ಕಲ್ಪನಾ ನಾಗಾನಾಥ್
ಕಲ್ಪನಾ ನಾಗಾನಾಥ್ ನಮ್ಮ ನಾಡಿನ ಪ್ರಸಿದ್ಧ ರಂಗಗಾಯಕಿ ಮತ್ತು ಅಭಿನಯ ಕಲಾವಿದೆ.
ಕಲ್ಪನಾ ಅವರು 1957ರ ನವೆಂಬರ್ 26ರಂದು ಮಧ್ಯಪ್ರದೇಶದ ಬಾಲಾಘಾಟ್ ಎಂಬಲ್ಲಿ ಜನಿಸಿದರು. ತಂದೆ ರಾಘವೇಂದ್ರ ರಾವ್. ತಾಯಿ ಸರಳ. ಕಲ್ಪನಾ ಅವರ ವಿದ್ಯಾಭ್ಯಾಸ ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ನೆರವೇರಿತು. ಕಲ್ಪನಾ ಅವರು ಉದ್ಯೋಗ ಮಾಡಿದ್ದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ. ಪತಿ ನಾಗಾನಾಥ್ ಅವರು ಕೂಡಾ ಕಲ್ಪನಾ ಅವರಂತೆಯೇ ರಂಗ ಗಾಯನ ಮತ್ತು ಅಭಿನಯಗಳಲ್ಲಿ ಹೆಸರಾಗಿದ್ದರು.
ಕಲ್ಪನಾ ಅವರು ಕನ್ನಡ ಹವ್ಯಾಸಿ ರಂಗಭೂಮಿಯು ವಿಶ್ವದೆಲ್ಲೆಡೆಯ ಗಮನ ಸೆಳೆದ ಉಚ್ಛ್ರಾಯ ಕಾಲಘಟ್ಟದಲ್ಲಿ, 1978ರ ವರ್ಷದಲ್ಲಿ ಆ ವಿಸ್ಮಯ ರಂಗಲೋಕಕ್ಕೆ ಅಡಿಯಿರಿಸಿದರು. ಬೆನಕ, ಬೆನಕ ಮಕ್ಕಳ ನಾಟಕ ಕೇಂದ್ರ, ಸ್ಪಂದನ, ರಂಗಸಂಪದ, ಸೂತ್ರಧಾರ, ಸಂಕೇತ್, ಕಲಾಗಂಗೋತ್ರಿ ರಂಗನಿರಂತರ, ನಾಟ್ಯದರ್ಪಣ, ಅನೇಕ, ಸಂಚಾರಿ ಹಾಗು ಮೈಸೂರು ಬ್ಯಾಂಕಿನ ಸಾಂಸ್ಕೃತಿಕ ಪರಿಷತ್ತು ಮುಂತಾದ ರಂಗತಂಡಗಳ ಒಡನಾಟದಲ್ಲಿ ನಟನೆ ಹಾಗೂ ಸಂಗೀತಗಳೆರಡಲ್ಲೂ ಸಕ್ರಿಯರಾದರು. ಬಿ.ವಿ. ಕಾರಂತ್, ಪ್ರೇಮಾ ಕಾರಂತ್, ಬಿ.ಜಯಶ್ರೀ, ಆರ್. ನಾಗೇಶ್, ಸಿ.ಜಿ.ಕೃಷ್ಣಸ್ವಾಮಿ, ಟಿ.ಎಸ್. ನಾಗಾಭರಣ, ಶಂಕರ್ ನಾಗ್, ಬಿ.ಸುರೇಶ್, ಡಾ. ಬಿ.ವಿ.ರಾಜಾರಾಂ, ಸುರೇಶ್ ಆನಗಳ್ಳಿ, , ರಣಜಿತ್ ಕಪೂರ್, ಅಶೋಕ ಬಾದಿರದಿನ್ನಿ, ಸಿ.ಬಸವಲಿಂಗಯ್ಯ, ಎಸ್. ಸುರೇಂದ್ರನಾಥ್, ವಿಕ್ರಮ್ ಕಾಪಡಿಯ, ಚೆನ್ನಕೇಶವ ಮೂರ್ತಿ, ಎನ್. ಮಂಗಳ ಹಾಗೂ ಇತರ ಪ್ರಸಿದ್ಧ ರಂಗನಿರ್ದೇಶಕರ ಮಾರ್ಗದರ್ಶನದಲ್ಲಿ ರಂಗನಟನೆಯಲ್ಲಿ ಬೆಳೆದರು. ರಂಗಗಾಯನದಲ್ಲಿ ಇವರಿಗೆ ಸಂಗೀತ ನಿರ್ದೇಶನ ನೀಡಿದವರಲ್ಲಿ ಬಿ.ವಿ.ಕಾರಂತ್, ಸಿ.ಅಶ್ವತ್ಥ್, ಪಂ. ರಾಜೀವ್ ತಾರಾನಾಥ್, ಡಾ.ಚಂದ್ರಶೇಖರ ಕಂಬಾರ್, ಶ್ಯಾಮಲ.ಜಿ.ಭಾವೆ, ಸುಭಾಶ್ ಮೂಖಿಹಾಳ್ ಮುಂತಾದ ಮಹಾನ್ ಸಂಗೀತ ಸಂಯೋಜಕರಿದ್ದಾರೆ.
ಕಲ್ಪನಾ ಅವರು ರಂಗಗಾಯಕಿಯಾಗಿ ಮತ್ತು ರಂಗನಟಿಯಾಗಿ ಭಾಗವಹಿಸಿದ ನಾಟಕಗಳಲ್ಲಿ ಸತ್ತವರ ನೆರಳು, ಅಲೀಬಾಬ, ಜೋಕುಮಾರಸ್ವಾಮಿ, ಹಯವದನ, ತಬರನ ಕತೆ, ನಾಯಿ ಕತೆ, ಗೋಕುಲ ನಿರ್ಗಮನ, ನಾಗಮಂಡಲ, ಸಂಗ್ಯಾ ಬಾಳ್ಯ, ಘಾಶೀರಾಂ ಕೋತ್ವಾಲ್, ಇಸ್ಪೀಟು ರಾಜ್ಯ, ಸುಲ್ತಾನ್ ಟಿಪ್ಪು, ಕದಡಿದ ನೀರು, ದೊಡ್ಡಪ್ಪ, ಶೇಕ್ಸಪಿಯರ್ ಸ್ವಪ್ನ ನೌಕೆ, ಯಯಾತಿ, ಕಾಕನಕೋಟೆ, ಆಕಾಶ ಬುಟ್ಟಿ, ನೀನಾನಾದ್ರೆ ನಾನೀನೇನ, ರೋಮಿಯೊ ಜೂಲಿಯೆಟ್, ಸಂಕ್ರಮಣ, ಮುಖ್ಯಮಂತ್ರಿ, ಅರಹಂತ, ಮೈಮನಗಳ ನಡುವೆ.… ಹೀಗೆ ನೂರಕ್ಕೂ ಹೆಚ್ಚು ನಾಟಕಗಳಿವೆ. ಈ ನಾಟಕಗಳ ಮರುಪ್ರದರ್ಶನಗಳ ಸಂಖ್ಯೆ ಸಾವಿರಕ್ಕೂ ಹೆಚ್ಚಿವೆ.
ಕಲ್ಪನಾ ಅವರು ರಂಗಗಾಯಕಿಯಾಗಿ ಮತ್ತು ನಟಿಯಾಗಿ ಭಾಗವಹಿಸಿದ ಭಾರತದಲ್ಲಿ ಪ್ರದರ್ಶನಗೊಂಡ ಸಂಭ್ರಮಗಳಲ್ಲಿ 'ನಾಟಕ ಅಕಾಡೆಮಿ’ ಹಾಗೂ’ಕನ್ನಡ ಮತ್ತು ಸಂಸ್ಕೃತಿ’ ಇಲಾಖೆಯ ವತಿಯಿಂದ ನಡೆದ ಹಂಪಿ ಉತ್ಸವ, ದಸರಾ ಉತ್ಸವ, ತುಂಗೋತ್ಸವ, ’ನ್ಯಾಶನಲ್ ಸ್ಕೂಲ್ ಡ್ರಾಮ’ ವತಿಯಿಂದ ದೆಹಲಿ, ಹೈದರಾಬಾದ್, ಮುಂಬೈ, ಕೋಲ್ಕತ, ಚೆನ್ನೈ, ವಿಶಾಖಪಟ್ನಂ ಹೀಗೆ ಹಲವಾರು ಕಡೆಗಳಲ್ಲಿ ಕಂಡ ರಂಗ ಪ್ರದರ್ಶನಗಳು. ’ಈ ಟಿವಿ ಕನ್ನಡ ವಾಹಿನಿಗೆ ರಂಗಗೀತೆಗಳ ಪ್ರದರ್ಶನ ನೀಡಿದ ’ರಂಗವಿನಾಯಕ’ ಮುಂತಾದವು ಇವೆ. ಇವರು ಭಾಗವಹಿಸಿದ ಸಾಗರದಾಚೆಯ ಪ್ರದರ್ಶನಗಳಲ್ಲಿ ಅಮೇರಿಕದ 2008 ರ ’ಅಕ್ಕ’ ಸಮೇಳನದಲ್ಲಿ ಶಿಕಾಗೋದಲ್ಲಿ ’ಬೆನಕ-ರಂಗಧ್ವನಿ’ ತಂಡದಿಂದ ಟಿ.ಎಸ್. ನಾಗಾಭರಣರ ನೇತೃತ್ವದಲ್ಲಿ 'ಜೋಕುಮಾರಸ್ವಾಮಿ”; ಅಮೇರಿಕದ ಉದ್ದಗಲಕ್ಕೂ ಕೊಟ್ಟ 'ಆಹತ’ ಹಾಗೂ ’ಹಲೋ’ ನಾಟಕಗಳ ಪ್ರದರ್ಶನಗಳು ಹಾಗೂ ರಂಗಸಂಗೀತ ಶಿಬಿರಗಳು, ಲಂಡನ್ನಿನ ಕನ್ನಡ ಕೂಟದಲ್ಲಿ ರಂಗಗೀತೆಗಳ ಪ್ರದರ್ಶನ; 2009 ರಲ್ಲಿ ಅಮೇರಿಕದಲ್ಲಿ ಸಂಕೇತ್ ತಂಡದ ಎಸ್. ಸುರೇಂದ್ರನಾಥ್ ನಿರ್ದೇಶನದ ’ನೀನಾನಾದ್ರೆನಾನೀನೇನಾ’ ನಾಟಕದ 12 ಪ್ರದರ್ಶನಗಳು; 2011ರಲ್ಲಿ ಕಲಾಗಂಗೋತ್ರಿ ತಂಡದಿಂದ ಆಸ್ಟ್ರೇಲಿಯದ ಸಿಡ್ನಿ ಹಾಗೂ ಮೆಲ್ಬರ್ನ್ ನಲ್ಲಿ ನಾಟಕ ಹಾಗೂ ರಂಗಗೀತೆಗಳ ಕಾರ್ಯಕ್ರಮಗಳು; 2012ರಲ್ಲಿ ಕಲಾಗಂಗೋತ್ರಿ ತಂಡದಿಂದ ಸಿಂಗಪೂರ್ ನಲ್ಲಿ ನಾಟಕ ಹಾಗೂ ರಂಗಗೀತೆಗಳ ಪ್ರದರ್ಶನ; 2015 ರಲ್ಲಿ ಅಮೇರಿಕದಲ್ಲಿ ಕಲಾಗಂಗೋತ್ರಿ ತಂಡದ ಜೊತೆ ’ಮುಖ್ಯಮಂತ್ರಿ’ ನಾಟಕದ ಪ್ರದರ್ಶನಗಳು ಸೇರಿವೆ.
ಕಲ್ಪನಾ ಅವರು ಭಾಗವಹಿಸಿದ ಬ್ಯಾಂಕಿನ ಸಾಂಸ್ಕೃತಿಕ ತಂಡದೊಂದಿಗಿನ ಪ್ರದರ್ಶನಗಳಲ್ಲಿ ’ಸುಳಿ’, ’ನಾಯಿಕತೆ’, 'ದೊಡ್ಡಪ್ಪ’, ’ಕಣ್ಣಾ ಮುಚ್ಚಾಲೆ’, ’ಅಕ್ಷಯ’, 'ನಾಗಶೇಷ’, ’ಯಯಾತಿ’, ’ಮುಖಾಮುಖಿ’ ಮುಂತಾದ ನಾಟಕಗಳಿದ್ದು, ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್, ಪುಣೆ, ಹೀಗೆ ಹಲವಾರು ಕಡೆಗಳಲ್ಲಿ ನಡೆದ ಅಖಿಲ ಭಾರತ ಬ್ಯಾಂಕ್ ಉತ್ಸವಗಳ ಸ್ಪರ್ಧೆಗಳಲ್ಲಿ ಉತ್ತಮ ನಟಿ, ಗಾಯಕಿ ಹಾಗೂ ನಿರ್ದೇಶಕಿಯಾಗಿ ಹಲವಾರು ಬಾರಿ ಪ್ರಶಸ್ತಿ ಪಡೆದಿದ್ದು ಇವರ ಸವಿನೆನಪುಗಳಾಗಿವೆ.
ಕಲ್ಪನಾ ಅವರು ಅನೇಕ ಧ್ವನಿಸುರುಳಿಗಳು ಮತ್ತು ಡಿಸ್ಕುಗಳ ಯೋಜನೆಗಳಲ್ಲಿ ಧ್ವನಿಮೊಳಗಿಸಿದ್ದು, ಅವು ಬಿ.ವಿ.ಕಾರಂತರ ಸಂಯೋಜಿತ ರಂಗಗೀತೆಗಳ ’ಹಾರೋಣ ಬಾ’; ಡಾ. ಕಂಬಾರರ ’ಜೋಕುಮಾರಸ್ವಾಮಿ’; ಸಿ.ಅಶ್ವತ್ಥ್ ಸಂಯೋಜಿತ ’ನೇಸರ ನೋಡು’; ಬಿ.ವಿ.ಕಾರಂತರ ನಾಟಕಗಳ ಧ್ವನಿ ಸುರುಳಿ ’ಬಂದಾನೊ ಬಂದ ಸವಾರ- ಬಿ.ವಿ.ಕಾರಂತ’ ಮುಂತಾದವುಗಳಲ್ಲಿ ಕಂಗೊಳಿಸಿವೆ.
ಕಲ್ಪನಾ ಅವರು ಅನೇಕ ರಂಗಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮ ಶ್ರೀಮಂತ ರಂಗಾನುಭವವನ್ನು ನೀಡಿದ್ದಾರೆ. ಇವುಗಳಲ್ಲಿ ದೆಹಲಿ ಹಾಗೂ ಕರ್ನಾಟಕದಾದ್ಯಂತ ರಂಗಗೀತೆ ಶಿಬಿರಗಳಲ್ಲಿ ಶಿಬಿರಾರ್ಥಿಗಳಿಗೆ ತರಬೇತಿ, ಅಮೇರಿಕದ ಲಾಸ್ ಏಂಜಿಲಿಸ್ ಹಾಗೂ ನ್ಯೂಜೆರ್ಸಿಯಲ್ಲಿ ರಂಗಗೀತೆಗಳ ಶಿಬಿರ ಮುಂತಾದವು ಸೇರಿವೆ.
ಕಲ್ಪನಾ ಅವರು ಕಿರುತೆರೆಯಲ್ಲಿ ಸಿಹಿ ಕಹಿ, ಮಾಯಾಮೃಗ, ಮನ್ವಂತರ, ಮುಕ್ತ, ಮಳೆಬಿಲ್ಲು, ಕತೆಗಾರ, ಕಣ್ಣುಗಳು, ಗರ್ವ, ಮುಗಿಲು ಮುಂತಾದ ಧಾರಾವಾಹಿಗಳಲ್ಲಿ ಎಚ್.ಎಮ್.ಕೆ ಮೂರ್ತಿ, ಟಿ. ಎನ್.ಸೀತಾರಾಂ, ಪಿ.ಶೇಷಾದ್ರಿ, ನಾಗೇಂದ್ರ ಶಾ, ಜಯಂತ್ ಎಮ್.ಎನ್, ಚೈತನ್ಯ ಕರೇಹಳ್ಳಿ ಮುಂತಾದ ಹೆಸರಾಂತ ನಿರ್ದೇಶಕರೊಂದಿಗೆ ಅಭಿನಯಿಸಿದ್ದಾರೆ. ಚಲನಚಿತ್ರಲೋಕದಲ್ಲಿ 'ಮಲಯ ಮಾರುತ’, ’ವಿಮೋಚನೆ’, ’ಕಾನೂರು ಹೆಗ್ಗಡತಿ’, ’ಅತಿಥಿʼ, ' ಬೈರಾಗಿʼ ಮುಂತಾದ ಚಿತ್ರಗಳಲ್ಲಿ ಎಸ್.ಎಲ್.ಎನ್.ಸ್ವಾಮಿ(ರವಿ), ಜಿ.ವಿ ಅಯ್ಯರ್, ಟಿ.ಎಸ್.ನಾಗಾಭರಣ, ಗಿರೀಶ್ ಕಾರ್ನಾಡ್, ಪಿ. ಶೇಷಾದ್ರಿ ಮುಂತಾದ ಪ್ರಸಿದ್ಧ ನಿರ್ದೇಶಕರ ನಿರ್ದೇಶನದಲ್ಲಿ ನಟಿಸಿದ್ದಾರೆ. ’ವಿಮೋಚನೆ’ ಚಲನಚಿತ್ರಕ್ಕೆ ಹಾಗೂ ’ಶ್ರೀಮಾನ್ ಶ್ರೀ ಸಾಮಾನ್ಯ’ ಧಾರಾವಾಹಿಯ ಶೀರ್ಷಿಕ ಗೀತೆಗೆ ಹಿನ್ನೆಲೆ ಗಾಯನ ನೀಡಿದ್ದಾರೆ. 'ಚಿಗುರಿದ ಕನಸು' ಚಿತ್ರದಲ್ಲಿ ಕಂಠದಾನ ಮಾಡಿದ್ದಾರೆ.
ಕಲ್ಪನಾ ನಾಗಾನಾಥ್ ಅವರಿಗೆ 2008 ರಲ್ಲಿ ಹಿರಿಯ ರಂಗಕರ್ಮಿ 'ಸುವರ್ಣ ಕಮಲ ಪ್ರಶಸ್ತಿ ಪುರಸ್ಕೃತ ಸದಾನಂದ ಸುವರ್ಣ'ರ ಹೆಸರಿನಲ್ಲಿ ನಿಡಲಾಗುತ್ತಿರುವ ’ಸುವರ್ಣ ರಂಗ ಸಮ್ಮಾನ್’ ಪ್ರಶಸ್ತಿ ಸಂದಿದೆ. 2011 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸಂದಿದೆ. ಕಲ್ಪನಾ ಅವರು 2014ರಿಂದ 2017 ರವರೆಗೆ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆಯಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ಮಹಾನ್ ರಂಗಗಾಯಕಿ, ರಂಗಕಲಾವಿದೆ ಕಲ್ಪನಾ ನಾಗಾನಾಥ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday to our great theatre actress and singer Kalpana Naganath 🌷🙏🌷
ಕಾಮೆಂಟ್ಗಳು