ಭಾರತಕಥಾಮಂಜರಿ60
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ವಿರಾಟ ಪರ್ವ - ಮೊದಲನೆಯ ಸಂಧಿ
ಕಾಯಿದರು ಸತ್ಯವನು ವನವಾ
ಸಾಯತವ ನೆರೆಗೆಲಿದು ಪಾಂಡವ
ರಾಯರೋಲೈಸಿದರು ಬಂದು ವಿರಾಟನಗರಿಯಲಿ
ಪಾಂಡವರು ಅತಿದೀರ್ಥವಾದ ವನವಾಸವನ್ನು ಸತ್ಯಪಾಲನೆಗಾಗಿ ಕಳೆದು ಅಜ್ಞಾತವಾಸವನ್ನುಕಳೆಯಲು ವಿರಾಟನಗರಕ್ಕೆ ಬಂದು ಸೇವೆಯಲ್ಲಿ ನಿಂತರು
ಕೇಳು ಜನಮೇಜಯ ಧರಿತ್ರೀ
ಪಾಲ ಮುನಿಜನ ನೃಪಜನಂಗಳ
ಬೀಳುಗೊಟ್ಟನು ಭೂಮಿಪತಿ ಬಲವಂದು ಹುತವಹನ
ಮೇಲು ಶಕುನದ ಚಾರುನಿನದವ
ನಾಲಿಸುತ ಸೋದರರು ಸಹಿತ ವ
ನಾಲಯವ ಹೊರವಂಟು ಸೇರಿದರೊಂದು ವಟಕುಜವ ೧
ಬಂದು ವಟಕುಜದಡಿಯಲನಿಬರು
ನಿಂದು ದುರುಪದಿ ಸಹಿತ ಬಳಲಿಕೆ
ಯಿಂದ ವಿಶ್ರಮಿಸಿದರು ಚಿಂತಿಸಿ ಧರ್ಮನಂದನನು
ಹಿಂದೆ ಹನ್ನೆರಡಬುದ ಸವೆದವು
ಮುಂದಣನುವಿನ ಹದನು ತಮಗಿ
ನ್ನೊಂದಬುದವಜ್ಞಾತವುತ್ಕಟವಾಯ್ತುಲಾಯೆಂದ ೨
ಬಡಗಲವರದು ಮೂಡಣರಸುಗ
ಳೆಡೆಗೆಣೆಯರಾತಂಗೆ ತೆಂಕಣ
ಕಡೆಯವರು ಕಂಡಿಹರು ಕೆಲಬಲದವರು ಕೊಂಡೆಯರು
ಪಡುವಣವರತಿ ಕೃಶರು ನಮಗಿ
ನ್ನಡಗಿರಲು ತೆರನಾವುದೆಂದೆನೆ
ನುಡಿದನರ್ಜುನ ದೇವನವನೀಪತಿಗೆ ವಿನಯದಲಿ ೩
ವಳಿತವನು ಹೊಕ್ಕಿರಿದು ಕೌರವ
ರೊಳಗೆ ಹಗೆಯಾಗಿಹನು ಕೀಚಕ
ಬಲವಿರಾಟಂಗವನ ದೆಸೆಯಿಂ ಭಯವಿಹೀನವದು
ಮುಳಿದು ಹೇಳಿಕೆಯಾದ ರವಿಸುತ
ಕಲಿತ್ರಿಗರ್ತಾದಿಗಳೆನಿಪ ಮಂ
ಡಳಿಕರನು ಕೈಕೊಳ್ಳದಾಳುವರವರು ಪಶ್ಚಿಮವ ೪
ನೃಪತಿ ನಿಶ್ಚೈಸಿದನು ಮತ್ಸ್ಯಾ
ಧಿಪನ ನಗರಿಯೊಳಲ್ಲಿ ಸೈರಿಸಿ
ಕೃಪಣತನದಲಿ ನೂಕಬೇಹುದು ನುಡಿದ ವತ್ಸರವ
ಗುಪಿತವೆಂತಳವಡುವುದಾಶ್ರಯ
ದಪದೆಸೆಯನೆಂತಾನುವಿರಿ ನಿ
ಷ್ಕೃಪೆಯೊಳೆಂತಾನೆಂಬೆನೆಂದನು ಧರ್ಮನಂದನನು ೫
ದೇವ ನಿಮ್ಮಯ ಮತವೆ ಮತವೆಮ
ಗಾವ ವೇಷದ ವಿವರ ನಿಮಗದ
ನೀವು ಬೆಸಸುವುದೆಂದು ಭೀಮಾರ್ಜುನರು ಬಿನ್ನವಿಸೆ
ನಾವು ಭೂಸುರವೇಷದಲಿ ಸಂ
ಭಾವಿತರು ಮತ್ತಲ್ಲಿ ಸನ್ಯಾ
ಸಾವಲಂಬನ ಕಂಕನೆಂಬಭಿಧಾನ ತನಗೆಂದ ೬
ವಲಲನೆಂಬಭಿದಾನದಲಿ ನೃಪ
ನಿಳಯವನು ಸಾರುವೆನು ತಾನೆಂ
ದುಲಿಯೆ ಮಾರುತಿ ನುಡಿದ ವರನಾಟ್ಯವಿದ ವೇಷವನು
ಫಲುಗುಣನು ಹಯ ಗೋ ನಿವಾಸ
ಸ್ಥಳ ವಿಳಾಸಿತರೆನಲು ಯಮಳರು
ಲಲನೆ ಬಿನ್ನಹ ಮಾಡಿದಳು ಸೈರಂಧ್ರಿ ವೇಷವನು ೭
ತೊಳಲಿದಿರಿ ಹನ್ನೆರಡು ವರುಷವು
ಹಳುವದಲಿ ಸೊಂಪಡಗಿ ಪರರೊಡ
ನುಳಿಗೆಲಸದೋಲಗವಿದೆಂತೈ ಸಾರ್ವಭೌಮರಿಗೆ
ಬಳಲಿದಿರಿ ಹಿರಿದಾಗಿ ನಿಮ್ಮುವ
ನಳಲಿಸಿದೆನೆನ್ನಿಂದ ಪಾಪಿಗ
ಳೊಳರೆ ಭುವನದೊಳೆಂದು ಕುಂತೀಸೂನು ಬಿಸುಸುಯ್ದ ೮
ಒಡಲ ಬಳಿ ನೆಳಲಿಂಗೆ ಗತಿ ಬೇ
ರ್ಪಡಿಸಿಹುದೆ ಸುಖದುಃಖವಿವು ನಿ
ಮ್ಮಡಿಗಳಲಿ ತನು ನಾಲ್ಕರಲಿ ಜೀವಾತ್ಮ ನೀವೆಮಗೆ
ಅಡವಿಯೇ ಸಾಮ್ರಾಜ್ಯ ನಿಮ್ಮಡಿ
ಯೊಡನಿರಲು ನೀವಿಲ್ಲದಾ ಪುರ
ವಡವಿ ನಮಗಹುದೆಂದು ಬಿನ್ನವಿಸಿದರು ಭೂಪತಿಗೆ ೯
ತುಷ್ಟನಾದನು ನೃಪತಿ ಕೃತ ಪರಿ
ಶಿಷ್ಟಪಾಲನು ಜಗದೊಳತ್ಯು
ತ್ಕೃಷ್ಟ ಚರಿತನು ತೆಂಕದೆಸೆಗೆ ಸಹೋದರರು ಸಹಿತ
ದುಷ್ಟಮೃಗಗಳ ಬೇಂಟೆಯಾಡಿ ವ
ಸಿಷ್ಠ ಮುನಿಯಾಶ್ರಮದ ಸುಜನರ
ರಿಷ್ಟವನು ಪರಿಹರಿಸುತೈತಂದನು ಸರಾಗದಲಿ ೧೦
ಬಂದು ಮತ್ಸ್ಯಪುರೋಪಕಂಠದ
ನಂದನದ ಕೆಲಕಡೆಯಲನಿಬರು
ನಿಂದು ನಾಲಕು ದೆಸೆಯನೀಕ್ಷಿಸಿ ನಿಜನಿವಾಸದಲಿ
ತಂದ ಚರ್ಮದಲಖಿಳ ಕೈದುವ
ನೊಂದು ಹೆಣನಾಕಾರದಲಿ ಬಿಗಿ
ದೊಂದು ಬನ್ನಿಯ ಮರನ ತುದಿಯಲಿ ಕಟ್ಟಲೇರಿದರು ೧೧
ಕಾಳಿ ಪರಮಕರಾಳಿ ಸುರಮುನಿ
ಮೌಳಿ ಮಂಡಿತ ಚರಣೆ ಖಳದನು
ಜಾಳಿ ಮರ್ದಿನಿ ಘನ ಕಪರ್ದಿ ವರಾರ್ಧತನುಯುತಳೆ
ಶೂಲ ಪರಶು ಪರಶ್ವಧಾದಿಗ
ಳಾಳುತೊಪ್ಪುವ ಕರಚತುಷ್ಟಯೆ
ಪಾಲಿಸೆಮ್ಮನೆನುತ್ತ ದುರ್ಗೆಯನಂದು ನುತಿಸಿದರು ೧೨
ತೆಗೆಯದಿರಿ ನೀವೆಂದು ತುರುಗಾ
ಹಿಗಳನಂಜಿಸಿ ಧರ್ಮಸುತ ದೃಗು
ಯುಗವ ಮುಚ್ಚಿ ಸುರೇಂದ್ರ ಯಮ ವರುಣಾದಿಗಳಿಗೆರಗಿ
ವಿಗಡನೀ ಕಲಿ ಭೀಮನೀ ಕೈ
ದುಗಳನೀತಂಗೀಯದಿರಿ ಕೈ
ಮುಗಿದು ಬೇಡಿದೆನೆಂದು ಸುರರಿಗೆ ನುಡಿದನವನೀಶ ೧೩
ಈವುದಾ ಬೇಡಿದರೆ ಪಾರ್ಥಂ
ಗೀವುದೀಯಜ್ಞಾತ ವಾಸದೊ
ಳೀ ವಿಗಡ ಭೀಮಂಗೆ ಕೊಡದಿರಿಯೆನಲು ಖತಿಗೊಂಡು
ನೀವು ಕುಂತಿಯ ಮಕ್ಕಳಾದಿರಿ
ನಾವು ದುರ್ಯೋಧನನವರು ತ
ಪ್ಪಾವುದಿದಕೆಂದನಿಲಸುತನೌಡೊತ್ತಿ ಗರ್ಜಿಸಿದ ೧೪
ಸುರನಿಕರ ಕಾದಿರಲಿ ಮೇಣೀ
ಧರಣಿಕೊಡೆನೆಂದೆನಲಿ ಹಸ್ತಿನ
ಪುರಿಗೆ ದಾಳಿಯನಿಡುವೆನಮರರ ಮೋರೆಗಳ ತಿವಿದು
ಉರುತರಾಸ್ತ್ರವನೊಯ್ವೆನೆಂದ
ಬ್ಬರಿಸಿ ಮಾರುತಿ ನುಡಿಯೆ ತಮ್ಮನ
ಬರಸೆಳೆದು ಬಿಗಿಯಪ್ಪಿ ಮೈದಡವಿದನು ಭೂಪಾಲ ೧೫
ಅವಧಿಯೊಂದೇ ವರುಷವಿದರೊಳ
ಗೆವಗೆ ಸೈರಣೆಯುಂಟು ನೀ ಮುನಿ
ದವಗಡಿಸಿದೊಡೆ ಬಳಿಕ ಸೈರಿಸಲರಿಯೆ ಮನ ಮುಳಿದು
ಅವನಿಯಲಿ ಹನ್ನೆರಡು ವರುಷವು
ನವೆದುದದು ನಿಷ್ಫಲವಲಾ ಕೌ
ರವರಿಗತಿಲಾಗಹುದು ನೀನೇ ಬಲ್ಲೆ ಹೋಗೆಂದ ೧೬
ಹದುಳವಿಟ್ಟನು ಭೀಮನನು ನಿ
ರ್ಮದನು ಮತ್ಸ್ಯನಪುರಿಗೆ ಯತಿವೇ
ಷದಲಿ ಬಂದನು ಹೊನ್ನಸಾರಿಯ ಚೀಲ ಕಕ್ಷದಲಿ
ಇದಿರೊಳಾನತರಾಯ್ತು ಕಂಡವ
ರುದಿತ ತೇಜಃಪುಂಜದಲಿ ಸೊಂ
ಪೊದವಿ ಬರಲು ವಿರಾಟ ಕಾಣಿಸಿಕೊಂಡು ಬೆಸಗೊಂಡ ೧೭
ಇತ್ತ ಬಿಜಯಂಗೈಯಿ ಹಿರಿಯರಿ
ದೆತ್ತಣಿಂದೈತಂದಿರೈ ಅ
ತ್ಯುತ್ತಮದ ವೇಷದ ಮಹಾತ್ಮರ ಕಂಡು ಬದುಕಿದೆವು
ಇತ್ತಪೆವು ಬೇಡಿದುದ ನಾವೆನೆ
ಸುತ್ತ ಬಳಸೆವು ರಾಜಸೇವೆ ನಿ
ಮಿತ್ತ ಬಂದೆವು ಮುನ್ನಿನೋಲಗವಂತರಿಸಿತಾಗಿ ೧೮
ಕೆಟ್ಟುದಿಂದ್ರಪ್ರಸ್ಥ ಪಾಂಡವ
ರುಟ್ಟುಹೋದರು ನಾರ ಸೀರೆಯ
ನಟ್ಟಡವಿ ಮನೆಯಾಯ್ತು ಹಿಮಕರಕುಲದ ರಾಯರಿಗೆ
ಬಿಟ್ಟರೆಮ್ಮನು ಜಠರ ಭರಣಕೆ
ನೆಟ್ಟನಾಶ್ರಯವಿಲ್ಲದಿರೆ ಕಂ
ಗೆಟ್ಟು ಬಂದೆವು ಕಂಕನೆಂಬಭಿದಾನ ತನಗೆಂದ ೧೯
ಓಲಗಕೆ ಬಂದಖಿಳರಾಯರ
ಮೌಳಿ ಮೌಕ್ತಿಕ ಮಣಿ ಮಯೂಖ ನಿ
ವಾಳಿಯಲಿ ನೆರೆ ಮೆರೆವುದಾತನ ಪಾದ ಪದ್ಮಯುಗ
ಕಾಲವಾವನನಾವಪರಿಯಲಿ
ಕೀಳು ಮಾಡದು ಧರ್ಮಪುತ್ರನ
ನಾಳುಗೊಂಡನು ಮತ್ಸ್ಯನೆಲೆ ಜನಮೇಜಯ ಕ್ಷಿತಿಪ ೨೦
ಆದುದೈ ನಿರ್ವಾಹ ಕಂಕಂ
ಗಾದುದಾ ಮತ್ಸ್ಯೇಶನಿಂದ ವಿ
ವಾದವಿಲ್ಲದೆ ಸೇವೆ ನಿಜವಾದಂತೆಯಿರುತಿರಲು
ಹೋದವಿತ್ತಲು ಕೆಲವು ದಿನ ತನ
ಗಾದ ಸಾಹಾಯ್ಯದಲಿ ರಿಪು ಬಲ
ಭೇದಿ ಮಾರುತಿ ಬಂದುಕಂಡನು ಮತ್ಸ್ಯಭೂಪತಿಯ ೨೧
ಏನು ಪರಿಣತಿ ನಿನಗೆ ಬಾಣಸಿ
ಯಾನು ಭೀಮನ ಮನೆಯವನು ಮ
ತ್ತೇನು ಭುಜಬಲವರಿವೆನಗ್ಗದ ಮಲ್ಲವಿದ್ಯೆಯಲಿ
ನೀನಧಿಕನೆಂದಾ ಸಮೀರನ
ಸೂನುವನು ಮನ್ನಿಸಿದನಿತ್ತಲು
ಮಾನನಿಧಿ ಮರುದಿವಸ ಹೊಕ್ಕನು ಪಾರ್ಥನಾ ಹೊಳಲ ೨೨
ಸುರಪನರಸಿಯ ಶಾಪದಲಿ ಸಿತ
ತುರಗನರೆವೆಣ್ಣಾಗಿ ಮತ್ಸ್ಯೇ
ಶ್ವರನ ಮಗಳಿಗೆ ನಾಟ್ಯ ವಿದ್ಯಾಭ್ಯಾಸ ಸಂಗದಲಿ
ಇರಲು ಯಮಳರು ತುರಗ ಗೋವ್ರಜ
ಭರಣರಾದರು ಬಳಿಕ ಪಾಂಡವ
ರರಸಿ ಸಾರಿದಳೊಲವಿನಲಿ ವೈರಾಟ ಪಟ್ಟಣವ ೨೩
ತರಣಿಗಂಜಿದಡಿಂದು ತಲೆಗಾ
ಯ್ದಿರಿಸಿದನೊ ಮರೆಯಾಗಿ ತಿಮಿರದ
ಹೊರಳಿಗಳನೆನೆ ಮುಡಿಗೆ ಮೋಹಿದ ವೇಣಿವಲ್ಲರಿಯ
ಹಿರಿದು ಸೈರಿಸಲಾರೆನೆಂದೊಡ
ನಿರಿಸಿದನೊ ಕೈರವವನೆನಲೆಂ
ದರರೆ ಕಂಗಳಢಾಳವೊಪ್ಪಿರೆ ಬಂದಳಬುಜಮುಖಿ ೨೪
ಮೊಲೆಯ ಮೇಲುದು ಜಾರೆ ಜಾರಿದ
ರಳಿಮನರು ಕಂಗಳಿನ ಮಿಂಚಿನ
ಹಿಳುಕಿನೆಡೆ ನಡೆಗೆಟ್ಟುನಿಂದರು ಚಿತ್ತವಿಹ್ವಲರು
ತೆಳುವಸುರು ತಲೆದೋರೆ ತೋರಿದು
ದಲಗು ಮರುಮೊನೆಯೆನುತ ವಿಟರಳ
ವಳಿಯೆ ನಡೆತರುತಿರ್ದಳಂಗನೆ ರಾಜವೀಧಿಯಲಿ ೨೫
ಎಲೆಲೆ ಮದನನಗಜವು ತೊತ್ತಳ
ದುಳಿದುದೋ ಕಾಮುಕರನೆನೆ ಗಾ
ವಳಿಯೊಳಗೆ ಗಾರಾಯ್ತು ಗರುವಿಕೆ ವಿಟವಿದೂಷಕರ
ಅಳುಕಿದರು ಮನುಮಥನ ಗರುಡಿಯ
ಬಲುಮೆಗಾರರು ಬಂದಳಗ್ಗದ
ನಳಿನಮುಖಿ ಬಹುಜನದ ಮನಕಚ್ಚರಿಯನೊದವಿಸುತ ೨೬
ಜನರ ಜಾಣಕ್ಕಾಡಲಾ ಮೋ
ಹನ ಮಹಾಂಬುಧಿಯೊಳಗೆ ನೃಪನಂ
ಗನೆಯ ಭವನಕೆ ಬರಲು ಬೆರಗಾಯ್ತಖಿಳ ನಾರಿಯರು
ವನಿತೆ ಮಾನಿಸೆಯಲ್ಲ ಮನುಜರಿ
ಗಿನಿತು ರೂಪೆಲ್ಲಿಯದು ವಿಸ್ಮಯ
ವೆನುತ ಮನದೊಳಗಳುಕಿದರು ಮತ್ಸ್ಯೇಶನರಸಿಯರು ೨೭
ಬರವ ಕಂಡು ಸುದೇಷ್ಣೆ ಮನದಲಿ
ಹರುಷಮಿಗೆ ಹೊಂಗಿದಳು ಕರೆ ಕರೆ
ತರುಣಿಯಾರೆಂದಟ್ಟಿದಳು ಕೆಳದಿಯರನಿನಿಬರನು
ಸರಸಿಜಾಯತದಂದವನು ಮೋ
ಹರಿಸಿ ಮುಂಚುವ ಪರಿಮಳವನಂ
ದರಸಿ ಬೀರುತ ಬಂದು ಹೊಕ್ಕಳು ರಾಜಮಂದಿರವ ೨೮
ಕೆಳದಿಯರು ಕಾಣಿಸಿದರರಸನ
ಲಲನೆಯನು ಪರಿಯಂಕ ಪೀಠದ
ಕೆಲಕೆ ಕರೆದಳು ಕಮಲವದನೆಯನುಚಿತ ವಚನದಲಿ
ನಳಿನಮುಖಿ ನೀನಾರು ನಿನಗಾ
ರೊಳರು ರಮಣರು ಮಾಸಿಕೊಂಡಿಹ
ಮಲಿನವೃತ್ತಿಯಿದೇಕೆನುತ ಬೆಸಗೊಂಡಳಂಗನೆಯ ೨೯
ಅತುಳಬಲ ಗಂಧರ್ವರೈವರು
ಪತಿಗಳೆನಗುಂಟೆನ್ನ ಚಿತ್ತಕೆ
ಖತಿಯಮಾಡಿದರೊಂದು ವರುಷವು ಬಿಡುವೆನವರುಗಳ
ಸತತವಾ ಕುಂತೀಕುಮಾರರ
ಸತಿಯನೋಲೈಸಿದ್ದೆ ಬಳಿಕವ
ರತಿಗಹನದಲಿ ನಿಷ್ಠರಾಗಲು ತನಗೆ ಬರವಾಯ್ತು ೩೦
ಏನ ಮಾಡಲು ಬಲ್ಲೆಯೆಂದರೆ
ಮಾನಿನಿಯ ಸಿರಿಮುಡಿಯ ಕಟ್ಟುವೆ
ಸೂನ ಮುಡಿಸುವೆ ವರಕಟಾಕ್ಷಕೆ ಕಾಡಿಯನಿಡುವೆ
ಏನ ಹೇಳಿದ ಮಾಡಬಲ್ಲೆನು
ಸಾನುರಾಗದೊಳೆಂದೆನಲು ವರ
ಮಾನಿನಿಯ ನಸುನಗುತ ನುಡಿಸಿದಳಂದು ವಿನಯದಲಿ ೩೧
ಎನಲು ಮೆಚ್ಚಿದಳಾ ವಿರಾಟನ
ವನಿತೆ ವೀರರ ವಧುವನಾ ಸಖಿ
ಜನದೊಳಗೆ ನೇಮಿಸಿದಳನಿಬರಿಗಾಯ್ತು ನಿರ್ವಾಹ
ಮನದ ಢಗೆಯಡಗಿದವು ಮತ್ಸ್ಯೇ
ಶನ ಪುರಾಂತರದೊಳಗೆ ಮೈಮರೆ
ಸನುಪಮಿತ ಭುಜ ಸತ್ವರಿದ್ದರು ಭೂಪ ಕೇಳೆಂದ ೩೨
ಸಂಕ್ಷಿಪ್ತ ಭಾವ
Lrphks Kolar
ವಿರಾಟರಾಜನ ಅರಮನೆಯಲ್ಲಿ ಪಾಂಡವರ ಅಜ್ಞಾತವಾಸದ ಪ್ರಾರಂಭ.
ಧರ್ಮಜನು ತನ್ನೊಂದಿಗಿದ್ದ ಇತರ ಪರಿವಾರದವರನ್ನು ಕಳಿಸಿ ಮುಂದುವರಿದನು. ಒಂದು ವೃಕ್ಷದ ಕೆಳಗೆ ಕುಳಿತು ಸಮಾಲೋಚನೆಗೆ ತೊಡಗಿದರು. ಯಾವ ಯಾವ ದಿಕ್ಕಿನಲ್ಲಿ ಯಾವ ಯಾವ ರಾಜರಿದ್ದಾರೆ, ಎಲ್ಲಿದ್ದರೆ ತಮಗೆ ಕ್ಷೇಮ ಎಂದು ಯೋಚಿಸಿದಾಗ ಅರ್ಜುನನು ವಿರಾಟರಾಜನ ಬಗ್ಗೆ ಹೇಳಿದನು. ಧರ್ಮಜನು ಒಪ್ಪಿದನು. ತನ್ನಿಂದಾಗಿ ಎಲ್ಲರೂ ನೋಯಬೇಕಾಯಿತು ಎಂದು ಅಳಲಿದನು. ಆಗ ನಮ್ಮ ನಾಲ್ವರ ಜೀವ ನೀನೇ ಎಂದು ಸಮಾಧಾನಿಸಿದರು.
ತಾನು ಕಂಕನೆಂಬ ಹೆಸರಿನಲ್ಲಿ ರಾಜನ ಜೊತೆಯಿರುತ್ತೇನೆ ಎಂದು ಧರ್ಮಜ ನುಡಿದನು. ವಲಲನಾಗಿ ಭೀಮನು ಪಾಕಶಾಲೆಯಲ್ಲಿಯೂ, ಅರ್ಜುನನು ಊರ್ವಶಿಯ ಶಾಪದ ಫಲದ ರೂಪದಲ್ಲಿ ರಾಜಕುಮಾರಿಗೆ ನೃತ್ಯ ಕಲಿಸುವುದಾಗಿಯೂ ನಕುಲ ಸಹದೇವರು ಕುದುರೆ ಮತ್ತು ಗೋವುಗಳ ಪಾಲಕರಾಗಿಯೂ ಒಪ್ಪಿದರು. ದ್ರೌಪದಿಯು ಸೈರಂಧ್ರಿಯಾಗಿ ರಾಣಿಯ ಊಳಿಗ ಸೇರುವುದೆಂದು ನಿರ್ಧಾರವಾಯಿತು. ಎಲ್ಲರೂ ದುರ್ಗೆಯನ್ನು ಸ್ತುತಿಸಿದರು.
ಊರ ಹೊರಗಿನ ಒಂದು ಬನ್ನಿಮರದಲ್ಲಿ ತಮ್ಮ ಆಯುಧಗಳನ್ನು ಇಟ್ಟರು. ಭೀಮನಿಗೆ ಮಾತ್ರ ಕೊಡಕೂಡದೆಂದೂ ಅರ್ಜುನನು ಕೇಳಿದರೆ ಕೊಡಬಹುದೆಂದೂ ಧರ್ಮಜ ವೃಕ್ಷದೇವತೆಗೆ ಬೇಡಿಕೊಂಡನು. ಮತ್ತೆ ಭೀಮನಿಗೆ ಕೋಪ. ಆದರೆ ಧರ್ಮಜನು ಸಮಾಧಾನ ಹೇಳಿದನು. ಇದೊಂದು ವರ್ಷ ಸೈರಿಸಿಕೊಂಡಿದ್ದರೆ ಒಳಿತು ಎಂದು ಭೀಮನಿಗೆ ಅರಿವಾಯಿತು.
ಕಂಕನಾಗಿ ಬಂದವನನ್ನು ವಿರಾಟರಾಜನು ತನ್ನೊಂದಿಗೆ ಇರಿಸಿಕೊಂಡನು. ಭೀಮನಿಗೆ ಪಾಕಶಾಲೆಯ ಕೆಲಸ ದೊರೆಯಿತು. ಬೃಹನ್ನಳೆಯಾಗಿ ಅರ್ಜುನ ಬಂದನು. ಯಮಳರು ಸಹಾ ಹಯ ಮತ್ತು ಗೋವುಗಳ ರಕ್ಷಕರಾದರು. ಕೊನೆಯಲ್ಲಿ ದ್ರೌಪದಿಯು ಬಂದಳು. ಅವಳ ಚೆಲುವನ್ನು ಕಂಡು ಎಲ್ಲರೂ ಅಚ್ಚರಿಪಟ್ಟರು. ರಾಣಿಯು ಇವಳನ್ನು ಕರೆಸಿ ವಿಚಾರಿಸಲು ಗಂಧರ್ವರು ಐದು ಮಂದಿ ಪತಿಗಳನ್ನು ಒಂದು ವರ್ಷ ಕೋಪದಿಂದ ದೂರವಿಟ್ಟಿರುವುದಾಗಿ ತಿಳಿಸಿದಳು. ತಾನು ಹಿಂದೆ ರಾಣಿಯ ಅಲಂಕಾರದ ಕೆಲಸದಲ್ಲಿ ಇದ್ದುದಾಗಿ ತಿಳಿಸಿದಳು. ಸುದೇಷ್ಣಾದೇವಿಯು ಅವಳನ್ನು ಸೇರಿಸಿಕೊಂಡಳು. ಹೀಗೆ ಅವರವರು ಆರಿಸಿಕೊಂಡ ಕೆಲಸಗಳನ್ನು ನಿರ್ವಹಿಸುತ್ತ ಪಾಂಡವರು ಮತ್ತು ದ್ರೌಪದಿ ತಮ್ಮ ಅಜ್ಞಾತವಾಸವನ್ನು ಕಳೆಯತೊಡಗಿದರು.
(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳು 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿಯೂ ಲಭ್ಯವಿದೆ. ನಮಸ್ಕಾರ)
ಕಾಮೆಂಟ್ಗಳು