ಎಸ್. ಆರ್. ಮಳಗಿ
ಎಸ್. ಆರ್. ಮಳಗಿ
ಎಸ್. ಆರ್. ಮಳಗಿ ಅವರು ಮಹಾನ್ ವಿದ್ವಾಂಸರಾಗಿ ಮತ್ತು ಶಿಕ್ಷಣತಜ್ಞರಾಗಿ ಪ್ರಸಿದ್ಧರು.
ಪ್ರೊ. ಸೇತುರಾಮ ರಾಘವೇಂದ್ರ ಮಳಗಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಖ್ಯಾಡ ಎಂಬ ಹಳ್ಳಿಯಲ್ಲಿ 1910ರ ಜುಲೈ 8ರಂದು ಜನಿಸಿದರು.
ಮುಂಬಯಿ ವಿಶ್ವವಿದ್ಯಾಲಯದಿಂದ ಪದವಿ, ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬಿ.ಟಿ. ಪದವಿಗಳನ್ನು ಪಡೆದ ಮಳಗಿ ಅವರು 1938ರಿಂದ 1942ರವರೆಗೆ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಪ್ರೌಢಶಾಲೆಯ ಅಧ್ಯಾಪಕರಾಗಿ, 1942ರಿಂದ 1961ರವರೆಗೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ರೀಡರಾಗಿ, 1961ರಿಂದ 1969ರವರೆಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ರೀಡರಾಗಿದ್ದು ನಿವೃತ್ತರಾದರು. ನಿವೃತ್ತಿಯ ನಂತರವೂ 1971ರಲ್ಲಿ ಸಾಗರದ ಲಾಲ್ ಬಹದ್ದೂರ್ ಕಾಲೇಜಿನ ಪ್ರಾಂಶುಪಾಲರಾಗಿ, 1972ರಿಂದ 1973ರವರೆಗೆ ಸೇಂಟ್ ಜಾನ್ ಜ್ಯೂನಿಯರ್ ಕಾಲೇಜಿನ ಪ್ರಾಧ್ಯಾಪಕರಾಗಿ, 1975ರಿಂದ 1976ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಯು.ಜಿ.ಸಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ದ. ರಾ. ಬೇಂದ್ರೆಯವರ ಶಿಷ್ಯನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಮಳಗಿಯವರು, ಬೇಂದ್ರೆಯವರಂತೆಯೇ ಮಹರ್ಷಿ ಅರವಿಂದರ ತತ್ತ್ವಗಳ ಪರಿಪಾಲಕರಾಗಿದ್ದರು. 1971ರಿಂದ ಸುಮಾರು 25 ವರ್ಷಗಳ ಕಾಲ ಮಹರ್ಷಿ ಅರವಿಂದು ಸೊಸೈಟಿಯ ಇಂಗ್ಲಿಷ್ ಪತ್ರಿಕೆಯಾದ ‘ಆಲ್ ಇಂಡಿಯಾ ಮ್ಯಾಗಝಿನ್’ನ ಕನ್ನಡ ಅವತರಣಿಕೆಯ ಸಂಪಾದಕರಾಗಿದ್ದರು.
ಪ್ರೊ. ಮಳಗಿ ಅವರು ಪ್ರಾಚೀನ, ನಡುಗನ್ನಡದಿಂದ ಹೊಸಗನ್ನಡದವರೆಗೆ ಸುಮರು 40 ಕೃತಿಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಹಲವು ಸಂಪಾದಿತ ಕೃತಿಗಳೂ ಸೇರಿವೆ. ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಅಧ್ಯಾತ್ಮಿಕ ವಿಷಯಗಳಿಗೆ ಸಂಬಂಧಿಸಿದಂತೆ ನೂರಾರು ಪ್ರಬಂಧಗಳು, ವ್ಯಕ್ತಿಚಿತ್ರಗಳು, ಪಠ್ಯಗಳನ್ನು ರಚಿಸಿದ್ದಾರೆ. ಹಲವಾರು ಭಾಷಣಗಳು, ಚಿಂತನ ಕಾರ್ಯಕ್ರಮಗಳು ಮುಂಬಯಿ, ಧಾರವಾಡ, ಬೆಂಗಳೂರು ಆಕಾಶವಾಣಿ ಕೇಂದ್ರಗಳಿಂದ ಪ್ರಸಾರವಾಗಿವೆ.
ಮಳಗಿ ಅವರು ಬ್ರಹ್ಮರ್ಷಿ ದೈವರಾತರ ವೈದಿಕ ಸಂಸ್ಕೃತದ ಛಂದೋದರ್ಶನವನ್ನು ಇಂಗ್ಲಿಷ್ಗೆ ಅನುವಾದಿಸಿದ್ದು 1968ರಲ್ಲಿ ಭಾರತೀಯ ವಿದ್ಯಾಭವನವು ಪ್ರಕಟಿಸಿದೆ. ಬೆಂಗಳೂರು ವಿಶ್ವವಿದ್ಯಾಲಯದ ಅಂಚೆ ತೆರಪಿನ ಕನ್ನಡ ಎಂ.ಎ. ತರಗತಿಗಳ ಅಧ್ಯಯನಕ್ಕಾಗಿ ಸಾಹಿತ್ಯವಿಮರ್ಶೆ, ವ್ಯಾಕರಣ , ಛಂದಸ್ ಶಾಸ್ತ್ರ, ಕಾವ್ಯಮೀಮಾಂಸೆ, ಭಾಷಾಶಾಸ್ತ್ರ, ಗ್ರಂಥ ಸಂಪಾದನ ಶಾಸ್ತ್ರ ಮುಂತಾದ ಪಠ್ಯ ಪುಸ್ತಕಗಳನ್ನೂ ರಚಿಸಿದ್ದರು. ವಿಮರ್ಶಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಮಳಗಿಯವರು ‘ಚಿಂತನ-ಮಂಥನ’ ಎಂಬ ವಿಮರ್ಶಾ ಲೇಖನಗಳ ಸಂಗ್ರಹ ಹಾಗೂ ‘ಬಾಳದಾರಿಯಲಿ' ಎಂಬ ಕವಿತೆಗಳ ಸಂಗ್ರಹಗಳನ್ನು ಪ್ರಕಟಿಸಿದ್ದರು.
ಮಳಗಿ ಅವರ ಇತರ ಕೃತಿಗಳಲ್ಲಿ ಬಿಡುಗಡೆಯ ಬಳ್ಳಿ, ವಾಕ್ಯಮಾಣಿಕ್ಯಕೋಶ, ಹರಿಶ್ಚಂದ್ರಕಾವ್ಯಕಥೆ, ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ, ಭೃಂಗನಾದ, ಶಬ್ದಮಣಿದರ್ಪಣ ಸಂಗ್ರಹ, ಇಮ್ಮಾವು, ಗಾಳಿಪಟ, ದೇವಕನ್ಯೆ, ಕವಿಕಾವ್ಯದರ್ಶನ, ಬಾಳನಂದನ, ನುಡಿಸೋದರ, ಶ್ರೀಅರವಿಂದ ಪ್ರವೇಶಿಕೆ, ವೀರಮಾತೆ ಗುತ್ತಲ ಗುರುಪಾದ ತಾಯಿ, ಮುಂತಾದವು ಸೇರಿವೆ.
ಪ್ರೊ. ಮಳಗಿ ಅವರಿಗೆ ಧಾರವಾಡದ ಅಖಿಲ ಕರ್ನಾಟಕ ವರ್ಥ್ ಪ್ರೈಜ್, ದ.ರಾ. ಬೇಂದ್ರೆ ಹುಟ್ಟು ಹಬ್ಬದ ಪ್ರಶಸ್ತಿ, ಬಿ.ಎಂ.ಶ್ರೀ. ಪ್ರತಿಷ್ಠಾನ ರಜತೋತ್ಸವ ಪ್ರಶಸ್ತಿ, ದ.ಕ. ಜಿಲ್ಲಾ ಮಂಗಳೂರು ಸಾಹಿತ್ಯ ಪರಿಷತ್ತಿನಿಂದ ಸನ್ಮಾನ, ಅರವಿಂದೊ ಸೊಸೈಟಿ ಡಿವೈನ್ ಕ್ರಾಸ್ ಆಫ್ ದಿ ಮದರ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ಸಂದಿದ್ದವು.
103 ವರ್ಷಗಳ ತುಂಬು ಜೀವನ ನಡೆಸಿದ ಮೆಷ್ಟ್ರುಗಳ ಮೇಷ್ಟ್ರು ಎಂದೆನಿಸಿದ್ದ ಎಸ್. ಆರ್. ಮಳಗಿ ಅವರು 2013ರ ಡಿಸೆಂಬರ್ 24 ರಂದು ಈ ಲೋಕವನ್ನಗಲಿದರು.
On the birth anniversary of Prof. S. R. Malagi
ಕಾಮೆಂಟ್ಗಳು