಕೃತಿಯ ಬಾಲಕರ ದೆಸೆಯಿಂದ | ಗೋವರ್ಧನಂಗೆ ಮೊಲೆಗೊಟ್ಟ ಪೂತನಿವೊಲಾ । ಯ್ತೇಗೈವೆವೆಂದು ದೂತರ್ ನುಡಿಯೆ ರಾಘವಂ ಕೇಳಿ ಮೂರ್ಛಿತನಾದನು | ೩ ||
ಬಳಿಕ ಶೈತ್ಯೋಪಚಾರಂಗಳಿಂ ಭರತ ನಿನ | ಕುಲಸಾರ್ವಭೌಮನಂ ಸಂತೈಸುತಿರೆ ಮೂರ್ಧೆ | ತಿಳಿದೆದ್ದು ಲಕ್ಷ್ಮಣನದಾವೆಡೆಯೊಳೆನ್ನ ಸೊಲಿಸುವನದಾವೆಡೆಯೊಳು || ಹಳುವಿನೊಳ್ ತನಗಾಗಿ ನವೆದನುಜನಾವೆಡೆಯೊ | ಳಳಿದನೇ ಸೌಮಿತ್ರಿ ಹಾ ತಮ್ಮ ಹಾ ಯೆನುತೆ | ಹಳವಳಿಸಿ ಬಿಸುಸುಯ್ದಳಲ್ದುಮರುಗಿದನಂದು ರಾಘವಂ ಶೋಕದಿಂದೆ ||೪||
ಜಾನಕಿಯನಂದು ಪೊರಮಡಿಸಿದನ್ಯಾಯದಿಂ | ಭಾನುಕುಲ ಸಂಭವಂಗಾದವಿಂತೀತೆರದ| ಹಾನಿಯಿದು ಸೌಮಿತ್ರಿ ತತ್ರು ಘ್ನರಂ ಜಯಿಸುವಗ್ಗಳೆಯರಾರ್ ಜಗದೊಳು || ಕಾನನದ ಮುನಿಸುತರ್ಗದಟೆತ್ತಣದು ರಾಮ | ಸೂನುಗ ಳ್ ತಪ್ಪದಾಕೃತಿಗಳಂ ನೋಡಲನು | ಮಾನಮೇಕೆಂದು ಮೊರೆಯಿಟ್ಟುದೆಲ್ಲಾ ಜನಂ ರಾಘವಂ ಕೇಳುವಂತೆ||೫||
ಸೀತಾವದನಚಿ ಹ್ನ ಮೆನ್ನಂಗದಾಕಾರ |ಮಾ ತಾಪಸಾರ್ಭಕರೊಳಿರ್ದಪುದು ಗಡ ಪಡೆದ | ಮಾತೆಯೆಲ್ಲರ್ದ ಪಳೊ ಕುದುರೆಯಂ ಕಟ್ಟುವದಟೆತ್ತಣದಿವರ್ಗೆಂಬುದ || ದೂತರಂ ಕರೆ ಕೇಳ್ವೆ ನಿನ್ನೊಮ್ಮೆ ಶಿಶುಗಳಂ | ಘಾತಿಸದೆ ದಯೆಗೈದು ತಾನೇರ್ವಡೆದೆನೊ ಮೇ | ಣಾತರಳರತಿಬಲರೊ ಸೌಮಿತ್ರಿ ಬಿದ್ದನೇಕೆಂದು ರಘುಪತಿ ನುಯ್ದನು ।೬।|
ಇಂತಿಂತಳ ಲ್ದಾಗ ಬಿಸುಸುಯ್ದೊಡನೆ ರಾಫ | ವಂ ತನ್ನ ಸಹಜರ ಗುಣಂಗಳಂ ನೆನೆನೆನೆದು | ಚಿಂತಿಸುತಿರೆ ಮತ್ತೆ ಕುಶನ ಶರಘಾತಿಯಿಂದುರೆ ನೊಂದು ಭೀತಿಗೊಂಡು || ಸಂತಪ್ತರಾಗಿ ಪರಿತಂದು ಲಕ್ಷ್ಮಣನೊಡಲೊ | ಳಂತರಿಸಲರಿಯದನ ಮಡಿದುದು ಸಕಲಸೈನ್ಯ | ಮೆಂತಿಹನೊ ಶತ್ರುಘ್ನ ನೇಕೆ ದೀಕ್ಷೆಯಿದೆಂದು ಚರರೈದೆ ಮೊರೆಯಿಟ್ಟರು ||೭||
ಮೊರೆವ ಏಳ್ದ ದೂ ತರಂ ಗರ್ಜಿಸುತೆ ರಾಘವಂ | ಗೆರಗಿ ಕೈಮುಗಿದು ಭಯವಿಹ್ವಲರ್ ಚಾರರಿವ | ರರಿದಪರೆ ಸೌಮಿತ್ರಿ ಶತ್ರುಘ್ನ ರಾಹವಕ್ರಮದಿಂದೆ ತನು ಮನವನು || ಮರೆದರಲ್ಲದೆ ಮರಣವೆತ್ತಣದು ಸಾಕಿನ್ನು | ಬರಿದೆ ಚಿಂತಿಸಬೇಡ ನಾಂ ಪೋಗಿ ಬಾಲಕರ | ಮರುಕಮಂ ಬಿಡಿಸಿ ತಹೆನಶ್ವಮಂ ಕಳುಹೆನ್ನನೆಂದು ಭರತಂ ನುಡಿದನು ।೮।|
ಬಳಿಕ ಜಾಂಬವ ಸುಷೇಣಾಂಗದ ಹನೂಮಂತ | ನಳ ನೀಲ ಕುಮು ದ ಶತಬಲಿ ಗವಯರೆಂಬ ಕಪಿ | ಗಳ ಪಡೆಯನೆಲ್ಲಮಂ ಬಲದೊಳುಳಿದಖಿಳ ಚತುರಂಗಮಂ ಕೂಡಿಕೊಟ್ಟು | |ಕಳುಹ ಲಿನಕುಲ ಸಾರ್ವಭೌಮನಂ ಬೀಳ್ಕೊಂಡು | ತಳೆದು ಸುರನದಿಯ ತೀರದೊಳಾಂಜನೇಯನಂ | ಕೊಳಗುಳದ ವೃತ್ತಾಮತಮಂ ಕಂಡು ಬಂದೊರೆವುದೆಂದು ಭರತಂ ಪೇಳ್ದನು||೯||
ಧೀಂಕಿಟ್ಟನಲ್ಲಿಂದೆ ಕಲಿಹನುಮ ನಾರಣದೊ । ಳಂಕಿತದ ಕುಶನ ಬಾಣಂಗಳಿಂ ಮಡಿದ ಬಲ | ಸಂಕುಲವನಿ ಕ್ಷ್ವಾಕುನಂದನಂ ನಿನ್ನ ಸುತೆ ಸೀತೆಯಂ ಬಿಟ್ಟನೆಂದು || ಕೊಂಕದಿರು ಸೈರಿಸುವುದೆಂದೈದೆ ಭೂದೇವಿ | ಯಂ ಕೋಪಮಂ ಮಾಣಿಸ ಬೇಡಿಕೊ ಳ್ವ ತರ| ದಿಂ ಕೆಡೆದು ಮೈಮರೆದು ಮಲಗಿರ್ದ ನೌಮಿತ್ರಿ ಶತ್ರುಘ್ನ ರಂ ಕಂಡನು | ೧೦ ||
ಕಂಡು ಕಪಿವೀರನವರೀರ್ವರಂ ತೆಗೆದೆತ್ತಿ | ಕೊಂಡು ಭರತನ ಪೊರೆಗೆ ತರಲವಂ ಬಳಿಕ ಮಣಿ | ಮಂಡಿತ ವರೂಥದೊಳವರ್ಗಳಂ ಪಟ್ಟಿರಿಸಿ ಹಯಮಂ ಕದಳಿಗೆ ಕಟ್ಟಿ | ಚಂಡ ಶರ ಚಾಪ ಪಾಣಿಗಳಾಗಿ ತೊಳಗುವು | ದಂಡ ಕುಶ ಲವರಿರ್ವರಿರ್ಪುದಂ ಕೇಳು ಕೋ | ದಂಡಮಂ ಹೇಗೈದು ಪಡೆವೆರಸಿ ನೂಕಿದಂ ಮುಳಿದು ಬಾಲಕರ ಮೇಲೆ ॥ ೧೧॥
ಅಣ್ಣ ತಮ್ಮಂದಿರೀರ್ವರು ಮರಿಚತುರ್ಬಲಂ | ಪಣ್ಣ ಬಗೆ ಕಂಡು ಬಿಲ್ಗೊಂಡೆದ್ದು ಕೋಪದಿಂ | ದಣೆ ಕಲ್ಲಾಡಿದರ್ ಪಟುಭಟರ ತಲೆಗಳಂ ಬಾಣಪ್ರಯೋಗದಿಂದೆ || ಬಣ್ಣಿಸಲ್ ಪವಣಿ ಯೋಜನದಗಲಮೆಲ್ಲಿಯುಂ | ಕ ಣ್ಣೆವೆಯಲುಗುವನಿತರೊಳ್ ಸರಲ ಮಯಮಾಗೆ | ಚಿಣ್ಣರಂಗದ ಮೇಲೆ ಮೆಚ್ಚಿ ಪೂಮಳೆಗಳಂ ಕರೆದಮರರ್ ಪೊಗಳ್ದು||೧೨|| |
ಚಾಪ ಟಂಕಾರಂ ಜಗ ತ್ರಯಯದೊಳೆಲ್ಲಿಯುಂ | ವ್ಯಾಪಿಸಲ್ ಕಿವುಡಾದುವಷ್ಟ ದಿಗ್ಧಂತಿಗೆ | ಳ್ ಭೂಪಯೋಧೆಗಳೊಡೆವೆರಸಿದುವು ಕುಲಾದ್ರಿಗಳ ಜರಿದು ವಹಿ ಕಂಪಿಸಿದನು || ತಾಪದಿಂ ಪೊಡೆಮರಳಂ ಕೂರ್ಮನಾ ರವಿಯ । ರೂಪಡಗಿತೆಸುವ ಬಾಣಾಂಧಕಾರದೊಳಂದು | ದೀಪವಿಲ್ಲದ ಮನೆವೊಲಾದುದು ರಣಾಂಗಣಂ ಕಾದುವರದೆಂತೊ ಭಟರು ||೧೩||
ಕೋಲ್ಕರೆಯಲಾನೆಗಳ ಸುಂಡಿಲ್ಗಳುಂ ಹಯದ । ಕಾಲ್ಗಳುಂ ರಾವುತರ ಜೋದರ ಶಿರಂಗಳುಂ | ಮೇಲ್ಗೈದು ರಥಿಕರ ಧನುರ್ದಂಡಮಂ ಕೈದುವಿಡಿದ ಪಾಣಿಗಳುಮಿಳೆಗೆ || ಸಾಲ್ಗೊಂಡುರುಳುವೊದಗಿದ ಕಪಿಗಳಂಗದೊಳ್ | ಕೀಲ್ಗಳಂ ಬಲಿದಂತೆ ನಾಂಟಿದುವು ಪರಬಲಂ | ಸೋ ಲ್ದುಮಲ್ಲದೆ ಕುಶ ಲವರ ಮುಂದೆ ಗೆಲ್ವ ಭಟರಂ ಕಾಣಿನಾಹವದೊಳು|| ೧೪ ||
ಸೇನೆಯಂ ನಿಮಿಷದೊಳ್ ತಡೆಗಡಿಯೆ ಕಂಡು ಪವ | ಮಾನಜಂ ನಡೆತಂದು ಬಾಲಕರ ವಿಗ್ರಹಂ | ಭಾನುಕುಲತಿಲಕನಾಕೃತಿವೊಲಿದೆ ನೋಡೆಂದು ಭರತಂಗೆ ತೋರಿಸಿ || ಸಾನುರಾಗದೊಳತುಲ ಚಾಪಮಂ ಪಿಡಿದು ರಾ | ಮಾನುಜಂ ಕುಶನ ಸನ್ಮುಖಕೈದಿ ನುಡಿಸಿದಂ | ಸೂನುಗಳ ಮೊಗಂ ನಿರೀಕ್ಷಿಸಿ ಘನಸ್ಸೇಹದಿಂದೆ ಪುಳಕಂ ಪೊ ಣ್ಮಲು||೧೫||
ವತ್ಸ ನೀನಾರವಂ ನಿನಗೀತನೇನಹಂ । ಮತ್ಸಹೋದರರನುರೆ ಘಾತಿಸಿದಿರೆ ಮ್ಮೆಯ ಮ । ಹತ್ಸೈನ್ಯಮಂ ಕೊಂದಿರಿನಾ ದೊಡಂ ಕುದುರೆಯಂ ಬಿಟ್ಟು ಪೋಗಿ ಬರಿದೆ|| ಮತ್ಸರಿಸಬೇಡ ನಿಮ್ಮಂ ಪಡೆದ ತಾಯ ಬಳಿ | ಗುತ್ಸವದೊಳ್ಳೆದಿ ಸುಖಮಿಹುದೆಂದು ಭರತನೆನ | ಲು ತ್ಸಕದೊಳಾ ಕುಶಂ ನಸುನಗುತೆ ನುಡಿದನಿಂತಾ ರಾಘವಾನುಜಂಗೆ || ೧೬ ||
ಕಟ್ಟಿದ ತುರಂಗಮಂ ಬಿಡುವನಲ್ಲೀತನೊಡ | ಹುಟ್ಟಿದಂ ತನಗೆ ವಾಲ್ಮೀಕಿಮುನಿವರನವರ್ | ನೆಟ್ಟನೆ ರಣಾಗ್ರದೊಳ್ ನಿನ್ನನುಂ ನಿನ್ನನುಜರಂತೆ ಘಾತಿಸಿದ ಬಳಿಕ || ಮುಟ್ಟಿದುತ್ಸವದಿಂದ ತಾಯ ಬಳಿಗೈದಿ ಪೊಡ ! ಮಟ್ಟಲ್ಲಿ ಸುಖದೊಳಿರ್ದಪವೆಂದು ಕಣೆಗಳಂ | ತೊಟ್ಟು ತಾನೀಗ ಕುಶನರಿದುಕೊಳೆನುತೆಚ್ಚನಾ ಭರತನಂ ಧುರದೊಳು | ೧೬ ||
ಭರತನಂ ಗಣಿಸದಿನುತಿರೆ ಕಂಡು ಮತ್ತೆ ಕರಿ | ತುರಗ ರಥ ಪಾಯದಳ ಮೊತ್ತಿದುದು ಕೂಡೆ ವಾ | ನರ ಸಿಂಗಳೀಕ ಮುಸು ಕರಡಿಯ ಬಲಂ ಮುತ್ತಿದುದು ಬಳಿಕ ನಸುಗುತೆ ಕುಶನು|| ಕರೆದು ಕುದುರೆಯ ಬಳಿಗೆ ತಮ್ಮ ನಂ ಕಳುಹಿ ಬಿ । ಲ್ದಿ ರುವಿಂದುಗಳ್ಚಿದಂ ಕಣೆಗಳಂ ವೈರಿ ಮೋ | ಹರದ ತಲೆವಣೆಗಳಂ ಪಗೆಗಳೆರ್ದೆವಣಿಗಳಂ ರವಿಗೆಣಿಗಳಂ ಕ್ಷಣದೊಳು | ೧೮||
ಹತ್ತು ಭರತನ ಮೇಲೆ ನಳನ ಮೇಲೆಂಟು ಮೂ | ವತ್ತು ಹನುಮನಮೇಲೆ ಜಾಂಬವನಮೇಲೆ ನಾ | ಲ್ಪತಂಗದನಮೇಲೆ ತೊಂಬತ್ತು ನೀಲ ಕುಮುದರ ಮೇಲೆ ನೂರುನೂರು | | ಉತ್ತುಂಗ ಗವಯ ಶತಬಲಿ ಸುಷೇಣರಮೇಲೆ | ಹತ್ತು ಹತ್ತಂಬೊಡಲ್ವುಗಲೆನನಿಬರಂ | ಮತ್ತೆ ಘಾತಿಸಿ ಕೂಡೆ ರಾಮಾನುಜನ ಮೇಲೆ ಕೂರ್ಗಣೆಗಳಂ ಕರೆದನು ||೧೯|
ಎಲ್ಲಿ ಕು ಶನಂಬು ಸೋಂಕಿದುವಲ್ಲಿ ಮೂರ್ಛೆ ಮೃತಿ । ಯಲ್ಲದುಳಿವಿಲ್ಲ ಪಡೆಯೆಲ್ಲಮಂ ತಲ್ಲಣಿಸಿ । ಚೆಲ್ಲಿದುದು ದೆಸೆದೆಸೆಗೆ ಬಲ್ಲಿದ ಕಪೀಶ್ವರರ್ ಕೈಗೆಟ್ಟು ಮೈಮರೆದರು || ನಿಲ್ಲದೋಡಿತು ದೊದ್ದೆ ಫಲ್ಲಣೆಯನಾಂತು ನಿಂ । ದಲ್ಲಿ ಸಾರಥಿ ಕುದುರೆಗಳ್ ಮಡಿದು ತೇರ್ಮುರಿದು | ಬಿಲ್ಲುಡಿದು ಭರತನಂಗೋಪಾಂಗದಲ್ಲಿ ನಾಂಟಿದುವು ಪೊಸ ಮಸೆಗಣೆಗಳು ||೨೦||
ಜಗದೊಳ್ ಕುಶಾಸ್ತ್ರ ನಿಕರಕ್ಕೆ ಮೈಗೊಟ್ಟವಂ! ಮಿಗೆ ಪತಿತನಾಗದಿರ್ದಪನೆ ಪೇಳೆಂಬಿನಂ । ವಿಗತ ಚೇತನನಾಗಿ ಭರತಂ ಮಹೀತಳಕ್ಕೆ ಬಿದ್ದು ಮೂರ್ಧೆಯೊಳಿರಲ್ಕೆ ॥ ವಿಗಡ ಹನುಮಂ ಕಂಡು ಕಿತ್ತು ಪೆರ್ಬೆಟ್ಟ ಮಂ| ನೆಗಪಿ ತಂದರ್ಭಕನ ಮೇಲಿಡಲ್ಕಣುವೆಂದು | ಬಗೆಯದೆ ವಿಭಾಡಿಸಿದನಾತನಂ ಕಣೆಯೆಚ್ಚು ನಗುತೆ ಜಾನಕಿಯ ಸೂನು | ೨೧||
ಕಡೆಯ ಮಾತೇನಖಿಳ ಸೇನೆಯಂ ಭರತನಂ। ಕೆಡಹಿ ಕುಶನಲ್ಲಿಂದೆ ತುರಗಮಿರ್ದೆಡೆಗೆ ಬಂ | ದೊಡಹುಟ್ಟಿದಂ ವೆರಸಿ ನಿಲ್ವಿನಂ ದೂತರೀತೆರನಂ ರಘೂದ್ವಹಂಗೆ || ಕಡುವೇಗದಿಂದೆ ಪೋಗಿ ಬಿನ್ನೈಸೆ ಕೇಳ್ದಳ ಲ್ಪಿಡಿದು ಪರಿತಾಪದಿಂದುರೆನೊಂದು ವಿಸ್ಮಯಂ | ಬಡುತೆದ್ದು ಸುಗ್ರೀವ ವರವಿಭೀಷಣರೆಡಬಲದೊಳ್ಳೈದೆ ಪೊರಮಟ್ಟನು ||೨೨||
ಬಂದಂ ರಥಾರೂಢನಾಗಿ ರಣರಂಗದೊಳ್ | ನಿಂದು ಮೈಮರೆದೊರಗಿದನುಜರಂ ಮಡಿದ ಬಲ ! ವೃಂದಮಂ ಕುದುರೆಯಂ ಕಟ್ಟಿಕೊಂಡಿದಿರಾಗಿ ಬಿ ಲ್ವಿಡಿದು ಕಾಳೆಗಕ್ಕೆ || ನಿಂದಿರ್ದ ಯಮಳರಂ ಕಂಡು ಬೆರಗಾಗಿ ರಘು | ನಂದನಂ ವಿನಯದಿಂ ತಾನೆ ಬೆಸಗೊಂಡನಿಂ | ತೆಂದು ಘನ ಗಂಭೀರವಾಕ್ಯದಿಂದ ಮನೋಹರವಾದ ಸುಸ್ವರದೊಳು || ೨೩ ||
ಎಲೆ ಪಸುಳೆಗಳಿರ ನಿಮಗೀ ಧನು ರ್ವೇದಮಂ | ಕಲಿಸಿದವನಾವನಾವುದು ನಿವಾಸಸ್ಥಳಂ | ಸಲಹಿದವನಾವನಾವಂ ತಂದೆ ತಾಯಾವಳಶ್ವಮಂ ಕಟ್ಟುವಿನಿತು || ಚಲಮಿದೇತಕೆ ನಮ್ಮ ಸೇನೆಯಂ ಜಯಿಸುವೀ । ಬಲಮೇತರಿಂದಾದುದೆಂದು ನಯದಿಂದೆ ರಘು | ಕುಲ ಲಲಾಮಂ ಕೇಳ್ಕೊಡಾಕುಶಂ ನಸುನಗುತೆ ಮಾರುತ್ತ ರಂಗೊಟ್ಟನು || ೨೪ ||
ರಾಜೇಂದ್ರ ನೀನೆಮ್ಮೊಹಳಾಹವಕೆ ಬಿಲ್ಗೊಂಡು| ವಾಜಿಯಂ ಬಿಡಿಸಿಕೊಳ್ಳಲ್ಲದೊಡೆಮರುಳಪ್ಪ|
ಸೋಜಿಗದ ಮಾತಿದೇತಕೆ ನಿರುಪಮ ಕ್ಷಾತ್ರಪೌರುಷವನುಳಿದು ಬರಿದೆ||
ಸೋಜಿಗದೊಳೆಮ್ಮ ಜನನಸ್ಥಿತಿಗಳಂ ಕೇಳ್ದೊ | ಡೀಜಗಂ ಮೆಚ್ಚದೆಚ್ಚಾಡಿ ನೋಡೆನುತೆ ಕುಶ | ನಾಜಲಜ ಮಿತ್ರಕುಲ ತಿಲಕನಂ ಬಗೆಯದೆ ನುಡಿದೊಡಾತನಿಂತೆಂದನು||೨೫||
ಶಿಶುಗಳಾಗಿಹ ನಿಮ್ಮೊಳೆನಗೆ ಕಾಳಗವೆ ಪರವಶರಾಗಿ ಬಿದ್ದನುಜರಂಕಂಡು ಖತಿಯೊಳಾಂ | ವಿಶಿಖಮಂ ತೊಡುವೆನೆಂದೊಡೆ ಮನವೊಡಂಬಡದು ನಿಮ್ಮ ಜನನಸ್ಥಿತಿಗಳ | ವಿಶದ ವಿಸ್ತರವ ನೊರೆದೊಡೆ ನೋಡಿಕೊಳ್ವೆನೆನೆ| ಕು ಶನೆಂದನಿಂತು ಲೋಕಾನಂದಕರವಾದ | ನಿಶಿತವಾಕ್ಯಂಗಳಂ ಜನಮೇಜಯ ಕ್ಷಿತಿಪ ಕೇಳಾ ರಘೂದ್ವಹಂಗೆ||೨೬||
ಈ ತಪೋವನದೊಳೆಮ್ಮಿ ರ್ವರನವಳಿಯಾಗಿ | ಸೀತೆಯೊರ್ವಳೆ ಪಡೆದಳನುದಿನದೊಳಾರೈದು | ಜಾತೋಪನಯನಾದಿ ಕರ್ಮಂಗಳಂ ಮಾಡಿ ನಿಗಮಾಗಮ ಸ್ಮೃತಿಗಳ || ವ್ರಾತಮಂ ಬರಿಸಿ ಕಾರ್ಮುಕವೇದಮಂ ಕಲಿಸಿ | ನೀತಿಗಳನರುಹಿ ರಾಮಾಯಣವನೋದಿಸಿ ಮ | ಹಾತಿಬಲರೆನಿಸಿದಂ ವಾಲ್ಮೀಕಿ ಮುನಿಪನೆಂದೊರೆದು ಮಗುಳಿಂತೆಂದನು | ೨೭ ||
ರಾಮಚಾರಿತ್ರ ಪಠನಾಭ್ಯಾನ ಯೋಗದಿಂ। ಕ್ಷೇಮಂ ಸುಪುಷ್ಟಿ ನಿಶ್ಚಲಮತಿ ನಿರಾಲಸ್ಯ | ಮೀಮಹಾಸೈನ್ಯವಂ ಗೆಲ್ವದಟು ತಮಗಾದುದೆಂದು ಕುಶನುಸಿರೆ ಕೇಳ್ದು|| ಪ್ರೇಮದಿಂ ತನ್ನ ಸುತರೆಂದರಿದು ಸೀತೆಯೆಂ | ಬೀಮಾತು ಕಿವಿದಾಗಿದೊಡೆ ಬಿದ್ದು ಮೂರ್ಛವೆ | ತ್ತಾ ಮಹೀಶಂ ಕೂಡೆ ಚೇತನಂ ಬಡೆದು ಸುಗ್ರೀವನೊಡನಿಂತೆಂದನು | ೨೮ ||
ಕಪಿರಾಜ ಕೇಳೋ ಕುಮಾರಕರ ನುಡಿಗಳಂ | ನಿಪುಣರಿವರಾವ ಪುರುಷಂಗೆ ಸಂಭವಿಸಿದರ್ | ವಿಪಿನಚಾರಿಗಳ ನಿನ್ನೊಮ್ಮೆ ನೀಂ ಬೆಸಗೊಳೆನೆ ನಸುನಗುತೆ ಸುಗ್ರೀವನು || ತಪನಕುಲ ಜಾತರ್ ಪುರಾಣ ಪುರುಷೋತ್ತಮನ | ವಿಪುಲ ಸಂತತಿಗಳಿವರೀಕ್ಷಿಪೊಡೆ ದೇವ ನಿ। ನ್ನುಪ ರೂಪವಾಗಿರ್ಪುದಲ್ಲದೊಡವರ್ಗಿನಿತು ಸತ್ಯಮೆತ್ತಣದೆಂದನು | ೨೯ ||
ಸುಗ್ರೀವ ರಾಘವರ್ ಮಾತಾಡುವನಿತರೊಳ್ | ನಿಗ್ರಹಿಸಿಕೊಂಡಿರ್ದ ಕುದುರೆಯಂ ಬಿಡುವೊಡ | ಧೃಗ್ರಮುಳ್ಳವನಾಗಿ ನೀಲ ನೈತರೆ ಕುಶಂ ಕೋಪದಿಂದಾ ಕಪಿಗಳ | ಅಗ್ರಣಿಯನೆಚ್ಚು ಕೆಡವಿದೊಡವನ ರುಧಿರದಿಂ ದುಗ್ರರೂಪದೊಳೆದ್ದು ವಾ ನೀಲಕೋಟಿಗಳ್ | ವಿಗ್ರಹಕ್ಕೆ ಕಡುಮುಳಿದು ಮರಗೊಂಬೆಬೆಟ್ಟ ಕಲ್ಲುಂಡುಗೊಂಡೆಲ್ಲೆಡೆಯೊಳು|೩೦||
ನೀಲ ವಾನರಸೈನ್ಯದೊತ್ತಾಯಮಂ ಕಂಡು | ಮೇಲೆಸೆವ ರವಿಯನಾರಾದಿಸಿ ಕುಶಂ ಮಹಾ। ಸ್ಕೂಲಕಾಯದ ಕಪಿಗಳಂ ಗೆಲಲ್ಗೊಂದುವರೆ ಯೋಜನದಳತೆಯಗಲದ|| ಕೋಲಗಾಯದ ನೆತ್ತರೊಸರಲೀಯದವೋಲು | ಬಾಲಕಂ ತುಡುವೊಡಳವಡುವ ತೆರನಾದ ರಿಪು | ಜಾಲಕಸದಳವಾದ ಪೂಡಲ ಕ್ಷಯವಾದ ಬಾಣಂಗಳಂ ಪಡೆದನು||೩೧||
ಆ ಮಹಾಬಾಣಂಗಳಂ ಪೂಡಿ ತೆಗೆದೆಚ್ಚು | ಭೀಮ ವಿಕ್ರಮ ಕುಶಂ ಕೆಡಹಿದನಸಿತ ಕಪಿ | ಸೋಮಮಂ ಬಳಿಕುರುಳ್ಚಿದನಾದಿ ನೀಲನಂ ಸುಗ್ರೀವ ಮುಖ್ಯರಾದ|| ಶ್ರೀ ಕಾಮರೂಪದ ಸಕಲ ವಾನರ ಚಮ್ರಪರಂ | ಭೂಮಿಯೊಳ್ ಮೂ ರ್ಛೆಗೆಯ್ಯೊರಗಿಸಿ ವಿಭೀಷಣನ | ಸಾಮರ್ಥ್ಯಮಂ ನಿಲಿಸಿ ಮತ್ತವನ ಬಲಮಂ ಪೊರಳ್ಚಿದಂ ಸಂಗರದೊಳು | ೩೨ ||
ನರ ವಾಜಿ ದಂತಿ ಮುಸು ಕರಡಿ ಸಿಂಗಳಿಕ ವಾ | ನರ ದಾನವರೊಳಿಡಿದ ಸೇನೆಯೊಳ ನೋಡಲೊ | ರ್ವರುಮಿಲ್ಲದೆಲ್ಲರುಂ ಬಿದ್ದು ತಾನೇಕಾಕಿಯಪ್ಪುದುಂ ಖಾತಿಗೊಂಡು || ಸರಳನರ್ಭಕರ ಮೇಲೆಚ್ಚಂ ರ ಘೂಧ್ವಹಂ | ಧರೆಯೊಳೀ ಕ್ಷತ್ರಿಯರ ಮನವಾಸಿಗಳದೆಂತೊ | ತರಹರಿಸಬಾರದಿಹ ರಾಮಬಾಣಂಗಳೈದಿದುವು ಕಾಲಾಗ್ನಿ ಯಂತೆ||೩೩||
ಬಟ್ಟೆ ವೋಗದ ರಾಮಬಾಣಂಗಳಂ ನಡುವೆ | ನುಚ್ಚು ನೂರಾಗೆ ಕತ್ತರಿಸಿ ರಘುನಾಥನಂ। ಮುಚ್ಚಿದರ್ ಕ ಣೆಗಳಿಂ ಮತ್ತೆ ಕಾಕುತ್ಸಂ ಕೆರಳ್ದು ಕುಶ ಲವರ ಮೇಲೆ || ಎ ಚ್ಚೊಡಾ ಕೋಲ್ಗಳಂ ಬಾಲಕರ್ ಮಧ್ಯದೊಳ್ ಕೊಚ್ಚಿ ರಾವಣ ರಿಪುವಿನಂಗಮಂ ನೋಯಿಸಿದ! ರಚ್ಚರಿಯ ಕಾಳೆಗಂ ತಂದೆಮಕ್ಕಳ್ಗೆ ನಡೆದುದು ಸುರರ್ ಬೆರಗಾಗಲು | ೩೪ ||
ಕಕ್ಕ ಸದೊಳಂದು ರಾವಣ ಕುಂಭಕರ್ಣಾದಿ/ರಕ್ಕಸರ ತಲೆಗಳವರಿದು ತಿರುಗಿಬಹ ಕಣೆಗ| ಳಿಕ್ಕಡಿಗಳಾಗಿ ಬಿದ್ದು ವು ದರೆಗೆ ಕೂಡೆ ಬಾಲಕರಿಸುಗೆ ತನ್ನಿ ಸುಗೆಗೆ|| ಮಿಕ್ಕು ಬರೆ ಬೆರಗಾಗಿ ರಾಘವಂ ಸುಮ್ಮನಿರೆ । ಪೊಕ್ಕು ವಂಬುಗಳೊಡಲೊಳಾತ್ಮಜರ ಮೇಲೆ ತನ । ಗಕ್ಕರುಂಟಿಲ್ಲೆಂಬುದಂ ನೋಳ್ಪೆ ವೆಂಬವೊಲ್ ಭೂಪ ಕೇಳ್ ಕೌತುಕವನು |೩೫||
ಜೈಮಿನಿ ಭಾರತ 42
ಇಪ್ಪತ್ತೊಂದನೆಯ ಸಂಧಿ ಕೊನೆಯ ಭಾಗ
ಪದ್ಯ 36 ರಿಂದ 67
ರಾಮನೊಂದಿಗೆ ಕದನ
ನಿರೂಪಣೆ: ಸುಬ್ಬುಲಕ್ಷ್ಮಿ Lrphks Kolar
ಸಂಕ್ಷಿಪ್ತ ರೂಪ
ಕುಶನ ಬಾಣಗಳ ಸುರಿಮಳೆಯಲ್ಲಿ ರಾಘವ ಮೈ ಮರೆದು ರಥದಲ್ಲಿ ಮಲಗಿದ. ದೇವದುಂಧುಭಿಗಳು ಮೊಳಗಿದವು. ಆಗ ಕುಶಲವರು ರಾಮನ ರಥದ ಬಳಿಗೆ ಹೋಗಿ ಅವನ ಆಭರಣಗಳು, ವಸ್ತ್ರಗಳನ್ನು ತೆಗೆದುಕೊಂಡರು. ಹಾಗೆಯೇ ಭರತ ಲಕ್ಷ್ಮಣ ಶತ್ರುಘ್ನರ ವಿಭೂಷಣಗಳನ್ನು ತೆಗೆದುಕೊಂಡರು. ಇವರಲ್ಲೊಂದು ರಥವನ್ನು ಹತ್ತಿ ರಣರಂಗದಲ್ಲಿ ಇನ್ನು ಯಾರಾದರೂ ಉಳಿದಿರುವರೇ ಎಂದು ನೋಡಿಬರುವೆನೆಂದು ಲವನು ಲಕ್ಷ್ಮಣನ ರಥವನ್ನೆ ಏರಿ ನೋಡುತ್ತಾ ಬಂದನು. ಎಚ್ಚರವಾಗಿದ್ದ ಹನುಮನು ಜಾಂಬವನಿಗೆ ನಾವು ಈಗ ಎಚ್ಚರವಾಗಿರುವಂತೆ ತೋರಿಸುವುದು ಬೇಡ. ಇವನು ನಮ್ಮನ್ನು ಸೀತೆಯ ಬಳಿಗೆ ಕರೆದೊಯ್ಯುವನು. ಅವಳ ದರ್ಶನವಾಗುವುದು ಎಂದು ಹೇಳಿದನು. ಹಾಗೆಯೇ ಆಯಿತು. ಎಲ್ಲರೊಂದಿಗೆ ಇಬ್ಬರೂ ಆಶ್ರಮಕ್ಕೆ ಬಂದರು.
ಮಕ್ಕಳು ಏನಾದರೋ ಎಂದು ತಲ್ಲಣದಲ್ಲಿದ್ದ ಸೀತೆ ಇದನ್ನೆಲ್ಲ ನೋಡಿ ನಡುಗಿದಳು. ಅಯ್ಯೋ ಮಕ್ಕಳಿರಾ ತಪ್ಪಿದಿರಿ. ಈ ಭೂಷಣಗಳೇತಕೆ ನಮಗೆ? ಇವರು ವೀರವಾನರರು. ಇವರನ್ನೇಕೆ ಕಟ್ಟಿ ತಂದಿರಿ? ವಾಲ್ಮೀಕಿ ಮಹರ್ಷಿಗಳೂ ಇಲ್ಲವಲ್ಲ ಎಂದು ತೊಳಲಿದಳು. ಇದನ್ನೆಲ್ಲ ನಾರದರಿಂದ ಕೇಳಿದ ಮಹರ್ಷಿಗಳು ಕೂಡಲೇ ಅಲ್ಲಿಗೆ ಬಂದರು. ಏನಾಯಿತು ಎಂದು ವಿವರ ಕೇಳಿ ತಿಳಿದು ಆಶ್ಚರ್ಯಪಟ್ಟು ತಪ್ಪಾಯಿತು. ನೊಂದನೇ ರಾಘವ ಎಂದು ತಕ್ಷಣ ರಣರಂಗಕ್ಕೆ ಬಂದರು.
ಅಲ್ಲಿ ಬಿದ್ದಿದ್ದ ರಥ ಹಯ ಆನೆಗಳು ಸೈನಿಕರು, ಆಯುಧಗಳು ಎಲ್ಲವನ್ನೂ ನೋಡಿದರು. ರಾಮನನ್ನು ಕಂಡು ಬೆರಗಾದರು. ರಾಮನು ಕೃಶನಾಗಿದ್ದನು. ಆದರೂ ಕಾಂತಿಯುತನಾಗಿದ್ದನು. ಕಮಂಡಲುವಿನ ಜಲದಿಂದ ಪ್ರೋಕ್ಷಿಸಿದಾಗ ರಾಮನು ಕಣ್ಣು ತೆರೆದು ಎದ್ದು ಕುಳಿತು ನಮಿಸಿದನು. ಹಾಗೆಯೇ ಎಲ್ಲರನ್ನೂ ಮತ್ತೆ ಏಳಿಸಿದರು. ಸುರಧೇನುವನ್ನು ತರಿಸಿ ಎಲ್ಲರಿಗೂ ಬೇಕಾದ ವಸ್ತುಗಳನ್ನು ನೀಡಿ ಸತ್ಕರಿಸಿದನರು.
ರಾಮ, ಕೋಪಿಸಬೇಡ. ಇವರು ನಿನ್ನ ಮಕ್ಕಳು. ನಾನು ಇದ್ದಿದ್ದರೆ ಇಷ್ಟು ಆಗಲು ಬಿಡುತ್ತಿರಲಿಲ್ಲ ಎಂದರು. ರಾಮನು ಲಕ್ಷ್ಮಣನ ಮುಖ ನೋಡಲು ನಿನ್ನ ಆಜ್ಞೆಯಂತೆ ಪೂರ್ಣ ಗರ್ಭಿಣಿ ದೇವಿಯನ್ನು ಕಾಡಿನಲ್ಲಿ ಬಿಟ್ಟು ಬಂದೆ. ಮುಂದಿನದನ್ನು ಅರಿಯೆ ಎನ್ನಲು ವಾಲ್ಮೀಕಿಗಳು ತಾವು ಅವಳನ್ನು ಕರೆತಂದು ಉಪಚರಿಸಿದ್ದೂ, ಅವಳಿ ಮಕ್ಕಳು ಜನಿಸಿದ್ದೂ, ಅವರಿಗೆ ಸಕಲ ವಿದ್ಯೆಗಳನ್ನು ಕಲಿಸಿದ್ದೂಹೇಳಿದರು.ನಂತರ ವೀಣೆ ಗಳನ್ನು ತರಿಸಿ ರಾಮಾಯಣವನ್ನು ಹಾಡಿಸಿದರು.
ಇಂಪಾದ ವಿವಿಧ ರಾಗಮಾಲಿಕೆಗಳಿಂದ, ವೀಣಾನಾದದೊಡನೆ ಮಕ್ಕಳು ಹಾಡಿದರು. ಅದನ್ನು ಕೇಳಿ ರಾಮನೊಂದಿಗೆ ಎಲ್ಲರೂ ಪುಳಕಿತರಾದರು. ತನ್ನ ವಂಶದ ರತ್ನಗಳು ಎಂದು ಸಂತಸಪಟ್ಟನು ರಾಮ. ಇವರನ್ನು ಪರಿಗ್ರಹಿಸಬೇಕೆಂದೆನ್ನಲು ಇನ್ನೊಮ್ಮೆ ಆ ಮಕ್ಕಳ ಬಾಯಿಂದ ಸೀತೆಯ ಹೆಸರು ಕೇಳಬಯಸಿದ ರಾಮ ಯಾರ ಮಕ್ಕಳು ಎಂದು ಕೇಳಿ ಸಂತೋಷಿಸಿದನು.
ಅವರನ್ನು ತಬ್ಬಿಕೊಂಡು ಶಿರವನ್ನು ಆಘ್ರಾಣಿಸಿ ವಾಲ್ಮೀಕಿಯನ್ನು ಸತ್ಕರಿಸಿ ಸೀತೆ ನಿರ್ಮಲಳು. ನಿರ್ದೋಷಿ. ಲೋಕಾಪವಾದಕ್ಕೆ ಹೆದರಿ ನಾನು ಹೀಗೆ ಮಾಡಬೇಕಾಯಿತು ಎಂದು ಹೇಳಿದನು.
ನಂತರ ಕುದುರೆಯನ್ನೂ ಮಕ್ಕಳನ್ನೂ ಕರೆದುಕೊಂಡು ಸಕಲ ಸೈನ್ಯದೊಂದಿಗೆ ಹೊರಟು ಅಯೋಧ್ಯೆಯನ್ನು ಸೇರಿ ಸಾಂಗವಾಗಿ ಯಾಗವನ್ನು ಮಾಡಿದನು.
ಆಶ್ರಮಕ್ಕೆ ಬಂದ ಮುನಿಗಳಿಂದ ಸೀತೆಗೆ ಎಲ್ಲ ವಿಷಯ ತಿಲಿಯಿತು. ಮಕ್ಕಳು ಸೇರಬೇಕಾದ ಜಾಗ ಸೇರಿದರೆಂದು ಸಂತಸವಾಯಿತು. ಮುನಿಗಳು ಅವಳನ್ನು ಒಪ್ಪಿಸಿ ವೈಭವದಿಂದ ಕರೆತಂದು ರಾಮನಿಗೆ ಒಪ್ಪಿದಿದರು.
ಎಲ್ಲ ಸುಖಾಂತವಾಯಿತು. ಹೀಗೆ ತಂದೆಮಕ್ಕಳ ಕದನ ನಡೆಯಿತೆಂಬ ವಿಷಯವನ್ನು ವಿವರವಾಗಿ ತಿಳಿಸಿದ ಜೈಮಿನಿ ಮುನಿಗಳು ಮತ್ತೆ ಬಭ್ರುವಾಹನ ಮತ್ತು ಅರ್ಜುನರ ನಡುವೆ ನಡೆದ ಕದನದ ಕಡೆಗೆ ತಿರುಗಿದರು.
ಇಪ್ಪತ್ತೊಂದನೆಯ ಸಂಧಿ ಕೊನೆಯ ಭಾಗ
ಪದ್ಯ 36 ರಿಂದ67
ಪಲ್ಲವಿತ ನವ ಚೂತತರು ಬೇಸಗೆಯ ಝಳಕೆ! ನಿಲ್ಲದಸವಳಿದು ಜೋಲ್ವಂತೆ ಕೋಮಲಕಾಯ | ದೆಲ್ಲೆಡೆಯೊಳಂ ನಾಂಟಿದಂಬುಗಳ ರುಧಿರ ಪ್ರವಾಹದಿಂದುರೆ ಬಳಲ್ದು|| ಮೆಲ್ಲನೆ ವರೂಥದೊಳ್ ಸಾರಥಿವೆರಸಿ ಧರಾ | ವಲ್ಲಭಂ ಮೈಮರೆದು ಪವಡಿಸಿದನನಿಮಿಷರ್ | ಚೆಲ್ಲಿದರ್ ಪೂಮಳೆಗಳಂ ಮೊಳಗಿದುವು ದೇವ ದುಂದುಭಿಗಳಂಬರದೊಳು |೩೬||
ಆ ಕುಮಾರರ್ ಬಳಿಕ ಶರಹತಿಗೆ ಮೈಮರೆದ | ಕಾಕು ತ್ಸ್ಯನಲ್ಲಿಗೈ ತಂದು ರಾಜೇಂದ್ರನ ಶು । ಭಾಕಾರಮಂ ನೋಡಿ ಸಿರಿಮೊಗದ ಮಣಿ ಕುಂಡಲಂಗಳಂ ಕಂಬುಗಳದ ಏಕಾವಳಿಯ ಹಾರಮಂ ತೆಗೆದುಕೊಂಡೂರ್ಮಿ| | ಳಾಕಾಂತ ಭರತ ಶತ್ರುಘ್ನರ ವಿಭೂಪಣಾ । ನೀಕಮಂ ಕಳೆದೊಂದು ವಸನದೊಳ್' ಕಟ್ಟಿ ಕು ಶನೊಡನೆ ಲವನಿಂತೆಂದನು ||೩೭||
ಅಗ್ರಭವ ಕೇಳಿವರೊಳೊಂದು ರಥಮಂ ಪತ್ತಿ | ವಿಗ್ರಹದೊಳೆಚ್ಚರಾಗಿರ್ದ ವೀರರ್ಕಳ ಕ| ಚ ಗ್ರಹಣಮಂ ಮಾಡಿಕೊಂಡು ಬಹೆನೆನುತೆ ಲಕ್ಷ್ಮಣನ ಪೊಂದೇರ್ಗಡರ್ದು || ವ್ಯಗ್ರದಿಂ ಲವನೈತರಲ್ ಕು ಶನ ಶರಹತಿಯ | ನಿಗ್ರಹಕ್ಕೊಳಗಾಗಿ ಮೂರ್ಛೆಯಿಲ್ಲದೆ ಕಪಿಗ | ಳಗ್ರಣಿಗಳುಳಿದಿರ್ದರಿರ್ವರದರೊಳ್ ಜಾಂಬವನೊಳೆಂದನಾ ಹನುಮನು ||೩೮||
ಕಂಡಿರೇ ಜಾಂಬವರೆ ರಾಮಾದಿ ವೀರರಂ | ದಿಂಡುಗೆಡಹಿದಬಳಿಕ ರಣದೊಳುಸಿರಿರ್ದರಂ | ಮಂಡೆವಿಡಿದೆಳೆದು ಯ್ವೆನೆಂದು ಸೀತಾಸುತಂ ಬಂದಪಂ ನಾವಿವನೊಳು || ದಂಡಿಗಾರೆವು ನಮ್ಮ ನೀ ಬಾಲಕಂಪಿಡಿದು । ಕೊಂಡು ಪೋಗಲಿ ಜಾನಕಿಯ ಪೊರೆಗೆ ದೇವಿ ಕೃಪೆ | ಯಿಂ ಡಿಂಗರಿಗರೆಂದು ಪಾಲಿಸಲಿ ಮೇಣುಳಿಯಲೆಂದನಾ ಹನುಮಂತನು |೩೯||
ಕೆಡದಿರ್ದರೆಲ್ಲರಂ ನೋಡಿ ರಣರಂಗದೊಳ್ | ಮಿಡುಕಿ ಮಾತಾಡುವಿವರಂ ಕಂಡು ಲೀಲೆಯಿಂ | ಪಿಡಿದು ಲವನೆಳೆತಂದು ಕೌತುಕದ ಕಪಿಗಳೆಂದಣ್ಣಂಗೆ ತೋರಿಸಿ || ಕಡು ಮೆಚ್ಚಿ ತಮ್ಮ ನಂ ಕುಶನಪ್ಪಿದಂ ಬಳಿಕ | ಪಡೆದ ತಾಯಂ ಕಾಣಲಾ ಪ್ಲವಗ ಪತಿಗಳಂ | ಬಿಡದನಿಬರಾ ಭರಣಮನಿತುಮಂ ಕೊಂಡಿರ್ವರುಂ ಬಂದರಾಶ್ರಮಕ್ಕೆ | ೪೦ ||
ಏನಾದರೋ ತನಯರೆಂದು ಚಿಂತಿಸುತಿರ್ಪ | ಜಾನಕಿಗೆ ರಾಮಾದಿಗಳ ಭೂಷಣಂಗಳಂ | ಕಾನನದ ಬೇಂಟೆಯೊಳ್ ಸಿಕ್ಕಿ ಸೀಕರಿಗೊಂಬ ಮೃಗಪೋತಕಂಗಳಂತೆ || ಮನದಿಂ ಮೈಯುಡುಗಿ ನೊಂದೆಳೆತಟಕೆ ಬಿದ್ದ | ವಾನರಶ್ರೇಷ್ಠರಂ ತಂದಿತ್ತು ಚರಣದೊಳ್ | ಸೂನುಗಳ್ ಪೊಡಮಡಲ್ಕಾ ಸೀತೆ ನಡುನಡುಗಿ ನಂದನರ್ಗಿಂತೆಂದಳು | ೪೧||
ಆರುಮರಿಯದವೊಲೀ ಕಾನನದೊಳಿರ್ದೆನಾಂ | ಧಾರಿಣೀತರ ಭೂಷಣಂಗಳೇತಕೆ ನಮಗೆ | ವೀರ ಕಪಿವರರಿವರ್ ಜಗದೊಳಭಿಮಾನಿಗಳ್ ಭಂಗಮೇಕಿಂತಿವರ್ಗೆ || ಘೋರಕರ್ಮಂಗಳಂ ಮಾಡಿದಿರಿ ಮಕ್ಕಳಿರ | ದಾರಿತಪ್ಪಿದಿರಿನ್ನು ವಾಲ್ಮೀಕಿಮುನಿವರಂ | ಬಾರದಿರನೀಗಳೆ ರಣದೊಳಿವರನಿರಿಸಿ ಬಹುದೆಂದಳವನಿಜೆ ಲವಂಗೆ||೪೩||
ವೈದೇಹಿ ನುಡಿದುದಂ ಕೈಕೊಂಡು ಲವನವರ | ನುಯ್ದು ರಣರಂಗದೊಳ್ ಮಗುಳಿರಿಸಿ ಬಂದ ನಿರ | ದೈದೆ ನಾರದನಿಂದ ಕೇಳ್ದು ವಾಲ್ಮೀಕಿಮುನಿ ಪಾತಾಳಲೋಕದಿಂದೆ || ಮೈದೋರಲಾಶ್ರಮದ್ವಾರದೊಳ್ ಕಂಡು ಮೇ | ಲ್ಪಾಯ್ತು ಕ್ಯು ವಾನಂದರಸದಿಂದ ವಂದನಂ । ಗೈದಳವನಿಜೆ ಮಣಿದರೆಲ್ಲರುಂ ಜಾನಕಿಯ ಸುತರೆರಗಿದರ್ ಪದದೊಳು | ೪೩ ॥
ಶರ ವೇದಮೂರ್ತಿಗಳ ತೆರದಿಂದ ರಾಜಿಸುವ | ತರಳರಂ ಮಣಿದೆತ್ತಿ ಮಕ್ಕಳಿರ ನಿಮಗೆ ರಘು | ವರನ ಸೇನೆಯೊಳಾಯ್ತು ಗಡ ಕಲಹಮೇಕೆ ತೊಡಗಿತು ತೋಟಿ ನಿಮ್ಮ ಕೂಡೆ || ಧುರಕೆ ಬಂದೆಚ್ಚಾಡಿ ಬಿದ್ದರಾರ್ ಮೆಯ್ಯೊ | ಳರಿಗಳಂಬಿನ ಗಾಯ ಮಲ್ಲದೆತ್ತಣ ಬಲೋ | ತ್ಕರದೇಳ್ಗೆ ಪೇಳ್ವುದೆನೆ ವಾಲ್ಮೀಕಿಮುನಿಪುಂಗವಂಗೆ ಕುಶನಿಂತೆಂದನು ||೪೪ ||
ತಂದೆ ನೀವಿರಲೆಮಗೆ ಸುಕ್ಷೇಮಕರಮಪ್ಪು | ದೆಂದೆಂದುವಿದು ನಿಜಂ ನಿಮ್ಮಡಿಗಳುಪದೇಶ| ದಿಂದರಿಗಳಂ ಗೆ ಲ್ದೆವೀನಿಮ್ಮ ಪುಣ್ಯಾಶ್ರಮದೊಳಾಯ್ತು ಭೂತ ಹಿಂಸೆ|| ಬಂದುದೊಂದ ಶ್ವಮದನೀ ಲವಂ ಕಟ್ಟಿದಂ । ಮಂದಿ ಕವಿದುದು ಮೇಲೆ ಶತ್ರುಘ್ನ ನುರುಬಿದಂ | ಸಂಧಿಸಿವೆ ನಾಂ ಬಳಿಕ ಸೌಮಿತಿ, ಭರತ ರಾಮಾದಿಗಳ್ ನಡೆತಂದರು 1 ೪೫ ||
ಕಡೆಯ ಮಾತೇನಿನ್ನು ದೊರೆದೊರೆಗಳೆಲ್ಲರಂ | ಪಡೆಯೊಳ್ ನಿಶಾಟ ಕವಿ ನರ ಚಾತುರಂಗಮಂ | ಕೆಡಹಿದೆವೆನಲ್ ಕುಶನ ನುಡಿಗೆ ಸೈವೆರೆಗಾಗಿ ವಾ ಲ್ಮೀಕಿಮುನಿ ಮನದೊಳು || ಕಡುನೊಂದನಕಟಕಟ ತಪ್ಪಾದುದೆನುತೆ ನಡು | ನಡುಗುತಿಹ ಸೀತೆಯಂ ಸಂತೈಸಿ ವಹಿಲದಿಂ | ನಡೆತಂದನೊಡನಿರ್ದ ತಾಪಸ ವಿತತಿ ಸಹಿತ ಸಂಗ್ರಾಮ ಭೂಮಿಗಾಗಿ 1 ೪೬||
ಶರಧಿಯಂ ಕಟ್ಟುವಂದಾ ರಾಘವೇಶ್ವರಂ | ಧರೆಯೊಳಿಟ್ಟಣಿಸಿರ್ದ ಬೆಟ್ಟಂಗಳೆಲ್ಲಮಂ | ತರಿಸಿದಂ ಭೂಮಿಗಾಧಾರವಿಲ್ಲದೆ ಪೋಪುದೆಂದವನ ತನುಜಾತರು || ಗಿರಿಗಳಂ ಪ್ರತಿಯಾಗಿ ತಂದಿಳೆಯಮೇಲಿನ್ನು | ಪರಪಿದರೂ ಪೇಳೆನ ಲ್ ಪೊಡೆಗೆಡೆದು ಬಿದ್ದಿರ್ದ | ಕರಿಘಟೆಗಳಟ್ಟೆಗಳೂ ಕಾಣಿಸಿದುವಾ ರಣದೊಳಾ ತಪೋನಿಧಿಯ ಕಣ್ಗೆ||೪೪೭||
ತಟ್ಟುಗೆಡದಿಹ ವಾಜಿ ವಾರಣ ವರೂಥದಿಂ । ದಿಟ್ಟ ಣಿಸಿ ಬಿದ್ದ ರಾಕ್ಷಸ ಮನುಜ ಕಪಿಗಳಿಂ | ದಿಟ್ಟಡಿದಗಲಕೆ ಚೆಲ್ಲಿದ ಛತ್ರ ಚಾಮರ ಪತಾಕೆಗಳ ಮೆದೆಗಳಿಂದೆ || ಒ ಟ್ಟೊಟ್ಟಿಲಾಗಿ ನೂಸಿದ ಪಲವು ಕೈದುಗಳ | ಬೆಟ್ಟಂಗಳಿಂ ಮಿದುಳನೆಣ ವಸೆ ಕರುಳ್ಗಳಿಂ | ಕಟ್ಟು ಗ್ರವಾದ ರಣರಂಗದೊಳ್ ವಾಲ್ಮೀಕಿಮುನಿ ರಾಮನಂ ಕಂಡನು | ೪೮ ||
ಅಂದು ಪುರಹೂತವೈರಿಯ ಸರ್ಪ ಶರದಿಂದೆ | ಪೊಂದಿದ ಸಮಸ್ತ ಬಲ ಸಹಿತ ಬಿದ್ದೆಚ್ಚರಳಿ | ದಂದದಿಂ ನಸು ಮಸುಳ್ದಾನನದ ನಿಶೆಯ ತಾವರೆವೊಲಾಗಿಹ ಕಣ್ಣಳ|| ಕಂದಿದವಯವದ ಕಾಂತಿಗಳ ಕರ ಪಂಕರುಹ | ದಿಂದ ಕೆಲಕೋಸರಿಸೆ ಬಿದ್ದ ಬಿಲ್ಲಂಬುಗಳ | ನೊಂದ ಗಾಯದ ನೆತ್ತರೊರತೆಗಳ ರಾಮನಂ ಕಂಡು ಮುನಿ ಬೆರಗಾದನು [೪೯||
ಈಕ್ಷಿಸಿ ಕಮಂಡಲೋದಕದಿಂದ ಮುನಿವರಂ | ಪ್ರೋಕ್ಷಿಸಿದೊಡುರಗ ತಲ್ಪ ದೊಳುಪ್ಪಡಿಸುವ | ಬ್ಯಾಕ್ಷನೀತಂ ತಪ್ಪದೆಂಬಂತೆ ಕಣ್ತೆರೆದು ವಾಲ್ಮೀಕಿಗಭಿನಮಿಸಲು || ಸಾಕ್ಷಾಜಗನ್ನಾಥ ಸರ್ವಕಾರಣ ಸಕಲ! ರಾಕ್ಷ ಸಾಂತಕ ಭಕ್ತವತ್ಸಲ ಕೃಪಾಳು ನಿರ! ಪೇಕ್ಷ ರಾಘವ ರಾಮ ಚಿತ್ತಾವಧಾನವೆಂದಾ ಮುನಿ ಪೊಗಳುತಿರ್ದನು | ೫೦ ||
ಬಳಿಕ ರಾಘವನ ಸಿರಿಮುಡಿಗೆ ನಭದಿಂದೆ ಪೂ 1 ಮಳೆ ಕರೆದುದುತ್ಸವದೊಳಮರ ದುಂದುಭಿಗಳುರೆ | ಮೊಳಗಿದವು ಋಷಿಮಂತ್ರಪೂತ ಜಲದಿಂದ ಭರತಾದಿಗಳ್ ಜೀವಿಸಿದರು | |ತಳೆದರನಿಮಿಷರನ್ನು ತಮಂ ಬಿದ್ದ ಪಡೆಯ ಮೇ | ಲುಳಿಯದೆ ಸಮಸ್ತ ಸೈನಿಕಮೆದ್ದುದಾಗ ಪೆರೆ | ಗಳೆದ ಫಣಿ ಕುಲದಂತೆ ನಲಿದು ಚತುರ್ಬಲಂ ಹೇಳಲೇನಚ್ಚರಿಯನು ||೫೧||
ಬರಿಸಿದಂ ನೆನೆದು ಸುರಧೇನುವಂ ವಾಲ್ಮೀಕಿ | ಪರಮ ಸಂಪ್ರೀತಿಯಿಂ ಬೇಡಿದ ಪದಾರ್ಥಮಂ| ತರಿಸಿದಂ ದುಗ್ಗಾಭಿಷೇಕಮಂ ಮಾಡಿಸಿದನಾ ರಾಘವೇಶ್ವರಂಗೆ|| ಭರತಾದಿಗ ಳ್ವೆರಸಿ ಕುಳ್ಳಿರ್ದ ಬಳಿಕ ಪತಿ ! ಕರಿಸಿ ಕಾಕುತ್ಸ್ಥನಂ ಕೊಂಡಾಡಿ ನೇಮದಿಂ। ಕರಿಸಿ ಕುಶಲವರಂ ಪದಾಬ್ಜದೊಳ್ ಕೆಡಹಿ ಮುನಿವರನೊಯ್ಯನಿಂತೆಂದನು | ೫೨ ||
ರಾಜೇಂದ್ರ ಕೋಪಮಂ ಮಾಡದಿರ್ ನಿನ್ನಂ ಕೃ | ಪಾಜಲಧಿಯೆಂದು ಮರೆವೊಕ್ಕರಂ ಕಾವ ನೆಂ | ದೀಜಗಂ ಬಣ್ಣಿಪುದು ನಿನ್ನ ತನುಸಂಭವರ್ ಜಾನಕಿಯ ಮಕ್ಕಳಿವರು || ಓಜೆತಪ್ಪಿದರಾಶ್ರಮದೊಳಿದ್ದುದಿಲ್ಲ ಮಖ | ಯಾಜನಕೆ ವರುಣಂ ಕರೆಸಲಾಗಿ ಪೋದೆ | ವ್ಯಾಜಮಂ ತಾನರಿಯೆನಪರಾಧಮೆನಿತು ಳ್ಳೊಡಂ ಸೈರಿಸುವುದೆಂದನು||೫೫೩||
ಜಾತಂ ವಿನೀತನಾಗಲಿ ಧೂರ್ತನಾಗಿರಲಿ | ತಾತಂಗೆ ವಿರಹಿತವೆ ನೋಡದಿರ್ ಬಾಲಕರ | ತೀತಮಂ ಕ್ಷಮಿಸೆಂದು ವಾಲ್ಮೀಕಿ ನುಡಿಯೆ ರಾಘವ ನೂರ್ಮಿಳಾಪತಿಯನು || ಸೀತೆ ಸುತರಂ ಪಡೆದಳೆಂತೆನೆ ತವಾಜ್ಞೆಯಿಂ ಶ್ವೇತನದಿಯಂ ದಾಂಟಿ ಪೂರ್ಣಗರ್ಭಿಣಿಯಾದ | ಭೂ ತನುಜೆಯಂ ಕಾನನದೊಳಿರಿಸಿ ಬಂದೆನಲ್ಲದೆ ಮುಂದರಿಯೆನೆಂದನು || ೫೪ ||
ಇಂತೆಂದು ಲಕ್ಷ್ಮಣಂ ನುಡಿಯೆ ವಾಲ್ಮೀಕಿ ಸಮ । ನಂತರದೊಳೇಕಾಕಿಯಾಗಿ ಜಾನಕಿ ವಿರಹ | ಸಂತಾಪದಿಂದಡವಿಯೊಳ್ ತೊಳಲುತಿರ್ದುದಂ ಕಂಡು ತನ್ನಾ ಶ್ರಮಕ್ಕೆ || ಸಂತೈಸಿ ಕೂಡೆ ಕೊಂಡೊಯ್ದು ದಂ ಬಳಿಕ | ಸಂತತಿಗಳಾದುದಂ ತಾನವರ್ಗಿಲ್ಲ ಪ | ರಂತರಂ ಮಾಡಿಸಿದ ಕೃತ್ಯಂಗಳೆಲ್ಲಮಂ ಪೇ ಳ್ದಂ ರಘೂದ್ವ ಹಂಗೆ||೫೫||
ಬಳಿಕ ವಾಲ್ಮೀಕಿ ನಿಜಶಿಷ್ಯರಂ ಸದನಕ್ಕೆ | ಕಳುಹಿ ತರಿಸಿದನಮಲ ವಲ್ಲಕಿಗಳಂ ತನ್ನ | ಬಳಿಯೊಳಭ್ಯಾಸಮಂ ಮಾಡಿಸಿದ ರಾಮಚಾರಿತ್ರಮಂ ತುದಿಮೊದಲ್ಗೆ | ಲಲಿತ ಸಾಳಂಗ ಸಾವೇರಿ ಗುಜ್ಜರಿ ಗೌಳ । ಪಳಮಂಜರಿಗಳೆಂಬ ವಿವಿಧ ರಾಗಂಗಳಂ | ಬಳಸಿ ಪಾಡಿಸಿದ ನೆರಡನೆಯ ತುಂಬುರು ನಾರದರ ತೆರದಿ ಕುಶ ಲವರನು | ೫೬||
ವೀಣೆಯಂ ಕೈಗಿತ್ತು ಬಾಲಕರ ವದನದೊಳ್ | ವಾಣಿ ತಾಂ ನೆಲಸಿದಳೊ ಗಾನದೇವತೆಯ ಮೈ | ಗಾಣಿಕೆಯೊ ಮೋಹನದ ತನಿರಸವೊ ಸೊಗಯಿಸುವ ಕರ್ಣಾಮೃತವೋ ಪೇಳೆನೆ|| ಜಾಣು ಜೋಕೆಯಿಂ ಜತಿ ರೀತಿ ತಾಳ ಪ್ರ | ಮಾಣ ಕಂಪಿತ ಮೂರ್ಛೆ ರಸ ಪಾಡು ಬೆಡಗು ಬಿ । ನ್ನಾಣ ಲಯ ಮಾಹತ ಪ್ರತ್ಯಾಹತ ವ್ಯಾಪ್ತಿಯರಿದು ಕೇಳಿಸಿದರವರು ॥೫೭||
ಸ್ಥಾಯಿ ಸಂಚಾರಿಗಳ ಸರಿಗಮ ಪದನಿಯ ಸರ | ದಾಯತದ ಶುದ್ಧ ಸಂಕೀರ್ಣ ಸಾಳಗದ ಪೂ | ರಾಯತ ಸುತಾನಂಗಳಂ ತಾರ ಮಧ್ಯ ಮಂದ್ರಗಳಿಂದ ಸೊಗಸುಗೊಳಿಸಿ || ಗೇಯ ರಸಮೊಸರೆ ಪಾಡಿದರವರ್ ಎನುತ ರಾ | ಮಾಯಣದ ಸುಶ್ಲೋಕಮಾಲೆಯಂ ಕೇಳ್ದು ರಘು | . ರಾಯನುರೆ ಮೆಚ್ಚಿಕೊಂಡಾಡಿ ನಸುನಗೆಯಿಂದೆ ಸೌಮಿತ್ರಿಗಿಂತೆಂದನು ॥೫೮]|
ಭಾವಿಸೆಲೆ ಸೌಮಿತ್ರಿ ಬಾಲಕರ್ ಸುಲಲಿತ ವ | ಚೋ ವಿಲಾಸಂಗಳಿಂ ಸ್ವರದಿಂದೆ ರೂಪಿಂದೆ ! ಲಾವಣ್ಯದಿಂದೆ ಗತಿಯಿಂದೆ ಚೇಷ್ಟೆಗಳಿಂದೆ ಸೀತೆಯಂ ನೆನೆಯಿಸುವರು || ದೇವಿಯನಗಲ್ದ ವಿರಹಾಗ್ನಿ ಸುತ ದರ್ಶನದ | ಜೀವನದೊಳುರೆ ನಂದಿತಾದುದಿನಕುಲದಳೆ | ಭೂವಲಯದೊಳ್ ತನ್ನ ಬಾಣಮಂ ಬಂಜೆಗೈದವರೆ ಪೊರಬಿಗರೆಂದನು | |೫೯||
ರಾಯನಾಡಿದ ನುಡಿಗೆ ನಸುನಗುತೆ ಲಕ್ಷ್ಮಣಂ | ಜೀಯ ನಿನ್ನಂಬುಗಳ್ ಮೋಘವಾದಪುವೆ ಪರ 1 ನಾಯಕದೊಳೀತಗಳ್ ನಿನ್ನ ಸುತರದರಿಂದ ನೆಲೆಗೊಂಡುದಾತ್ಮ ಶಕ್ತಿ ॥ ಈ ಯಮಳರಂ ಪರಿಗ್ರಹಿಸೆಂದೊಡಾ ಕೌ ಸ | ಲೇಯನತಿ ಧನ್ಯರಾವೆಂದು ವಾಲ್ಮೀಕಿಯಂ | ಪ್ರೀಯೋಕ್ತಿಯಿಂದ ಕೊಂಡಾಡಿ ಸುಕುಮಾರರಂ ಕರೆದಾಗಳಿಂತೆಂದನು || ೬೦ ||
ಆರ ತನುಜಾತರೆಲೆ ಮಕ್ಕಳಿರ ನಿಮಗಿನಿತು । ವೀರತ್ವಮೆತ್ತಣದು ಹೇಳ್ವುದೆಂದಾತ್ಮಜರ! ನಾರಾಘವಂ ಕೇಳ್ದೊಡವರಾವು ಜಾನಕಿಯ ಗರ್ಭಸಂಭವರೆಮ್ಮನು || ಆರೈದು ವಾಲ್ಮೀಕಿಮುನಿ ಸಲಹಿ ಸಕಲವಿ । ದ್ಯಾರಾಜಿಯಂ ಕಲಿಸಿದಂ ದೇವ ನಿನ್ನ ಪದ | ವಾರಿಜಕೆ ದ್ರೋಹಮಂ ಮಾಡಿದೆವು ಸೈರಿಸುವುದೆಂದೆರಗಿದರ್ ಪದದೊಳು ||೬೧||
ತನಯರಂ ತೆಗೆದೊಡನೆ ಮುಂಡಾಡಿ ಬಿಗಿಯಪ್ಪಿ | ಘನತರಸ್ನೇಹದಿಂ ಶಿರವನಾಘ್ರಾಣಿಸಿ ವ | ದನವ ನೊಡನೊಡನೆ ಚುಂಬಿಸಿ ಮತ್ತೆ ಮತ್ತೆ ವಾಲ್ಮೀಕಿಯಂ ಮಿಗೆ ಪೊಗಳುತೆ || ಅನುಜರಿಂದೊಡಗೂಡಿ ರಘುವರಂ ಸಂತೋಷ | ವನದಿಯೊಳ್ ಮುಳುಗಿದಂ ಸುಕುಮಾರರಂ ಕೊಂಡು | ಕೊನರಿತು ಸಮಸ್ತ ಪರಿವಾರಮುತ್ಸವದಿಂದೆ ಮೊಳಗಿದುವು ವಾದ್ಯಂಗಳಂ ||೬೨||
ಬಳಿಕ ವಾಲ್ಮೀಕಿಯಂ ಸತ್ಕರಿಸಿ ಸೀತೆ ಭೂ | ತಳವರಿಗೆ ಪರಿಶುದ್ಧ ಲೋಕಾಪವಾದಕ್ಕೆ | ಕಳೆದೆನೆಂತಾದೊದಂ ಪುತ್ರರಂ ಪಡೆದಳನ್ನರವರಿಸದೆನ್ನ ಬಳಿಗೆ || ಕಳುಹೆಂದು ಬೀಳ್ಕೊಂಡು ನುತ ಸಹೋದರರೊಡನೆ |ದಳಸಹಿತ ಹಯವರಂ ವೆರಸಿ ನಿಜಪುರಕೆ ಬಂ | ದುಳಿದಿರ್ದ ಯಜ್ಞಮಂ ನಡೆಸಿದಂ ಮೂಜಗಂ ಪೊಗಳ ಲ್ಕೆ ರಘುನಾಥನು | ೬೩||
ಇತ್ತ ನಿಜತನುಜರಂ ಕಳುಹಿ ವಾಲ್ಮೀಕಿಮುನಿ | ಪೋತ್ತಮಂ ಬರಲಾಶ್ರಮ ದ್ವಾರದೊಳ್ ಕಂಡು ! ಚಿತ್ತದೊಳ್ ಮರುಗುತ್ತೇನಾದರೆಲೆ ತಾತ ಕುಶ ಲವರೊಡಲ್ಪಿಡಿವೆನೆಂತೊ || ಪೆತ್ತಂದು ಮೊದಲಾಗಿ ಪತಿವಿರಹಮಂ ಮರೆದು | ಪೊತ್ತಿರ್ದೆನೀದೇಹಮಂ ತನ್ನ ಸುತರನಾ | ರ್ಗಿತ್ತು ನೀನೈತಂದೆ ತಂದೆ ಹೇಳೆಂದು ಜಾನಕಿ ಬಿದ್ದಳಂಘ್ರಿಗಳ್ಗೆ||೬೪||
ಮಣಿದೆತ್ತಿ, ಸೀತೆಯಂ ಸಂತೈಸಿ ಮಗಳೆ ನಿ| ನ್ನಣುಗರು ತಮ್ಮ ತಾತಂ ಕೂಡಿ ಕೊಂಡೊಯ್ದ | ನೆಣಿಕೆಬೇಡಿದಕಿನ್ನು ನಿನ್ನು ಮಂ ಕಾಂತನಲ್ಲಿಗೆ ಕಳುಹಿ ಬರ್ಪೆನೆಂದು || ಗುಣದಿಂದೊಡಂಬಡಿಸಿ ವಾಲ್ಮೀಕಿ ಮುನಿವರಂ | ಮಣಿರಥವನೇರಿಸಿ ಸಮಸ್ತ ವೈಭವದಿಂಧ|ರ ಣಿಜೆಯಂ ತಂದಯೋಧ್ಯಾಪುರದೊಳಿರಿಸಿ ರಘುನಾಥನಂ ಕಾಣಿಸಿದನು ||೬೫||
ಮೇಲೆ ಜಾನಕಿ ಸಹಿತ ರಾಘವಂ ಸಾಮ್ರಾಜ್ಯ | ಲೋಲನಾಗಿರ್ದನೆಲೆ ಜನಮೇಜಯಾವನೀ | ಪಾಲ ಕೇ ಳೈ ಕುಶಲವ ರೊಡನಾ ರಾಮಂಗೆ ಬಂದ ಕದನದ ಕಥೆಯನು ||ಮೂಲೋಕಕಿದು ಪುಣ್ಯವತಿರಮ್ಯ ಮಾಗಿರ್ಪು | ದಾಲಿಪರ್ಗಾಯುರಾರೋಗ್ಯಮೈಶ್ವರಂ ವಿ। ತಾಲ ಮತಿ ಸತ್ಕೀರ್ತಿ ವಿಮಲಸಂತತಿ ಸುಗತಿ ದೊರೆಕೊಂಬುದಿಹಪರದೊಳು||೬೬||
ಅರನ ನೀಂ ಬೆಸಗೊಳಲ್ ಪೇ ಳ್ದೆ ನಾಂ ಕುಶ ರಾಘ | ವರ ಯುದ್ಧಮಂ ಸುರಪ ಫಲುಗುಣನ ಕಾಳಗ | ನೊರೆಯಲೇಕಿನ್ನು ಕೇಳ್ದರಿವಲ್ಕೆ ಬಭ್ರುವಾಹನ ಪಾರ್ಥರಾಹವವನು || ವಿರಚಿಸುವೆನೊಲಿದಾಲಿಸೆಂದು ಜೈಮಿನಿ ಮುನೀ | ಶ್ವರನಿಂದು ಕುಲತಿಲಕ ಜನಮೇಜಯಂಗೆ ವಿ| ಸ್ಮರಿಸಿದಂ ದೇವಪುರ ನಿಲಯ ಲಕ್ಷ್ಮೀಶನಂ ಚಿತ್ತದೊಳ್ ಧ್ಯಾನಿಸುತ್ತೆ |೬೭]
( ಮುಂದುವರೆಯುತ್ತದೆ )








































ಕಾಮೆಂಟ್ಗಳು