ಕೆ. ವೆಂಕಟರಾಜು
ಕೆ. ವೆಂಕಟರಾಜು
ಕೃಷ್ಣಮೂರ್ತಿ ವೆಂಕಟರಾಜು ಕನ್ನಡ ರಂಗಭೂಮಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಹಿರಿಯರು.
ಕೆ. ವೆಂಕಟರಾಜು ಅವರು 1949ರ ನವೆಂಬರ್ 26ರಂದು ಜನಿಸಿದರು. ಮೂಲತಃ ಚಾಮರಾಜನಗರದವರಾದ ವೆಂಕಟರಾಜು ಬಹುತೇಕವಾಗಿ ತಾವಿರುವ ಜಾಗದಲ್ಲೇ ಸಾಂಸ್ಕೃತಿಕ ಲೋಕವನ್ನು ಬರಮಾಡಿಕೊಂಡು ಅದನ್ನು ಅಲ್ಲೇ ಬೆಳೆಸಿ ಇತರೆಡೆಗಳಿಗೂ ಪಸರಿಸಿದವರು. ಬಿ.ಎಸ್ಸಿ ಪದವಿಯವರೆಗಿನ ಅವರ ವಿದ್ಯಾಭ್ಯಾಸ ನಡೆದದ್ದು ಚಾಮರಾಜನಗರದಲ್ಲೇ.
ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗಸ್ಥರಾಗಿದ್ದ ವೆಂಕಟರಾಜು 2007ರಲ್ಲಿ ನಿವೃತ್ತರಾದರು.
ವೆಂಕಟರಾಜು ಅವರಿಗೆ ಕಾಲೇಜು ದಿವಸದಿಂದಲೂ ನಾಟಕಗಳಲ್ಲಿ ಆಸಕ್ತಿ. ಓದುವ ದಿನಗಳಲ್ಲಿಯೂ ಮೈಸೂರಿನ ಮಹಾರಾಜಾ ಕಾಲೇಜು ನಡೆಸುತ್ತಿದ್ದ ಪ್ರಸಿದ್ಧ ನಾಟಕೋತ್ಸವಗಳಲ್ಲಿ ಮತ್ತು ಇತರೆಡೆಗಳಲ್ಲಿ ತಮ್ಮ ಕಾಲೇಜು ತಂಡದೊಡನೆ ಬಂದು ಭಾಗವಹಿಸುತ್ತಿದ್ದರು. ವೆಂಕಟರಾಜು ಅವರು 1973ರಲ್ಲಿ ಕಟ್ಟಿದ 'ಶಾಂತಲಾ ಕಲಾವಿದರು' ರಂಗತಂಡ ಈಗಲೂ ಸಕ್ರಿಯವಾಗಿದೆ.
ವೆಂಕಟರಾಜು ಅವರ ಪುತ್ರಿ ಸಹಾ ರಂಗಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು ಸರ್ಕಾರಿ ಶಾಲೆಯಲ್ಲಿ ರಂಗಶಿಕ್ಷಕಿಯಾಗಿದ್ದಾರೆ. ಇತ್ತೀಚೆಗೆ ಅವರು ಸೀಮಿತ ಪ್ರೇಕ್ಷಕವರ್ಗಕ್ಕೆ 'ಶೂದ್ರ ತಪಸ್ವಿ'ಯನ್ನು ಪ್ರಸ್ತುತಪಡಿಸಿದರು.ವೆಂಕಟರಾಜು ಅವರ ಪುತ್ರರು ವಕೀಲರು. ಮಾತೃಹೃದಯಿ ಮತ್ತು ಸಾಂಸ್ಕೃತಿಕ ಆಸಕ್ತೆ ನಳಿನಿ ವೆಂಕಟರಾಜು ಅವರ ಪತ್ನಿ.
ವೆಂಕಟರಾಜು ಅವರ ಆಸಕ್ತಿಯ ಕ್ಷೇತ್ರಗಳು ಅಪಾರವಾದದ್ದು. ರಂಗಭೂಮಿಯಲ್ಲದೆ, ಬರಹ ಮತ್ತು ಓದು ಅವರ ಮತ್ತೊಂದು ಪ್ರಮುಖ ಆಸಕ್ತಿಯ ಕ್ಷೇತ್ರ. ಅವರ ಬರಹಗಳಲ್ಲಿ ರಜನಿ ಭಕ್ಷಿಯವರು ಬರೆದ 'ಬಾಪುಕುಟಿ'ಯ ಕನ್ನಡ ಅನುವಾದಕ್ಕೆ ಸಾಹಿತ್ಯ ಅಕಾಡೆಮಿ ಮತ್ತು ಕುವೆಂಪು ಭಾಷಾ ಭಾರತಿ ಬಹುಮಾನ ಸಂದಿದೆ. ರಂಗಭೂಮಿಯ ಕೊಡುಗೆಗಳಿಗಾಗಿ ವೆಂಕಟರಾಜು ಅವರಿಗೆ ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪುರಸ್ಕಾರ ಸಂದಿದೆ.
ಗ್ರಾಮೀಣ ಜನ ಮತ್ತು ಕೃಷಿಕ್ಷೇತ್ರದಲ್ಲಿನ ಜನರ ಬದುಕಿನ ಸಂಕಷ್ಟಗಳಿಗೆ ಕೆ. ವೆಂಕಟರಾಜು ಅವರದ್ದು ಸದಾ ತುಡಿಯುವ ಮನಸ್ಸು. ಸಮಾಜದ ಹಲವಾರು ಚಟುವಟಿಕೆಗಳು ಮತ್ತು ಪ್ರಗತಿಪರ ವಿಷಯಗಳಲ್ಲಿ ತಮ್ಮನ್ನು ಆಳವಾಗಿ ತೊಡಗಿಸಿಕೊಂಡಿದ್ದಾರೆ. ಇವರು ಧರ್ಮದರ್ಶಿಗಳಾಗಿರುವ 'ಪುನರ್ಚಿತ್' ಕಲಿಕಾ ಕೇಂದ್ರವು ಚಾಮರಾಜನಗರ ಜಿಲ್ಲೆಯ ನಾಗವಳ್ಳಿ ಗ್ರಾಮದಲ್ಲಿದೆ. ಪುನರ್ಚಿತ್ ತಂಡ ಗ್ರಾಮೀಣ ಯುವಜನರಿಗಾಗಿ ಹಲವು ತರಬೇತಿ ಕಾರ್ಯಾಗಾರಗಳನ್ನು ಆಯೋಜನೆ ಮಾಡುತ್ತದೆ. ಗ್ರಾಮೀಣ ಪ್ರದೇಶದಲ್ಲಿನ ಪ್ರವೃತ್ತಿ/ಒಲವು ಕುರಿತ ಕ್ರಿಯಾ ಸಂಶೋಧನೆಯನ್ನು ಮಾಡುತ್ತದೆ. ಪ್ರಾಯೋಗಿಕವಾಗಿ ಸಮಗ್ರ ಕಲಿಕಾ ಕಾರ್ಯಕ್ರಮ ವಿಸ್ತರಣೆ (ಔಟ್ರೀಚ್) ಮತ್ತು ಶಿಕ್ಷಣ ಕುರಿತ ಚಟುವಟಿಕೆಗಳ ವಕಾಲತ್ತು (ಅಡ್ವಕೆಸಿ) ವಹಿಸುತ್ತದೆ. ಪುನರ್ಚಿತ್ ತಂಡವು ಶೈಕ್ಷಣಿಕವಾಗಿ ತೊಡಗಿಸಿಕೊಂಡಿದ್ದು ಇಲ್ಲಿ ಕೃಷಿ, ಗ್ರಾಮೀಣ ಕಲ್ಯಾಣ, ಸಾಮಾಜಿಕ ಒಲವು ಮತ್ತು ಪ್ರಜಾಪ್ರಭುತ್ವದ ವಿಷಯಗಳನ್ನು ಬೋಧಿಸಲಾಗುತ್ತಿದೆ.
ಫೇಸ್ಬುಕ್ ಗಳಿಸಿಕೊಟ್ಟಿರುವ ಮಹತ್ವದ ಪರಿಚಯಗಳಲ್ಲಿ ಇತ್ತೀಚೆಗೆ ನನಗೆ ದೊರೆತ ವೆಂಕಟರಾಜು ಅವರ ಪರಿಚಯ ಅತ್ಯಂತ ಮಹತ್ವದ್ದು. ನಾನು ನಾಡಿನ ಯಾವುದೇ ಮಹಾನ್ ಹಿರಿಯರನ್ನು ನೆನಪು ಮಾಡಿಕೊಂಡು ಬರೆದಾಗ ವೆಂಕಟರಾಜು ಸಾರ್ ಅವರು ತಮ್ಮ ನೆನಪಿನಾಳದ ಓದಿನಿಂದ ಮತ್ತು ಅನುಭವಗಳಿಂದ ತೆರೆದಿಡುವ ವಿಷಯಗಳು ಅಪಾರ ಬೆರಗು ಮತ್ತು ಸಂತಸ ಹುಟ್ಟಿಸುತ್ತವೆ.
ಪೂಜ್ಯ ಕೆ. ವೆಂಕಟರಾಜು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಮತ್ತು ಹಾರ್ದಿಕ ಶುಭಹಾರೈಕೆಗಳು. ನಿಮ್ಮೊಡನಿರುವ ನಮ್ಮ ಭಾಗ್ಯ ಬಲುದೊಡ್ಡದು.
On the birthday of artiste, writer and activist Venkataraju Krishnamurty Sir
ಕಾಮೆಂಟ್ಗಳು