ಜಿತೇಂದ್ರ
ಜಿತೇಂದ್ರ
ನಟ ಜಿತೇಂದ್ರ ದಕ್ಷಿಣ ಭಾರತೀಯ ಚಿತ್ರಗಳ ಹಿಂದಿ ಆವೃತ್ತಿಗಳ ಯಶಸ್ವೀ ನಟರಾಗಿ ಕಣ್ಮುಂದೆ ನಿಲ್ಲುತ್ತಾರೆ. ಹಿಂದೀ ಚಿತ್ರರಂಗದಲ್ಲಿ ನಾಯಕನಟನಾಗಿ ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರಂತೆ ನಟಿಸಿದವರೂ ಬೇರಿಲ್ಲ. ಅವರಷ್ಟು ಬಹುಸಂಖ್ಯೆಯ ಯಶಸ್ಸು ಪಡೆದವರೂ ಕಡಿಮೆಯೇ.
ಜಿತೇಂದ್ರ ಅವರ ಮೂಲಹೆಸರು ರವಿಕಪೂರ್. ಅವರು 1942ರ ಏಪ್ರಿಲ್ 7ರಂದು ಪಂಜಾಬಿನ ಅಮೃತಸರದಲ್ಲಿ ಜನಿಸಿದರು. ತಂದೆ ಅಮರ್ ನಾಥ್ ಮತ್ತು ತಾಯಿ ಕೃಷ್ಣಾ ಕಪೂರ್. ಜಿತೇಂದ್ರ ಮುಂಬೈನಲ್ಲಿ ಓದುವಾಗ ಪ್ರಸಿದ್ಧ ನಟ ರಾಜೇಶ್ ಖನ್ನ ಇವರ ಸಹಪಾಠಿಯಾಗಿದ್ದರು.
ಜಿತೇಂದ್ರ ಅವರದ್ದು ಕೃತಕ ಆಭರಣಗಳ ವ್ಯಾಪಾರ ಮಾಡುತ್ತಿದ್ದ ಪಂಜಾಬೀ ವ್ಯಾಪಾರಸ್ಥ ಕುಟುಂಬ. ಬಣ್ಣದ ಲೋಕದ ಚಲನಚಿತ್ರರಂಗದವರಿಗೆ ಈ ಕುಟುಂಬ ಕೃತಕ ಆಭರಣಗಳನ್ನು ಸರಬರಾಜು ಮಾಡುವಲ್ಲಿ ಒಳ್ಳೆಯ ವ್ಯಾಪಾರೀ ಬಾಂಧವ್ಯ ಹೊಂದಿತ್ತು.
1958ರಲ್ಲಿ ಸುಪ್ರಸಿದ್ಧ ನಿರ್ದೇಶಕ ಮತ್ತು ನಿರ್ಮಾಪಕ ವಿ. ಶಾಂತಾರಾಮ್ ಅವರ ಬಳಿ ಯುವಕ ಜಿತೇಂದ್ರ ಆಭರಣಗಳನ್ನು ಸರಬರಾಜು ಮಾಡಲು ಬಂದಾಗ, ಅವರು ತಮ್ಮ ಪ್ರಸಿದ್ಧ ಚಿತ್ರ 'ನವರಂಗ್'ನಲ್ಲಿ ನಾಯಕಿ ಸಂಧ್ಯಾ ಅವರು ನಿರ್ವಹಿಸಿದ ದ್ವಿಮುಖಿ ಪಾತ್ರ ಸನ್ನಿವೇಶದಲ್ಲಿ ಜಿತೇಂದ್ರ ಅವರನ್ನು ಸಂಧ್ಯಾರ ಒಂದು ಅನುರೂಪವಾಗಿ ಬಳಸಿದರು.
ಮುಂದೆ ಸ್ವಯಂ ಶಾಂತಾರಾಮ್ ಅವರೇ 1963 ರಲ್ಲಿ ತಮ್ಮ ಗೀತ್ ಗಾಯಾ ಪತ್ಥರೋನೆ (1964) ಚಲನಚಿತ್ರದಲ್ಲಿ ಜಿತೇಂದ್ರರನ್ನು ನಾಯಕ ಪಾತ್ರಧಾರಿಯನ್ನಾಗಿಸಿದರು. 1967ರಲ್ಲಿ ಬಂದ 'ಫರ್ಜ್' ಚಲನಚಿತ್ರದ ಯಶಸ್ಸು ಜಿತೇಂದ್ರರಿಗೆ ಖ್ಯಾತಿ ತಂದಿತು. ಫರ್ಜ್ ಚಿತ್ರದಲ್ಲಿ ಮಹಮ್ಮದ್ ರಫಿ ಹಾಡಿರುವ "ಮಸ್ತ್ ಬಹಾರೊಂಕಾ ಮೈ ಆಶಿಕ್" ಗೀತೆಯಲ್ಲಿನ ಜಿತೇಂದ್ರರ ಟೀ ಶರ್ಟ್ ಮತ್ತು ಬಿಳಿಯ ಬೂಟುಗಳು ಅವರ ಟ್ರೇಡ್ಮಾರ್ಕ್ ಎಂಬಷ್ಟು ಅವರ ಮುಂದಿನ ಚಲನಚಿತ್ರಗಳಲ್ಲಿ ವಿಜೃಂಭಿಸಿವೆ. ಫರ್ಜ್ ಮತ್ತು ಮುಂದಿನ ಚಿತ್ರಗಳಾದ ಕ್ಯಾರವಾನ್, ಹಂಜೋಲಿ ಮುಂತಾದವುಳಲ್ಲಿನ ಕುಣಿತ ಇವರಿಗೆ 'ಜಂಪಿಂಗ್ ಜ್ಯಾಕ್' ಎಂಬ ಮುದ್ದಿನ ಹೆಸರು ತಂದಿತ್ತು.
1980 ದಶಕದಲ್ಲಿ ಜಿತೇಂದ್ರ ಅವರು ದಕ್ಷಿಣ ಭಾರತದ ನಿರ್ದೇಶಕರಾದ ರಾಮರಾವ್ ತಾತಿನೇನಿ, ಕೆ. ಬಾಪಯ್ಯ ಮತ್ತು ಕೆ. ರಾಘವೇಂದ್ರ ರಾವ್ ಮುಂತಾದವರ ರೀಮೇಕ್ ಚಿತ್ರಗಳ ಮಳೆಯಲ್ಲಿ ದಕ್ಷಿಣದ ಚೆಲುವೆಯರಾದ ಶ್ರೀದೇವಿ ಇಲ್ಲವೇ ಜಯಪ್ರದಾ ಅವರ ನಿರಂತರ ಜೋಡಿಯಾಗಿ ಮಿನುಗಿದರು. ಹೀಗೆ ಅವರು ನಟಿಸಿದ ಸಂಜೋಗ್, ಔಲದ್, ಮಜಾಲ್, ಜಸ್ಟೀಸ್ ಚೌಧರಿ, ಮಾವಾಲಿ, ಹಿಮ್ಮತ್ ವಾಲಾ, ಜಾನಿ ದುಷ್ಮನ್, ತೋಫಾ ಮುಂತಾದ ಚಿತ್ರಗಳು ಅಪಾರ ಯಶಸ್ಸು ಕಂಡವು. ಪ್ರಸಿದ್ಧ ತೆಲುಗು ನಟ ಕೃಷ್ಣ ಅವರ ಅನೇಕ ತೆಲುಗು ಚಿತ್ರಗಳ ಹಿಂದಿ ಅವತರಣಿಕೆಗಳಲ್ಲಿ ನಟಿಸಿದ ಜಿತೇಂದ್ರ , ಅವರ ಆಪ್ತ ಗೆಳೆಯರಾಗಿದ್ದರು. ಕೃಷ್ಣ ಅವರ ಪದ್ಮಾಲಯ ನಿರ್ಮಾಣ ಸಂಸ್ಥೆಯೇ ಜಿತೇಂದ್ರ ಅಭಿನಯದ ಅನೇಕ ಚಿತ್ರಗಳನ್ನು ನಿರ್ಮಿಸಿತ್ತು.
ಜಿತೇಂದ್ರರ ವೃತ್ತಿಜೀವನದಲ್ಲಿ ಮತ್ತೊಂದು ಗಮನಾರ್ಹ ಅಂಶವೆಂದರೆ ಅವರು ಅಭಿನಯಿಸಿದ ಗೀತೆಗಳಿಗೆ ಮಹಾನ್ ಕವಿ ಗುಲ್ಜಾರ್ ಹಾಡು ರಚಿಸಿದಾಗಲೆಲ್ಲ ಅವು ಜನರ ಮನದಲ್ಲಿ ಅಚ್ಚಳಿಯದಂತೆ ನಿಂತದ್ದು. ಪರಿಚಯ್, ಕಿನಾರಾ, ಖುಷ್ಬೂ ಮುಂತಾದ ಚಿತ್ರಗಳಲ್ಲಿನ 'ಓ ಮಾಝಿ ರೆ', 'ಮುಸಾಪಿರ್ ಹೊ ಯಾರೋಂ', 'ನಾಮ್ ಗುಮ್ ಜಾಯೇಗಾ' ಮುಂತಾದವು ಗುಲ್ಜಾರ್ ಸಾಹಿತ್ಯ, ಆರ್. ಡಿ, ಬರ್ಮನ್ ಸಂಗೀತ ಮತ್ತು ಕಿಶೋರ್ ಕುಮಾರ್ ಧ್ವನಿಯಲ್ಲಿ ಅಮರಗೀತೆಗಳಾಗಿವೆ. ಪರಿಚಯ್ ಚಿತ್ರ ಕೂಡ ಒಂದು ಮರೆಯಲಾಗದ ಸುಂದರ ಯಾತ್ರೆ.
ಜಿತೇಂದ್ರರ ಜೋಡಿಯಲ್ಲಿ ಶ್ರೀದೇವಿ, ಜಯಪ್ರದಾ ಹೆಚ್ಚು ನೆನಪಾಗುತ್ತಾರಾದರೂ ಅವರು ರೀನಾ ರಾಯ್, ನೀತು ಸಿಂಗ್, ಹೇಮಾಮಾಲಿನಿ, ಸುಲಕ್ಷಣಾ ಪಂಡಿತ್, ಮೌಶುಮಿ ಚಟರ್ಜಿ, ರೇಖಾ ಅವರೊಂದಿಗೆ ಕೂಡಾ ಯಶಸ್ವೀ ಜೋಡಿ ಎನಿಸಿದ್ದರು.
ಜಿತೇಂದ್ರ ಕಿರುತೆರೆಯ ಧಾರಾವಾಹಿಯಾದ 'ಕ್ಯೂ ಕಿ ಸಾಸ್ ಭಿ ಕಭಿ ಬಹೂ ಥಿ' ಯಲ್ಲಿ ಹಿರಿಯ ವಯಸ್ಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸೋನಿ ಎಂಟರ್ಟೈನ್ಮೆಂಟ್ ಟೆಲಿವಿಷನ್ ನಲ್ಲಿ ಪ್ರಸಾರವಾದ ಜಲಕ್ ದಿಖಲಾ ಜಾ ಎಂಬ ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ಜಿತೇಂದ್ರ ಪುತ್ರ ತುಷಾರ್ ಕಪೂರ್ ನಟರಾಗಿದ್ದಾರೆ. ಅವರ ಪುತ್ರಿ ಏಕ್ತಾ ಕಪೂರ್ ಪ್ರಸಿದ್ಧ ಕಿರುತೆರೆ ಮೇಘಾ ಧಾರಾವಾಹಿಗಳ ಕಥೆಗಾರ್ತಿಯಾಗಿ, ನಿರ್ಮಾಪಕಿಯಾಗಿ ಪ್ರಸಿದ್ಧಿ ಪಡೆದಿದ್ದು ಬಾಲಾಜಿ ಟೆಲಿಫಿಲ್ಮ್ಸ್ ಅನ್ನು ನಡೆಸುತ್ತಿದ್ದಾರೆ. ಇವರ ಧಾರಾವಾಹಿಗಳು ಹಿಂದಿಯಲ್ಲದೆ, ತಮಿಳು, ಕನ್ನಡ ಮತ್ತು ತೆಲುಗು ಭಾಷೆಗಳು ಸೇರಿದಂತೆ ಎಲ್ಲ ಭಾಷೆಗಳ ಕೋಟೆ ಬಾಗಿಲುಗಳನ್ನೂ ಮುರಿದು ವ್ಯವಹಾರ ನಡೆಸುತ್ತಿವೆ. ಈ ಸಂಸ್ಥೆ ಚಲನ ಚಿತ್ರಗಳನ್ನೂ ನಿರ್ಮಿಸಿವೆ.
ಚಿತ್ರರಂಗದಲ್ಲಿ ಯಶಸ್ಸು ಮತ್ತು ಪ್ರಶಸ್ತಿಗಳು ಒಂದಕ್ಕೊಂದು ಹೊಂದಾಣಿಕೆ ಹೊಂದಿರಲೇ ಬೇಕೆಂದಿಲ್ಲ! ಜಿತೇಂದ್ರರಿಗೆ ಕೆಲವು ಜೀವಮಾನ ಸಾಧನೆಯ ಪ್ರಶಸ್ತಿಗಳ ಹೊರತಾಗಿ ಬೇರೆ ಸಾಧನೆಯ ಕಿರೀಟಗಳು ಬಂದಂತಿಲ್ಲ.
On the birth day of handsome and successful hero of our times Jitendra
ಕಾಮೆಂಟ್ಗಳು