ಬಿ. ಜಿ. ಸತ್ಯಮೂರ್ತಿ
ಬಿ. ಜಿ. ಸತ್ಯಮೂರ್ತಿ
ಕಥೆಗಾರರಾಗಿ ಬಿ.ಜಿ. ಸತ್ಯಮೂರ್ತಿ ಹೆಸರಾಗಿದ್ದಾರೆ.
ಬಿ.ಜಿ. ಸತ್ಯಮೂರ್ತಿಯವರು ಕೋಲಾರ ಜಿಲ್ಲೆಯ ಚಿಂತಾಮಣಿಯಲ್ಲಿ 1937ರ ಸೆಪ್ಟಂಬರ್ 10ರಂದು ಜನಿಸಿದರು. ತಂದೆ ಬಿ.ಕೆ. ಗುರುರಾವ್, ತಾಯಿ ಕೃಷ್ಣವೇಣಿ ಬಾಯಿ. ಪ್ರಾಥಮಿಕ ಶಿಕ್ಷಣ ಚಿನ್ನದಗಣಿಶಾಲೆ, ಮಾಧ್ಯಮಿಕ ಶಾಲೆ ವೇಮಗಲ್, ಮತ್ತು ಪ್ರೌಢಶಾಲೆಯ ಓದನ್ನು ಕೋಲಾರದಲ್ಲಿ ನಡೆಸಿದರು. ಮೈಸೂರು ಮುಕ್ತವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು.
ಸತ್ಯಮೂರ್ತಿ ಅವರು 1959ರಲ್ಲಿ ಕೃಷಿ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದರು. ಕುಂದಾಪುರ, ಉಡುಪಿ ಮತ್ತು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದರು.
ಸತ್ಯಮೂರ್ತಿ ಅವರ ಸಾಹಿತ್ಯ ಚಟುವಟಿಕೆಗಳು ಉಡುಪಿಯಲ್ಲಿದ್ದಾಗ ಪ್ರಾರಂಭವಾಗಿ, ಕೊಳಲು ವಾದಕಾದ ರಮೇಶ್, ಸಾಹಿತಿ ನಾರಾಯಣಬಲ್ಲಾಳ ಮತ್ತು ‘ಪ್ರಕಾಶ’ ಪತ್ರಿಕೆಯ ಸಂಪಾದಕರಾದ ವ್ಯಾಸರಾಯರು ಮುಂತಾದವರಿಂದ ದೊರೆತ ಪ್ರೋತ್ಸಾಹದಿಂದ ಬರೆಯತೊಡಗಿದರು. ಇವರ ಕಥೆಗಳು ಅಂದಿನ ಪತ್ರಿಕೆಗಳಾದ ಪ್ರಕಾಶ, ರಾಯಭಾರಿ, ನವಯುಗ, ತಾಯಿನಾಡು, ಗೋಕುಲ ಮುಂತಾದ ಪತ್ರಿಕೆಗಳಲ್ಲದೆ ತರಂಗ, ತುಷಾರ, ಮಯೂರ, ಸುಧಾ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಹಲವಾರು ತೆಲುಗು ಕತೆಗಳನ್ನೂ ಅನುವಾದಿಸಿದರು. ಹೀಗೆ ಬರೆದ ಕಥೆಗಳು ಆಕಾಶವಾಣಿ, ದೂರದರ್ಶನ ಜಾಲಗಳಲ್ಲಿಯೂ ಪ್ರಸಾರಗೊಂಡವು.
ಸತ್ಯಮೂರ್ತಿ ಅವರು ಪುಸ್ತಕಗಳ ಪ್ರಕಟಣೆಗಾಗಿ 1973ರಲ್ಲಿಸ್ವತಂತ್ರವಾಗಿ ಮಯೂರ ಪ್ರಕಾಶನ ಆರಂಭಿಸಿದರು. ನಂತರ ಸಮಾನ ಮನಸ್ಕರೊಡನೆ ಸೇರಿ ಕಲಾಮಯೂರಿ ಪ್ರಕಾಶನ ಸ್ಥಾಪಿಸಿದರು. ಈ ಪ್ರಕಾಶನದಡಿಯಲ್ಲಿ ಉದಯೋನ್ಮುಖರ ಹಲವಾರು ಕೃತಿಗಳು ಪ್ರಕಟಗೊಂಡಿವೆ.
ಸತ್ಯಮೂರ್ತಿ ಅವರ ಜನಪ್ರಿಯ ಕಾದಂಬರಿಗಳಲ್ಲಿ ಪ್ರೇಮದ ಬಾಳು, ಒಲವಿನ ಒಸರು, ಹೃದಯವೀಣೆ, ದೇವರಿಲ್ಲದ ಗುಡಿ, ವಸಂತ ದಹನ, ನಿಯತ್ತಿನ ನೇಣು, ಶರಶಯ್ಯೆ, ಪ್ರೇಮಪತಂಗ, ಸೀಮಂತ, ತಾಳಮೇಳ, ಕಥಾನಾಯಕಿ, ಗುಮ್ಮನ ಕರೆಯದಿರೆ ಮುಂತಾದವುಗಳು ಸೇರಿವೆ.
ಸತ್ಯಮೂರ್ತಿ ಅವರ ಕಥಾಸಂಕಲನಗಳಲ್ಲಿ ಲವ್ ಇನ್ ನಂದಿ, ಬುದ್ಧನದೇ ಚಿಂತೆ, ಶೈಲಾ ಟೀಚರ್, ಮುನಿಯನ ಮನವಿ, ಭೂಕಂಪ ಮುಂತಾದವುಗಳಿವೆ.
ಯಜ್ಞಪಶು, ಆಹುತಿ, ಮುಗಿಯದ ನಾಟಕ, ಅಪಹೃತ, ಹೆಳವನ ಹೆಗಲೇರಿದ ಕುರುಡ ಮುಂತಾದವುಗಳು ಸತ್ಯಮೂರ್ತಿ ಅವರ ನಾಟಕಗಳು. ಭಕ್ತಿಪ್ರತೀಕವಾಗಿ ಶ್ರೀ ಶ್ರೀರಾಘವೇಂದ್ರ ಸ್ವಾಮಿಗಳನ್ನು ಕುರಿತು ಬರೆದದ್ದು ‘ಗುರುದಕ್ಷಿಣೆ’. ಮಹಾಭಾರತದ ವಸ್ತುನಿಷ್ಠ ಅಧ್ಯಯನದ ಕೃತಿ ‘ಸರಳಭಾರತ’. ಕನ್ನಡ ಸಾಹಿತಿಗಳ ಎಲ್ಲ ವಿವರಗಳನ್ನೊಳಗೊಂಡ ಮಾಹಿತಿಕೋಶವನ್ನು ಹಲವು ಸಂಪುಟಗಳಲ್ಲಿ ಮಾಡಿದ್ದಾರೆ.
ಸತ್ಯಮೂರ್ತಿ ಅವರಿಗೆ ರತ್ನಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಅತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಮುಂತಾದ ಅನೇಕ ಗೌರವಗಳು ಸಂದಿವೆ.
On the birthday of writer B. G. Sathyamurthy
ಕಾಮೆಂಟ್ಗಳು