ಆದ್ಯ ರಾಮಾಚಾರ್ಯ
ಆದ್ಯ ರಾಮಾಚಾರ್ಯ
ಆದ್ಯ ರಾಮಾಚಾರ್ಯರು ಕನ್ನಡ ನಾಡು, ನುಡಿ ಮತ್ತು ಸಾಹಿತ್ಯಕ್ಕೆ ದುಡಿದ ಮಹನೀಯರು.
ಆದ್ಯ ಎಂಬುದು ಉತ್ತರಾಧಿ ಮಠದ ವೇದೇಶ ತೀರ್ಥರಲ್ಲಿ ಮನೆತನದ ಪೂರ್ವಜರು ವ್ಯಾಸಂಗ ಮಾಡಿದ್ದಕ್ಕೆ ಬಂದ ಗೌರವ ಬಿರುದು. ಆದ್ಯ ರಾಮಾಚಾರ್ಯರು ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣದಲ್ಲಿ 1924ರ ನವೆಂಬರ್ 14ರಂದು ಜನಿಸಿದರು. ತಂದೆ ಆದ್ಯ ಸೇತುರಾಮಾಚಾರ್. ತಾಯಿ ಕಾಶೀಬಾಯಿ. ಪ್ರಾರಂಭಿಕ ಶಿಕ್ಷಣ ಲಚ್ಯಾಣ ಮತ್ತು ಭುಯ್ಯಾರ ಶಾಲೆಗಳಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣ ಬಿಜಾಪುರದ ದರ್ಬಾರ ಹೈಸ್ಕೂಲಿನಲ್ಲಿ ನಡೆಯಿತು. ಸ್ವಾತಂತ್ರ್ಯ ಚಳವಳಿಯಿಂದ ಪ್ರೇರಿತರಾಗಿ ಚಳವಳಿಯಲ್ಲಿ ಭಾಗಿಯಾಗಿ ವಿದ್ಯೆಗೆ ವಿರಾಮ ತಂದುಕೊಂಡರು.
ರಾಮಾಚಾರ್ ಅವರು ಉದ್ಯೋಗಕ್ಕೆ ಸೇರಿದ್ದು ಬಿಜಾಪುರದಲ್ಲಿ ಫ. ಗು. ಹಳಕಟ್ಟಿಯವರ ಮುದ್ರಣಾಲಯದಲ್ಲಿ. ತಂದೆ ಸೇತೂರಾಮಾಚಾರ್ಯರಿಗೆ ಮೈಸೂರು ಅರಮನೆಯಲ್ಲಿ ಭಾಗವತ ಪ್ರವಚನಕ್ಕೆ ಆಹ್ವಾನ ಬಂತು. ರಾಮಾಚಾರ್ಯರೂ ಮೈಸೂರಿಗೆ ಬಂದು ‘ಉಷಾ ಸಾಹಿತ್ಯ ಮಾಲೆ’ಯಲ್ಲಿ ಉದ್ಯೋಗ ಮಾಡಿದರು. ನಂತರ ಬೆಂಗಳೂರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೆಲಸ ಹಿಡಿದರು. ಈ ಸಂದರ್ಭದಲ್ಲಿ ಸಾಹಿತ್ಯ ಪರಿಚಾರಿಕೆ, ಕೃತಿರಚನೆ, ಸಂಶೋಧನೆ ಮುಂತಾದವುಗಳಲ್ಲಿ ಆಸಕ್ತಿ ಮೂಡಿತು.
ಆದ್ಯ ರಾಮಾಚಾರ್ಯರು 'ಅಖಿಲ ಕರ್ನಾಟಕ ಗಡಿನಾಡು ಸಮಿತಿ’ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಮಹಾರಾಷ್ಟ್ರ, ತಮಿಳುನಾಡು, ಆಂಧ್ರದ ಗಡಿಪ್ರದಶದಲ್ಲೆಲ್ಲಾ ಸಂಚರಿಸಿ, ವಾಸ್ತವಾಂಶಗಳನ್ನು ಸಂಗ್ರಹಿಸಿ ಸರಕಾರದ ಸಮಿತಿಗೆ ಮಹತ್ವದ ಅಂಶಗಳನ್ನು ನೀಡಿದರು.
ಹವ್ಯಾಸಕ್ಕಾಗಿ ಬರವಣಿಗೆಯನ್ನು ಪ್ರಾರಂಭಿಸಿದ ರಾಮಾಚಾರ್ಯರಿಗೆ ಅದೇ ಪ್ರಮುಖ ವೃತ್ತಿಯಾಯಿತು. ಸಂಯುಕ್ತ ಕರ್ನಾಟಕ, ಕರ್ಮವೀರ, ಕಸ್ತೂರಿ ಪತ್ರಿಕೆಗಳಿಗಾಗಿ ನೂರಾರು ವಿದ್ವತ್ಪೂರ್ಣ ಲೇಖನಗಳನ್ನು ಬರೆದರು. ತಾವು ಹುಟ್ಟಿದ ಕೋಟೆ ಕೊತ್ತಲಗಳ ನಾಡಾದ ಬಿಜಾಪುರದ ಪ್ರೇರಣೆಯಿಂದ ಅನೇಕ ಐತಿಹಾಸಿಕ ಕೃತಿಗಳನ್ನು ರಚಿಸಿದರು. ಹನುಮಧ್ವಜ ಹಾರಿತು, ಸೂರ್ಯಾಸ್ತ, ವಿಜಾಪುರದ ಪತನ, ಶಂಭೂ, ಶ್ರೀದರ್ಶನ, ಶ್ರೀ ಸಮರ್ಥ, ಧನಂಜಯ, ಕಾಶ್ಮೀರದ ಜ್ವಾಲಾಮುಖಿ, ಮಾತೃಛಾಯ, ವಿಕ್ರಾಂತ ಕೇಸರಿ, ಭಾರತೀಯ ಮುಸಲ್ಮಾನರ ಶೋಧ ಹಾಗೂ ಬೋಧ, ರಂಭಾ, ಪ್ರಸನ್ನ ವೆಂಕಟ, ರಾಜಯೋಗಿ ಮುಂತಾದವು ಈ ಕೃತಿಗಳಲ್ಲಿ ಸೇರಿವೆ. ‘ರಾಜಯೋಗಿ’ ಶಿವಾಜಿ ಮಹಾರಾಜರನ್ನು ಕುರಿತ ಅಧ್ಯಯನ ಪೂರ್ಣ ಕಾದಂಬರಿ ಎನಿಸಿ ಮಹಾರಾಷ್ಟ್ರದ ಸಂಶೋಧಕರು ಮತ್ತು ವಿದ್ವಾಂಸರ ಗಮನವನ್ನೂ ಸೆಳೆದ ಕೃತಿ. ಮಹಾಭಾರತದ ಕರ್ಣನ ವ್ಯಕ್ತಿ ಚಿತ್ರಣದ ‘ರಾಧೇಯ’ ಇವರ ಪ್ರಸಿದ್ಧ ಕೃತಿ. ಇದು ರಣಜಿತ್ ದೇಸಾಯಿ ಅವರ ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕೃತ ಕೃತಿಯ ಭವ್ಯ ಅನುವಾದ. ಇದು ನನ್ನ ಮೆಚ್ಚಿನ ಕೃತಿಗಳಲ್ಲೊಂದು. 'ಆಚಾರ್ಯದ್ರೋಣ’ ಅವರ ಮತ್ತೊಂದು ಪ್ರಸಿದ್ಧ ಕೃತಿ. ಆದ್ಯ ರಾಮಾಚಾರ್ಯರು 10 ಸಾಮಾಜಿಕ ಕಾದಂಬರಿಗಳು, 12 ಧಾರ್ಮಿಕ ಗ್ರಂಥಗಳು, ತಿರುಪತಿಕ್ಷೇತ್ರ ಮತ್ತು ಶ್ರೀಕೃಷ್ಣ ದ್ವಾರಕಾ ಎಂಬ ಎರಡು ಕ್ಷೇತ್ರ ಪರಿಚಯ ಕೃತಿಗಳು, 8 ಸಂಪಾದಿತ ಗ್ರಂಥಗಳೂ ಸೇರಿ 60ಕ್ಕೂ ಹೆಚ್ಚು ಕೃತಿ ಪ್ರಕಟಿಸಿದ್ದರು.
ಆದ್ಯ ರಾಮಾಚಾರ್ಯರು ಹಲವಾರು ಸಮಿತಿಗಳಲ್ಲಿ ಜವಾಬ್ದಾರಿಯುತ ಸ್ಥಾನಗಳನ್ನು ನಿರ್ವಹಿಸಿದ್ದರು. ಲೋಕಮಾನ್ಯ ತಿಲಕರ ಶತಮಾನೋತ್ಸವ ಸಮಿತಿ, ಮೈಸೂರ ಮಹಾರಾಜಾ ಸಂಸ್ಕೃತ ಕಾಲೇಜಿನ ಆಗಮ ಪರೀಕ್ಷಾ ವಿಭಾಗದ ಸಲಹಾ ಸಮಿತಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ, ತಿರುಪತಿ ದಾಸ ಸಾಹಿತ್ಯ ಯೋಜನೆ ಮತ್ತು ಪ್ರಾಚೀನ ಗ್ರಂಥಗಳ ಮುದ್ರಣ ಅನುದಾನ ಸಮಿತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯತ್ವ, ಅಖಿಲ ಭಾರತ ಮಾಧ್ವ ಮಹಾಮಂಡಲದ ಕಾರ್ಯಕಾರಿಸಮಿತಿಯ ಸದಸ್ಯತ್ವ, ಹಲವಾರು ಧಾರ್ಮಿಕ ಸಂಸ್ಥೆಗಳ - ದೇವಸ್ಥಾನಗಳ ಸಂಚಾಲಕತ್ವ ಇವುಗಳಲ್ಲಿ ಸೇರಿದ್ದವು.
ಆದ್ಯರಾಮಾಚಾರ್ಯರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ತಂಜಾವೂರಿನ ಇತಿಹಾಸ ರಚನೆಗಾಗಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಪ್ರತಿಷ್ಠಾನದಿಂದ ಬಂಗಾರದ ಪದಕ, ಕರ್ನಾಟಕ ರಾಜ್ಯ ಸಾಮಾಜಿಕ ಹಿತರಕ್ಷಣೆ ಮತ್ತು ಸಾಂಸ್ಕೃತಿಕ ಸಂಘದಿಂದ ಸನ್ಮಾನ, ಪೇಜಾವರ ವಿಶ್ವೇಶ ತೀರ್ಥರಿಂದ, ಪುತ್ತಿಗೆ ಮತ್ತು ಉತ್ತರಾಧಿ ಮಠಾಧೀಶರಿಂದ ಗೌರವಗಳು, ಬೆಂಗಳೂರಿನ ಜ್ಞಾನ ಜ್ಯೋತಿ ಕಲಾಮಂದಿರ ಸನ್ಮಾನ ಮುಂತಾದ ಅನೇಕ ಗೌರವಗಳು ಸಂದಿದ್ದವು.
ಆದ್ಯ ರಾಮಾಚಾರ್ಯರು 2010ರ ಡಿಸೆಂಬರ್ 4ರಂದು ನಿಧನರಾದರು.
On the birth anniversary of great scholar Adhya Ramacharya
ಕಾಮೆಂಟ್ಗಳು