ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಜೇಂದ್ರಸಿಂಗ್ ಬಾಬು


 ಎಸ್. ವಿ. ರಾಜೇಂದ್ರಸಿಂಗ್ ಬಾಬು


ಎಸ್. ವಿ. ರಾಜೇಂದ್ರಸಿಂಗ್ ಬಾಬು ಕನ್ನಡ ಚಿತ್ರರಂಗದ ಮಹಾನ್ ಸಾಹಸಿ ಪ್ರತಿಭಾವಂತ  ನಿರ್ದೇಶಕ ಮತ್ತು ನಿರ್ಮಾಪಕ.

ಎಸ್. ವಿ. ರಾಜೇಂದ್ರಸಿಂಗ್ ಬಾಬು 1952ರ ಅಕ್ಟೋಬರ್ 22ರಂದು ಜನಿಸಿದರು. 

ರಾಜೇಂದ್ರಸಿಂಗ್ ಬಾಬು ಅವರನ್ನು ನೆನೆಯುವಾಗ ಅವರ ತಂದೆಯವರಾದ ಎಸ್. ವಿ. ಶಂಕರಸಿಂಗ್ ಮತ್ತು ಬಿ. ವಿಠ್ಠಲಾಚಾರ್ಯ ಅವರು ಸ್ಥಾಪಿಸಿದ  ಪ್ರಸಿದ್ಧ ಸಂಸ್ಥೆ ‘ಮಹಾತ್ಮ ಪಿಕ್ಚರ್ಸ್’ ಅನ್ನು ನೆನೆಯಲೇಬೇಕು.  1946ರಲ್ಲಿ ಪ್ರಾರಂಭವಾದ ಈ ಸಂಸ್ಥೆ ವಜ್ರಮಹೋತ್ಸವವನ್ನೂ ದಾಟಿ ರಾಜೇಂದ್ರಸಿಂಗ್ ಬಾಬು ಅವರ ನಾಯಕತ್ವದಲ್ಲಿ ಇಂದೂ ಮುನ್ನಡೆದು ನೂರಕ್ಕೆ ಸಮೀಪದ ಸಂಖ್ಯೆಯಷ್ಟು ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದೆ. ಡಾ. ರಾಜಕುಮಾರ್ ಸಹಾ ಬೇಡರ ಕಣ್ಣಪ್ಪಗಿಂತ ಮುಂಚಿಂತವಾಗಿಯೇ ಮಹಾತ್ಮ ಪಿಕ್ಚರ್ಸ್ ಅವರ ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದರು.  1947ರಲ್ಲಿ ‘ಕೃಷ್ಣ ಲೀಲ’ ಚಿತ್ರದಿಂದ ಪ್ರಾರಂಭಗೊಂಡಂತೆ, ಈ ಸಂಸ್ಥೆ ಸತತವಾಗಿ ಚಲನ ಚಿತ್ರಗಳನ್ನು ನೀಡುತ್ತಲೇ ಬಂದಿದೆ. ರಾಜ್ ಸಹೋದರ ವರದರಾಜ್, ಗಾಯಕ ಪಿ. ಕಾಳಿಂಗ ರಾವ್, ಹಾಸ್ಯ ನಟ ಬಾಲಕೃಷ್ಣ, ದಕ್ಷಿಣ ಭಾರತದ ಹೆಸರಾಂತ ನಾಯಕ ನಟ ಅರ್ಜುನ್ ಸರ್ಜಾ, ಜನಪ್ರಿಯ ಸಂಗೀತ ಜೋಡಿ ರಾಜನ್ ನಾಗೇಂದ್ರ, ಸಾಹಿತಿ ಹುಣಸೂರು ಕೃಷ್ಣಮೂರ್ತಿ ಇವರೆಲ್ಲ ಮಹಾತ್ಮ ಪಿಕ್ಚರ್ಸ್ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಪ್ರತಿಭೆಗಳು. ಈ ಸಂಸ್ಥೆ ಅಂದು ನಿರ್ಮಿಸಿದ ‘ಜಗನ್ಮೋಹಿನಿ’ ಚಿತ್ರ ಕನ್ನಡದಲ್ಲಿ ಶತದಿನೋತ್ಸವ ಕಂಡ ಪ್ರಪ್ರಥಮ ಚಲನಚಿತ್ರ.  ‘ಜಗನ್ಮೋಹಿನಿ’, ‘ನಾಗಕನ್ನಿಕಾ’ದಂತಹ ಕನ್ನಡ ಚಿತ್ರಗಳು ತಾಂತ್ರಿಕತೆಯ ಶ್ರೀಮಂತಿಕೆಯಲ್ಲಿ ಇತರ ಭಾಷೆಯ ಸಿನಿಮಾಗಳನ್ನು ಸರಿಗಟ್ಟುವಲ್ಲಿ ಮತ್ತು ಆ ಭಾಷೆಯ ಸಿನಿಮಾಗಳ ಪೈಪೋಟಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಪ್ರಮುಖ ಪಾತ್ರವಹಿಸಿದವು.

ಶಂಕರ ಸಿಂಗ್ ಅವರು ಎಷ್ಟರಮಟ್ಟಿಗಿನ ಕನ್ನಡ ಅಭಿಮಾನಿಗಳಾಗಿದ್ದರೆಂದರೆ ಇತರ ರಾಜ್ಯಗಳಲ್ಲಿ ಎಲ್ಲ ತರದ ಉತ್ತಮ ಸೌಲಭ್ಯಗಳು ಸಿಕ್ಕರೂ ಕನ್ನಡ ನಾಡಿನಲ್ಲೇ ಚಿತ್ರಣ ಮಾಡಬೇಕೆಂಬ ಛಲ ಹೊತ್ತವರು.  ಅವರ ಚಿತ್ರಗಳೆಲ್ಲ ಮೈಸೂರಿನ ನವಜ್ಯೋತಿ ಸ್ಟುಡಿಯೋದಲ್ಲೇ ನಿರ್ಮಿತವಾದವು.  ಅವರ ಈ ಸಾಧನೆಯ ದೆಸೆಯಿಂದ ಕನ್ನಡ ಚಿತ್ರಗಳಿಗೆ ಸಬ್ಸಿಡಿ ದೊರೆಯುವಂತಾಯಿತು.  ಊಟಿ, ಚಿಕ್ಕಮಗಳೂರು, ಮೇಕೆ ದಾಟುಗಳನ್ನು ಚಿತ್ರೀಕರಣಕ್ಕೆ ಉಪಯೋಗಿಸಲು ಪ್ರಥಮವಾಗಿ ಪ್ರಾರಭಮಾಡಿದವರೂ ಶಂಕರಸಿಂಗ್ ಅವರೆ!  ಶಂಕರ ಸಿಂಗ್ ಅವರ ಪತ್ನಿ ಪ್ರತಿಮಾ ದೇವಿ ಅವರು, ಅಂದಿನ ದಿನದ ಸೌಂದರ್ಯ ಮತ್ತು ಪ್ರತಿಭೆಗಳು ಮೇಳೈಸಿದ ಪ್ರಸಿದ್ಧ ಚಲನಚಿತ್ರ ತಾರೆ.

ಹೀಗೆ ಸಿನಿಮಾ ವಾತಾವರಣದಲ್ಲಿ ಬೆಳೆದ ಎಸ್.ವಿ. ರಾಜೇಂದ್ರಸಿಂಗ್ ಬಾಬು ಮುಂದೆ ಸಿನಿಮಾ ನಿರ್ಮಾಣ, ನಿರ್ದೇಶನಗಳ ಮೂಲಕ ತಂದೆಯವರ ಕಾಯಕವನ್ನು ಸಮರ್ಥವಾಗಿ ಮುಂದುವರೆಸಿದರು. ಮನೆಯವರಿಗೆ ಹುಡುಗ ಡಾಕ್ಟರ್ ಆಗಲಿ ಎಂಬ ಆಶಯವಿದ್ದರೂ ವಂಶದಲ್ಲಿದ್ದ ಕಲೆಯವಾಹಿನಿ ಬಾಬು ಅವರನ್ನು ಅತ್ತಲೇ ಸೆಳೆದಿತ್ತು.  ಯಾರೂ ಕಾಣದಿದ್ದ ಅಜ್ಞಾತ ಸ್ಥಳಗಳಿಗೆ ಕ್ಯಾಮೆರಾ ಹೊತ್ತು ತಿರುಗುತ್ತಿದ್ದ ಬಾಬು ಸುಧಾ, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ಹಲವಾರು ಸುಂದರ ಸಚಿತ್ರ ಲೇಖನಗಳನ್ನು ಬರೆಯುತ್ತಿದ್ದರು.  ಈ ಕಲಾತ್ಮಕ ಚಿಂತನೆಗಳೇ ಕ್ರಮೇಣವಾಗಿ ಅವರನ್ನು ಚಿತ್ರರಂಗದ ಕಾಯಕದಲ್ಲೂ ತೊಡಗಿಸಿದವು.

ತಮ್ಮ ತಂದೆಯವರೊಂದಿಗೆ ‘ನಾಗಕನ್ಯೆ’ ಚಿತ್ರದ ಮೂಲಕ ನಿರ್ದೇಶನ ಪ್ರಾರಂಭಿಸಿದ ಬಾಬು ಮುಂದೆ  ‘ನಾಗರ ಹೊಳೆ’, ‘ಕಿಲಾಡಿ ಜೋಡಿ’, ‘ಬಂಧನ’, ‘ಅಂತ’, ‘ಭರ್ಜರಿ ಭೇಟೆ’, ‘ಮುತ್ತಿನ ಹಾರ’, ‘ಮುಂಗಾರಿನ ಮಿಂಚು’, ‘ಸಿಂಹದ ಮರಿ ಸೈನ್ಯ’, ‘ಹೂವು ಹಣ್ಣು’, ‘ಹಿಮ ಪಾತ’, ‘ಮಹಾ ಕ್ಷತ್ರಿಯ’, ‘ಹಿಮಪಾತ’  ಮುಂತಾದ ಭರ್ಜರಿ ಚಿತ್ರಗಳನ್ನು ಕನ್ನಡದಲ್ಲಿ ನಿರ್ಮಿಸಿ ನಿರ್ದೇಶಿಸಿದರು.  ಅದರಲ್ಲೂ ‘ನಾಗರಹೊಳೆ’ಯಲ್ಲಿ ಮಕ್ಕಳೊಡನೆ ಪ್ರಾಣಿ ಪರಿಸರಗಳನ್ನು ಮೂಡಿಸಿದ ಬಗೆ, ‘ಬಂಧನ’ ಚಿತ್ರದಲ್ಲಿ ಅವರು ನಿರೂಪಿಸಿದ ವಿಷ್ಣುವರ್ಧನ – ಸುಹಾಸಿನಿ ಜೋಡಿಯ ಪಾತ್ರಗಳು, ಅಂತ ಚಿತ್ರದಲ್ಲಿ ಅಂಬರೀಶ್ ಅವರನ್ನು ಕನ್ವರ್  ಆಗಿಸಿದ ರೀತಿ ಕನ್ನಡ ಜನತೆ ಮರೆಯುವಂತೆಯೇ ಇಲ್ಲ.  ‘ಮುತ್ತಿನಹಾರ’ದಂತಹ ಚಿತ್ರಗಳು ಯಶಸ್ವಿಯಾಗದಿದ್ದರೂ ಅವರನ್ನು ಕಲಾತ್ಮಕ ಚಿತ್ರಗಳ ರಾಷ್ಟ್ರೀಯ ಪ್ರಶಸ್ತಿ ಪಡೆಯುವವರ ಸಾಲಿನಲ್ಲಿ ಬೆಳಗಿಸಿತು.  ‘ಮುಂಗಾರಿನ ಮಿಂಚು’ವಿನ ಅವರ ಮಿಂಚಿನ ಪ್ರತಿಭೆಯೂ ಮೆಲುಕು ಹಾಕುವಂತದ್ದು.   ಪುಟ್ಟಣ್ಣ ಕಣಗಾಲ್, ಸಿದ್ಧಲಿಂಗಯ್ಯ, ದೊರೈ-ಭಗವಾನ್ ಅವರಂತೆ, ಕನ್ನಡದ ಪ್ರಸಿದ್ಧ ಕಾದಂಬರಿಗಳನ್ನು ಸುಂದರ  ಚಲನಚಿತ್ರಗಳಾಗಿ ಮಾರ್ಪಡಿಸಿದ ರಾಜೇಂದ್ರ ಸಿಂಗ್ ಬಾಬು ಅವರ ಕಾರ್ಯ ಅತ್ಯಂತ ಶ್ಲಾಘನೀಯವಾದದ್ದು.  ಅವರು ಕನ್ನಡದ ಜೊತೆಗೆ ತಮಿಳು, ತೆಲುಗು, ಹಿಂದಿ ಚಿತ್ರರಂಗಗಳಲ್ಲೂ ಸೋಲು ಗೆಲುವುಗಳ ಮಿಶ್ರ ಫಲದ ಅನುಭವದೊಂದಿಗೆ ಹಲವು   ನಿರ್ಮಾಣ-ನಿರ್ದೇಶನಗಳನ್ನು ಮಾಡಿದ್ದಾರೆ.  ಕನ್ನಡದಲ್ಲಿ ಸುಮಾರು 35 ಚಿತ್ರಗಳು, ಹಿಂದಿಯಲ್ಲಿ 8, ತೆಲುಗಿನಲ್ಲಿ 7 ಚಿತ್ರಗಳನ್ನು ಬಾಬು ಮಾಡಿದ್ದಾರೆ. 

ದುರದೃಷ್ಟವಶಾತ್ ಸಿನಿಮಾರಂಗ ಯಶಸ್ಸನ್ನು ಓಲೈಸುವಷ್ಟು ಸೋಲನ್ನು ಸಹನೀಯವಾಗಿರಿಸುವುದಿಲ್ಲ!  ಈ ಗಾಳಿಗೆ ಎಸ್. ವಿ. ರಾಜೇಂದ್ರಸಿಂಗ್ ಬಾಬು ಅವರು  ಕೂಡ ಹೊರತಾಗಲಿಲ್ಲ.  ಅವರ ‘ಮುತ್ತಿನಹಾರ’ದಂತ ಅದ್ಧೂರಿ ಚಿತ್ರ ಕೂಡ ಮಾರುಕಟ್ಟೆಯಲ್ಲಿ ಅಪಾರ ಸೋಲು ಅನುಭವಿಸಿತು. ಇದೇ ಜಾಡಿನಲ್ಲಿ ಅವರ ಮತ್ತಷ್ಟು ಚಿತ್ರಗಳು ನಡೆದು ಅವರನ್ನು ಆರ್ಥಿಕವಾಗಿ ಮತ್ತಷ್ಟು ಸಂಕಷ್ಟಗಳಿಗೆ ನೂಕುವಂತೆ ಮಾಡಿದವು. ಅವರ ಮಗ ಆದಿತ್ಯನನ್ನು ಚಲನಚಿತ್ರರಂಗದಲ್ಲಿ ನಾಯಕನಟನಾಗಿ ಸ್ಥಾಪಿಸುವ ಅವರ ಅಭೀಷ್ಟೆಗಳು ಕೂಡ ಪೂರೈಸಲಿಲ್ಲ. ಇಷ್ಟಾದರೂ ಎದೆಗುಂದದೆ ಆಗಾಗ್ಗೆ ಉತ್ತಮ ಪ್ರಯತ್ನಗಳನ್ನು ಮಾಡುತ್ತಿರುವ ಅವರ ಎದೆಗಾರಿಕೆಯನ್ನು ಮೆಚ್ಚಲೇಬೇಕು.  ಪೌರಾಣಿಕ ಚಿತ್ರಗಳನ್ನು ಹೊರತುಪಡಿಸಿದರೆ ಎಸ್.ವಿ.ರಾಜೇಂದ್ರಸಿಂಗ್ ಬಾಬು ಎಲ್ಲ ಶೈಲಿಯ ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ ಎಂದು ಹೇಳಬಹುದು. ಬಾಂಡ್ ಶೈಲಿಯ ಚಿತ್ರ, ಮಕ್ಕಳ ಚಿತ್ರ, ಸಾಂಸಾರಿಕ ಚಿತ್ರಗಳಲ್ಲಿ ಕೈಯಾಡಿಸಿರುವ ಸಿಂಗ್ ಬಾಬು ತಾನು ಹಾಸ್ಯ ಚಿತ್ರಗಳನ್ನೂ ನಿರ್ದೇಶಿಸಬಲ್ಲೆ ಎಂದು ಸಾಬೀತುಪಡಿಸಿದ್ದಾರೆ.  ‘ಕುರಿಗಳು ಸಾರ್ ಕುರಿಗಳು’, ‘ಕೋತಿಗಳು ಸಾರ್ ಕೋತಿಗಳು’, ‘ಕತ್ತೆಗಳು ಸಾರ್ ಕತ್ತೆ’ಗಳು ಚಿತ್ರದ ಮೂಲಕ ಅವರಲ್ಲಿನ ಹಾಸ್ಯ ನಿರ್ದೇಶಕ ಹೊರಬಿದ್ದಿದ್ದ. ಈ ಚಿತ್ರಗಳಲ್ಲಿ ರಮೇಶ್, ಎಸ್.ನಾರಾಯಣ್, ಮೋಹನ್, ಕೋಮಲ್‌ಕುಮಾರ್ ಮೊದಲಾದ ಕಲಾವಿದರ ಪ್ರತಿಭೆಯನ್ನು ಬಾಬು ಸಮರ್ಥವಾಗಿ ಬಳಸಿಕೊಂಡಿದ್ದರು.  ವಿವಿಧ ರೀತಿಯ ಚಿತ್ರಕತೆಗಳನ್ನು ಹೆಕ್ಕಿ ಹೊರತೆಗೆದು ಅದನ್ನು ಶ್ರೀಮಂತವಾಗಿ ಹೊಸರೀತಿಯಲ್ಲಿ ಮೂಡಿಸಲೆತ್ನಿಸುವ ಅವರ ಪರಿಶ್ರಮ ಚಿತ್ರರಂಗದಲ್ಲಿ ಅಪೂರೂಪವೆನಿಸುವಂತದ್ದು. 

ಎಸ್. ವಿ. ರಾಜೇಂದ್ರಸಿಂಗ್ ಬಾಬು ಅವರ ಸಹೋದರಿ ವಿಜಯಲಕ್ಷ್ಮಿಸಿಂಗ್ ಅವರು ಸಹಾ ರಾಜೇಂದ್ರಸಿಂಗ್ ಬಾಬು ಅವರ ಜೊತೆ ಮಹಾತ್ಮ ಲಾಂಛನದ ದೀಪವನ್ನು ಬೆಳಗಿಸುವ ಕಾರ್ಯದಲ್ಲಿ ನಿರಂತರವಾಗಿ ಅವರ ಜೊತೆಗಿದ್ದಾರೆ.  ಅವರ ಸಹೋದರ ಸಂಗ್ರಾಮ್ ಸಿಂಗ್ ಕೂಡಾ ಹಲವು ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದರು.  ಬಾಬು ಅವರು ಪ್ರಜಾವಾಣಿಯಲ್ಲಿ ತಮ್ಮ ಚಲನಚಿತ್ರ ಜೀವನದ ನೂರೊಂದು ನೆನಪುಗಳನ್ನು ಧಾರಾವಾಹಿಯಾಗಿ ಹಂಚಿಕೊಂಡಿದ್ದಾರೆ.  ಅದು ಪುಸ್ತಕವಾಗಿ ಸಹಾ ಹೊರಬಂದಿದೆ.  ಅವರು ಕರ್ನಾಟಕ  ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.  

ಎಸ್.ವಿ.ರಾಜೇಂದ್ರಸಿಂಗ್ ಬಾಬು ಮತ್ತು ಅವರ ಮಹಾತ್ಮ ಸಂಸ್ಥೆ ಇನ್ನೂ ಹಲವಾರು ವರ್ಷ ಉತ್ತಮ ಚಿತ್ರಗಳನ್ನು ನಿರ್ಮಿಸುತ್ತಿರಲಿ, ಉತ್ತಮ ಯಶಸ್ಸು ಅವರನ್ನು ಅರಸಿ ಬರುತ್ತಿರಲಿ, ಕನ್ನಡದ ಚಲನಚಿತ್ರ  ಪ್ರೇಕ್ಷಕರು ಅವರನ್ನು ನಿರಂತರವಾಗಿ ಬೆಂಬಲಿಸಲಿ ಎಂದು ಆಶಿಸುತ್ತಾ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳೋಣ.

On the birth day of our talented Director and Producer S.V.Rajendra Singh Babu 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ