ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ100



 ಸಂಚಿಕೆ: 100
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ದ್ರೋಣ ಪರ್ವ - ಒಂಭತ್ತನೆಯ ಸಂಧಿ


ಸೂ.     
ಜಯಸಮರ ಸೌರಂಭನಾಹವ
ಭಯ ಬಹಿರ್ಮುಖನಸ್ತ್ರವಿದ್ಯಾ
ನಿಯತಮತಿ ಮೋಹರಿಸಿ ಸಮರಕೆ ದ್ರೋಣನನುವಾದ  
 
ಕೇಳು ಜನಮೇಜಯ ಧರಿತ್ರೀ
ಪಾಲ ಫಲುಗುಣ ಹೊಕ್ಕನಾಯುಧ
ಶಾಲೆಯನು ತೆಗೆಸಿದನು ಧನು ಮೊದಲಾದ ಕೈದುಗಳ
ಸಾಲರಿದು ನಿಲಿಸಿದನು ನಿಶಿತ ಶ
ರಾಳಿ ಚಾಪ ಕೃಪಾಣ ಪರಶು ತ್ರಿ
ಶೂಲ ಮುದ್ಗರ ಚಕ್ರ ಸೆಲ್ಲೆಹ ಶಕುತಿ ತೋಮರವ  ೧  
 
ಸವಗ ಮೊಚ್ಚೆಯ ಜೋಡು ಸೀಸಕ
ಕವಚ ಬಾಹುರಿಕೆಗಳ ನಿಲಿಸಿದ
ನವಿರಳಾಕ್ಷತೆ ಗಂಧ ಪುಷ್ಪ ಸುಧೂಪ ದೀಪದಲಿ
ವಿವಿಧ ಸತ್ಕಾರದಲಿ ದುರ್ಗಾ
ಸ್ತವವ ಜಪಿಸಿದ ವರ ಘೃತೋದನ
ನವರುಧಿರ ಮಾಂಸೋಪಹಾರಂಗಳಲಿ ಪೂಜಿಸಿದ  ೨  
 
ಒಡನೆ ಗಜರುವ ವಾದ್ಯದಲಿ ಕೆಂ
ಪಡರಿದೋಗರಸಹಿತ ಭೂತಕೆ
ಬಡಿಸಿದರು ಮಾಂತ್ರಿಕರು ಬಲಿಗೆದರಿದರು ದೆಸೆದೆಸೆಗೆ
ತೊಡವು ವಸನಾದಿಗಳಲೊಪ್ಪಂ
ಬಡುವ ಬಲಿಯನು ಹರಿಯೊಳರ್ಪಿಸಿ
ನಡುವಿರುಳು ಕಲಿಪಾರ್ಥನರ್ಚಿಸಿದನು ನಿಜಾಯುಧವ  ೩  
 
ಇರುಳಿನದ್ಭುತರವವನಾಲಿಸಿ
ಮುರಮಥನನೀ ಫಲುಗುಣನ ಸಂ
ಗರ ಜಯೋದ್ಧತಮಂತ್ರವೆಂದನು ದಾರುಕನ ಕರೆದು
ಹರ ಮಹಾಸೇನಾದಿಗಳು ಗೆಲ
ಲರಿದು ನಾಳಿನ ಬವರವಿನ್ನೀ
ನರನ ಜಯವೆಂತೆನುತ ಚಿಂತಿಸುತಲ್ಲಿಗೈತಂದ  ೪  
 
ರಚನೆ ಚೆಲುವಿದು ನಾಳಿನಾಹವ
ಖಚರ ಕಿಂಪುರುಷರಿಗೆ ಅಸದಳ
ವಚಲಬಲಗಾಂಡಿವಿಗೆ ಹರಿಯದು ಸುಪ್ತಿಯೊಳಗವನ
ಉಚಿತದಲಿ ಕೊಂಡೊಯ್ದು ರುದ್ರನ
ವಚನದನುವನು ತಿಳಿವೆನೆಂದಾ
ಶಚಿಯ ಗಂಡನ ಮಗನನೀಶನ ಪದವ ಕಾಣಿಸಿದ  ೫  
 
ಶಿವನ ಕರುಣಾಲಾಭ ಪುಣ್ಯ
ಪ್ರವರ ಪಾರ್ಥನ ಮುನ್ನಿನಂದದ
ಲವನಿಗಿಳುಹಿದ ನಿಖಿಳದಿವ್ಯಾಯುಧದ ವೇದಿಕೆಗೆ
ಸವೆದುದಿರುಳಿಂದೂಪಲಂಗಳ
ನಿವಹ ಬಲಿದುದು ಚಕ್ರವಾಕದ
ತವಕ ತಗ್ಗಿತು ತರಣಿಯಡರಿದನುದಯಪರ್ವತವ     ೬  
 
ವಿಮಳ ದರ್ಭಾಂಕುರದ ಶಯನದೊ
ಳಮರಪತಿಸುತ ಪವಡಿಸಿದನನು
ಪಮ ವಿಳಾಸನು ಕನಸ ಕಂಡೆನೆನುತ್ತ ಕಂದೆರೆದ
ಸಮರವಿಜಯಕೆ ಶಿವನ ಕೃಪೆ ಸಂ
ಕ್ರಮಿಸಿತೆನಗೆನುತಿರಲು ಮುಂದಣ
ಕಮಲನಾಭನ ಕಂಡು ಬಿನ್ನಹ ಮಾಡಿದನು ನಗುತ             ೭  
 
ದೇವ ನಿಮ್ಮಡಿ ಸಹಿತ ಕಂಡೆನು
ದೇವದೇವನ ಚರಣವನು ಸಂ
ಭಾವಿಸಿದ ನಮ್ಮಿಬ್ಬರನು ದಕ್ಷಾಧ್ವರಧ್ವಂಸಿ
ನಾವು ಬಂದುದನರಿದು ವರ ರಾ
ಜೀವಸರಸಿಗೆ ಕಳುಹಿದನು ಗಾಂ
ಡೀವ ನಿಜಚಾಪವನು ಕಂಡೆನು ಕೊಳನ ಮಧ್ಯದಲಿ             ೮  
 
ಬಳಿಕ ತಿರುವಿಟ್ಟಾಗಲಸ್ತ್ರವ
ಸೆಳೆದು ಬಿಲುವಿದ್ಯಾಚಮತ್ಕೃತಿ
ಯಳವ ತೋರಿದಡಾಗಳೀಶನ ಹೊರೆಗೆ ನಾನೈದಿ
ನಿಲೆ ತದೀಯಾಸ್ತ್ರಪ್ರಯೋಗದ
ಬಲುಹನೀಕ್ಷಿಸೆ ತೆಗೆವ ಬೆಡಗನು              
ಕಲಿಸೆ ಪಾಶುಪತಾಸ್ತ್ರವೆನಗಾಯ್ತಲ್ಲಿ ವಶವರ್ತಿ          ೯  
 
ಕನಸನೀ ಹದನಾಗಿ ಕಂಡೆನು
ದನುಜಹರ ಬೆಸಸಿದರ ಫಲವನು
ನನಗೆನಲು ನಸುನಗುತ ನುಡಿದನು ದಾನವಧ್ವಂಸಿ
ನಿನಗೆ ಶೂಲಿಯ ಕರುಣವಾಯ್ತಿಂ
ದಿನಲಿ ಪಾಶುಪತಾಸ್ತ್ರ ನಿನ್ನದು
ದಿನದೊಳರಿ ಸೈಂಧವವಧವ್ಯಾಪಾರವಹುದೆಂದ        ೧೦  
 
ಉಲಿವ ಮಂಗಳಪಾಠಕರ ಕಳ
ಕಳದೊಳುಪ್ಪವಡಿಸಿದನವನಿಪ
ತಿಲಕ ಮಾಡಿದನಮಲ ಸಂಧ್ಯಾವಂದನಾದಿಗಳ
ನಳಿನನಾಭನ ಪಾದಪದ್ಮವ
ನೊಲವಿನಿಂದಭಿನಮಿಸಿ ಸುಭಟಾ
ವಳಿಗೆ ನೇಮವ ಕೊಟ್ಟನಂತಕಸೂನು ಸಂಗರಕೆ       ೧೧  
 
ನಡೆದುದುರುಸನ್ನಾಹದಲಿ ಸೂ
ಳಡಸಿ ಮೊರೆವ ಗಭೀರ ಭೇರಿಯ
ಕಡುರವದ ರಿಪುಭಟರ ಬೈಗುಳ ಗೌರುಗಹಳೆಗಳ
ಎಡಬಲಕೆ ತನಿಹೊಳೆವ ತೇಜಿಯ
ಕಡುಮದದ ಕರಿಘಟೆಯ ತೇರಿನ
ನಿಡುವರಿಯ ಕಾಲಾಳ ಕಳಕಳವಾಯ್ತು ರಣದೊಳಗೆ  ೧೨  
 
ಎದ್ದುದೀ ಕಟಕದಲಿ ಬಲ ಮಿಂ
ಡೆದ್ದು ಸುಭಟರು ಸಮರಭೂಮಿಯ
ಹೊದ್ದಿದರು ಝಳಪಿಸುವಡಾಯ್ದದ ಹೊಗರ ಹೊಳಹುಗಳ
ಅದ್ದುದತಳಕೆ ಅವನಿಯೆನೆ ಹೊದ
ರೆದ್ದು ನಡೆದುದು ದಂತಿಘಟೆ ಬರು
ತಿದ್ದುದಗಣಿತ ರಥ ಪದಾತಿಗಳಾಹವಾಂಗಣಕೆ  ೧೩  
 
ವಿನುತ ಸಂಧ್ಯಾವಂದನಾದಿಯ
ನನುಕರಿಸಿ ಹರಿಪದ ಪಯೋಜವ
ನೆನೆದು ವಿರಚಿತ ದೇವವಿಪ್ರಾನಳ ಸಮಾರ್ಚನನು
ಕನಕ ಕವಚವ ತೊಟ್ಟು ಗಡ್ಡದ
ಘನತೆಯನು ಗಂಟಿಕ್ಕಿ ವರಕಾಂ
ಚನಮಯದ ಯಜ್ಞೋಪವೀತವನಿಳುಹಿದನು ದ್ರೋಣ  ೧೪  
 
ನಿರಿಯುಡಿಗೆಯಲಿ ಮಲ್ಲಗಂಟಿನ
ಸೆರಗ ಮೋಹಿಸಿ ಬೆರಳ ದರ್ಭೆಯ
ಹಱರಿದು ಬಿಸುಟನು ಜೋಡು ಸೀಸಕ ಬಾಹುರಕ್ಷೆಗಳ
ಮುರುಹಿ ಬಿಗಿದನು ನಿಖಿಳಭೂಸುರ
ರುರುವ ಮಂತ್ರಾಕ್ಷತೆಯ ಕೊಳುತ
ಳ್ಳಿರಿವ ಜಯರವದೊಡನೆ ರಥವೇರಿದನು ಕಲಿದ್ರೋಣ  ೧೫  
 
ಸೂಳವಿಸಿದವು ಸನ್ನೆಯಲಿ ನಿ
ಸ್ಸಾಳ ಕೋಟಿಗಳುರವಣಿಸಿ ಹೆ
ಗ್ಗಾಳೆಗಳು ಸಾರಿದವು ಸುಭಟರ ವೀರ ವಿತರಣವ
ಸಾಲು ಝಲ್ಲರಿಗಳ ಪತಾಕಾ
ಜಾಲ ಸಬಳದ ಹೊದರ ಗೋವಳಿ
ಗೋಲ ತೂಗಾಟದಲಿ ಸಮರಕೆ ದ್ರೋಣ ನಡೆತಂದ  ೧೬  
 
ನೆಗಹಿ ಬೀಸುವ ಚೌರಿಗಳ ಸ
ನ್ನೆಗೆ ಚತುರ್ಬಲವೆಲ್ಲ ದ್ರೋಣನ
ದೃಗುಪಥಕೆ ತೋರಿದರು ತಂತಮ್ಮಾಳು ಕುದುರೆಗಳ
ತೆಗೆದು ಯೋಜನವಾರರಲಿ ಕಾ
ಳೆಗಕೆ ಶಕಟವ್ಯೂಹವನು ಹೂ
ಣಿಗರ ಬಲಿದನು ಕೌರವೇಂದ್ರಾನುಜರ ಗಡಣದಲಿ  ೧೭  
 
ಇದಿರೆ ಶಕಟವ್ಯೂಹವದರ
ಗ್ರದಲಿ ದುಶ್ಯಾಸನನು ಕೆಲಬಲ
ದೊದವಿನಲಿ ಬಾಹ್ಲಿಕನು ಸೌಬಲ ಸಿಂಧು ಮಾಗಧರು
ಇದರ ಹಿಂದಣ ಮೈಯೊಳೈಗಾ
ವುದದ ನೀಳದೊಳೆರಡುವರೆ ಗಾ
ವುದದ ವಿಸ್ತಾರದಲಿ ಮಕರವ್ಯೂಹವನು ಬಲಿದ        ೧೮  
 
ಹಿಂದೆ ಯೋಜನವೈದರಳವಿಯೊ
ಳಂದು ಚಕ್ರವ್ಯೂಹವನು ನಲ
ವಿಂದ ಬಲಿದನು ನಿಲಿಸಿದನು ಕಾಂಭೋಜಭೂಪತಿಯ
ವಿಂದನನುವಿಂದನನು ದಕ್ಷಿಣ
ವೃಂದ ಸಮಸಪ್ತಕರ ಬಲವನು
ಸಂದಣಿಸಿದರು ಹತ್ತು ಸಾವಿರ ನೃಪರ ಗಡಣದಲಿ              ೧೯  
 
ತುರಗವರುವತ್ತಾರು ಕೋಟಿಯ
ನುರುಮದೇಭವನೆಂಟು ಲಕ್ಷವ
ವರ ರಥವನರುವತ್ತುಸಾವಿರವನು ಸಗಾಢದಲಿ
ಧುರದ ಕಾಲಾಳಗಣಿತವ ಮೋ
ಹರಿಸಿ ಹಂಸವ್ಯೂಹವನು ಸಡ
ಗರಿಸಿದನು ನಿಯತಾಯು ಮೊದಲಾದವರ ಕಾಹಿನಲಿ  ೨೦  
 
ಕೆಲಬಲದ ಸಬಳಿಗರು ಸಬಳದ
ವಳಯದಲಿ ಹರಿಗೆಗಳು ಹರಿಗೆಗ
ಳೊಳಗೆ ಬಿಲ್ಲಾಳುಗಳ ಮರೆಯಲಿ ವಾಜಿ ಗಜ ರಥವ
ನಿಲಿಸಿ ಗರ್ಭವ್ಯೂಹವನು ಮಂ
ಡಳಿಸಿದನು ಸಂವೀರರನು ಸಿಂ
ಹಳರ ನಿಲಿಸಿದ ಹತ್ತು ಸಾವಿರ ಮಂಡಳೇಶ್ವರರ        ೨೧  
 
ಅಪರಭಾಗದಲಳವಿಯಲಿ ಭೂ
ಮಿಪರ ಭೂರಿಶ್ರವನ ಶಲ್ಯನ
ಕೃಪನ ವೃಷಸೇನನ ಸುಲೋಚನ ದೀರ್ಘಬಾಹುಕರ
ನೃಪತಿಗಳನೆಂಬತ್ತು ಸಾವಿರ
ಚಪಳಗಜ ಹದಿನೆಂಟು ಕೋಟಿಯ
ನಪರಿಮಿತತೇಜಿಯಲಿ ಪದ್ಮವ್ಯೂಹವನು ಬಲಿದ        ೨೨  
 
ಆ ಮಹಾಮೋಹರದ ಬಳಿಯಲಿ
ಸೋಮದತ್ತನ ದಂಡಧರನನು
ತಾಮರಸಬಂಧುವಿನ ಮಗನನು ಕ್ಷೇಮಧೂರ್ತಕನ
ಆ ಮಹಾಬಾಹುಕನನಶ್ವ
ತ್ಥಾಮನನು ಕೃತವರ್ಮಕರೆನಿಪ ಸ
ನಾಮರನು ನಿಲಿಸಿದನು ಸೂಚೀವ್ಯೂಹ ವಳಯದಲಿ  ೨೩  
 
ಪದುಮ ಸೂಚೀವ್ಯೂಹ ಮಧ್ಯದೊ
ಳದಟರನು ನಿಲಿಸಿದನು ಸಮರಾ
ಗ್ರದಲಿ ಅವನಳಲಿಗರನಾಪ್ತರನವನ ಬಾಂಧವರ
ಕದನಗಲಿಸೈಂಧವನನಾ ಮ
ಧ್ಯದಲಿ ನಿಲಿಸಿದನಮಮ ಸಮರಕೆ
ಮದನ ಮಥನನು ಮೊಗಸಲಸದಳವೆನಿಸಿ ರಂಜಿಸಿತು  ೨೪  
 
ತಿವಿವ ಸಿಡಿಲೊಬ್ಬುಳಿಯೊ ಪ್ರಳಯದ
ಜವನ ನೆರವಿಯೊ ಕಾಳಕೂಟಾ
ರ್ಣವದ ಸೀಮಾಲಂಘನವೊ ಮೃತ್ಯುವಿನ ಪಾಳಯವೊ
ಅವನಿ ಕುಸಿದುದು ನೆರೆದ ಸೇನೆಯ
ಹವಣಿಗೀಶ್ವರ ಬಲ್ಲನೆನೆ ಸೈಂ
ಧವನ ಕಾಹಿನ ಮೋಹರಂಗಳು ಕಿಡಿಯನುಗುಳಿದವು  ೨೫  
 
ಜಡಿವ ಮದದಾನೆಗಳ ಗಗನವ
ನಡರ್ವ ಕಡುಗುದುರೆಗಳ ಸೂಠಿಯೊ
ಳೆಡಬಲಕೆ ಬಿರುವರಿವ ತೇರಿನ ಸೂತರೋಜೆಗಳ
ಖಡುಗ ಕೊಂತವ ನಭಕೆ ಹಾಯಿಕಿ
ಹಿಡಿವ ಸುಭಟರ ಭುಜದ ಹೊಯ್ಲಿನ
ಕಡುಮನದ ರಣದವಕಿಗರ ಸೌರಂಭ ರಂಜಿಸಿತು     ೨೬  
 
ಮೊಳಗಿದವು ನಿಸ್ಸಾಳ ಕೋಳಾ
ಹಳಿಸಿದವು ಕಹಳೆಗಳು ಪರ್ವತ
ಹಿಳಿಯೆ ಹೆಚ್ಚಿದ ಪಣಹ ಪಟಹ ಮೃದಂಗ ಡಿಂಡಿಮದ
ಉಲಿಯ ತೇಜಿಯ ಹೇಷಿತದ ವೆ
ಗ್ಗಳೆಯ ಕರಿಗಳ ಬೃಂಹಿತದ ಗೊಂ
ದಳದ ಕಳಗರ್ಚಾಯ್ತು ಕೌರವ ಸೈನ್ಯಶರಧಿಯಲಿ       ೨೭  
 
ಮುಂದೆ ಶಕಟವ್ಯೂಹದಲಿ ನಡೆ
ತಂದು ನಿಂದನು ದ್ರೋಣ ನಿಜಬಲ
ದಂದವನು ನೆರೆ ನೋಡಿ ನೋಡಿ ಕಿರೀಟವನು ತೂಗಿ
ಇಂದು ಗೆಲಿದರೆ ಧರ್ಮಸುತನವ
ರಿಂದುಕುಲದಗ್ಗಳರು ಬರಹೇ
ಳೆಂದು ಭಟ್ಟರನಟ್ಟಿದನು ಪಾಂಡವರ ಪಾಳೆಯಕೆ       ೨೮  
 
ಕೇಳು ಧೃತರಾಷ್ಟ್ರಾವನಿಪ ಸಿರಿ
ಲೋಲಸಹಿತ ಯುಧಿಷ್ಠಿರಾದಿಗ
ಳಾಳಮೇಳಾಪದಲಿ ಹೊಕ್ಕರು ಕಾಳೆಗದ ಕಳನ
ಸಾಲರಿದು ನಿಜಸೇನೆಯನು ಪಾಂ
ಚಾಲಸುತ ಮೋಹರಿಸಿದನು ಕೆಂ
ಧೂಳಿ ಮಾಣಿಸಿತನಿಮಿಷತ್ವವನಮರ ಸಂತತಿಯ       ೨೯  
 
ಅರಸನೆಡವಂಕದಲಿ ಮತ್ಸ್ಯರು
ಬಿರುದ ಕೈಕಯ ಚೈದ್ಯ ಕೇರಳ
ಮರು ಯವನ ಸಂವೀರ ಕೌಸಲ ಪಾಂಡ್ಯ ಮಾಗಧರು
ಧರಣಿಪನ ಬಲವಂಕದಲಿ ಮೋ
ಹರಿಸಿ ಪಾಂಚಾಲಕರು ಚೂಣಿಯೊ
ಳುರವಣಿಸಿದರು ನಕುಲ ಸಾತ್ಯಕಿ ಭೀಮನಂದನರು              ೩೦  
 
ನರ ಮುರಾಂತಕರೊಂದು ಕಡೆಯಲಿ
ಮುರಿಯೆ ಕಂಡನು ನೃಪತಿ ಕೃಷ್ಣನ
ಹೊರೆಗೆ ಬಂದನು ನಮಿಸಿ ಬಿನ್ನಹ ಮಾಡಿದನು ಬಳಿಕ
ನರನಿವನು ಮಗನಿದಿರುಗಾಣದೆ
ಹಿರಿದನೇರಿಸಿ ನುಡಿದನಿದ ಪತಿ
ಕರಿಸಬೇಹುದು ನಿನ್ನ ಕರುಣವೆ ಹರಣವೆಮಗೆಂದ     ೩೧  
 
ಹಗೆಯ ತಲೆ ಹೋಗದಡೆ ವಹ್ನಿಯ
ಹೊಗುವ ನುಡಿ ತಮ್ಮನದು ಬಳಿಕಾ
ಸೆಗಳಿಕೆಯೊಳುಳಿದೆಮ್ಮ ನಾಲ್ವರ ದೇಹ ನಿಕ್ಷೇಪ
ಬಗೆಯಲೈವರ ಜೀವನದ ವಿಲ
ಗಿಗನು ನೀನೆಂದರಸ ಕರುಣಾ
ಳುಗಳ ದೇವನ ಬೇಡಿಕೊಂಡನು ಕೇಳು ಧೃತರಾಷ್ಟ್ರ  ೩೨  
 
ಪಡೆಗಡಲು ಕುಡಿನೀರು ನೆರೆ ನೀ
ರಡಸಿದುದು ಪಾರ್ಥನ ಶರಾವಳಿ
ವಡಬನಿದರೊಳು ಕೆಲಬಲದ ಹಂಗೇಕೆ ಕದನದಲಿ
ಕಡುಹಿನಲಿ ಸೈಂಧವನ ತಲೆಯನು
ಹೊಡೆದು ನಿನ್ನಯ ಕಾಲ ಬಳಿಯಲಿ
ಕೆಡಹುವನು ನಿಮಿಷದಲಿ ಫಲುಗುಣನೆಂದನಸುರಾರಿ  ೩೩  
 
ಕರೆದು ಸಾತ್ಯಕಿ ಭೀಮನನು ನೃಪ
ವರನ ಸುಯ್ದಾನದಲಿ ನಿಲಿಸಿದ
ನರಿಬಲಕೆ ನೂಕಿದನು ಕೈಕೆಯ ಚೈದ್ಯ ಸೃಂಜಯರ
ಮುರಮಥನನೊಡಗೂಡಿ ನಿಜ ಮೋ
ಹರವನಂದೈನೂರು ಬಿಲ್ಲಂ
ತರಕೆ ತೊಲಗಿ ಮಹಾಸ್ತ್ರಮಂತ್ರವ ಜಪಿಸಿದನು ಪಾರ್ಥ  ೩೪  
 
ಇಳಿದು ರಥವನು ಮುರಹರನ ಪದ
ತಳದ ಧೂಳಿಯ ಕೊಂಡನತಿ ನಿ
ರ್ಮಲ ಸಮಾಧಾನದಲಿ ಕೃಷ್ಣನ ಚರಣಕೆರಗಿದನು
ತಲೆಯ ಹಿಡಿದೆತ್ತಿದನು ಹರಿ ಕೋ
ಮಳ ಕರಾಂಬುಜದಿಂದ ಪಾರ್ಥನ
ನೊಲಿದು ಮೈದಡವಿದನು ಗೆಲು ಹೋಗೆಂದು ಹರಸಿದನು  ೩೫  
 
ಖುರಕೆ ರತುನವ ಸುರಿದು ತೇರಿನ
ತುರಗವನು ವಂದಿಸಿದನಾ ಪಳ
ಹರದ ಹನುಮಂಗೆರಗಿದನು ಸುರಕುಲಕೆ ಕೈಮುಗಿದು
ವರರಥವ ಬಲಗೊಂಡು ಕವಚವ
ಬರಿಗೆ ಬಿಗಿದನು ಕೈಗೆ ವಜ್ರದ
ತಿರುವೊಡೆಯನವಚಿದನು ರಥವೇರಿದನು ಕಲಿಪಾರ್ಥ  ೩೬  
 
ದೇವದತ್ತವ ಮೊಳಗಿದನು ಗಾಂ
ಡೀವಿ ಚಾಪವ ಮಿಡಿದ ನಿಷ್ಠುರ
ರಾವ ತಿವಿದುದು ಜರಿದವಡಕಿಲು ಜಗದ ಜೋಡಿಗಳ
ರಾವು ಫಲುಗುಣಯೆನುತ ಪಾರ್ಥನ
ಭಾವ ಕುಡಿ ಚಮ್ಮಟಿಗೆಯಲಿ ತುರ
ಗಾವಳಿಯನದುಹಿದನು ಸುಳಿಸಿದನಾಹವಕೆ ರಥವ     ೩೭  
 
ವರಯುಧಾಮನ್ಯೂತ್ತಮೌಂಜಸ
ರೆರಡು ಕಡೆಯಲಿ ಬರೆ ಮುರಾರಿಯ
ಪರಮ ಸಾಹಾಯ್ಯದಲಿ ಸಾಹಸಮಲ್ಲನುರವಣಿಸಿ
ಅರಿಬಲವ ಕೆಣಕಿದನು ಪಾರ್ಥನ
ಬರವನೀಕ್ಷಿಸಿ ತನ್ನ ಸೇನೆಗೆ
ಬೆರಳ ಚೌರಿಯ ಬೀಸಿ ದುಶ್ಯಾಸನನು ಮಾರಾಂತ             ೩೮  
 
ಇವನ ಕೊಂದರೆ ಮುನ್ನ ಮಾಡಿದ
ಪವನತನಯನ ಭಾಷೆಗೂಣೆಯ
ವಿವನ ಕೊಲ್ಲದೆ ಗೆಲುವ ಹದನೇನೆನುತ ನಿಮಿಷದಲಿ
ಕವಲುಗೋಲಿನಲರಿಭಟನ ಚಾ
ಪವನು ಸೂತನ ರಥವ ರಥವಾ             
ಹವನು ಖಂಡಿಸಿ ಬಿಸುಡಲವ ಜಾರಿದನು ದುಗುಡದಲಿ   [  ೩೯
                                
ಉರಿಯ ಬಂದಿಯ ಹಿಡಿದು ಹೆಚ್ಚುವ
ದೊರೆಯಲೇ ದಿಟ ಪಾದರಸವೆಲೆ
ಯರಸ ನಿನ್ನ ಕುಮಾರನೇಸರ ಪಾಡು ಪಾರ್ಥಂಗೆ
ತೆರಳಿದನು ನಿನ್ನಾತ ಸೂಠಿಯೊ
ಳುರವಣಿಸಿತಾ ತೇರು ನರನೈ
ತರಲು ಕಂಡನು ಶಸ್ತ್ರವಿದ್ಯಾ ಭಾಳಲೋಚನನ         ೪೦  
 
ಅರುಣಮಯ ರಥವಾಜಿಗಳ ವಿ
ಸ್ತರದ ಹೇಮದ ಕಳಶ ಸಿಂಧದ
ಸರಳು ತೀವಿದ ಬಂಡಿ ಬಳಿಯಲಿ ಲಕ್ಷಸಂಖ್ಯೆಗಳ
ತರಣಿಯನು ಸೋಲಿಸುವ ರತ್ನಾ
ಭರಣಕಾಂತಿಯ ರಾಯಕಟಕದ
ಗುರುವ ಕಂಡನು ಪಾರ್ಥ ಶಕಟವ್ಯೂಹದಗ್ರದಲಿ      ೪೧  
 
ಆರಿವನು ಕಲಿಪಾರ್ಥನೇ ತ್ರಿಪು
ರಾರಿ ಹಿಡಿವಂಬಾಯಿತೆಂಬ ದೊ
ಠಾರನೇ ದೈತ್ಯಾರಿ ಸಾರಥಿಯೆಂಬ ಗರ್ವಿತನೆ
ಹಾರುವರು ನಾವಸ್ತ್ರ ವಿದ್ಯಾ
ಪಾರಗರು ನಾವಲ್ಲ ರಣದೌ
ದಾರಿಯವ ತೋರೆಮಗೆನುತ್ತಡಹಾಯ್ದನಾ ದ್ರೋಣ  ೪೨  
 
ನಾಳೆ ಹಗೆವನ ಹೊಯ್ವೆನೆಂಬು
ಬ್ಬಾಳುತನವಿನ್ನೊಮ್ಮೆ ಭೂಪತಿ
ಯೋಲೆಗಾತಿಯರಿದಿರಲಾಡಿದ ಭಾಷೆಯಿನ್ನೊಮ್ಮೆ
ಆಳು ನೆರೆದಿದೆ ಚೂಣಿಯೊಳಗೊಂ
ದಾಳ ಹೊಯ್ದರೆ ಗೆಲವು ನಿನ್ನದು
ಕಾಳಕೂಟದ ಕಮಲ ತುಂಬಿಗೆ ಪಥ್ಯವಲ್ಲೆಂದ         ೪೩  
 
ಎಂಬಡಿದಿರುತ್ತರವಲೇ ಗರ
ಳಾಂಬುಜದ ಪರಿಮಳಕೆ ಗರುಡನು
ತುಂಬಿಯಾದರೆ ಸೇರುವುದಲೇ ಸಾಕದಂತಿರಲಿ
ಅಂಬುಗಳಿಗೆಡೆದೆರಹ ಕುಡಿ ನೀ
ವೆಂಬ ನುಡಿಗಂಜುವೆನು ಸೈಂಧವ
ನೆಂಬವನ ತೋರಿಸಿರೆಯೆಂದನು ನಗುತ ಕಲಿಪಾರ್ಥ  ೪೪  
 
ಎಲೆ ಮರುಳೆ ಮುಂದಿದ್ದ ನಮ್ಮಯ
ವಿಲಗವನು ಪರಿಹರಿಸಿ ಸೈಂಧವ
ನಳಿವುಪಾಯವ ಮಾಡು ಗರುವರು ನುಡಿದು ಕೆಡಿಸುವರೆ
ಅಳವಿಗೊಡು ಕೊಳ್ಳಂಬನೆನುತ
ಗ್ಗಳೆಯನೆಚ್ಚನು ನರನ ಮೆಯ್ಯಲಿ
ತಳಿತವಂಬುಗಳೇನನೆಂಬೆನು ವಿಗಡ ವಿಗ್ರಹವ  ೪೫  
 
ಅವರ ಪಾದಾಂಬುಜಕೆ ಫಲುಗುಣ
ಕವಿಸಿದನು ಸರಳುಗಳ ಲೆಕ್ಕಿಸ
ದವಗಡಿಸಿ ಗುರುವೆಚ್ಚು ಕಡಿದನು ಗಾಂಡಿವದ ತಿರುವ
ಸವತಳಿಸಿ ಮಾರ್ತಿರುವಿನಲಿ ಸಂ
ತವಿಸಿಕೊಂಡರ್ಜುನನು ದ್ರೋಣನ
ನವ ನಿಶಿತ ಬಾಣೌಘದಲಿ ಹೂಳಿದನು ನಿಮಿಷದಲಿ  ೪೬  
 
ಸರಳ ಸವರಿ ಮಹಾಸ್ತ್ರಚಯದಲಿ
ನರನನೆಚ್ಚನು ನಮ್ಮ ಲಾಗಿನ
ಧುರವು ತಾನಿದು ದಿಟ್ಟನಹೆಯೋ ಪಾರ್ಥ ಲೇಸೆನುತ
ಸರಳು ಸುರಿಯಲು ಕೃಷ್ಣ ಪಾರ್ಥನ
ಕೆರಳಿದನು ಫಡ ಮರುಳೆ ಗುಣದಲಿ
ಗುರುವ ಗೆಲುವುದ ಮಾಡು ಗೆಲುವಾ ಕಾದಿ ನೀನೆಂದ  ೪೭  
 
ಇಳುಹಿದನು ಗಾಂಡಿವವನುರು ಬ
ತ್ತಳಿಕೆಯನು ಕಳಚಿದನು ರಥದಿಂ
ದಿಳಿದು ಮೈಯಿಕ್ಕಿದನು ದ್ರೋಣನ ಚರಣಕಮಲದಲಿ
ತಿಳಿಯಲೆಮ್ಮೈವರಿಗೆ ಜೀವನ
ದುಳಿವು ನಿನ್ನದು ನಿನ್ನ ಮಕ್ಕಳ             
 ಸಲಹು ಮೇಣ್‌ಕೊಲ್ಲೆನುತ ನುಡಿದನು ವಿನಯದಲಿ ಪಾರ್ಥ   ೪೮
 
ಆ ಶಿಶುತ್ವದಲೆಮ್ಮ ಬೊಪ್ಪನು
ವಾಸವನ ಪುರಕೈದಿದನು ನಿ
ಮ್ಮಾಸೆಯಲಿ ಗಾಂಗೇಯರಿಂದವೆ ಹಿರಿದು ಬದುಕಿದೆವು
ಘಾಸಿಯಾದೆವು ಜೂಜಿನಲಿ ವನ
ವಾಸವನು ನೂಕಿದೆವು ಮೈಮರೆ           
ದೀಸನೇರಿಸಿ ನುಡಿದ ನುಡಿಗಳ ಕಾಯಬೇಕೆಂದ    [  ೪೯
 
ನೀವು ಹೂಣಿಗರಾಗಿ ರಿಪುವನು
ಕಾವಡಿತ್ತಲೆ ತೊಲಗುವೆನು ಕರು
ಣಾವಲೋಕನವೆನ್ನ ಮೇಲುಂಟಾದಡಿದಿರಹೆನು
ಆವುದನು ನಮಗೇನು ಗತಿ ತಲೆ
ಗಾವ ಮತವೇ ನಿಮ್ಮ ಚಿತ್ತದೊ
ಳಾವ ಹದನೆನೆ ಮುಗುಳುನಗೆಯಲಿ ದ್ರೋಣನಿಂತೆಂದ  ೫೦  
 
ಕಂದನಶ್ವತ್ಥಾಮ ಹುಸಿಯೆನ
ಗಿಂದು ಬೇಹ ಕುಮಾರ ನೀ ನಿ
ನ್ನಿಂದ ತನ್ನಯ ಕೀರ್ತಿ ಮೆರೆವುದು ಮೂರುಲೋಕದಲಿ
ತಂದೆ ನಿನಗಾ ಮುನಿಯಲಾಪೆನೆ
ಸಂದುದಾಡಿದ ಭಾಷೆ ನೀ ಹೋ
ಗೆಂದು ಗುಣದಲಿ ಬೀಳುಕೊಟ್ಟನು ದ್ರೋಣನರ್ಜುನನ  ೫೧  
 
ಬಲದೊಳಧಿಕರು ಭಟರೊಳತಿ ವೆ
ಗ್ಗಳರು ಹೆಸರುಳ್ಳವರು ವಿದ್ಯಾ
ಕುಲ ತಪೋಧರ್ಮಾದಿ ಗುಣಿಗಳು ಧೈರ‍್ಯಸಂಯುತರು
ಹಲಬರಿಹುದುಸುರಿಲ್ಲದೊಡಲಿನ
ಚೆಲುವಿನಂತಿರೆ ನಮ್ಮ ಬಲ ಹರಿ
ಯೊಲವಿನವರಭ್ಯುದಯವನು ಧೃತರಾಷ್ಟ್ರ ಕೇಳೆಂದ  ೫೨

ಸಂಕ್ಷಿಪ್ತ ಭಾವ
Lrphks Kolar

ದ್ರೋಣನ ಸಮರ ಸಿದ್ಧತೆ. ವ್ಯೂಹಗಳ ರಚನೆ.

ಅರ್ಜುನನು ಆಯುಧಶಾಲೆಗೆ ತೆರಳಿ ಎಲ್ಲ ಆಯುಧಗಳನ್ನೂ ಹೊರತೆಗೆಸಿ ಷೋಡಶೋಪಚಾರ ಪೂಜೆ ಸಲ್ಲಿಸಿದನು. ಈ ಸಮಯದಲ್ಲಿ ಅವನಿಗೆ ಒಂದು ರೀತಿಯ ಮಂಪರು ಆವರಿಸಿದಂತಾಯಿತು. ಕೃಷ್ಣನು ಅವನನ್ನು ಶಿವನ ಬಳಿಗೆ ಕರೆದುಕೊಂಡು ಹೋದನು. ಅಲ್ಲಿ ಜಯದ್ರಥನನ್ನು ಕೊಲ್ಲುವ ಪ್ರತಿಜ್ಞೆ ಬಗ್ಗೆ ತಿಳಿಸಿ ಕರುಣಿಸೆಂದು ಕೇಳಲು ಶಿವನು ಪ್ರಸನ್ನನಾಗಿ ವಿವಿಧ ಅಸ್ತ್ರಗಳ ಪ್ರಯೋಗಗಳನ್ನು ತಿಳಿಸಿ ಪಾಶುಪತಾಸ್ರ್ತವನ್ನು ಬಳಸಲು ಹೇಳಿದನು. ಮತ್ತೆ ಮೊದಲಿದ್ದ ಸ್ಥಳಕ್ಕೆ ತಂದು ಮಲಗಿಸಿದನು.

ಎಚ್ಚರವಾದ ಅರ್ಜುನನು ಕೃಷ್ಣನಿಗೆ ತಾನು ಕಂಡ ಕನಸನ್ನು ವಿವರಿಸಿದನು. ಅದರಲ್ಲಿ ಕೃಷ್ಣನೂ ಇದ್ದನೆಂದನು. ಕೃಷ್ಣನು ಒಳ್ಳೆಯದು. ಶಿವನ ಅನುಗ್ರಹವಾಯಿತು ಎಂದನು. ಬೆಳಗಾಯಿತು. ಕಾಳಗಕ್ಕೆ ಸಿದ್ಧತೆಗಳು ನಡೆದವು.

ಇತ್ತ ದ್ರೋಣನು ಅನುಷ್ಠಾನ, ಸಂಧ್ಯಾವಂದನ,, ದೇವತಾರ್ಚನ ಎಲ್ಲವನ್ನೂ ಮುಗಿಸಿ ತನ್ನ ವಿಪ್ರವೇಷವನ್ನು ಕಳಚಿ ಸಮರಕ್ಕೆ ಕವಚ ಧರಿಸಿ ರಥವೇರಿ ಸಮರಾಂಗಣಕ್ಕೆ ಬಂದನು. ಎಲ್ಲ ಸೈನ್ಯವೂ ಸೇರಿತು.

ಮೊದಲಿಗೆ ಶಕಟವ್ಯೂಹವನ್ನು ರಚಿಸಿದನು. ಅಲ್ಲಿ ದುಶ್ಶಾಸನ, ಸೌಬಲ, ಸಿಂಧು, ಮಾಗಧರನ್ನು ನಿಲಿಸಿದನು. ಅದರ ಹಿಂದೆ ಮಕರವ್ಯೂಹವಾಯಿತು. ನಂತರ ಚಕ್ರವ್ಯೂಹವನ್ನು ನಿಲಿಸಿದನು. ಅಲ್ಲಿ ಕಾಂಭೋಜ, ವಿಂದ, ಅನುವಿಂದರು ನಿಂತರು. ಮುಂದಿನದು ಗರ್ಭವ್ಯೂಹ. ನಂತರದಲ್ಲಿ ಪದ್ಮವ್ಯೂಹವಾಯಿತು. ಅಲ್ಲಿ ಭೂರಿಶ್ರವ, ಕೃಪ, ಶಲ್ಯ ಮುಂತಾದವರು ನಿಂತರು. ನಂತರ ಸೂಚೀವ್ಯೂಹದಲ್ಲಿ ಅಶ್ವತ್ಥಾಮ, ಕೃತವರ್ಮರು ನಿಂತರು. ಇದೆಲ್ಲದರ ನಡುವಿನಲ್ಲಿ ಸೈಂಧವನನ್ನು ಇರಿಸಿದರು. ಎಲ್ಲ ಆದ ನಂತರ ದ್ರೋಣನು ಶಕಟವ್ಯೂಹದ ಮುಂದೆ ಬಂದು ನಿಂತು ಎಲ್ಲವನ್ನೂ ಅವಲೋಕಿಸಿ ಪಾಂಡವರಿಗೆ ಸುದ್ದಿ ಕಳಿಸಿದನು.

ಧರ್ಮಜನು ಕೃಷ್ಣನ ಬಳಿ ಬಂದು ಇಂದಿನ ಯುದ್ಧದಲ್ಲಿ ಸೈಂಧವನನ್ನು ಗೆಲ್ಲದಿದ್ದರೆ ಅರ್ಜುನನು ಉಳಿಯುವುದಿಲ್ಲ. ಅವನಳಿದರೆ ನಾವು ಯಾರೂ ಇಲ್ಲ. ನೀನೇ ಕಾಪಾಡಬೇಕು ಎಂದನು. ಅವನನ್ನು ಸಮಾಧಾನಿಸಿ ಹೊರಟನು ಕೃಷ್ಣ. ಪಾರ್ಥನು ರಥ, ಕುದುರೆಗಳನ್ನು ಪೂಜಿಸಿ, ಹಿರಿಯರಿಗೆ ನಮಿಸಿ ರಥವೇರಿ ತನ್ನ ದೇವದತ್ತವನ್ನು ಮೊಳಗಿಸಿದನು. ದುಶ್ಶಾಸನನನ್ನು ಕಂಡು ಇವನು ಭೀಮನ ಬೇಟೆ. ಅವನೇ ನೋಡಿಕೊಳ್ಳಲಿ ಎಂದು ಮುಂದೆ ನಡೆದನು. 

ದ್ರೋಣರು ಎದುರಾದರು. ಬಾಣಗಳಿಂದಲೇ ಅವರಿಗೆ ಅಭಿವಂದಿಸಿ  ಆಶೀರ್ವದಿಸಿರೆಂದು ಬೇಡಿದನು. ಅವನ ವಿನಯಕ್ಕೆ ಮೆಚ್ಚಿದ ದ್ರೋಣನು ನಿನ್ನಿಂದ ನನಗೆ ಕೀರ್ತಿ ಎಂದು ಹೇಳಿ ನಿನಗೆ ನಾನು ಮುನಿಯುವೆನೇ ಎಂದು ಬೀಳ್ಕೊಟ್ಟನು. ಹರಿಯ ಬಲವನ್ನೇ ಬಲವಾಗಿ ಉಳ್ಳವರು ಅವರು ಎಂದು ಸಂಜಯನು ಧೃತರಾಷ್ಟ್ರನಿಗೆ ನುಡಿದನು.

(ನಮ್ಮ 'ಕನ್ನಡ  ಸಂಪದ'ದಲ್ಲಿ  ಮೂಡಿಬರುತ್ತಿರುವ  ಬರಹಗಳನ್ನು  ನಮ್ಮ  'ಸಂಸ್ಕೃತಿ  ಸಲ್ಲಾಪ' ತಾಣವಾದ  www.sallapa.com ನಲ್ಲಿ  ಆಸ್ವಾದಿಸಲು  ತಮ್ಮನ್ನು  ಆದರದಿಂದ  ಸ್ವಾಗತಿಸುತ್ತಿದ್ದೇವೆ.  ನಮಸ್ಕಾರ)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ