ಶ್ರೀನಿವಾಸರಾವ್
ಎಸ್. ವಿ. ಶ್ರೀನಿವಾಸರಾವ್
ಎಸ್. ವಿ. ಶ್ರೀನಿವಾಸರಾವ್ ಸಾಹಿತ್ಯ ಮತ್ತು ಸಂಘಟನೆಯಲ್ಲಿ ಕ್ರಿಯಾಶೀಲರೆನಿಸಿದ್ದವರು.
ಶ್ರೀನಿವಾಸ್ರಾವ್ 1934ರ ಡಿಸೆಂಬರ್ 24ರಂದು ತುಮಕೂರು ಜಿಲ್ಲೆಯ ಗೂಳೂರು ಹೋಬಳಿಯ ಚಿಕ್ಕಸಾರಂಗಿ ಗ್ರಾಮದಲ್ಲಿ ಜನಿಸಿದರು. ತಂದೆ ಶ್ಯಾನುಭೋಗ ವೆಂಕಟರಾಮಯ್ಯ, ತಾಯಿ ಪುಟ್ಟಚ್ಚಮ್ಮ. ಪ್ರಾರಂಭಿಕ ಶಿಕ್ಷಣ ತುಮಕೂರಿನ ಓಲ್ಡ್ ಚಾಯ್ಸ್ ಮಿಡ್ಲ್ ಸ್ಕೂಲ್ ಮತ್ತು ಆರ್ಯನ್ ಹೈಸ್ಕೂಲುಗಳಲ್ಲಿ ನಡೆದು, ಫಸ್ಟ್ಗ್ರೇಡ್ ಕಾಲೇಜಿನಿಂದ ಬಿ.ಎಸ್ಸಿ. ಪದವಿ ಪಡದರು. ಜೊತೆಗೆ ರಷ್ಯನ್ ಭಾಷೆಯ ಡಿಪ್ಲೊಮ, ರಾಷ್ಟ್ರ ಭಾಷಾ ವಿಶಾರದ (ಹಿಂದಿ), ಆಚಾರ್ಯ ಪ್ರೌಢಶಾಲಾ ಸಂಜೆ ಕಾಲೇಜಿನಿಂದ ಎ.ಎನ್.ಐ.ಇ. ತಾಂತ್ರಿಕ ವಿಧ್ಯಾಭ್ಯಾಸದ ಜೊತೆಗೆ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಸಹಾ ಪಡೆದರು.
ಶ್ರೀನಿವಾಸರಾವ್ ಹೈಸ್ಕೂಲಿನಲ್ಲಿದ್ದಾಗಲೇ ಸಾಹಿತ್ಯದಲ್ಲಿ ಆಸಕ್ತಿ ಮೂಡಿಸಿಕೊಂಡಿದ್ದರು. ಅಂದಿನ ದಿನಗಳಲ್ಲೇ ವಿಶ್ವಕರ್ನಾಟಕ, ಉಷಾ, ಕರ್ಮವೀರ, ಚಿತ್ರಗುಪ್ತ, ಕಥೆಗಾರ ಮುಂತಾದ ಪತ್ರಿಕೆಗಳಲ್ಲಿ ಅವರ ಕಥೆಗಳು ಪ್ರಕಟಗೊಂಡಿದ್ದವು.
ಶ್ರೀನಿವಾಸರಾವ್ ಉದ್ಯೋಗಕ್ಕಾಗಿ ಸೇರಿದ್ದು ಭಾರತದ ರಕ್ಷಣಾ ಇಲಾಖೆ ಟಿ.ಡಿ.ಇ. ಎಲೆಕ್ಟ್ರಾನಿಕ್ಸ್ ಸಂಸ್ಥೆಯಲ್ಲಿ. ಮುಂದೆ ಅದು ಸಿ.ಕ್ಯು.ಎ.ಎಲ್ ಎಂದಾಯಿತು. ಅಲ್ಲೇ ಬಡ್ತಿ ಪಡೆದು ಸೈಂಟಿಫಿಕ್ ಆಫೀಸರ್ ಆಗಿ 1989 ರಲ್ಲಿ ನಿವೃತ್ತರಾದರು.
ಶ್ರೀನಿವಾಸರಾವ್ ರಕ್ಷಣಾ ಇಲಾಖೆಯಲ್ಲಿದ್ದಾಗ ಅನೇಕ ಯಂತ್ರಗಳನ್ನು ರೂಪಿಸಿ, ಅಭಿವೃದ್ಧಿ ಪಡಿಸಿ ಇಲಾಖೆಯಿಂದ ಹಲವಾರು ಬಹುಮಾನಗಳು ಹಾಗೂ ಪ್ರಶಂಸಾ ಪತ್ರಗಳನ್ನು ಪಡೆದರು. ಹಲವಾರು ಕಾದಂಬರಿಗಳನ್ನು ರಚಿಸಿದರು. ಕಥೆಗಾರ, ಸುಧಾ, ಕನ್ನಡ ಪ್ರಭ, ಪ್ರಜಾಮತ, ಮಲ್ಲಿಗೆ, ಮಂಗಳ, ಬಾಲಮಂಗಳ ಮುಂತಾದ ಪತ್ರಿಕೆಗಳಲ್ಲಿ ಅವರ ಸುಮಾರು 15 ಕಾದಂಬರಿಗಳು ಧಾರಾವಾಹಿಯಾಗಿ ಪ್ರಕಟಗೊಂಡವವೂ ಸೇರಿದಂತೆ 20ಕ್ಕೂ ಹೆಚ್ಚು ಕಾದಂಬರಿಗಳು ಪ್ರಕಟಗೊಂಡವು. ಅವರು ಸುಮಾರು 200 ಕಥೆಗಳ 10 ಕಥಾ ಸಂಕಲನಗಳು, 20 ಮಕ್ಕಳ ಸಾಹಿತ್ಯ ಕೃತಿಗಳು, 5 ಅನುವಾದಿತ ಕೃತಿಗಳು, ವೈಜ್ಞಾನಿಕ ಕೃತಿಗಳು, ಚಾರಿತ್ರಿಕ ಕಾದಂಬರಿಗಳು, ಪ್ರವಾಸ ಕಥನ, ವ್ಯಕ್ತಿ ಚಿತ್ರಗಳು, ಸಂಪಾದಿತ ಇಲ್ಲವೇ ಸಂಕಲನಗಳು, ಸಂಕೀರ್ಣ ಕೃತಿಗಳು ಹೀಗೆ 75 ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದರು. ಕಾಡ ಬೆಳದಿಂಗಳು, ಮಬ್ಬು ಮುಂಜಾವು, ಸ್ವರಮೇಳ, ಇಬ್ಬನಿ, ರಂಗಸ್ಥಳ ಮುಂತಾದ ಪ್ರಸಿದ್ಧ ಕಥೆಗಳು ಇವುಗಳಲ್ಲಿ ಸೇರಿವೆ.
ಆಕಾಶವಾಣಿ ಕೇಂದ್ರದಿಂದ ಇವರ ಹಲವಾರು ರೂಪಕಗಳು, ನಾಟಕಗಳು, ಚಿಂತನ ಕಾರ್ಯಕ್ರಮಗಳು ಪ್ರಸಾರವಾದವು. 'ಇವರನ್ನು ನೀವು ಬಲ್ಲಿರಾ' ಕೃತಿ ಹಾಗೂ ಆದಿ ಕವಿ ಪಂಪನಿಂದ ಹಿಡಿದು ಇಂದಿನ ಕವಿ, ಸಾಹಿತಿಗಳ ಮಾಹಿತಿ ನೀಡುವ 'ಕನ್ನಡ ಸಾಹಿತಿ ದರ್ಶನ ಕೃತಿ' ಸಹಾ ಪ್ರಕಟಿಸಿದರು.
ಶ್ರೀನಿವಾಸರಾವ್ ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತಿನ ಸ್ಥಾಪಕ ಕಾರ್ಯದರ್ಶಿಯಾಗಿ, ಪ್ರಕಾಶಕರ ಸಂಘದ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿಯಾಗಿ, ಪರಿಷತ್ಪತ್ರಿಕೆಯಾದ ‘ಕನ್ನಡ ನುಡಿ’ ಸಂಪಾದಕರಾಗಿ, ಬಿ.ಎಂ.ಶ್ರೀ. ಪ್ರತಿಷ್ಠಾನದ ‘ಲೋಚನ’ ಪತ್ರಿಕೆಯ ಸಂಪಾದಕರಾಗಿ, ದೂರದರ್ಶನ ಕೇಂದ್ರ ಪ್ರಿವ್ಯೂ ಸಮಿತಿಯ ಸದಸ್ಯರಾಗಿ, ಸಾರ್ವಜನಿಕ ಶಿಕ್ಷಣ ನಿರ್ದೇಶನಾಲಯದ ಪ್ರೈಮರಿ ಶಾಲೆಯ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ, ಕರ್ನಾಟಕ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಪುರಸ್ಕೃತ ಪುಸ್ತಕಗಳ ವಿಮರ್ಶಕರಾಗಿ, ಬಿ.ಎಂ.ಶ್ರೀ ಪ್ರತಿಷ್ಠಾನದ ವ್ಯವಸ್ಥಾಪಕ ಕಾರ್ಯದರ್ಶಿಯಾಗಿ ಹಾಗೂ ‘ವಾರ್ತಾ ಪತ್ರ’ದ ಸಂಪಾದಕರಾಗಿ ಹೀಗೆ ಬಹುಮುಖಿಯಾಗಿ ದುಡಿದರು.
ಶ್ರೀನಿವಾಸರಾವ್ ಅವರಿಗೆ 'ಒರಿಯಾ ಕಥೆಗಳು’ ಉತ್ತಮ ಅನುವಾದಕ್ಕಾಗಿ ರಾಜ್ಯ ಸರಕಾರದ ಬಹುಮಾನ, ‘ಪ್ರೌಢಪ್ರತಾಪ ವೀರ ರಾಜೇಂದ್ರ’ ಕೃತಿಗೆ ನೃಪತುಂಗ ಸಾಹಿತ್ಯ ಪ್ರಶಸ್ತಿ, ‘ಸಹನೆ-ಸಾಧನೆ’ – ಮಕ್ಕಳ ಕಥಾಸಂಕಲನಕ್ಕೆ ಆರ್ಯಭಟ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ರನ್ನ ಸಾಹಿತ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ಪುರಸ್ಕಾರ, ಕನ್ನಡ ಶ್ರೀ, ಕರ್ನಾಟಕ ಶ್ರೀ ಪ್ರಶಸ್ತಿ, ಸರಸ್ವತಿ ಸುಪುತ್ರ ಪ್ರಶಸ್ತಿ, ವಿಜಯಶ್ರೀ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ಸಂದಿದ್ದವು.
ಎಸ್. ವಿ. ಶ್ರೀನಿವಾಸರಾವ್ 2018 ಏಪ್ರಿಲ್ 26ರಂದು ಈ ಲೋಕವನ್ನಗಲಿದರು.
On the birth anniversary of writer and creative personality S. V. Sreenivasa Rao
ಕಾಮೆಂಟ್ಗಳು