ನಾಗರಾಜ ಶೆಟ್ಟಿ
ಟಿ. ಎಸ್. ನಾಗರಾಜ ಶೆಟ್ಟಿ
ಪ್ರೊ.ಟಿ. ಎಸ್. ನಾಗರಾಜ ಶೆಟ್ಟಿ ಅವರು ಸಾಹಿತ್ಯಲೋಕದಲ್ಲಿ ಅದರಲ್ಲೂ ಮಕ್ಕಳ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಗಳಿಂದ ಪ್ರಸಿದ್ಧರಾಗಿದ್ದಾರೆ.
ನಾಗರಾಜಶೆಟ್ಟರು ಕೋಲಾರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಚಾಕವೇಲು ಗ್ರಾಮದಲ್ಲಿ 1953ರ ಏಪ್ರಿಲ್ 16ರಂದು ಜನಿಸಿದರು. ತಂದೆ ಶ್ರೀರಾಮಯ್ಯ. ತಾಯಿ ವನಲಕ್ಷಮ್ಮ. ಚಾಕವೇಲುವಿನಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದು, ಮುಂದೆ ಬೆಂಗಳೂರಿನ ರಾಷ್ಟ್ರೀಯ ಪ್ರೌಢಶಾಲೆಯಲ್ಲಿ ಓದಿ, ಸೆಂಟ್ರಲ್ ಕಾಲೇಜಿನಿಂದ ಬಿ.ಎ. ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಗಳಿಸಿದರು.
ಟಿ. ಎಸ್. ನಾಗರಾಜಶೆಟ್ಟಿ ಅವರು ತಿಪಟೂರಿನ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಮತ್ತು ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು.
ನಾಗರಾಜಶೆಟ್ಟರಿಗೆ ಹೈಸ್ಕೂಲಿನಲ್ಲಿ ಓದುತ್ತಿದ್ದಾಗಲೇ ಸಾಹಿತ್ಯದ ಗೀಳು ಹತ್ತಿಸಿದವರು ಅಂದಿನ ಅಧ್ಯಾಪಕಿಯಾಗಿದ್ದ ಟಿ. ಎಸ್. ಸುಬ್ಬಲಕ್ಷ್ಮಿ. ಅವರು ಭೋಗೋಳ ಶಾಸ್ತ್ರದ ಅಧ್ಯಾಪಕಿಯಾಗಿದ್ದರೂ ವಾಲ್ ಮ್ಯಾಗಜಿನ್ ಕಮಿಟಿಯಲ್ಲಿದ್ದು , ಪ್ರಾರ್ಥನೆಯ ನಂತರ ಮಹಡಿ ಹತ್ತಿ ತರಗತಿಗೆ ಹೋಗುವ ಹಾದಿಯಲ್ಲಿ ಬೋರ್ಡಿಗೆ ಸಿಕ್ಕಿಸಿದ್ದ ಡ್ರಾಯಿಂಗ್ ಶೀಟಿನಲ್ಲಿ ಅಂದಿನ ದಿನವಿಶೇಷಕ್ಕೆ ಸರಿಯಾಗಿ ಚಿತ್ರ ಬಿಡಿಸಿ ಸಾಹಿತ್ಯ ರಚಿಸಬೇಕಿತ್ತು. ಈ ಕೆಲಸದಲ್ಲಿ ನಾಗರಾಜಶೆಟ್ಟರು ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡು ರಚಿಸುತ್ತಿದ್ದ ಸಾಹಿತ್ಯಕ್ಕೆ ಅಧ್ಯಾಪಕಿ ಸುಬ್ಬುಲಕ್ಷ್ಮಿಯವರು ಪ್ರೋತ್ಸಾಹ ನೀಡಿದ್ದು ಇವರಿಗೆ ಸಾಹಿತ್ಯದಲ್ಲಿ ಸಾಧನೆ ಮಾಡಲು ವಿಶೇಷ ಹುರುಪನ್ನೊದಗಿಸಿತು. ಹೀಗೆ ಕವನಗಳನ್ನು ಬರೆಯತೊಡಗಿ ಬರೆದ ಮೊದಲ ಕವನ ‘ಮೇಕೆ ಮರಿ’ಯು ಗೋಕುಲ ವಾರಪತ್ರಿಕೆಯಲ್ಲಿ ಪ್ರಕಟಗೊಂಡನಂತರ ಕವನ ಬರೆಯುವ ಹುಚ್ಚಿಗೆ ಒಳಗಾದರು. ನಂತರ ಸಣ್ಣಕತೆಗಳ ಕ್ಷೇತ್ರವನ್ನು ಪ್ರವೇಶಿಸಿ ರಚಿಸಿದ ಸಾಮಾಜಿಕ ಹಾಗೂ ಬಂಡಾಯ ನೆಲೆಯ ಹಲವಾರು ಕತೆಗಳು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡವು. ಅವರು 9ನೇ ತರಗತಿಯಲ್ಲಿದ್ದಾಗ ಬರೆದ 'ಚಿತ್ರಕಲೆ' ಎಂಬ ಪದ್ಯ ಮುಂದೆ 4ನೇ ತರಗತಿಯ ಪದ್ಯವಾಗಿ ಜನಪ್ರಿಯವಾಯಿತು.
ನಾಗರಾಜಶೆಟ್ಟರ ಮೊದಲ ಕಥಾ ಸಂಕಲನ ಪ್ರಕಟವಾದದ್ದು 1979ರಲ್ಲಿ. ನಂತರ ಬಾಲ ಸಾಹಿತ್ಯದತ್ತ ಹೊರಳಿ, ಹಲವಾರು ಮಕ್ಕಳ ಪದ್ಯಗಳನ್ನು ಬರೆದು, ‘ನವಿಲು ಗರಿ’ ಎಂಬ ಸಂಕಲನವನ್ನು 1982ರಲ್ಲಿ ಪ್ರಕಟಿಸಿದರು. ನವಿಲು ಗರಿ ಸಂಕಲನಕ್ಕೆ ಶಿವರಾಮ ಕಾರಂತರು ಮುನ್ನುಡಿ ಬರೆದಿದ್ದು “ನಾಲ್ಕು ನಾಲ್ಕು ಪಾದಗಳ ಚುಟುಕಗಳ ರೀತಿಯಲ್ಲಿ ಮಕ್ಕಳಿಗೆ ಪ್ರಿಯವಾಗಬಹುದಾದ, ಕಲ್ಪನೆಗೆ ಎಟುಕಬಹುದಾದ ವಿಷಯಗಳುಳ್ಳ ಅನೇಕ ಹಾಡುಗಳು ಮಕ್ಕಳ ಗಂಟಲಲ್ಲಿ ಕುಳಿತು, ಅವರ ನಿತ್ಯದ ಲೀಲಾಕೇಳಿಗಳಲ್ಲಿ ಮರುಕಳಿಸಿ ಮೂಡಬಹುದಾದ ಗುಣಗಳುಳ್ಳವು” ಎಂದು ನುಡಿದಿದ್ದಾರೆ.
ಶೆಟ್ಟರ ಎರಡನೆಯ ಕೃತಿ ‘ಸಕ್ಕರೆ ಬೊಂಬೆ’ ಗೆ ಎಂ.ವಿ.ಸೀತಾರಾಮಯ್ಯನವರು ಮುನ್ನುಡಿ ಬರೆದಿದ್ದು “ಪದ್ಯಗಳ ವಸ್ತು ಹಾಗೂ ಆಕರ್ಷಕ ಶೈಲಿಗಳಿಂದ ಮಕ್ಕಳಲ್ಲಿ ಕುತೂಹಲ ಹುಟ್ಟಿಸುವಂತಹ ಕಲೆಗಾರಿಕೆ ಇದ್ದು, ಸ್ವಾರಸ್ಯಕರವಾಗಿ ಕಥೆ ಹೇಳಿ, ತಿಳಿಹಾಸ್ಯದ ತೆರೆಯನ್ನೆಬ್ಬಿಸಿ ನೀತಿಯನ್ನು ಬೋಧಿಸುತ್ತಾರೆ” ಎಂದಿದ್ದಾರೆ.
ನಾಗರಾಜಶೆಟ್ಟರು ಆಮೆ ಮತ್ತು ಹಂಸಗಳು, ಚಂದ್ರನ ಶಾಲೆ, ಮಕ್ಕಳ ನೆಹರು, ಕೋತಿ ಮರಿ ಸೈಕಲ್ ಸವಾರಿ, ಪೂರ್ವಿಯ ವಿಮಾನಯಾನ ಮುಂತಾದ ಮಕ್ಕಳ ಪದ್ಯಗಳ ಸಂಕಲನಗಳನ್ನೂ ತಂದಿದ್ದಾರೆ. ಪ್ರಾಣಿಗಳ ಜಾತ್ರೆ, ಹಾವು ಕಪ್ಪೆ ಏಡಿ, ಚಿಟ್ಟೆಯ ಬಣ್ಣ, ಕರಡಿ ರಸಾಯನ ಮುಂತಾದವು ಮಕ್ಕಳ ಕಥಾ ಸಂಕಲನಗಳು. ಚುಟ್ಟಿ ಪುಟ್ಟಿ, ಮಕ್ಕಳ ಯುಗಾದಿ, ಪ್ರಾಣಿಗಳ ಪರೀಕ್ಷೆ, ಪ್ರಾಣಿಗಳ ಪ್ರವಾಸ ಮುಂತಾದವು ಮಕ್ಕಳ ಬಾನುಲಿ ರೂಪಕಗಳು. ಮಕ್ಕಳ ಸಾಹಿತ್ಯದ ಆಳವಾದ ಅಧ್ಯಯನವನ್ನು ಕೈಗೊಂಡು ಮಕ್ಕಳ ಸಾಹಿತ್ಯದ ಬಗ್ಗೆ ಸುಳಿವು – ಹೊಳಹುಗಳನ್ನು ನೀಡಿ, ಮಕ್ಕಳ ಸಾಹಿತ್ಯ ಕುರಿತು ಆಲೋಚಿಸುವವರಿಗೆ, ಅಧ್ಯಯನ ಮಾಡುವವರಿಗೆ ಉಪಯುಕ್ತ ಕೃತಿಯಾದ “ಮಕ್ಕಳ ಸಾಹಿತ್ಯ: ಕೆಲವು ಅಧ್ಯಯನಗಳು" ಮತ್ತು ಮಕ್ಕಳ ಸಾಹಿತ್ಯದ ಅಂದಿನ ಸ್ಥಿತಿ – ಗತಿಗಳನ್ನು ವಿವೇಚಿಸುತ್ತಾ ಇಂದಿನ ಮಕ್ಕಳ ಸಾಹಿತ್ಯದ ಬಗ್ಗೆ ಪಕ್ಷಿ ನೋಟ ಬೀರುವ ಕೃತಿ “ಮಕ್ಕಳ ಸಾಹಿತ್ಯ: ಅಂದು – ಇಂದು” (ಮಕ್ಕಳ ಸಾಹಿತಿ ಎಂ.ಜಿ.ಗೋವಿಂದರಾಜು ರವರೊಡನೆ ಸಹಲೇಖಕರಾಗಿ) ಮುಂತಾದ ಅನೇಕ ಕೃತಿಗಳನ್ನು ತಮ್ಮದೇ ಆದ ನಿರ್ಮಲ ಪ್ರಕಾಶನದಡಿಯಲ್ಲಿ ಹೊರತಂದಿದ್ದಾರೆ.
ನಾಗರಾಜಶೆಟ್ಟರು ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಇಂಗ್ಲಿಷಿನಿಂದ ಅನುವಾದಿಸಿದ ಕೃತಿ “ಆದ್ಭುತ ಗ್ರಹದ ಕತೆ ಮತ್ತಿತರ ಕಥೆಗಳು”, “ಚೆಲುವನಹಳ್ಳಿ ಚತುರರು” (ಮಕ್ಕಳ ಸಾಹಸ ಕಾದಂಬರಿಯ ಸಹ ಲೇಖಕರು); ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ ಮಕ್ಕಳ ಸಾಹಿತ್ಯ- 1989 ಸಂಪಾದಕರಾಗಿ, ಕಾಲು ಶತಮಾನದ ಮಕ್ಕಳ ಸಾಹಿತ್ಯ ಸಂಪುಟ 1-2 ರ ಸಹಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಮಕ್ಕಳ ಸಾಹಿತ್ಯ ಕುರಿತು ಕೇರಳದ ದಿ ಸ್ಡೇಟ್ ಇನ್ಸ್ಟಿಟ್ಯೂಟ್ ಆಫ್ ಚಿಲ್ಡ್ರನ್ ಲಿಟರೇಚರ್, ಚಂಡೀಗಡದ ಇಂಡಿಯಾ ಕಾಂಟಿನೆಂಟಲ್ ಕಲ್ಚರಲ್ ಅಸೋಸಿಯೇಷನ್ಸ್, ಅಸ್ಸಾಮಿನ ಪ್ರಾಗ್ಜೋತಿಷ ಕಾಲೇಜಿನ ಅಸ್ಸಾಮಿ ಕಲಾ ತೀರ್ಥ ಸಂಸ್ಥೆ, ಭೂಪಾಲದ ಭಾರತ ಭವನ ಸಂಸ್ಥೆ, ಪ್ರಯಾಗದ ಭಾರತೀ ಪರಿಷತ್ ಮುಂತಾದ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಮಕ್ಕಳ ಸಾಹಿತ್ಯದ ಬಗ್ಗೆ ಪ್ರಬಂಧಗಳನ್ನು ಮಂಡಿಸಿದ್ದಾರೆ.
1991ರಲ್ಲಿ ನಾಗರಾಜಶೆಟ್ಟರ 'ಚುಟ್ಟಿ ಪುಟ್ಟಿ' ಕೃತಿಗೆ ಅಂದಿನ ರಾಷ್ಟ್ರಪತಿಗಳಾದ ಡಾ. ಶಂಕರ ದಯಾಳ ಶರ್ಮರವರಿಂದ ರಾಷ್ಟ್ರೀಯ ಪುರಸ್ಕಾರ ಮತ್ತು 2007ರಲ್ಲಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಐವತ್ತು ಮಂದಿ ಮಕ್ಕಳ ಸಾಹಿತಿಗಳನ್ನು ಆಹ್ವಾನಿಸಿದ್ದು ಅದರಲ್ಲಿ ಕರ್ನಾಟಕದಿಂದ ಬಿಜಾಪುರದ ಈಶ್ವರ ಚಂದ್ರ ಚಿಂತಾಮಣಿ, ಧಾರವಾಡದ ಶಂಕರ ಹಲಗತ್ತಿ, ಗುಲ್ಬರ್ಗದ ರಾಮೇಶ್ವರರೊಡನೆ, ಟಿ.ಎಸ್.ನಾಗರಾಜ ಶೆಟ್ಟರಿಗೂ ಸೇರಿ ಅಂದಿನ ರಾಷ್ಟ್ರಪತಿಗಳಾದ ಡಾ. ಎ,ಪಿ.ಜೆ. ಅಬ್ದುಲ್ ಕಲಾಂ ಅವರೊಡನೆ ಚಹಾ ಕೂಟಕ್ಕೆ ಆಹ್ವಾನ ಸಂದಿತ್ತು. ಇವರ ಹಲವಾರು ಮಕ್ಕಳ ಕತೆಗಳು ಹಿಂದಿ ಹಾಗೂ ಮರಾಠಿಗೂ ಅನುವಾದ ಗೊಂಡಿದೆ. ಹಲವಾರು ಕವಿತೆ, ಕತೆಗಳು ಕರ್ನಾಟಕ ಸರಕಾರದ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಪಠ್ಯಗಳಲ್ಲಿ, ಮಹಾರಾಷ್ಟ್ರ ಸರಕಾರದ ಅಲ್ಪ ಸಂಖ್ಯಾತರ ಕನ್ನಡ ಪಠ್ಯ ಪುಸ್ತಕಗಳಲ್ಲೂ ಸೇರಿವೆ. ಇವರ ಮಕ್ಕಳ ಸಾಹಿತ್ಯ ಸೇವೆಗಾಗಿ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ಧಾರವಾಡದ ಮಕ್ಕಳ ಮನೆ ಪುರಸ್ಕಾರ, ಬನಹಟ್ಟಿಯ ಮಕ್ಕಳ ಸಾಹಿತ್ಯ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಕಾವ್ಯ ಸಿಂಧು ಪುರಸ್ಕಾರ, ಸಿಸುಸಂಗಮೇಶ ದತ್ತಿ ಪ್ರಶಸ್ತಿ, ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಬಾಲವಿಕಾಸ ಅಕಾಡಮಿ ಗೌರವ ಪ್ರಶಸ್ತಿ, ಡಾ. ಚನ್ನಬಸವ ಪಟ್ಟದೇವರ ಮಕ್ಕಳ ಸಾಹಿತ್ಯ ಪ್ರಶಸ್ತಿ ಮತ್ತು ಆರ್. ಕಲ್ಯಾಣಮ್ಮ ಮಕ್ಕಳ ಸಾಹಿತ್ಯ ಪ್ರಶಸ್ತಿಗಳು ಸಂದಿವೆ.
ಪೂಜ್ಯ ಟಿ. ಎಸ್. ನಾಗರಾಜ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
On the birthday of writer T. S. Nagaraja Shetty
ಕಾಮೆಂಟ್ಗಳು