ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪಂಚಾಕ್ಷರಿ ಮತ್ತೀಗಟ್ಟಿ


 ಪಂಡಿತ್ ಪಂಚಾಕ್ಷರಿ ಸ್ವಾಮಿ ಮತ್ತೀಗಟ್ಟಿ


ಪಂಡಿತ್ ಪಂಚಾಕ್ಷರಿ ಸ್ವಾಮಿ ಮತ್ತೀಗಟ್ಟಿ ಅವರು ಹಿಂದೂಸ್ತಾನಿ ಸಂಗೀತದ ಮಹಾನ್ ಸಾಧಕರಲ್ಲೊಬ್ಬರು.

ಪಂಚಾಕ್ಷರಿ ಸ್ವಾಮಿ ಅವರು 1928ರ ಅಕ್ಟೋಬರ್ 12ರಂದು  ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಶಿಶುನಾಳ ಗ್ರಾಮದಲ್ಲಿ ಜನಿಸಿದರು. ತಂದೆ ಚನ್ನಬಸವಯ್ಯಸ್ವಾಮಿ.  ತಾಯಿ ಸಾತವ್ವ. 

ಪಂಚಾಕ್ಷರಿ ಸ್ವಾಮಿ ಅವರಿಗೆ ಚಿಕ್ಕಂದಿನಿಂದಲೇ ಸಂಗೀತ ಒಲಿದು ಬಂತು. ಏಳನೆಯ ವಯಸ್ಸಿಗೇ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪಂಚಾಕ್ಷರಿ ಗವಾಯಿಗಳಿಂದ ಗುರುಕುಲ ಪದ್ಧತಿಯಲ್ಲಿ ಸಂಗೀತ ಆರಂಭಗೊಂಡಿತು. ಎಂಟು ವರ್ಷ ಗ್ವಾಲಿಯರ್‌ ಘರಾಣೆಯ ವಿವಿಧ ವರಸೆಗಳ ಕಲಿಕೆ ಮಾಡಿದರು. ಪಂ. ಮಲ್ಲಿಕಾರ್ಜುನ ಮನ್ಸೂರರಿಂದ ಜೈಪುರ ಘರಾಣ ಪದ್ಧತಿಯಲ್ಲಿ ಸಂಗೀತದ ಶಿಕ್ಷಣ ಮುಂದುವರೆಯಿತು. ರಾಷ್ಟ್ರಾದ್ಯಂತ ಗುರು ಮನ್ಸೂರರೊಡನೆ ಕಾರ್ಯಕ್ರಮಗಳಿಗೆ ಜೊತೆಯಾದರು. ಪುಣೆಯ ಪಂ. ನಿವೃತ್ತ ಬುವಾ ಸರ್‌ ನಾಯಕ್‌ರ ಬಳಿ ಜೈಪುರ ಘರಾಣೆಯ ಶಿಕ್ಷಣ ಗಳಿಸಿದರು.

ಪಂಚಾಕ್ಷರಿ ಸ್ವಾಮಿ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂಗೀತ ಉಪನ್ಯಾಸಕರಾಗಿ ನೇಮಕಗೊಂಡರು. 1953ರಿಂದ ಆಕಾಶವಾಣಿಯ ’ಎ’ ಶ್ರೇಣಿಯ ಕಲಾವಿದರಾಗಿ ರಾಷ್ಟ್ರೀಯಜಾಲದಲ್ಲಿ, ದೂರದರ್ಶನದಲ್ಲಿ, ಮುಂಬಯಿ, ಕೋಲ್ಕತ್ತ, ಪುಣೆ ಮುಂತಾದೆಡೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಅಮೆರಿಕಾ, ಯೂರೋಪ್ ಮಂತಾದೆಡೆ ವಿದೇಶ ಪ್ರವಾಸ ಮಾಡಿದರು. ಹಲವಾರು ಅಕಾಡಮಿಗಳ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ದೇಶವಿದೇಶಗಳಲ್ಲಿ ಅಪಾರ ಶಿಷ್ಯವರ್ಗ ಗಳಿಸಿದ್ದರು. 

ನಿರ್ಮಲ ಜಯನಂದಯ್ಯ, ಎ.ಯು.ಪಾಟೀಲ್, ಮೀರಾಗುಂಡಿ, ಮೃತ್ಯುಂಜಯ ಅಗಡಿ, ನಾಗರಾಜ ಹವಾಲ್ದಾರ್‌ ಪಂಚಾಕ್ಷರಿ ಸ್ವಾಮಿ ಅವರ ಪ್ರಮುಖ ಶಿಷ್ಯರು. 

ಪಂಚಾಕ್ಷರಿ ಸ್ವಾಮಿ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾತಿಲಕ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರಕಾರದ ಪ್ರತಿಷ್ಠಿತ ಕನಕಪುರಂದರ ಪ್ರಶಸ್ತಿ ಸೇರಿದಂತೆ ಅನೇಜ ಗೌರವಗಳು ಸಂದಿದ್ದವು.

ಪಂಚಾಕ್ಷರಿ ಸ್ವಾಮಿ ಮತ್ತೀಗಟ್ಟಿ ಅವರು 2013ರ ಅಕ್ಟೋಬರ್ 4ರಂದು ಈ ಲೋಕವನ್ನಗಲಿದರು.

On the birth anniversary of great musician Pandit Panchakshari Swamy Mattigatti

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ