ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀನಿವಾಸ್


 ಮ್ಯಾಂಡೊಲಿನ್ ಶ್ರೀನಿವಾಸ್


ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಸರ್ವರಿಗೂ ಆಪ್ತವಾಗುವಂತೆ ಜನಪ್ರಿಯಗೊಳಿಸಿದವರಲ್ಲಿ ಮ್ಯಾಂಡೋಲಿನ್ ಶ್ರೀನಿವಾಸ್ ಪ್ರಮುಖ ಹೆಸರು.  ಕಛೇರಿಗಳಲ್ಲಿ ಹಾಗೂ ಕಿರುತೆರೆಯಲ್ಲಿ ನಾವು ಆಗಾಗ ಕಾಣುತ್ತಿದ್ದ  ಸಂಗೀತ ಕಾರ್ಯಕ್ರಮಗಳಲ್ಲಿ ತನ್ನ   ನಸುನಗೆಯ ಮಂದಹಾಸಕ್ಕೆ ಪೂರಕವಾಗಿ,   ಕೈಯಲ್ಲಿನ ಮ್ಯಾಂಡೋಲಿನ್ನಿನಿಂದ  ಅಂತಹದ್ದೇ ಮುದಭಾವ ನೀಡುವಂತಹ ಸುಶ್ರಾವ್ಯತೆಯನ್ನು, ಪುಟ್ಟ ವಯಸ್ಸಿನಿಂದಲೇ ಹಲವೊಮ್ಮೆ ಒಂಟಿಯಾಗಿ ಹಾಗೂ ಬಹಳಷ್ಟು ವೇಳೆ ತಮ್ಮ ಸಹೋದರ ರಾಜೇಶರೊಡಗೂಡಿ ಶ್ರೋತೃಗಳಿಗೆ 
ಹಂಚಿದ ಅಸಾಮಾನ್ಯ ಪ್ರತಿಭೆ ಶ್ರೀನಿವಾಸ್.  ಮ್ಯಾಂಡೊಲಿನ್ ಅಂದರೆ ವಿದೇಶಿ ವಾದ್ಯ, ಅದು ಸಿನಿಮಾ ಹಾಡುಗಳಿಗೆ ಸರಿ ಇತ್ಯಾದಿ ಎಲ್ಲ ಗೋಡೆಗಳನ್ನೂ ಮುರಿದು ಭಾರತೀಯ ಸಂಗೀತ ಸುನಾದದಲ್ಲಿ ಅದನ್ನು ಒಂದಾಗಿಸಿದ ಕೀರ್ತಿ ಮ್ಯಾಂಡೊಲಿನ್ ಶ್ರೀನಿವಾಸ್ ಅವರದ್ದು. ಚಿಕ್ಕವಯಸ್ಸಿನಲ್ಲೇ ನಿಧನರಾದ ಶ್ರೀನಿವಾಸರ ಸಂಸ್ಮರಣಾ ದಿನವಿದು.

ಉಪ್ಪಲವು ಶ್ರೀನಿವಾಸ್ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಪ್ರಾಂತ್ಯದ  ಪಲಕೊಲ್ ಎಂಬ ಗ್ರಾಮದಲ್ಲಿ 1969ರ ಫೆಬ್ರುವರಿ 28ರಂದು ಜನಿಸಿದರು.  ತಮ್ಮ ತಂದೆ ಸತ್ಯನಾರಾಯಣ ಅವರು ಬಳಸುತ್ತಿದ್ದ ಮ್ಯಾಂಡೋಲಿನ್ ವಾದ್ಯವನ್ನು ಶ್ರೀನಿವಾಸ್ ಕೇವಲ ಆರು ವರ್ಷ ಬಾಲಕನಾಗಿದ್ದಾಗಲೇ ಮೃದುವಾಗಿ ಮೀಟತೊಡಗಿದ್ದ.  ತಮ್ಮ ಮಗನಲ್ಲಿ ಸಂಗೀತ ಅಂತರ್ಗತವಾಗಿದ್ದನ್ನು ಮನಗಂಡ ಸಂಗೀತ ಪ್ರಿಯ ತಂದೆ ಮಗನಿಗಾಗಿ ಒಂದು ಮ್ಯಾಂಡೋಲಿನ್ ಖರೀದಿಸಿ ಆತನಿಗೆ ಸಂಗೀತ ಪಾಠಗಳನ್ನು ನೀಡಲು ಪ್ರಾರಂಭಿಸಿದರು.  ಗಿಟಾರ್ ವಾದಕರಾದ ವಾಸು ರಾವ್ ಅವರು ಏಳು ವರ್ಷದ ಬಾಲಕ ಶ್ರೀನಿವಾಸನಿಗೆ ಪಾಶ್ಚಿಮಾತ್ಯ ಸಂಗೀತವನ್ನು  ಪರಿಚಯಿಸಿದರು.  ಶ್ರೀನಿವಾಸನ ತಂದೆ ಸತ್ಯನಾರಾಯಣರ ಸಂಗೀತ ಗುರುಗಳಾಗಿದ್ದ ರುದ್ರರಾಜು ಸುಬ್ಬರಾಯರಿಗೆ ಮ್ಯಾಂಡೋಲಿನ್ ತಿಳಿದಿರಲಿಲ್ಲ.  ಅವರು ಸಂಗೀತವನ್ನು ಹಾಡಿ ತೋರಿದರೆ ಅದನ್ನು ಬಾಲಕ ಶ್ರೀನಿವಾಸ ಮ್ಯಾಂಡೊಲಿನ್ನಿನಲ್ಲಿ ಪ್ರತಿಧ್ವನಿಸುತ್ತಿದ್ದ.

ಒಂಬತ್ತು ವಯಸ್ಸಿನ ಶ್ರೀನಿವಾಸ್ 1978ರ ವರ್ಷದಲ್ಲಿ ಗುಡಿವಾಡದಲ್ಲಿ ಜರುಗಿದ  ತ್ಯಾಗರಾಜ ಆರಾಧನೆಯ ಸಂದರ್ಭದಲ್ಲಿ ತನ್ನ ಪ್ರಥಮ ಸಂಗೀತ ಸೇವೆಯನ್ನು ಸಲ್ಲಿಸಿದ್ದ.   1981ರ ವರ್ಷದಲ್ಲಿ ತನ್ನ ಹನ್ನೆರಡನೆಯ ವಯಸ್ಸಿನಲ್ಲಿ ಚೆನ್ನೈ ನಗರದ ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿಯಲ್ಲಿ ಸಾರ್ವಜನಿಕವಾಗಿ  ತನ್ನ ಪ್ರಪ್ರಥಮ ಸಂಗೀತ ಕಛೇರಿಯನ್ನು ನಡೆಸಿಕೊಟ್ಟ.  ಅಲ್ಲಿಂದ ಆತ ಹಿಂದಿರುಗಿ ನೋಡಿದ್ದೇ ಇಲ್ಲ.   ನಾಡಿನೆಲ್ಲೆಡೆಯಲ್ಲಿ ಮ್ಯಾಂಡೊಲಿನ್ ಎಂಬ ವಿದೇಶಿ ವಾದ್ಯ ಶ್ರೀನಿವಾಸರ ಕೈಚಳಕದಲ್ಲಿ ಸುಮಧುರವಾದ ಕರ್ನಾಟಕ ಶಾಸ್ರೀಯ ಸಂಗೀತವನ್ನು ಝೇಂಕರಿಸತೊಡಗಿತ್ತು.   ಇದರ ಪ್ರತಿಧ್ವನಿ ವಿಶ್ವದೆಲ್ಲೆಡೆಯಲ್ಲೂ ಆತನ ಕಾರ್ಯಕ್ರಮಗಳ ಮೂಲಕ ಹಾಗೂ ಧ್ವನಿಸುರುಳಿಗಳ ಮೂಲಕ ನಿರಂತರವಾಗಿ ಮಾರ್ದನಿಸ ತೊಡಗಿತು.

ಶ್ರೀನಿವಾಸರ ಮ್ಯಾಂಡೊಲಿನ್ ನಾದ ಅಂತರರಾಷ್ರೀಯ ಪಾಶ್ಚಿಮಾತ್ಯ ಸಂಗೀತ ಖ್ಯಾತರಾದ ಜಾನ್ ಮೆಕ್ಲಾಗ್ಲಿನ್, ಮೈಖೇಲ್ ಬ್ರೂಕ್, ಟ್ರೇ ಗನ್, ನೈಗೆಲ್ ಕೆನ್ನಡಿ ಮುಂತಾದವರೊಂದಿಗೆ ಸಹಾ ಜುಗಲ್ಬಂದಿ ನಡೆಸಿ ಪ್ರಖ್ಯಾತಗೊಂಡಿತ್ತು.

ಭಾರತ ಸರ್ಕಾರದ ಪದ್ಮಶ್ರೀ ಗೌರವ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಸಂಗೀತ ರತ್ನ, ಸನಾತನ ಸಂಗೀತ ಪುರಸ್ಕಾರ, ಪಿಟೀಲು  ಚೌಡಯ್ಯ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಮ್ಯಾಂಡೊಲಿನ್ ಶ್ರೀನಿವಾಸರನ್ನು ಅರಸಿ ಬಂದಿದ್ದವು.   

ಇಂತಹ ಮಹಾನ್ ಪ್ರತಿಭೆ 45ರ ಕಿರು ವಯಸ್ಸಿನಲ್ಲೇ 2014ರ ಸೆಪ್ಟೆಂಬರ್ 19ರಂದು ಈ ಲೋಕದಿಂದ ಕಣ್ಮರೆಯಾಗಿದ್ದು ಸಂಗೀತ ಲೋಕಕ್ಕಾದ ದೊಡ್ಡ ನಷ್ಟ.  ಈ ಮಹಾನ್ ಪ್ರತಿಭೆಯ ಸಂಗೀತವು ಧ್ವನಿ ಸುರುಳಿಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಮತ್ತು ಅವೆಲ್ಲಕ್ಕೂ ಮಿಗಿಲಾಗಿ ಸಂಗೀತ ಪ್ರೇಮಿಗಳ ಹೃದಯದ ಮಿಡಿತಗಳಲ್ಲಿ ನಿರಂತರ ಪ್ರವಹಿಸುತ್ತ ಬಂದಿದೆ.

On the Rembrance day  of Mandolin Srinivas 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ