ಭಾರತಕಥಾಮಂಜರಿ8
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಆದಿಪರ್ವ- ಎಂಟನೆಯ ಸಂಧಿ
ವಾಯುಸುತನುರಿಮನೆಯ ಕೌರವ
ರಾಯ ಕೃತಕವ ಕಳೆದು ಹೊಕ್ಕನು
ತಾಯಿವೊಡಹುಟ್ಟಿದರು ಸಹಿತ ಮಹಾವನಾಂತರವ
—-
ಕೇಳು ಜನಮೇಜಯ ಧರಿತ್ರೀ
ಪಾಲ ಗಜನಗರಿಯಲಿ ಕೌರವ
ರಾಳ ಪಾಂಡವರಾಳ ಸೆಣಸಿನ ಕಾಲು ಮೆಟ್ಟುಗಳ
ಸೂಳು ಮತ್ಸರ ಬಿರುದು ಪಾಡಿನ
ಚೂಳಿಗಲಹದ ಕದಡು ಜೂಜಿನ
ತೋಳುವಲರೊಳತೋಟಿ ಮಸಗಿತು ದಿವಸದಿವಸದಲಿ ೧
ಬೀದಿಗಲಹದ ಕದಡು ಬೀಡಿನ
ಲೈದೆ ಹಬ್ಬಿತು ಬೀಡುಗಲಹದ
ಕೈದೊಳಸು ಕೊಂಡೆಸಗಿ ನಟಿಸಿತು ನಾಡು ನಾಡಿನಲಿ
ಆದುದೆರಡರಸಿಭಪುರಿಗೆ ಕಾ
ಳಾದುದಿನ್ನೇನೆಂದು ಪುರಜನ
ವೈದೆ ಹೆದರಿತು ಭೀಮ ದುರ್ಯೋಧನರ ಹೋರಟೆಗೆ ೨
ಬೇರೆ ಪಾಂಡವರಿರಲಿ ರಾಯನ
ನೂರು ಮಕ್ಕಳು ಪುರವನಾಳಲಿ
ಬೇರೆ ಕೌರವರಿರಲಿ ಪಾಂಡವರಾಳಲಿಭ ಪುರಿಯ
ನೂರರೊಡನೈವರನು ಧರಿಸಿರ
ಲಾರದೀ ಪುರಿಯೆನುತ ದುಗುಡವ
ಹೇರಿ ಹೊದಕುಳಿಗೊಳುತಲಿರ್ದುದು ಹಸ್ತಿನಾನಗರ ೩
ಒಂದು ದಿವಸ ಸುಯೋಧನನು ನಿಜ
ಮಂದಿರದೊಳೇಕಾಂತದಲಿ ಮನ
ನೊಂದು ನುಡಿದನು ಶಕುನಿ ಕರ್ಣ ಜಯದ್ರಥಾದ್ಯರಿಗೆ
ಅಂದು ಭೀಮಾರ್ಜುನರು ದ್ರುಪದನ
ತಂದು ದಕ್ಷಿಣೆಯಿತ್ತು ಗುರುವಿಗೆ
ಸಂದರೈ ಸಮರದಲಿ ಪರಿಭವವಾಯ್ತು ತಮಗೆಂದ ೪
ವನಜ ವನದಲಿ ತುರುಚೆ ಕಬ್ಬಿನ
ಬನದಿ ಕಡಸಿಗೆ ಚೂತಮಯ ಕಾ
ನನದಿ ಬೊಬ್ಬುಲಿ ಭೀಮಸೇನನಯಿರವು ತಮ್ಮೊಳಗೆ
ಇನಿತು ಪಾರ್ಥನ ಮೇಲೆ ಯಮಳರ
ಜಿನುಗಿನಲಿ ಜಾರೆನು ಯುಧಿಷ್ಠಿರ
ಜನಪನಾಗಲಿ ಮೇಣು ಮಾಣಲಿ ಭೀತಿಯಿಲ್ಲೆಂದ ೫
ಹುದು ನಡೆಯದಿವರೊಡನೆ ನಮ್ಮಲಿ
ಕದನವೇ ಕೈಗಟ್ಟುವುದು ಕಾ
ದಿದೊಡೆ ಹೆಬ್ಬಲವಹುದು ದುರ್ಬಲ ದೈವಗತಿ ಬೇರೆ
ನದಿಗಳರಳೆಯ ಹಾಸು ನವ ವಿಷ
ವುದರ ದೀಪನ ಚೂರ್ಣವಾವಂ
ಗದಲಿ ಸಾಪತ್ನರಲಿ ಸದರವ ಕಾಣೆ ತಾನೆಂದ ೬
ದುಗುಡವೇತಕೆ ಜೀಯ ಡೊಂಬಿನ
ಜಗಳವನು ತೆಗೆದರಿನೃಪರ ಸುಂ
ಟಗೆಯ ನಾಯ್ಸುವೆನವರ ತನುವನು ಯುದ್ಧ ರಂಗದಲಿ
ದಿಗು ಬಲಿಯ ಕೊಡಿಸುವೆನು ಸಾಕಿ
ನ್ನೊಗುಮಿಗೆಯ ಚಿಂತಾಂಗನೆಯನೋ
ಲಗಿಸದಿರು ಕುರುರಾಯ ಚಿತ್ತೈಸೆಂದನಾ ಕರ್ಣ ೭
ಹೊಡೆದು ಹೊಡೆಚೆಂಡಾಡಿ ರಿಪುಗಳ
ಗಡಣವನು ಯಮರಾಜಧಾನಿಗೆ
ನಡೆಸುವೆನು ನೀ ನೋಡುತಿರು ಸಾಕೊಂದು ನಿಮಿಷದಲಿ
ಕೊಡು ತನಗೆ ನೇಮವನು ದುಗುಡವ
ಬಿಡು ಮನಸ್ಸಿನ ಕಂದು ಕುಂದನು
ಹಿಡಿಯದಿರು ಕುರುರಾಯ ಚಿತ್ತೈಸೆಂದನಾ ಕರ್ಣ ೮
ಹಬ್ಬುಗೆಯ ಹದಿನಾಲ್ಕು ಲೋಕದ
ಮೊಬ್ಬುಗಳನೀಡಾಡಿ ನಭದೊಳ
ಗೊಬ್ಬನೇ ರವಿ ತೊಳಗಿ ಬೆಳಗುವವೋಲು ಪಾಂಡವರ
ಕೊಬ್ಬುಗಳ ನಿಲಿಸುವೆನು ಧರೆಯೊಳ
ಗೊಬ್ಬನೇ ದುರ್ಯೋಧನನು ಮ
ತ್ತೊಬ್ಬರಿಲ್ಲೆಂದೆನಿಸಿ ತೋರುವೆನೆಂದನಾ ಕರ್ಣ ೯
ವಿದುರ ಭೀಷ್ಮಾದಿಗಳು ನಿನ್ನಯ
ಸದನದೊಳಗುಂಡುಟ್ಟು ಪರರ
ಭ್ಯುದಯವನೆ ಬಯಸುವರು ದೂರುವರೆಮ್ಮನವರುಗಳ
ಹದನ ನೀನೇ ಬಲ್ಲೆ ಸಾಕಿ
ನ್ನದರ ಮಾತೇಕರಸ ತನ್ನಯ
ಕದನವನು ಚಿತ್ತೈಸು ಸಾಕಿನ್ನೆಂದನಾ ಕರ್ಣ ೧೦
ಸಹಜವೀ ನುಡಿ ಕರ್ಣನಾಡಿದ
ನಹುದು ಪಾಂಡವರೆಂಬವರು ಕಡು
ಸಹಸಿಗಳು ಗೆಲಲರಿದು ಕುಹಕೋಪಾಯ ಮಾರ್ಗದಲಿ
ಅಹಿತರನು ಗೆಲಬಹುದು ಪರಿಕರ
ಸಹಿತವರುಗಳ ನಿಮ್ಮ ಚಿತ್ತಕೆ
ಬಹರೆ ತನ್ನಭಿಮತವನವಧರಿಸೆಂದನಾ ಶಕುನಿ ೧೧
ಐದು ಮುಖವೀರೈದು ಭುಜ ಹದಿ
ನೈದು ಕಂಗಳ ವಿಗಡ ರುದ್ರನು
ಮೇದಿನಿಯ ಮೇಲೊಂದು ಶಿರಭುಜವೆರಡನಳವಡಿಸಿ
ಆದಿಪುರುಷನು ಭೀಮ ಪೆಸರಿನ
ಲೈದೆ ಜನಿಸಿದನಾತನಿದಿರಲಿ
ಕೈದುಕಾರನದಾವನೈ ಹೇಳೆಂದನಾ ಶಕುನಿ ೧೨
ಅರಸ ಕೇಳ್ಬಿಲು ವಿದ್ಯದಲಿ ಮೂ
ವರು ಕಣಾ ಸಾಮರ್ಥ್ಯ ಪುರುಷರು
ಧರೆಯೊಳೊಬ್ಬರಿಗೊಂದು ಗುಣ ಪಾರ್ಥಂಗೆ ಮೂರು ಗುಣ ಭರಿತವಾಗಿಹುದಾತನೊಬ್ಬನ
ಸರಿಸದಲಿ ಮಾರಾಂತು ಜೀವಿಸಿ
ಮರಳ ಬಲ್ಲವನಾವನೈ ಹೇಳೆಂದನಾ ಶಕುನಿ ೧೩
ರಾಮಚಂದ್ರನ ಚರಣಯುಗ ನಿ
ಸ್ಸೀಮ ಭೀಷ್ಮಾಚಾರಿಯರ ಶಿರ
ವಾ ಮಹಾರಥ ದ್ರೋಣನೆದೆ ನಡುಗುವುದು ಸಮರದಲಿ
ಸೌಮನಸ್ಯನು ನಿಷ್ಪ್ರಕಂಪ ಸ
ನಾಮನರ್ಜುನ ದೇವನಿದಿರಲಿ
ಭೂಮಿಯಲಿ ಬಿಲ್ಲಾಳದಾವವನೆಂದನಾ ಶಕುನಿ ೧೪
ಶತ್ರುಗಳ ಸಂಹರಿಸಿ ರಾಜ್ಯವ
ನೊತ್ತಿಯಾಳುವೆನೆಂಬ ಸಾಹಸ
ಸತ್ವಗುಣ ನಿನಗಿಲ್ಲ ಪಾಂಡವರತುಲ ಭುಜಬಲರು
ಕೃತ್ರಿಮದ ಮುಖದಿಂದ ರಿಪುಗಳ
ಕಿತ್ತುಹಾಯಿಕಿ ನೆಲನನೇಕ
ಚ್ಛತ್ರದಲಿ ಸಲಹುವುದು ಮತ ಕೇಳೆಂದನಾ ಶಕುನಿ ೧೫
ಸೋದರರುಗಳು ನೀವು ನಿಮ್ಮೊಳು
ಭೇದ ಮಂತ್ರವ ಮಾಡುವುದು ಮ
ರ್ಯಾದೆಯೇ ನಾವ್ ನಿಮ್ಮಡಿಯಲರಮನೆಯ ಸೇವಕರು
ವಾದಿಸುವರಿತ್ತಂಡ ಸರಿ ನಮ
ಗಾದರೆಯು ಕಂಡುದ ನುಡಿಯ ಬೇ
ಕಾದರಿಸು ಮೇಣ್ ಮಾಣು ಬಿನ್ನಹವೆಂದನಾ ಶಕುನಿ ೧೬
ಪಕ್ಷವೆರಡೇ ಲೋಕದೊಳ್ ಪಿತೃ
ಪಕ್ಷ ಮೇಣಾ ಮಾತೃಪಕ್ಷ ವಿ
ಪಕ್ಷ ತಂದೆಯ ದೆಸೆ ಸಪಕ್ಷವು ತಾಯ ದೆಸೆಯವರು
ತಕ್ಷಕನ ತೆರನಂತೆ ನಿಮ್ಮನು
ಭಕ್ಷಿಸುವರಾವಂಗದಲಿ ನೀ
ನೀಕ್ಷಿಸುವುದೈ ಪಾಂಡು ಪುತ್ರರನೆಂದನಾ ಶಕುನಿ ೧೭
ಮೊಳೆಯಲೇ ಮುರುಡಿಸಲು ಬೇಹುದು
ಬಲಿದ ಬಳಿಕದು ನಿನ್ನ ಹವಣೇ
ಇಳೆಯೊಳರ್ಧವನಿತ್ತು ರಿಪುಗಳ ಹೆಚ್ಚಿಸಿದ ಬಳಿಕ
ಗೆಲುವನಾವನು ದೇವ ದಾನವ
ರೊಳಗೆ ಭೀಮಾರ್ಜುನರ ಕೈ ಮನ
ದಳವನರಿಯಾ ಭಾರವೈ ಮೇಲೆಂದನಾ ಶಕುನಿ ೧೮
ಧಾರುಣಿಯೊಳು ಪಿಪೀಲಿಕೆಯು ವಿ
ಸ್ತಾರದಲಿ ಮಾಡಿದ ಮನೆಯ ಕಾ
ಳೋರಗನು ಹೊಗುವಂತೆ ರಿಪು ಕುಂತೀಕುಮಾರಕರು
ವೈರದಲಿ ಸಪ್ತಾಂಗವನು ಕೈ
ಸೂರೆಗೊಂಬರು ತಪ್ಪದಿದಕೆ ವಿ
ಚಾರವನು ಕಾಲದಲಿ ಮಾಡುವುದೆಂದನಾ ಶಕುನಿ ೧೯
ಹಿಂದೆ ನೀನವರುಗಳ ನಾನಾ
ಚಂದದಲಿ ನೋಯಿಸಿದೆ ಮನದಲಿ
ಕಂದು ಕುಂದದು ಕಷ್ಟ ವೃತ್ತಿಯನಾಚರಿಸುತಿಹರು
ಇಂದು ನೀನಾ ಪಾಂಡುಪುತ್ರರ
ನಂದಗೆಡಿಸದೆ ಬಿಟ್ಟೆಯಾದೊಡೆ
ಮುಂದೆ ಬೆಟ್ಟಿತು ರಾಜಕಾರಿಯವೆಂದನಾ ಶಕುನಿ ೨೦
ಇರುಬಿನಲಿ ಸಿಕ್ಕಿರ್ದ ಹುಲಿಯನು
ಮುರಿದು ಕಳೆಯದೆ ತಳಪಟಕೆ ಬಿ
ಟ್ಟಿರಿಯ ಬಹುದೇ ಕೊಂದು ಕೂಗದೆ ಬಿಡುವುದೇ ಬಳಿಕ
ಕರುಬರಹ ಪಾಂಡವರಿಗೀಗಲೆ
ಹರುವ ನೆನೆ ಹೊರಬಿದ್ದ ರಾದೊಡೆ
ತರಿದು ಬಿಸುಡದೆ ಮಾಣ್ವರೇ ಹೇಳೆಂದನಾ ಶಕುನಿ ೨೧
ಹರಿಹಯನು ವೃತ್ರಾಸುರನ ಸಂ
ಹರಿಸಲರಿಯದೆ ಗರುವದಿಂದಿರು
ತಿರಲವನು ದಿನದಿನದೊಳಣುವಣು ಮಾತ್ರವನು ಬೆಳೆದು
ಧರೆಯ ತುಂಬಲು ತನ್ನ ಸತ್ವದ
ನೆರವಣಿಗೆಗೈದಿಸದೆ ನಾನಾ
ತೆರದೊಳಾಯಸಗೊಳ್ಳನೇ ಹೇಳೆಂದನಾ ಶಕುನಿ ೨೨
ಅಡವಿಯಲಿ ಜನಿಸಿದರು ಬೆಳವಿಗೆ
ಯಡವಿಯೊಳಗಿನ್ನವರ ಬಾಳಿಕೆ
ಗಡವಿಯೇ ನೆಲಮನೆಯದಲ್ಲದೆ ಪಾಂಡುಪುತ್ರರಿಗೆ
ಪೊಡವಿಯೊಡೆತನ ಸಲ್ಲದವರನು
ನಡೆಸುವುದು ಕಾಲದಲಿ ರಾಜ್ಯವ
ಕೊಡುವುದಾವಂಗದಲಿ ಮತವಲ್ಲೆಂದನಾ ಶಕುನಿ ೨೩
ತಿಮಿರವಡಗಿದ ಲೋಕ ಶಿಕ್ಷಾ
ಕ್ರಮಣವಡಗಿದ ದಂತಿ ಕರ್ಮ
ಭ್ರಮೆಗಳಡಗಿದ ಯೋಗಿ ರುಜೆಯಡಗಿದ ನರೋತ್ತಮನು
ಹಿಮವಡಗಿದ ಸರೋಜದಂತಿಹು
ದಮಲ ಮತ ಕೇಳ್ಪಗೆಗಳಡಗಿದ
ಡಮರ ಪದವೆನಿಸುವುದು ಚಿತ್ತೈಸೆಂದನಾ ಶಕುನಿ ೨೪
ಬಿಡದೆ ಸುಖ ದುಃಖಗಳೊಳೊಂದನು
ಹಿಡಿದು ಸದ್ವ್ಯವಹಾರ ಮುಖದಲಿ
ನಡೆಯಲೊಂದರ ತುಷ್ಟಿಯೊಂದರ ನಷ್ಟ ತನಗಹುದು
ಹಿಡಿವುದಿಹಪರವೆರಡರೊಳಗಳ
ವಡಿಕೆ ತನಗಹುದೊಂದನೊಂದನು
ಬಿಡುವುದಲ್ಲದೆ ಬೇರೆ ಮತವಿಲ್ಲೆಂದನಾ ಶಕುನಿ ೨೫
ಭಾವ ಮೈದುನನಣ್ಣ ತಮ್ಮನು
ಮಾವನಳಿಯನು ಪುತ್ರಮಿತ್ರರು
ಸೇವಕರು ಸಜ್ಜನರು ಸುಜನರು ಸತ್ಯಯುತರೆಂದು
ಭಾವಿಸದಿರಾರುವನು ನಿನ್ನಯ
ಜೀವವುಳ್ಳನ್ನೆಬರ ನಿನ್ನಯ
ದೈವಗತಿಯೆಂದು ನಂಬಿಹುದೆಂದನಾ ಶಕುನಿ ೨೬
ಶತ್ರು ಶೇಷವಿದಲ್ಪವೆಂದುಳು
ಹುತ್ತ ಬರಲಾಗದು ಕಣಾ ಭೂ
ಪೋತ್ತಮರುಗಳು ವೈರಿ ರಾಯರ ವಂಶ ಬೀಜವನು
ಬಿತ್ತು ವರೆ ನೇತ್ರಾವಳಿಯ ಮೀ
ಟೆತ್ತಿ ಕಾರಾಗಾರದೊಳಗೆ ಕ
ಳತ್ರ ಸಹಿತನಶನದಲಧಿಕ ವ್ರತವ ಮಾಡೆಂದ ೨೭
ವಿಷವನಣುವೆಂದಳುಕದುಪಭೋ
ಗಿಸಲು ಕೊಲ್ಲದೆ ಬಿಡುವುದೇ ಕರ
ಗಸದ ನಡು ಬಡವಾದರೆಯು ಕುಯ್ದಿಕ್ಕದೇ ತರುವ
ಶಿಶುವಿವನು ಸಾಮರ್ಥ್ಯ ಪುರುಷನೆ
ಪುಸಿ ಕಣಾಯೆಂದುಳುಹಿದೊಡೆ ರ
ಕ್ಕಸನಹನು ಮುಂದಕ್ಕೆ ತನಗವನೆಂದನಾ ಶಕುನಿ ೨೮
ಕಾಲವನು ಗೂಗೆಗಳು ನಿರ್ಜರ
ರೇಳಿಗೆಯನಾ ದೈತ್ಯರುಗಳು ತ
ಮಾಳಿ ರವಿರಶ್ಮಿಗಳನಾ ಬಲು ನಿದ್ರೆಯನು ಚೋರ
ಕಾಲ ಭುಜಗನು ಗರುಡನುಳಿವನು
ತಾಳದಂದದಿ ಪಾಂಡವರು ನಿ
ನ್ನೇಳಿಗೆಯ ಸೈರಿಸರು ಚಿತ್ತೈಸೆಂದನಾ ಶಕುನಿ ೨೯
ವಿಗಡ ರುದ್ರನು ಲೋಚನಾಗ್ನಿಯೊ
ಳೊಗುಮಿಗೆಯ ಕೋಪದಲಿ ಕಾಮನ
ಮಿಗೆ ದಹಿಸಿದಂದದಲಿ ರಿಪು ಕುಂತೀಕುಮಾರಕರ
ಹೊಗೆದು ಕಳೆ ಲಾಕ್ಷಾಭವನದಲಿ
ಹಗೆಗೆ ಹರಿವಹುದಲ್ಲದಿರ್ದೊಡೆ
ವಿಗಡಿಸುವುದೈ ರಾಜಕಾರ್ಯವಿದೆಂದನಾ ಶಕುನಿ ೩೦
ಹಿಡಿವ ಫಣಿಯನು ಹೊಡೆವ ಸಿಡಿಲನು
ಜಡಿವ ಮಾರಿಯ ನಲಿವ ರುಜೆಯನು
ಮಡಿವ ದಿನವನು ಹಾನಿವೃದ್ಧಿಯ ಹೆಚ್ಚು ಕುಂದುಗಳ
ಕಡಿವ ಹಗೆಯನು ಕಾಲಕರ್ಮದ
ಗಡಣವನು ಸುಖದುಃಖದುದಯದ
ಕಡೆ ಮೊದಲ ಕಾಣಿಸುವನಾವವನೆಂದನಾ ಶಕುನಿ ೩೧
ಇನಿತು ಚಿಂತಿಸಲೇಕೆ ಕೌರವ
ಎನಪ ನಿಮ್ಮಡಿಗಳಿಗೆ ತಾನೊಂ
ದನುವ ಬಿನ್ನಹ ಮಾಡುವೆನು ಪಾಂಡವರ ನೆಳಲಿರಲು
ನಿನಗೆ ರಾಜ್ಯವನಾಳ್ವ ಫಲ ಸಂ
ಜನಿಸಲರಿಯದು ಕಾಲದಲಿ ನೀ
ನೆನೆ ಉಪಾಯವನೊಂದನೆಂದು ಕಳಿಂಗ ಕೈಮುಗಿದ ೩೨
ದೇವ ದಾನವರಂತೆ ಹದ್ದಿನ
ಹಾವಿನೋಲತಿ ವೈರ ಬಂಧದ
ಠಾವು ಠವಣೆಯ ನೀರು ಭೇದಿಸುವಂತೆ ಭೇದಿಸುತ
ಕಾವವರ ಕಾವುತ್ತ ಕಂಟಕ
ಜೀವಿಗಳನಪಹರಿಸುತಂತ
ರ್ಭಾವ ಶುದ್ಧಿಯೊಳಿಳೆಯನಾಳುವುದೆಂದನಾ ಶಕುನಿ ೩೩
ಮೃತ್ಯುವಿನ ತಾಳಿಗೆಯೊಳಗ್ಗದ
ಶತ್ರುಗಳ ಸಾಮೀಪ್ಯದಲಿ ದು
ರ್ವೃತ್ರರೋಲಗದೊಳಗೆ ಸಿಂಹದ ಗುಹೆಯೊಳಹಿಪತಿಯ
ಹುತ್ತಿನೊಳಗಿಹವೋಲು ಸಲೆ ಬಾ
ಳುತ್ತ ಲಂತಃಪುರದೊಳರಸಿರ
ಲತ್ಯಧಿಕದೆಚ್ಚರಿಕೆಯಿರ ಬೇಕೆಂದನಾ ಶಕುನಿ ೩೪
ಹಗೆಯ ಹೆಂಗಳನರಮನೆಗಳೊಳು
ಪೊಗಿಸಲಾಗದು ತನಗವರು ಹೇ
ಳಿಗೆಯ ಹಾವಿನವೋಲು ಸುಖತರವಲ್ಲವರಿ ನೃಪರ
ಮಗಳ ಮಕ್ಕಳ ದೆಸೆಯವರನೋ
ಲಗಿಸುವರ ಬಾಹತ್ತರ ನಿಯೋ
ಗಿಗಳ ನಂಬುವುದುಚಿತವೇ ಹೇಳೆಂದನಾ ಶಕುನಿ ೩೫
ದೈವ ಹೊಡೆದಂದದಲಿ ಬೆರತು ಸ
ಭಾ ವಲಯದಲಿ ಗರ್ವ ವಿಭ್ರಮ
ಭಾವ ಭೂಷಿತನಾಗಿ ವೈಹಾಯಸವನೀಕ್ಷಿಸುತ
ಹಾವಿನಂದದೊಳಿರದೆ ಹಾಸ್ಯ ರ
ಸಾವಲಂಬನನಾಗದೆಯು ಸುಖ
ಜೀವಿಯಾಗಿಹುದುತ್ತಮವು ಕೇಳೆಂದನಾ ಶಕುನಿ ೩೬
ಹೀನಮುಖ ಬಹುಮುಖ ಪರಾಙ್ಮುಖ
ದೀನಮುಖ ವಾಚಾಲಮುಖವ
ಜ್ಞಾನಮುಖವಂತರ್ಮುಖ ಬಹಿರ್ಮುಖದ ಕಾರ್ಯದಲಿ
ಆ ನರೇಂದ್ರನ ವರ್ತನಕೆ ದು
ಸ್ಥಾನವಾಗದೆ ಬಿಡದು ಸಂಶಯ
ವೇನಿದಕೆ ಕುರುರಾಯ ಚಿತ್ತೈಸೆಂದನಾ ಶಕುನಿ ೩೭
ಶಯನದಲಿ ವಹ್ನಿಯಲಿ ವೈಹಾ
ಳಿಯಲಿ ಬೇಟೆಯಲೂಟದಲಿ ಕೇ
ಳಿಯಲಿ ಸುರತ ಕ್ರೀಡೆಯಲಿ ಮಜ್ಜನದ ಸಮಯದಲಿ
ಜಯದ ಜೋಕೆಯಲೋಲಗದ ಮರ
ವೆಯಲಿ ವಾರಸ್ತ್ರೀಯರುಗಳಲಿ
ಲಯವನೈದಿಸಬಹುದು ಚಿತ್ತೈಸೆಂದನಾ ಶಕುನಿ ೩೮
ರುಜೆಯನಲುಗುವ ರದನವ ದ್ರುಗು
ರಜವನನುಚಿತಜಾತ ಧೂಮ
ಧ್ವಜವ ರುಣವನವಿದ್ಯೆಯನು ಗೃಹವಾಸ ಕುಂಡಲಿಯ
ವೃಜಿನವನು ಕಂಪಿತವ ವೈರಿ
ವ್ರಜವನುಳುಹುವನೆಗ್ಗನೆಂಬಿದು
ಸುಜನರಭಿಮತ ನಿನ್ನ ಮತವೇನೆಂದನಾ ಶಕುನಿ ೩೯
ಮಣಿದು ಕೂಪದ ಜೀವನವ ಕಡೆ
ಗಣಿಸದೇ ಘಟಯಂತ್ರ ಮೃಗರಿಪು
ಹಣಿಗಿದರೆ ಹರಿಣಂಗೆ ಗೆಲವೇ ಕಾರ್ಯಗತಿಯರಿದು
ಮಣಿವುದಳುಕುವುದಾವ ಪರಿಯಿಂ
ದೆಣಿಸಿ ಮನದಲಿ ವೈರಿ ರಾಯರ
ಹಣಿದವಾಡುವುಪಾಯವಿದು ಕೇಳೆಂದನಾ ಶಕುನಿ ೪೦
ಅಹಿಯ ಬಾಧೆಯ ಬಲೆಗೆ ಸಿಲುಕಿದ
ಮಿಹಿರ ಬಿಂಬದವೋಲು ಮಾಯಾ
ವಿಹರಣದ ವೀಥಿಯಲಿ ಸಿಕ್ಕಿದ ಜೀವರುಗಳಂತೆ
ಅಹಿತರುಪಟಳದೊಳಗೆ ಸಿಲುಕದೆ
ಕುಹಕರವದಿರ ಹರಿವ ನೆನೆ ಲೇ
ಸಹುದು ಕಾಲಕ್ಷೇಪವಿದಕೇನೆಂದನಾ ಶಕುನಿ ೪೧
ನಂಬುವರ ನೆರೆ ನಂಬು ನಂಬದ
ಡಂಬಕರ ನಂಬದಿರು ಸಂಗರ
ವೆಂಬ ಮಾತಿಗೆ ಹಂಬಲಿಸಿ ಬೆಂಬೀಳ್ವ ಬಾಹಿರರ
ನಂಬಿರದಿರರಿರಾಯ ಹನನ ವಿ
ಳಂಬನವ ಮಾಡದಿರು ರೋಷಾ
ಡಂಬರವ ರಚಿಸದಿರು ಬಹಿರಂಗದಲಿ ನೀನೆಂದ ೪೨
ಖೂಳನಹ ದಾತಾರನನು ದು
ರ್ಮೇಳನಹ ಮಿತ್ರನನು ತನಗನು
ಕೂಲೆಯಲ್ಲದ ಸತಿಯನಂತರ್ದಾಯಿಯಹ ನರನ
ವ್ಯಾಳಯುತವಹ ನಿಳಯವಿನಿತುವ
ಕಾಲದಲಿ ವರ್ಜಿಸುವುದಲ್ಲದೊ
ಡೂಳಿಗವು ಹಿರಿದಹುದು ಚಿತ್ತೆಸೆಂದನಾ ಶಕುನಿ ೪೩
ಎಲ್ಲರಿಂ ಬಹುಧನವ ಕೊಳು ನಿ
ನ್ನಲ್ಲಿ ಕಾಣಿಯ ಬರಿದೆ ಸೋಲದಿ
ರಿಲ್ಲವೆನ್ನದೆ ನುಡಿದು ಕಾಲಕ್ಷೇಪವನು ಮಾಡು
ಒಳ್ಳಿದನು ನಮಗೆಂಬ ನಯ ನುಡಿ
ಯೆಲ್ಲರಲಿ ಬೆಚ್ಚಂತೆ ರಿಪುಗಳ
ಗೆಲ್ಲಗೆಡಹುವ ಮಂತ್ರವಿದು ಕೇಳೆಂದನಾ ಶಕುನಿ ೪೪
ಧನವಿತ್ತಾದೊಡೆಯು ಸಹಭೋ
ಜನವನುಂಡಾದೊಡೆಯು ಮೇಣ್ ನಿಜ
ತನುಜೆಯರನಿತ್ತಾದೊಡೆಯು ಬಳಿಸಂದು ಬೇಸರದೆ
ತನುವ ಬೆರಸಿದ್ದಾದೊಡೆಯು ನೂ
ತನ ಗುಣವ ನುಡಿದಾದೊಡೆಯು ರಿಪು
ಜನಪತಿಯ ವಶ ಮಾಳ್ಪುದುಚಿತವಿದೆಂದನಾ ಶಕುನಿ ೪೫
ಕೋಶ ಪಾನಾದಿಗಳ ಮಾಡಿ ಮ
ಹೀಸುರರ ಮೇಲಾಯುಧಂಗಳ
ಸೂಸಿ ದೈವವ ಮುಟ್ಟಿ ದಿವ್ಯಾಜ್ಞೆಗಳಲೊಡಬಡಿಸಿ
ಹೇಸದರಿ ಭೂಪಾಲರನು ನಿ
ಶ್ಶೇಷವೆನಿಸುವುದಲ್ಲದಿರ್ದೊಡೆ
ಪೈಸರಿಸುವುದು ರಾಜಕಾರ್ಯವಿದೆಂದನಾ ಶಕುನಿ ೪೬
ನರಕವಿಲ್ಲದ ನರರು ನಾರಿಯ
ರುರುಬೆಯಿಲ್ಲದ ಯತಿಗಳಸುರರ
ವಿರಸವಿಲ್ಲದ ಸುರರು ಮಾಯಾಪಾಶವನು ಹರಿದ
ಪರಮ ತತ್ವಜ್ಞಾನಿಯವೋಲೀ
ಧರೆಯ ನರಪಾಲಕರುಗಳು ಹಗೆ
ಹರಿದು ಹೋಗಲಸಾಧ್ಯವಹುದೇನೆಂದನಾ ಶಕುನಿ ೪೭
ಮಸಗೆ ಮೂಡಿದ ಹೊಲನು ದುಷ್ಟ
ಪ್ರಸರದೇಳಿಗೆ ಪಾಪಿಯೋಲಗ
ಹುಸಿಯ ಬಾಳುವೆ ಹುದುವಿನಾರಂಭದ ಫಲೋದಯವು
ನಸಿದು ಹೋಗದೆ ಲೋಕದೊಳಗವು
ಹೆಸರುವಡೆವವೆ ಹಗೆಯ ಹೆಚ್ಚುಗೆ
ಹಸನ ಕೊಡುವುದೆ ರಾಯ ಚಿತ್ತೈಸೆಂದನಾ ಶಕುನಿ ೪೮
ಜಾತಿ ಬಾವನ್ನದಲಿ ಸರ್ಪದ
ಭೀತಿ ಸತ್ಪುರುಷರಿಗೆ ದುರ್ಜನ
ಭೀತಿ ದೇವಾದ್ಯರಿಗೆ ದನುಜಾದಿಗಳ ಬಲು ಭೀತಿ
ಜಾತ ಮಾತ್ರಕೆ ಜನನ ಮರಣದ
ಭೀತಿ ಬೆಂಬಿಡದಂತೆ ಗೋತ್ರಜ
ಭೀತಿಭೂಪಾಲರಿಗೆ ಹಿರಿದಹುದೆಂದನಾ ಶಕುನಿ ೪೯
ಕರಣಿಕರು ಕರಣಿಕರೊಡನೆ ಸಹ
ಚರರು ಸಹಚರರೊಡನೆ ಸಾವಂ
ತರಲಿ ಸಾವಂತರುಗಳಾ ಮಂತ್ರಿಯಲಿ ಮಂತ್ರಿಗಳು
ತರುಣಿಯರು ತರುಣಿಯರೊಡನೆ ಪರಿ
ಕರರು ಪರಿಕರರೊಡನೆಯಿರಲೊರ
ಸೊರಸುಮಿಗೆ ಮಸೆವುದು ಕಣಾ ಭೂಭುಜನೆ ಕೇಳೆಂದ ೫೦
ವ್ಯಾಕುಲಿತ ವಿಪ್ರರ ವಿಸತಿಯ ದಿ
ವಾಕರನ ಲೋಕಾಯತರ ರ
ತ್ನಾಕರನ ಲಾವಕರ ಹಿಸುಳರ ದಾಯಭಾಗಿಗಳ
ಶೋಕಿಗರ ಮಾಯಾವಿಗಳ ದ
ರ್ವೀಕರನ ವಿನಿಯೋಗಿಗಳ ಸ
ರ್ವೈಕ ಮತ್ಸರದೊಳಗೆ ಬದುಕುವನಾವ ಪೇಳೆಂದ ೫೧
ಮಂಜು ಮಹಿಯನು ಮುಸುಕುವಂತೆ ಧ
ನಂಜಯನು ಕಾನನವ ಸುಡುವಂ
ತಂಜಿಕೆಗಳುಮ್ಮಾಹವನು ಹೊಯ್ದೊರಸುವಂದದಲಿ
ರಂಜಕರು ಪಾಂಡವರು ನಿನ್ನನು
ಭಂಜಿಸುವರಾವಂಗದಲಿ ನವ
ಕುಂಜರನ ಕಾಲಾಟ ಸಿಂಹಕೆ ಸೇರುವುದೆಯೆಂದ ೫೨
ದನಿಗೆ ನಡೆದೊಳಪೊಕ್ಕು ಮರ ಗೂ
ಡಿನಲಿ ಸಿಲುಕಿದ ಹುಲಿಯವೋಲ್ ಕಾ
ನನದಿ ಬೀಸಿದ ಬಲೆಯೊಳಗೆ ಗಾನಕ್ಕೆ ಮನ ಸೋಲ್ದು
ಹನನವರಿಯದ ಮೃಗದವೋಲಿರು
ಬಿನಲಿ ಕೆಡಹಿದ ಕರಿಯವೋಲ್ ರಿಪು
ಜನಪರಭ್ಯುದಯದ ವಿನಾಶವನೆಸಗೆ ಬೇಕೆಂದ ೫೩
ಎಂದು ದುರ್ಬೋಧೆಗಳ ನಾನಾ
ಚಂದದಲಿ ಬೋಧಿಸಿ ಸುನೀತಿಯ
ನಂದಗೆಡಿಸಿ ತದೀಯ ವಂಶಚ್ಛೇದ ಮಾರ್ಗವನು
ಒಂದುಗೂಡಿ ಸುಯೋಧನಂಗಾ
ನಂದವೆನಿಸಿ ಕಳಿಂಗ ಲೋಕವ
ಕೊಂದನೈ ಜನಮೇಜಯ ಕ್ಷಿತಿಪಾಲ ಕೇಳೆಂದ ೫೪
ಎಮ್ಮ ಬಹುಮಾನಾವಮಾನವು
ನಿಮ್ಮದಲ್ಲದೆ ಬೇರೆ ನಮ್ಮಯ
ಸೊಮ್ಮು ಸಂಬಂಧದಲಿ ಹಿತವರ ಕಾಣೆ ನಾನಿನ್ನು
ಸಮ್ಮತದಿ ಪಾಂಡವರಿಗಗ್ನಿಯ
ಲೊಮ್ಮೆ ಹರಿವನು ನೆನೆವೆನೊದವಿದ
ಡೆಮ್ಮ ಸುಕೃತೋದಯದ ಫಲವೆಂದನು ಸುಯೋಧನನು ೫೫
ಎನೆ ಕಳಿಂಗಾದಿಗಳು ತಂತ
ಮ್ಮನುಮತವ ಹೆಳಿದರು ಕೌರವ
ಜನಪನವರಿಗೆ ಕೇಡ ನಿಶ್ಬೈಸಿದನು ಮನದೊಳಗೆ
ಜನಕನಲ್ಲಿಗೆ ನಡುವಿರುಳು ಬಂ
ದನುನಯದೊಳೀ ಮಾತ ತೆಗೆದೆಂ
ದನು ವೃಕೋದರನೂಳಿಗವನರ್ಜುನನ ಸಾಹಸವ ೫೬
ಅರಿಗಳುದ್ಭವವಿನ್ನು ಗಂಟಲ
ನರಿವುದೆಮ್ಮನು ನೂರು ಮಕ್ಕಳ
ನರಸ ಬರಿದೇ ಹಡೆದು ಕೆಡಿಸಿದೆ ತಾಯ ಜವ್ವನವ
ಇರಲಿ ಭೀಮಾರ್ಜುನರು ಹಸ್ತಿನ
ಪುರದೊಳೆಮ್ಮಿನಿಬರನು ದೇಶಾಂ
ತರಕೆ ನೇಮಿಸು ಜೀಯ ನೂಕದು ಭೀಮನೊಡನೆಂದ ೫೭
ಅಕಟ ಮಗನೇ ಧರ್ಮಸುತ ಬಾ
ಧಕನೆ ಭೀಮಾರ್ಜುನರ ಮತಿ ಕಂ
ಟಕದೊಳೆರಗದು ಮೀರಿ ನಡೆಯರು ಧರ್ಮನಂದನನ
ಸಕಲ ರಾಜ್ಯಕೆ ಪಾಂಡುವೇ ಪಾ
ಲಕನು ತನ್ನೊಳು ತಪ್ಪಿದನೆ ಬಿಡು
ವಿಕಳ ಮತಿಗಳ ಮಾತನೆಂದನು ಮಗಗೆ ಧೃತರಾಷ್ಟ್ರ ೫೮
ಬೊಪ್ಪ ಬಿನ್ನಹವವರ ಜನಕನು
ತಪ್ಪಿ ನಡೆಯನು ನಿಮಗೆ ನೀವಿ
ನ್ನೊಪ್ಪಿಸುವುದಾ ಪಾಂಡುಸುತರಿಗೆ ರಾಜ್ಯ ವೈಭವವ
ಅಪ್ಪುದಿಳೆ ಧರ್ಮಜನ ತರುವಾ
ಯಪ್ಪುದಾ ವಿಧಿಯಲ್ಲಿ ಸಂತತಿ
ತಪ್ಪದವರಿಗೆ ಸಲಲಿ ನೆಲವಿದು ಹೊಲ್ಲೆಹೇನೆಂದ ೫೯
ಜನಪ ಸುಖದಲಿ ನಿಮ್ಮ ತಮ್ಮನ
ತನುಜರೊಡನೆಯು ರಾಜ್ಯ ಮಾಡುವು
ದನುನಯವಲಾ ಬೀಳುಕೊಡುವುದು ನಮ್ಮ ನೂರ್ವರನು
ಜನಪರುಂಟೋಲೈಸಿ ಕೊಂಬರೆ
ತನಗಿರದೆ ಖಂಡೆಯದ ಸಿರಿ ಕರೆ
ಜನನಿಯನು ಬೀಳ್ಕೊಂಬೆವಿನ್ನೇನೆಂದು ನಿಂದಿರ್ದ ೬೦
ಎಲೆ ಮಗನೆ ಎನ್ನಾಣೆ ಬಾ ಕುರು
ಕುಲತಿಲಕ ನೀ ಹೋಗಲೆನ್ನೊಡ
ಲುಳಿವುದೇ ಮರಿಯಾನೆ ಬಾರೈ ಕಂದ ಬಾಯೆಂದು
ಸೆಳೆದು ಬಿಗಿಯಪ್ಪಿದನು ಕಂಬನಿ
ದುಳುಕಿದನು ಹೇಳಿನ್ನು ಮೇಲಣ
ಬಳಕೆಯನು ರಿಪುರಾಜ ಕಾರ್ಯಕೆ ಬುದ್ಧಿಯೇನೆಂದ ೬೧
ನೀರವಿಷವಿಕ್ಕಿದೆವು ಕಿಚ್ಚಿನ
ಭಾರವಣೆಯೇನಹುದೊ ಪುಣ್ಯವ
ಹೋರಿಸುವ ಒದಗಿದರೆ ಹೋಗಲಿ ನಮ್ಮ ಹಗೆ ಹರಿದು
ಓರಣಿಸಿತೈ ವೈರಿಗಳ ವಿ
ಸ್ತಾರ ಮೆರೆಯಲಿ ಜೀಯ ಜೂಜಿನ
ಬಾರುಗುತ್ತಿದು ನಿಮ್ಮ ಚಿತ್ತಕೆ ಬಹಡೆ ಮಾಡುವೆವು ೬೨
ಆವ ತೆರದಲಿ ವೈರಿ ಭಟಕುಲ
ಹಾವಿಗೆಯನಿಡಿಸುವಿರಿ ನಿಮ್ಮೊಳ
ಗಾವು ಹೊರಗೇ ಮಗನೆ ಸೊಗಸೆನೆ ನಿಮ್ಮ ವೈಭವಕೆ
ಸಾವರಾವಂದದಲಿ ಮಿಗೆ ಸಂ
ಭಾವಿಸುವುದಾ ತೆರನ ನೀ ಹೇ
ಳಾವು ಸೊಗಸುವೆವೆಂದು ನುಡಿದನು ಮಗಗೆ ಧೃತರಾಷ್ಟ್ರ ೬೩
ಕರೆಸಿ ಪಾಂಡು ಕುಮಾರಕರ ನೀ
ಧರೆಯ ಹಸುಗೆಯ ಮಾಡಿಕೊಡು ಕರಿ
ತುರಗ ಭಂಡಾರವನು ಸಹ ದಾಯಾದ ವಿಷಯದಲಿ
ಇರವನವರಿಗೆ ವಾರಣಾವತಿ
ಪುದೊಳಗೆ ಪರುಠವಿಸಿ ಕೊಡು ತಾ
ನುರುಹಿ ಸುಡುವೆನು ಬಳಿಕ ಲಾಕ್ಷಾಭವನ ರಚನೆಯಲಿ ೬೪
ಅಹುದು ಮಗನೇ ಮಂತ್ರವಿದು ಮತ
ವಹುದು ನಮಗೀ ಭೀಷ್ಮ ವಿದುರರು
ಕುಹಕಿಗಳು ಕೃತಭಿನ್ನವಾದರೆ ಭಾರವದು ಮೇಲೆ
ಗಹನ ಗತಿಯಲಿ ಗೂಢತರ ಸ
ನ್ನಿಹಿತ ಕರ್ಮ ಕಲಾಪದಲಿ ರಿಪು
ದಹನ ಸಿದ್ಧಿಯ ನೆನೆವುದೆಂದನು ಮಗಗೆ ಧೃತರಾಷ್ಟ್ರ ೬೫
ಜನಕನನು ಬೀಳ್ಕೊಂಡು ಕೌರವ
ಜನಪ ತನ್ನರಮನೆಯ ಸಚಿವರೊ
ಳನುಪಮಿತ ವಿಶ್ವಾಸ ಸೂಚಕನನು ಪುರೋಚನನ
ನೆನೆದ ರೌರವ ರಾಜಕಾರ್ಯದ
ಘನವನರುಹಿ ಸಮಗ್ರ ಧನ ಸಾ
ಧನವ ಜೋಡಿಸಿ ಕೊಟ್ಟು ಕಳುಹಿದನವನ ಗುಪ್ತದಲಿ ೬೬
ಆ ಪುರೋಚನನೆಂಬುವನು ಬಲು
ಪಾಪಕರ್ಮನು ಕುರುಪತಿಗೆ ಬಳಿ
ಕಾ ಪುರಾಂತರದಿಂದ ಬಂದನು ವಾರಣಾವತಿಗೆ
ಆ ಪುರದ ಜನವರಿಯದಂತಿರೆ
ಕಾಪುರುಷನಳವಡಿಸಿದನು ನಸು
ದೀಪ ತಾಗಿದೊಡೇಕರೂಪಹ ರಾಜಭವನವನು ೬೭
ನಿಗಮ ಸಂಸ್ಥಿತ ವಾಸ್ತು ರಚನಾ
ದಿಗಳನಾಯವ್ಯಯದ ತಾರಾ
ದಿಗಳ ರಾಶಿಗ್ರಹ ಬಲದ ವಿಪರೀತ ಯೋಗದಲಿ
ಹಗಲು ತೀರಲು ತಳಿತ ಕೈದೀ
ವಿಗೆಯ ಹಂತಿಯ ಬೆಡಗಿನಲಿ ಕೇ
ಡಿಗನು ಕೃತ್ರಿಮ ರಚನೆಯಲಿ ಮಾಡಿಸಿದನರಮನೆಯ ೬೮
ಅರಗಿನಲಿ ಭಿತ್ತಿಗಳ ನವ ಸ
ಜ್ಜರಸ ಗುಡ ಮಿಶ್ರದಲಿ ನೆಲೆಯು
ಪ್ಪರಿಗೆಗಳನವರಲಿ ಕವಾಟಸ್ತಂಭವೇದಿಗಳ
ವಿರಚಿಸಿದ ನವಸೌಧಭದ್ರಾ
ಸ್ತರಣ ನಂದ್ಯಾವರ್ತದಲಿ ಪರಿ
ಪರಿಯ ಬಿನ್ನಾಣದೊಳಗರಗಿನ ಮನೆಯ ಮಾಡಿಸಿದ ೬೯
ಹಿರಿಯ ಭವನದ ಸುತ್ತುವಳಯದ
ಮುರುಹಿನಲಿ ಮನೆ ಮನೆಗಳಾ ಮಂ
ದಿರ ನಿಕಾಯಕೆ ಬಾಗಿಲೊಂದಾ ದ್ವಾರದೇಶದಲಿ
ಇರವು ತನ್ನದು ಬಾಗಿಲಿಕ್ಕಿದು
ಹೊರಗೆ ಮುದ್ರಿಸಿ ಕಿಚ್ಚಚುಚ್ಚುವ
ಪರುಠವಣೆಯಲಿ ಖಳ ಪುರೋಚನನಂದು ನಿರ್ಮಿಸಿದ ೭೦
ಧರಣಿಪತಿ ಕೇಳಿತ್ತ ಹಸ್ತಿನ
ಪುರದೊಳಗೆ ಕುಂತೀಕುಮಾರರ
ಕರೆಸಿ ಕಟ್ಟೇಕಾಂತದಲಿ ಧೃತರಾಷ್ಟ್ರ ಭೂಪಾಲ
ಬೆರಗು ಬಿನ್ನಾಣದಲಿ ಮಕ್ಕಳ
ಮರುಳು ಮಾಡಿದನೇನ ಹೇಳುವೆ
ನುರಿವನೆಯ ಬೀಡಾರದಲಿ ಬಿಡಿಸಲ್ಕೆ ಮನದಂದ ೭೧
ದುರುಳರೀ ಕೌರವರು ನೀವತಿ
ಗರುವರವದಿರು ಪಾಪಕರ್ಮರು
ಪರಮಪುಣ್ಯರು ನೀವು ತನ್ನವದಿರು ಕುಮಂತ್ರಿಗಳು
ಎರಳೆ ತೋಳನ ಸಾದು ಸುಣ್ಣದ
ನೆರವಿಗದುವಾವಗೆಯ ಸೇರುವೆ
ಯರಸ ನಿನ್ನೊಡನೆನ್ನ ಕುನ್ನಿಗಳೆನುತ ಬಿಸುಸುಯ್ದ ೭೨
ತಂದೆಯಿಲ್ಲದ ನಿಮಗೆ ಹಿತರಾ
ರೆಂದು ಮರುಗುವೆನೆನ್ನ ಮಕ್ಕಳು
ಕೊಂದು ಹಿಂಡೆಯ ಕೂಳನುಂಬರೆ ಹೇಸುವವರಲ್ಲ
ಇಂದು ನಿಮಗವರಿಂದಲುಪಹತಿ
ಬಂದುದಾದರೆ ತನ್ನ ತಲೆಯಲಿ
ನಿಂದು ಹೊರೆವುದಕೀರ್ತಿಕಿಲ್ಬಿಷ ಮಗನೆ ಕೇಳೆಂದ ೭೩
ತಾತ ಕೆಡುವಿರಿ ನೀವು ತನಗ
ಖ್ಯಾತಿ ಕೌರವರೆಂಬುವರು ದು
ರ್ನೀತಿಕಾರರು ಭೀಷ್ಮ ವಿದುರರು ಭೀತರವದಿರಿಗೆ
ನೀತಿ ಸಮ್ಮತವಾಗಿ ಚಿತ್ತದೊ
ಳಾತ ಮತವನು ಹೇಳಿ ನಮ್ಮೊಳು
ಭೀತಿ ಬೇಡೆಂದರಸ ಹಿಡಿದನು ಧರ್ಮಜನ ಕರವ ೭೪
ಬೇರೆ ಮತವೆಮಗೇನು ಬೊಪ್ಪನ
ಚಾರಿ ನಿಮ್ಮದು ನೀವು ಬೊಪ್ಪನ
ನೂರು ಮಡಿಯೆಮಗೊಳ್ಳಿದರು ಬೇರಿನ್ನು ಹಿತರುಂಟೆ
ಬೇರಿರಿಸಿ ಕೊಡಿಸಿರಿ ನಿಮಗೆಯು
ತೋರಿದುದೆ ಮತ ನಿಮ್ಮ ನೇಮವ
ಮೀರ ಬಲ್ಲೆನೆಯೆಂದು ಧರ್ಮಜ ನುಡಿದನರಸಂಗೆ ೭೫
ಎರೆಯ ವಂಕಿಯೊ ಕಳಿತ ಮೆಕ್ಕೆಯೊ
ಹುರಿಯ ಬಲೆಯೋ ರಾಗ ಸನ್ನೆಯೊ
ಸರಿಯ ಗೊರೆಯೋ ಠಕ್ಕಿನುಂಡೆಯೊ ಸವಿಯ ಚಿತ್ರಕವೊ
ಅರಸನಂಕೆಯ ಮನದ ಬಯಕೆಯ
ಹೊರೆಯ ಬಳಕೆಯನೀ ಸಮಂಜಸ
ತರದ ಸಾತ್ವಕರೆತ್ತ ಬಲ್ಲರು ಭೂಪ ಕೇಳೆಂದ ೭೬
ಕಂದ ಮನ ಮುನಿಸಿಲ್ಲಲೇ ನಾ
ವೆಂದ ನುಡಿಗೊಡಬಡುವಿರಾದೊಡೆ
ಮುಂದೆ ಪುರವಿದೆ ವಾರಣಾವತವಿಲ್ಲಿಗರುವತ್ತು
ಸಂದ ನಾಡು ಸಮಸ್ತ ವಸ್ತುಗ
ಳಿಂದ ಪೂರಿತ ಹಸ್ತಿನಾಪುರ
ದಿಂದ ಮಿಗಿಲದು ರಾಜಧಾನಿ ಸ್ಥಾನ ನಿಮಗೆಂದ ೭೭
ಹೈ ಹಸಾದ ಭವತ್ ಕೃಪಾ ಸ
ನ್ನಾಹವೇ ಸಾಮ್ರಾಜ್ಯವಾವುದ
ನೂಹಿಸಿದೊಡಾ ಸ್ಥಿತಿಯೊಳಡಗಿಹೆವೆಂದು ವಿನಯದಲಿ
ಗಾಹುಗತಕವನರಿಯದಿವರು
ತ್ಸಾಹದಲಿ ಕೈಕೊಂಡು ಭೀಷ್ಮಗೆ
ಬೇಹ ವಿದುರ ದ್ರೋಣಮುಖ್ಯರಿಗರುಹಿದರು ಹದನ ೭೮
ಧಾರುಣೀಪತಿ ರತ್ನಮಯ ಭಂ
ಡಾರಸಹಿತ ಗಜಾಶ್ವ ರಥ ಪರಿ
ವಾರವನು ಮಾಡಿದನು ಹಸಿಗೆಯನೆರಡು ಭಾಗವನು
ಕೌರವರಿಗೊಂದಿವರಿಗೊಂದೆನ
ಲೋರಣದಲಳವಡಿಸಿ ಬಹು ವಿ
ಸ್ತಾರದಲಿ ಭೀಷ್ಮಾದ್ಯರಹುದೆನಲಿವರ ಮನ್ನಿಸಿದ ೭೯
ಇವರು ಶುಭದಿನ ಶುಭಮುಹೂರ್ತ
ಪ್ರವರದಲಿ ಹೊರವಂಟರಾ ಜನ
ನಿವಹ ಮರುಗಿತರಣ್ಯವೇ ಗತಿಯರಸ ನಮಗೆಂದು
ಅವರ ಕಳುಹುತ ಬಂದರಾ ಕೌ
ರವರು ನಿಂದರು ಭೀಷ್ಮ ಕಲಶೋ
ದ್ಭವರು ಸುತರಿಗೆ ಬುದ್ಧಿ ಹೇಳಿದು ಮರಳಿದರು ಪುರಕೆ ೮೦
ವಿದುರನೊಡನೈತರುತ ಸಂಕೇ
ತದಲಿ ಸೂಚಿಸಿ ಮರಳಿದನು ನೃಪ
ಸುದತಿ ವರಗಾಂಧಾರಿ ಮೊದಲಾದಖಿಳ ರಾಣಿಯರು
ಮುದದ ಮುರುವಿನಲಿವರ ತೆಗೆದ
ಪ್ಪಿದರು ಭೂಪತಿ ಸಹಿತ ಕಡುಶೋ
ಕದಲಿ ಕಳುಹಿಸಿ ಕೊಂಡು ಬಂದರು ಹಸ್ತಿನಾಪುರಕೆ ೮೧
ಅರಸ ಕೇಳೈ ಹಸ್ತಿನಾಪುರ
ವರವ ಹೊರವಡುವಾ ಮುಹೂರ್ತಕೆ
ವರುಷವಿಪ್ಪತ್ತೊಂಬತಾದುದು ಧರ್ಮನಂದನಗೆ
ವರುಷ ಹದಿಮೂರರಲಿ ಹಸ್ತಿನ
ಪುರದೊಳಿದ್ದರು ಹಿಂದೆ ಷೋಡಶ
ವರುಷ ವನದೊಳಗಿಂತು ಲೆಕ್ಕವ ನೋಡಿಕೋಯೆಂದ ೮೨
ಬಂದರೈವರು ಕುಂತಿ ಸಹಿತಾ
ನಂದದಲಿ ವರವಾರಣಾವತ
ಕಂದು ಪುರಜನ ಕೂಡಿ ಕನ್ನಡಿ ಕಲಶ ವಿಭವದಲಿ
ಬಂದು ತಾವಿದಿರಾಗಿ ಕುಂತೀ
ನಂದನರ ಹೊಗಿಸಿದರು ಪಟ್ಟಣ ೮೩
ವಂದು ಮರೆದುದು ಕೂಡೆ ಗುಡಿತೋರಣದ ರಚನೆಯಲಿ
ಬೀಡು ಕಾಣಿಕೆಯಿತ್ತು ಕಂಡುದು
ನಾಡೆ ಕಾಣಿಸಿದನು ಪುರೋಚನ
ಕೂಡೆ ಸಂದನು ಹಾಸು ಹೊಕ್ಕಾಗವರ ಮನವರಿದು
ನೋಡಿದನು ಯಮನಂದನನು ಮನೆ
ಮಾಡಿದಂದವನರಗಿನರಮನೆ
ಗೂಡುರಿವ ಬೇಳುವೆಯ ನೆನೆದರೆ ಬೊಪ್ಪನವರೆಂದ ೮೪
ಸಮಿಧೆಗಳು ನಾವ್ ನಾಲ್ವರಯ್ಯನ
ರಮಣಿಯಾಹುತಿ ಭೀಮನೇ ಪಶು
ಕುಮತಿ ಕಟ್ಟಿಸಿದರಮನೆಯಗ್ನಿ ಕುಂಡವಿದು
ಎಮಗೆ ಸಂಶಯವಿಲ್ಲ ರಾಜೋ
ತ್ತಮನೊ ದುರ್ಯೋಧನನೊ ದೀಕ್ಷಾ
ಕ್ರಮವ ಧರಿಸಿದನಾವನೆಂದನು ನಗುತ ಯಮಸೂನು ೮೫
ಜನಪ ಕೇಳೈ ವಿದುರನಟ್ಟಿದ
ಖನಕ ಬಂದನುಯಿವರ ಸಜ್ಜೆಯ
ಮನೆಯಲತಿ ಗುಪ್ತದಲಿ ನೆಲದೊಳು ಸವೆಸಿದನು ಪಥವ
ಅನುದಿನದೊಳಾ ಬಾಹಿರನು ಕಿ
ಚ್ಚಿನಲಿ ಚುಚ್ಚುವ ಸಂದುಗಟ್ಟನು
ನೆನೆವುತಿರ್ದನು ಖಳ ಪುರೋಚನನೊಡೆಯನಾಜ್ಞೆಯಲಿ ೮೬
ಒಂದು ದಿನ ಹಬ್ಬದಲಿ ಭೂಸುರ
ವೃಂದವುಂಡುದು ಪಂಚಪುತ್ರಿಕೆ
ಯೆಂದು ಬೇಡತಿಯೊಬ್ಬಳಿದ್ದಳು ಸುತರು ಸಹಿತಲ್ಲಿ
ಅಂದಿನಿರಳು ಪುರೋಚನನು ತಾ
ನೊಂದ ನೆನೆದರೆ ದೈವಗತಿ ಬೇ
ರೊಂದ ನೆನೆದನು ಕೇಳು ಜನಮೇಜಯ ಮಹೀಪಾಲ ೮೭
ಅವನು ನಿದ್ರೆಯೊಳರಿಯದಿರಲಾ
ಭವನ ಮುಖದಲಿ ಕಿಚ್ಚನೊಟ್ಟಿಸಿ
ಪವನಸುತ ಸಹಿತಿವರು ಹಾಯ್ದರು ಬಿಲದ ಮಾರ್ಗದಲಿ
ಅವರು ಬೆಂದರು ಮುನ್ನ ಬಳಿಕಾ
ಭವನ ಪಂಕ್ತಿಗಳುರಿದು ಕರಗಿದ
ವವನಿಯಲಿ ಹೊನಲಾಯ್ತು ಪುರಜನವೈದೆ ಬೆರಗಾಗೆ ೮೮
ಅಕಟ ಪಾಂಡವರಳಿದರೇ ಕೌ
ಳಿಕದಿ ಕೌರವರಿರಿದರೇ ಮತಿ
ವಿಕಳರವದಿರು ಬೆಂದು ಹೋದರು ಧರ್ಮದಲಿ ನಡೆದು
ಪ್ರಕಟ ಪಾಪರಿಗಹುದು ಸಾಮ್ರಾ
ಜ್ಯಕವು ಧರ್ಮಾತ್ಮರಿಗೆಯೀ ಪರಿ
ವಿಕಟತೆಯಸುರ ರಾಜ್ಯವೆಂದುದು ಪೌರಜನ ಮರುಗಿ ೮೯
ಮುನ್ನ ಬೆಂದನಲಾ ಪುರೋಚನ
ಕುನ್ನಿಯದು ಲೇಸಾಯ್ತು ಹದನಾ
ಪನ್ನರಾದರೆ ಅವ್ವೆಯರು ಸಹಿತಕಟ ಪಾಂಡವರು
ಇನ್ನು ಸುಡು ಸುಡು ಧರ್ಮ ಸಂಪ್ರತಿ
ಪನ್ನ ಗುಣದಾಚಾರಗಳ ಸಂ
ಪನ್ನತೆಯನೆಂದೊರಲಿ ಮರುಗಿತು ನಿಖಿಳಪರಿವಾರ ೯೦
ಒಗೆದುದೀ ಬೇಳಂಬ ಹಸ್ತಿನ
ನಗರಿಯಲಿ ತತ್ಪೌರಜನ ಮನ
ವುಗಿದು ಬಿದ್ದುದು ಶೋಕಮಯಸಾಗರದ ಮಧ್ಯದಲಿ
ಹೊಗೆದುದಾನನ ವಿದುರ ಭೀಷ್ಮಾ
ದಿಗಳಿಗಾ ಧೃತರಾಷ್ಟ್ರ ಸುತರಿಗೆ ೯೧
ದುಗುಡ ದಡ್ಡಿಯ ಹರುಷ ಸಿರಿ ಹೊಕ್ಕಳು ಮುಖಾಂಬುಜವ
ಬಂದುದಾ ಸುರನದಿಗೆ ಕೌರವ
ವೃಂದ ಪರಿಜನವೈದೆ ಶೋಕಿಸಿ
ಮಿಂದು ಗಂಗಾತೀರದಲಿ ಬಳಿಕೂರ್ಧ್ವದೇಹಿಕವ
ಸಂದ ವಿಧಿಯಲಿ ಮಾಡಿ ಪರಮಾ
ನಂದ ಮಿಗಲವರಿರ್ದರಿತ್ತಲು
ಇಂದುಕುಲ ಸಂಭವರ ವಿಧಿಯನು ಮತ್ತೆ ಕೇಳೆಂದ ೯೨
ಬಿಲಮುಖದೊಳುತ್ತರಿಸಿ ಬಲುಗ
ತ್ತಲೆಯೊಳಡವಿಯ ಮಾರ್ಗದಲಿ ಕಲು
ಮುಳುಗಳೊಳು ಕಾಪಥಕೆ ಕೋಮಲ ಚರಣಗಳ ಕೊಡುತ
ತೊಳಲಿದರು ಬೆಳಗಾಗೆ ಹಳ್ಳಿಯ
ಬಳಿಯ ಹೊದ್ದದೆ ಹಾಯ್ದು ಹೊಕ್ಕರು
ಹಳುವವನು ಬೆಳಗಡಗೆ ನಡೆದರು ಹಲವು ಯೋಜನವ ೯೩
ದಾಟಿದರು ಗಂಗೆಯನು ರಾಯನ
ಮಾಟದಲಿ ಹಲು ಮುರಿದುದೇ ನ
ಮ್ಮಾಟಕಿದು ಹಿರದಲ್ಲಲಾಯೆನುತೈವರಡಿಗಡಿಗೆ
ಕೋಟಲೆಯ ಕೊಲ್ಲಣಿಗೆಯಲಿ ಮೈ
ನೋಟಕಲಸದೆ ಬಿಸಿಲಲಿವರು ಮ
ಹಾಟವಿಯ ಮಧ್ಯವನು ಹೊಕ್ಕರು ನೃಪತಿ ಕೇಳೆಂದ ೯೪
ಸಂಕ್ಷಿಪ್ತ ಭಾವ
ಈ ಭಾಗದಲ್ಲಿ ಕೌರವರ ಸಂಚಿನಿಂದ ಅರಗಿನಮನೆಯ ರಚನೆ. ಅದರಿಂದ ಪಾರಾದ ಪಾಂಡವರ ವಿಷಯವಿದೆ.
ದಿನದಿನಕ್ಕೂ ಕೌರವರಿಗೆ ಪಾಂಡವರ ವಿಷಯದಲ್ಲಿ ದ್ವೇಷ ಬೆಳೆಯುತ್ತ ಬಂತು. ಧುರ್ಯೋಧನನ ಚಿಂತೆಗೆ ಕರ್ಣನು ಸಮಾಧಾನ ಹೇಳುತ್ತ ತನಗೆ ಅವಕಾಶ ಕೊಡು ಎಲ್ಲರನ್ನೂ ಮುಗಿಸಿಬಿಡುತ್ತೇನೆ ಎಂದು ರೋಷದಿಂದ ಹೇಳಿದನು.
ಆಗ ಶಕುನಿಯು ಅವನನ್ನು ತಡೆದು ಉಪಾಯದಿಂದ ಹೇಗೆ ಪಾಂಡವರನ್ನು ಕೊನೆಗಾಣಿಸಬೇಕೆಂಬುದನ್ನು ಹೇಳಲು ಆರಂಭಿಸುವನು. ಪಾಂಡವರು ಬಹಳ ಶಕ್ತಿಶಾಲಿಗಳು. ಅವರನ್ನು ವಂಚನೆಯಿಂದ ಕೊಲ್ಲಬೇಕೇ ಹೊರತು ಶಕ್ತಿಯಿಂದಲ್ಲ ಎಂದು ಹೇಳಿದನು. ಇಲ್ಲಿ ಶಕುನಿಯು ಧುರ್ಯೋದನನಿಗೆ ಹೇಳುವ ಒಂದೊಂದು ಮಾತುಗಳೂ ಬಹಳ ಅರ್ಥಪೂರ್ಣವಾಗಿವೆ. ರಾಜನೀತಿಯ ಪಾಠಗಳೂ ಆಗಿವೆ. ಶತ್ರುಗಳನ್ನು ಹೇಗೆ ನೋಡಬೇಕು, ಉಪಾಯದಿಂದ ಹೇಗೆ ಮರುಳು ಮಾಡಬೇಕು, ಯಾವ ಯಾವ ಕೆಲಸಗಳನ್ನು ಮಾಡಬೇಕು ಅಥವಾ ಮಾಡಬಾರದು, ಯಾರು ಯಾರೊಡನೆ ಹೇಗೆ ವರ್ತಿಸಬೇಕು, ಸರಿಸಮರಾದವರು ಯಾರು ಇತ್ಯಾದಿ ಎಲ್ಲ ವಿಷಯಗಳನ್ನು ವಿಸ್ತಾರವಾದ ಮಾತುಗಳಲ್ಲಿ ಹೇಳುವನು. ಅದಕ್ಕೆ ಸಂಬಂಧಿಸಿದಂತೆ ಉದಾಹರಣೆಗಳನ್ನೂ ಕೊಡುವನು. ಇರುವೆಗಳು ಕಟ್ಟಿದ ಮನೆಯಲ್ಲಿ ಹಾವು ವಾಸಿಸುವುದು, ಹಗೆಯ ಕಡೆಯವರನ್ನು ದೂರವೇ ಇಡುವುದು ಇತ್ಯಾದಿ. ಶಕುನಿಯ ಈ ದುರ್ಬೋಧೆಗಳು ಹೆಚ್ಚಿನ ಪರಿಣಾಮ ಬೀರಿದವು.
ದುರ್ಯೋಧನ ತನ್ನ ತಂದೆಯನ್ನು ಓಲೈಸಿ ಪಾಂಡವರನ್ನು ವಾರುಣಾವತಿಗೆ ಕಳಿಸುವ ಮತ್ತು ಅಲ್ಲಿ ಲಾಕ್ಷಾಗೃಹದ ಮೂಲಕ ಅವರನ್ನು ಕೊಲ್ಲುವ ತನ್ನ ಯೋಜನೆಗೆ ತಂದೆಯನ್ನು ಒಪ್ಪಿಸಿದನು. ಪುರೋಚನನೆಂಬವನಿಗೆ ಈ ಕೆಲಸವನ್ನು ಒಪ್ಪಿಸಿ ಕಳಿಸಲಾಯಿತು. ಅವನು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಬಹಳ ಸುಂದರವಾದ ಅರಮನೆಯನ್ನು ರಚಿಸಿದನು.
ಇತ್ತ ಧೃತರಾಷ್ಟ್ರನು ಪಾಂಡವರನ್ನು ಕರೆಸಿ ಒಳ್ಳೆಯ ಮಾತುಗಳನ್ನಾಡಿ ತನ್ನ ಮಕ್ಕಳಿಂದ ಅವರಿಗೆ ಸುಖವಿಲ್ಲವೆಂದು ಗೋಳಾಡುವ ನಾಟಕವಾಡಿ ಅವರನ್ನು ವಾರಣಾವತಿಯಲ್ಲಿರಲು ಒಪ್ಪಿಸಿದನು. ಎಲ್ಲರೂ ತಲೆದೂಗುವಂತೆ ಬೇಕುಬೇಕಾದ ವಸ್ತುಗಳೊಂದಿಗೆ ಕಳಿಸಿಕೊಟ್ಟನು. ಆದರೆ ವಿದುರ ಮಹಾ ಬುದ್ಧಿವಂತ. ಅವನು ಇದರ ಸುಳಿವನ್ನು ಊಹಿಸಿದ್ದನು. ಹೀಗಾಗಿ ಕಳಿಸುವಾಗ ಸಂಕೇತದ ಭಾಷೆಯಲ್ಲಿ ಎಚ್ಚರಿಸಿದ್ದನು.
ಸಡಗರದಿಂದ ಗೃಹಪ್ರವೇಶ ಆಯಿತು. ಪುರೋಚನನು ಅವಕಾಶವನ್ನು ಕಾಯುತ್ತಿದ್ದನು. ವಿದುರ ಕಳಿಸಿದ ಒಬ್ಬ ಮನುಷ್ಯ ರಹಸ್ಯವಾಗಿ ಬಂದು ಶಯ್ಯಾಗೃಹದಲ್ಲಿ ಸುರಂಗವೊಂದನ್ನು ರಚಿಸಿದನು. ಒಂದು ದಿನ ಒಬ್ಬ ಹೆಂಗಸು ತನ್ನ ಐದು ಮಕ್ಕಳೊಂದಿಗೆ ಬಂದು ಅಲ್ಲಿ ಅರಮನೆಯಲ್ಲಿ ಮಲಗಿದ್ದ ಸಮಯದಲ್ಲಿ ಪಾಂಡವರು ತಾವೇ ಆ ಮನೆಗೆ ಬೆಂಕಿಯಿಟ್ಟು ಸುರಂಗದ ಮಾರ್ಗದಿಂದ ಪಾರಾದರು. ಪುರೋಚನನೊಂದಿಗೆ ಅಲ್ಲಿದ್ದವರೆಲ್ಲ ಸುಟ್ಟುಹೋದರು.
ಕೌರವರು ಮಹಾ ದುಃಖಿತರಂತೆ ನಟಿಸಿ ಗೋಳಾಡಿದರು. ಉತ್ತರ ಕ್ರಿಯಾದಿಗಳನ್ನು ನಡೆಸಿದರು. ಇತ್ತ ಪಾಂಡವರು ತಾಯಿಯೊಡನೆ ಸುರಂಗದಿಂದ ಹೊರಬಂದು ಅರಣ್ಯವನ್ನು ಪ್ರವೇಶಿಸಿದರು.
('ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)
ಕಾಮೆಂಟ್ಗಳು