ಭಾರತಕಥಾಮಂಜರಿ61
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ವಿರಾಟ ಪರ್ವ - ಎರಡನೆಯ ಸಂಧಿ
ಕುಸುಮಶರನುರವಣೆಯ ಗಾಯದ
ಲೆಸುಗೆವಡೆದನು ಕೀಚಕನು ತ
ನ್ನಸುವಿನಳತೆಯ ನೋಡದೇ ತುಡಿಕಿದನು ದ್ರೌಪದಿಯ
ಕೇಳು ಜನಮೇಜಯ ಧರಿತ್ರೀ
ಪಾಲ ನಿಮ್ಮಯ ಪೂರ್ವ ಭೂಮೀ
ಪಾಲರಿದ್ದರು ಗುಪಿತದಿಂದ ವಿರಾಟನಗರಿಯಲಿ
ಕಾಲಸ್ವಎದುದು ಹತ್ತುತಿಂಗಳ
ಮೇಲೆ ಮತ್ತೊಂದತಿಶಯೋಕ್ತಿಯ
ನಾಲಿಸೈ ವಿಸ್ತರದಲರಿಪುವೆನೆಂದನಾ ಮುನಿಪ ೧
ಜವನ ಮಗ ಸಂನ್ಯಾಸಿ ವೇಷದಿ
ಪವನಸುತ ಬಾಣಸಿನ ಮನೆಯಲಿ
ದಿವಿಜರಾಯನ ತನಯನಿದ್ದ ಶಿಖಂಡಿ ವೇಷದಲಿ
ಜವಳಿಮಕ್ಕಳು ಗೋಹಯಂಗಳ
ನಿವಹಕಧಿಪರು ಕಮಲಮುಖಿ ಕಾ
ಲವನು ಕಳೆದಳು ರಾಯನರಸಿಯ ಕೆಳದಿಯರ ಕೂಡಿ ೨
ಆ ಸುದೇಷ್ಣಾದೇವಿಯರ ನಿಡು
ಕೇಶವನು ಹಿಕ್ಕುವಳು ಮುದದಲಿ
ವೋಸೆಮಲ್ಲಿಗೆಯರಳ ದೆಖ್ಖಾಳವನು ಮುಡಿಸುವಳು
ಆ ಸತಿಯ ಮನವೊಲಿದು ನಡೆವಳು
ಲೇಸುಲೇಸೆಂದೆನಿಸಿ ಬಾಳುವ
ಭಾಷೆಯನು ಸಲಿಸುತ್ತಲಿರ್ದಳು ಪತಿಗಳಾಜ್ಞೆಯಲಿ ೩
ಆ ವಿರಾಟನ ರಾಜಧಾನಿಯೊ
ಳಾ ವಿಲಾಸವ ಮುಸುಕಿದರು ಪರ
ಸೇವೆಯಲಿ ಪಾಂಡವರು ಕಳೆದರು ಹತ್ತು ಮಾಸವನು
ರಾವಣನು ಮುನ್ನೊಮ್ಮೆ ಸೀತಾ
ದೇವಿಗಳುಪಿದ ಕಥೆಯವೊಲು ಸಂ
ಭಾವಿಸೈ ಕೀಚಕ ವಿಳಾಸವನೆಂದನಾ ಮುನಿಪ ೪
ಒಂದು ದಿವಸ ವಿರಾಟನರಸಿಯ
ಮಂದಿರಕ್ಕೋಲೈಸಲೆಂದೈ
ತಂದನಾಕೆಯ ತಮ್ಮ ಕೀಚಕನತುಳ ಭುಜಬಲನು
ಹಿಂದೆ ಮುಂದಿಕ್ಕೆಲದ ಸತಿಯರ
ಸಂದಣಿಯ ಮಧ್ಯದಲಿ ಮೆರೆವರ
ವಿಂದವದನೆಯ ಕಂಡು ಕಾಣಿಕೆಗೊಟ್ಟು ಪೊಡಮಟ್ಟ ೫
ಅನುಜನನು ತೆಗೆದಪ್ಪಿ ಸಿಂಹಾ
ಸನದ ಕೆಲದಲಿ ಕುಳ್ಳಿರಿಸಿ ಮನ
ದಣಿಯಲಂಗನೆ ಮನ್ನಿಸಿದಳೈ ತತ್ಸಹೋದರನ
ತನುಪುಳಕ ತಲೆದೋರಲವನು
ಬ್ಬಿನಲಿ ಸತ್ಕೃತನಾಗಿ ಕಮಳಾ
ನನೆಯರನು ಕಂಡನು ಸುದೇಷ್ಣೆಯ ಮೇಳದಬಲೆಯರ ೬
ಅವರ ಮಧ್ಯದಲಮಲ ತಾರಾ
ನಿವಹದಲಿ ರೋಹಿಣಿಯವೋಲ್ ಸುರ
ಯುವತಿಯರಲೂರ್ವಶಿಯ ವೋಲ್ ನದಿಗಳೊಳು ಜಾಹ್ನವಿಯ
ಅವಯವದ ಪರಿಮಳದ ಪಸರಕೆ
ಕವಿದ ತುಂಬಿಯ ಸಾರಸಂಗೀ
ತವನು ಕೇಳುತ ಕಂಡನವ ಪಾಂಚಾಲನಂದನೆಯ ೭
ಮೊದಲೊಳವನವಳಂಗವಟ್ಟವ
ನೊದವಿ ನೋಡಿದೊಡಲ್ಲಿಯೇ ಗಾ
ಢದಲಿ ನೆಟ್ಟವು ಕೀಳಲರಿದಾಯ್ತಾಲಿಗಳನಲುಗಿ
ಮದನ ಮೊನೆದೋರಿದನು ಹೂಗಣೆ
ಹೃದಯವನು ತಾಗಿದುದು ಹರಹರ
ಹೆದರಿದನು ಹಮ್ಮೆಸಿದನು ಖಳನೊಂದು ನಿಮಿಷದಲಿ ೮
ನಿಂದು ನೋಡಿದ ದ್ರೌಪದಿಯ ಮೊಗ
ದಂದವನು ಕಂಡಾಗ ಕೀಚಕ
ನೊಂದನೆನೆ ಮೊಗತೆಗೆಯಲೆಚ್ಚನು ಕಾಮಕೈಗೂಡಿ
ಅಂದು ಬೆರಗಾದನು ಮಹಾಸತಿ
ಯಿಂದು ತಳೆದಳು ಮನವನಿವಳಾ
ರೆಂದು ಭಾವಿಸಿ ಚಾಚಿದನು ಕದಪಿನಲಿ ಕರತಳವ ೯
ತಿಳಿಯಿವಳು ಮೂಜಗವ ಮೋಹಿಪ
ತಿಲಕವೋ ಕಾಮಂಗೆ ಕಟ್ಟಿದ
ಕಳನ ಭಾಷೆಗೆ ನಿಂದ ಮಾಸಾಳೋ ಮಹಾದೇವ
ಕೊಲೆಗಡಿಕ ಕಂದರ್ಪಕನ ಕೂ
ರಲಗೊ ಮದನನ ಸೊಕ್ಕಿದಾನೆಯೊ
ನಳಿನಮುಖಿಯಿವಳಾರ ಸತಿಯೆಂದಳುಪಿ ನೋಡಿದನು ೧೦
ಜಗವ ಕೆಡಹಲು ಜಲಜ ವಿಶಿಖನು
ಬಿಗಿದ ಬಲೆಯಿವಳಲ್ಲಲೇ ಯೋ
ಗಿಗಳ ಯತಿಗಳನೆಸಲು ಕಾಮನು ಮಸೆದ ಕೂರಲಗೋ
ಮುಗುದನಾದನು ಕಾಮನಂಬುಗ
ಳುಗಿದವೆದೆಯಲಿ ನಟ್ಟದೃಷ್ಟಿಯ
ತೆಗೆಯಲಾರದೆ ಸೋತು ಕೀಚಕ ಪಾತಕವ ನೆನೆದ ೧೧
ಸೂರೆವೋಯಿತು ಚಿತ್ತ ಕಂಗಳು
ಮಾರುವೋದವು ಖಳನ ಧೈರ್ಯವು
ತೂರಿ ಪೋದುದು ಕರಣದಲಿ ಕಳವಳದ ಬೀಡಾಯ್ತು
ಮೀರಿಪೊಗುವಂಗಜನ ಶರದಲಿ
ದೋರುವೋಯಿತು ಹೃದಯ ಕಣ್ಣುರಿ
ಗಾರಿಯಿವಳಾರೆನುತ ಗಜಬಜಿಸಿದನು ನಿಮಿಷದಲಿ ೧೨
ರತಿಯ ಚೆಲುವಂತಿರಲಿ ವರಪಾ
ರ್ವತಿಯ ರೂಪಂತಿರಲಿ ಬೊಮ್ಮನ
ಸತಿಯ ಸೊಬಗಂತಿರಲಿ ಈ ಬಾಲಕಿಯ ರೂಪಿಂಗೆ
ಪ್ರತಿಯ ಕಾಣೆನು ಪಾಂಡವರ ದ್ರೌ
ಪತಿಗೆ ಸರಿಮಿಗಿಲೆನಿಸಿ ತೋರುವ
ಸತಿಯ ವಿಭ್ರಮ ನಟ್ಟುದೆನ್ನಯ ಮನದೊಳೆನುತಿರ್ದ ೧೩
ಅರಿವು ತಲೆಕೆಳಗಾಯ್ತು ಧೈರ್ಯದ
ನಿರಿಗೆ ನಗೆಗೆಡೆಯಾಯ್ತು ಲಜ್ಜೆಯ
ಹೊರಿಗೆ ಬರಿದೊರೆಯಾಯ್ತು ಕರಿಮೊಳೆಯೋಯ್ತು ಭಯಭೀಜ
ಮರವೆ ಗರಿಗಟ್ಟಿತು ಮನೋಭವ
ನಿರಿಗೆಲಸ ಬಲುಹಾಯ್ತು ಹೊಗಳುವ
ಡರಿಯೆನಾತನ ತನುವಿನಂತಸ್ತಾಪದೇಳ್ಗೆಯನು ೧೪
ಬೀಳುಕೊಂಡುದು ಲಜ್ಜೆ ಮಹಿಮೆಯ
ಕೀಲುಕಳಚಿತು ದ್ರುಪದ ತನುಜೆಯ
ನಾಲಿಯಲಿ ನುಂಗಿದನು ಮನದಲಿ ಸತಿಯ ಸೆರೆವಿಡಿದು
ಕೇಳು ಬಿನ್ನಹವಕ್ಕ ನಿಮ್ಮಡಿ
ಯೋಲೆಕಾತಿಯರೊಳಗೆ ಮೀಟನ
ಮೇಲುಗೈಯಿವಳಾವಳೆಂದಗ್ರಜೆಯ ಬೆಸಗೊಂಡ ೧೫
ಈಕೆ ಗಂಧರ್ವರ ರಮಣಿ ನ
ಮ್ಮಾಕೆಯಾಗಿರೆ ಮಾನ್ಯವೃತ್ತಿಯೊ
ಳೀಕೆಯನು ಸಲಹುಎವು ಬಲ್ಲಿದರಿವಳ ವಲ್ಲಭರು
ಸಾಕು ಬೀಡಾರಕ್ಕೆ ನೀ ಹೋ
ಗೀಕೆ ನಿನಗಹಳಲ್ಲ ನಿಂದಿರು
ಕಾಕನಾಡದಿರೆನುತ ಬೀಳ್ಕೊಟ್ಟಳು ನಿಜಾನುಜನ ೧೬
ತಾರಿತಂತಃಕರಣ ಕಾಮನ
ಕೂರುಗಣೆ ಕಾಲಿಕ್ಕಿದವು ಮನ
ದೇರು ಮುಚ್ಚಿತು ದುಗುಡ ಬಲಿದುದು ಮುಸುಕು ಮೋರೆಯಲಿ
ಮೀರಿ ನಿಜ ಮಂದಿರಕೆ ಢಗೆ ಮೈ
ದೋರೆ ಬಂದನು ಮರು ದಿವಸ ತಲೆ
ಮಾರಿ ಕಂಡನು ದ್ರೌಪದಿಯನರಮನೆಯ ಬಾಗಿಲಲಿ ೧೭
ಖಳನ ಮನದಿಂಗಿತವನಾಗಳೆ
ತಿಳಿದು ಕಾಮಿನಿ ಬೆದರಿದಳು ಕಳ
ವಳಿಗ ಸೋತನು ಕೆಟ್ಟೆನೆಂದಳು ತನ್ನ ಮನದೊಳಗೆ
ತೊಲಗಿ ಹಿಂದಡಿಯಿಡಲು ಕೀಚಕ
ನಳುಕದೈತಂದಬುಜವದನೆಯ
ಬಳಿಗೆ ಬಂದನು ನುಡಿಸಲಾಗದೆ ತರಳೆ ನೀನೆಂದ ೧೮
ಎಲೆ ಮರುಳೆ ಬೇಡಳುಪದಿರು ಕೂ
ರಲಗ ಕೊರಳಿಗೆ ಬಯಸದಿರು ಕಳ
ವಳಿಸದಿರು ಕೈಯೊಡನೆ ನಿನ್ನರಮನೆಗೆ ಮರಳುವುದು
ಸುಲಭೆ ನಾನಿನಗಲ್ಲ ನಿನ್ನನು
ಕೆಲರು ನಗುವರು ಪರದ ಸದ್ಗತಿ
ತೊಲಗುವುದು ಬೇಡಕಟಯೆಂದಳು ಪಾಂಡವರ ರಾಣಿ ೧೯
ಎಲೆಗೆ ಪಾತಕಿ ನಿನ್ನ ಕಣ್ಣೆಂ
ಬಲಗಿನಲಿ ತನ್ನೆದೆಯ ನೋಯಿಸಿ
ತೊಲಗಬಹುದೇ ಕರುಣವಿಲ್ಲವೆ ನಿನ್ನ ಮನದೊಳಗೆ
ಒಲಿದು ಬಂದೆನು ಕಾಮನೂಳಿಗ
ಬಲುಹು ಎನ್ನಯ ಭಯವ ತಗ್ಗಿಸಿ
ತಲೆಯ ಕಾಯಲು ಬೇಕೆನುತ ಕೀಚಕನು ಕೈಮುಗಿದ ೨೦
ನಿಲ್ಲೆಲೆಗೆ ಸೈರಂಧ್ರಿ ಕಾಮನ
ಬಲ್ಲೆಹದ ಬಲುಗಾಯ ತಾಗಿತು
ಬಲ್ಲೆ ನೀನೌಷಧಿಯ ರಕ್ಷಿಸಿಕೊಂಬುದೆನ್ನೊಡಲ
ಮೆಲ್ಲನಡಿಯಿಡು ಮಾತ ಮನ್ನಿಸಿ
ಚೆಲ್ಲೆಂಗಂಗಳನೆನ್ನ ಮುಖದಲಿ
ಚೆಲ್ಲಿ ಸಪ್ರಾಣಿಸಲು ಬೇಹುದು ವಿಗತ ಜೀವನವ ೨೧
ಪರರ ಸತಿಗಳುಪಿದರೆ ಪಾತಕ
ದೊರಕುವುದು ಜಯಲಕ್ಷ್ಮಿ ಸರಿವಳು
ಧರೆಯೊಳಗ್ಗದ ಕೀರ್ತಿ ಮಾಸುಗು ಗತಿಗೆ ಕೇಡಹುದು
ಕೊರಳು ಹಲವಾದಸುರನಂತಕ
ಪುರವನೈದಿದ ಕಥೆಯ ನೀ ಕೇ
ಳ್ದರಿಯಲಾ ಕಡುಮೂರ್ಖ ನೀನೆಂದಳು ಸರೋಜಮುಖಿ ೨೨
ಮೇಲೆ ಸದ್ಗತಿ ಬೆಂದು ಹೋಗಲಿ
ಕಾಲನವರೈತರಲಿ ಬಂಧುಗ
ಳೇಳಿಸಲಿ ತನ್ನವರು ತೊಲಗಲಿ ರಾಣಿಯರು ಬಿಡಲಿ
ಬಾಲೆ ನಿನಗಾನೊಲಿದೆ ಕಾಮನ
ಕೋಲು ತನ್ನನು ಮರಳಲೀಯವು
ಲೋಲಲೋಚನೆ ಬಿರುಬ ನುಡಿಯದೆ ತನ್ನನುಳುಹೆಂದ ೨೩
ಎಳನಗೆಯ ಬೆಳದಿಂಗಳನು ನೀ
ತಳೆದು ತಾಪವ ಕೆಡಿಸು ಮಧುರದ
ಮೆಲುನುಡಿಯ ಸುಧೆಯಿಂದ ತೃಷ್ಣೆಯನಕಟ ಪರಿಹರಿಸು
ಅಳಿಮನದ ಬಡತನವ ನಿನ್ನಯ
ಕಳಶ ಕುಚಲಕ್ಷ್ಮಿಯಲಿ ಕಳೆ ಮನ
ದೊಲವನಿತ್ತಲು ತಿದ್ದಬೇಹುದು ಕಾಂತೆ ಕೇಳೆಂದ ೨೪
ಕೇಳಿ ಕಿವಿಮುಚ್ಚಿದಳು ತನ್ನಯ
ಮೇಳದೈವರ ನೆನೆದು ಹರಹರ
ಶೂಲಪಾಣಿ ಮುಕುಂದಯೆನುತವೆ ರವಿಯ ನೀಕ್ಷಿಸುತ
ಕಾಳು ಮೂಳನಲಾ ಖಳಾಗ್ರಣಿ
ಮೇಲುಗಾಣನಲಾ ಮದಾಂಧನ
ಸೋಲಿಸುವರಾರುಂಟೆನುತ ತಲೆ ಬಾಗಿದಳು ತರಳೆ ೨೫
ಎಲೆ ದುರಾತ್ಮ ಮಹಾಪರಾಧವ
ಬಳಸುವರೆ ಬಯಲಿಂಗೆ ನಿನ್ನಯ
ಕುಲದ ಬೇರನು ಕೊಯ್ವರೇ ಫಲವಾವುದಿದರಿಂದ
ಹಳಿವು ಹೊದ್ದದೆ ಹೆತ್ತವರು ಮ
ಕ್ಕಳುಗಳೆಂಬೀ ಬದುಕು ಮಾಣದೆ
ಯೆಳಸಿಕೊಂಬಂತಾದುದೆಂದಳು ಪಾಂಡವರ ರಾಣಿ ೨೬
ಕಾತರಿಸದಿರು ಮಂದಿವಾಳದ
ಮಾತುಗಳು ಬೇಡಕಟ ಕೆಡದಿರು
ಸೋತರೇನದು ಮನುಜಧರ್ಮವು ಚಿತ್ತ ಚಂಚಲವು
ಈತತುಕ್ಷಣವಾರು ಕೇಳಿದೊ
ಡಾತಗಳು ಸೈರಿಸರು ದೇವ
ವ್ರಾತದಲಿ ಬಲ್ಲಿದರು ತನ್ನವರೆಂದಳಿಂದುಮುಖಿ ೨೭
ಸಾವು ತಪ್ಪದು ತನಗೆ ಕಾಮನ
ಡಾವರವು ಘನ ನಿನ್ನ ನೆರೆದೇ
ಸಾವೆನಲ್ಲದೆ ಕಾಮನಂಬಿಂಗೊಡಲನೊಪ್ಪಿಸೆನು
ಭಾವೆ ನೂಕದಿರೆನ್ನ ವರ ರಾ
ಜೀವಮುಖಿ ಕೃಪೆ ಮಾಡು ತನ್ನಯ
ಜೀವನವನುಳುಹೆನುತ ಕಮಲಾನನಗೆ ಕೈಮುಗಿದ ೨೮
ಮರುಳುತನ ಬೇಡೆಲವೊ ಗಂಧ
ರ್ವರಿಗೆ ಹೆಂಡತಿ ತಾನು ನಿನ್ನಯ
ದುರುಳತನವನು ಸೈರಿಸರು ತನ್ನವರು ಬಲ್ಲಿದರು
ಸೊರಹದಿರು ಅಪಕೀರ್ತಿನಾರಿಯ
ನೆರೆಯದಿರು ನೀ ನಿನ್ನ ನಿಳಯಕೆ
ಮರಳುವುದು ಲೇಸೆಂದು ತೃಣವನು ಹಿಡಿದು ಸಾರಿದಳು ೨೯
ದ್ರೌಪದಿಗೆ ಖಳ ನುಡಿದನೆನ್ನಾ
ಟೋಪವನು ನೀನರಿಯೆ ಬಡವರ
ಕೋಪವೌಡಿಗೆ ಮೃತ್ಯು ನಿನ್ನವರೇನನೇಗುವರು
ಆಪೆನವರಂತಿರಲಿ ನೀನೆನ
ಗೋಪಳಾದರೆ ಸಾಕು ಮಲೆತಡೆಯಾ
ಪಿನಾಕಿಗೆ ತೆರಳುವೆನೆ ಬಳಿಕಲ್ಲಿ ನೋಡೆಂದ ೩೦
ಹುಳುಕನಲ್ಲಾ ತುಂಬಿ ಕೋಗಿಲೆ
ಗಳಹನಲ್ಲಾ ಶಶಿ ವಸಂತರ
ಬಲುಹು ಮಾನ್ಯರ ನಿರಿಯವೇ ತಂಗಾಳಿ ಧಾರ್ಮಿಕನೇ
ಖಳನಲಾ ಮಾಕಂದ ಲೋಕದ
ಕೊಲೆಗಡಿಕನಲ್ಲಾ ಮನೋಭವ
ನಿಳಿಕೆಗೊಂಬರೆ ಪಾಪಿಯೊಲಿಯದೆ ಕೊಲುವರೇ ಎಂದ ೩೧
ಒಲಿದು ನಿನ್ನನು ನಾವು ಕೊಲ್ಲೆವು
ಕೊಲುವ ಸುಭಟರು ಬೇರೆ ಬಯಲಿಗೆ
ಹಲವ ಗಳಹಿದರೇನು ಫಲವಿಲ್ಲಕಟ ಸಾರಿದೆನು
ತಿಳುಪಿದೊಡೆ ಯೆನ್ನವರು ನಿನ್ನಯ
ತಲೆಯನರಿದೂ ತುಷ್ಟರಾಗರು
ಕಲಕುವರು ನಿನ್ನನ್ವಯಾಬ್ಧಿಯನೆಂದಳಿಂದುಮುಖಿ ೩೨
ಕುಲದೊಳೊಬ್ಬನು ಜನಿಸಿ ವಂಶವ
ನಳಿದನಕಟಕಟೆಂಬ ದುರ್ಯಶ
ವುಳಿವುದಲ್ಲದೆ ಲೇಸಗಾಣೆನು ಬರಿದೆ ಗಳಹದಿರು
ಕೊಲೆಗಡಿಕೆಯೋ ಪಾಪಿ ಹೆಂಗಸು
ಹಲಬರನು ಕೊಲಿಸಿದಳು ಸುಡಲೆಂ
ದಳಲುವರು ನಿನ್ನಖಿಳರಾಣಿಯರೆಂದಳಿಂದುಮುಖಿ ೩೩
ಹರಿವಿರಿಂಚಿಗಳಾದಡೆಯು ಸಂ
ಗರದೊಳೆನಗಿದಿರಲ್ಲ ಮರುಳೇ
ತರುಣಿ ನಿನ್ನೊಡನೇನು ತೋರಾ ನಿನ್ನವಲ್ಲಭರ
ಪರಸತಿಯ ಸೆರೆಗೈಯೆ ಮುತ್ತಿತು
ನೆರೆದು ಕೋಡಗವಿಂಡು ಸುಭಟನು
ಸರಿದನಂತಕನಗರಿಗರಿಯಾಯೆಂದಳಿಂದುಮುಖಿ ೩೪
ನೀರೆ ನೂಕದಿರೆನ್ನ ಮನ ಮು
ಮ್ಮಾರುವೋದುದು ನೀನು ಚಿತ್ತವ
ಸೂರೆಗೊಂಡೀ ಮದನನಂಬಿಂಗೊಡಲ ಹೂಣಿಸುವೆ
ಜಾರದಿರು ಯೆನ್ನೆದೆಗೆ ತಾಪವ
ಬೀರದಿರು ಕಾರುಣ್ಯವನು ಕೈ
ದೋರೆನಗೆ ಕಮಲಾಕ್ಷಿ ಮರಣವ ಮಾಣಿಸೆನಗೆಂದ ೩೫
ಮರುಳೆ ಮನದ ವಿಕಾರ ಮಾರಿಯ
ಸರಸವಾಡುವರುಂಟೆ ಮೃತ್ಯುವ
ನೆರೆವರೇ ದಳ್ಳುರಿಯ ಪ್ರತಿಮೆಯನಪ್ಪುವರೆ ಬಯಸಿ
ಗರಲಕಂಗೈಸುವರೆ ಪಾಪಿಯೆ
ಮರಳು ನಿನ್ನರಮನೆಗೆ ಯೆನ್ನಯ
ಗರುವ ಗಂಡರು ಕಡಿದು ಹರಹುವರೆಂದಳಿಂದುಮುಖಿ ೩೬
ತೋಳ ತೆಕ್ಕೆಯ ತೊಡಿಸಿ ಕಾಮನ
ಕೋಲ ತಪ್ಪಿಸು ಖಳನ ಕಗ್ಗೊಲೆ
ಯೂಳಿಗವ ಕೇಳ್ದುಸುರದಿಹರೆ ಸಮರ್ಥರಾದವರು
ಸೋಲಿಸಿದ ಗೆಲುವಿಂದ ಬಲುಮಾ
ತಾಳಿಯಿವನೆನ್ನದಿರು ಹರಣದ
ಮೇಲೆ ಸರಸವೆ ಕಾಯಬೇಹುದು ಕಾಂತೆ ಕೇಳೆಂದ ೩೭
ಉಳಿದ ತನ್ನರಸಿಯರ ನಿನ್ನಯ
ಬಳಿಯ ತೊತ್ತಿರ ಮಾಡುವೆನು ಕೇ
ಳೆಲೆಗೆ ತನ್ನೊಡಲಿಂಗೆಯೊಡೆತನ ನಿನ್ನದಾಗಿರಲಿ
ಲಲನೆ ನಿನ್ನೊಳು ನಟ್ಟಲೋಚನ
ತೊಲಗಲಾರದು ತನ್ನ ಕಾಯವ
ಬಳಲಿಸದೆ ಕೃಪೆ ಮಾಡಬೇಹುದೆನುತ್ತ ಕೈಮುಗಿದ ೩೮
ನ್ಯಾಯವನು ಮಿಗೆ ಗೆಲಿವುದೀಯ
ನ್ಯಾಯವಧಿಕವು ಧರ್ಮ ಪರರೇ
ಸ್ಥಾಯಿಗಳು ತಿಮಿರಕ್ಕೆ ಭಾಸ್ಕರಗಾವುದಂತರವು
ಕಾಯರೆನ್ನವರವರ ಕೈಗುಣ
ದಾಯತವ ಬಲ್ಲವರೆ ಬಲ್ಲರು
ನಾಯಿ ಸಿಂಹಕ್ಕಿದಿರೆ ಫಡ ಹೋಗೆಂದಳಬುಜಾಕ್ಷಿ ೩೯
ಹೂಣೆ ಹೊಕ್ಕುದು ವಿರಹದಾಶೆಯ
ಕಾಣೆನಾಕೆಯ ಮಾತಿನಲಿ ಮುಂ
ಗಾಣಿಕೆಯಲೇ ಸೂರೆಹೋದುದು ಮನದ ಸರ್ವಸ್ವ
ತ್ರಾಣ ಸಡಿಲಿತು ಬುದ್ಧಿ ಕದಡಿ ಕೃ
ಪಾಣಪಾಣಿ ವಿರಾಟರಾಯನ
ರಾಣಿಯರಮನೆಗೈದಿದನು ಕಂಡನು ನಿಜಾಗ್ರಜೆಯ ೪೦
ಹಣೆಯನಂಘ್ರಿಗೆ ಚಾಚಲೆತ್ತಿದ
ಳಣಕಿಗನ ತೆಗೆದಪ್ಪಿ ಮದವಾ
ರಣನೆ ಕುಳ್ಳಿರೆನುತ್ತ ನೋಡಿದಳಾ ಸಹೋದರನ
ಹೆಣ ಮುಸುಡು ಬಿದ್ದಿದೆ ಲತಾಂಗಿಯ
ಕೆಣಕಿದನೊ ಕಡುಪಾಪಿ ವಂಶವ
ಹಣಿದವಾಡದೆ ಮಾಣನೇಗುವೆನೆನುತ ಮರುಗಿದಳು ೪೧
ಅಳುಕಿತಗ್ಗದ ಮಹಿಮೆ ಮುಸುಡಿನ
ಬೆಳಕು ಕಂದಿತು ಬಹಳ ಚಿಂತಾ
ಜಲಧಿಯೊಳಗದ್ದಂತೆ ಸೊಂಪಡಗಿತು ನಿಜಾಕಾರ
ಕುಲಶಿರೋಮಣಿ ಹೇಳು ಚಿತ್ತದ
ನೆಲೆಯನೆನೆ ನಸುನಾಚಿ ಮದನನ
ಹಿಳುಕು ಸುಮತಿಯ ಸೀಳೆ ಬಳಿಕಿಂತೆಂದನವ ನಗುತ ೪೨
ಬೇರೆ ಬಿನ್ನಹವೇನು ಸತಿಯರ
ನೂರುಮಡಿ ಚೆಲುವಿನಲಿ ಚಿತ್ತವ
ಸೂರೆಗೊಂಡಿಹಳವಳು ನಿನ್ನೋಲಗದ ಸತಿಯರಲಿ
ಮಾರಿದಳು ಮದನಂಗೆ ಜೀವಿಸ
ಲಾರೆನಾಕೆಯನೊಳಗುಮಾಡಿಸಿ
ತೋರಿದೊಡೆ ತನ್ನೊಡಲೊಳಸುವಿಂಗಿಹುದು ನಿರ್ವಾಹ ೪೩
ಕೀರ್ತಿಲತೆ ಕುಡಿಯೊಣಗಿತೈ ಮದ
ನಾರ್ತನಾದೈ ಕುಲಕೆ ಕಾಲನ
ಮೂರ್ತಿ ನೀನವತರಿಸಿದೈ ಸಂಹರಿಸಿದೈ ಕುಲವ
ಸ್ಫೂರ್ತಿಗೆಡೆ ಮನುಜರಿಗೆ ರಾವಣ
ನಾರ್ತಿಯಪ್ಪುದು ಅರಿಯಲಾ ಕಡು
ಧೂರ್ತತನಕಂಜುವೆನೆನುತ ನಡುಗಿದಳು ನಳಿನಾಕ್ಷಿ ೪೪
ಬೇಟವೇ ಪರವಧುವಿನಲಿ ಕೈ
ಮಾಟವೇ ಪರವಿತ್ತದಲಿ ತೆಗೆ
ದೋಟವೇ ಕದನದಲಿ ಗುಣವೇ ರಾಜಪುತ್ರರಿಗೆ
ಆಟವಿಕರೊಡನಾಡಿ ಕಲಿತು ವಿ
ರಾಟನನು ಕೊಲಲೆಣಿಸಿದೈ ನಿ
ನ್ನಾಟಕಂಜುವೆನೆನುತ ಮುಖದಿರುಹಿದಳು ತರಳಾಕ್ಷಿ ೪೫
ಅವಳ ಗಂಡರು ಸುರರು ಸುರರಿಗೆ
ನವಗದಾವಂತರವು ಮುಳಿದೊಡೆ
ದಿವಿಜದಳಕಿದಿರಾರು ನಮ್ಮನದಾರು ಕಾವವರು
ಅವಳ ತೊಡಕೇ ಬೇಡ ಸತಿಯರ
ನಿವಹದಲಿ ನೀನಾರ ಬಯಸಿದ
ಡವಳ ನಾ ಮುಂದಿಟ್ಟು ಮದುವೆಯನೊಲಿದು ಮಾಡುವೆನು ೪೬
ಅಕ್ಕ ಮರಳೌ ಚಿತ್ತವವಳಲಿ
ಸಿಕ್ಕಿ ಬೇರ್ವರಿಯಿತ್ತು ಬರಿದೇ
ಮಿಕ್ಕಡಿಂಬಕೇ ಮದುವೆಯುಂಟೇ ಮನವ ಬೇರಿರಿಸಿ
ಮಕ್ಕಳಾಟಕೆಯಾದಡಾಗಲಿ
ತಕ್ಕರಲ್ಲೆಂದೆನಲಿ ಸಲಹುವ
ಡಕ್ಕ ಸೈರಂಧ್ರಿಯನು ಸೇರಿಸಬೇಕು ತನಗೆಂದ ೪೭
ಸೊಗಸದಿತರರ ಮಾತು ಕಣ್ಣುಗ
ಳೊಗಡಿಸವು ಮಿಕ್ಕವರ ರೂಹನು
ಹಗೆಗಳಾಗಿಹವುಳಿದವರ ನಾಮಗಳು ನಾಲಿಗೆಗೆ
ಸೆಗಳಿಕೆಯ ಸಸಿಯಾದೆನೆನ್ನಯ
ಬಗೆಯ ಸಲಿಸೌ ಹರಿದ ಕರುಳಿನ
ಮೃಗದ ಮರಿಯನು ಸಲಹಬೇಕಂದೆರಗಿದನು ಪದಕೆ ೪೮
ಆಲಿ ನೀರೇರಿದವು ತಮ್ಮನ
ಮೇಲೆ ತಳಿತುದು ಮೋಹ ಕಾಲನ
ಪಾಳಯಕೆ ಕೈಗೊಟ್ಟಳಂಗನೆ ನೆಗಹಿದಳು ಖಳನ
ಏಳು ಭವನಕೆ ಹೋಗು ತರುಣಿಯ
ನಾಳೆ ನಾ ಕಳುಹುವೆನು ಪರಸತಿ
ಮೇಳ ಲೇಸಲ್ಲೆನುತ ಬೀಳ್ಕೊಟ್ಟಳು ನಿಜಾನುಜನ ೪೯
ಮನದೊಳಗೆ ಗುಡಿಗಟ್ಟಿದನು ಮಾ
ನಿನಿಯ ಕರುಣಾಪಾಂಗ ರಸಭಾ
ಜನವು ಪುಣ್ಯವಲಾಯೆನುತ ಬೀಳ್ಕೊಂಡನಗ್ರಜೆಯ
ಮನದೊಳೊದವಿದ ಮರುಳುತನದು
ಬ್ಬಿನಲಿ ಹೊಕ್ಕನು ಮನೆಯನಿತ್ತಲು
ದಿನಕರಂಗಾಯಿತ್ತು ಬೀಡಸ್ತಾಚಲಾದ್ರಿಯಲಿ ೫೦
ಸಲೆ ದಿಗಂಗನೆಯಿಟ್ಟ ಚಂದನ
ತಿಲಕವೋ ಮನುಮಥನ ರಾಣಿಯ
ಚೆಲುವ ಕೈಗನ್ನಡಿಯೊ ಮದನನ ಬಿರುದಿನೊಡ್ಡಣವೊ
ತಳಿತ ವಿರಹಿಯ ಸುಡುವ ಕೆಂಡದ
ಹೊಳಹೊ ಬೆಸಗೊಳಲೇನು ರಜನೀ
ವಳಯದಲಿ ಶಶಿಯುದಯವಾದನು ಜಗವನುಜ್ವಳಿಸಿ ೫೧
ಬೆಚ್ಚಿದವು ಚಕ್ರಾಂಕಯುಗ ತಾ
ವ್ಕಚ್ಚಿದುವು ಮರಿದುಂಬಿ ಕುಮುದವ
ಮುಚ್ಚಿದವು ಮುಸುಡುಗಳನಂಬುಜರಾಜಿ ತಮತಮಗೆ
ಹೆಚ್ಚಿದವು ಸಾಗರದ ತೆರೆಗಳು
ಬೆಚ್ಚಿದರು ಜಾರೆಯರು ಚಂದ್ರಮ
ಕಿಚ್ಚನೊಟ್ಟಿದನಕಟ ಸಕಲ ವಿಯೋಗಿ ಜನಮನಕೆ ೫೨
ಖಳನ ವಿರಹದ ತಾಪದುರಿ ವೆ
ಗ್ಗಳಿಸೆ ತನ್ನರಮನೆಗೆ ಬಂದನು
ಕಳವಳಿಗ ಹಾಯೆನುತ ಕೆಡೆದನು ತಳಿರ ಹಾಸಿನಲಿ
ನಳಿನ ವೈರಿಯ ಸುಳಿವು ತನ್ನಯ
ಕೊಲೆಗೆ ಬಂದುದು ಪಾಪಿ ಕಮಲಜ
ಚಲವಿಲೋಚನೆಗೇಕೆ ಮಾಡಿದನಿನಿತು ಚೆಲುವಿಕೆಯ ೫೩
ಉರಿದುದೊಡಲೊಳು ವೀಳೆಯದ ಕ
ರ್ಪುರದ ಹಳುಕುಗಳಮಳಗಂಧದ
ಸರಸ ಕರ್ದಮ ಕರಿಕುವರಿದುದು ಪೂಸಿದಂಗದಲಿ
ಹೊರಳೆ ನೀರಿನ ಪೊಟ್ಟಣವು ದ
ಳ್ಳುರಿಯೊಲಾದುದು ಬಲಿದ ಚಂದ್ರಿಕೆ
ಬೆರಸಿ ಕರಗಿದ ತವರವಾಯಿತು ಕೀಚಕನ ಮನಕೆ ೫೪
ಹಾಸಿದೆಳೆದಳಿರೊಣಗಿದುದು ಹೊಗೆ
ಸೂಸಿದುದು ಸುಯಿಲಿನಲಿ ಮೆಲ್ಲನೆ
ಬೀಸುತಿರೆ ಸುಳಿವಾಳೆಯೆಲೆ ಬಾಡಿದುದು ಝಳಹೊಯ್ದು
ಆ ಶಶಿಯ ಕೋಗಿಲೆಯ ತುಂಬಿಯ
ನಾ ಸರೋಜವ ಮಲ್ಲಿಗೆಯ ಕೈ
ವೀಸಿದನು ಕುಸುಮಾಸ್ತ್ರನಾ ಕೀಚಕನ ಕಗ್ಗೊಲೆಗೆ ೫೫
ಪರಿಮಳದೆ ಸುಳಿವಾಲವಟ್ಟದೊ
ಳಿರದೆ ಪೂಸಿದ ಗಂಧ ಕರ್ಪುರ
ವರರೆ ಸೀದವು ಕೀಚಕನ ಕಾಮಾಗ್ನಿತಾಪದಲಿ
ವರ ಪತಿವ್ರತೆಗಳುಪಿದವನಾ
ಹರಣದಾಶೆಯ ಮರೆದು ಪಾತಕ
ಹೊರಳುತಿರ್ದನು ಚಂದ್ರಕಾಂತದ ಮಣಿಯ ಮಂಚದಲಿ ೫೬
ಅರೆಗಳಿಗೆ ಯುಗವಾಗಿ ನೂಕಿದ
ನಿರುಳನುದಯಾಚಲದ ಶಿರದಲಿ
ತರಣಿ ತಲೆದೋರಿದನು ತೊಡೆದನು ಭುವನದಂಧತೆಯ
ಪರಿಮಳದ ಪಾವುಡದಿನಳಿಗಳ
ಕರೆಸಿದವು ತಾವರೆಗಳೆನೆ ಕಾ
ತರ ಲತಾಂಗಿಯ ಸುಯ್ಲು ತಾಗಿತು ಕುಮುದಿನೀ ಪತಿಗೆ ೫೭
ಸಂಕ್ಷಿಪ್ತ ಭಾವ
ದ್ರೌಪದಿಯ ಮೇಲೆ ಕೀಚಕನ ಕಣ್ಣು.
ಪಾಂಡವರ ಅಜ್ಞಾತವಾಸದ ದಿನಗಳು ಸರಾಗವಾಗಿ ಕಳೆಯತೊಡಗಿದವು. ಹತ್ತು ತಿಂಗಳು ಕಳೆದವು.
ಒಂದು ದಿನ ಸುದೇಷ್ಣೆಯ ತಮ್ಮ ಕೀಚಕನು ಅಕ್ಕನನ್ನು ಕಾಣಲು ಬಂದನು. ಅವಳ ಬಳಿಯಲ್ಲಿದ್ದಹೆಂಗಸರಲ್ಲಿ ದ್ರೌಪದಿಯು ಅವನ ಕಣ್ಣಿಗೆ ಬಿದ್ದಳು. ಅವಳ ಅಪ್ರತಿಮ ಚೆಲುವಿನಿಂದ ಕೀಚಕನುಮದನನ ಬಾಣಕ್ಕೆ ತುತ್ತಾಗಿ ಮೋಹಿತನಾದನು. ಇಷ್ಟು ಚೆಲುವಿನ ಇವಳು ಯಾರೆನ್ನಲು ರಾಣಿಯುಅವಳು ಗಂಧರ್ವರ ಪತ್ನಿ. ಅವಳ ಮೇಲೆ ಮನಸ್ಸು ಕೊಡಬೇಡ ಎಂದಳು.
ಆದರೆ ರಾವಣನು ಸೀತೆಯನ್ನು ಮೋಹಿಸಿ ತನಗೆ ಕೆಡುಕನ್ನು ತಂದುಕೊಂಡಂತೆ ಕೀಚಕನುದ್ರೌಪದಿಯ ಮೇಲಿನ ಆಸೆಯನ್ನು ಬಿಡದೆ ಕಂಗೆಟ್ಟನು. ಮರುದಿನ ಅವಳನ್ನು ಕಂಡು ಮಾತನಾಡಿಸಿತನ್ನ ಮನದಾಸೆಯನ್ನು ತೀರಿಸಬೇಕೆಂದು ಪರಿಪರಿಯಾಗಿ ಬೇಡಿಕೊಂಡ. ದ್ರೌಪದಿಯು ಸಾಕಷ್ಟುಬುದ್ಧಿ ಹೇಳಿದಳು. ಪರಸತಿಗೆ ಆಶಿಸಿದರೆ ಪಾತಕಿಯಾಗುವೆ, ತನ್ನ ಗಂಡಂದಿರು ನಿನ್ನನ್ನು ಉಳಿಸರು, ನಿನ್ನ ರಾಜ್ಯ ಲಕ್ಷ್ಮಿ ತೊಲಗುವಳು, ಅಪಕೀರ್ತಿ ಬರುವುದು, ರಾವಣನಂತೆ ಮರಣ ಬರುವುದುಎಂದೆಲ್ಲ ಹೇಳಿದಳು.
ಆದರೆ ಕೀಚಕನು ಕೇಳಲಿಲ್ಲ. ಬಡವರ ಕೋಪ ದವಡೆಗೆ ಮೂಲವೆಂಬಂತೆ ದ್ರೌಪದಿಯಮಾತುಗಳಿಂದ ಪ್ರಯೋಜನ ಆಗಲಿಲ್ಲ. ಬದಲಿಗೆ ಅವನ ಆಸೆ ಇನ್ನಷ್ಟು ಹೆಚ್ಚಾಯಿತು. ತನ್ನ ಇತರರಾಣಿಯರನ್ನು ನಿನಗೆ ದಾಸಿಯರನ್ನಾಗಿಸುವೆನೆಂದು ಮತ್ತೆ ಮತ್ತೆ ಬೇಡಿಕೊಂಡ. ದ್ರೌಪದಿಯುಅವನನ್ನು ತೆಗಳಿ ಒಳಹೋದಳು.
ಮತ್ತೆ ತನ್ನ ಅಕ್ಕನನ್ನು ಕಂಡು ಕೀಚಕನು ಅವಳನ್ನು ತನಗೆ ಒಲಿಯುವಂತೆ ಮಾಡಲು ಬೇಡಿಕೊಂಡ. ಮೊದಲಿಗೆ ಬುದ್ಧಿ ಹೇಳಿದಳಾದರೂ, ಇದರಿಂದ ಉಂಟಾಗಬಹುದಾದ ಪರಿಣಾಮಗಳನ್ನು ಊಹಿಸಿಭಯಗೊಂಡಳಾದರೂ ತಮ್ಮನ ಮೇಲಿನ ಮೋಹದಿಂದ ಮೈ ಮರೆತಳು. ಮರುದಿನಕಳಿಸುವೆನೆಂದು ಸಂತವಿಟ್ಟು ಬೀಳ್ಕೊಂಡಳು.
ಆ ಬೆಳದಿಂಗಳ ರಾತ್ರಿಯನ್ನು ಬಹಳ ಕಷ್ಟಪಟ್ಟು ವಿರಹದಿಂದ ಕಳೆದ ಕೀಚಕನು ಮರುದಿನಬೆಳಗಾಗುವುದನ್ನೇ ಕಾಯುತ್ತಿದ್ದನು. ಸೂರ್ಯೋದಯವಾಯಿತು.
ಕಾಮೆಂಟ್ಗಳು