ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚಿತ್ತರಂಜನ ದಾಸ್


 

ಚಿತ್ತರಂಜನ ದಾಸ್

ಚಿತ್ತರಂಜನ ದಾಸ್ ಭಾರತದ ಗಣ್ಯ ರಾಷ್ಟ್ರೀಯ ನಾಯಕರಲ್ಲಿ ಒಬ್ಬರು. 

ಚಿತ್ತರಂಜನ ದಾಸ್ 1870ರ ನವೆಂಬರ್ 5 ರಂದು ಜನಿಸಿದರು. ಬ್ರಹ್ಮಸಮಾಜದವರಾಗಿದ್ದ ಅವರ ತಂದೆ ಭುವನ ಮೋಹನದಾಸ್ ಅವರು ಕಲ್ಕತ್ತ ಉಚ್ಚ ನ್ಯಾಯಾಲಯದ ಖ್ಯಾತ ವಕೀಲರಾಗಿದ್ದರು.  ಬೌದ್ಧಿಕ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲೂ ಆಸಕ್ತರಾಗಿದ್ದು ತುಂಬಾ ಧಾರಾಳ ಪ್ರವೃತ್ತಿಯವರಾಗಿದ್ದ ಭುವನಮೋಹನದಾಸರು ತಮ್ಮ ಕೊನೆಗಾಲದಲ್ಲಿ ದಿವಾಳಿಯಾದರು. ಚಿತ್ತರಂಜನದಾಸರ ರಾಷ್ಟ್ರೀಯ ಭಾವನೆಗಳಿಗೆ ಸ್ಫೂರ್ತಿ ನೀಡಿದವರು ಅವರ ತಂದೆ. 

1885ರಲ್ಲಿ ಚಿತ್ತರಂಜನದಾಸರು ಖಾಸಗಿಯಾಗಿ ಪರೀಕ್ಷೆಗೆ ಕುಳಿತು ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರೆಸಿಡೆನ್ಸಿ ಕಾಲೇಜು ಸೇರಿ ಪದವಿ ಗಳಿಸಿದರು (1890). ಅನಂತರ ಇಂಗ್ಲೆಂಡಿಗೆ ಐ.ಸಿ.ಎಸ್. ಪರೀಕ್ಷೆಗಾಗಿ ಹೋದರು. ಅದರಲ್ಲಿ ಆಯ್ಕೆ ಹೊಂದಲಿಲ್ಲವಾಗಿ 1894ರಲ್ಲಿ ಬ್ಯಾರಿಸ್ಟರ್ ಆದರು. ಪಾಶ್ಚಾತ್ಯ ಸಾಹಿತ್ಯ, ಮತಧರ್ಮ, ದರ್ಶನ ಮುಂತಾದವುಗಳಲ್ಲಿ ಆಸಕ್ತಿ ತಳೆದಿದ್ದ ಚಿತ್ತ ರಂಜನ ದಾಸರು ಬ್ರಹ್ಮಸಮಾಜ ಕುರಿತ ಗ್ರಂಥಗಳನ್ನೂ ವೈಷ್ಣವ ಸಾಹಿತ್ಯವನ್ನೂ ರಾಮಕೃಷ್ಣ ಪರಮಹಂಸರ ಬೋಧನೆಗಳನ್ನೂ ವಿವೇಕಾನಂದರ ಕೃತಿಗಳನ್ನೂ ವಿಶೇಷವಾಗಿ ಅಧ್ಯಯನ ಮಾಡಿದರು. 

ಬಂಗಾಲಿ ಕಾದಂಬರಿಕಾರರಾದ ಬಂಕಿಮ್ ಚಂದ್ರರು ಚಿತ್ತ ರಂಜನ ದಾಸರ ಮೇಲೆ ಪ್ರಭಾವ ಬೀರಿದರು.  ಸಾರ್ವಜನಿಕ ಸೇವೆ ಹಾಗೂ ಭಾಷಣ ಕಲೆಯಲ್ಲಿ ಅವರು  ಸುರೇಂದ್ರನಾಥ ಬ್ಯಾನರ್ಜಿಯವರಿಂದ ತರಬೇತು ಪಡೆದರು. ಇಂಗ್ಲೆಂಡಿನಲ್ಲಿದ್ದಾಗ ಅವರು ದಾದಾಭಾಯಿ ನವರೋಜಿಯವರ ಪರವಾಗಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದರು.

ಚಿತ್ತರಂಜನ ದಾಸರು 1894ರಲ್ಲಿ ಭಾರತಕ್ಕೆ ಹಿಂದಿರುಗಿ ಕಲ್ಕತ್ತ ಉಚ್ಚ ನ್ಯಾಯಾಲಯದಲ್ಲಿ ವಕೀಲಿ ಆರಂಭಿಸಿದರು. ಆದರೆ ಯಶಸ್ವಿಯಾಗಲಿಲ್ಲ. ಅನಂತರ ಅವರು ಒಳನಾಡಿನ ನ್ಯಾಯಾಲಯಗಳಲ್ಲಿ ಕ್ರಿಮಿನಲ್ ವಕೀಲರಾಗಿ ವೃತ್ತಿನಿರತರಾದರು. ಆದರೆ ಅಲ್ಲೂ ಅವರ ಸ್ಥಿತಿ ಉತ್ತಮವಾಗಲಿಲ್ಲ. ತಂದೆಯಂತೆ ಅವರೂ ದಿವಾಳಿ ತೆಗೆಯಬೇಕಾಯಿತು. 1907ರಲ್ಲಿ ಒಂದು ಮೊಕದ್ದಮೆಯಲ್ಲಿ ಚಿತ್ತ ರಂಜನ ದಾಸರ ಸಾಮರ್ಥ್ಯ ಪ್ರಕಟವಾಯಿತು. ಆದರೆ ಆ ಮೊಕದ್ದಮೆಯಲ್ಲೂ ಅವರು ಜಯ ಗಳಿಸಲಿಲ್ಲ. ಆದರೆ ಮರುವರ್ಷ ಆಲಿಪುರ ಬಾಂಬ್ ಮೊಕದ್ದಮೆಯಲ್ಲಿ ಆಪಾದಿತರಾಗಿದ್ದ ಅರವಿಂದ ಘೋಷರ ಪರವಾಗಿ ಅವರು ಮಾಡಿದ ವಾದ ಯಶಸ್ವಿಯಾಯಿತು. ರಾಜಕೀಯ ಕ್ಷೇತ್ರದಲ್ಲೂ ವಕೀಲರ ವಲಯಗಳಲ್ಲೂ ಚಿತ್ತರಂಜನ್ ದಾಸರ ಕೀರ್ತಿ ಬೆಳೆಯಿತು. 1910-11ರ ಢಾಕಾ ಪಿತೂರಿ ಮೊಕದ್ದಮೆಯಲ್ಲೂ ಚಿತ್ತ ರಂಜನ್ ದಾಸರು ಹೆಸರು ಗಳಿಸಿದರು. ಅಲ್ಲಿಂದ ಮುಂದೆ ಅವರ ಸಂಪಾದನೆ ಬೆಳೆಯ ತೊಡಗಿತು. ಸಿವಿಲ್, ಕ್ರಿಮಿನಲ್ ಕ್ಷೇತ್ರಗಳೆರಡರಲ್ಲೂ ಅವರು ಸಮರ್ಥರೆಂದು ಪ್ರಖ್ಯಾತರಾದರು. 1913ರ ವೇಳೆಗೆ ವೃತ್ತಿಯಲ್ಲಿ ಅವರು ಉನ್ನತರೆನಿಸಿದ್ದರು. ಅವರ ತಂದೆಯೂ ಅವರೂ ದಿವಾಳಿ ತೆಗೆದಿದ್ದರೂ ತಮ್ಮಿಬ್ಬರ ಕಾಲಾತೀತ ಸಾಲಗಳನ್ನು ಅವರು ಸಂಪೂರ್ಣವಾಗಿ ತೀರಿಸಿದರು. ಕಾನೂನಿನ ಪ್ರಕಾರ ಪಾವತಿಮಾಡಬೇಕಾಗಿರದಿದ್ದರೂ ಈ ಋಣಗಳನ್ನು ಪಾವತಿ ಮಾಡಿದ್ದು ಅವರ ಪ್ರಾಮಾಣಿಕತೆಗೆ ನಿದರ್ಶನ. ಇದರಿಂದ ಚಿತ್ತರಂಜನ್ ದಾಸರು ರಾಷ್ಟ್ರಾದ್ಯಂತ ಮೆಚ್ಚುಗೆ ಗಳಿಸಿದರು.

ಚಿತ್ತರಂಜನ ದಾಸರು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ರಾಷ್ಟ್ರಪ್ರೇಮಿಯಾಗಿದ್ದರು. ಅನುಶೀಲನ ಸಮಿತಿ ಎಂಬ ಕ್ರಾಂತಿಕಾರಿ ಸಂಸ್ಥೆಯೊಂದಿಗೆ ಅವರು ಸಂಬಂಧ ಇಟ್ಟುಕೊಂಡಿದ್ದರು. ಬಂಗಾಲ ವಿಭಜನೆಯ ವಿರುದ್ಧ ಹೋರಾಡಿದರು. ಸ್ವದೇಶಿ ಚಳುವಳಿಯಲ್ಲಿ ಪಾಲ್ಗೊಂಡರು. ಅವರು ಅಖಿಲಭಾರತ ರಾಜಕೀಯ ಚಳವಳಿ ಸೇರಿದ್ದು 1917ರಲ್ಲಿ. ರಾಜಕಾರಣ ಅವರಿಗೆ ಧರ್ಮವಾಗಿತ್ತು. ಪಾಶ್ಚಾತ್ಯರ ಅನುಕರಣೆಯನ್ನು ಅವರು ಒಪ್ಪುತ್ತಿರಲಿಲ್ಲ. 1918ರಲ್ಲಿ ಮುಂಬಯಿಯಲ್ಲಿ ನಡೆದ ಕಾಂಗ್ರೆಸ್ ವಿಶೇಷಾಧಿವೇಶನದಲ್ಲೂ ದೆಹಲಿಯಲ್ಲಿ ನಡೆದ ವಾರ್ಷಿಕಾಧಿವೇಶನದಲ್ಲೂ ಅವರು ಮಾಂಟೆಗೂ - ಚೆಮ್ಸ್‍ಫರ್ಡ್ ಸುಧಾರಣೆಗಳನ್ನು ವಿರೋಧಿಸಿದರು. ಅವರು ಪ್ರಾಂತೀಯ ಸ್ವಾಯತ್ತತೆಯನ್ನು ಪ್ರತಿಪಾದಿಸಿದರು. ಅವರು 1919ರಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಕುರಿತ ವಿಚಾರಣಾ ಸಮಿತಿಯ ಸದಸ್ಯರಾಗಿದ್ದರು.

1920ರಲ್ಲಿ ಗಾಂಧೀಜಿಯ ಅಸಹಕಾರ ಚಳವಳಿಯನ್ನು ಚಿತ್ತರಂಜನ್ ದಾಸರು ಒಪ್ಪಲಿಲ್ಲ. ಆದರೆ ಮೂರು ತಿಂಗಳುಗಳ ಅನಂತರ ಅದನ್ನೊಪ್ಪಿಕೊಂಡು ಗಾಂಧೀಜಿಯ ನಾಯಕತ್ವದಲ್ಲಿ ಚಳವಳಿಗೆ ಸಿದ್ಧರಾದರು. ಒಳ್ಳೆಯ ಸಂಪಾದನೆಯಿದ್ದ ವಕೀಲಿಯನ್ನು ಒಮ್ಮೆಗೇ ತ್ಯಜಿಸಿದರು. ಚಿತ್ತರಂಜನರ ಈ ಮಹಾತ್ಯಾಗಕ್ಕೆ ದೇಶವೇ ಮಾರುಹೋಯಿತು. 1921ರಲ್ಲಿ ಅವರನ್ನು ಕಾಂಗ್ರೆಸ್ ಅಧಿವೇಶನಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಬ್ರಿಟನ್ನಿನ ವೇಲ್ಸ್ ರಾಜಕುಮಾರನ ಭಾರತ ಭೇಟಿಯನ್ನು ಬಹಿಷ್ಕರಿಸಿದ್ದಕ್ಕಾಗಿ ಚಿತ್ತರಂಜನದಾಸರೂ ಅವರ ಪತ್ನಿ ಬಾಸಂತಿ ದೇವಿಯೂ ಮಗ ಚಿರ ರಂಜನರೂ ಸೋದರಿ ಊರ್ಮಿಳಾದೇವಿಯೂ ದಸ್ತಗಿರಿಗೆ ಒಳಗಾದರು. ಅವರು ಆರು ತಿಂಗಳ ಕಾರಾಗೃಹವಾಸ ಅನುಭವಿಸಬೇಕಾಯಿತು.

1822ರಲ್ಲಿ ಚಿತ್ತರಂಜನ ದಾಸರು ಗಯಾ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾದರು. ಚೌರಿ ಚೌರಾದ ಹಿಂಸಾತ್ಮಕ ಘಟನೆಯಿಂದ ನೊಂದು ಗಾಂಧಿಯವರು ಅಸಹಕಾರ ಚಳುವಳಿಯನ್ನು ಹಿಂದೆಗೆಕೊಂಡಾಗ ದೇಶದಲ್ಲೆಲ್ಲ ನಿರಾಸೆ ಹಬ್ಬಿತ್ತು. ಆ ಸಮಯದಲ್ಲಿ ಚಿತ್ತ ರಂಜನ ದಾಸರು ಭಾರತೀಯ ರಾಜಕಾರಣಕ್ಕೆ ಹೊಸ ತಿರುವೊಂದನ್ನು ನೀಡಲು ಯತ್ನಿಸಿದರು. ವಿಧಾನ ಸಭೆಗಳನ್ನು ಪ್ರವೇಶಿಸಿ ಅಲ್ಲಿಂದ ವಿರೋಧ ವ್ಯಕ್ತಪಡಿಸಬೇಕೆಂದು ಸೂಚಿಸಿದರು. ಆದರೆ ಗಾಂಧಿಯವರು ಇದನ್ನು ಒಪ್ಪಲಿಲ್ಲ. ಗಯಾ ಅಧಿವೇಶನದಲ್ಲಿ ಚಿತ್ತ ರಂಜನ ದಾಸರ ಸೂಚನೆ ಬಿದ್ದುಹೋಯಿತು. ಅವರು ಅಧ್ಯಕ್ಷತೆಗೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸಂಸ್ಥೆಯೊಳಗೆ ಸ್ವರಾಜ್ಯ ಪಕ್ಷವನ್ನು ಕಟ್ಟಿದರು. ಮೋತಿಲಾಲ್ ನೆಹರೂ, ಅಲಿ ಸಹೋದರರು, ಅಜ್ಮಲ್ ಖಾನ್, ವಿ.ಜೆ. ಪಟೇಲ್ ಮುಂತಾದವರು ಚಿತ್ತ ರಂಜನ ದಾಸರೊಂದಿಗೆ ಸೇರಿಕೊಂಡರು. 1923ರಲ್ಲಿ ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಸಮ್ಮತಿ ನೀಡಿತು. 1923ರಲ್ಲಿ ನಡೆದ ಚುನಾವಣೆಗಳಲ್ಲಿ ಸ್ವರಾಜ್ಯ ಪಕ್ಷದವರೂ ಬಂಗಾಲದಲ್ಲಿ ಮಹಾ ವಿಜಯ ಗಳಿಸಿದರು. ಸಭೆಯಲ್ಲಿ ಚಿತ್ತ ರಂಜನ ದಾಸರ ವಿರೋಧದಿಂದಾಗಿ ಸರ್ಕಾರಕ್ಕೆ ಸೋಲಾಯಿತು. ಅದು ಮಂಡಿಸಿದ ಆಯ-ವ್ಯಯಕ್ಕೆ ಒಪ್ಪಿಗೆ ದೊರಕಲಿಲ್ಲ. 1924ರಲ್ಲಿ ಸ್ವರಾಜ್ಯ ಪಕ್ಷದವರು ಕಲ್ಕತ್ತ ಕಾರ್ಪೊರೇಷನ್‍ನಲ್ಲಿ ಸ್ಥಾನ ಗಳಿಸಿದರು. ಚಿತ್ತ ರಂಜನ ದಾಸರು ಮೇಯರ್ ಆಗಿ ಒಳ್ಳೆಯ ಸಂಪ್ರದಾಯಗಳನ್ನು ಸ್ಥಾಪಿಸಿದರು. 1923 ಮತ್ತು 1924ರಲ್ಲಿ ಅವರು ಅಖಿಲಭಾರತ ಕಾರ್ಮಿಕ ಸಂಘ ಕಾಂಗ್ರೆಸಿನ ಅಧ್ಯಕ್ಷರೂ 1925ರಲ್ಲಿ ಬಂಗಾಲ ಪ್ರಾಂತೀಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು.

ನನಗೆ ಬೇಕಾದ ಜನತೆಯ ಸ್ವರಾಜ್ಯ, ಮೇಲಣ ವರ್ಗದವರ ಸ್ವರಾಜ್ಯವಲ್ಲ- ಎಂಬುದು ಅವರ ಧ್ಯೇಯವಾಕ್ಯವಾಗಿತ್ತು. ಅವರು ಭಾರತಕ್ಕೆ ಅಧಿರಾಜ್ಯ ದೊರಕಬೇಕೆಂದು ವಾದಿಸುತ್ತಿದ್ದರು. ರಾಷ್ಟ್ರ ಸ್ವಾತಂತ್ರ್ಯವನ್ನು ಸಂವಿಧಾನಬದ್ದ ಅಹಿಂಸಾತ್ಮಕ ವಿದಾನಗಳಿಂದ ಗಳಿಸಬೇಕೆಂಬುದು ಅವರ ಬಯಕೆಯಾಗಿತ್ತು. ಅವರು ಹಿಂದೂ ಮುಸ್ಲಿಮ್ ಏಕತೆಯ ಪ್ರತಿಪಾದಕರಾಗಿದ್ದರು. ಕೈಗಾರಿಕೆ ಮಾನವನನ್ನು ಯಂತ್ರವಾಗಿ ಪರಿವರ್ತನೆಗೊಳಿಸುತ್ತದೆಂಬುದೂ ಅವರ ಭಾವನೆಯಾಗಿತ್ತು. ದೇಶೀಯ ಭಾಷಾ ಮಾಧ್ಯಮದ ಮೂಲಕ ರಾಷ್ಟ್ರೀಯ ಶಿಕ್ಷಣ ದೊರಕಬೇಕೆಂದು ಅವರು ಹೇಳುತ್ತಿದ್ದರು. ಪಾಶ್ಚಾತ್ಯ ಶಿಕ್ಷಣದಿಂದ ಆತ್ಮಹೀನ ಸಂಸ್ಕೃತಿಯ ಬೆಳವಣಿಗೆಯಾಗುತ್ತಿದೆಯೆಂದು ಅವರಿಗೆ ದುಃಖವಾಗಿತ್ತು.

ಚಿತ್ತ ರಂಜನ ದಾಸರು ಒಳ್ಳೆಯ ಪ್ರಬಂಧಕಾರರೂ ಕವಿಯೂ ಆಗಿದ್ದರು. ಅವರ ಪ್ರಥಮ ಕವನ ಸಂಕಲನ ಮಾಲಂಚ 1895ರಲ್ಲಿ ಪ್ರಕಟವಾಯಿತು. ಮಾಲಾ, ಅಂತರ್ಯಾಮಿ, ಕಿಶೋರ್ - ಕಿಶೋರೀ, ಸಾಗರ ಸಂಗೀತ್ - ಇವು ಅವರ ಇತರ ಕವನ ಸಂಕಲನಗಳು. ಪತ್ರಿಕೋದ್ಯಮವೂ ಇವರಿಗೆ ಪ್ರಿಯವಾಗಿದ್ದ ಕ್ಷೇತ್ರ. ನಾರಾಯಣ ಬಂಗ್ಲಾರ್ ಕಥಾ - ಇವೆರಡೂ ಅವರು ಪ್ರಾರಂಭಿಸಿದ ಬಂಗಾಲಿ ಪತ್ರಿಕೆಗಳು. ಮೊದಲನೆಯದು ಸಾಹಿತ್ಯ ತ್ರೈಮಾಸಿಕ, ಎರಡನೆಯದು ಸಂಜೆಯ ಪತ್ರಿಕೆ. ಸ್ವರಾಜ್ಯ ಪಕ್ಷದ ಮುಖ ಪತ್ರವಾದ ಫಾರ್ವರ್ಡ್, ಕಲ್ಕತ್ತ ಕಾರ್ಪೊರೇಷನ್ನಿನ ಮುನಿಸಿಪಲ್ ಪತ್ರಿಕೆ ಅವರು ಪ್ರಾರಂಭಿಸಿದ ಇನ್ನೆರಡು ಪತ್ರಿಕೆಗಳು.

ಚಿತ್ತ ರಂಜನ ದಾಸರು ಮಹಾ ಉದಾರಿಯಾಗಿದ್ದರು. ತಮ್ಮ ಆಸ್ತಿಯನ್ನೆಲ್ಲ ದೇಶಸೇವೆಗಾಗಿ ದತ್ತಿಯಾಗಿ ಕೊಟ್ಟರು. 1925ರ ಜೂನ್ 16 ರಂದು ಚಿತ್ತ ರಂಜನ ದಾಸರು ಡಾರ್ಜಿಲಿಂಗಿನಲ್ಲಿ ತೀರಿಕೊಂಡರು. ದೇಶಬಂಧು ಎಂಬುದು ಜನ ಅವರಿಗೆ ಕೊಟ್ಟ ಪ್ರೀತಿಯ ಬಿರುದು.

Deshbandhu Chittaranjan Das

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ