ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜೈಮಿನಿ ಭಾರತ

ಜೈಮಿನಿ ಭಾರತ ಕಿರು ಪರಿಚಯ
- ಸುಬ್ಬುಲಕ್ಷ್ಮಿ ಅವರಿಂದ Lrphks Kolar


 ಕವಿ ಲಕ್ಷ್ಮೀಶ. ಚಿಕ್ಕಮಗಳೂರು ಜಿಲ್ಲೆಯ ದೇವನೂರಿನವನು.  ಕಾಲ  ಹದಿನಾಲ್ಕನೇ ಶತಮಾನವಿರಬಹುದು ಎಂಬ ಅಭಿಪ್ರಾಯವಿದೆ.

ಈ ಕಾವ್ಯವು  34 ಸಂಧಿ ಗಳನ್ನು ಒಳಗೊಂಡಿದೆ. ಸುಮಾರು1900 ಕ್ಕೂ ಹೆಚ್ಚು  ಪದ್ಯಗಳಿವೆ. ಕುರುಕ್ಷೇತ್ರ ಯುದ್ಧದ ನಂತರ ಬಂಧುಗಳನ್ನು ಕೊಂದ ಪಾತಕವನ್ನು ಕಳೆದುಕೊಳ್ಳಲು ಮುನಿಗಳ ನುಡಿಯಂತೆ, ಕೃಷ್ಣನ ಸಮ್ಮತಿಯಂತೆ ಧರ್ಮಜನು ಅಶ್ವಮೇಧ ಯಾಗವನ್ನು ಕೈಗೊಳ್ಳುವ ಕಥೆಯಿದು. 

ಒಂದು ವರ್ಷದ ಅವಧಿಯಲ್ಲಿ ಯಾಗದ ಹಯವನ್ನು ತರುವುದರಿಂದ ಹಿಡಿದು ಯಾಗಸಮಾಪ್ತಿಯವರೆಗೆ ಹಲವು ಮಜಲುಗಳಿವೆ. ವರ್ಷದ ಎಲ್ಲಾ ಕಾಲಗಳೂ ವರ್ಣಿತವಾಗಿವೆ. ಅಷ್ಟಾದಶ ವರ್ಣನೆಗಳೂ ಬಂದಿವೆ.  ಅರಣ್ಯ, ಸರೋವರ, ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ವಸಂತ ಋತು, ಸಿಶಿರ ಋತುಗಳು ವೇಶ್ಯಾವಾಟಿ, ನಗರಗಳ ವರ್ಣನೆ ಮುಂತಾದ ವರ್ಣನೆಗಳು ಶೋಭಿಸಿವೆ. ಹಲವು ಪರಾಕ್ರಮಿಗಳ ಪರಿಚಯ ಆಗುತ್ತದೆ. ಕೃಷ್ಣಭಕ್ತರ ಪರಮಾದೃಶ ಸನ್ನಿವೇಶಗಳಿವೆ. 

ನೀಲಧ್ವಜ, ಹಂಸಧ್ವಜ, ಸುಧನ್ವ, ಮಯೂರಧ್ವಜ, ಚಂದ್ರಹಾಸ, ಬಭ್ರುವಾಹನ, ವೀರವರ್ಮ ಮೊದಲಾದವರ ಭಕ್ತಿ, ಶಕ್ತಿಗಳು ವರ್ಣಿತವಾಗಿವೆ. ಜ್ವಾಲೆ, ಪ್ರಮೀಳೆ, ಚಂಡಿ, ಪ್ರಭಾವತಿ, ಚಿತ್ರಾಂಗದೆ, ಕುಮುದ್ವತಿ ಸೀತೆ, ವಿಷಯೆ ಮುಂತಾದ ಸ್ತ್ರೀ ಪಾತ್ರಗಳನ್ನು ಕಾಣಬಹುದಾಗಿದೆ. ಒಬ್ಬೊಬ್ಬರದೂ ಒಂದೊಂದು ಬಗೆಯ ವಿಶೇಷ ವ್ಯಕ್ತಿತ್ವ. ನಡುವೆ ರಾಮಾಯಣದ ವಿವರ ಲವಕುಶರ ಪ್ರಸಂಗ ಪ್ರಸಿದ್ಧವಾದುದು. ಮತ್ತೆ ಮತ್ತೆ ಓದಬೇಕೆನಿಸುವ ಭಾಗಗಳು ಹಲವಾರು ಇವೆ.

ಬಳಸಿರುವ ಭಾಷೆ ಅಲಂಕಾರಗಳಿಂದ ಕೂಡಿದ್ದು ಉಪಮಾಲೋಲ ಎಂಬ ಕವಿಯ ಬಿರುದನ್ನು ಸಾರ್ಥಕಗೊಳಿಸಿವೆ. ವಾರ್ಧಕ ಷಟ್ಪದಿಯ ಪದ್ಯಗಳು ಪ್ರಾಸಗಳು ಸೊಗಸಾಗಿವೆ. ರಾಗ, ಲಯಬದ್ಧವಾದ ಪದ್ಯಗಳು ಮನಸೆಳೆಯುತ್ತವೆ.  ಉದ್ದಕ್ಕೂ ತೋರುವ ಕೃಷ್ಣನ ಕರುಣೆ, ಭಕ್ತರನ್ನು ಸಲಹುವ ರೀತಿ, ಗರ್ವಗಳನ್ನು ತೊಡೆಯುವ ರೀತಿ ಹೃದಯಂಗಮವಾಗಿದೆ. 

ಈ ಕಾವ್ಯವನ್ನು ಸಂಕ್ಷಿಪ್ತ ರೂಪದಲ್ಲಿ ತರುವ ಸಣ್ಣ ಪ್ರಯತ್ನ ನನ್ನದು. ಆದಷ್ಟೂ ಜನರನ್ನು ತಲುಪಲಿ ಎಂಬ ಉದ್ದೇಶ. ಇದಕ್ಕೆ ಪ್ರೇರಣೆ ಸೋದರ ತಿರು ಶ್ರೀಧರ. ಇವರು ಈ ಬಗ್ಗೆ ನೆನಪಿಸುತ್ತಾ, ಪ್ರೋತ್ಸಾಹಿಸುತ್ತಾ ಇದ್ದುದರಿಂದ ಏನೆಲ್ಲಾ ಸಮಸ್ಯೆಗಳ ನಡುವೆಯೂ ಇದನ್ನು ಪಟ್ಟಾಗಿ ಕುಳಿತು ಓದುವ ಮನಸ್ಸಾಯಿತು. ಓದುತ್ತಾ ಹೋದಂತೆ ಬಿಡಲಾಗಲಿಲ್ಲ.

ಸಂಕ್ಷಿಪ್ತ ರೂಪ ತರುವಲ್ಲಿ ಕನ್ನಡ ವಿಶ್ವಕೋಶ, ಪುರಾಣನಾಮ ಚೂಡಾಮಣಿಗಳ ಸಹಾಯ ಸಿಕ್ಕಿದೆ. ಹಲವಾರು ಸಹೃದಯರು ಕೇಳಿದ ವಿವರಗಳನ್ನು ನೀಡಿ ಉಪಕರಿಸಿದ್ದಾರೆ. ಶ್ರೀಯುತ ಶ್ರೀನಿವಾಸಮೂರ್ತಿಗಳು ಬಹು ಹಳೆಯ ದೊಡ್ಡಬೆಲೆ ನಾರಾಯಣರಾಯರ ಗ್ರಂಥವನ್ನು ಕಳಿಸಿಕೊಟ್ಡು ಸಹಕರಿಸಿದ್ದಾರೆ. ಆಕಾಶವಾಣಿ ಮೈಸೂರು ಮತ್ತು ಬೆಂಗಳೂರು ಕೇಂದ್ರಗಳಲ್ಲಿ ಪ್ರಸಾರವಾಗುತ್ತಿದ್ದ ಕಾವ್ಯವಾಚನ ಆಸಕ್ತಿ ಮೂಡಿಸುವಲ್ಲಿ ಕೈ ಜೋಡಿಸಿದೆ. ಕುಟುಂಬದ ಸದಸ್ಯರು ಆಗಾಗ್ಗೆ ವಿಚಾರಿಸುತ್ತ ಪ್ರೇರಣೆ ನೀಡಿದ್ದಾರೆ. ಇಷ್ಟೆಲ್ಲ ಉಪಕಾರಿಗಳಿಂದಾಗಿ ಈ ಕೆಲಸ ಸಾಧ್ಯವಾಗಿದೆ.  ಇದು ಸಂಪೂರ್ಣ ಪದ್ಯಗಳ ಅರ್ಥ ಅಲ್ಲ. ಇಡೀ ಕಥಾಭಾಗದ ಸಂಕ್ಷಿಪ್ತ ರೂಪ ಅಷ್ಟೇ. ದೋಷಗಳನ್ನು ಮನ್ನಿಸಿ ಹರಸಬೇಕಾಗಿ ಮನವಿ. ನಮನಗಳು 🌷🙏🌷




ಜೈಮಿನಿ ಭಾರತ  1 
ನಾಂದಿ ಸಂಧಿ
ಪದ್ಯ 1 ರಿಂದ 12

ಸಂಕ್ಷಿಪ್ತ ರೂಪ
ವಿವರಣೆ: ಸುಬ್ಬುಲಕ್ಷ್ಮಿ Lrphks Kolar

ಇಲ್ಲಿ 12 ಪದ್ಯಗಳಿವೆ. ವಾರ್ಧಕ ಷಟ್ಪದಿಯಲ್ಲಿ ರಚಿತವಾದ ಅತ್ಯಂತ ಪರಿಚಿತ ಪದ್ಯಗಳು. ಹಿಂದೆ ಜೈಮಿನಿ ಭಾರತ ಓದುವುದನ್ನು ಕಲಿಸುವುದೂ ಕೂಲಿಮಠ ಅಥವಾ ಗುರುಕುಲಗಳಂತಹ ಶಾಲೆಗಳಲ್ಲಿ ರೂಢಿಯಲ್ಲಿತ್ತು. ನಮ್ಮ ಹಳ್ಳಿಗಳಲ್ಲಿ ಕುಮಾರವ್ಯಾಸ ಭಾರತ ಮತ್ತು ಜೈಮಿನಿ ಭಾರತ ತುಂಬಾ ಜನಪ್ರಿಯವಾದವು. ಈ ಕಾವ್ಯವು ವಾಚನ, ವ್ಯಾಖ್ಯಾನ, ಯಕ್ಷಗಾನ ಪ್ರಯೋಗ ಇತ್ಯಾದಿ ಪ್ರಕಾರಗಳಲ್ಲಿಯೂ ಪ್ರಸಿದ್ಧವಾಗಿದೆ.

ಮೊದಲಿಗೆ ದೇವತಾಸ್ತುತಿ ಕಾಣುತ್ತದೆ. ವಿಷ್ಣುವಿನ ಪ್ರಾರ್ಥನೆಯಲ್ಲಿ  ಎಲ್ಲರಿಗೂ ಅವನ ಮುಖಚಂದ್ರದ ಎಳೆಬೆಳದಿಂಗಳ ಆನಂದವು ಸಿಗಲಿ ಎಂಬ ಆಶಯವಿದೆ. ಶ್ರೀ ಎಂದು ಆರಂಭವಾಗುವ ಈ ಪದ್ಯ ಲಕ್ಷ್ಮಿಯ ಮನಸ್ಸಿಗೆ ಆನಂದ ತರುವ ವಿಷ್ಣುವನ್ನು ವರ್ಣಿಸುತ್ತದೆ. 

ನಂತರ ಶಿವನ ಸ್ತುತಿ. ಇಲ್ಲಿ ಗಂಗಾಧರನನ್ನು ಪ್ರಾರ್ಥಿಸುತ್ತಾ ನಮ್ಮನ್ನು ಕೈಬಿಡದೆ ಸಲಹಲಿ ಎನ್ನುತ್ತಾರೆ. ಹರಿ ಮತ್ತು ಹರ ಸಮನ್ವಯತೆ ವಿಶೇಷವಾದ ಅಂಶ.  ಗಣಪತಿಯ ಪ್ರಾರ್ಥನೆಯಲ್ಲಿ ಗಣಪತಿಯ ದಂತಕಾಂತಿ, ಸಿಂದೂರ, ಕಿರೀಟ ಮುಂತಾಗಿ ಹೇಳುವಾಗ ಅರುಣರಾಗದ ವರ್ಣನೆ ಬರುತ್ತದೆ. ಕೊನೆಗೆ ವರದೆ, ಕಲ್ಯಾಣಿ, ಅಜನ ಪಟ್ಟದರಾಣಿ ಸರಸ್ವತಿಯನ್ನು ಸಲಹೆಂದು ಬೇಡಿಕೊಳ್ಳುತ್ತಾರೆ.

ಸಾಮಾನ್ಯವಾಗಿ ಕವಿಗಳು ದೇವತಾಸ್ತುತಿ, ಸ್ವವಿವರ, ತನ್ನ ಕಾವ್ಯದ ವಿ಼ಶೇಷತೆ, ವಸ್ತು, ಬಳಸಿರುವ ಛಂದಸ್ಸು, ಆತ್ಮವಿಶ್ವಾಸ, ಸ್ವಪ್ರಶಂಸೆ, ಹಿರಿಯರನ್ನು ಸ್ಮರಿಸಿ ನಮಿಸುವುದು ಎಲ್ಲವೂ ಇರುತ್ತದೆ.  ತನ್ನ ಕಾವ್ಯವನ್ನು ಸಹೃದಯರು ಅರಿಯುತ್ತಾರೆ. ದುಷ್ಟರಿಗೆ ತಿಳಿಯದು ಎನ್ನುತ್ತಾನೆ ಲಕ್ಷ್ಮೀಶ. ಷಟ್ಪದಿ ಯನ್ನು ಭ್ರಮರಕ್ಕೂ, ಛಂದಸ್ಸಿಗೂ ಎರಡಕ್ಕೂ ಅನ್ವಯವಾಗುವಂತೆ ಹೇಳಿರುವುದು ಗಮನಾರ್ಹ. ಹೀಗೆ ಇಲ್ಲಿನ ಪದ್ಯಗಳಲ್ಲಿ ಶಬ್ದಾಲಂಕಾರ, ಅರ್ಥಾಲಂಕಾರ, ಶ್ಲೇಷ, ರೂಪಕ, ಉಪಮೆ ...ಎಲ್ಲದರ ಬಳಕೆಯೂ ಆಗಿದೆ. ಇವನಿಗೆ ಉಪಮಾಲೋಲ, ನಾದಲೋಲನೆಂಬ ಹೆಗ್ಗಳಿಕೆಗಳಿದ್ದು ಕವಿ ಚೂತವನ ಚೈತ್ರ ಎಂದೇ ಹೆಸರಾಗಿರುವ ಇವನ ಕಾವ್ಯವನ್ನು ಮುಂದೆ ಮತ್ತಷ್ಟು ಸವಿಯುವ ಅವಕಾಶ ಇದೆ.

ಮೊದಲನೆಯ ಸಂಧಿ

ಶ್ರೀವಧುವಿನಂಬಕ ಚಕೋರಕಂ ಪೊರೆಯೆ ಭ | ಕಾವಳಿಯ ಹೃತ್ತು ಮುದ ಕೋರಕಂ ಬಿರಿಯೆ ಜಗ | ತೀ ವಲಯದಮಲೆ ಸೌಭಾಗ್ಯ ರತ್ನಾಕರಂ ಪೆರ್ಚಿನಿಂ ಮೇರೆವರಿಯೆ | 
ಅವಗಂ ಸರಸ ಕರುಣಾಮೃತದ ಕಲೆಗಳಿಂ ತೀವಿದೆಳನಗೆಯ ಬೆಳುದಿಂಗಳಂ ಪಸರಿಸುವ | ದೇವಪುರ ಲಕ್ಷ್ಮೀರಮಣನಾಸ್ಯ ಚಂದ್ರನಾನಂದಮಂ ನಮಗೀಯಲಿ ||೧||

ಪಾವನತುಲಾಭರಣಮಂ ಮಾಡಿಕೊಂಡೆಸೆವ | 'ಪಾವನತರಸ್ವರೂಪಂ ನಾರದಾದಿ ಮುನಿ | ಪಾವನತ ಪಾದ ಪಂಕೇರುಹದ್ವಂದ್ವನಿಂದು ಕಲಾವತಂಸನುಮೆಯ || ಭಾವನೆಯನೊಡಗೂಡಿಸುವ ಸಕಲ ಸುರರ ಸಂ। ಭಾವನೆಯ ಕೈಕೊಳ್ಳ ಲೋಕವಿಸ್ತರಣ ಪ್ರ| ಭಾವ ನಯನತ್ರಯಂ ದೇವ ಗಂಗಾಧರಂ ಬಿಡದೆ ಸಲುಹುಗೆ ನಮ್ಮನು ||೨||

ಪ್ರಸ್ತುತದೊಳೊಗೆದ ಮುಂಬೆಳಗಮಲದಂತದ ಗ | ಭಸ್ತಿ, ನವ ಪೂರ್ವ ಸಂಧ್ಯಾರುಣಂ ಭಾಳವಿ | 
ನ್ಯಸ್ತ್ರ ಸಿಂಧೂರಮಂಕುರಿಪ ಪೊಂಬಿಸಿಲೊಡನೆ ಮೂಡುವೆಳನೇಸರೆಸೆವ | ಮಸ್ತಕದ ಮಣಿಮಕುಟಮಾಗಲುದಯಾಚಲದ । ವಿಸ್ತಾರದಂತೆ ಭದ್ರಾಕೃತಿಯೊಳೊಪ್ಪುವ ಸ | ಮಸ್ತ ಸಿದ್ಧಿ ಪ್ರದಾಯಕ ವಿನಾಯಕ ಮಾಳು ದೆಮಗೆ ನಿಶ್ಚಿಘ್ನತೆಯನು ||೩||

ಭೂವ್ಯೋಮ ಪಾತಾಳ ಲೋಕಂಗಳಲ್ಲಿ ಸಂ| ಭಾವ್ಯರೆಂದೆನಿಸಿಕೊಳ್ಳಖಿಳದೇವರ್ಕಳಿಂ ! ಸೇವ್ಯನಾದಜನ ಪಟ್ಟದ ರಾಣಿ ವರದೆ ಕಲ್ಯಾಣಿ ಫಣಿವೇಣಿ ವಾಣಿ | 
ಕಾವ್ಯಮಿದು ಭುವನದೊಳ್ ಸಕಲ ಜನರಿಂದ ಸು | ತ್ರಾವ್ಯಮಪ್ಪಂತೆನ್ನ ವದನಾಬ್ಬದಲ್ಲಿ ನೀ ನೇ ವ್ಯಾಪಿಸಿದ್ದ ಮಲಸುಮತಿಯಂ ತಾಯೆನಗೆ ತಾಯೆ ನಗೆಗೂಡಿ ನೋಡಿ ॥೪||

ಪಾರದೆ ಪರಾರ್ಥಮಂ ವರಯತಿಗೆ ಭಂಗಮಂ | ತಾರದೆ ನಿಜಾನ್ವಯಕ್ರಿಯೆಗಳೆ ದೂಷಣಂ | ಬಾರದೆ ವಿಶೇಷಗುಣ ಗಣ ಕಲಾ ಗೌರವಂ ತೀರದೆ ದುರುಕ್ತಿಗಳೆ | 
ಸೇರದೆ ಸುಮಾರ್ಗದೊಳ್ ನಡೆವ ಸತ್ಪುರುಷನ ಗ | 
ಭೀರದಶೆಯಂ ಪೋಲ್ಪ ಕಾವ್ಯಪ್ರಬಂಧಮಂ ! ಶಾರದೆಯ ಕರುಣದಿಂ ಪೇಳ್ವೆನಾಂ ದೋಷಮಂ ತೊರೆದೆಲ್ಲರುಂ ಕೇಳ್ವುದು ॥೫||

ಛಂದಸ್ಸು ಲಕ್ಷಣಮಲಂಕಾರ ಭಾವರಸ | ಮೊಂದಿ ಕಲೆವೆತ್ತ ಸತ್ಕೃತಿ ಚಮತಿ ಯುಕ್ತಿ | ಯೊಂದುಮಿಲ್ಲದ ಕಾವ್ಯಮಶ್ರಾವ್ಯಮಹುದೆಂದರಿಯದೆ ಕವಿತೆಯನು ಬರಿದೆ || 
ದಂದುಗಕ್ಕೊಳಗಾಗಿ ಪೇಳೆನೆಂದೆನ್ನ ನಗು | ನಂದಮಂ ಮಾಡದೆನಗೊಲಿದಿತ್ತ ನಮಲಮತಿ | ಯಂ ದೇವಪುರದ ಲಕ್ಷ್ಮೀರಮಣವೆಂದರಿದು ಕೇಳ್ಳುದೆಲ್ಲಾ ಸುಜನರು ||೬||

ಕೆನೆವಾಲ ಕಡೆದು ನವನೀತಮಂ ತೆಗೆದು ಬಾ ! ಯ್ಗಿ ನಿದಾಗಿ ಸವಿಯದದರೊಳಗೆ ಪುಳಿವಿಳಿದು ರಸ | ವನೆ ಕೆಡಿಸಿದೊಡೆ ಕರೆದ ಸುರಭಿಗಪ್ಪುದೆ ಕೊರತೆ ಕಾವ್ಯಮಂ ಕೇಳು ಮಥಿಸಿ | ಜನಿಸಿದ ಪದಾರ್ಥವ ತಿಳಿದು ನೋಡದೆ ವಿನೂ | 
ತನಕವಿತೆಯೆಂದು ಕುಂದಿಟ್ಟು ಜರೆದೊಡೆ ಪೇಳ | ವನೊಳಾವುದೂಣಿಯಂ ಜಾಣರಿದನರಿದು ಮತ್ಸರವ ಮರೆದಾಲಿಸುವುದು | |೭||

ಜಾಣರಂ ತಲೆದೂಗಿಸದೆ ನುಡಿದೊಡಾಪದ | ಕ್ಕೂಣಿಯಂ ಬಹುದೆಂದು ಸರಸೋಕ್ತಿಯಿಂದೆ ಗೀ | ರ್ವಾಣ ಪುರನಿಲಯ ಲಕ್ಷ್ಮೀವರಂ ತಾನೆ ಸಂಗೀತ ಸುಕಲಾ ನಿಪುಣನು | 
ವೀಣೆಯಿಂ ಗಾನಮಂ ನುಡಿಸುವಂದದೊಳೆನ್ನ | 
ವಾಣಿಯಿಂ ಕವಿತೆಯಂ ಪೇಳಿಸಿದನೆಂದರಿದು | ಕೇಣಮಂ ತೊರೆದು ಪುರುಡಿಸುವರಂ ಜರೆದು ಕಿವಿದೆರೆದು ಕೇಳ್ವುದು ||೮||

ದುಷ್ಟಾಹಿ ಘೋರತರ ವಿಷವದನದಿಂದೆ ಸಂ
ದಷ್ಟ ಮಾಗಿರ್ದೊಡಂ  ದೋಷಮಿರ್ದೊಡಂ ನಷ್ಟ ಕಲೆಯಾದೊಡಂ ಚಂದ್ರನಂತೆನ್ನ ಕಾವ್ಯದ ರಸಂ ಸುಮನಸರ್ಗೆ | 
ಇಪ್ಪ ಮಾಗದೆ ಮಾಣದಿನ್ನಾವನಾದೊಡಂ | ಕಪ್ಪಮಂ ಬಗೆವನಂ ಚೋರಂಗೆ ವಿರಹಿಗಂ । ದೃಷ್ಟಾಂತವಾಗಿ ಸಲ್ವಂ ಧರಾವಲಯದೊಳ್ ಸಂದೇಹಮೇನಿದರೊಳು | ೯ ||

ಮೊಗಮಾವ ಲೀಲೆಯಿಂದೆಸೆವುದಾ ಭಾವಮಂ |  ಮಗುಳೆ ತೋರುವುದಲ್ಲನ್ಯ ಪ್ರಕಾರದಿಂ| ಸೊಗಯಿಪುದೆ ರನ್ನಗನ್ನಡಿ ಧರೆಯೊಳಾರಾಜಿಸುವ ಕನ್ನಡದ  ನುಡಿಗಳ || ಬಗೆಯರಿದರಾವಲಕ್ಷಣದಿಂದೆ ಮುನ್ನ ಕ | ಬ್ಬಗಳನುಸುರಿದರದೇ ಲಕ್ಷ ಮಲ್ಲದೆ ಪೆರತೆ | ನುಡಿಗಳ 1 ನಗೆ ಸಲ್ಲದದರಿಂದೆ ಪೂರ್ವ ಸತ್ಕವಿಗಳ್ಗೆ ನಮಿಸಿ ನಾಂ ಕೃತಿವೇಳ್ವೆನು | ೧೦ |

ವಿದ್ವತ್ಸಭಾವಲಯಮರಿಯೆ ವಿರಚಿಸಿದಂ ಭ | ರಾಜ ಗೋತ್ರಭವನಣ್ಣಮಾಂಕನ ಸುತಂ । ಸದ್ವಿನುತ ಕರ್ಣಾಟ ಕವಿ ಚೂತವನ ಚೈತ್ರ ಲಕ್ಷ್ಮೀತನೆಂಬೊರ್ವನು ||
ಹೃದ್ವನಜದೊಳ್ ದೇವಪುರದ ಲಕ್ಷ್ಮೀಶನ ಪ | ದದ್ವಯವನಾವಗಂ ಧ್ಯಾನಿಸುವರಡಿಗಳಂ | ಸದ್ದಿನಯಿದಿಂ ಭಜಿಪ ಬಂದೆ ವಿಮಲ ಜೈಮಿನಿ ಭಾರತದ ಕಥೆಯನು | ೧೧ |

ವರ ವರ್ಣದಿಂದೆ ಶೋಭಿತವಾಗಿ ರೂಪ ವಿ | ಸ್ವರದಿಂದೆ ಚೆಲ್ವಾಗಿ ಮಧುರತರ ನವರಸೋ ! ದರ ಭರಿತದಿಂದ ವಿಲಸಿತವಾಗಿ ಸುಮನೋನುರಾಗದಿಂ ಪ್ರಚುರವಾಗಿ||
ನಿರುತ ಮಂಜುಳ ಶಬ್ದದಿಂದೆ ಕಿವಿಗಿಂಪಾಗಿ | ಚರಿಸುವ ಸುಲಲಿತ ಷಟ್ಟದಿಗಳೆಡೆಬಿಡದೆ ಝಂ ಕರಿಸದಿರ್ಪುವೆ ಬಂದು ನೆರೆದ ವಿದ್ವತ್ಸಭಾನೀರೇರುಹಾಕರದೊಳು||೧೨||


ಜೈಮಿನಿ ಭಾರತ 2
ಎರಡನೆಯ ಸಂಧಿಯಲ್ಲಿ ಮೊದಲ ಭಾಗ
 ಕಥಾಪ್ರಾರಂಭ
ನಿರೂಪಣೆ: ಸುಬ್ಬುಲಕ್ಷ್ಮಿ Lrphks Kolar

ಧರ್ಮಜನ ರಾಜ್ಯ ವರ್ಣನೆ
ಪದ್ಯ 1 ರಿಂದ 25

ಹಸ್ತಿನಾವತಿಯೆಂಬ ಪಟ್ಟಣ ಭೂಮಂಡಲದಲ್ಲಿಯೇ ವಿಸ್ತಾರವಾದುದೂ ಸುಂದರವೂ ಆಗಿತ್ತು. ಅಲ್ಲಿನ ಮಹಾರಾಜ ಜನಮೇಜಯ. ಅವನು ಪಾಂಡವರ ವಂಶದ ಕುಡಿ. ಪರೀಕ್ಷಿತನ ಮಗ. ಅವನ ರಾಜ್ಯಭಾರದ ಸಮಯದಲ್ಲಿ ತನ್ನ ಪೂರ್ವಿಕರ ಮಹಾಭಾರತ ಪ್ರಸಂಗದ ವಿವರಗಳನ್ನು ತಿಳಿಯಲು ಬಯಸಿ ಜೈಮಿನಿ ಮುನಿಗಳನ್ನು ಕೇಳಿದನು. ಆಗ ಮುನಿಯು ಎಲ್ಲರಿಗೂ ತಿಳಿಯುವಂತೆ ಮಹಾಭಾರತದ ಕಥೆಯನ್ನು ಹೇಳತೊಡಗಿದನು.

ಕುರುಕ್ಷೇತ್ರ ಯುದ್ಧದಲ್ಲಿ ವಿಜಯಿಯಾದ ನಂತರ ಧರ್ಮರಾಯನು ಧರ್ಮದಿಂದ ರಾಜ್ಯಭಾರ ಮಾಡುತ್ತಿದ್ದನು. ನಹುಷ, ಭರತ ಮುಂತಾದವರಿಗೆ ಕಡಿಮೆಯಿಲ್ಲದಂತೆ ತನ್ನ ತಮ್ಮಂದಿರೊಡಗೂಡಿ ರಾಜ್ಯಕಾರ್ಯವನ್ನು ನಡೆಸುತ್ತಿದ್ದನು. 
ಅವನ ದೇಶದಲ್ಲಿ ಕಳ್ಳತನ, ಸುಳ್ಳು ಹೇಳುವುದು, ವ್ಯಭಿಚಾರ, ಅನಾಚಾರ, ವೈರ, ದ್ವೇಷ ಇವು ಯಾವುದೂ ಇರಲಿಲ್ಲ.  ಅದಕ್ಕೆ ಬದಲಾಗಿ ನೀತಿಸಾಸ್ತ್ರ ವಿಶಾರದರೂ ಸತ್ಯವಂತರೂ, ಧರ್ಮಿಷ್ಟರೂ, ವಿವೇಕಿಗಳೂ, ವಿದ್ಯಾವಂತರೂ ಆದ ಪ್ರಜೆಗಳಿದ್ದರು.

ಕುಟಿಲ, ಚಂಚಲ, ಉತ್ಕಟತೆ, ಮದಾವಸ್ಥೆ ಮುಂತಾದವುಗಳನ್ನು  ಸ್ತ್ರೀಯರ ಗುಂಗುರು ಕೂದಲಿಗೂ, ಕಣ್ಣೋಟಕ್ಕೂ, ವಕ್ಷದ ಉನ್ನತಿಗೂ ಹೋಲಿಸುತ್ತ ಪ್ರತಿಯೊಂದು ಪದ್ಯದಲ್ಲಿಯೂ ಅರ್ಥಾಲಂಕಾರ, ಶಬ್ದಾಲಂಕಾರಗಳನ್ನು ಬಳಸುತ್ತ ವಿಶೇಷವಾಗಿ ಪದ್ಯರಚನೆ ಮಾಡಿರುವುದು ಕವಿಯ ಜಾಣತನ. 
ಅಹಿತವೆನ್ನುವುದು ಗರುಡನ ಹಿಡಿತದಲ್ಲಿ ಸಿಕ್ಕ ಸರ್ಪಗಳಿಗೆ ಮಾತ್ರ ಅನ್ವಯಿಸುತ್ತಿತ್ತು. ಶೋಕವಲ್ಲ, ಅಶೋಕವೃಕ್ಷಗಳು ವಸಂತದಲ್ಲಿ ರಾರಾಜಿಸುತ್ತಿದ್ದವು. ಕಲಹವೆನ್ನುವುದು ಕಲಹಂಸಗಳ ಕಲರವದಲ್ಲಿತ್ತು ಎಂದೂ ಹೇಳುವ ಮೂಲಕ ಧರ್ಮಜನ ರಾಜ್ಯದ ಸುಂದರತೆಯನ್ನು ವರ್ಣಿಸುವನು.
ಇಲ್ಲಿ ಕೊಡೆ, ಕಡಿ, ಪೊಡೆ ಮುಂತಾದವು ಆತಪತ್ರ, ಭೂಮಿಯಲ್ಲಿರುವ ಐಶ್ವರ್ಯಗಳು ಪೊಡೆಯೆಂಬಲ್ಲಿಯೂ, ಹೆಂಗಸರ ತುರುಬನ್ನು ಮುಡಿಯೆನ್ನುವರೇ ಹೊರತು ಇಲ್ಲಿ ಮುಗಿದಿದೆ ಎನ್ನುವುದಿಲ್ಲ. ಎಲ್ಲ ಸಮೃದ್ಧವಾಗಿತ್ತು ಎಂದು ಅರ್ಥ. ಜಡಿಯೆಂಬುದು ಮಳೆಯಲ್ಲದೆ ಹೊಡೆಯುವುದೆಂಬ. ಅರ್ಥದಲ್ಲಿಲ್ಲ...ಇತ್ಯಾದಿ.
ಇಲ್ಲಿ ಎಲ್ಲರೂ ಭೋಗಿಗಳು. ಅದರೆ ಸರ್ಪಗಳಲ್ಲ. ಎಲ್ಲರೂ ವಿದ್ಯಾವಂತರು. ವೀರರು. ರಕ್ಕಸರಲ್ಲ. ಹೀಗೆ ಭೂಮಿ, ಆಕಾಶ, ಪಾತಾಳಗಳ ಸಮನ್ವಯತೆಯಲ್ಲಿ ಚಮತ್ಕಾರ ತರುತ್ತಾನೆ.  ಇಲ್ಲಿನ ರಾಜ ತಲೆಬಾಗುವವನಲ್ಲ. ಧರ್ಮಜನ ಕೀರ್ತಿ ಧವಳಕೀರ್ತಿಯಂತೆ ಹರಡಿತ್ತು. ಈ ಪದ್ಯದಲ್ಲಿ ನಾಗೇಂದ್ರ ಪದದ ಬಳಕೆಯಲ್ಲಿ ಚಮತ್ಕಾರವಿದೆ. 

ಹರಿಯಂತೆ ಬಲಯುತನೂ, ಶಿವನಂತೆ ಮಂಗಳನೂ ಆಗಿದ್ದ ರಾಜನಲ್ಲಿಗೆ ಒಂದು ದಿನ ವ್ಯಾಸ ಮಹರ್ಷಿಯು ಬಂದನು.
ಮುನಿಯನ್ನು ಸ್ವಾಗತಿಸಿ, ಸತ್ಕರಿಸಿ ಕೂರಿಸಿದನು. ಎಲ್ಲ ಇದ್ದರೂ ಖಿನ್ನನಾಗಿದ್ದ ದರ್ಮಜನ ಮುಖಭಾವವನ್ನು  ಕಂಡು ಕಾರಣ ಕೇಳುವನು ಮುನಿ. ಅದಕ್ಕೆ ಬಿಸಿಯುಸಿರಿನಿಂದ ಕೂಡಿದ ಧರ್ಮಜನು ತನ್ನ ಬೇಸರ ತಿಳಿಸುವನು. 

ಪಿತಾಮಹ, ಗುರುಗಳು, ಸೋದರರು, ಬಂಧುಗಳು ಎಲ್ಲರನ್ನೂ ಕಳೆದುಕೊಂಡು ಪಡೆದ ಈ ವಿಜಯದಲ್ಲಿ ಯಾವ ಸುಖವಿದೆ? ಅಷ್ಟು ಜನರ ಅವಸಾನಕ್ಕೆ ತಾನು ಕಾರಣನಾದೆ, ಈ ಘೋರಪಾಪದ ಬಾವನೆ ನನ್ನನ್ನು ಸುಡುತ್ತಿದೆ. ಇದಕ್ಕಿಂತ ವನವಾಸವೇ ಲೇಸು. ಶಿಷ್ಯರಿಲ್ಲದ ಗುರುವಿನಂತೆ, ಪೂಜ್ಯನಾಗದ ವಿಪ್ರನಂತೆ, ಸೇವ್ಯಳಾಗದ ಪತ್ನಿಯಂತೆ ನನ್ನ ಬಾಳು ವ್ಯರ್ಥ. ಕಾಯದ ಭೋಗವೇಕೆ? ಚಿತ್ತಶುದ್ಧಿಯಾಗಲು ಅರಣ್ಯವಾಸವೇ ಲೇಸು ಎನ್ನುವನು.  ಯುದ್ಧದಲ್ಲಿ ಗೆದ್ದೆನೆಂಬ ಸಂತಸ ನನಗಿಲ್ಲ. ಉತ್ಸವಗಳು ಬೇಕಿಲ್ಲ ಎಂದಾಗ ಮುನಿಯು ಸಮಾಧಾನ ಹೇಳುವನು. ಕ್ಷತ್ರಿಯ ಧರ್ಮಕ್ಕೆ ತಕ್ಕಂತೆ ನಡೆದುಕೊಂಡಿದ್ದೀ. ಇದರಲ್ಲಿ ಬೇಸರಪಡುವಂತದ್ದು ಏನೂ ಇಲ್ಲ. ಮರುಳೆ, ಭೀಮನಿಗೆ ಪಟ್ಟಕಟ್ಟಿ ಹೊರಟುಬಿಡು ಎಂದು ಮೂದಲಿಸುವನು. ಆಗ ಧರ್ಮಜನು ತನ್ನ ‌ಮನಸ್ಸನ್ನು ಸ್ವಲ್ಪ ಹದಪಡಿಸಿಕೊಂಡು ಈ ಪಾಪಕ್ಕೆ ಪರಿಹಾರವೇನು ತಿಳಿಸಿ ಎನ್ನುವನು. ಆಗ ಯಾಗಗಳಲ್ಲಿ ಅತ್ಯುತ್ತಮವಾದ ಅಶ್ವಮೇಧ ಯಾಗದ ಬಗ್ಗೆ ತಿಳಿಸುತ್ತ ಅದನ್ನು ಮಾಡುವಂತೆ ಪ್ರೇರೇಪಿಸುವನು.

ಎರಡನೆಯ ಸಂಧಿ
ಪದ್ಯ 1 ರಿಂದ 25

| ರಾಜೇಂದ್ರ ಧರ್ಮತನಯಂ ಬಾದರಾಯಣನ ! ವಾಜಿ ಮೇಧಾಧ್ಯರ ವಿಧಾನಮಂ ಕೇಳು ಪಂ | ಕೇಜಪತ್ರೇ ಕ್ಷಣನ ಮತವಿಡಿದು ಕಳುಹಿದಂ ಕುದುರೆಗೆ ವೃಕೋದರನನು

ವನರುಹ ಭವಾಂಡದೊಳಗೈವತ್ತು ಕೋಟಿ ಯೋ | ದ ವಿಸ್ತೀರ್ಣದಿಳೆಯಂ ಸಪ್ತಶರನಿಧಿಗ | ವಿವೇಷ್ಟಿಸಿರಲದರ ಮಧ್ಯದೊಳಗಿಹುದು ಜಂಬೂದ್ವೀಪಮದರ ನಡುವೆ | |
ಅನವರತ ಸರಸ ಗೋಷ್ಠಿಗೆ ನೆರೆದ ನಿರ್ಜರಾಂ |ರಂಗನೆಯರಂಗಚ್ಛವಿಯ ಹಬ್ಬುಗೆಯೊ ಕಾರಮಿಂ|
ಚಿನ ಮಹಾರಾಶಿಯೋ ಪೇಳೆನಲ್ ಮೆರೆವ ಕನಕಾಚಲಂ ಕಣ್ಣೆ ಸೆದುದು ||೧||

ಆ ಕನಕ ಗಿರಿಯ ತೆಂಕಣ ದೆಸೆಯೊಳಿರ್ಪುದು ಸು | ಧಾಕರಕುಲದ ನೃಪರ ಸಾಮ್ರಾಜ್ಯ ಪಟ್ಟಾಭಿ । ಷೇಕ ವಿಸ್ತರದಿಂ ಜಸಂಬಡೆದ ಹಸ್ತಿನಾಪುರವಲ್ಲಿಗರಸೆನಿಸುವ || `
ಭೂಕಾಂತ ಜನಮೇಜಯಂ ಮಹಾಭಾರತ ಕ। ಥಾ ಕೌತುಕದೊಳಾಶ್ವಮೇಧಿಕವನೊಲವಿನಿಂ | ವೇಕಮಾನಸನಾಗಿ  ಮುನೀಂದ್ರನಂ ಬೆಸಗೊಂಡನೀ ತೆರದೊಳು ||೨||

ಪಿಂತೆ ಕೌರವಜಯಂ ತಮಗೆ ಕೈಸಾರ್ದ ಸಮ | ನಂತರದೊಳಾದ ಸಾಮ್ರಾಜ್ಯದೊಳ್ ಪಾಂಡವರ | ದೆಂತಿಳೆಯನೋವಿದರದೇಗೆಯ್ದರೆಂದು ಜನಮೇಜಯ ಮಹೀಪಾಲನು || ಸಂತಸಂದಳೆದು  ಮುನಿಪನಂ ಕೇಳೊ | ಡಿಂತವಂ ಪೇಳ್ದನಾ ಭೂಪಂಗೆ ಸಕಲ ಜನ | ಸಂತತಿಗೆ ಕರ್ಣವತಂಸಮೆನೆ ರಂಜಿಸುವ ಮಧುರತರ ಸತ್ಕಥೆಯನು||೩||

ಕೇಳೆಲೆ ನೃಪಾಲ ಪಾಂಡವರ ಕಥೆಯಿದು ಪುಣ್ಯ | ದೇಳಿಗೆಯಲ ಸುಯೋಧನ ಮೇದಿನೀಶನಂ | ಕಾಳಗದೊಳುರೆ ಗೆಲ್ಲ ಬಳಿಕ ವರ ಹಸ್ತಿನಾಪುರದ ನಿಜ ಸಾಮ್ರಾಜ್ಯದ || ಬಾಳಿಕೆಯನನುಜರಿಂದೊಡಗೂಡಿ ಧರ್ಮಜಂ | ತಾಳಿದಂ ಭರತ ನಳ ನಹುಷಾದಿ ರಾಯರಂ। ಪೇಳುವೊಡವರ್ಗಿನಿತು ಗುಣವಿಲ್ಲವೆಂದು ಭೂಮಂಡಲಂ ಕೊಂಡಾಡಲು ||೪||

ಹಬಳಿಕ ನೃಪವರ ಯುಧಿಷ್ಠಿರನಾಳ್ವ ದೇಶದೊಳ್ | ಕಳವು ಕೊಲೆ ಪಾದರಂ ಪುಸಿ ನುಸುಳು ವೈರವ ! ಟ್ಟುಳಿ ತೋಹು ಬೆದರು ಬೆಜ್ಜರ ಕಷ್ಟ ನಿಷ್ಟು ರಂ ಗಜರು ಗಾವಳಿ ವಿವಾದ || ಮುಳಿಸು ಪೊಲೆಗಲಸು ಮೊರೆ ಸೆರೆ ಕೃತಕ ಕಾರ್ಪಣ್ಯ ! ಮಳಿವು ಪಳಿವನ್ಯಾಯ ಮರೆ ಮೋಸವಾಸಿ ತ। ಲ್ಲಳ ವಿಯೋಗಮಲಸಿಕೆ ಕರ್ಕಶಂಗಳಿವು ಮೊಳೆದೋರವೇವೇಳ್ವೆನು || ೫ ||

ನೀತಿ ಚತುರತೆ ಕೀರ್ತಿ ಕಲ್ಯಾಣ ಭೋಗ ಸಂ | ಪ್ರೀತಿ ಪರಹಿತ ವಿನಯ ಶುಭ ವಿಭವ ವಿಜಯ ವಿ । ಖ್ಯಾತಿ ಕಲೆ ಸೌಭಾಗ್ಯಮಾರೋಗ್ಯ ಸೌಖ್ಯ ಮುನ್ನತ ಸತ್ಯ ನಿತ್ಯ ಭಕ್ತಿ ॥ 
ಜಾತಿ ಧರ್ಮಾಚಾರ ನಿಷ್ಠೆ ದೈವಜ್ಞತೆ ವಿ | ಜಾತಿ ಶಮೆ ದಮೆ ದಾನ ದಾಕ್ಷಿಣ್ಯವೆಂಬಿವು ಮ | ಹಾತಿಶಯಮೆನೆ ಪೆರ್ಚಿದುವು ಯುಧಿಷ್ಠಿರನರೇಶ್ವರನಾಳ್ವ ಭೂತಳದೊಳು ॥೬||

ಕುಟಿಲ ಚಂಚಲ ಕಠಿನ ಕೃಶ ಮಾಂದ್ಯಮೆಂಬಿವು |ತ್ಕಟ ಯವನಶ್ರೀವಿಲಾಸಿನಿಯರಳಕಾಳಿ |ಚಟುಲ ಸುಕಟಾಕ್ಷ ವಕ್ಷಿಜಾತ ಮಧ್ಯ ಗತಿಗಳ ವಿಸ್ತರದೊಳಲ್ಲದೆ | | ಘಟಿಸದು ಮದಾವಸ್ಥೆ ನಿಗಳಬಂಧನದ ಸಂ | ಕಟ ಹರಿದೋಷ ಮತಿಹೀನತೆಗಳೆಂಬಿವಿಭ | ಘಂಟೆಯೊಳಲ್ಲದೆ ಸಲ್ಲದೆಲ್ಲಿಯುಂ ಧರ್ಮತನಯಂ ಪಾಲಿಸುವ ನೆಲದೊಳು || ೭ |

ಗಾರುಡದೊಳಹಿತತ್ವ ಮಾರಣ್ಯದೊಳ್ ದಾನ | ವಾರಣಂ ಚಾರುಪ್ರವಾಳಮಣಿ ರುಚಿಯೊಳ್ ಸ | ದಾರುಣಂ ಸರಸಿಯೊಳ್ ಕಲಹಂಸಮಯಮುತ್ಪಲಾಕ್ಷಿಯರ ಕಂಧರದೊಳು || 
ಹಾರವಲಯಂ ಭೂರುಹದೊಳನೇಕಾಗ್ರತೆ ನ | ವಾರಾಮದೊಳ್ ಮಹಾಶೋಕಂ ವಸಂತದೊಳ್ | ಮಾರಹಿತವುಂಟಲ್ಲದಿಲ್ಲಮಿವು ಮತ್ತೆಲ್ಲಿಯುಂ ಧರ್ಮಜನ ನೆಲದೊಳು||೮||

ಕೊಡೆಯೆಂಬರಾತಪತ್ರವನುದರದೇಶಮಂ | ಪೊಡೆಯೆಂಬರೊಲಿದು ಮಂಥನವ ನೆಸಗೆಂಬುದಂ | ಕಡೆಯೆಂಬರಾರಡಿಯನಳಿಯೆಂಬರುದಕಪ್ರವಾಹಮಂ ತೊರೆಯೆಂಬರು | ಮಡಿಯೆಂಬರಂಬರದ ಧೌತಮಂ ಕಬರಿಯಂ। ಮುಡಿಯೆಂಬರೆಡೆವಿಡದೆ ಮುಸುಕಿದ್ದ ಮೇಘಮಂ | ಜಡಿಯೆಂಬರುರುಶಿಲೆಯನರೆಯೆಂಬರಲ್ಲದಿವ ನುಡಿಯರವನಾಳ್ವಿಳೆಯೊಳು ||೯|

ಎಲ್ಲರುಂ ಭೋಗಿಗಳ್ ಪಾತಾಳಗತರೆನಿಸ | ರೆಲ್ಲರುಂ ವಿದ್ಯಾಧರ‌ರ್ ವಭೋಜನರೆನಿಸ | ರೆಲ್ಲರುಂ ದಾಕ್ಷಿಣ್ಯವರ್ತಿಗಳ್ ತಿಳಿಯೆ ಲಂಕಾನಿವಾಸಿಗಳೆನಿಸರು ||
 ಎಲ್ಲರುಂ ಸುಮನೋರತ‌ರ್ ಮದುವ್ರ ತರೆನಿಸ | ರೆಲ್ಲರುಂ ಗುಣಯುತರ್ ಕರಿನರೆನಿಸರ್ ಮನುಜ | ರೆಲ್ಲರುಂ ಕಾಂತಾರಮಿತಭಾಗ್ಯಸಂಪದರ್ ಕುಜರೆನಿಸರವನಿಳೆಯೊಳು ||೧೦||

ವಸುಗಳಿಂದುಪಭೋಗ್ಯವಾಗದೊಡೆ ಸೌರಭ್ಯ | ರಸದಿಂದನಾರೋಗ್ಯವೆನಿಸದೊಡೆ ಸಂತತಂ । ವಿಶದ ಸುಮನೋಯೋಗ್ಯಮಲ್ಲದೊಡೆ ಹರಿವಿಭವ ಸುಶ್ಚಾತ್ವ್ಯಮಲ್ಲದಿರಲು || ಲಸದಪ್ಪ ರೋದ್ಯಾನ ಸೌಭಾಗ್ಯವೊಂದಿರದೊ | ಡೆಸೆವ ರಾಜೇಂದ್ರಂಗೆ ಸೊಗಸುವೀಡಾಗಿ ರಂ | ಜಿಸದೊಡೆ ಹಸ್ತಿನಾವತಿಯನಮರಾವತಿಗೆ ಸರಿಯೆಂಬರೇ ಪ್ರೌಢರು ||೧೧||

ನಾಗೇಂದ್ರನಂ ಬಿಡದೆ ತಲೆವಾಗಿಸಿತ್ತಮರ | ನಾಗೇಂದ್ರನಂ ಬುದ್ಧಿ ದೊರೆಸಿತ್ತು ಪುರಮರ್ದ | ನಾಗೇಂದ್ರನಂ ನಿಂದು ಬೆರಗಾಗಿಸಿತ್ತಮಲ ಧರ್ಮಜನ ಕೀರ್ತಿ ಬಳಿಕ ||
ನಾಗೇಂದ್ರ ಶಯನಾಲಯವ ಜಡಧಿಯೆನಿಸಿ ನುತ । ನಾಗೇಂದ್ರವರದಾಯ`ಧವ ಪೊಳ್ಳುಗಳೆದು ಮತ | ನಾಗೇಂದ್ರಧರನ ಜಾತೆಯ ನಿಲವುಗೆಡಿಸಿ ನೆರೆ ರಾಜಿಸಿತು ಮೂಜಗದೊಳು || ೧೨ ||

ಹರಿಯಂತೆ ಬಲಯುತಂ ಶಿವನಂತೆ ರಾಜಶೇ | ಖರನಬ್ಬ ಭವನಂತೆ ಚತುರಾನನಂ ಸರಿ। ದ್ವರನಂತೆ ರತ್ನಾಕರಂ ದಿವಾಕರನಂತೆ ನಿರ್ದೋಪನಿಂದ್ರನಂತೆ || ಪರಿಚಿತಸುರಭಿರಮ್ಯನಮೃತಾರ್ಚಿಯಂತೆ ವಿ | ಸ್ತರಿತಕುವಲಯನೆಂದು ಧರ್ಮಜನ ಧರೆ ಪೊಗಳು | ತಿರೆ ಬಳಿಕ ಹಸ್ತಿನಾವತಿಗೆ ವೇದವ್ಯಾಸನೊಂದುದಿವಸಂ ಬಂದನು ||೧೩||

ಬರಲಾ ನೃಪಾಲಕಂ ಸೋದರರೈರಸಿ ಮುನಿ | ವರನ ಪದಕೆರಗಿದೊಡೆ ಮಣಿದೆತ್ತಿ ಬೋಳೈಸಿ | ಪರಸಿ ಮಂತ್ರಾಕ್ಷತೆಯನಿತ್ತು ಸತ್ಕಾರಮಂ ಕೊಂಡು ಕುಳ್ಳಿರ್ದ ಬಳಿಕ | ಅರಸನನುತಾಪದಿಂ ತಲೆವಾಗಿ ಮಾತಾಡ ! ದಿರುತಿರ್ದನನಿಲ ಸಂಚಾರವೊಂದಿನಿತಿಲ್ಲ ! ದುರಿವ ಕಡುವೇಸಗೆಯ ಬಿಸಿಲಿಂದ ಬಸವಳಿದ ಕೋಮಲರಸಾಲದಂತೆ ||೧೪||

ಕಂಡನರಸನ ಭಾವಮಂ ಬಳಿಕ ನಗುತೆ ಬೆಸ |ಗೊ೦ಡನಿಂತೆಂದಾ ಮುನೀಂದ್ರನೆಲೆ ನೃಪತಿ ಭೂ |ಮಂಡಲದ ಸಕಲ ಸಾಮ್ರಾಜ್ಯಮಂ ಪಾಲಿಸುವ ನಿನ್ನ ಸಂತಸದೇಳ್ಗೆಗೆ | ಖಂಡನವ ಮಾಳ್ವು ದಾನನದಿರವು ಸಾಕು ಮನ | ದಂಡಲೆಯ ತೊರೆಯೆನಲ್ ಜೀಯ ಸಂತಾಪದಿಂ | =ಡಾದುದೆನ್ನೊಡಲ್ ಸೈರಿಸಲರಿಯೆನೆಂದೊಡಾ ತಪೋನಿಧಿ ನುಡಿದನು || ೧೫ ||

ಕೆತ್ತ ಬಲ್ಗತ್ತಲೆಗೆ ತರಣಿ ಮುಂಗಾಣದಿರೆ | ಪೊತ್ತು ವೆಳಗಂ ಬೇರೆ ತೋರ್ಪರಾರ್ ಬಿಡದೆ ಘ | ರ್ಮೋತ್ತರಕೆ ಮಾರುತಂ ಬೆಮರ್ದೊಡಾರ್ ಬೀಸುವರ್ ಬಳಿಕಾಲವಟ್ಟದಿಂದೆ ॥ 
ಕೃತ್ರಿಮದ ವಿಷದ ಸೋಂಕಿಗೆ ಗರುಡನಳವಳಿಯೆ |  ವಿಷದ ಸೋಂಕಿಗೆ ಗರುಡನಳವಳಿಯೆ | 
ಮತ್ತೆ ರಕ್ಷೆಗೆ ಮಂತ್ರಿಸುವರಾರು ಭೂಪ ನೀ !
ನೊತ್ತುವನುತಾಪಕೆಡೆಗೊಟ್ಟೊಡಾರ್ ಬಿಡಿಸುವರ್ ಪೇಳೆಂದನಾ ಮುನಿಪನು ||೧೬||

ಎನಲಾ ಮುನೀಂದ್ರನಂ ನೋಡಿ ಬಿಸುಸುಯ್ಯುತೊ | ಯ್ಯನೆ ಮಹೀಪಾಲನಿಂತೆಂದನೆಂತೆನ್ನ ಮನ ! ವನುತಾಪಮಂ ಬಿಡುವೆನಕಟ ಶಿಶುತನದಿಂದ ಸಲಹಿದ ಪಿತಾಮಹಂಗೆ || ನೆನೆದೆವನುಚಿತವನಗ್ರಜನೆಂದರಿಯದೆ ಕ | ರ್ಣನನಿರಿದೆವಾಚಾರ್ಯವಧೆಗೆಳಸಿದೆವು ಸುಯೋ | ಧನ ಶಲ್ಯ ಮುಖ್ಯ ಬಾಂಧವರ ನೀಡಾಡಿದೆವು ಬದುಕಲೇಕಿನ್ನಿಳೆಯೊಳು ||೧೭||

ಶಿಷ್ಯರಿಂದಭಿವರ್ಧಿಸದ ಗುರುವಿನಂತೆ  ವೈ| ಮಷ್ಯದಿಂ ಪೂಜ್ಯನಾಗದ ವಿಪ್ರನಂತೆ ಸುಹ | ವಿಷ್ಯದಿಂ ಸೇವ್ಯನಾಗದ ವಹ್ನಿಯಂತೆ ಸಲಿಲಾಶಯವನಾಶ್ರೈಸದ | 
ಕೃಷ್ಯದಂತಖಿಳ ಬಾಂಧವರೊಡನೆ ಬದುಕದ ಮ | ನುಷ್ಯ ಸಂಸಾರದಿಂದೇನದರಿ ನಿಜಾ | ಯುಷ್ಯಮುಳ್ಳನ್ನ ಪರಿಯಂತ ವನವಾಸವಂ ಮಾಡುವುದೆ ಲೇಸೆಂದನು ||೧೮||

ಕಾಯದುಪಭೋಗ ಸಿರಿಯಂಬಯಸಿ ಸುಗತಿಯಂ | ಕಾಯದುರುತರ ವೈರದಿಂದಖಿಳಬಾಂಧವ  ನಿ। ಕಾಯದುಪಹತಿಯನೆಸಗಿದ ಪಾತಕದ್ರುಮಂ ತನಗೆ ವಿಷಮಾಗಿ ಮುಂದೆ || ಕಾಯದುಳಿಯದು ಮಹಿಯನಿನ್ನಾಳ್ದೊಡಂ ಜಸಂ | ಕಾಯದುರೆ ಮಾಣದದರಿಂದರಸುತನವೆ ಸಾ | ಕಾಯದುಕುಲೇಂದ್ರನಂ ಭಜಿಸುವೆಂ ಚಿತ್ತಶುದ್ಧಿದ್ಯೊಳರಣ್ಯದೊಳೆಂದನು ||೧೯||

ಆಗಳರಸನ ಮಾತಿನಾಸರಂ ಕೇಳ್ತು ತಲೆ |  ದೂಗಿ ಮುನಿಪುಂಗವಂ ನುಡಿದನೆಲೆ ಭೂಪ ನಿಗ | ಮಾಗಮ ಪುರಾಣ ಶಾಸ್ತ್ರಂಗಳ ವಿಚಾರಮಂ ನೀನರಿಯದಪ್ರೌಢನೆ ॥ ಈಗಳನುತಾಪಮೇತಕೆ ನಿಖಿಳ ಸಾಮ್ರಾಜ್ಯ |ಮಾಗಲಿಳೆಯಂ ಧರ್ಮದಿಂ ಪಾಲಿಸದೆ ಬನಕೆ | ಪೋಗಲಾವುದು ಸಿದ್ಧಿ ನಿನಗಪ್ಪು ದುಸುರೆನೆ ಧರಾನಾಥನಿಂತೆಂದನು ||೨೦||

ಜೀಯ ಚಿತ್ತೆ ಸಾದೊಡಿನ್ನ ಖಿಳ ಸಾಮ್ರಾಜ್ಯ | ನಾಯಿತೆಂಬುತ್ಸವಂ ತನಗಿಲ್ಲ ಕರ್ಣ ಗಾಂ | ಗೇಯ ಗುರು ಶಲ್ಯ ಕೌರವರನುಳಿದೀ ಸಕಲಮೇದಿನೀಮಂಡಲವನು || ವಾಯುಜನೊಳಿರಿಸಿ ನಾಂ ಗೋತ್ರ ವಧೆಗೆಯ್ದಿ ದೀ? ಕಾಯಮಂ ವನವಾಸಕೈದಿಸುವೆನೆನೆ ಬಾದ | ರಾಯಣಂ ಗಹಗಹಿಸಿ ನಗುತೆ ನುಡಿ ನುಡಿ ಮತ್ತೆ ನುಡಿಯೆನುತ್ತಿಂತೆಂದನು ||೨೧||

ಕ್ಷಾತ್ರಧರ್ಮವನೀಕ್ಷಿಸಲ್ ನಿನಗೆ ಪಾತಕಂ | ಗೋತ್ರವಧೆಯಿಂದೆ ಬಪ್ಪುದೆ ಮಹಾದೇವ ನೀಂ | ಧಾತ್ರಿಯಂ ಪಾಲಿಸದಿರಲ್ಕೆ ನಿರ್ದೋಷಿಯೇ ನಾವರಿಯೆವೀಗ ನಿನ್ನ || ಗಾತ್ರಮಂ ವನವಾಸಕೈದಿಸುವ ಮತಮಾವ | ಸೂತ್ರದೊಳ್ ಕಾಣಿಸಿತೊ ಲೇಸು ಲೇಸಾರಣ್ಯ | ಯಾತ್ರೆಯಂ ಮಾಡು ನೀಂ ಮಾರುತಿಗೆ ಪಟ್ಟಮಂ ಕಟ್ಟುವೆವು ನಾವೆಂದನು ||೨೨||

ಧರ್ಮಸುತ ಮರುಳೆ ನೀನಿಂತಾಡುತಿರ್ದೊಡೆ ಬು | ಧರ್ಮೆಚ್ಚುವರೆ ಸಾಕದಂತಿರಲಿ ಸೋಮಕುಲ | ಜರ್ಮಹಾಕ್ರತುಗಳಂ ಮಾಡಿದಲ್ಲದೆ ಸಲ್ಲರದರಿಂದೆ ನಿನಗಿಳೆಯೊಳು || ನಿರ್ಮಲಸುಕೀರ್ತಿಯಪ್ಪಂತೆ ಯಜ್ಞಾದಿ ಸ | ತ್ಕರ್ಮಂಗಳಂ ನೆಗಳ್ಚಲ್ ಗೋತ್ರವಧೆಗಳಂ | ನಿರ್ಮಿಸಿದಘಂ ಪೋಗಿ ಶುಚಿಯಾಗಿ ಬಾಳಪೆಯೆನಲ್ ಭೂಪನಿಂತೆಂದನು ||೨೩||

ಆದೊಡೆ ತವಾನುಗ್ರಹಪ್ರಭಾವದೊಳಿನ್ನು ! ಮೇದಿನಿಯ ನಾನೆ ಪಾಲಿಸುವೆನೀ ಗೋತ್ರಹ | ತ್ಯಾ ದೋಷಮೇತರಿಂ ಪೋಪುದಾ ತೆರನಂ ತಿಳಿಪಿ ರಾಜಕುಲದ ನೃಪರ ! ಸಾಧು ಚಾರಿತ್ರವೆನ್ನಿಂದೆ ಸೊಗಡಾಗದಂ | ತಾದರಿಸಿ ನೀವೆ ಕಾರುಣ್ಯದಿಂ ಮಾಳ್ವುದು ತಶು! ಭೋದಯವನೆನಗೆಂದು ಕೈಮುಗಿಯೆ ಧರ್ಮಜಂಗಾ ಮುನಿಪನಿಂತೆಂಡನು ||೨೪||

ಎಣಿಕೆ ಬೇಡೆಲೆ ಮಗನೆ ರಾಘವಂ ಪಿಂತೆ ರಾ |ವಣನಂ ಮಥಿಸಿ ವಾಜಿಮೇಧದೊಳ್ ಪಾರ್ವ.ರಂ | ತಣಿಪಿದಂ ನೀನುಮಂತಾ ಮಹಾಧ್ವರವನೆಸಗಲ್ ನಿನಗೆ ಮೂಜಗದೊಳು | ಎಣೆಯಿಲ್ಲೆನಲೆಂತು ಮಾಳ್ಪೆ ನಾನಾವ ಲ | ಕ್ಷಣದ ಹಯಮದಕೆ ಋತ್ವಿಜರೆನಿಬರೆನಿಸು ದ | ಕ್ಷಿಣಿಗಳದರಂದಮಂ ವಿಸ್ತರಿಸವೇಳ್ವುದೆನೆ ಶುಕತಾತನಿಂತೆಂದನು ||೨೫||


ಮುಂದುವರೆಯುವುದು.....

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!