ವಸಂತ ಕಲ್ಬಾಗಲ್
ವಸಂತ ಕಲ್ಬಾಗಲ್
ವಸಂತ ಕಲ್ಬಾಗಲ್ ವಿಸ್ಮಯ ಮೂಡಿಸುವ ಅಪಾರ ಸಾಧನೆಯ ವ್ಯಕ್ತಿ. ಒಂದೆಡೆ ಖ್ಯಾತ ಬರಹಗಾರ್ತಿ ಎಂ. ಆರ್. ಕಮಲ Metikurke Ramaswamy Kamala ಹೇಳುತ್ತಾರೆ: "ಈ 'ವಸಂತ' ಇದ್ದ ಕಡೆಯೆಲ್ಲ ಸದಾ ವಸಂತ ಮಾಸ, ಇಲ್ಲವಾದರೆ ವಸಂತ ಸ್ಮೃತಿ!".
ವಸಂತ ಕಲ್ಬಾಗಲ್ ನನಗೆ ಕಂಡದ್ದು ಅವರ ಫೇಸ್ಬುಕ್ನಲ್ಲಿನ ನಳನಳಿಸುವ ಕನ್ನಡದ ಬರಹಗಳಿಂದ. ಅವರ ಬಗ್ಗೆ ಅಲ್ಲಲ್ಲಿ ಓದುತ್ತಾ ಹೋದಂತೆ ಇವರ ಬಗ್ಗೆ ಅರಿಯುವುದು ಬರೆಯವುದು ಸುಲಭವಲ್ಲ ಎಂಬ ಅರಿವಂತೂ ಆಯ್ತು. ನಾನು ನನ್ನ ಸೀಮಿತ ಬೊಗಸೆಯಲ್ಲಿ ಎಷ್ಟು ಸಾಧ್ಯವೊ ಹೇಳುತ್ತೇನೆ. ಇದು ಅವರ ಸಾಧನೆಗಳನ್ನು ಇನ್ನಷ್ಟು ಅರಿಯುವಲ್ಲಿ ಹೆಜ್ಜೆಯಾಗಲಿ ಎಂಬುದು ಈ ಬರಹದ ಆಶಯ ಅಷ್ಟೇ. ಅದು ಅವರನ್ನು ಕುರಿತ ಸಂಪೂರ್ಣ ವ್ಯಕ್ತಿ ಚಿತ್ರಣ ಆಗಲಾರದು.
ಮೇಲ್ನೋಟಕ್ಕೆ ವಸಂತ ಕಲ್ಬಾಗಲ್ ಅವರು ಇಂದು ನಮಗೆ ಕಾಣುತ್ತಿರುವುದು ಫೇಸ್ಬುಕ್ಕಿನ್ನಲ್ಲಿ ಅಪ್ಯಾಯಮಾನವೆಂಬಂತೆ ಬರೆಯುವವರಾಗಿ. ಆದರೆ, ಅವರು ಸಾಹಿತ್ಯ ಲೋಕದಲ್ಲಿ ವಸಂತಲೋಕವನ್ನು ಕಾಣಿಸಿದವರಷ್ಟೇ ಅಲ್ಲ. ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾದ ಉದ್ಯಮಗಳಲ್ಲಿ ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸಿದವರು. ಇಡೀ ವಿಶ್ವವೇ ತಂತ್ರಜ್ಞಾನದ ಅವಕಾಶವಾಗಿ ಕಂಡಿರುವ ನಮ್ಮ ಬೆಂಗಳೂರಿನ 'ಐಟಿಪಿಎಲ್' ಅಥವಾ ಅಂತರರಾಷ್ಟ್ರೀಯ ಟೆಕ್ನಾಲಜಿ ಪಾರ್ಕ್ ಎಂಬ ಸ್ಥಾವರವು ಬೃಹತ್ ಸಾಧ್ಯತೆಗಳ ಸಾಕಾರದ ವಸಂತವನವಾಗುವುದರಲ್ಲಿ ಪ್ರಮುಖ ಕಾರ್ಯಮಾಡಿದವರು. ಅಂತರರಾಷ್ಟ್ರೀಯ ಸಂಸ್ಥೆಗಳ ಅಭಿವೃದ್ಧಿಗೆ ಅವಶ್ಯಕವಾದ ಮಾನವ ಸಂಪನ್ಮೂಲ ಅಭಿವೃದ್ಧಿ ಕ್ಷೇತ್ರಕ್ಕೆ ಹೊಸ ಹೊಸ ರೀತಿಯ ನೀಲಿ ನಕ್ಷೆಗಳನ್ನು ರೂಪಿಸಿ - ಕಾರ್ಯರೂಪಕ್ಕೆ ತಂದು ಯಶಸ್ಸು ಗಳಿಸಿದವರು. ಅವರ ‘Monday Blues’ ಪರಿಕಲ್ಪನೆ 'ಸಖತ್ ಸೋಮವಾರ' ಎಂದೇ ಜನಪ್ರಿಯವಾಗಿ ಹೋಯ್ತು.
ಉದ್ಯಮಗಳು ಮತ್ತು ಉದ್ಯೋಗಿಗಳ ಹಿತರವೆರಡನ್ನೂ ಪೂರಕವಾಗಿಸುವ 'ಮಾನವ ಸಾಮರ್ಥ್ಯ ಪೋಷಣೆ ಮತ್ತು ಮಾನವೀಯ ಸೌಹಾರ್ದ ಸಂಬಂಧ ವಾತಾವರಣ ನಿರ್ಮಾಣ' (Performance Governance System and Human Relations) ಕ್ಷೇತ್ರದಲ್ಲಿ ವಸಂತ ಕಲ್ಬಾಗಲ್ ಅವರ ಸಾಧನೆ ವಿಶಿಷ್ಟವಾದದ್ದು. 2004-2005ರಲ್ಲಿ ಅವರಿಗೆ ಮಾನವ ಸಂಪನ್ಮೂಲ ಕ್ಷೇತ್ರದಲ್ಲಿನ ಸೃಜನಶೀಲ ಕಾರ್ಯಪದ್ಧತಿಗಳ ಅನುಷ್ಠಾನಕ್ಕಾಗಿ 'ಪಿಜಿಎಸ್ ಅಸ್ಕರ್ ಡೆಕ್ಕನ್ ಹೆರಾಲ್ಡ್' ಪ್ರಶಸ್ತಿ ಸಂದಿತು. ಐಟಿಪಿಎಲ್ನಲ್ಲಿ 'ನೂನ್ ಟೈಮ್ ಬಿಂಜ್' ಮತ್ತು 'ಮೂನಲೈಟಿಂಗ್' ಸಹಾ ಅವರ ಕಲ್ಪನೆಯ ಕೂಸು.
ವಸಂತ ಕಲ್ಬಾಗಲ್ ಅವರ ಜನ್ಮದಿನ ಫೆಬ್ರವರಿ 19. ಅವರ ತಾಯಿ ಜಯಾ ಕಲ್ಬಾಗಲ್. ತಂದೆ ಎನ್.ಜಿ. ಕಲ್ಬಾಗಲ್. ಇವರು ಕರ್ನಾಟಕದ ಅಯ್ಯಂಗಾರ್ ಸಂಪ್ರದಾಯಸ್ಥ ಕುಟುಂದವರಾಗಿರುವಾಗ ಕಲಬಾಗಲ್ ಎಂದು ಹೆಸರು ಬಂದದ್ದು ಹೇಗೆ? ಸಿರ್ಸಿಯಲ್ಲಿ ವೈದ್ಯರಾಗಿದ್ದ ಇವರ ಅಜ್ಜ, ಅಲ್ಲಿರುವ ಪ್ರತಿಯೊಬ್ಬರಿಗೂ ವಿನೋದಪೂರ್ಣ ಉಪನಾಮ ಸೃಷ್ಟಿಸುತ್ತಿದ್ದರಂತೆ. ಮೆಲ್ಕೋಟೆಯಲ್ಲಿ ಅವರ ಪೂರ್ವಜರ ಸ್ಥಳದಲ್ಲಿ ಕಲ್ಲಿನ ಬಾಗಿಲು ಇದ್ದುದರಿಂದ ಅವರು ತಮ್ಮ ಹೆಸರಿಗೆ - ಕಲ್ಬಾಗಲ್ ಎಂದು ಸೇರಿಸಿದರಂತೆ. ಇವರ ಕುಟುಂಬದಲ್ಲಿನ ಹಿರಿಯ ಸಂಬಂಧಿಕರಲ್ಲಿ ಪ್ರಧಾನಿ ನೆಹರೂ ಅವರ ಕಾರ್ಯದರ್ಶಿಗಳೂ, ರಿಜರ್ವ್ ಬ್ಯಾಂಕಿನ ಗೌರ್ನರರೂ ಆಗಿದ್ದ ಎಚ್.ವಿ. ಆರ್. ಅಯ್ಯಂಗಾರ್, ಪು. ತಿ. ನರಸಿಂಹಾಚಾರ್ಯ ಅಂತ ಮಹನೀಯರಿದ್ದಾರೆ. ಇವರು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕುಟುಂಬದ ಆಪ್ತ ಸಾನ್ನಿಧ್ಯವನ್ನೂ ಅನುಭವಿಸಿ ಬೆಳೆದವರು.
ವಸಂತ ಕಲ್ಬಾಗಲ್ ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ಪತ್ರಿಕೆಗಳಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಕನ್ನಡ ದಿನಪತ್ರಿಕೆಯಲ್ಲಿ ಅವರ ಸಾಪ್ತಾಹಿಕ ಅಂಕಣವು ನವಿರಾದ ಹಾಸ್ಯ ಸ್ಪರ್ಶದೊಂದಿಗೆ ಮಾರುಕಟ್ಟೆಯಲ್ಲಿ ಬಂದ ಉತ್ಪನ್ನಗಳನ್ನು ಪರಿಚಯಿಸುತ್ತಿತ್ತು. ಈ ಅಂಕಣವು ಐದು ವರ್ಷಗಳ ಕಾಲ ಜನಪ್ರಿಯವಾಗಿತ್ತಲ್ಲದೆ, ಮುಂದೆ ಅದನ್ನೇ ಅನುಸರಿಸಿ ಬಂದ ಅಂತಹ ಅನೇಕ ಪ್ರಯತ್ನಗಳಿಗಿಂತ ಬಲು ಮುಂಚೂಣಿಯಲ್ಲಿತ್ತು. ಇವರ 'ಸುದ್ದಿ ಕಾವ್ಯ' ಎಂಬ ರಾಜಕೀಯ ಸುದ್ದಿಗಳ ಕಾವ್ಯ ಅಂಕಣ ಸಹಾ 5 ವರ್ಷಗಳ ಕಾಲ ನಿರಂತರವಾಗಿ ಮೂಡಿ ಜನಪ್ರಿಯವಾಗಿತ್ತು. ಅನೇಕ ಕಿರುತೆರೆಯ ವಾಹಿನಿಗಳೂ ಅವರ ಸೇವೆ ಪಡೆದವು.
ವಸಂತ ಕಲ್ಬಾಗಲ್ ಮುಂದೆ ಜಾಹೀರಾತು ಲೋಕದ ಪ್ರತಿಷ್ಠಿತ ಹೆಸರಾದ 'ಮುದ್ರಾ'ದಲ್ಲಿನ ಪ್ರಾದೇಶಿಕ ಮುಖ್ಯಸ್ಥರಾಗಿದ್ದರು. ತಂತ್ರಜ್ಞಾನ ಲೋಕದ ಪ್ರಸಿದ್ಧ ಹೆಸರುಗಳಾದ ಐಟಿಪಿಎಲ್, ಟಿಸಿಎಸ್-ಬಿಟಿಎಸ್ (ಹಿಂದಿನ ಹೆಸರು ಫೀನಿಕ್ಸ್ ಗ್ಲೋಬಲ್ ಸಲ್ಯೂಷನ್ಸ್) ಅಂತಹ ಸಂಸ್ಥೆಗಳ ಹಿರಿಯ ನಿರ್ದೇಶಕ ಜವಾಬ್ಧಾರಿಗಳನ್ನು ನಿರ್ವಹಿಸಿದರು.
ವಸಂತ ಕಲ್ಬಾಗಲ್ ಅವರು ವಿಜಯ್ ಮಲ್ಯ, ರತನ್ ಟಾಟಾ, ಸರ್ಕಾರ್, ಎ ಜಿ ಕೃಷ್ಣಮೂರ್ತಿ ಮುಂತಾದ ಸಕಲ ಉದ್ಯಮ ಸಾಧಕರೊಂದಿಗೆ ಮೇಜಿನ ಮೇಲೆ ಕುಳಿತು, ಒಪ್ಪಂದಗಳನ್ನು ಮಾಡುತ್ತಾ, ಸಂವಾದ ನಡೆಸುತ್ತಾ ಒಪ್ಪಂದಗಳಿಗೆ ಸಹಿ ಹಾಕುತ್ತಿದ್ದವರು. ವಾಜಪೇಯಿ, ಪಟೌಡಿ, ರಾಜ್ಕುಮಾರ್ ಮತ್ತು ನಿಸ್ಸಾರ್ ಅಹಮದ್ ಅಂತಹವರೊಂದಿಗೆ ಹಸ್ತಲಾಘವ ಮಾಡುವುದು, ವಿದೇಶಿ ಗಣ್ಯರನ್ನು ಭೇಟಿ ಮಾಡುವುದು ಮುಂತಾದದ್ದು ಅವರಿಗೆ ಸಹಜ ಬದುಕಿನ ಭಾಗವಾಗಿತ್ತು. ಹೀಗೆ ಅವರಿಗೆ ಜೀವನವೆಂಬುದೇ ದೊಡ್ಡ ಕಲಿಯುವ ವಿಶ್ವವಿದ್ಯಾಲಯವಾಗಿತ್ತು.
ಐಟಿ ಕ್ಷೇತ್ರದಲ್ಲಿ ಅಷ್ಟೊಂದು ಜವಾಬ್ದಾರಿ ನಿರ್ವಹಿಸಿದವರು ಕನ್ನಡದಲ್ಲಿ ಬರೆಯುತ್ತಾರೆ ಎಂದು ಊಹಿಸುವುದಕ್ಕೂ ಕಷ್ಟ. ವಸಂತ ಕಲ್ಬಾಗಲ್ ಪ್ರಮದ, ಸುದ್ದಿಕಾವ್ಯ, ಕಾಲ, ಶಂಕರದೇವ, ಪ್ರಣವ, Some ದರ್ಶನ (ಅನುಭವ ಜನ್ಯ ವ್ಯಕ್ತಿಚಿತ್ರಗಳು), ಅಡ್ಡಿತುಷ ಬಕ್ಕಜಬಿನ್ನಿ ಮತ್ತು ಇತರ ಲಲಿತ ಪ್ರಬಂಧಗಳು, ಇವಳು ಅವಳಲ್ಲ, ಬ್ರೆಜಿಲ್ ಪಯಣ ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಬರಹಗಳಲ್ಲಿ ಪರಂಪರೆಯಲ್ಲಿ ಬೆಳೆದು ಬಂದ ಸೆಳೆತದೊಂದಿಗೆ, ವಿಶ್ವದೆಲ್ಲೆಡೆ ಕಂಡ ಪ್ರೀತಿಯಿದೆ. ಅವರ ಕೆಲವು ಕವನಗಳು ಇತರ ಭಾಷೆಗಳಿಗೆ ಅನುವಾದಗೊಂಡಿವೆ. ವಸಂತ ಅವರ ಬರಹಗಳು ಅನೇಕ ಪತ್ರಿಕೆಗಳಲ್ಲಿ ಮೂಡಿವೆ. ಅವರ ಕವಿತೆಗಳು ಕನ್ನಡ ಸಾಹಿತ್ಯ ಪರಿಷತ್ತಿನ ಕಾವ್ಯ ಸಂಕಲನಗಳನ್ನಲಂಕರಿಸಿವೆ. Poets and writers den poetry ಅಂತಹ ಸ್ಪರ್ಧೆಗಳಲ್ಲೂ ಅವರಿಗೆ ಬಹುಮಾನ ಬಂದಿದೆ. ಅಂತರರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲಿ ಅವರು ಇಂಗ್ಲಿಷ್ ಕವಯತ್ರಿಯಾಗಿ ನಿರಂತರ ಪ್ರಕಾಶಮಾನ ಹೆಸರು.
ಆಗಸ್ಟ್ 1996ರಲ್ಲಿ ಒಂದೇ ದಿನದಲ್ಲಿ ವಸಂತ, ಅವರ ತಾಯಿ ಮತ್ತು ಸಹೋದರಿ ಹೀಗೆ ಕುಟುಂಬದ ಮೂವರ ಕೃತಿಗಳ ಬಿಡುಗಡೆ ಒಟ್ಟಿಗೆ ನಡೆದು ಒಂದು ದಾಖಲೆ ಕಂಡಿತು. ವಸಂತ ಅವರ ಪುತ್ರಿ ಮೇಧಾ ಸಹಾ ಕೃತಿ ರಚನೆ ಮಾಡಿದ್ದಾರೆ.
ವಸಂತ ಕಲ್ಬಾಗಲ್ ವಿಶ್ವದೆಲ್ಲೆಡೆ ವ್ಯಾಪಕವಾಗಿ ಸಂಚರಿಸಿದ್ದಾರೆ. ಅವರ ಬ್ರೆಜಿಲ್ ದೇಶದಲ್ಲಿನ ಅನುಭವವೇ ಆಗಲಿ ಅಥವಾ ಅವರು ತಾವು ಬಾಲ್ಯದಲ್ಲಿ ಕಂಡ ಅನುಭವವೇ ಆಗಲಿ, ಅವರು ಇತರ ಆತ್ಮೀಯರ ಬಗ್ಗೆ ಬರೆಯುವುದೇ ಆಗಲಿ, ಅವರು ಬರೆಯುವ ವಿಮರ್ಶೆಯೇ ಆಗಲಿ ಅಲ್ಲೊಂದು ನವಿರು ಹಾಸ್ಯ ಪ್ರಜ್ಞೆ ಇದೆ. ಮಾನವ ಪ್ರೀತಿಯ ಆಳವಿದೆ.
ವಸಂತ ಕಲ್ಬಾಗಲ್ ಅವರ ಒಂದು ಕವಿತೆ ಇಂತಿದೆ:
ರೈಲು ಬಂಡಿಯಲ್ಲಿ
ಕುಳಿತರೊಬ್ಬರು ನನ್ನ ಬಳಿಯಲ್ಲಿ ಬಂದು
ಕೇಳಿದೆನು ತಾವು ಇಳಿವುದೆಲ್ಲಿ ಎಂದು
ನಕ್ಕು ನುಡಿದರವರು ನನ್ನೂರು ಬಂದಾಗ
ಈ ಓಡುವ ಗಾಡಿ ಅಲ್ಲಿ ನಿಂದಾಗ
ಗಡಗಡನೆ ಗದ್ದಲವ ಮಾಡಿ ನಿಂತಿತು ಗಾಡಿ
ಗಡಿಬಿಡಿಯ ಮಾಡಿ ಎದ್ದರವರು ಕೈ ನೀಡಿ
ನನ್ನೂರ ತಲುಪಿದೆನು ಇನ್ನುನಾ ಇಳಿಯುವೆನು
ನಮ್ಮಿಬ್ಬರ ಸ್ನೇಹಕ್ಕೆ ಎಂಥ ಪೆಟ್ಟು! ಅಬ್ಬಾ ಇದೇನು?
ಪಟಪಟನೆ ಕಣ್ಣೀರು ತಟತಟನೆ
ತೊಟ್ಟಿಕ್ಕಿತು; ದಮ್ಮಯ್ಯ ನೀವು ಇಳಿಯದಿರಿ
ನಮ್ಮ ಸಂಕೋಲೆ ಕಳಚೀತು
ತಲೆಯ ನೇವರಿಸಿ ನುಡಿದರವರು -
ನನ್ನೂರಲಿ ನಾನು ನಿನ್ನೂರಲಿ ನೀನು ಇಳಿಯಲೇಬೇಕನ್ನು
ಜೀವನವೆಂದರೆ ನಿನಗೆ ಗೊತ್ತಿಲ್ಲವೇನು?
On the birthday of great achiever, writer and our affectionate friend Vasantha Kalbagal
ಕಾಮೆಂಟ್ಗಳು