ಭಾರತಕಥಾಮಂಜರಿ128
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಕರ್ಣ ಪರ್ವ - ಹದಿನೆಂಟನೆಯ ಸಂಧಿ
ಸೂ.
ಗಂಡುಗಲಿ ಯಮತನುಜನಲಿ ಮಾ
ರ್ತಾಂಡತನಯನ ವಧೆಗೆ ನೇಮವ
ಕೊಂಡು ಕದನೋದ್ದಾಮದಲಿ ಹೊರವಂಟನಾ ಪಾರ್ಥ
ಕೇಳು ಧೃತರಾಷ್ಟ್ರಾವನಿಪ ಭೂ
ಪಾಲನನು ಸಾಮದಲಿ ಮುರರಿಪು
ಬೋಳವಿಸಿ ಭಾವಜ್ಞ ನಂದಿಸಿದನು ಮನೋವ್ಯಥೆಯ
ಮೇಲುಸುರ ಬಿಕ್ಕುಳಿನ ಬಿಗುಹಿನ
ತಾಳಿಗೆಯ ನೀರುಗಳ ಮುಕ್ಕುಳಿ
ನಾಲಿಗಳ ನರನಾಥ ತೆಗೆದಪ್ಪಿದನು ಫಲುಗುಣನ ೧
ಒರಲುತರಸನ ಮುರುಚಿಕೊಂಡಡಿ
ಗೆರಗೆ ಕೈಯೊಡನವನಿಪತಿ ಮುರಿ
ದೆರಗಿ ಪಾರ್ಥನ ಸೇರಿ ತಕ್ಕೈಸಿದನು ಗೋಳಿಡುತ
ಮರುಗಿದಳು ದ್ರೌಪದಿ ದೃಗಂಬುಗ
ಳೊರತೆಯಲಿ ಸಹದೇವ ನಕುಳರ
ಲರಿಯೆನುಪಮಿಸಲವರ ಬಹುಳಾಕ್ರಂದನ ಧ್ವನಿಯ ೨
ಮುರಹರನ ಮಂತ್ರದಲಿ ಶೋಕ
ಜ್ವರಕೆ ಬಿಡುಗಡೆಯಾಯ್ತು ಬಳಿಕಿನೊ
ಳರಸ ಸಿರಿಮೊಗದೊಳೆದು ವಸನಾಂಚಲದೊಳಾನನವ
ಒರಸಿ ಪಾರ್ಥನ ಸಂತವಿಸಿ ಮಂ
ದಿರಕೆ ಬಿಜಯಂಗೈದು ಮುದದಲಿ
ಕರೆಸಿ ಕಾಣಿಕೆಗೊಂಡು ಪರಿವಾರವನು ಮನ್ನಿಸಿದ ೩
ಇಟ್ಟಣಿಸುವರಿಸೈನ್ಯ ಜಲಧಿಗೆ
ಕಟ್ಟೆಯಾದನು ಭೀಮನೊಬ್ಬನ
ಬಿಟ್ಟು ನೋಡುವುದುಚಿತವೇ ಪರಿವಾರ ಪಂಥದಲಿ
ಕೊಟ್ಟ ನೇಮವ ಯಮಳರಿಗೆ ಜಗ
ಜಟ್ಟಿ ಸಾತ್ಯಕಿ ಕಮಲಮುಖಿಯೊಡ
ಹುಟ್ಟಿದನು ಮೊದಲಾಗಿ ನೃಪಜನವೇಳಿ ನೀವೆಂದ ೪
ದೇವ ಪರಿವಾರಕ್ಕೆ ನೇಮವ
ನೀವ ಸಮಯದಲಿಂದು ನಿಮ್ಮ ಕೃ
ಪಾವಲೋಕನವಾದುದೆನ್ನ ಪರಾಕ್ರಮಾನಳಕೆ
ಜೀವಸಖನಲ್ಲಾ ಸುಯೋಧನ
ನಾವ ಪಾಡು ವಿರೋಧಿಕುಲ ವಿ
ದ್ರಾವಣಕೆ ಕೊಡು ತನಗೆ ನೇಮವನೆಂದನಾ ಪಾರ್ಥ ೫
ಬರಸು ಭಾಷೆಯನಿಂದು ಕರ್ಣನ
ಶಿರವುಳಿದು ತಾವರೆಯ ನಗೆ ಪೈ
ಸರಿಸಿದರೆ ಮೈಬೆಸುಗೆ ಬಿಟ್ಟರೆ ಜಕ್ಕವಕ್ಕಿಗಳ
ಇರುಳ ಬೀಜವನಿಂದು ನಭದಲಿ
ಹರಹಿದರೆ ಕಲಿಭೀಮನಯ್ಯನ
ಹರಹು ನಿಂದರೆ ಬಳಿಕ ನಿಮ್ಮಯ ತಮ್ಮನಲ್ಲೆಂದ ೬
ಖಳನ ಹಿಂಸಾಪರನ ಡಂಬನ
ಚಳಮತಿಯ ನಾಸ್ತಿಕನ ನಿಂದಾ
ಕುಳನ ಪರಧನಬಾಧಕನ ದತ್ತಾಪಹಾರಕನ
ಜ್ವಲನದನ ಶಿಶುಘಾತಕನ ಪರಿ
ದಳಿತಧರ್ಮನ ಗತಿಗಳಲಿ ತಾ
ನಿಳಿವೆನಿಂದೇ ಕೊಲ್ಲದಿರ್ದರೆ ಸೂತನಂದನನ ೭
ನೀನಿನಿತ ನೆರೆ ನುಡಿವರೇ ತ
ನ್ನಾನೆ ಬಾರೈ ತಂದೆ ಬಾ ಎನು
ತಾ ನರೇಶ್ವರ ತೆಗೆದು ಬಿಗಿಯಪ್ಪಿದನು ಫಲುಗುಣನ
ದಾನವಾಮರರೊಳಗೆ ನಿನಗೆ ಸ
ಮಾನ ಭಟರಿಲ್ಲೆಂಬುದೀ ಸ್ನೇ
ಹಾನುಗುಣವೇ ಲೋಕವರಿಯದೆ ಪಾರ್ಥ ಹೇಳೆಂದ ೮
ತಾಯೆನುತ ಘನ ಸಾರದುರು ತವ
ಲಾಯಿಗಳ ನೂಕಿದನು ಮುದದಲಿ
ಬಾಯ ತಂಬುಲವಿತ್ತು ತಮ್ಮನ ಮತ್ತೆ ತಕ್ಕೈಸಿ
ರಾಯ ಕೇಳೈ ಬಳಿಕಖಿಳ ದಳ
ನಾಯಕರು ಕರೆಕರೆದು ಕದನ ಪ
ಸಾಯತರಿಗಿತ್ತನು ನೃಪತಿ ಕರ್ಪುರದ ವೀಳೆಯವ ೯
ನೇಮವಾಯಿತು ಮತ್ತೆ ನೃಪತಿ
ಸ್ತೋಮವರ್ಜುನನೊಡನೆ ಕದನೋ
ದ್ದಾಮರುಬ್ಬರಿಸಿದರು ಪತಿಕರಣೆಗೆ ಮಹೀಪತಿಯ
ಸೋಮಕರು ನಕುಲಾದಿಗಳು ಸುತ
ಸೋಮಕಾದಿ ಕುಮಾರರಖಿಳ ಸ
ನಾಮರೆದ್ದುದು ತೊಡರ ಝಣಝಣ ರವದ ಖಡೆಯದಲಿ ೧೦
ನುಡಿವ ವಾದ್ಯದ ಜಡಿವ ಕಹಳೆಯ
ಹೊಡೆವ ಭೇರಿಯ ರವದ ರಭಸದೊ
ಳೊಡೆದುದಾ ದಿಗುಭಿತ್ತಿಯೆನೆ ಚಲಿಸುವ ಚತುರ್ಬಲದ
ತುಡುಕು ಚಮರಿಯ ಝಾಡಿಗೆದರಿನ
ಗಡಣಿಸುವ ಝಲ್ಲರಿಯ ದಳ ಬರ
ಸಿಡಿಲ ಮೇಳವದಂತೆ ನೆರೆದುದು ನೃಪತಿಯಿದಿರಿನಲಿ ೧೧
ವೀರ ಸೇಸೆಯನಿಕ್ಕಿ ರಾಯನ
ನಾರಿ ಪರಸಿದಳಖಿಳ ವಿಪ್ರರ
ಚಾರು ಚಾತರ್ವೇದ ಮಂಗಳಸೂಕ್ತ ಘೋಷದಲಿ
ತೇರನೇರಿದನಸುರರಿಪು ಸಹಿ
ತಾರುಭಟೆಯಲಿ ನೂಕಿದವು ರತು
ನಾರತಿಯ ತಳಿಗೆಗಳು ವರಕಾಂತಾಕದಂಬದಲಿ ೧೨
ಕೂಡೆಗರಿಗಟ್ಟಿದವು ರಥದಲಿ
ಹೂಡಿದಶ್ವವ್ರಾತವಾನೆಗ
ಳೀಡಿರಿದು ಬರಿಕಯ್ಯನೆತ್ತಿದವೊಲೆದವಡಿಗಡಿಗೆ
ಜೋಡಿಸಿತು ಜಯ ಜಯ ಜಯಧ್ವನಿ
ಕೂಡೆ ಜಗದಗಲದಲಿ ಬಿರುದು ಪ
ವಾಡಗಳ ಮೊಗನೆಗಹಿ ಹೊಗಳಿತು ವಂದಿ ಸಂದೋಹ ೧೩
ನಿಳಯವನು ಹೊರವಂಟು ಬೀದಿಗ
ಳೊಳಗೆ ಬರೆಬರೆ ಮುಂದೆ ಮೋಹಿದ
ತಳಿಗೆದಂಬುಲ ವೀರಸೇಸೆಯ ಮಂಗಳಾರತಿಯ
ಫಲಸಮೂಹದ ಕಾಣಿಕೆಯ ಕೋ
ಮಲೆಯರುಪ್ಪಾರತಿಯ ಮನೆಮನೆ
ಗಳಲಿ ಮನ್ನಿಸಿಕೊಳುತ ಪಾಳೆಯದಿಂದ ಹೊರವಂಟ ೧೪
ಮೇಲೆ ಮೊಳಗುವ ದೇವದುಂದುಭಿ
ಜಾಲದೊಸಗೆಯ ಪಕ್ಷಿಮೃಗದನು
ಕೂಲ ಶಕುನದ ಸೌಮನಸ್ಯದ ಸಾಧುವಾದದಲಿ
ಲಾಲನೆಯ ಮೈವಳಿಯ ಲಳಿಯ ವಿ
ಶಾಲ ಮಂದಾನಿಲನಖಿಳ ಭೂ
ತಾಳಿ ಸಂತೋಷದಲಿ ಪತಿಕರಿಸಿತು ಧನಂಜಯನ ೧೫
ನಡೆದು ಬಂದುದು ರಾಯದಳ ಮುಂ
ಗುಡಿಯ ವಾದ್ಯಧ್ವನಿಯ ಥಟ್ಟಣೆ
ತುಡುಕಿತರಿಚತುರಂಗ ಚಪಳರ ಕರ್ಣ ಕೋಟರವ
ನಡುಗಿದವು ಕೈದುಗಳು ಜೋಧರ
ಕೊಡಹಿದವು ಗಜರಾಜಿ ವಾಜಿಯ
ಗಡಣವೀಡಾಡಿದವು ರಾವ್ತರನಿವರ ಥಟ್ಟಿನಲಿ ೧೬
ಅರಸ ಕೇಳೈ ಸಮರಭೂಮಿಗೆ
ಪರಿದರರಸಾಳುಗಳು ರಾಯನ
ಸಿರಿಮುಡಿಗೆ ಸುಕ್ಷೇಮ ಮುಚ್ಚಿದವೇರುಮದ್ದಿನಲಿ
ಮರಳಿ ನೇಮವ ಕೊಂಡು ಫಲುಗುಣ
ಬರುತಲೈದನೆ ಜೀಯ ನಿಮ್ಮಯ
ಚರಣ ಸರಸಿಜದಾಣೆಯೆಂದರು ಭೀಮಸೇನಂಗೆ ೧೭
ಜೋಡು ಬಿರಿದುದು ಹರುಷಜಲ ಕಡೆ
ಗೋಡಿವರಿದುದು ರೋಮಪುಳಕದ
ಬೀಡು ಬಿಟ್ಟುದು ಮೈಯನುಬ್ಬಿದನೊಲೆದನಡಿಗಡಿಗೆ
ನೀಡುವರೆ ತಳುವೆನುತ ತೆಗೆದೀ
ಡಾಡಿದನು ದೂತರಿಗೆ ರತುನದ
ಜೋಡಣೆಯ ಭುಜಕಂಠಕರ್ಣಾಂಘ್ರಿಗಳ ಭೂಷಣವ ೧೮
ರಾಯ ಹದುಳಿಸಿದನೆ ಮಹಾದೇ
ವಾಯಿದೆತ್ತಣ ಪುಣ್ಯವೋ ರಣ
ದಾಯಸವ ಸೈರಿಸಿದ ತನಗಿದು ಸಫಲವಾಯಿತಲ
ದಾಯ ಬಂದುದು ನಮಗೆ ಹೋ ಲೇ
ಸಾಯಿತೇಳು ವಿಶೋಕ ಸಾಕುಳಿ
ದಾಯುಧದ ಪರಿಗಣಿತವನು ಹೇಳೆಂದನಾ ಭೀಮ ೧೯
ಉಳಿದ ಕೈದುಗಳೇಸು ಬಂಡಿಯ
ಲುಳಿದ ಸರಳಿನ ಹೊದೆಯ ಲೆಕ್ಕವ
ತಿಳಿದು ಹೇಳೈ ತಂದೆ ಸಾರಥಿ ನೋಡಲಹುದಿನ್ನು
ಅಳಲಿಸಿದ ಕೌರವನ ರಕ್ತದ
ಮಳೆಯೊಳಲ್ಲದೆ ತನ್ನ ಕೋಪಾ
ನಳನ ಝಳವಡಗದು ಯುಧಿಷ್ಠಿರ ರಾಯನಾಣೆಂದ ೨೦
ಅರಸ ಚಿತ್ತವಿಸುಳಿದ ಧನು ಹ
ನ್ನೆರಡುಸಾವಿರ ಬಲುಸರಳು ಹ
ನ್ನೆರಡುಸಾವಿರ ಬೋಳೆಯೈನೂರರ್ಧಚಂದ್ರಶರ
ಪರಿಗಣಿತ ಲುಳಿಯಂಬು ಕಣಗಿಲ
ಸರಳುಗೂಡಿಪ್ಪತ್ತುಸಾವಿರ
ವೆರಡುಸಾವಿರವುಳಿದವೀ ನಾರಾಚ ನಿಕರದಲಿ ೨೧
ಆಲಿಸೈ ಮುಗುಳಂಬು ಸಾವಿರ
ವೇಳು ಬಳಿಕೊಂಬತ್ತು ಸಾವಿರ
ಕೋಲು ಮೀಂಟೆಯ ಕವಲುಗಣೆ ಹನ್ನೆರಡುಸಾವಿರವು
ಮೇಲೆ ಸಾವಿರ ನಾಲ್ಕು ಮುಮ್ಮೊನೆ
ಬೋಳೆಯಂಬೀರೈದುಸಾವಿರ
ನಾಳಿಯಂಬುಗಳಾರುಬಂಡಿಯ ಲೆಕ್ಕವಿದೆಯೆಂದ ೨೨
ಪರಶು ಮುಸಲ ಮುಸುಂಡಿ ಸೆಲ್ಲೆಹ
ಪರಿಘ ತೋಮರ ಚಕ್ರವಸಿ ಮು
ದ್ಗರ ತ್ರಿಶೂಲ ಕಠಾರಿ ಖೇಟಕ ಪಿಂಡಿವಾಳಚಯ
ಸುರಗಿ ಮೊದಲಾದಖಿಳ ಶಸ್ತ್ರೋ
ತ್ಕರವನೊಂದೇ ಬಂಡಿಯಲಿ ಸಂ
ವರಿಸಿದೆನು ರಿಪುರಾಯರೊಡಲಲಿ ಬೀಯಮಾಡೆಂದ ೨೩
ಪೂತು ಸಾರಥಿ ಈಸುಬಾಣ
ವ್ರಾತವುಳಿದುದೆ ತನ್ನ ಕರ ಕಂ
ಡೂತಿಯನು ಕಳುಚುವೆನಲಾ ಕೌರವನ ನೆತ್ತಿಯಲಿ
ಆತನೇನಾದನು ಯುಧಿಷ್ಠಿರ
ಸೋತು ಪಿಂಗಿದನೆಂಬ ಹಂಬಲು
ಬೀತುದಿನ್ನೇನೆನ್ನ ನೋಡಾ ಎನುತ ಗರ್ಜಿಸಿದ ೨೪
ಚಳಯದಲಿ ಫಲುಗುಣನ ಮೋಹರ
ಕಳನ ಪೊಕ್ಕುದು ಹಲವು ಮೊನೆಯಲಿ
ತಳಿತು ನಿಂದುದು ಜಡಿವ ಬಹುವಿಧವಾದ್ಯರಭಸದಲಿ
ಅಳುಕಿತೀ ನಮ್ಮವರು ಭೀಮನ
ಸುಳಿವಿನಲಿ ಸೊಪ್ಪಾದೆವರ್ಜುನ
ನೆಳತಟಕೆ ನಿಲವೆಂತೆನುತ ನೆಗ್ಗಿದುದು ದುಗುಡದಲಿ ೨೫
ದಳದ ಮಧ್ಯದೊಳೊಂದು ರಥದಲಿ
ಹೊಳೆದು ದುವ್ವಾಳಿಸಿ ಧನಂಜಯ
ನಿಲಿಸಿದನು ನಿಜರಥವ ಭೀಮನ ರಥದ ಮುಂಬಿನಲಿ
ಬಳಿಕ ತನ್ನಿಂದಾದ ಕೋಳಾ
ಹಳವನಾ ತರುವಾಯಲವ್ಯಾ
ಕುಳ ಸಮಾಧಾನವನು ಬಿನ್ನಹಮಾಡಿದನು ಪಾರ್ಥ ೨೬
ಜನಪ ಕೇಳೈ ಬಳಿಕ ಭೀಮಾ
ರ್ಜುನರ ಮೋಹರಕೈದುಸಾವಿರ
ಕನಕಮಯರಥಸಹಿತ ಬಿಟ್ಟನು ಶಕುನಿ ಸೂಠಿಯಲಿ
ಅನಿಲಸುತನರ್ಜುನನ ನೀ ಸಾ
ರೆನುತ ಕೆದರಿದನಹಿತನಂಬಿನ
ಮೊನೆಯೊಳಳ್ಳಿರಿದೌಕಿ ತುಡುಕುವ ತೇರ ತೆಕ್ಕೆಯಲಿ ೨೭
ಒಂದು ಶರಸಂಧಾನದಲಿ ಕವಿ
ತಂದವೈಸಾವಿರ ರಥಾವಳಿ
ಯೊಂದು ಧನುವಿನೊಳೀತ ಮೊಗೆದನು ಸರಳಸಾಗರವ
ಸಂದಣಿಸಿತಾ ರಥಿಕರಾ ಹಯ
ವೃಂದವಾ ಸಾರಥಿಗಳಾ ರಥ
ಕೊಂದು ಹತ್ತರ ಲೆಕ್ಕದಲಿ ಮಿಕ್ಕವು ಶರವ್ರಾತ ೨೮
ಒಗ್ಗಿನೈಸಾವಿರ ರಥಾವಳಿ
ಮುಗ್ಗಿದವು ಕಣೆ ತಾಗಿ ರಥಿಕರು
ನೆಗ್ಗಿದರು ಮೇಲಂಬು ಸುಳಿದೊಯ್ದವು ಸಜೀವಿಗಳ
ಒಗ್ಗೊಡೆದು ಕಲಿಶಕುನಿ ಘಾಯದ
ಸುಗ್ಗಿಯಲಿ ಲಘುವಾಗಿ ಹರುಷದ
ಮುಗ್ಗಿಲೊಣಗಿಲ ಮೋರೆಯಲಿ ತಿರುಗಿದನು ಮೋಹರಕೆ ೨೯
ಶಕುನಿ ಮುರಿದನು ಬೇಹ ದಳನಾ
ಯಕರು ತಿರುಗಿತು ಭೀಮಸೇನನ
ವಿಕಟ ಸಿಂಹಧ್ವನಿಗೆ ಜರಿದುದು ಭಟರ ಬಲುಹೃದಯ
ಅಕಟಕಟ ಕುರುಸೇನೆ ನಿರ್ನಾ
ಯಕವಲಾ ಹಾ ಎನುತ ಮಂತ್ರಿ
ಪ್ರಕರ ಮರುಗಿತು ತುರುಗಿತಲ್ಲಿಯದಲ್ಲಿ ಕಳವಳಿಸಿ ೩೦
ಸಂಕ್ಷಿಪ್ತ ಭಾವ
ಧರ್ಮಜನಿಂದ ಕರ್ಣನ ಸಂಹಾರಕ್ಕೆ ನೇಮಕಗೊಂಡು ಅರ್ಜುನ ಹೊರಟದ್ದು.
ಕೃಷ್ಣನಿಂದ ಇಡೀ ವಾತಾವರಣ ತಿಳಿಯಾಗಿ ಎಲ್ಲರೂ ಸಮಾಧಾನ ಹೊಂದಿದರು. ಧರ್ಮಜನು ಅರ್ಜುನನನ್ನು ಅಪ್ಪಿಕೊಂಡನು. ತನ್ನ ಸೆರಗನಿಂದ ಅವನ ಕಣ್ಣೀರು ಒರೆಸಿ ಸಂತೈಸಿದನು. ನಕುಲ, ಸಹದೇವರೂ ಆಕ್ರಂದಿಸಿದರು. ದ್ರೌಪದಿ ಮರುಗಿದಳು. ಧರ್ಮಜ ಎಲ್ಲರನ್ನೂ ಆದರಿಸಿದನು. ಭೀಮನೊಬ್ಬನೇ ಅಲ್ಲಿ ಹೋರಾಡುತ್ತಿದ್ದಾನೆಂದು ಕಳವಳ ವ್ಯಕ್ತಪಡಿಸಿದನು.
ಅರ್ಜುನನು ಕರ್ಣನನ್ನು ಇಂದು ಮುಗಿಸಿ ಬರುವೆ. ಅಪ್ಪಣೆ ಕೊಡು ಎನ್ನಲು ತಮ್ಮನನ್ನು ತಕ್ಕೈಸಿ ತಂಬುಲವಿತ್ತು ನೇಮವಿತ್ತನು. ಎಲ್ಲ ಪ್ರಮುಖರಿಗೂ ವೀಳೆಯ ಕೊಟ್ಟನು. ಮತ್ತೆ ಸೈನ್ಯ ಉತ್ಸಾಹದಲ್ಲಿ ಹೊರಟಿತು. ಕಾಂತೆಯರು ಆರತಿಯನೆತ್ತಿದರು. ಸೇಸೆಯನ್ನಿಟ್ಟರು. ರಣವಾದ್ಯಗಳು ಮೊಳಗಿದವು. ಹೊರಟಾಗ ಶುಭ ಶಕುನಗಳಾದವು.
ಆಳುಗಳು ಮುಂದೆ ಬಂದು ಭೀಮನಿಗೆ ಧರ್ಮಜನ ಕ್ಷೇಮವಾರ್ತೆಯನ್ನೂ ಅರ್ಜುನನ ನೇಮವನ್ನೂ ತಿಳಿಸಿದರು. ಅವನಿಗೆ ಸಂತೋಷವಾಯಿತು. ತನ್ನ ಸಾರಥಿ ವಿಶೋಕನಿಗೆ ಉಳಿದಿರುವ ಆಯುಧಗಳು ಎಷ್ಟಿವೆ ನೋಡಿ ಹೇಳು ಎಂದನು. ಅವನು ಚಕಚಕನೆ ನೋಡಿ ಪ್ರತಿಯೊಂದು ಸರಳು, ಆಯುಧಗಳು, ಅರ್ಧಚಂದ್ರಸರಳು ಮುಂತಾದ ಎಲ್ಲ ಲೆಕ್ಕವನ್ನೂ ಕೊಟ್ಟನು. ಈ ಭಾಗದಲ್ಲಿ ಸಾರಥಿಯ ಕುಶಲತೆ ಕಂಡುಬರುತ್ತದೆ. ಸಂತಸದಿಂದ ಭೀಮ ಸಾರಥಿಯನ್ನು ಹೊಗಳಿದನು. ಕೌರವರು ಮೊದಲೇ ಭೀಮನಿಂದ ಸೋತು ಸೊಪ್ಪಾಗಿದ್ದವರು ಅರ್ಜುನನು ಬಂದುದನ್ನು ಕಂಡು ಚಿಂತಿತರಾದರು.
ಭೀಮನ ರಥದ ಸಮೀಪಕ್ಕೆ ಬಂದ ಅರ್ಜುನ ಪಾಳಯದಲ್ಲಿ ನಡೆದ ತನ್ನ ಕೋಲಾಹಲದ ವಿವರ ತಿಳಿಸಿ ನಂತರ ಕೃಷ್ಣನಿಂದಾದ ಸಮಾಧಾನ ಹೇಳಿದನು. ಶಕುನಿಯ ಬಾಣಗಳನ್ನು ಇವರು ತಡೆದರು. ಭೀಮ ಅರ್ಜುನನನ್ಬು ಒಂದು ಕಡೆಗೆ ಕಳಿಸಿ ತಾನು ಇನ್ನೊಂದು ಕಡೆಯಿಂದ ಕೌರವರ ಸೇನೆಯ ಮಗ್ಗುಲು ಮುರಿಯತೊಡಗಿದನು. ಶಕುನಿ ಹಿಂದಿರುಗಿದನು. ಭೀಮನ ಆರ್ಭಟಕ್ಕೆ ಭಟರ ಹೃದಯ ಬಿರಿಯಿತು. ಮಂತ್ರಿಗಳು ಚಿಂತಿತರಾದರು.
ಕಾಮೆಂಟ್ಗಳು