ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರೊತಿಮಾ ಬೇಡಿ


ಪ್ರೊತಿಮಾ ಬೇಡಿ


ಎಳೆ ಪ್ರಾಯದಲ್ಲಿ ಅನುಭವಿಸುವ ಅವಮಾನ-ಕೀಳರಿಮೆಗಳು ವ್ಯಕ್ತಿಯನ್ನು ಬಲಿಷ್ಠ ಗೊಳಿಸುತ್ತವಂತೆ. ತನ್ನ ಅನಾಕರ್ಷಕ ರೂಪ, ಹೆಣ್ಣು ಮಗುವೆಂಬ ತಿರಸ್ಕಾರ, ಹೆತ್ತವರ ಅನಾದರದ ನಡುವೆ ಅವಮಾನ ನುಂಗಿಕೊಂಡು ಛಲದಿಂದ ಬೆಳೆದು, ದೇಶದ ಹೆಸರಾಂತ ಮಾಡೆಲ್ ಹಾಗೂ ನೃತ್ಯ ಪಟುವಾಗಿ ಮೆರೆದು ದೇಶದ ಏಕೈಕ ನೃತ್ಯಗ್ರಾಮ ಕಟ್ಟಿದ ಯಶೋಗಾಥೆ, ಖ್ಯಾತ ಒಡಿಸ್ಸಿ ನೃತ್ಯಗಾತಿ ಪ್ರೊತಿಮಾ ಬೇಡಿ ಅವರದ್ದು.

ಹರ್ಯಾಣದ ಕರ್ನಾಲಾದ ವ್ಯಾಪಾರಿ ಲಕ್ಷ್ಮಿ ಚಂದ್ ಗುಪ್ತಾ ಮತ್ತು ಬೆಂಗಾಲಿ ಹುಡುಗಿ ರೇಬಾ ಅವರದ್ದು ಪ್ರೇಮ ವಿವಾಹ. ಪರಿಣಾಮ ಮನೆಯಿಂದ ಹೊರ ಹಾಕಲ್ಪಟ್ಟ ದಂಪತಿ ದೆಹಲಿಗೆ ಹೋಗಿ ಜೀವನದಲ್ಲಿ ನೆಲೆಗೊಳ್ಳುತ್ತಾರೆ. ಪ್ರಥಮ ಮಗು ಹೆಣ್ಣಾದ ನಂತರ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿಗಳಿಗೆ 1948ರ  ಅಕ್ಟೋಬರ್ 12ರಂದು ಪ್ರೊತಿಮಾ ಜನಿಸುತ್ತಾಳೆ. ಸಂಭ್ರಮದಲ್ಲಿದ್ದ ಹೆತ್ತವರಿಗೆ ಪ್ರೊತಿಮಾ ಜನನ ಆಘಾತ ತರುತ್ತದೆ.

ಕಪ್ಪು ಬಣ್ಣ, ಅಷ್ಟೇನೂ ಆಕರ್ಷಕವಲ್ಲದ ರೂಪದ ಕಾರಣ ಹೆತ್ತವರ ಪ್ರೀತಿ ವಂಚಿತ ಪ್ರೊತಿಮಾ ನೋವಿನಲ್ಲೇ ಬೆಳೆಯುತ್ತಾ ಸ್ವತಂತ್ರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾಳೆ. ತನ್ನ ಹರ್ಯಾಣದ ಚಿಕ್ಕಮ್ಮನ ಮನೆಯಲ್ಲಿದ್ದುಕೊಂಡು ಸ್ಥಳೀಯ ಶಾಲೆಯಲ್ಲಿ ಶಿಕ್ಷಣ ಆರಂಭಿಸುವ ಪ್ರೊತಿಮಾ ಹೈಸ್ಕೂಲ್ ಪಂಚಗನಿಯಲ್ಲಿ ಪೂರೈಸುತ್ತಾಳೆ. ಮುಂಬಯಿಯ ಸೈಂಟ್ ಗ್ಸೇವಿಯರ್ ಕಾಲೇಜಲ್ಲಿ ಪದವಿ ನಂತರ ಮಾಡೆಲಿಂಗ್ ಲೋಕಕ್ಕೆ ಪಾದಾರ್ಪಣೆ ಮಾಡುವ ಪ್ರೊತಿಮಾ ಹೆಜ್ಜೆಗಳು ದೃಢಗೊಳ್ಳುತ್ತವೆ. ಮಾಡೆಲಿಂಗ್ ವೃತ್ತಿಯಲ್ಲಿ ಖ್ಯಾತಿಯ ಉತ್ತುಂಗಕ್ಕೇರುತ್ತಿರುವಂತೆ ಪರಿಚಯವಾಗುವ ನಟ ಕಬೀರ್ ಜೊತೆ ಪ್ರೇಮದ ಬಲೆಯಲ್ಲಿ ಬೀಳುವ ಪ್ರೊತಿಮಾ ಒಂದು ದಿನ ಮನೆಯಿಂದ ಹೊರಬಂದು ಕಬೀರ್ ಜೊತೆ ಮದುವೆಯಾಗುತ್ತಾಳೆ. ಸ್ವತಂತ್ರ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದ ಪ್ರೊತಿಮಾ ಜೀವನವಿಡೀ ಇದೇ ರೀತಿ ಬಾಳುತ್ತಾಳೆ.

ಅದು 1975, ಆಗಷ್ಟೇ 26 ವರ್ಷ ತುಂಬಿದ್ದ ಪ್ರೊತಿಮಾ ಮುಂಬಯಿಯ ಭುಲಾಬಾಯ್ ಸ್ಮಾರಕ ವಿದ್ಯಾಲಯಕ್ಕೆ ಯಾವುದೋ ಕಾರಣಕ್ಕೆ ಭೇಟಿ ನೀಡುತ್ತಾಳೆ. ಅಲ್ಲಿ ಇಬ್ಬರು ಯುವ ನೃತ್ಯಪಟುಗಳು ಪ್ರದರ್ಶಿಸುತ್ತಿದ್ದ ಒಡಿಸ್ಸಿ ನೃತ್ಯ ಪ್ರೊತಿಮಾ ಜೀವನದ ಮಹತ್ವದ ತಿರುವಿಗೆ ಕಾರಣವಾಯಿತು. ಸಂಕೀರ್ಣ ಭಂಗಿಗಳು, ವಿಭಿನ್ನ ರೀತಿಯ ಕಣ್ಣು-ಕೈಗಳ ಚಲನೆಯನ್ನು ಹೊಂದಿರುವ ಒಡಿಸ್ಸಿ ನೃತ್ಯ ನೋಡಿದ ಪ್ರೊತಿಮಾ ಮನದಲ್ಲಿ ತಾನು ಕೂಡ ಒಡಿಸ್ಸಿ ನೃತ್ಯಗಾತಿಯಾಗಬೇಕೆಂಬ ಹಂಬಲ ಚಿಗುರೊಡೆಯಿತು.

ಮಾಡೆಲಿಂಗ್ ವೃತ್ತಿಗೆ ಗುಡ್ ಬೈ ಹೇಳಿದ ಪ್ರೊತಿಮಾ ಗುರು ಕೇಳುಚರಣ್ ಮೊಹಾಪಾತ್ರ ಅವರ ಶಿಷ್ಯತ್ವ ಸ್ವೀಕರಿಸಿ ದಿನಕ್ಕೆ 12-14 ಗಂಟೆಗಳ ಕಠಿಣ ಅಭ್ಯಾಸ ನಡೆಸುತ್ತಾಳೆ. ಆರಂಭದಲ್ಲಿ ಕಷ್ಟವಾದರೂ ಹೊಂದಿಕೊಂಡ ಪ್ರೊತಿಮಾ ಛಲದ ಮುಂದೆ ಯಾವುದೂ ಇಲ್ಲ. ಆಧುನಿಕ ದಿರಿಸುಗಳೊಂದಿಗೆ ಮಿಂಚುತ್ತಿದ್ದ ಮಾಡೆಲ್ ಹುಡುಗಿ ಸಾಂಪ್ರದಾಯಿಕ ಉಡುಗೆಗಳಿಗೆ ಬದಲಾದಳು. ಪ್ರೊತಿಮಾ ಗೌರಿಯಾಗಿ ಬದಲಾಗಿ ನೃತ್ಯವನ್ನೇ ಜೀವನವಾಗಿಸಿಕೊಂಡಳು. ನೃತ್ಯದಲ್ಲಿ ಪರಿಣತಿ ಸಾಧಿಸಲು ಗುರು ಕಲಾನಿಧಿ ನಾರಾಯಣ್ ಜೊತೆ ಅಭಿನಯ ಕಲಿತ ಪ್ರೊತಿಮಾ ದೇಶ- ವಿದೇಶಗಳಲ್ಲಿ ಪ್ರದರ್ಶನ ನೀಡಲಾರಂಭಿಸಿದರು.
ಮುಂಬಯಿಯ ಜುಹುವಿನಲ್ಲಿ ಆರಂಭಿಸಿದ ‘ಪೃಥ್ವಿ’ ನೃತ್ಯ ಕೇಂದ್ರ ಮುಂದೆ ಒಡಿಸ್ಸಿ ನೃತ್ಯ ಕೇಂದ್ರವಾಗಿ ಪರಿವರ್ತನೆಗೊಂಡಿತು. ಈ ನಡುವೆ ಕಬೀರ್ ಜೊತೆ ನಂಟು ಕೊನೆಗೊಂಡ ನಂತರ ಜೊತೆಗಾರನ ಹುಡುಕಾಟದಲ್ಲಿದ್ದ ಪ್ರೊತಿಮಾಗೆ ನೃತ್ಯ ಜೊತೆಯಾಯ್ತು.

ಪ್ರೊತಿಮಾ ಬೇಡಿ ಜೀವನದ ದೊಡ್ಡ ಸಾಧನೆ ಬೆಂಗಳೂರಿನಲ್ಲಿ “ನೃತ್ಯ ಗ್ರಾಮ” ಆರಂಭಿಸಿದ್ದು. 1990 ರಂದು ಆರಂಭಗೊಂಡ ಈ ಕೇಂದ್ರದಲ್ಲಿ ಗುರುಕುಲ ಮಾದರಿಯ ಗುರು-ಶಿಷ್ಯ ಪರಂಪರೆಯ ಶಿಕ್ಷಣ ನೀಡಲಾಗುತ್ತಿದೆ. 7 ಮಾದರಿಯ ನೃತ್ಯಗಳಿಗೆ 7 ಗುರುಕುಲಗಳು ಹಾಗೂ ಕಲರಿಪಯಟ್ಟು ಮತ್ತು ಚಾಹು ಮಾರ್ಷಲ್ ಆರ್ಟ್ಸ್ ತರಬೇತಿ ನೀಡುವ ಈ ಸಂಸ್ಥೆ ದೇಶ-ವಿದೇಶಗಳ ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ. ಇಲ್ಲಿ ನಡೆಯುವ “ವಸಂತ ಹಬ್ಬ” ವೆಂಬ-ನೃತ್ಯ ಕಾರ್ಯಕ್ರಮ ವಿಶ್ವದ ಗಮನ ಸೆಳೆಯುತ್ತಿದೆ.

ಛಲದ ಜೀವನದ ಮೂಲಕ ದೇಶದ ಸಾಂಸ್ಕೃತಿಕ ಭೂಪಟದಲ್ಲಿ ವಿಶೇಷ ಸ್ಥಾನ ಗಳಿಸಿಕೊಂಡ ಪ್ರೊತಿಮಾ ಬೇಡಿ ಜೀವನ 1997ರ ನಂತರ ಇನ್ನೊಂದು ತಿರುವು ಪಡೆದುಕೊಂಡಿತು. ಅಮೆರಿಕಾದಲ್ಲಿದ್ದ ಮಗನ ಆತ್ಮಹತ್ಯೆ ಪ್ರೊತಿಮಾ ನೃತ್ಯ ಜೀವನಕ್ಕೆ ಕೊನೆಯ ಪರದೆ ಎಳೆಯಿತು. ದುಃಖದಿಂದ ಜರ್ಝರಿತಗೊಂಡ ಪ್ರೊತಿಮಾ ನೃತ್ಯಕ್ಕೆ ವಿದಾಯ ಹೇಳಿ, ಹಿಮಾಲಯಕ್ಕೆ ಸಾಗಿ ಧ್ಯಾನ-ಯೋಗದಲ್ಲಿ ಕಳೆದು ಹೋಗುತ್ತಾರೆ. 1997ರಿಂದ ಆರಂಭಗೊಂಡ ಅವರ  ಕೈಲಾಸ-ಮಾನಸ ಸರೋವರ ಯಾತ್ರೆ ಸಂದರ್ಭದಲ್ಲಿ ಭಾರತ-ನೇಪಾಳ ಗಡಿಯ ಮಾಲ್ಪಾದ ಬಳಿ ಭೂಕುಸಿತಕ್ಕೆ ಸಿಲುಕಿ ಭೂಸಮಾಧಿಯಾಗುವ ಪ್ರೊತಿಮಾ ಮೃತ ದೇಹ ಹಲವು ದಿನಗಳ ಬಳಿಕ ದೊರೆಯಿತು. ಅವರು ನಿಧನರಾದದ್ದು 1998ರ ಆಗಸ್ಟ್ 18 ಎಂದು ದಾಖಲಿಸಲಾಗಿದೆ.

ಆ ಮೂಲಕ ಮಹಾನ್ ಸಾಹಸಿ ಕಲಾವಿದೆಯ ಜೀವನ ಅಂತ್ಯ ಕಂಡಿತು. ಬಹು ಬೇಗ ಜೀವನ ಅಂತ್ಯಗೊಂಡರೂ ಸವಾಲಿನ ಜೀವನ ಎದುರಿಸಿ ‌ಸಾಧನೆಯ ಶಿಖರ ಏರಿದ ಪ್ರೊತಿಮಾ ಬೇಡಿ ದೇಶ ಕಂಡ ಪ್ರಸಿದ್ಧ ನೃತ್ಯಗಾತಿಯಲ್ಲೊಬ್ಬರಾದರು.

ಮಾಹಿತಿ ಕೃಪೆ: ತೇಜಸ್ವಿ. ಕೆ, ಪೈಲಾರು, ಸುಳ್ಯ

On the birth anniversary of artiste Protima Bedi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ