ನೆಲ್ಸನ್ ಮಂಡೇಲ
ಮಹಾತ್ಮ ನೆಲ್ಸನ್ ಮಂಡೇಲ
ನೆಲ್ಸನ್ ಮಂಡೇಲ ಅವರು ಹುಟ್ಟಿದ್ದು 1918ರ ಜುಲೈ 18ರಂದು. ಈ ಸಂದರ್ಭದಲ್ಲಿ ಪಿ. ಲಂಕೇಶರು ಮಾರ್ಚ್ 18, 1990ರಲ್ಲಿ ಬರೆದ ‘ಟೀಕೆ – ಟಿಪ್ಪಣಿ' ಯಲ್ಲಿರುವ ಮಾತುಗಳೊಂದಿಗೆ ಈ ಮಹಾತ್ಮನನ್ನು ನೆನೆಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ.
ಮೊದಲು ಆಫ್ರಿಕಾ ಜನರ ಹುಮ್ಮಸ್ಸು ಮತ್ತು ನೈಸರ್ಗಿಕ ಬದುಕು ನೋಡಿ. ತಿಂದು ಉಂಡು ಹಾಡಿಕೊಂಡು ತಮ್ಮ ಬುಡಕಟ್ಟಿನ ವಿಧಿ ಸಂಸ್ಕಾರಗಳಿಗೆ ಬದ್ಧರಾಗಿದ್ದು ಕಣ್ಣುಮುಚ್ಚುವ ಜನ ಇವರು. ಇಂಥವರ ನಡುವೆ ನುಗ್ಗಿದ ಬಿಳಿಯರು ತಮ್ಮ ಅಂತರ್ರಾಷ್ಟ್ರೀಯ ಧರ್ಮ ಮತ್ತು ಸಾಮ್ರಾಜ್ಯಶಾಹಿ ಸುಲಿಗೆಗಾಗಿ ಪುಸ್ತಕ, ಶಸ್ತ್ರ, ತಂತ್ರವನ್ನೆಲ್ಲ ತಂದರು; ಮುಗ್ಧ ಆಫ್ರಿಕನ್ನರನ್ನು ಬಗ್ಗುಬಡಿದು ಅವರ ನೆಲದ ಚಿನ್ನ, ವಜ್ರ, ತಾಮ್ರವನ್ನು ಕಿತ್ತುಕೊಂಡರು, ಎಲ್ಲಕ್ಕಿಂತ ಹೆಚ್ಚಾಗಿ ಅವರ ಸ್ವಾಭಿಮಾನಕ್ಕೆ ಸವಾಲೆಸದರು.
ಗಾಂಧೀಜಿ ಪ್ರತಿಭಟಿಸಿದ್ದು ಆಗಲೇ. ಬ್ರಿಟಿಷರ ಜಾಣತನ ಮತ್ತು ಭಾರತೀಯರ ಸಹನೆಯನ್ನು ಒಂದುಗೂಡಿಸಿಕೊಂಡ ಗಾಂಧೀಜಿ ಅಹಿಂಸೆಯನ್ನು ನೆಚ್ಚಿ ಹೋರಾಡಿದರು. ಒಂದು ಜನಾಂಗಕ್ಕೆ ಹೊಂದುವ ಅಹಿಂಸೆ ಇನ್ನೊಂದು ಜನಾಂಗಕ್ಕೆ ಸರಿಹೊಂದಲಿಕ್ಕಿಲ್ಲ ಎಂಬುದು ಗೊತ್ತಾಯಿತು. ಏಕೆಂದರೆ ಮಂಡೆಲಾ ಕೂಡ ಅಹಿಂಸೆಯಿಂದ ಹೋರಾಡತೊಡಗಿದಾಗ ಬಿಳಿಯರು ಅವನ ಜೊತೆಗಾರರನ್ನು ಕೊಚ್ಚಿ ಹಾಕಿದರು. ಗಾಂಧೀಜಿಯ ಮಾತು ಮಂಡೇಲಾ ಮತ್ತು ಮಿತ್ರರಿಗೆ ಮರಣದಂಡನೆಯಂತೆ ಕಂಡಿತು.
ಇಲ್ಲಿ ಕೆಲವು ವಿಚಿತ್ರಗಳಿವೆ. ಗಾಂಧೀಜಿ ದಿವಾನನ ಮಗನಾಗಿದ್ದರೆ ಮಂಡೇಲಾ ದೊರೆಯ ಮಗ, ರಾಜಕುಮಾರ. ದೊರೆ ಎಂದರೆ ನಮ್ಮ ಜೈಪುರ, ಮೈಸೂರಿನ ದೊರೆಗಳಂತಲ್ಲ. ಆತ ತನ್ನ ಬುಡಕಟ್ಟಿನ ದೊರೆಯ ಮಗ. ದನ ಕಾಯ್ದವನು, ಹಕ್ಕಿ ಹೊಡೆದವನು, ಮರದಿಂದ ಹಣ್ಣು ಕಿತ್ತು ತಿಂದವನು. ಹಾಗೆಯೇ ಆಫ್ರಿಕಾದ ವರ್ಣೀಯರ ಆಧುನಿಕತೆಯ ಭಾಗವಾಗಿ ವಿಶ್ವವಿದ್ಯಾನಿಲಯದಲ್ಲಿ ಓದಿದವನು. ಅಲ್ಲಿಯೇ ಮಂಡೇಲಾಗೆ ಬಿಳಿಯರ ಒಗಟು ಗೊತ್ತಾದದ್ದು; ಅವರು ಎಸಗಿದ ಅನ್ಯಾಯ ಗೊತ್ತಾದದ್ದು. ವಿಶ್ವವಿದ್ಯಾಲಯದ ವಿದ್ಯಾರ್ಥಿ ದೆಸೆಯಿಂದಲೇ ಬಿಳಿಯರ ವಿರುದ್ಧ ಸ್ನೇಹಿತರನ್ನು ಎತ್ತಿಕಟ್ಟಿದ ಮಂಡೇಲಾ ಮದುವೆಯಾದ. ಮದುವೆಯಾಗಿ ಕೆಲಕಾಲದಲ್ಲೇ ಹೆಂಡತಿಯನ್ನು ಬಿಟ್ಟು ವಿನ್ನಿಯನ್ನು ಮದುವೆಯಾದ. ಮುಂದೆ ಕೂಡಾ ಈತನ ಮೊದಲ ಹೆಂಡತಿ ನೋವನ್ನನುಭವಿಸುತ್ತ, "ನನ್ನ ಕೈಬಿಟ್ಟ ಮಂಡೇಲಾ ದೊಡ್ಡ ಮನುಷ್ಯನಾಗಲು ಹೇಗೆ ಸಾಧ್ಯ?" ಎಂದು ಕೇಳುತ್ತಿದ್ದಳು. ಆದರೆ ಈಕೆಯ ವಾದವನ್ನು ಮೀರಿದ್ದು ಮಂಡೇಲಾ ಸಮಸ್ಯೆ. ವಿನ್ನಿಯನ್ನು ಅತ್ಯಂತ ಎಚ್ಚರದಿಂದ ಪೊರೆದ ಮಂಡೇಲಾ ತನಗೆ ಅಭಿಮಾನಿಗಳು ನೀಡಿದ ಉಡುಗೊರೆಗಳನ್ನೆಲ್ಲ (ಜೈಲಿನಿಂದ ಕೂಡ) ವಿನ್ನಿಗೆ ಕಳಿಸಿದ. ಇದರ ಬಗ್ಗೆ ಕೂಡ ಆಕ್ಷೇಪಣೆ ಎತ್ತುವವರಿದ್ದಾರೆ. ಆದರೆ ಇಂಥವರಿಗೆ ಮಂಡೇಲಾನಲ್ಲಿ ಕುಟುಂಬದ ಬಗೆಗಿನ ಕಾಳಜಿ ಆಫ್ರಿಕನ್ನನ ವಿಶಿಷ್ಠ ಗುಣ ತಿಳಿದಿರಲಿಕ್ಕಿಲ್ಲ.
ಮೂಲ ಕತೆಗೆ ಬರೋಣ.
ಸುಮಾರು 1960ರ ಸಮಯದಲ್ಲಿ ಅಹಿಂಸೆ ನಡೆಯುವುದಿಲ್ಲ ಎಂದು ಕಂಡುಕೊಂಡ ಮಂಡೇಲಾ ಕ್ರಾಂತಿಕಾರಿ ಹೋರಾಟ, ಗೆರಿಲ್ಲಾ ಹೋರಾಟಕ್ಕೆ ಇಳಿದ; ತಲೆ ಮರೆಸಿಕೊಂಡು ಬಿಳಿಯರ ವ್ಯವಸ್ಥೆಗೆ ಸಿಂಹಸ್ವಪ್ನನಾದ. ಆಗ ಮಂಡೇಲಾ ಎದುರಿಗಿದ್ದದ್ದು ಎರಡೇ ಸಾಧ್ಯತೆಗಳು; ಅಹಿಂಸಾತ್ಮಕ ಹೋರಾಟ ಪರಿಣಾಮಕಾರಿಯಲ್ಲ, ಹಿಂಸೆಯ ದಾರಿಯೇ ಸರಿ. ಆಗ "ದೇಶದ್ರೋಹ"ದ ಚಟುವಟಿಕೆಗಳಿಗಾಗಿ ದಕ್ಷಿಣ ಆಫ್ರಿಕಾದ ಸರ್ಕಾರ ಮಂಡೇಲಾನನ್ನು ದಸ್ತರಿಗಿ ಮಾಡಿ ಜೀವಾವಧಿ ಶಿಕ್ಷೆ ವಿಧಿಸಿತು. ಜೈಲಿನಲ್ಲಿದ್ದ ಮಂಡೇಲಾ ಜೈಲಿನ ಹೊರಗಿನ ಮಂಡೇಲಾಗಿಂತ ಶಕ್ತಿವಂತನಾದ.
ದಕ್ಷಿಣ ಆಫ್ರಿಕಾದ ವರ್ಣೀಯರ ಹೋರಾಟ ಮಂಡೇಲಾ ಎಂಬ ವ್ಯಕ್ತಿಯ ಹೋರಾಟವಲ್ಲ; ಒಂದು ಜನತೆಯ ಹೋರಾಟ. ಇಂಥ ಮಾತು ಕೂಡ ಹೆಚ್ಚೇನನ್ನೂ ಹೇಳುವುದಿಲ್ಲವಾದ್ದರಿಂದ ಜೀವಂತ ರೇಖೆಗಳಿಗಾಗಿ ಹುಡುಕೋಣ. ಬಿಷಪ್ ಟುಟುವಿನ ಧಾರ್ಮಿಕ ಗುಂಪು ಬಲ್ಲಿರಿ; ಕಪ್ಪುಜನ ರೊಚ್ಚಿಗೆದ್ದು ರಕ್ತಪಾತ, ಬಿಕ್ಕಟ್ಟಿಗೆ ಅವಕಾಶ ಮಾಡಿಕೊಡುವ ಅಪಾಯವಿದ್ದಾಗ ಅವರಿಗೆ ಕಡಿವಾಣ ಹಾಕಿದ ವ್ಯಕ್ತಿ ಟುಟು; ಈತನಿಗೆ ನೊಬೆಲ್ ಬಹುಮಾನ ದೊರೆಯಿತು. ಸಿಸಿಲು ಇನ್ನೊಬ್ಬ ಹೋರಾಟಗಾರ. ಜ಼ುಲು ಬುಡಕಟ್ಟಿನ ಲಕ್ಷಾಂತರ ಜನರ ನಾಯಕನಾಗಿದ್ದು ತನ್ನದೇ ಹೋರಾಟ ರೂಪಿಸಿದ ವ್ಯಕ್ತಿ ಮಂಗಸೂತು ಬುಥೇಲೇಜಿ. ಇದರೊಂದಿಗೆ ಕಮ್ಯೂನಿಸ್ಟ್ ಪಕ್ಷವಿದೆ.
ಜೀವಾವಧಿ ಸೆರೆವಾಸವೆಂದರೆ ಸೆರೆಮನೆಯ ಹೊರಗಿರುವವರಿಗೆ ತಿಳಿಯುವುದಿಲ್ಲ. ವರ್ಣಭೇದದ ನೀತಿ ರೂಪಿಸಿ ಆಫ್ರಿಕಾದ ನಾಯಕರನ್ನು ಹತ್ತಿಕ್ಕಿ ನಿರಂತರವಾಗಿ ಅಧಿಕಾರ ನಡೆಸುವ ಹುನ್ನಾರ ಬಿಳಿಯರದು. ಇದೊಂದು ವಿಚಿತ್ರ ಸ್ಥಿತಿ. ಸೆರೆಯಲ್ಲಿಟ್ಟವನೂ ಸೆರೆಯಲ್ಲಿದ್ದವನೂ ಬಂಧಿಯಾಗಿರುವ ಸ್ಥಿತಿ. ಮಂಡೇಲಾ ಜಾಗದಲ್ಲಿ ನಿಂತು ನೋಡಿದರೆ ಈ ಸ್ಥಿತಿಯ ಜಟಿಲತೆ ಗೊತ್ತಾಗುತ್ತದೆ. ಜೀವನವೆಂದರೆ ನಲವತ್ತೋ ಐವತ್ತೋ ವರ್ಷ ನಿಜಕ್ಕೂ ಜೀವಂತವಾಗಿರುವ, ಕೈಕಾಲು ಗಟ್ಟಿಮುಟ್ಟಾಗಿದ್ದು ತ್ರಾಣ ಇರುವ ವಿಚಾರ. ಇಪ್ಪತ್ತು ವರ್ಷ ಕಠಿಣ ಸಜಾ; ಕಲ್ಲು ಒಡೆಯುವ, ಹೊರುವ ಕೆಲಸ. ಸ್ವಾಭಿಮಾನಕ್ಕಾಗಿ ನಿಶ್ಚಯ ಕರಗಿಸದೆ, ಉಳಿದಿರುವ ವರ್ಷಗಳಲ್ಲಿ ದೈಹಿಕ ನೆಮ್ಮದಿಗಾಗಿ ಆಸೆಪಡದೆ ಮುಂದುವರಿಯುವ ನಿರ್ಧಾರ; ದೈಹಿಕ ನೆಮ್ಮದಿಯ ಆಶೆ ಆತ್ಮದ ಶ್ರೇಯಸ್ಸನ್ನು ಹಾಳು ಮಾಡದಂತೆ ಕಾಪಾಡಿಕೊಳ್ಳುವ ಶ್ರದ್ಧೆ. ಬಿಡುಗಡೆಯ ಸಾಧ್ಯತೆ ಕೂಡ ಇಲ್ಲದೆ, ತನ್ನ ಛಲವೇ ತನ್ನ ಜನರ ಆದರ್ಶವಾಗುವುದೆಂಬ ಆಶೆಯಿಂದ, ತನ್ನೆಲ್ಲ ತ್ಯಾಗವೂ ವ್ಯರ್ಥ ಕೂಡ ಆಗಬಹುದೆಂಬ ಅನುಮಾನ ಹತ್ತಿಕ್ಕಲಾರದೆ, ತಾನೇ ತನ್ನ ಜನರ ತಿರುಳೆಂಬ ಅಹಂಕಾರವನ್ನು ವಿನಯವನ್ನಾಗಿಸಿಕೊಂಡು ಬದುಕಿದ ಮಂಡೇಲಾ.
ಇದರಲ್ಲೆಲ್ಲ ತನ್ನ ದೇಹ, ತನ್ನ ಮನಸ್ಸು, ತನ್ನ ದೇಶ, ತನ್ನ ಜನರು - ಯಾವ ಯಾವ ಸಂಬಂಧ ಮುಂದುವರಿಸಬೇಕು? ಜಾರುತ್ತಿರುವ ವರ್ಷಗಳು ಹೇಗೆ ಎಲ್ಲವನ್ನೂ ಬದಲಾಯಿಸುತ್ತವೆ? ವಿನ್ನಿ ಮಂಡೇಲಾಳದೇ ವಿಶಿಷ್ಠ ಸಮಸ್ಯೆ. ಬದುಕುವ ಆಶೆಯಿಂದ ಒಳ್ಳೆಯವನನ್ನು ಕೈಹಿಡಿದವಳು; ಎಲ್ಲರಂತೆ ಬದುಕಿನಿಂದ ಅಪಾರ ಸುಖ ಬಯಸಿದವಳು. ವರ್ಷದ ಮೇಲೆ ವರ್ಷಗಳು ಉರುಳುತ್ತಿದ್ದಂತೆ, ಮಂಡೇಲಾ ಜೈಲಿನಲ್ಲಿ ಕಾಲು ಶತಮಾನ ಕಳೆಯುತ್ತಿದ್ದಂತೆ ವಿನ್ನಿ ಅಪವಾದ ಎದುರಿಸಬೇಕಾಯಿತು. ಫುಟ್ಬಾಲ್ ತಂಡದೊಂದಿಗೆ ಸಂಬಂಧ, ಹಣದ ವಸೂಲಿ, ಕೆಟ್ಟ ನಡವಳಿಕೆಯ ಮಾತುಗಳೆಲ್ಲ ಬಂದವು. ಜೈಲಿನಲ್ಲಿದ್ದ ಮಂಡೇಲಾ ಖಿನ್ನನಾದನಲ್ಲದೆ ಸಿಟ್ಟಿಗೇಳಲಿಲ್ಲ. ವಿನ್ನಿಯೊಂದಿಗೆ ಜಗಳವಾಡಲಿಲ್ಲ. ಅದು ಕೂಡ ಆತನ ಬದುಕಿನ ಒಂದು ಭಾಗವಾಗಿತ್ತು.
ಮೇಲಿನದನ್ನೆಲ್ಲ ಯಾಕೆ ಹೇಳಿದನೆಂದರೆ ರಕ್ತಕ್ರಾಂತಿಯ ಮಾತಾಡುತ್ತಿದ ಮಂಡೇಲಾ ಇಪ್ಪತ್ತೇಳು ವರ್ಷ ಸೆರೆವಾಸ ಅನುಭವಿಸಿ ಸೆರೆಯಿಂದ ಹೊರಬಂದಾಗ ಎಪ್ಪತ್ತೊಂದು ವಯಸ್ಸಿನ ಪರಿಪಕ್ವ ಮನುಷ್ಯನಾಗಿದ್ದ. ಹೋರಾಟದ ಕೆಚ್ಚು ಹಾಗೇ ಇತ್ತು; "ನಮ್ಮ ಹೋರಾಟ ಮುದುವರಿಯುತ್ತದೆ" ಅಂದ. ನಿಜವಾದ ರಾಜಕೀಯ ನಾಯಕನಾಗಿದ್ದ; "ನಾವು ಬಿಳಿಯರ ದಬ್ಬಾಳಿಕೆಯನ್ನು ಸಹಿಸುವುದಿಲ್ಲ. ಹಾಗೆಯೇ ಕರಿಯರ ದಬ್ಬಾಳಿಕೆಯೂ ನಮಗೆ ಬೇಕಿಲ್ಲ." ರಾಜಕೀಯ ಮುತ್ಸದ್ಧಿತನ ಅರಳಿತ್ತು; "ಮಾತುಕತೆ ನಡೆಯಬೇಕು, ಮಾತುಕತೆ ನಡೆಯುವುದರ ಉದ್ದೇಶವೇ ಸ್ನೇಹದ ಕೊಡುಕೊಳ್ಳುವಿಕೆ." ವಿನಯ ಬತ್ತಿರಲಿಲ್ಲ; "ನಮ್ಮ ಪಕ್ಷವಾದ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ನ ಕಾರ್ಯಕರ್ತ ನಾನು. ನಮ್ಮ ಪಕ್ಷ ಹೇಳಿದ ಕೆಲಸ ಮಾಡುತ್ತೇನೆ." ಹಾಗೆಯೇ ಮಂಡೇಲಾ ನೋವಿನಿಂದ ಬೆಂದು ಪ್ರೀತಿ ಪಡೆದಿದ್ದ: "ನಮ್ಮ ಅಸ್ತ್ರಗಳನ್ನೆಲ್ಲ ಸಮುದ್ರಕ್ಕೆ ಎಸೆಯೋಣ".
ಆಫ್ರಿಕಾದ ಹುಮ್ಮಸ್ಸಿನ, ಕುತಂತ್ರವನ್ನೇ ಅರಿಯದ ಮುಗ್ಧ ವೃಕ್ಷದ ಜೀವ ಅರ್ಥಪೂರ್ಣ ಸ್ವರ ಪಡೆದಿತ್ತು. ಹೋರಾಟಕ್ಕಾಗಿ, ನಿಜವಾಗಿಯೂ ಜನರನ್ನು ಒಂದುಗೂಡಿಸಿ ದೇಶವನ್ನು ಕಟ್ಟುವುದಕ್ಕಾಗಿ, ಸ್ವಾಭಿಮಾನವುಳ್ಳ ಕರಿ, ಕಂದು, ಬಿಳಿ ಜನರೆಲ್ಲರ ನಡುವೆ ಸಂಬಂಧ ಕಲ್ಪಿಸುವುದಕ್ಕಾಗಿ ಮಾಜಿ ರಾಜಕುಮಾರನೊಬ್ಬ ಸೆರೆಮನೆಯಲ್ಲಿ ಪರಿವರ್ತಿತನಾಗಿದ್ದ; ಹೊಸ ಹುಟ್ಟು ಪಡೆದಿದ್ದ. ಕೃಷ್ಣ ಹುಟ್ಟಿದ್ದು ಸೆರೆಮನೆಯಲ್ಲಿ; ಗಾಂಧೀಜಿ ಬೆಳೆದದ್ದು ಸೆರೆಮನೆಯಲ್ಲಿ; ಮಂಡೇಲಾ ಜ್ಞಾನೋದಯ ಪಡೆದದ್ದೂ ಅಲ್ಲಿಯೇ.
ಈ ಸಂದರ್ಭದಲ್ಲಿ ಡಿಕ್ಲೆರ್ಕ್ ಎಂಬ ದಕ್ಷಿಣ ಆಫ್ರಿಕಾದ ನಾಯಕನನ್ನು ಮರೆಯದಿರೋಣ. ಈತ ಈಗ ಆಫ್ರಿಕಾದ ನೆಚ್ಚಿನ ವ್ಯಕ್ತಿ; ಈತ ಕೂಡ ತನ್ನ ಬಿಳಿ ಸೆರೆಯಲ್ಲಿ, ಮಾನಸಿಕ ಸೆರೆಯಲ್ಲಿ ಬದಲಾದ ವ್ಯಕ್ತಿ. ಡಿಕ್ಲೆರ್ಕ್ ಕೂಡ ಮಂಡೇಲಾ ಎದುರು ಸ್ವಲ್ಪ ಸಣ್ಣವನಾಗಿ ಕಾಣುತ್ತಿದ್ದಾನೆ. ಆದರೆ ಇದು ನಮ್ಮ ದೃಷ್ಟಿಯಿಂದ ಆಗಿರಬಹುದು. ಏನೇ ಆದರೂ ಮಂಡೇಲಾ ಇವತ್ತು ನಾಯಕ. ಈತನನ್ನು ಕೇವಲ ದಿಟ್ಟ ಅನ್ನಲಾಗುವುದಿಲ್ಲ. ಕೇವಲ ಸಜ್ಜನ ಅನ್ನಲಾಗುವುದಿಲ್ಲ.
ಮೂಲಭೂತವಾಗಿ ಸ್ವಾರ್ಥಿಯಾದ, ನಿತ್ಯದ ಊಟ, ತಿಂಡಿ, ಚಿತ್ರವಿಚಿತ್ರ ಸುಖ, ಅಹಂಕಾರದಲ್ಲಿ ಇದ್ದು ಬಿಡುವ ಮನುಷ್ಯನಿಗೆ ಮಂಡೇಲಾ ಥರದವರು ಬೇರೊಂದು ಅನುಭವವನ್ನು ನೆನಪಿಸುತ್ತಾರೆ; ನಮ್ಮೆಲ್ಲರ ಸದ್ಯದ ನೆಮ್ಮದಿ ಮೀರಿದ ಮೌಲ್ಯ ಇದೆಯೆಂದು ತೋರುತ್ತಾರೆ. ಬಿಷಪ್ ಟುಟು ಅಥವಾ ಕಮ್ಯುನಿಸ್ಟ್ ವೈಚಾರಿಕತೆಯನ್ನು ಮೀರಿದ ಅನುಭವ ಅದು. ನಮ್ಮ ಚೈತನ್ಯ, ಆತ್ಮಾಭಿಮಾನ, ಮನುಷ್ಯತ್ವಕ್ಕೆ ಸೇರಿದ ಅನುಭವ ಅದು. ಮನುಷ್ಯರನ್ನು ರಾಕ್ಷಸರಿಂದ ಬೇರ್ಪಡಿಸುವ ಅನುಭವ. ಅದನ್ನು ತೋರಿದ್ದರಿಂದಲೇ ನೆಲ್ಸನ್ ಮಂಡೇಲಾ ಉತ್ತಮ ವ್ಯಕ್ತಿ.
(ಮೇಲಿನ ಮಾತುಗಳು ಪಿ. ಲಂಕೇಶರದ್ದು)
ಮುಂದೆ ನೆಲ್ಸನ್ ಮಂಡೇಲ ದಕ್ಷಿಣ ಆಫ್ರಿಕಾದ ರಾಷ್ಟ್ರಾಧ್ಯಕ್ಷರಾದರು. ವಿಶ್ವದೆಲ್ಲೆಡೆ ಅವರಿಗೆ ಪ್ರಶಸ್ತಿ ಗೌರವಗಳ ಸುರಿಮಳೆಯಾಯಿತು.
ನೆಲ್ಸನ್ ಮಂಡೇಲ 2013ರ ಡಿಸೆಂಬರ್ 5ರಂದು ನಿಧನರಾದರು. ಇದರಿಂದ ಕಳೆದ ಶತಮಾನದ ಶ್ರೇಷ್ಠಜೀವವೊಂದು ಕಣ್ಮರೆಯಾದಂತಾಯಿತು.
On the birth anniversary of great Nelson Mandela
ಕಾಮೆಂಟ್ಗಳು