ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಗನ್ನಾಥದಾಸರು


ಜಗನ್ನಾಥದಾಸರು


ಕನ್ನಡನಾಡಿನ ಪ್ರಮುಖ ಹರಿದಾಸರಲ್ಲಿ ಒಬ್ಬರಾದ ಜಗನ್ನಾಥದಾಸರು ಆಧ್ಯಾತ್ಮಿಕ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು. 

ಜಗನ್ನಾಥದಾಸರ ಕಾಲ 1728-1809. ಪುರಂದರದಾಸ, ವಿಜಯದಾಸ, ಗೋಪಾಲದಾಸ ಮತ್ತು ಜಗನ್ನಾಥದಾಸರನ್ನು ಒಟ್ಟಿಗೆ ದಾಸಚತುಷ್ಟಯರೆಂದು ಹೇಳುವುದುಂಟು. 

ಜಗನ್ನಾಥದಾಸರನ್ನು  ಅವರಿಗಿದ್ದ ಅಪರೋಕ್ಷ ಜ್ಞಾನದಿಂದ ರಂಗನೊಲಿದ ದಾಸ ಎಂದೂ ರಂಗೋಲೆ ಹಾಕುವ ಕಲಾ ಪರಿಣತಿಯಿದ್ದುದರಿಂದ ರಂಗೋಲಿದಾಸ ಎಂದೂ ಕರೆಯಲಾಗುತ್ತಿತ್ತು.
ಇವರು ಹುಟ್ಟಿದೂರು ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯಲ್ಲಿರುವ ಮಾನ್ವಿಯಿಂದ ಹದಿನೈದು ಕಿ.ಮೀ. ದೂರದಲ್ಲಿರುವ ಬ್ಯಾಬವಟ್ಟೆ. ಇವರು ಬಹುಕಾಲ ವಾಸವಾಗಿದ್ದುದು ಮಾನ್ವಿಯಲ್ಲಿ. ಇವರಿದ್ದ ಮನೆಯೇ ಈಗ ಇವರ ಗುಡಿಯಾಗಿದೆ. ಮಾನ್ವಿ ತಾಲ್ಲೂಕಿನಲ್ಲೂ ಧಾರವಾಡ ಜಿಲ್ಲೆಯ ಹಾವೇರಿಯಲ್ಲೂ ಇವರಿಗೆ ಸೇರಿದ ಇನ್ನೊಂದು ಮನೆ ಮತ್ತು ಜಮೀನು ಇದೆ. ಇವರು ಆ ಭಾಗಗಳಲ್ಲಿ ಸವಣೂರಿನ ಸತ್ಯಬೋಧ, ಮಾದನೂರಿನ ವಿಷ್ಣುತೀರ್ಥ ಮತ್ತು ರಿತ್ತಿಯ ಧೀರೇಂದ್ರತೀರ್ಥ ಇವರೊಂದಿಗೆ ಇರುತ್ತಿದ್ದರು.

ಜಗನ್ನಾಥದಾಸರ ಜೀವನ ಕಥೆಯೇ ಒಂದು ಪವಾಡದಂತಿದೆ. ಇವರ ಪೂರ್ವಶ್ರಮದ ಹೆಸರು ಶ್ರೀನಿವಾಸಾಚಾರ್ಯ. ಆಶುಕವಿತ್ವ ಶಕ್ತಿಯುಳ್ಳ ಇವರು ಮಂತ್ರಾಲಯದ ಶ್ರೀವರದೇಂದ್ರ ತೀರ್ಥಸ್ವಾಮಿಗಳಲ್ಲಿ ವಿದ್ಯಾಭ್ಯಾಸ ಮಾಡಿ ಶಾಸ್ತ್ರಪಾರಂಗತರಾದರು. ಅನಂತರ ಆಚಾರ್ಯಪಟ್ಟವನ್ನೂ ಏರಿದರು.

ಆ ಕಾಲದಲ್ಲಿ ಚೀಕಲಪರವಿ ವಿಜಯದಾಸರು ಹರಿದಾಸರಲ್ಲಿ ಹಿರಿಯರೆಂದೂ ಅಪರೋಕ್ಷ ಜ್ಞಾನಿಯೆಂದೂ ಪ್ರಸಿದ್ಧರಾಗಿದ್ದರೂ ಅವರ ವಿಚಾರದಲ್ಲಿ ಜಗನ್ನಾಥರಿಗೆ ತಾತ್ಸಾರ ಮತ್ತು ತಿರಸ್ಕಾರವಿತ್ತು. ವಿಜಯದಾಸರನ್ನು ಹಳಿದುದರ ಪರಿಣಾಮವಾಗಿ ಜಗನ್ನಾಥರು ಬಹುಕಾಲ ಉದರ ವ್ಯಾಧಿಯಿಂದ ನರಳಿದರು. ಅನಂತರ ಸ್ವಪ್ನದಲ್ಲಿ ಆದ ಶ್ರೀಹರಿಯ ಸೂಚನೆಯಂತೆ ವಿಜಯದಾಸರನ್ನು ಮರೆಹೊಕ್ಕರು. ವಿಜಯದಾಸರು ತನ್ನ ಶಿಷ್ಯ ಗೋಪಾಲದಾಸರಿಂದ ಜಗನ್ನಾಥದಾಸರ ಉದರ ರೋಗನಿವಾರಣೆ ಮಾಡಿಸಿದರು. ಅಷ್ಟೇ ಅಲ್ಲದೆ ನಲವತ್ತು ವರ್ಷಗಳಷ್ಟು ಆಯಸ್ಸನ್ನು ಆತನಿಗೆ ಧಾರೆಯೆರೆಸಿದರಂತೆ. 

ಗೋಪಾಲದಾಸರ ಸೂಚನೆಯ ಮೇರೆಗೆ ಜಗನ್ನಾಥದಾಸರು ಪಂಡರಪುರಕ್ಕೆ ಹೋಗಿ ಚಂದ್ರಭಾಗ ನದಿಯಲ್ಲಿ ಮಿಂದಾಗ ವಿಟ್ಠಲ ಎಂಬ ಅಂಕಿತವಿದ್ದ ಶಿಲೆ ದೈವದತ್ತವಾಗಿ ದೊರೆತು ಅಂದಿನಿಂದ ತಮ್ಮ ಪೂರ್ವಾಶ್ರಮದ ಹೆಸರನ್ನು ಕಿತ್ತುಹಾಕಿ ಜಗನ್ನಾಥದಾಸ ಎಂದು ಪ್ರಸಿದ್ಧರಾದರು.
ಈ ಅಂಕಿತದಿಂದ ಜಗನ್ನಾಥದಾಸರು ಅನೇಕ ಅಮೂಲ್ಯ ಕೃತಿಗಳನ್ನು ರಚಿಸಿದರು. 

ಜಗನ್ನಾಥದಾಸರ ಕೃತಿಗಳಲ್ಲಿ ಅತ್ಯಂತ ಪ್ರಮುಖವೂ ಜನಪ್ರಿಯವೂ ಆದುದು ಶ್ರೀಹರಿಕಥಾಮೃತಸಾರ. ಇದು ಭಾಮಿನೀ ಷಟ್ಪದಿಯಲ್ಲಿದ್ದು ಸಾವಿರಪದ್ಯಗಳ ಪ್ರಮೇಯ ಪುಂಜವಾದ ಮಹಾಗ್ರಂಥವೆನಿಸಿದೆ. ಇದಲ್ಲದೆ ಇವರು ಸಹಸ್ರಾರು ಸುವ್ವಾಲಿ, ಕೀರ್ತನೆ ಸುಳಾದಿಗಳನ್ನು ರಚಿಸಿದ್ದಾರೆ. ಈಗ ಸುಮಾರು ಐನೂರು ಸುವ್ವಾಲಿಗಳೂ ಇನ್ನೂರು ಸುಳಾದಿಗಳೂ ಉಪಲಬ್ಧವಿದೆ. ಈ ಕೃತಿಗಳಲ್ಲಿ ಇವರ ಪಾಂಡಿತ್ಯ ಚೆನ್ನಾಗಿ ವ್ಯಕ್ತವಾಗುತ್ತದೆ. ಒಂದು ಕಡೆ ಸಂಸ್ಕೃತ ಭೂಯಿಷ್ಠ ಶೈಲಿ ಮತ್ತೊಂದು ಕಡೆ ಸರಳ ಸುಂದರ ಶೈಲಿ ಈ ಎರಡೂ ಇವರ ಕೃತಿಗಳಲ್ಲಿವೆ. ಅಪೂರ್ವ ಪದಬಂಧ, ನಿರರ್ಗಳ ಶೈಲಿಯ ಓಟ, ಅಸಾಧಾರಣ ಶಾಸ್ತ್ರಜ್ಞಾನ, ವಿಷಯ ವೈವಿಧ್ಯ, ಆಳವಾದ ಭಕ್ತಿ, ಅರ್ಥ ಗಾಂಭೀರ್ಯ, ಸಿದ್ಧಾಂತದ ಸಮರ್ಥ ಪ್ರತಿಪಾದನೆಗಳಿಂದ ಇವರ ಕೃತಿಗಳು ತುಂಬಿವೆ. ಕವಿಯ ಪ್ರತಿಭೆ ಅಭ್ಯಾಸ ಜ್ಞಾನ ಮೇಧಾಶಕ್ತಿಗಳನ್ನು ಇಲ್ಲಿ ಚೆನ್ನಾಗಿ ಗುರುತಿಸಬಹುದು.

ಹರಿಕಥಾಮೃತಸಾರ ಕನ್ನಡ ನಾಡಿನಲ್ಲಿ ಅಲ್ಲದೆ ನೆರೆಯ ಪ್ರಾಂತ್ಯಗಳಲ್ಲೂ ತುಂಬ ಜನಪ್ರಿಯವಾಗಿದೆ. ಇದರ ಹತ್ತೊಂಬತ್ತು ವಿವಿಧ ಮುದ್ರಣಗಳಿವೆ. ಹಲವು ಅನುವಾದಗಳೂ ವ್ಯಾಖ್ಯಾನಗಳೂ ಇವೆ. ಸಂಸ್ಕೃತ ಭಾಷೆಯಲ್ಲಿ ಗ್ರಂಥಕ್ಕೆ ಟೀಕೆಯನ್ನು ರಚಿಸಲಾಗಿದೆ. ಮುಂದೆ ಇದು ಇಂಗ್ಲಿಷಿಗೂ ಭಾಷಾಂತರವಾಗಿದೆ.

ಜಗನ್ನಾಥದಾಸನ ರಂಗ ನಿನ್ನ ಕೊಂಡಾಡುವ, ದಾಸೋಹಂ ತವದಾಸೋಹಂ, ಶ್ರೀವೆಂಕಟಶೈಲಾಧಿಪ ನಮೋ, ಶ್ರೀನಿಕೇತನ, ಏಕೆ ಮೂಕನಾದ್ಯೊ, ನೀಲೋಹಿತ, ಆಶನವಸನಗಳೀವ, ದುರಿತವನಕುಠಾರಿ ಮೊದಲಾದ ಕೀರ್ತನೆಗಳು ಸುವ್ವಾಲಿಗಳು, ಸುಳಾದಿಗಳು, ಭಕ್ತಿಜ್ಞಾನಭರಿತವಾದ ನೂರಾರು ಷಟ್ಪದಿಗಳೂ ಜನಮನದಲ್ಲಿ  ಇಂದೂ ಹಚ್ಚಹಸುರಾಗಿ ನಿಂತಿವೆ. 

Jagannatha Dasaru

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ