ಭಾರತಕಥಾಮಂಜರಿ24
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಸಭಾ ಪರ್ವ - ನಾಲ್ಕನೆಯ ಸಂಧಿ
ಯಾಗಸಿದ್ಧಿಗೆ ನಡೆದು ಪೂರ್ವ ವಿ
ಭಾಗದಲಿ ಭೂಮಿಪರ ಕೈಯಲಿ
ಸಾಗರೋಪಮ ಧನವ ಮೇಳೈಸಿದನು ಕಲಿ ಭೀಮ
- - - -
ಕೇಳು ಜನಮೇಜಯ ಧರಿತ್ರೀ
ಪಾಲ ಯಮ ನಂದನನ ಭಾಗ್ಯದ
ಹೋಲಿಕೆಗೆ ಬಹರುಂಟೆ ನಳ ನಹುಪಾದಿ ರಾಯರಲಿ
ಆಳು ನಡೆದುದು ಭೀಮಸೇನನ
ಧಾಳಿಯಿದೆಯೆನೆ ತೆತ್ತುದವನೀ
ಪಾಲಕರು ತಂತಮ್ಮ ನಿಜ ವಿತ್ತಾನುರೂಪದಲಿ ೧
ನಡೆದು ಶೋಧಿಸಿ ರೋಚಮಾನನ
ಹಿಡಿದು ಬಿಟ್ಟನು ಸವರ ವಿತ್ತವ
ನಡಕಿತನಿಲಜನಾಳು ಮುಂದಣ ಚೇದಿ ದೇಶದಲಿ
ಘುಡಿಘುಡಿಸೆ ನಿಸ್ಸಾಳವೀ ಗಡ
ಬಡೆಯಿದೇನೆನೆ ಭೀಮಸೇನನ
ಪಡೆಯೆನಲು ಶಿಶುಪಾಲ ಬಂದನು ಕಂಡನುಚಿತದಲಿ ೨
ಏನು ಬಂದೆಯಪೂರ್ವವೆನೆ ಯಾ
ಗಾನುರಾಗವನರುಪಲತಿ ಸು
ಮ್ಮಾನದಲಿ ಶಿಶುಪಾಲ ಹೇರಿಸಿದನು ಮಹಾಧನವ
ಮಾನಿಸರ ಕಳುಹಿದರೆ ಸಾಲದೆ
ನೀನಿದೇಕೆಂದುಚಿತದಲಿ ಸ
ನ್ಮಾನಿಸುತ ನಿಲಿಸಿದನು ತಿಂಗಳು ಪವನನಂದನನ ೩
ನಡೆದು ಮುಂದೆ ಕಳಿಂಗ ದೇಶದೊ
ಳಡಸಿ ಬಿಟ್ಟನು ಶೋಣಿವಂತನ
ಹಿಡಿದು ಕಪ್ಪವ ಕೊಂಡು ಸದೆದನು ಕೋಸಲೇಶ್ವರನ
ಅಡಕಿತಲ್ಲಿಯ ಧನ ಪಯೋಧಿಯ
ಕಡೆಯ ಕೋಟೆಯ ಮುರಿಯಲವನೆದೆ
ಯೊಡೆದು ದೀರ್ಘಪ್ರಜ್ಜ ನಿತ್ತನು ಬೇಹ ವಸ್ತುಗಳ ೪
ಆಳು ನಡೆದುದು ಚೂಣಿಯಲಿ ಗೋ
ಪಾಲನೆಂಬನ ಮುರಿಯೆ ತೆತ್ತುದ
ಹೇಳಲರಿಯೆನು ಸಂಖ್ಯೆಯನು ಮುಂದತ್ತಪಾಲಕನ
ಜಾಳಿಸಿದನಾ ಕಾಶಿ ರಾಜನ
ಧಾಳಿಯಲಿ ಕೊಂದನು ಸುಪಾರ್ಶ್ವನ
ಮೇಲೆ ನಡೆದನು ಗಯನ ಮತ್ಸ್ಯನ ಗೆಲಿದನಾ ಭೀಮ ೫
ನಡೆದು ಮುಂದೆ ವಿದೇಹನನು ಸದೆ
ಬಡಿದು ಮತ್ತೆ ಕಿರಾತ ಬಲವವ
ಗಡಿಸಿ ಕಾದಿತನಂತವದರೊಳಗೇಳು ಮಾನಿಸರು
ಒಡೆಯರವದಿರವಂಗಡವ ಹುಡಿ
ಹುಡಿಯ ಮಾಡಿ ನಿಷಾದ ವರ್ಗವ
ಕೆಡಹಿ ನಿಷಧನ ಹೊಯ್ದು ಸೆಳೆದನು ಸಕಲ ವಸ್ತುಗಳ ೬
ಮಲೆತು ಕಾದಿದ ದಂಡಧಾರನ
ಗೆಲಿದು ಮುಗಧೇಶ ಗಿರಿವ್ರಜ
ದೊಳಗೆ ಪಾಳೆಯ ಬಿಟ್ಟುದವನಿದಿರಾಗಿ ನಡೆತಂದು
ದಳವ ಹೇಳಿದನಾತನಲ್ಲಿಂ
ದಿಳಿದು ಕರ್ಣನ ಗೆಲಿದು ಕಪ್ಪವ
ಸೆಳೆದು ಕೊಂಡದ್ರಿಯಲಿ ಸದೆದನು ಬಹಳ ವನಚರರ ೭
ಸೂರೆಗೊಂಡಲ್ಲಿಂದ ನಡೆದನು
ಮೀರಿ ಗಂಗಾಸಂಗಮವ ಕೈ
ಮೀರಲರಿಯದೆ ಸಂಧಿಗವವೀಶ್ವರರು ವಶವಾಯ್ತು
ಹೇರಿಸಿದನನುಪಮದ ವಸ್ತುವ
ನಾರು ಸಾವಿರ ಭಂಡಿಯಲಿ ನಡೆ
ದೇರಿ ಹೊಯ್ದನು ವಾಸುದೇವನ ಪೌಂಡ್ರಕಾಹ್ವಯನ ೮
ಪುರವರವನಲ್ಲಿಂದ ಮೌಲ್ಯದ
ತೆರಳಿಕೆಯ ಮಾಡಿದನು ಮೂಡಲು
ಹರಿದು ಮುರಿದು ಸಮುದ್ರಸೇನನ ಸರ್ವಗವತೆಯಲಿ
ತೆರಳಿಯಲ್ಲಿಂದಿಂದ್ರ ಸೇನನ
ನೊರೆಸಿ ಭಂಡಾರವನು ಹೇರಿಸಿ
ಮರಳಿ ವಂಗನನಪ್ಪಳಿಸಿದನು ಲುಬ್ಧಕರು ಸಹಿತ ೯
ಸಾರಲೋಹಿತನೆಂಬ ಸಾಗರ
ತೀರವಾಸಿಗಳೊಳಕುರುವದ ವಿ
ಕಾರ ಚೋನೆಗೆ ಚೀನ ಬೋಟಕರನು ನಿವಾಸಿಗಳ
ಓರೆ ಬಾಗಿನ ಕುರುವ ಕೊಳ್ಳದ
ಗೌರಿಕರನಪ್ಪಳಿಸಿ ಮಲೆಯ ವಿ
ಹಾರಿಗಳ ಬರಿಗೈದು ತುಂಬಿಸಿದನು ಸುವಸ್ತುಗಳ ೧೦
ಧಾಳಿ ಹರಿದುದು ಪಂಚ ಗೌಳವ
ರಾಳವೊಡ್ಡಿಯರಾಂಧ್ರ ಜಾಳಾಂ
ದ್ರಾಳಿಗಳನಪ್ಪಳಿಸಿ ಹೂಡಿಸಿದನು ಮಹಾಧನವ
ಮೇಲು ದುರ್ಗದ ಪಾರ್ವತೇಯರಿ
ಗಾಳು ಹರಿದುದು ಸಂದುಗೊಂದಿಯ
ಶೈಲ ಗುಹೆಗಳೊಳರಸಿ ಹಿಡಿದನು ಬಹಳ ಧನಯುತರ ೧೧
ಅರಸಿದನು ನಾವೆಗಳಲಬ್ಧಿಯ
ಕುರುವದಲಿ ಕೊಬ್ಬಿದ ಧನಾಢ್ಯರ
ಮುರಿದು ಮರಳಿದು ಕೆಲಬಲದಲಾ ದ್ವೀಪ ಪಾಲಕರ
ಸೆರೆವಿಡಿದು ತನಿ ಸೂರೆಯಲಿ ಪಡೆ
ನೆರೆದಣಿಯಲಾ ಮ್ಲೇಚ್ಛ ವರ್ಗವ
ತರಿದು ಶೋಧಿಸಿ ತೆಗೆದನಲ್ಲಿಯ ಸಾರ ವಸ್ತುಗಳ ೧೨
ಆ ಮಹಾ ಭೋಟಕ ಮಹಾಹ್ವಯ
ಧಾಮದಲಿ ದಸ್ಯುಗಳನತಿ ನಿ
ಸ್ಸೀಮ ಯವನಕ ರೂಷರನು ತಾಗಿದನು ವಹಿಲದಲಿ
ಹೇಮಮುಕ್ತಾ ರಜತ ಚಂದನ
ರಾಮಣೀಯಕ ವಸ್ತು ನಿಚಯದ
ಸೀಮೆಗಳ ನಾನರಿಯೆನಳವಡಿಸಿದನು ಕಲಿಭೀಮ ೧೩
ಮರಳೆಯನಿಲಜನಾ ಮಹಾದ್ಭುತ
ತರದ ವಸ್ತುವನಾನಲಾಪುದೆ
ಧರಣಿಯೆನೆ ಸಂದಣಿಸಿದವಸಂಖ್ಯಾತ ರಥಯೂಥ
ಅರಸುಗಳ ಸಹಿತೀ ಮಹಾಬಲ
ವೆರೆಸಿ ಬಂದನು ಭೀಮನಣ್ಣನ
ಚರಣಕೆರಗಿದನರ್ಜುನನ ತಕ್ಕೈಸಿದನು ನಗುತ ೧೪
ಸಂಕ್ಷಿಪ್ತ ಭಾವ
ಭೀಮಸೇನನು ಪೂರ್ವ ದಿಕ್ಕಿನಲ್ಲಿ ಹೊರಟು ದಾರಿಯಲ್ಲಿ ಇದ್ದ ಸಕಲ ರಾಜರುಗಳನ್ನು ಗೆಲ್ಲುತ್ತಾ, ಅಪಾರ ಧನಕನಕ ವಸ್ತು ವಾಹನಾದಿಗಳನ್ನು ಸಂಗ್ರಹಿಸುತ್ತ ನಡೆದನು.
ಚೇದಿ ದೇಶದಲ್ಲಿ ಶಿಶುಪಾಲನು ಬಂದು ಭೀಮಸೇನನನ್ನು ಕಂಡು ಸನ್ಮಾನಿಸಿ ಒಂದು ತಿಂಗಳು ಇಟ್ಟುಕೊಂಡು ಸತ್ಕರಿಸಿದನು. ಮುಂದೆ ಕಳಿಂಗ, ಕೋಸಲ, ಕಾಶಿ, ವಿದೇಹ, ಕಿರಾತರು,ಸಮುದ್ರಸೇನ, ಸಾರಲೋಹಿತ ಮೊದಲಾದ ಅನೇಕ ಸಂಖ್ಯೆಯ ರಾಜರುಗಳನ್ನು ಗೆಲಿದು ಅವರೆಲ್ಲರಿಂದ ಸಂಗ್ರಹಿಸಿದ ವಸ್ತುಗಳನ್ನು ಸಹಸ್ರ ಸಂಖ್ಯೆಯ ರಥಗಳಲ್ಲಿ ತಂದು ಧರ್ಮಜನಿಗೆ ಒಪ್ಪಿಸಿದನು. ಅಣ್ಣನಿಗೆ ನಮಸ್ಕರಿಸಿ ಅರ್ಜುನನ ಸಾಹಸಗಳನ್ನು ಕೇಳಿ ಅವನನ್ನು ಬಹುವಾಗಿ ಹೊಗಳಿದನು.
(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.comನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)
ಕಾಮೆಂಟ್ಗಳು