ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಟಿ.ಪಿ. ಅಶೋಕ


 ಟಿ.ಪಿ. ಅಶೋಕ 


ಟಿ.ಪಿ.ಅಶೋಕ ಸಾಹಿತ್ಯ ವಿಮರ್ಶಕರಾಗಿ ಪ್ರಸಿದ್ಧರು.   ನನಗೆ ಅವರು ಅದಕ್ಕಿಂತ ಬಹುಮಿಗಿಲಾದವರು. ನಾನಂತೂ ಅವರಂತೆ ಸಾಹಿತ್ಯವನ್ನೇ ತಮ್ಮ ಬದುಕಾಗಿ ಬದುಕುತ್ತಿರುವವರನ್ನು ಕಂಡಿಲ್ಲ.  ಸಾಹಿತ್ಯ ಎಂಬುದು ಅವರ ಮಾತಲ್ಲಿ, ಬರಹದಲ್ಲಿ, ನಡೆಯಲ್ಲಿ, ಬಹುಶಃ ಉಸಿರಲ್ಲೂ ವ್ಯಾಪಿಸಿದೆ. 

ಸಾಗರದ ಕಾಲೇಜಿನಲ್ಲಿ ಪಾಠಮಾಡಿ, ಹೆಗ್ಗೋಡಿಗೆ ಬಂದು ಅಲ್ಲಿಯ ಸಾಂಸ್ಕೃತಿಕ ಚಟುವಟಿಕೆಗಳ ಸಮಸ್ತದಲ್ಲೂ ಭಾಗಿಯಾಗಿ, ಆ ಚಟುವಟಿಕೆಗಳನ್ನು ಬೇರೆ ಬೇರೆ ಊರುಗಳಿಗೆ ತಲುಪಿಸಿ, ಹೊರ ಊರುಗಳಲ್ಲಿರುವ ಕನ್ನಡ ಸಾಹಿತ್ಯ ವಿದ್ವಾಂಸರ ಜೊತೆಗೆ ನಿರಂತರ ಸಂಪರ್ಕ, ಅನೇಕ ಗ್ರಂಥಗಳ ರಚನೆ, ನಿನಾಸಂ ಸಾಹಿತ್ಯ ಕಮ್ಮಟಗಳು, ಅಪರಿಮಿತ ಅಧ್ಯಯನ, ಅಂಕಣ ಬರವಣಿಗೆ, ಗ್ರಂಥ ರಚನೆ, ಹೀಗೆ ಹೇಳುತ್ತ ಹೋದರೆ ತುದಿ ಮೊದಲಿಲ್ಲದ್ದು. ಮತ್ತೊಂದು ವಿಶೇಷವೆಂದರೆ ಅವರ ಬರಹಗಳೆಲ್ಲವೂ ತಾನೇ ಹೊಸತೇನೋ ಬರೆಯಬೇಕು ಎಂಬ ಅನಿಸಿಕೆಗೆ ಬೀಳದೆ ಕನ್ನಡದ ಶ್ರೇಷ್ಠ ಬರವಣಿಗೆಗಳಿಗೆ ಕನ್ನಡಿಯಾಗಿ, ತೋರುಬೆರಳಾಗಿ ನಿಲ್ಲುವ ರೀತಿ.

ಟಿ.ಪಿ.ಅಶೋಕ ಅವರು 1955ರ ಆಗಸ್ಟ್ 26ರಂದು ನಂಜನಗೂಡಿನಲ್ಲಿ ಜನಿಸಿದರು. ಅವರ ತಂದೆ ಟಿ. ಆರ್. ಪದ್ಮನಾಭ ಅವರು  ಟಿ.ನರಸೀಪುರದ ಹೈಸ್ಕೂಲಿನಲ್ಲಿ ಹಿಂದೀ ಅಧ್ಯಾಪಕರಾಗಿದ್ದರು. ತಂದೆಯವರಿಗೆ ಇಂಗ್ಲಿಷಿನಲ್ಲೂ ಅದ್ಭುತ ಪಾಂಡಿತ್ಯವಿತ್ತು. ಪುಸ್ತಕಗಳನ್ನು ಕೊಳ್ಳುವುದು ಕಷ್ಟವಾಗಿದ್ದ ಆ ದಿನಗಳಲ್ಲಿ ಗ್ರಂಥಾಲಯದಿಂದ ಅಮ್ಮ ತರುತ್ತಿದ್ದ ಪುಸ್ತಕವನ್ನು ಮನೆಯಲ್ಲಿನ ಕಡೇ ಪಕ್ಷ ಮೂರು ಜನ ಒಂದೇ ದಿನ ಓದಿ ಮಾರನೇ ದಿನ ಮತ್ತೊಂದು ಪುಸ್ತಕ ತರುವುದು ರೂಢಿಯಾಗಿತ್ತಲ್ಲದೆ ಮನೆಯಲ್ಲಿ ಆ‍ ಪುಸ್ತಕದ ಓದಿನ ಕುರಿತು ಮಾತುಕತೆ ನಡೆಯುತ್ತಿತ್ತು.

ಮೈಸೂರಿನಲ್ಲಿ ಇಂಗ್ಲಿಷಿನಲ್ಲಿ ಎಂ.ಎ ಪದವಿ ಪಡೆದ ಅಶೋಕ 1978ರಲ್ಲಿ ಕನಕಪುರದ ಕಾಲೇಜಿನಲ್ಲಿ ಪಾರ್ಟ್ ಟೈಮ್ ಅಧ್ಯಾಪಕರಾಗಿದ್ದರು.  ಅಲ್ಲಿ ಸಾಹಿತಿ ವೇಣುಗೋಪಾಲ ಸೊರಬರು ವಿಭಾಗದ ಮುಖ್ಯಸ್ಥರಾಗಿದ್ದರು.  ಅವರೊಡನೆ ವಾಕಿಂಗ್ ಹೋಗುವಾಗ,  ಅಶೋಕ ಅವರು ಪಿ. ಲಂಕೇಶರ ಮುಸ್ಸಂಜೆಯ ಕಥಾ ಪ್ರಸಂಗದ ಕುರಿತು ವಿಮರ್ಶಾತ್ಮಕವಾಗಿ ಮಾತನಾಡಿದ್ದರ ಕುರಿತು ಆಕರ್ಷಿತರಾದ ಸೊರಬರು ಈಗ ಹೇಳಿದ್ದನ್ನೆಲ್ಲ ಬರೆದುಕೊಡು ಅಂದರು.  ಅದನ್ನು ಓದಿದ ಸೊರಬರು 'ಸಂಕ್ರಮಣ' ಪತ್ರಿಕೆಗೆ ತಾವೇ ಅಂಚೆವೆಚ್ಚ ಭರಿಸಿ ಕಳಿಸಿದರು.  ಹೀಗೆ ಮೊದಲ ಹೆಜ್ಜೆಯಲ್ಲೇ ವಿಮರ್ಶಕರಾಗಿ ಗಮನ ಸೆಳೆದ ಅಶೋಕರು ವಿಚಾರ ಸಂಕಿರಣದಲ್ಲಿ ಚಂದ್ರಶೇಖರ ಕಂಬಾರರ 'ಕರಿಮಾಯಿ' ಕುರಿತು ಮಾತನಾಡಲು ಆಹ್ವಾನ ಪಡೆದರು. 

1979ರಲ್ಲಿ ಡಾ. ಜಿ.ಎಸ್. ಶಿವರುದ್ರಪ್ಪನವರು ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ ವಿಮರ್ಶೆಗಳ ಸಂಕಲನನವನ್ನು ಸಂಪಾದಿಸಿದಾಗ ಮೇಲಿನ ಎರಡೂ ಬರಹಗಳೂ ಅದರಲ್ಲಿ ಸ್ಥಾನ ಪಡೆದಿದ್ದವು. ಹೀಗೆ ಒಬ್ಬ ಕನ್ನಡದ ವಿಮರ್ಶಕರೊಬ್ಬರು ಉದಿಸಿದರು. ಅದೇ ಸಮಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪತ್ರಿಕೆಯ ಸಂಪಾದಕತ್ವ ವಹಿಸಿದ್ದ ಎಚ್. ಎಸ್. ವೆಂಕಟೇಶಮೂರ್ತಿ ಅವರು ಅಶೋಕರನ್ನು ಅದರಲ್ಲಿ ಬರೆಯಲು ಆಹ್ವಾನಿಸಿದರು. ಸೆಮಿನಾರ್‍ಗಳಲ್ಲಿ ಇವರ ಸ್ಪೂರ್ತಿಯ ವಿಚಾರಧಾರೆಗಳನ್ನು ಇಷ್ಟಪಟ್ಟ ಪ್ರಜಾವಾಣಿಯ ಬಿ.ವಿ.ವೈಕುಂಠರಾಜು ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಬರೆಯಲು ಹೇಳಿದರು.  ಇದು ಮುಂದೆ ಹದಿನೈದು ವರ್ಷ ನಿರಂತರವಾಗಿ ನಡೆಯಿತು.

ಟಿ. ಪಿ. ಅಶೋಕರು ಮ್ಯಾಥ್ಯೂ ಆರ್ನಾಲ್ಡ್ ಹೇಳುವಂತೆ, ಸಾಹಿತ್ಯದ ವಿದ್ಯಾರ್ಥಿ ತನ್ನ ಭಾಷೆಯಲ್ಲದೆ ಇನ್ನೆರಡು ಭಾಷೆಗಳ ಸಾಹಿತ್ಯವನ್ನಾದರೂ ಅಭ್ಯಾಸ ಮಾಡಿರಬೇಕು ಎಂದು ನಂಬಿದವರು.  ಅವರು ಓದಿದ್ದು ಇಂಗ್ಲಿಷ್ ಸಾಹಿತ್ಯ. ಜೊತೆಗೆ ಕನ್ನಡ ಮತ್ತು ಹಿಂದೀಯಲ್ಲಿ ಅವರಿಗೆ ಪ್ರಭುತ್ವವಿದೆ.‍‍ ಅವರಿಗೆ ಇಂಗ್ಲಿಷ್ ಭಾಷೆ ಲೋಕಕ್ಕೆ ಕಿಟಕಿಯಾದರೆ, ಕನ್ನಡ ವಿಶ್ವವೇ ಆಗಿದೆ.

ಎಫ್. ಆರ್. ಲೀವಿಸ್, ಕಾಮೂಸ್, ಜಾರ್ಜ್ ಲುಕಾಕ್ಸ್ ಹಾಗೂ ಅಧ್ಯಾಪಕರಾಗಿದ್ದ ಯು. ಆರ್. ಅನಂತಮೂರ್ತಿ, ಡಿ. ಆರ್. ನಾಗರಾಜ್ ಅವರುಗಳ ಚಿಂತನೆ ಮತ್ತು ಗೆಳೆಯರಾದ  ಎಸ್. ದಿವಾಕರ್ ಮತ್ತು ಜಿ. ರಾಜಶೇಖರ್ ಅವರುಗಳೊಡನೆ ಸಂವಾದಗಳ ಪ್ರಭಾವವನ್ನು ಟಿ.ಪಿ. ಅಶೋಕ ತಮ್ಮಲ್ಲಿ ಗುರುತಿಸಿಕೊಳ್ಳುತ್ತಾರೆ.

ಟಿ.ಪಿ.‍ಅಶೋಕರು ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಸುದೀರ್ಘ ಅವಧಿಯವರೆಗೆ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಶೋಕ ಅವರು  ನೀನಾಸಂ ಸಾಂಸ್ಕೃತಿಕ ಆವರಣದಲ್ಲಿ ತಮ್ಮನ್ನು ಆಸಕ್ತಿಯಿಂದ ನಿರಂತರವಾಗಿ ತೊಡಗಿಸಿಕೊಂಡಿದ್ದಲ್ಲದೆ ನೀನಾಸಂ ಸಾಹಿತ್ಯ ಶಿಬಿರಗಳಿಗೆ ನಾಡಿನೆಲ್ಲೆಡೆ ವ್ಯಾಪಕತೆ ನೀಡಿದರು.

ಟಿ.ಪಿ.ಅಶೋಕ ಅವರು ತಾವು ಹೇಗೆ ಒಳ್ಳೆಯ ಓದುಗರೋ ಹಾಗೆಯೇ ಓದುಗನ ಮಿತ್ರ ಕೂಡ. ಅವರ ವಿಮರ್ಶೆಯ ಕ್ರಮದಲ್ಲೇ ಅದು ರೂಢಿಯಾಗಿದೆ. ಓದುಗನಿಗೆ ಕೃತಿಯನ್ನು ವಿವರಿಸಿ ವಿಸ್ತರಿಸಿ ಹೇಳುವುದು ಅವರ ವಿಶಿಷ್ಟ ವಿಮರ್ಶೆಯ ಮಾರ್ಗ. ಲೇಖಕನ ಧ್ವನಿ ಏನು ಎಂಬುದನ್ನು ಅವರು ಹೇಳುತ್ತಾರೆ. ಅಶೋಕರಲ್ಲಿ ವಿಮರ್ಶೆ ಎಂಬುದು ಸಹೃದಯನೊಬ್ಬ ಸಹೃದಯನಿಗೆ ಸಂವಹನಿಸುವ ಸಫಲ ಮಾರ್ಗ.

ಟಿ.ಪಿ. ಅಶೋಕ ಅವರ ಬರಹದ ಸಾಧನೆ ಅಪಾರವಾದದ್ದು. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ಅಧ್ಯಯನಗಳು, ಸಾಹಿತ್ಯ ಸಂಬಂಧ ಮುಂತಾದವು ವಿಮರ್ಶೆಯ ಕೃತಿಗಳು. ಅವರ ಸಂಪಾದನೆಗಳಲ್ಲಿ ಸಾಹಿತ್ಯ ವಿಮರ್ಶೆ, ಕಾರಂತ ಮಂಥನ, ವೈದೇಹಿ ವಾಚಿಕೆ, ಅರೆಶತಮಾನದ ಅಲೆಬರಹಗಳು, ಶ್ರೀರಂಗ ಸಂಪುಟ-೧, ಕೆ.ವಿ.ಸುಬ್ಬಣ್ಣನವರ ಆಯ್ದ ಬರಹಗಳು, ಎ. ಕೆ. ರಾಮಾನುಜನ್ ನೆನಪಿನ ಸಂಪುಟ, ಆರ್ಕೆಸ್ಟ್ರಾ ಮತ್ತು ತಂಬೂರಿ ಮುಂತಾದವು ಸೇರಿವೆ. ಅನುವಾದಗಳಲ್ಲಿ  ಫಾದರ್ ಸೆರ್ಗಿಯಸ್, ರಿಕ್ತರಂಗಭೂಮಿ, ಓವರ್‌ಕೋಟ್  ಮುಂತಾದವು ಇವೆ. 19 ಬೃಹತ್ ಸಾಹಿತ್ಯ ವಿಮರ್ಶೆಯ ಸಂಕಲನಗಳು, 15 ಸಂಪಾದನೆಗಳು ಮತ್ತು 3 ಅನುವಾದಗಳನ್ನು ಅವರು ಪ್ರಕಟಿಸಿದ್ದಾರೆ.  ಅವರು 400ಕ್ಕೂ ಹೆಚ್ಚು ಸಾಹಿತ್ಯ ಶಿಬಿರಗಳನ್ನು ಆಯೋಜಿಸಿದ್ದಾರೆ.  ಅವರ ಸಾಹಿತ್ಯ ಪ್ರೀತಿ ಅಂತ ಅಗಾಧವಾದದ್ದು.

ಟಿ.ಪಿ. ಅಶೊಕರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಜಿಎಸ್‍ಎಸ್ ಪ್ರಶಸ್ತಿ, ವಿ ಎಮ್ ಇನಾಂದಾರ್ ಪ್ರಶಸ್ತಿ, ತೀನಂಶ್ರೀ ಸ್ಮಾರಕ ಬಹುಮಾನ, ವರ್ಧಮಾನ ಸಾಹಿತ್ಯ ಪ್ರಶಸ್ತಿ, ಎಸ್. ವಿ. ಪರಮೇಶ್ವರಭಟ್ಟ ಪ್ರಶಸ್ತಿ, ಸಂದೇಶ್ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.

ನೀನಾಸಂ ಸಾಹಿತ್ಯ ಶಿಬಿರವನ್ನು ಎಚ್ ಎಮ್ ಟಿ ಕನ್ನಡ ಸಂಪದದ ಮೂಲಕ ಬೆಂಗಳೂರಿನಲ್ಲಿ ಅವರೊಡನೆ ಆಯೋಜಿಸುವಾಗ, ಸಾಗರದಲ್ಲಿ ಪೂರ್ಣಚಂದ್ರ ತೇಜಸ್ವಿ ಕುರಿತ ಸಾಹಿತ್ಯ ಶಿಬಿರದಲ್ಲಿ ಪಾಲ್ಗೊಂಡಾಗ ಮತ್ತು ಸಾಹಿತ್ಯ ಅಕಾಡಮಿಯಲ್ಲಿ ವಿಚಾರಣ ಸಂಕಿರಣದಲ್ಲಿ ಪಾಲ್ಗೊಂಡಾಗ ಅವರು ನೀಡಿದ ಸ್ನೇಹ ಬೆಂಬಲ, ಪ್ರೀತಿ, ಮಾರ್ಗದರ್ಶನ, ಪ್ರೋತ್ಸಾಹ  ಮತ್ತು ಸಹಕಾರ ಮರೆಯಲಾಗದ್ದು.

ವಿದ್ವಾಂಸರೂ, ಆತ್ಮೀಯರು, ನಿರಂತರ ಕ್ರಿಯಾಶೀಲರೂ ಆದ ಟಿ.ಪಿ. ಅಶೋಕ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

On the birth day of scholar and writer T.P. Ashoka Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ