ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಂ. ಪಿ. ಗಣೇಶ್


 ಎಂ. ಪಿ. ಗಣೇಶ್


ಭಾರತೀಯ ಹಾಕಿ ತಂಡ ಶ್ರೇಷ್ಠ ಆಟಗಾರರಲ್ಲಿ ನಮ್ಮ ಕೊಡಗಿನ ಯೋಧ ಎಂ. ಪಿ. ಗಣೇಶ್ ಪ್ರಮುಖರು. ಕಂಚು ಪದಕ ಗೆದ್ದ ಭಾರತೀಯ ಒಲಿಂಪಿಕ್ಸ್ ತಂಡದ ಸದಸ್ಯರಾಗಿ, ಬೆಳ್ಳಿ ಪದಕ ಗೆದ್ದ ಭಾರತೀಯ ಒಲಿಂಪಿಕ್ಸ್ ತಂಡದ ನಾಯಕರಾಗಿ ಅವರು ಸಲ್ಲಿಸಿದ ಸೇವೆ ಮಹತ್ವಪೂರ್ಣವಾದುದು.

ಎಂ. ಪಿ. ಗಣೇಶ್ 1946ರ ಜುಲೈ 8ರಂದು  ಕೊಡಗಿನಲ್ಲಿ ಜನಿಸಿದರು.  ಮೊದಲು ಅವರು ಫುಟ್ಬಾಲ್ ತಂಡದಲ್ಲಿ ಕೊಡಗು ಜಿಲ್ಲೆಯನ್ನು 1960 - 64ರ ಅವಧಿಯಲ್ಲಿ ಪ್ರತಿನಿಧಿಸುತ್ತಿದ್ದರು.  ಮುಂದೆ ಅವರು ಭಾರತೀಯ ಸೇನೆಯನ್ನು ಸೇರಿದಾಗ 1966-73 ಅವಧಿಯಲ್ಲಿ ಹಾಕಿ ಪಟುವಾಗಿ ಮಾರ್ಪಟ್ಟರು.  ಗಣೇಶರು ಇಂಗ್ಲಿಷಿನಲ್ಲಿ ಸ್ನಾತಕೋತ್ತರ ಪದವೀಧರರು.  ಜೊತೆಗೆ ಪಾಟಿಯಾಲದ ನ್ಯಾಷನಲ್ ಇನ್ಸ್ಟಿಟ್ಯೂಟ್ ಸಂಸ್ಥೆಯಿಂದ ಕ್ರೀಡಾ ತರಬೇತಿಯಲ್ಲಿ ಡಿಪ್ಲೋಮಾ ಪದವೀಧರರು.  

1971ರ ಹಾಕಿ ವಿಶ್ವಕಪ್ ಸ್ಪರ್ಧೆಯಲ್ಲಿ, 1972ರ ಹಾಕಿ ಒಲಿಂಪಿಕ್ಸ್ನಲ್ಲಿ ಭಾರತ ಕಂಚು ಗೆದ್ದಾಗ ತಂಡದ ಸದಸ್ಯನಾಗಿ, 1973ರ ವಿಶ್ವಕಪ್ ಹಾಕಿ ಸ್ಪರ್ಧೆಯಲ್ಲಿ ಫೈನಲ್ವರೆಗೆ ತಲುಪಿ ಕಡೆಗಳಿಯ 'ಸಡನ್ ಡೆತ್' ಗಳಿಗೆಯಲ್ಲಿ ನೆದರ್ಲ್ಯಾಂಡ್ ತಂಡಕ್ಕೆ ಸೋತರೂ  ಬೆಳ್ಳಿ ಗೆದ್ದ ತಂಡದ ನಾಯಕನಾಗಿ ಅವರು ತೋರಿದ ಪ್ರತಿಭೆ ಮಹತ್ವವಾದದ್ದು.  1972ರಲ್ಲಿ ಅವರು ವಿಶ್ವದ ಹನ್ನೊಂದು ಆಟಗಾರರ ತಂಡದಲ್ಲಿ ಮತ್ತು 1970ರಿಂದ 1974ರಲ್ಲಿ ಏಷ್ಯಾದ ಹನ್ನೊಂದರ ತಂಡದಲ್ಲಿ ಕೂಡಾ ಆಡಿದರು.

ನಮ್ಮ ಕೊಡಗಿನ ವೀರ ಮೊಲ್ಲೇರ ಪೂವಯ್ಯ ಗಣೇಶ್ ಸೈನ್ಯದ ಯೋಧ. ಫುಟ್ ಬಾಲ್ ಆಟದಲ್ಲಿ ಮಹಾನ್ ಪರಿಣತನಾಗಿದ್ದ ಆತನಿಗೆ ಇಟಾಲಿಯನ್ ಕ್ಲಬ್ ಮಹತ್ವದ ಆಹ್ವಾನ ನೀಡಿತು. ಹಾಗಾಗಿ ಸೈನ್ಯಕ್ಕೆ ಮತ್ತು ಹಾಕಿ ಆಟಕ್ಕೆ ವಿದಾಯ ಹೇಳಿ ಫುಟ್ ಬಾಲ್ ಆಟಕ್ಕೆ ಬಂದರು.  1974ರ ನಂತರದಲ್ಲಿ ಹಲವಾರು ಗಾಯಗಳ ಸಮಸ್ಯೆಯಿಂದ ಅವರು ಆಟಕ್ಕೆ ವಿದಾಯ ಹೇಳಬೇಕಾಯ್ತು. ದೇಶ ಅವರನ್ನು ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರಿಗೆ 2020 ವರ್ಷದಲ್ಲಿ ಪದ್ಮಶ್ರೀ ಗೌರವಸಂದಿದೆ

ತಾವು ಮಾಡಿದ ಕೆಲಸವನ್ನೆಲ್ಲಾ ಶ್ರದ್ಧೆಯಿಂದ ಮಾಡುತ್ತಿದ್ದ ಎಂ. ಪಿ. ಗಣೇಶ್ ಅವರು ಒಮ್ಮೆ ಜೂನಿಯರ ಕೋಚ್ ಆಗಿದ್ದಾಗ ಇವರ ಸಾಮರ್ಥ್ಯವನ್ನು ಗಮನಿಸಿದ ಅಂದಿನ ಯುವಜನ ಕ್ರೀಡಾ ಸಚಿವ ಗುಂಡೂರಾಯರು ಅವರನ್ನು ಯುವಜನ ಕ್ರೀಡಾ ಇಲಾಖೆಯ ನಿರ್ದೇಶಕರಾಗಿದ್ದ ಜೆ. ಆನಂದನ್ ಅವರ ಸಹಾಯಕ ಕ್ರೀಡಾ ಆಡಳಿತಗಾರರಾಗಿ ನೇಮಿಸಿದರು.  

ಭಾರತದ ಹಾಕಿ ತಂಡದ ಕೋಚ್ ಆಗಿ ಗಣೇಶ್  ಹಲವು ವರ್ಷ ಕಾರ್ಯ ನಿರ್ವಹಿಸಿದ್ದರು.  1990ರಲ್ಲಿ ಪಾಕಿಸ್ಥಾನದಲ್ಲಿ ನಡೆದ ವಿಶ್ವಕಪ್ ಹಾಕಿ ಸ್ಪರ್ಧೆಗಳ ಸಂದರ್ಭದಲ್ಲಿ,  ಅಲ್ಲಿನ ಆಡಳಿತ ಭಾರತೀಯ ತಂಡವನ್ನು ಅತೀ ಕೇವಲವಾಗಿ ನಡೆಸಿಕೊಂಡು, ಸ್ಪರ್ಧೆಯ ಸಂದರ್ಭದ ಹೊರತಾಗಿ ಇಡೀ ಹದಿನಾರು ಜನರ ಭಾರತೀಯ  ತಂಡವನ್ನು ಹೋಟೆಲಿನ ನಾಲ್ಕು ಗೋಡೆಗಳ ಒಳಗೆ ಇರುವಂತೆ ಮಾಡಿತ್ತು.  ಹೋಟೆಲ್ ರೂಮಿನ ಒಳಗೆ ಕೈ ಕಾಲು ಆಡಿಸುವ ಪರಿಸ್ಥಿತಿಯ ಹೊರತಾಗಿ ಹೊರಗೆ ಆಟಕ್ಕಾಗಿ ಸಿದ್ಧತೆ ಮಾಡಿಕೊಳ್ಳುವ ವ್ಯವಸ್ಥೆ ಕೂಡಾ ಒದಗಿಸಲಿಲ್ಲ.    "ಬೇಕಿದ್ದರೆ ನೀವು ನಿಮ್ಮ ದೇಶಕ್ಕೆ ಹಿಂದಿರುಗಿ ಹೋಗಿ" ಎಂದು ಅಲ್ಲಿನ ಅಧಿಕಾರಿಗಳೊಬ್ಬರು ನುಡಿದಾಗ ಗಣೇಶ್ ಮರುನುಡಿದರು "ನಾನು ಸೈನ್ಯದಲ್ಲಿ ಜೀವಿಸಿದವ, ಎಂಥದ್ದೇ ಸಂದರ್ಭ ಬರಲಿ ಓಡಿ ಹೋಗುವುದಿಲ್ಲ".

ಇವರ ಪ್ರಾಮಾಣಿಕ ಸೇವೆಯ ಫಲವಾಗಿ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಇವರನ್ನು ಆಡಳಿತ ಅಧಿಕಾರಿಯಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತು.  ಇಂಫಾಲ್ ಮುಂತಾದ ಕಡೆಗಳಲ್ಲಿ ಕಾರ್ಯ ನಿರ್ವಹಿಸಿದ ನಂತರದಲ್ಲಿ ಬೆಂಗಳೂರಿನಲ್ಲಿರಲು ಇಷ್ಟಪಟ್ಟ ಗಣೇಶ್ ಅವರನ್ನು ದಕ್ಷಿಣ ಭಾರತದ ರಾಷ್ಟ್ರೀಯ ಕ್ರೀಡಾಪ್ರಾಧಿಕಾರದ ಅಧ್ಯಕ್ಷಗಿರಿಗೆ ಆಯ್ಕೆ ಮಾಡಲಾಯಿತು.  1991ರಿಂದ 2001ರ ವರೆಗೆ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಿದ ನಂತರದಲ್ಲಿ ಗಣೇಶ್  ಪುನಃ ದೆಹಲಿಯಲ್ಲಿ ಸೇವೆ ಸಲ್ಲಿಸಿದರು.  ಗಣೇಶ್ ಕ್ರೀಡಾ ಪ್ರಾಧಿಕಾರದಲ್ಲಿ ಕ್ರೀಡಾಪಟುಗಳ ಅವಶ್ಯಕತೆಗಳನ್ನು ಅರಿತು ಕೆಲಸ ಮಾಡಿದ ಹಲವು ಪರಿಣಾಮಗಳನ್ನು ಭಾರತ ತಂಡ 2004 ಒಲಿಂಪಿಕ್ಸ್, 2006 ಕಾಮನ್ ವೆಲ್ತ್ ಕ್ರೀಡಾ ಕೂಟಗಳಂತ ಸ್ಪರ್ಧೆಗಳ ಫಲಿತಾಂಶದಲ್ಲಿ ಕಂಡಿದೆ.   ಮುಂದಿನ ದಿನಗಳಲ್ಲಿ ದೇಶ ಕಂಡ ಉತ್ತಮ ಕ್ರೀಡಾ ಪ್ರಗತಿಗೆ ಅವರಂತಹ ದಕ್ಷರು ಹಾಕಿದ ನೀಲಿ ನಕ್ಷೆ ಸಾಕಷ್ಟು ಫಲ ನೀಡಿದೆ. 

2006ರಲ್ಲಿ ರಾಷ್ತ್ರೀಯ ಕ್ರೀಡಾ ಪ್ರಾಧಿಕಾರದ ಸೇವೆಯಿಂದ ನಿವೃತ್ತರಾದ ಗಣೇಶ್ ಬೆಂಗಳೂರಿನಲ್ಲಿ ನೆಲೆಸಿದರು.  ಆದರೆ ಸಮರ್ಥನನ್ನು ಸಾಧ್ಯತೆಗಳು ಅರಸಿ ಬರುತ್ತವೆ.  2011ರ ವರ್ಷ ಅವರನ್ನು ಅರಸಿಕೊಂಡು ಬಂದ  ಹುದ್ದೆ ಅತ್ಯಂತ ಶ್ರೀಮಂತವಾದ  ಕರ್ನಾಟಕ ರಾಜ್ಯದ ಕ್ರಿಕೆಟ್ ಸಂಸ್ಥೆಯ ಚೀಫ್ ಎಕ್ಸಿಕ್ಯೂಟಿವ್ ಆಫಿಸರ್.  ದೇಶದಲ್ಲಿ ಅಷ್ಟೊಂದು ಕ್ರಿಕೆಟ್ಟಿಗರು ತುಂಬಿರುವಾಗ ಹಿಂದಿನ ಹಾಕಿ ಪಟುವಿಗೆ ಯಾಕೆ ಹುದ್ದೆ ಎಂದು ಕೆಲವೊಂದು ನಿವೃತ್ತ ಕ್ರಿಕೆಟ್ಟಿಗರು ಸ್ವರವೆತ್ತಿದರು.  ಅದಕ್ಕೆ ಬಂದ  ಉತ್ತರ "ಸಾಮರ್ಥ್ಯ".  ಸಮರ್ಥ ಏನನ್ನೂ ಹುಡುಕಬೇಕಿಲ್ಲ.  ಅವಕಾಶ ಆತನ ಮನೆ ಬಾಗಿಳಿಗೆ ಬರುತ್ತದೆ.    ಒಮ್ಮೆ ಹಾಕಿಗೆ ನಷ್ಟವಾದ ಈ ಪ್ರತಿಭೆ ಭಾರತೀಯ ಕ್ರೀಡಾಪ್ರಾಧಿಕಾರಕ್ಕೆ ಶಕ್ತಿಯಾಯ್ತು.  ಇದೀಗ ಈ ಶಕ್ತಿ ಸಾಕಷ್ಟು ಬಲಶಾಲಿಯಾದ ಕ್ರಿಕೆಟ್ಟಿಗೆ ಮತ್ತಷ್ಟು ಶಕ್ತಿ ತುಂಬಿತು.  

ಎಂ. ಪಿ. ಗಣೇಶ್ ಅಂತಹ ಸಮರ್ಥರ ಉಪಯೋಗ ಭಾರತದ ಕ್ರೀಡೆಗಳ ಅಭಿವೃದ್ಧಿಗೆ ನಿರಂತರವಾಗಿ ದೊರಕುತ್ತಿರಲಿ.  ಎಂ. ಪಿ. ಗಣೇಶ್ ಅಂತಹ ಸಮರ್ಥರ ಬದುಕು ಸಂತಸಪೂರ್ಣವಾಗಿರಲಿ. 

On the birthday great hockey and football player and sports administrator M. P. Ganesh 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ