ವಿ. ಜಿ. ನರೇಂದ್ರ
ವಿ. ಜಿ. ನರೇಂದ್ರ
ವಿ. ಜಿ. ನರೇಂದ್ರ ವ್ಯಂಗ್ಯಚಿತ್ರ ಕಲಾವಿದರನ್ನು ಸಂಘಟನೆಯ ಮೂಲಕ ಒಂದೆಡೆ ತಂದು ವ್ಯಂಗ್ಯಚಿತ್ರ ಕಲೆಗೆ ಗೌರವ ತಂದವರು.
ವೆಂಕಟೇಶ್ ಜಿ ನರೇಂದ್ರ 1948ರ ಆಗಸ್ಟ್ 20ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಗುಂಡೂರಾವ್. ತಾಯಿ ಪಾರ್ವತಿ ಬಾಯಿ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ ಪದವಿ ಪಡೆದರು.
ನರೇಂದ್ರ ಹೈಸ್ಕೂಲಿನಲ್ಲಿದ್ದಾಗಲೇ ವ್ಯಂಗ್ಯ ಚಿತ್ರಕಾರ ಶಂಕರ್ ಅವರಿಂದ ಪ್ರಭಾವಿತರಾಗಿ ಹಲವಾರು ವ್ಯಂಗ್ಯ ಚಿತ್ರಗಳನ್ನು ರಚಿಸಿದ್ದರು. ಅವರಿಗೆ ಅಧ್ಯಾಪಕರಿಂದ ಪ್ರೋತ್ಸಾಹ ದೊರಕಿತು. ಮೊಟ್ಟ ಮೊದಲ ವ್ಯಂಗ್ಯ ಚಿತ್ರ ಕರ್ಮವೀರದಲ್ಲಿ ಪ್ರಕಟಗೊಂಡಾಗ ಹೇಳತೀರದ ಸಂತೋಷವಾಯ್ತು. ಸಂಯುಕ್ತ ಕರ್ನಾಟಕ ಪತ್ರಿಕೆಗಾಗಿ ರಾಜಕೀಯ ವ್ಯಕ್ತಿಗಳ ವ್ಯಂಗ್ಯಚಿತ್ರ ರಚನೆ ಮಾಡಿದರು.
ಪದವಿಯ ನಂತರ ಮುಂಬೈಗೆ ಬಂದ ನರೇಂದ್ರ ದೇಶದ ಪ್ರಥಮ ಫೀಚರ್ ಸಿಂಡಿಕೇಟ್ ‘ರಂಗರೇಖಾ’ ಫೀಚರ್ರ್ಸ್ ಮೂಲಕ ಪಾಕೆಟ್ ಕಾರ್ಟೂನ್ ಮಾಡಿದರು. ಕನ್ನಡದ ಹಲವಾರು ಪತ್ರಿಕೆಗಳಲ್ಲದೆ ಇಂಗ್ಲಿಷ್, ಮರಾಠಿ, ಕೊಂಕಣಿ, ತೆಲುಗು ಪತ್ರಿಕೆಗಳಲ್ಲೂ ಇವರ ವ್ಯಂಗ್ಯಚಿತ್ರಗಳು ಪ್ರಕಟಗೊಂಡವು. 1973ರಲ್ಲಿ ಫ್ರೀಪೆಸ್ ಜರ್ನಲ್ನಲ್ಲಿ ವ್ಯಂಗ್ಯ ಚಿತ್ರರಚನೆ ಮಾಡಿದರು. ಶಂಕರ್ಸ್ ವೀಕ್ಲಿಯಲ್ಲಿ ವ್ಯಂಗ್ಯ ಚಿತ್ರಕಾರರಾಗಿ ಎರಡು ವರ್ಷ ಅವರ ವ್ಯಂಗ್ಯಚಿತ್ರಗಳು ಮೂಡಿದವು. ತುರ್ತುಪರಿಸ್ಥಿತಿ ಸಮಯದಲ್ಲಿ ಶಂಕರ್ಸ್ ವೀಕ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದಾಗ ಬೆಂಗಳೂರಿಗೆ ಬಂದ ನರೇಂದ್ರ 1976ರಿಂದ 'ಸಂಯುಕ್ತ ಕರ್ನಾಟಕ'ದಲ್ಲಿ 1987ರಿಂದ 'ಕನ್ನಡ ಪ್ರಭ'ದಲ್ಲಿ ಹೀಗೆ ಮುಂದವರೆದರು. ಅವರ ವ್ಯಂಗ್ಯಚಿತ್ರಗಳ ಪಯಣ ಇಂದೂ ಸಾಗಿದೆ. ಅನೇಕರು ಇವರ ಮಾರ್ಗದರಶನದಲ್ಲಿ ವ್ಯಂಗ್ಯಚಿತ್ರಕಲೆಗೆ ಬಂದು ಹೆಸರು ಮಾಡಿದ್ದಾರೆ.
ನರೇಂದ್ರ 1977ರಲ್ಲಿ ವ್ಯಂಗ್ಯ ಚಿತ್ರಕಾರರ ಸಂಘದ ಸ್ಥಾಪನೆಗೆ ಮೂಲಕಾರಣರಾದರು. 1978ರಲ್ಲಿ ನರೇಂದ್ರ ಅದರ ಅಧ್ಯಕ್ಷರ ಜವಾಬ್ದಾರಿ ಹೊತ್ತರು. 1997ರಿಂದ ಮತ್ತೆ ಅಧ್ಯಕ್ಷರ ಹುದ್ದೆ ನಿರ್ವಹಿಸಿದರು. ದೇಶದ ವ್ಯಂಗ್ಯ ಚಿತ್ರಕಾರರನ್ನೆಲ್ಲಾ ಒಂದೆಡೆ ಒಗ್ಗೂಡಿಸಲು ಪ್ರೇರಕರಾದ ನರೇಂದ್ರ 'ಭಾರತೀಯ ವ್ಯಂಗ್ಯ ಚಿತ್ರಕಾರರ ಸಂಘ'ದ ಮ್ಯಾನೇಜಿಂಗ್ ಟ್ರಸ್ಟಿಯಾಗಿ ಕಾರ್ಯನಿರ್ವಹಣೆ ಮಾಡಿದರು.
My Times, My Views ಎಂಬುದು ಶಂಕರ್ಸ್ ವೀಕ್ಲಿಯಲ್ಲಿ ನರೇಂದ್ರ ಅವರು ರಚಿಸಿದ ಪ್ರಸಿದ್ಧ ಚಿತ್ರಗಳ ಸಂಕಲನ.
ನರೇಂದ್ರ ಅವರಿಗೆ ಹಾಸ್ಯ ಬ್ರಹ್ಮ ಟ್ರಸ್ಟ್ ದಶಮಾನೋತ್ಸವ ಸಂದರ್ಭದಲ್ಲಿ ಸನ್ಮಾನ, ಪತ್ರಕರ್ತರ ವೇದಿಕೆಯಿಂದ ಹೂಗಾರ ಪ್ರಶಸ್ತಿ
ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಹಿರಿಯ ಸಾಧಕರಾದ ವಿ. ಜಿ. ನರೇಂದ್ರ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.
Great cartoonist V. G. Narendra
ಕಾಮೆಂಟ್ಗಳು