ದಕ್ಷಿಣಾಮೂರ್ತಿ
ವಿ. ದಕ್ಷಿಣಾಮೂರ್ತಿ
ವೆಂಕಟೇಶ್ವರನ್ ದಕ್ಷಿಣಾಮೂರ್ತಿ ಮಹಾನ್ ಸಂಗೀತ ವಿದ್ವಾಂಸರು ಮತ್ತು ಚಲನಚಿತ್ರಗಳ ಸಂಗೀತ ಸಂಯೋಜಕರಾಗಿದ್ದರು. ಸ್ವಾಮಿ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಅವರು ಚಲನಚಿತ್ರಗಳಲ್ಲಿ ಅನೇಕ ಶಾಸ್ತ್ರೀಯ ಸಂಗೀತ ಹಿನ್ನೆಲೆಯ ಸುಶ್ರಾವ್ಯ ಗೀತೆಗಳನ್ನು ಮೂಡಿಸಿದರು.
ವೆಂಕಟೇಶ್ವರನ್ ದಕ್ಷಿಣಾಮೂರ್ತಿ ಅಯ್ಯರ್ 1919ರ ಡಿಸೆಂಬರ್ 9ರಂದು ಕೇರಳದ ಅಲಪ್ಪುಳದ ಮುಲ್ಲಕ್ಕಲ್ ಎಂಬಲ್ಲಿ ಜನಿಸಿದರು. ತಾಯಿ ಪಾರ್ವತಿ ಅಮ್ಮಾಳ್. ತಂದೆ ಡಿ. ವೆಂಕಟೇಶ್ವರ ಅಯ್ಯರ್. ತಂದೆ ಬ್ಯಾಂಕ್ ಅಧಿಕಾರಿಯಾಗಿದ್ದರು. ದಕ್ಷಿಣಾಮೂರ್ತಿ ಅವರಲ್ಲಿ ಅವರ ತಾಯಿ ಸಂಗೀತ ಆಸಕ್ತಿಯನ್ನು ಪೋಷಿಸಿ, ಬಾಲ್ಯದಲ್ಲಿಯೇ ತ್ಯಾಗರಾಜ ಸ್ವಾಮಿಗಳ ಕೀರ್ತನೆಗಳನ್ನು ಕಲಿಸಿದರು. ಕನಿಷ್ಠ 27 ಹಾಡುಗಳನ್ನು ತಮ್ಮ ತಾಯಿ ಮತ್ತು ಸಹೋದರಿಯರು ಹಾಡುವುದನ್ನು ಕೇಳಿಯೇ ಗ್ರಹಿಸಿದ್ದರು. ಹತ್ತು ವರ್ಷದವರಾಗಿದ್ದಾಗ, ತಿರುವನಂತಪುರದಲ್ಲಿನ ವೆಂಕಟಾಚಲಂ ಪೊಟ್ಟಿ ಅವರಲ್ಲಿಗೆ ಬಂದು ಮೂರು ವರ್ಷಗಳ ಕಾಲ ಕರ್ನಾಟಕ ಸಂಗೀತವನ್ನು ಕಲಿತರು. ದಕ್ಷಿಣಾಮೂರ್ತಿ ಅವರು 13 ವರ್ಷದವರಾಗಿದ್ದಾಗ ಅಂಬಲಪುಳ ಶ್ರೀಕೃಷ್ಣ ದೇವಸ್ಥಾನದಲ್ಲಿ ಮೊದಲ ಕಛೇರಿ ನೀಡಿದರು.
ದಕ್ಷಿಣಾಮೂರ್ತಿ ಅವರ 5ನೇ ತರಗತಿಯವರೆಗಿನ ಪ್ರಾಥಮಿಕ ಶಿಕ್ಷಣವು ಅಲೆಪೆಯ ಸನಾತನ ಧರ್ಮ ವಿದ್ಯಾಶಾಲೆಯಲ್ಲಿ ನಡೆಯಿತು. ತಿರುವನಂತಪುರದ ಶ್ರೀ ಮೂಲ ವಿಲಾಸ ಹೈಸ್ಕೂಲ್ನಲ್ಲಿ ತಮ್ಮ ಎಚ್ಎಸ್ಸಿಯನ್ನು ಪೂರ್ಣಗೊಳಿಸಿದ ನಂತರ, ಸಂಗೀತವೇ ತಮ್ಮ ಭವಿಷ್ಯ ಎಂದು ನಿರ್ಧರಿಸಿಕೊಂಡರು. ಸ್ವಾಮಿ 16 ನೇ ವಯಸ್ಸಿನಲ್ಲಿ ವೈಕೋಮ್ಗೆ ಬಂದು ಅಲ್ಲಿ ಸಂಗೀತವನ್ನು ಅಭ್ಯಾಸ ಮಾಡುವುದರ ಜೊತೆಗೆ ಇತರರಿಗೂ ಕಲಿಸಿದರು. ಅವರು ತಮ್ಮ 20-22 ರ ವಯಸ್ಸಿನ ಅವಧಿಯಲ್ಲಿ, ನಿರಂತರವಾಗಿ ಮೂರುವರೆ ವರ್ಷಗಳ ಕಾಲ ವೈಕಠಪ್ಪನ "ನಿರ್ಮಾಲ್ಯ ದರ್ಶನ" ಪಡೆದರು. ಈ ಸಾಧನೆಯು ಅವರನ್ನು ಶ್ರೇಷ್ಠತೆಯ ಹಾದಿಗೆ ತರುವಲ್ಲಿ ಸಹಾಯಕವಾಯಿತು.
ದಕ್ಷಿಣಾಮೂರ್ತಿ 1948ರಲ್ಲಿ ತಮ್ಮ ಹೆತ್ತವರೊಂದಿಗೆ ಚೆನ್ನೈಗೆ ಬಂದರು. ಅವರು 1948ರ ಜನವರಿಯಲ್ಲಿ ಕಲ್ಯಾಣಿ ಅವರನ್ನು ವಿವಾಹವಾದರು. ಅದೇ ವರ್ಷ ಚಲನಚಿತ್ರ ಜಗತ್ತಿಗೆ ಪ್ರವೇಶಿಸಿದರು. 1950ರಲ್ಲಿ ಕೆ ಅಂಡ್ ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಕುಂಚಾಕೊ ಮತ್ತು ಕೆ.ವಿ. ಕೋಶಿ ನಿರ್ಮಿಸಿದ 'ನಲ್ಲ ತಂಕ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ಚಿತ್ರದಲ್ಲಿ ಖ್ಯಾತ ಗಾಯಕ ಕೆ.ಜೆ.ಯೇಸುದಾಸ್ ಅವರ ತಂದೆ ಖ್ಯಾತ ರಂಗ ನಟ ಮತ್ತು ಗಾಯಕ ಆಗಸ್ಟಿನ್ ಜೋಸೆಫ್ ನಾಯಕರಾಗಿದ್ದರು. ಅದೇ ಅವಧಿಯಲ್ಲಿ ಕಲಾಮಂಡಲಂನಲ್ಲಿ "ದಿ ಒಪೇರಾ"ಗೆ ಸಂಗೀತ ಸಂಯೋಜಿಸಿದರು. ಅಲ್ಲಿ ಅವರು 8 ಒಪೆರಾಗಳು ಮತ್ತು 30 ನೃತ್ಯ ನಾಟಕಗಳಿಗೆ ಸಂಗೀತ ನೀಡಿದರು.
ದಕ್ಷಿಣಾಮೂರ್ತಿ ಅವರು ಕೆ.ಜೆ. ಯೇಸುದಾಸ್, ಅವರ ಮಗ ವಿಜಯ್ ಯೇಸುದಾಸ್ ಮತ್ತು ಅವರ ಮೊಮ್ಮಗಳು ಅಮೆಯಾ ಅವರಿಗೆ ನಿರ್ದೇಶಿಸಿದ ಹಿರಿಮೆ ಹೊಂದಿದ್ದಾರೆ. ಅವರು ಶ್ರೀಕುಮಾರನ್ ಥಂಪಿ ಮತ್ತು ಅಭಯದೇವ್ ಅವರು ಬರೆದ ಅನೇಕ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದರು. ವಯಲಾರ್ ರಾಮವರ್ಮ - ಜಿ. ದೇವರಾಜನ್ ಮತ್ತು ಪಿ. ಭಾಸ್ಕರನ್ - ಬಾಬುರಾಜ್ ಜೋಡಿಯಂತಹ ಪ್ರಸಿದ್ಧ ಸಂಗೀತಗಾರ-ಗೀತರಚನೆಕಾರ ಜೋಡಿಯನ್ನು ರೂಪಿಸಿದರು. ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ತಂದೆ ಆರ್.ಕೆ.ಶೇಖರ್ ಇವರ ಕೆಲವು ಚಿತ್ರಗಳಿಗೆ ಸಹಾಯಕರಾಗಿದ್ದು ಮುಂದೆ ಸ್ವತಂತ್ರ ಸಂಗೀತಗಾರರಾದರು.
ದಕ್ಷಿಣಾಮೂರ್ತಿ ಅವರು ನವಲೋಕಂ, ಸೀತಾ, ವಿಯರ್ಪಿಂಟೆ ವಿಲಾ, ಶ್ರೀ ಗುರುವಾಯೂರಪ್ಪನ್, ಕಡಮತ್ತತಚ್ಚನ್ ಮತ್ತು ಇಂದುಲೇಖಾ ಸೇರಿದಂತೆ 125 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ 1400ಕ್ಕೂ ಹೆಚ್ಚು ಗೀತೆಗಳಿಗೆ ಸಂಗೀತ ನಿರ್ದೇಶನ ಮಾಡಿದರು. ಅವರ ಪ್ರಸಿದ್ಧ ಸಂಯೋಜನೆಗಳಲ್ಲಿ ಸ್ವಪ್ನಂಗಲ್... ಸ್ವಪ್ನಂಗಳೆ ನಿಂಗಲ್...(ಕಾವ್ಯಮೇಳ), ಪಾಟ್ಟು ಪಾಡಿ ಉರಕ್ಕಾಂ ನಾನ್(ಸೀತಾ), ಉತ್ತರಾ ಸ್ವಯಂವರಂ...(ಅಪಾಯಕಾರಿ ಬಿಸ್ಕೆಟ್), ಕಾಟ್ಟಿ ಪಾಳ್ ಮುಳಮ್ (ವಿಲಯ್ಕ್ ವಾಂಗಿಯ ವೀಣ), ಹೃದಯ ಸರಸಿಲೆ, ಚಂದ್ರಿಕಯಿಲ್ ಅಲಿಯುನ್ನು ಚಂದ್ರಕಾಂತಂ (ಭಾರ್ಯಮಾರ್ ಸೂಕ್ಷಿಕ್ಕುಕ) , ಕಾಟಿಲೆ ಪಾಲ್ಮುಲಂ, ಮನೋಹರಿ ನಿನ್, ಸೌಗಂಧಿಗಂಗಲೆ, ವಾತಿಲ್ ಪಝುತಿಲೋಡೆನ್ (ಇಡನಾಳಿಯಿಲ್ ಒರು ಕಾಲೊಚ್ಚ) ಮುಂತಾದ ಮನೋಜ್ಞ ಗೀತೆಗಳು ಸೇರಿವೆ.
ದಕ್ಷಿಣಮೂರ್ತಿ ಅವರು ಪಿ. ಲೀಲಾ, ಪಿ. ಸುಶೀಲ, ಕಲ್ಯಾಣಿ ಮೆನನ್ ಮತ್ತು ಇಳಯರಾಜ ಸೇರಿದಂತೆ ಅನೇಕ ಗಾಯಕರು ಮತ್ತು ಸಂಗೀತ ನಿರ್ದೇಶಕರ ಗುರುಗಳಾಗಿದ್ದರು. 1971ರಲ್ಲಿ ಅವರು ಅತ್ಯುತ್ತಮ ಸಂಗೀತ ನಿರ್ದೇಶಕರಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಗಳಿಸಿದರು. ಸ್ವಾಮಿ ಮತ್ತು ಶ್ರೀಕುಮಾರನ್ ತಂಬಿ ಜೋಡಿಯು ಮಲಯಾಳಂ ಚಲನಚಿತ್ರೋದ್ಯಮಕ್ಕೆ ಲೆಕ್ಕವಿಲ್ಲದಷ್ಟು ಚಾರ್ಟ್ ಟಾಪರ್ಗಳನ್ನು ನೀಡಿದೆ. 2003ರಲ್ಲಿ ಬೆಂಗಳೂರಿನ ಮಾನವ ಸೇವಾ ಕೇಂದ್ರದ ಗೌರವಾನ್ವಿತ ಪೂಜ್ಯ ಶ್ರೀ ಗುರೂಜಿ ವಿಶ್ವನಾಥ್ ಅವರಿಂದ ಪ್ರತಿಷ್ಠಿತ 'ಸಂಗೀತ ಸರಸ್ವತಿ' ಪ್ರಶಸ್ತಿ ಪಡೆದರು. 2008ರಲ್ಲಿ, ಅವರು ಮಲಯಾಳಂ ಚಲನಚಿತ್ರ 'ಮಿಝಿಕಲ್ ಸಾಕ್ಷಿ'ಗಾಗಿ ನಾಲ್ಕು ಹಾಡುಗಳನ್ನು ಸಂಯೋಜಿಸಿದರು. ತಮ್ಮ ಬದುಕಿನ ಕೊನೆಯ ವರ್ಷವಾದ 93ರ ಹಿರಿ ವಯಸ್ಸಿನಲ್ಲೂ ಸಂಗೀತದೆಡೆಗಿನ ಅವರ ಪ್ರಯತ್ನಗಳು ಕಡಿಮೆಯಾಗಿರಲಿಲ್ಲ. ಆಗಲೂ "ಶ್ಯಾಮ ರಾಗಂ" ಎಂಬ ಚಲನಚಿತ್ರ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡುತ್ತಿದ್ದರು, ಅದಕ್ಕೆ ಸಂಗೀತವನ್ನು ಸಂಯೋಜಿಸುತ್ತಿದ್ದರು.
ದಕ್ಷಿಣಮೂರ್ತಿ ಅವರು ಸಂಗೀತಗಾರರಾಗಿಯೂ ಸಾಧನೆ ಮಾಡಿದ್ದರು.1948ರಿಂದ 4 ವರ್ಷಗಳ ಕಾಲ ಅವರು ಆಕಾಶವಾಣಿಗೆ ನಿಯಮಿತ ಸಂದರ್ಶಕರಾಗಿದ್ದರು. 1942 ಮತ್ತು 1957 ರ ನಡುವೆ ಅವರು ಕೇರಳದಲ್ಲಿ ಸುಮಾರು 500ಕ್ಕೂ ಹೆಚ್ಚು ಕರ್ನಾಟಕ ಸಂಗೀತದ ಕಚೇರಿಗಳನ್ನು ನೀಡಿದ್ದರು. ಅಂತರರಾಷ್ಟ್ರೀಯ ಸ್ಥಳಗಳಲ್ಲಿನ ಸಂಗೀತ ಉತ್ಸವಗಳಲ್ಲಿಯೂ ಭಾಗಿಯಾಗಿದ್ದರು. "ದಕ್ಷಿಣಾಮೂರ್ತಿ ಸಂಗೀತ ಉತ್ಸವ" 2013 ರಿಂದ ಪ್ರತಿ ವರ್ಷ ಪೆರುಂಗೋಟುಕರದಲ್ಲಿ ನಡೆಯುತ್ತಿದೆ. ಅವರ ಶಿಷ್ಯರಲ್ಲಿ ಎನ್.ಸಿ.ವಸಂತಕೋಕಿಲಂ, ಕವಿಯೂರು ರೇವಮ್ಮ, ಕಲ್ಯಾಣಿ ಮೆನನ್, ಅಂಬಿಲಿ, ಮಿಥುನ್, ಶ್ರೀಲತಾ, ಶೆರೀನ್ ಪೀಟರ್ಸ್, ಭವತಾರಿಣಿ, ಮಿಥುನ್ ಜಯರಾಜ್ ಮೊದಲಾದ ಪ್ರತಿಭಾವಂತ ಗಾಯಕರು ಸೇರಿದ್ದಾರೆ.
ಪಿ.ಲೀಲಾ, ಕಮುಕರ ಪುರುಷೋತ್ತಮನ್, ಬಾಲಮುರಳಿ ಕೃಷ್ಣ, ಕೆ.ಜೆ.ಯೇಸುದಾಸ್, ಪಿ.ಬಿ. ಎಸ್, ಎಸ್. ಪಿ. ಬಿ, ಘಂಟಸಾಲ, ಟಿ.ಎಂ.ಎಸ್., ಎಸ್. ಜಾನಕಿ, ಪಿ.ಸುಶೀಲ
ಸೇರಿದಂತೆ ಭಾರತೀಯ ಸಂಗೀತದ ಅನೇಕ ತಲೆಮಾರುಗಳ ಮಹಾನ್ ಗಾಯಕ ಗಾಯಕಿಯರು ಈ ಭೀಷ್ಮಾಚಾರ್ಯರ ಅಡಿಯಲ್ಲಿ ಹಾಡಿದ್ದಾರೆ. ‘ಸೀತಾ’ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಿ.ಸುಶೀಲಾ ಅವರನ್ನು ಪರಿಚಯಿಸಿದ ಕೀರ್ತಿ ದಕ್ಷಿಣಾಮೂರ್ತಿ ಅವರಿಗೆ ಸಲ್ಲುತ್ತದೆ. ಆ ಚಿತ್ರದಲ್ಲಿ ಪಿ.ಸುಶೀಲಾ ಅವರು ಹಾಡಿರುವ ‘ಪಟ್ಟು ಪಾಡಿ ಉರಕ್ಕಂ’ ಹಾಡು ಇಂದಿಗೂ ಕೇರಳದಲ್ಲಿ ಜನಪ್ರಿಯವಾಗಿದೆ.
ದಕ್ಷಿಣಾಮೂರ್ತಿ ಅವರು ತ್ಯಾಗಬ್ರಹ್ಮಮ್ (ತಮಿಳು - 1965), ಆತ್ಮ ದೀಪಂ (ತಮಿಳು - 1989) ಮತ್ತು ಸತ್ಯ ಮಿತ್ರಂ (ಮಲಯಾಳಂ - 1992) ಎಂಬ ಮೂರು ಪುಸ್ತಕಗಳನ್ನು ಬರೆದಿದ್ದಾರೆ.
ಅವರ 108 ಸ್ವಂತ ರಚನೆಗಳನ್ನು ಹೊಂದಿರುವ ಕೃತಿಯನ್ನು ಅವರ ಮೊದಲ ಸಂಸ್ಮರಣಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕೇರಳದ ಮಕ್ರೇರಿ ದೇವಸ್ಥಾನದಲ್ಲಿ "ರಾಗಾಭರಣಂ" ಎಂಬ ಹೆಸರಿನಿಂದ ಬಿಡುಗಡೆ ಮಾಡಲಾಯಿತು.
ದಕ್ಷಿಣಾಮೂರ್ತಿ ಅವರು ತಮ್ಮ 93 ನೇ ವಯಸ್ಸಿನಲ್ಲಿ 2013ರ ಆಗಸ್ಟ್ 2ರಂದು ಚೆನ್ನೈನಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು.
On the birth anniversary of greatest musician and music composer V. Dakshinamurthy
ಕಾಮೆಂಟ್ಗಳು