ಆರ್. ಶಾಮಾಶಾಸ್ತ್ರಿ
ಆರ್. ಶಾಮಾಶಾಸ್ತ್ರಿ
ಕೌಟಿಲ್ಯನ ಅರ್ಥಶಾಸ್ತ್ರವನ್ನೂ ಒಳಗೊಂಡಂತೆ ಮಹತ್ವದ ಕೃತಿಗಳನ್ನು ಬೆಳಕಿಗೆ ತಂದ ಮಹಾನ್ ವಿದ್ವಾಂಸ ಮತ್ತು ಹಲವು ಮಹತ್ವದ ಪ್ರತಿಭೆಗಳ ಸಂಗಮರಾಗಿದ್ದ ಆರ್. ಶಾಮಾಶಾಸ್ತ್ರಿಗಳು 1868ರ ಜನವರಿ 12ರಂದು ಹಾಸನ ಜಿಲ್ಲೆಯ ರುದ್ರಪಟ್ಟಣದಲ್ಲಿ ಜನಿಸಿದರು. ಶಾಸ್ತ್ರಿಗಳಿಗೆ ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳ ಜೊತೆಗೆ ಜ್ಯೋತಿಷ ಶಾಸ್ತ್ರದಲ್ಲೂ ಅಪಾರ ಪಾಂಡಿತ್ಯವಿತ್ತು.
ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡರೂ ಸ್ವಪ್ರಯತ್ನದಿಂದ ಮುಂದೆ ಬಂದ ಶಾಮಾಶಾಸ್ತ್ರಿಗಳು ಮೈಸೂರು ಸಂಸ್ಕೃತ ಕಾಲೇಜಿನಲ್ಲಿ ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಅಂದಿನ ದಿವಾನರಾಗಿದ್ದ ಕೆ. ಶೇಷಾದ್ರಿ ಅಯ್ಯರ್ ಅವರು ಇವರ ಪಾಂಡಿತ್ಯಕ್ಕೆ ಮೆಚ್ಚಿ ತಮ್ಮ ಮನೆಯಲ್ಲಿಯೇ ಊಟ, ವಸತಿಗೆ ವ್ಯವಸ್ಥೆ ಮಾಡಿ ಇಂಗ್ಲಿಷ್ ಕಲಿಯಲು ಪ್ರೋತ್ಸಾಹಿಸಿದರು. ಇಂಗ್ಲಿಷ್, ಸಂಸ್ಕೃತದ ಜೊತೆಗೆ ಭೌತಶಾಸ್ತ್ರವನ್ನೂ ಕಲಿತು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿ ಮದರಾಸು ವಿಶ್ವವಿದ್ಯಾಲಯದ ಮೂಲಕ ಬಿ..ಎ. ಪದವಿ ಗಳಿಸಿದರು. 1918 ರಲ್ಲಿ ಮೈಸೂರಿನ ಪ್ರಾಚ್ಯ ಪುಸ್ತಕ ಭಂಡಾರದಲ್ಲಿ ಶಾಮ ಶಾಸ್ತ್ರಿಗಳಿಗೆ ಉದ್ಯೋಗ ದೊರಕಿತು.
ಶಾಮಾಶಾಸ್ತ್ರಿಗಳು ಹಸ್ತಪ್ರತಿಗಳ ಗ್ರಂಥ ಸೂಚಿಯನ್ನು ಸಿದ್ಧಗೊಳಿಸುತ್ತಿದ್ದಾಗ ದೊರೆತ ಕೌಟಿಲ್ಯನ ಅರ್ಥಶಾಸ್ತ್ರವನ್ನು ಪರಿಷ್ಕರಿಸಿ ಸಂಸ್ಕೃತ ಹಾಗೂ ಇಂಗ್ಲಿಷ್ನಲ್ಲಿ ಪ್ರಕಟಿಸಿದರು. ಅವರು 1912 ರಿಂದ 1918 ಅವಧಿಯಲ್ಲಿ ಬೆಂಗಳೂರಿನ ಸಂಸ್ಕೃತ ಮಹಾ ಪಾಠಶಾಲೆಯ ಅಧ್ಯಕ್ಷರ ಜವಾಬ್ದಾರಿಯನ್ನು ಹೊತ್ತಿದ್ದರು. 1918 ರಲ್ಲಿ ಮೈಸೂರಿನ ಪ್ರಾಚ್ಯ ಪುಸ್ತಕ ಭಂಡಾರದ ಕ್ಯೂರೇಟರಾಗಿದ್ದು, 1922 ರಲ್ಲಿ ಪ್ರಾಚ್ಯ ಸಂಶೋಧನ ಇಲಾಖೆಯ ನಿರ್ದೇಶಕರಾದರು. ಕ್ಯೂರೇಟರ್ ಆಗಿದ್ದ ಸಂದರ್ಭದಲ್ಲಿ ಹಲವಾರು ಸಂಸ್ಕೃತ ಗ್ರಂಥಗಳನ್ನು ಸಂಶೋಧಿಸಿ ಪ್ರಕಟಿಸಿದರು. ಬ್ರಹ್ಮಸೂತ್ರ ಭಾಷ್ಯ, ಬೋಧಾಯನ ಗೃಹಸೂತ್ರ, ಸ್ಮೃತಿಚಂದ್ರಿಕಾ, ತೈತ್ತರೀಯ ಬ್ರಾಹ್ಮಣ, ತೈತ್ತರೀಯ ಬ್ರಾಹ್ಮಣ (ಅಷ್ಟಕ) ಭಾಗ – ೨, ಭಟ್ಟ ಭಾಸ್ಕರ ಮತ್ತು ಸಾಯಣ ಭಾಷ್ಯಗಳೊಡನೆ ಅಲಂಕಾರ ಭಾಗ ಮಣಿಹಾರ ಭಾಗ – ೨, ಬ್ರಹ್ಮಸೂತ್ರಭಾಷ್ಯ (ಆನಂದತೀರ್ಥೀಯ) ತಾತ್ಪರ್ಯಚಂದ್ರಿಕೆಯೊಡನೆ ಭಾಗ – ೪, ಕೌಟಿಲ್ಯನ ಅರ್ಥಶಾಸ್ತ್ರ ಮತ್ತು ಅರ್ಥಶಾಸ್ತ್ರದ ಪದಸೂಚಿ, ಸರಸ್ವತಿ ವಿಲಾಸ ಮುಂತಾದ ಮಹತ್ವದ ಗ್ರಂಥಗಳನ್ನು ಪ್ರಕಟಿಸಿದರು.
ಶಾಮಾಶಾಸ್ತ್ರಿಗಳು ಸಂಸ್ಕೃತ ಗ್ರಂಥಗಳೇ ಅಲ್ಲದೆ ಕನ್ನಡದಲ್ಲೂ ಹಲವಾರು ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದರು. ಲಿಂಗಣ್ಣನ ಕೆಳದಿಯ ನೃಪವಿಜಯ, ಸೋಮರಾಜನ ಉದ್ಭಟ ಕಾವ್ಯ, ರುದ್ರಭಟ್ಟನ ಜಗನ್ನಾಥ ವಿಜಯ, ಕುಮಾರವ್ಯಾಸ ಮಹಾಭಾರತದ ವಿರಾಟಪರ್ವ ಮತ್ತು ಉದ್ಯೋಗಪರ್ವ, ಸೋಮನಾಥನ ಅಕ್ರೂರ ಚರಿತೆ, ನಯಸೇನನ ಧರ್ಮಾಮೃತ ಭಾಗ-೧, ಕಂಠೀರವ ನರಸರಾಜ ವಿಜಯ, ನಯಸೇನನ ಧರ್ಮಾಮೃತ ಭಾಗ-೨ ಮೊದಲಾದ ಹತ್ತಾರು ಕೃತಿಗಳನ್ನು ಬೆಳಕಿಗೆ ತಂದರು.
ಶಾಮಾಶಾಸ್ತ್ರಿಗಳು ಹಲವಾರು ಸಮಿತಿಗಳೊಡನೆ ನಿಕಟ ಸಂಪರ್ಕ ಹೊಂದಿದ್ದರು. ಮೈಸೂರಿನ ಮಹಾರಾಜ ಸಂಸ್ಕೃತ ಮಹಾಪಾಠ ಶಾಲೆಯ ಕಾರ್ಯಕಾರಿ ಸಮಿತಿಯಲ್ಲಿದ್ದು, ಸಂಸ್ಕೃತ ವಿದ್ವತ್ವರೀಕ್ಷಾ ಮಹಾಸಭೆಯ ಸದಸ್ಯರಾಗಿ ಸಂಸ್ಕೃತ ಭಾಷಾ ವ್ಯಾಸಂಗದ ಅಭಿವೃದ್ಧಿಗಾಗಿ ದುಡಿದರು. ಸಂಸ್ಕೃತ ಭಾಷೆಯ ಪ್ರಚಾರಕ್ಕಾಗಿ ‘ಆರ್ಯ ಧರ್ಮೋಜ್ಜೀವಿನಿ ಸಭಾ’ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಅದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.
ಶಾಮಾಶಾಸ್ತ್ರಿಗಳ ನಿಸ್ವಾರ್ಥ ಸೇವೆಗಾಗಿ ಅಮೆರಿಕದ ವಾಷಿಂಗ್ಟನ್ ವಿಶ್ವ ವಿದ್ಯಾಲಯಕ್ಕೆ ಸೇರಿದ ಓರಿಯಂಟಲ್ ಯೂನಿವರ್ಸಿಟಿಯ ಫಿಲಾಸಫಿಕಲ್ ಎಂಬ ಸಂಸ್ಥೆ 1919 ರಲ್ಲಿ ಇವರಿಗೆ ಪಿಎಚ್.ಡಿ ಪದವಿ ಕೊಟ್ಟು ಗೌರವಿಸಿತು. 1921 ರಲ್ಲಿ ರಾಯಲ್ ಏಷಿಯಾಟಿಕ್ ಸೊಸೈಟಿ (ಮುಂಬಯಿ ಶಾಖೆ) ಯುಕಾಂಪ್ಬೆಲ್ ಸ್ಮಾರಕ ಚಿನ್ನದ ಪದಕ ಕೊಟ್ಟು ಗೌರವಿಸಿತು. ಕಲ್ಕತ್ತ ವಿಶ್ವವಿದ್ಯಾಲಯವು 1921 ರಲ್ಲಿ ಡಾಕ್ಟರ್ ಆಫ್ ಫಿಲಾಸಫಿ ಪದವಿ ನೀಡಿತು. ಮೈಸೂರಿನ ಮಹಾರಾಜರಿಂದ ಅರ್ಥಶಾಸ್ತ್ರ ವಿಶಾರದ, ಆಗಿನ ಬ್ರಿಟಿಷ್ ಸರಕಾರದ ಮಹಾಮಹೋಪಾಧ್ಯಾಯ ಪ್ರಶಸ್ತಿ, ಕಾಶಿಯ ಭಾರತ ಧರ್ಮ ಮಹಾಮಂಡಲದಿಂದ ವಿದ್ಯಾಲಂಕಾರ, ಪಂಡಿತರಾಜ ಬಿರುದು ಮುಂತಾದ ಹಲವಾರು ಗೌರವಗಳು ಶಾಮಾಶಾಸ್ತ್ರಿಗಳಿಗೆ ಸಂದಿದ್ದವು.
ಬಹುಭಾಷಾ ಪ್ರಾಜ್ಞರಾಗಿದ್ದ ರುದ್ರಪಟ್ನ ಶಾಮಾಶಾಸ್ತ್ರಿಗಳು 1944 ವರ್ಷದ ಜನವರಿ 23 ರಂದು ಈ ಲೋಕವನ್ನಗಲಿದರು.
On the birth anniversary of great Research Scholar, Librarian who have light to many ancient literature R Shamashastri
ಕಾಮೆಂಟ್ಗಳು