ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದರ್ಶನ್


ದರ್ಶನ್

ದರ್ಶನ್ ನಮ್ಮ ಕನ್ನಡ ಚಿತ್ರರಂಗದಲ್ಲಿ ಹತ್ತು ಹಲವು ನಿಟ್ಟಿನಲ್ಲಿ ಚಿರಪರಿಚಿತ ಹೆಸರು.   ಅಂದು ಕನ್ನಡ ಚಿತ್ರರಂಗದಲ್ಲಿ ತೂಗುದೀಪ ಶ್ರೀನಿವಾಸ್ ಪ್ರಸಿದ್ಧ ಖಳನಟರು.  ಹಲವಾರು ಚಿತ್ರಗಳಲ್ಲಿ ಪೋಷಕ ನಟರಾಗಿ ಕೂಡ ಅದ್ಭುತವಾಗಿ ನಟಿಸಿದವರು.  ತೂಗುದೀಪ ಶ್ರೀನಿವಾಸರ ಪುತ್ರರಾದ ದರ್ಶನ್  ಚಿತ್ರರಂಗದಲ್ಲಿ ಪ್ರಾರಂಭದಲ್ಲಿ ‘ದರ್ಶನ್ ತೂಗುದೀಪ’ ಎಂದೇ ಪರಿಚಿತರಾದವರು.  ದರ್ಶನ್ 1977ರ ಫೆಬ್ರುವರಿ 16ರಂದು ಜನಿಸಿದರು.

ತೂಗುದೀಪ ಶ್ರೀನಿವಾಸರು ಅಷ್ಟೊಂದು ಚಿತ್ರಗಳಲ್ಲಿ ನಟಿಸಿದ್ದರಾದರೂ ಅವರ ಬದುಕು ಹೂವಿನ ಹಾಸಿಗೆಯದಾಗಿರಲಿಲ್ಲ.  ಹೀಗೆ ಕಷ್ಟವನ್ನರಿತು ಮೇಲೆ ಬಂದ ದರ್ಶನ್ ಸ್ಟಾರ್ ಆಗಿಯೇ ಚಿತ್ರರಂಗಕ್ಕೆ ಬಂದವರಲ್ಲ.  ಅವರು ಇಂದು ಗಳಿಸಿರುವ ಸ್ಟಾರ್ ಗಿರಿಯು ಕೂಡಾ ಅವರು ಎದುರಿಸಿ ಬಂದ ಚಾಲೆಂಜುಗಳಿಂದ ವೃದ್ಧಿಸಿದ್ದು.  ನಟರಾಗುವುದಕ್ಕೆ ಮುಂಚೆ ಅವರು ಲೈಟ್ ಬಾಯ್ ಕೆಲಸವೂ ಸೇರಿದಂತೆ ಹೊಟ್ಟೆಪಾಡಿನ ಹಲವು ಮಜಲುಗಳನ್ನು ದಾಟಿ ಬಂದವರು.  

ದರ್ಶನ್ ಪೊನ್ನಂಪೇಟೆಯ ರಂಗ ಶಿಬಿರದಲ್ಲಿ ನಾಟಕಗಳಲ್ಲಿ ಪಾತ್ರವಹಿಸಿದ್ದರು.   ಶೈಕ್ಷಣಿಕ ವಿದ್ಯಾಭ್ಯಾಸ ಮುಗಿಸಿದ ಮೇಲೆ ನಿನಾಸಂನಲ್ಲಿ ಒಂದು ವರುಷ  ರಂಗಭೂಮಿ ಡಿಪ್ಲೊಮಾ ಮಾಡಿದರು. 'ಜನುಮದ ಜೋಡಿ' ಗೆ ಕ್ಯಾಮೆರಾ ಅಸಿಸ್ಟೆಂಟ್ ಆಗಿ ಗೌರಿಶಂಕರ್ ಅವರಿಗೆ ಸಹಾಯಕರಾಗಿ ಕೆಲಸಮಾಡಿದರು.  ಅವರು ಹಿರಿತೆರೆಗೆ  ಮೊದಲು ಬಣ್ಣ ಹಚ್ಚಿದ್ದು  ವಿನೋದ್ ರಾಜ್ ನಾಯಕನಾಗಿ ನಟಿಸಿರುವ 'ಮಹಾಭಾರತ' ಅನ್ನುವ  ಕನ್ನಡ ಚಲನಚಿತ್ರದಲ್ಲಿ ಖಳನಾಯಕನಾಗಿ.  ಜೊತೆ ಜೊತೆಯಲ್ಲೇ ಕಿರುತೆರೆಯ ಅನೇಕ ಪಾತ್ರಗಳನ್ನು ನಿರ್ವಹಿಸಿದರು. 

2000ದ ವರ್ಷದಲ್ಲಿ ‘ಮೆಜೆಸ್ಟಿಕ್’ ಚಿತ್ರದಿಂದ ನಾಯಕನಾಗಿ ನಟನೆ ಆರಂಭಿಸಿದ ದರ್ಶನ್  ಕಲಾಸಿಪಾಳ್ಯ, ಗಜ, ದತ್ತ,  ಕರಿಯ, ಸಾರಥಿ,  ಸಂಗೊಳ್ಳಿ ರಾಯಣ್ಣ   ಮುಂತಾದ ಜಯಭೇರಿ ಭಾರಿಸಿದ ಚಿತ್ರಗಳೂ ಸೇರಿದಂತೆ ಅನೇಕ ಚಿತ್ರಗಳಲ್ಲಿ  ನಟಿಸಿ ನಟರಾಗಿ ಜೊತೆಗೆ ನಿರ್ಮಾಪಕರಾಗಿ, ವಿತರಕರಾಗಿ ಸಹಾ ಮುನ್ನಡೆಯುತ್ತಿದ್ದಾರೆ.  ತಮ್ಮ ಕುಟುಂಬಕ್ಕೆ ಸೇರಿದ ಚಿತ್ರಗಳಲ್ಲೆಲ್ಲಾ ತಾವೇ ಪ್ರಧಾನವಾಗಿ ಮಿಂಚಲೇಬೇಕೆಂಬ ಇರಾದೆಯಿಲ್ಲದೆ ‘ಜೊತೆ ಜೊತೆಯಲಿ’ ಅಂತಹ ಯಶಸ್ವೀ ಚಿತ್ರ ತಮ್ಮ ಬ್ಯಾನರಿನಿಂದ ಮೂಡಿ ಬರುವಂತಹ ಬುದ್ಧಿಶಕ್ತಿ ಕೂಡಾ ತೋರಿದ್ದಾರೆ.  ದರ್ಶನರ ತಮ್ಮ ದಿನಕರ ತೂಗುದೀಪ, ಅವರ ನಿರ್ಮಾಣಗಳಲ್ಲಿ ನಿರ್ದೇಶಕನಾಗಿ ಯಶಸ್ವಿಯಾಗಿದ್ದು ಅವರ ಕುಟುಂಬದ ಸದಸ್ಯರು ಚಿತ್ರ ನಿರ್ಮಾಣದ ಕಾಯಕದಲ್ಲಿ ಅವರ ಜೊತೆ ಜೊತೆಯಾಗಿ ಸಾಗಿದ್ದಾರೆ.

ಸಿನಿಮಾಗಳ ಪರಿಧಿಯಾಚೆಯಲ್ಲಿ ತಾನೇ ಸ್ವಂತವಾಗಿ ನಿರ್ಮಿಸಿರುವ ಮೃಗಾಲಯ ಮುಂತಾದ ಆಸಕ್ತಿಗಳಿಂದ ಕೂಡಾ ದರ್ಶನ್ ಜನಪ್ರಿಯರಾಗಿದ್ದಾರೆ.  ‘ಸಂಗೊಳ್ಳಿ ರಾಯಣ್ಣ’ ಅಂತಹ ಕ್ರಾಂತಿಕಾರಕ ಮಹಾನುಭಾವನನ್ನು ತೆರೆಯ ಮೇಲೆ ಬಿಂಬಿಸಿದ್ದಾರೆ. ಆ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಠ ನಟ ಪ್ರಶಸ್ತಿ ಕೂಡ ಅವರದ್ದಾಗಿದೆ.    ಇದಲ್ಲದೆ ಪ್ರಖ್ಯಾತ ಕುರುಕ್ಷೇತ್ರವನ್ನು ತೆರೆಗೆ ತಂದು ದುರ್ಯೋಧನನ ಪಾತ್ರವನ್ನು ಅಭಿಮಾನಿಗಳಿಗೆ ಇಷ್ಟವಾಗುವಂತೆ ಅಭಿವ್ಯಕ್ತಿಸಿದ್ದಾರೆ.  ರಾಬರ್ಟ್, ಕ್ರಾಂತಿ, ಕಾಟೇರ ಮೂಡಿಬಂದಿವೆ.

ಕನ್ನಡದ ಯಶಸ್ವೀ ನಟರಾದ ದರ್ಶನ್ ಅಂತಹವರು ಉತ್ತಮ ಚಿತ್ರಗಳನ್ನು ಮೂಡಿಸಿ ಕನ್ನಡ ಚಿತ್ರರಂಗದಲ್ಲಿ ಮತ್ತು ಕನ್ನಡ ನಾಡಿನಲ್ಲಿ ಉತ್ತಮ ಯುಗ ಕಾಣುವಂತೆ ಮಾಡುತ್ತಿರಲಿ ಎಂದು ಆಶಿಸುತ್ತಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳೋಣ.

On the birthday of our popular star Darshan 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ