ಕೆ. ಎಸ್. ಚೈತ್ರಾ
ಡಾ. ಕೆ. ಎಸ್. ಚೈತ್ರಾ
ಡಾ. ಕೆ. ಎಸ್. ಚೈತ್ರಾ ಬಹುಮುಖಿ ಪ್ರತಿಭೆ. ಚೈತ್ರ ಎಂದರೆ ಜಿಎಸ್ಎಸ್ ಅವರ ಕವಿತೆಯ ಸುಂದರ ಸಾಲೊಂದು ನೆನಪಾಗುತ್ತದೆ.
ಹೂವ ಬಿಟ್ಟಿವೆ, ಹೂವ ತೊಟ್ಟಿವೆ, ಹೂವನುಟ್ಟಿವೆ ಮರಗಳು! ಚೈತ್ರ ಜಾತ್ರೆಗೆ ಬಂದು ನಿಂತವೊ ನೂರು ಚೆಲುವಿನ ರಥಗಳು!
ಸದಾ ಚೆಲುವಿನ ನಗೆಮೊಗದ ಉತ್ಸಾಹದ ಚಿಲುಮೆಯಂತಿರುವ ಚೈತ್ರಾ ಅವರಲ್ಲಿರುವ ಅಭಿವ್ಯಕ್ತಿ ಪ್ರತಿಭೆಗಳೂ ಸಹಾ ಹಲವು ಚೆಲುವಿನ ರಥಗಳಂತೆ.
ಡಾ. ಕೆ. ಎಸ್. ಚೈತ್ರಾ ಅವರ ಜನ್ಮದಿನ ಜೂನ್ 27. ಶಿವಮೊಗ್ಗದ ಮೂಲದವರಾದ ಇವರು ಶಿವಮೊಗ್ಗ ಮತ್ತು ಮಣಿಪಾಲದಲ್ಲಿ ಓದಿ ವೃತ್ತಿಯಲ್ಲಿ ದಂತವೈದ್ಯರು.
ವಿದ್ಯಾರ್ಥಿ ಜೀವನದ ದೆಸೆಯಲ್ಲೇ ಸಾಹಿತ್ಯ ಮತ್ತು ಸಾಂಸ್ಕೃತಿಕ ಒಲವನ್ನೂ ಜೊತೆಗೂಡಿಸಿಕೊಂಡು ಬಂದ ಚೈತ್ರಾ ಅವರು ಬರಹಗಾರ್ತಿಯಾಗಿ ಮತ್ತು ಭರತನಾಟ್ಯ ಕಲಾವಿದೆಯಾಗಿ ಬೆಳೆದರು. ನೃತ್ಯಸಾಧನೆಗೆ ಪೂರಕವಾಗಿ ಶಾಸ್ತ್ರೀಯ ಸಂಗೀತದಲ್ಲೂ ಸೀನಿಯರ್ ಸಾಧನೆ ಮಾಡಿದ್ದಾರೆ. ಇವರು ಸಮಗ್ರ ಸಾಧನೆಗಾಗಿ ಅತ್ಯುತ್ತಮ ವಿದ್ಯಾರ್ಥಿಯಾಗಿಯೂ ಪ್ರಶಸ್ತಿ ಪಡೆದಿದ್ದರು.
ಸಾಹಿತ್ಯದ ವಿವಿಧ ಪ್ರಕಾರಗಳಾದ ಕತೆ, ಮಕ್ಕಳ ಕತೆ-ಕವನ, ವೈದ್ಯಕೀಯ ಸಾಹಿತ್ಯ, ಪ್ರವಾಸ ಲೇಖನ, ಅಂಕಣ ಬರಹ ಮತ್ತು ಲಲಿತ ಪ್ರಬಂಧಗಳಲ್ಲಿ ಕಳೆದ ಎರಡೂವರೆ ದಶಕಗಳಿಂದ ಸಕ್ರಿಯರಾಗಿರುವ ಚೈತ್ರಾ ಜನಪ್ರಿಯ ಅಂಕಣಕಾರ್ತಿ.
ಚೈತ್ರಾ ಅವರು ವಿಜಯವಾಣಿಗೆ ನಾಲ್ಕು ವರ್ಷ ಮಹಿಳಾ ಕಾಳಜಿಯ 'ಲೇಡೀಸ್ ಡೈರಿ' ಅಂಕಣ ಬರೆಯುತ್ತಿದ್ದರು. ಅವಧಿಯಲ್ಲಿ ಪ್ರಕಟಿತ ದಂತಕಥೆಗಳು ಅಂಕಣ ಬರೆಹ, ಪ್ರಜಾವಾಣಿಯ ಸಂಗತದಲ್ಲಿ ಪ್ರಚಲಿತ ವಿಷಯಗಳ ಕುರಿತು ಅನೇಕ ಬರೆಹ ಹಾಗೂ ಹೊಸದಿಗಂತ, ತುಷಾರಕ್ಕೆ ಹಲವು ವರ್ಷಗಳಿಂದ ಮಕ್ಕಳ ಕತೆಗಳ ಅಂಕಣಕಾರ್ತಿಯಾಗಿದ್ದಾರೆ. ನಾಲ್ಕು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಕ್ಕಳ ಕತೆಗಳ ಸಂಕಲನದಲ್ಲಿ, 3 ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಲಲಿತ ಪ್ರಬಂಧಗಳ ಸಂಕಲನದಲ್ಲಿ ಇವರ ಬರಹಳು ಸೇರ್ಪಡೆಗೊಂಡಿವೆ. 'ಮನದೊಳಗಿನ ಮಾತು ಮಥನ', 'ಬಳೆಗಳ ಭಾರ ಹೊತ್ತು', 'ಹೊಳೆವ ಬಳೆಗಳ ಹಿಂದೆ', 'ಲೇಡೀಸ್ ಡೈರಿ' 'ಲೋಕದ ಕಣ್ಣು', ‘ದಂತ ಕಥೆಗಳು', ‘ಸಂಗತ', 'ಲಲಿತಾ' ಮುಂತಾದ ಚೈತ್ರಾ ಅವರ ಅಂಕಣ ಶೀರ್ಷಿಕೆಗಳು ಅವರ ವಿವಿಧ ವ್ಯಾಪ್ತಿಗಳ ಸೂಚಕದಂತಿವೆ. ಇವರು ವಿಶ್ವವಾಣಿಯ 'ವಿಶ್ವಯಾತ್ರೆ' ಪವಾಸ ಪುರವಣಿಯಲ್ಲಿ ಪ್ರವಾಸ ಕಥನಗಳು ಮತ್ತು ಉದಯವಾಣಿಯ ಕಥೆಗಳ 'ಕಥೋಪನಿಷತ್ತು' ವಿಭಾಗದಲ್ಲಿ ಅನೇಕ ಕಥೆಗಳನ್ನೂ ಸಹಾ ಮೂಡಿಸಿದ್ದಾರೆ.
ಡಾ. ಕೆ. ಎಸ್. ಚೈತ್ರಾ ಅವರು ಕನ್ನಡ ನಾಡಿನ ರಾಜ್ಯಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳ ಹೆಸರಾಂತ ನಿರೂಪಕರಲ್ಲಿ ಒಬ್ಬರು. ದೂರದರ್ಶನ ಚಂದನದಲ್ಲಿ ವಾರ್ತಾವಾಚಕಿಯಾಗಿ ಕಾರ್ಯ ನಿರ್ವಹಿಸಿದ್ದಲ್ಲದೇ ಕರ್ನಾಟಕ ಮಾನಸಿಕ ಆರೋಗ್ಯ ಪ್ರಾಧಿಕಾರ ಪ್ರಸ್ತುತಪಡಿಸುವ ದೂರದರ್ಶನದ ಮನೋಚಿಂತನ ಮಾಲಿಕೆಯ ನಿರ್ವಹಣೆ ನಡೆಸುತ್ತಿದ್ದಾರೆ. ಕಳೆದ ಒಂದು ದಶಕದಲ್ಲಿ ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ನಡೆಸಿದ್ದಾರೆ. ಕರೋನಾ ಸಂದರ್ಭದಲ್ಲಿ ದೂರದರ್ಶನಕ್ಕಾಗಿ ನೂರಕ್ಕೂ ಹೆಚ್ಚು ವೈದ್ಯರು, ವಿಜ್ಞಾನಿಗಳು, ಮಂತ್ರಿಗಳನ್ನು ನೇರಪ್ರಸಾರದ ಕಾರ್ಯಕ್ರಮದ ಮೂಲಕ ಸಂದರ್ಶಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದಾರೆ.
ಡಾ. ಕೆ. ಎಸ್. ಚೈತ್ರಾ ಅವರ ಪ್ರಕಟಿತ ಕೃತಿಗಳಲ್ಲಿ ಆರೋಗ್ಯದ ನಗುವಿಗಾಗಿ, ಕುಶಲವೇ ಕ್ಷೇಮವೇ, ಯೋಗಕ್ಷೇಮ, ಪರಿಪೂರ್ಣ ವ್ಯಕ್ತಿತ್ವ, ವ್ಯಕ್ತಿತ್ವ ವಿಕಸನ, ಮನದೊಳಗಿನ ಮಾತು, ಮುದ್ದು ಮಗು ಮಿನುಗಲಿ ನಗು, ಮಕ್ಕಳಿಗೂ ಮನಸಿದೆ, ಆಸೆ ಮತ್ತು ಅಗತ್ಯಗಳು ಹೇಗಿರಬೇಕು? ಎಷ್ಟಿರಬೇಕು?, ಹೊಳೆವ ಬಳೆಗಳ ಹಿಂದೆ, ಬಳೆಗಳ ಭಾರ ಹೊತ್ತು, ಗರಾಜ್ ಸೇಲ್ ಕಥಾಸಂಕಲನ, ನವಕರ್ನಾಟಕ ಮತ್ತು ಗೋಥೆ ಇನ್ಸ್ಟಿಟ್ಯೂಟ್ ಜಂಟಿಯಾಗಿ ಪ್ರಕಟಿಸಿದ 'ಮುನ್ನಿಗೆ ಮದುವೆ' ಮುಂತಾದವು ಸೇರಿವೆ. ಇವರ ಗರಾಜ್ ಸೇಲ್ ಕತೆ ದಾವಣಗೆರೆ ಬಿ.ಕಾಂ.ಪಠ್ಯ ಪುಸ್ತಕದಲ್ಲಿ ಪಠ್ಯವಾಗಿ ಸೇರ್ಪಡೆಗೊಂಡಿದೆ. ಹೀಗೆ ಈವರೆಗೆ ಇವರ 8 ವೈದ್ಯಕೀಯ, 2 ಮಕ್ಕಳ ಕಥಾ ಸಂಕಲನ, 1 ಕಥಾ ಸಂಕಲನ, 3 ಅಂಕಣ ಬರಹಗಳ ಸಂಕಲನ ಮತ್ತು 1 ವೈಜ್ಞಾನಿಕ ಕೃತಿ ಸೇರಿದಂತೆ ಒಟ್ಟು 15 ಕೃತಿಗಳು ಪ್ರಕಟಗೊಂಡಿವೆ.
ಚೈತ್ರಾ ಅವರು ವಿಜಾಪುರದಲ್ಲಿ ನಡೆದ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು 7ನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದಲ್ಲಿ ಪ್ರಬಂಧ-ಉಪನ್ಯಾಸ ಮಂಡಿಸಿದ ಗೌರವಕ್ಕೆ ಪಾತ್ರರಾಗಿದ್ದಾರೆ. ಉತ್ತಮ ನೃತ್ಯಕಲಾವಿದೆಯಾಗಿರುವ ಚೈತ್ರಾ, ಭರತನಾಟ್ಯದಲ್ಲಿ ದೂರದರ್ಶನದ ಗ್ರೇಡೆಡ್ ಕಲಾವಿದೆ ಮತ್ತು ಶ್ರೀವಿಜಯಕಲಾನಿಕೇತನದ ನಿರ್ದೇಶಕಿ. ಭರತನಾಟ್ಯದಲ್ಲಿ ಸಂಶೋಧನೆ ನಡೆಸಲು (ನೃತ್ಯಬಂಧ ಜಾವಳಿಗಳ ಕುರಿತು) 2014ನೇ ಸಾಲಿನ ಕೇಂದ್ರ ಸರ್ಕಾರದ ಫೆಲೋಶಿಪ್ ಪಡೆದ ಭಾರತದ ಕೇವಲ ಐದು ಕಲಾವಿದರಲ್ಲಿ ಇವರು ಒಬ್ಬರಾಗಿದ್ದಾರೆ.
ಡಾ. ಕೆ. ಎಸ್. ಚೈತ್ರಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಸೇವಾರತ್ನ, ಸೇಡಂನ ಅಮ್ಮ ಪ್ರಶಸ್ತಿ, ಧಾರವಾಡದ ಬೇಂದ್ರೆ ಗ್ರಂಥ ಬಹುಮಾನ, ಶಿವಮೊಗ್ಗೆಯ ಕರ್ನಾಟಕ ಸಂಘದ ಡಾ.ಹಾ.ಮಾ.ನಾಯಕ್ ಹೆಸರಿನ ಪುಸ್ತಕ ಬಹುಮಾನ, ಕರ್ನಾಟಕ ಮನೋವೈದ್ಯಕೀಯ ಸಂಘದ ಡಾ.ಎಸ್ ಎಸ್.ಜಯರಾಮ್ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಂತಾರಾಷ್ಟ್ರೀಯ ಮಹಿಳಾವರ್ಷದ ಪ್ರಶಸ್ತಿ, ಕಥಾರಂಗಂ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ 2020ನೆ ಸಾಲಿನ ಗುಣಸಾಗರಿ ನಾಗರಾಜು ಮಕ್ಕಳ ಸಾಹಿತ್ಯ ದತ್ತಿನಿಧಿ ಬಹುಮಾನ, 2021 ರ ಅದ್ವೈಸರ್ ಪ್ರಶಸ್ತಿ, ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ಆತ್ಮೀಯರೂ, ಪ್ರತಿಭಾವಂತರೂ, ಉತ್ಸಾಹಿಗಳೂ, ಕ್ರಿಯಾಶೀಲರೂ ಜೊತೆಗೆ ವಿನಯವಂತರೂ ಆದ ಸಹೋದರಿ ಡಾ. ಕೆ. ಎಸ್. ಚೈತ್ರಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday to our multi talented friend Dr. Chaitra Ks
ಕಾಮೆಂಟ್ಗಳು