ಭಾರತಕಥಾಮಂಜರಿ129
ಸೂ.
ರಾಯ ಚೌಪಟಮಲ್ಲ ಮಲೆವರಿ
ರಾಯ ಧೂಳೀಪಟ್ಟ ಗರ್ವಿತ
ರಾಯ ಭೀಕರ ಭೀಮ ಕೊಂದನು ಕೌರವಾನುಜನ
ಕೇಳು ಧೃತರಾಷ್ಟ್ರಾವನಿಪ ನಿ
ನ್ನಾಳು ತಲೆಕೆಳಗಾಯ್ತು ಭೀಮನ
ಧಾಳಿ ಹೆಚ್ಚಿತು ಹೊಸತು ದಶಕದ ಮಸಕ ಮಿಗಿಲಾಯ್ತು
ಮೇಲೆಮೇಲುಬ್ಬೇಳ್ವ ರಿಪುಶರ
ಜಾಲ ಧಾರಾಧೂಮವಹ್ನಿ
ಜ್ವಾಲೆಗುರೆ ತೇರೈಸಿ ಕೋರೈಸಿತು ಕುರುಸ್ತೋಮ ೧
ಉಲುಕಲಮ್ಮುವರಿಲ್ಲಲಾ ಭಟ
ರಳುಕಿದರೆ ಭಾರಂಕದವರ
ಗ್ಗಳೆಯ ಬಿರುದರು ಬೀತರೇ ಸೋತರೆ ಪಲಾಯನಕೆ
ಹಲವು ಮಾತೇನೆಮ್ಮ ಮಾವನ
ಕಳನ ಹರಿಬಕೆ ನಾವೆ ಇನ್ನೈ
ಸಲೆ ಎನುತ ನೆರಹಿದನು ನಿನ್ನ ಕುಮಾರಕನು ದಳವ ೨
ಆ ವಿಗಡ ಪರಿವಾರದಲಿ ರಥ
ಸಾವಿರವ ಮೇಳೈಸಿದರು ದಂ
ತ್ಯಾವಳಿಯ ಬೇರೆಣಿಸಿ ನಿಲಿಸಿದರೈದುಸಾವಿರವ
ರಾವುತರೊಳಗ್ಗಳೆಯರನು ದಶ
ಸಾವಿರವ ಜೋಡಿಸಿದರಿನಿಬರು
ಸಾವನೇ ನಿಶ್ಚೈಸಿ ಬಿಗಿದರು ವೀರಕಂಕಣವ ೩
ಕುಡಿತೆಯಲಿ ಕರ್ಪುರವ ಸುರಿಸುರಿ
ದೊಡನೆ ಸಾದು ಜವಾಜಿಲೇಪವ
ಮುಡಿವ ಹೊಸಹೂಗಳನು ವರಗಂಧಾನುಲೇಪನದ
ಉಡುಗೊರೆಯ ವೀಳೆಯದ ರತ್ನದ
ತೊಡಿಗೆಗಳಲಾ ಪಟುಭಟರ ವಂ
ಗಡವ ಮನ್ನಿಸಿ ನಿನ್ನ ಮಗನನುವಾದನಾಹವಕೆ ೪
ಬಲದೊಳಗೆ ಹೆಸರುಳ್ಳವರು ನೃಪ
ತಿಲಕ ನೀ ಸಾಕಿದ ಕುಮಾರರು
ಹಳೆಯರಲಿ ಮಿಕ್ಕವರು ಮಕ್ಕಳ ತಂಡದಲಿ ಕೆಲರು
ಅಳಲಿಗರು ದುಶ್ಶಾಸನನ ಬಲ
ದೊಳಗೆ ನಿಂದುದು ಸಾಲಸಿಡಿಲಿನ
ಬಳಗವೋ ನಿನ್ನವರ ಬಣ್ಣಿಸಲರಿಯೆ ನಾನೆಂದ ೫
ಸಾಲ ಸಿಂಧದ ಮಣಿವ ಗೋವಳಿ
ಗೋಲ ತೂಕದ ತಳಿತ ಚೌರಿಯ
ಜಾಲ ಮೋಹಿದ ಮೇಘಘಟೆಯೆನೆ ಜಡಿವ ಝಲ್ಲರಿಯ
ಜಾಳಿಗೆಯ ಹೊಗರೊಗುವ ವಹ್ನಿ
ಜ್ವಾಲೆಯೆನೆ ಝಳಪಿಸುವ ಕೈದುಗ
ಳೋಳಿ ಹೊಳೆದುದು ಸೆಳೆದುದೀತನ ಗರ್ವವಿಭ್ರಮವ ೬
ಹರೆದ ಬಲ ಹುರಿಗಟ್ಟಿ ಖತಿಯಲಿ
ದೊರೆಯ ಕೂಡೊದಗಿದುದು ಬೀರುವ
ಬಿರುದುಗಹಳೆಯ ದನಿಯ ಘಾಯದ ಭೂರಿ ಭೇರಿಗಳ
ಮೊರೆವ ಬಹುವಿಧ ವಾದ್ಯರಭಸದ
ಧರಧುರದ ಕೆಂಧೂಳಿಯಲಿ ಮೋ
ಹರಿಸಿ ಮುಸುಕಿತು ಭೀಮಸೇನನ ರಥದ ಬಳಸಿನಲಿ ೭
ಸಾರಹೇಳೋ ರಾಯಕುವರ ಮು
ರಾರಿ ದುಶ್ಶಾಸನ ಕಣಾ ಫಡ
ವೈರಿ ಭೀಮ ದ್ವಿರದ ಕುಂಭಸ್ಥಳಕೆ ಪಂಚಮುಖ
ವೀರಮನ್ಮಥ ತ್ರಿಪುರಹರ ಜ
ಜ್ಝಾರ ಭಟ ಜಗಜಟ್ಟಿಗಿದಿರೆ ವಿ
ಕಾರಿಯೇ ಫಡ ಭೀಮನೆನುತೈದಿತು ಭಟಸ್ತೋಮ ೮
ದಾಯವಿದು ಮಝ ಪೂತು ರಣದ ವಿ
ಡಾಯಿಯಹುದೋ ಕಲಿ ಯುಧಿಷ್ಠಿರ
ರಾಯನಾಣೆ ಸುಯೋಧನಾನುಜನೋಜೆ ಲೇಸೆನುತ
ವಾಯುಸುತನಾಕರ್ಣಕರ್ಷಿತ
ಸಾಯಕನು ರಿಪುಸುಭಟಕುಲ
ಲಯ ದಾಯಕನು ದಳದುಳವ ಹಾಯ್ದನು ವೈರಿಮೋಹರವ ೯
ನುಸಿಗಳೆನ್ನೆವು ನೀವು ಜಗಸಾ
ಹಸಿಕರೈ ಕಾಲಾಳು ಜೋಧ
ಪ್ರಸರದೆಸುಗೆಗೆ ಹೆದರುವೆವು ಹೇರಾಳದಂಬುಗಳ
ದಶಕವುಳ್ಳವರಹಿರಿ ಸಮರಥ
ವಿಷಮರಾವ್ತರು ನೋಡುತಿರಿ ಸರ
ಳಿಸಲಿ ನಿಮ್ಮಯ ದೊರೆಗಳೆನುತುರವಣಿಸಿದನು ಭೀಮ ೧೦
ಸಾರಿರೈ ಕಾಲಾಳು ರಥಿಕರು
ಸಾರಿರೈ ರಾವುತರು ಜೋಧರು
ಭಾರಣೆಯಲಿರಿ ದೊರೆಯನರಸುವ ಬಯಲ ಬೊಬ್ಬೆಗಳ
ಆರುಭಟೆಗಾರಳುಕುವರು ಪರಿ
ವಾರ ಕೈಮಾಡದಿರೆನುತ ಕುರು
ವೀರನನುಜರು ತರುಬಿದರು ಪವಮಾನನಂದನನ ೧೧
ಸಡಿಫಡೇನಿದು ತಮ್ಮ ತಲೆಗಳಿ
ಗೊಡೆಯರಲ್ಲದೆ ಕೌರವಾನುಜ
ರೊಡೆಯರೇ ಪರಿವಾರದಭಿಮಾನಾವಮಾನದಲಿ
ಬಿಡುವವರು ನಾವಲ್ಲ ಭೀಮನ
ಕಡಿಯೊಳಗೆ ಕಡಿವೆರಸಿ ನೆತ್ತರು
ಗುಡಿಯೆವೇ ತಾವೆನುತ ದಳ ಮುಕ್ಕುಱುಕಿತನಿಲಜನ ೧೨
ಏನ ಹೇಳುವೆನರಸ ತೂಳಿದ
ವಾನೆಗಳು ನಾರಾಚನಿಚಯದ
ಸೋನೆ ಸುರಿದುದು ಭೀಮಸೇನನ ರಥದ ಶಿಖರದಲಿ
ಭಾನುಬಿಂಬವ ಮೊಗೆವ ಲೌಡೆಯ
ಮಾನಸದ ಧಕ್ಕಡರು ಕಲಿ ಪವ
ಮಾನ ತನಯನ ಮುತ್ತಿಕೊಂಡರು ರಾಯರಾವುತರು ೧೩
ಬಳಸಿನಲಿ ಚಾಚಿದವು ರಥಸಂ
ಕುಳ ಪದಾತಿಯ ಕೈದು ಮೀರಿದ
ವಳವಿಯಲಿ ಮೊನೆಗಾಣಿಸಿದರರಿಸೂತವಾಜಿಗಳ
ಸಿಲುಕಿದನು ಫಡ ಸ್ವಾಮಿದ್ರೋಹಿಗೆ
ಬಲೆಯ ಹಾಯಿಕೊ ಗಂಡುಮೀನ
ಗ್ಗಳೆಯ ಗಾಣವ ಕೊಳ್ಳದೆನುತೌಕಿದರು ಬಳಸಿನಲಿ ೧೪
ಧೂಳು ಮುಸುಕಿತು ಸುತ್ತುವಳಯದ
ಲಾಳು ಹೊಕ್ಕುದು ಹೊಯ್ಲ ಹೊದರಿನ
ಬಾಳುಗಿಡಿಗಳ ಖಣಿಖಟಿಲ ಘಲ್ಲಣೆಯ ಗರ್ಗರದ
ಮೇಲುಮೇಲುಬ್ಬೇಳ್ವ ಬೊಬ್ಬೆಯ
ತೂಳುವರೆ ಕಹಳೆಗಳ ಘೋಳಾ
ಘೋಳಿ ಮಸಗಿತು ಭೀಮಸೇನನ ರಥದ ಬಳಸಿನಲಿ ೧೫
ಅಳಲಿಗರಲೇ ಕೌರವಾನುಜ
ರಳುಕದಿರಿದರಲೈ ವಿಘಾತಿಗೆ
ಸಿಲುಕದಿರನೋ ಭೀಮನೆನುತುಬ್ಬಿದರು ನಿನ್ನವರು
ಜಲನಿಧಿಯೊಳುಬ್ಬೆದ್ದ ತೆರೆಯಲಿ
ಮುಳುಗುವುದೆ ಮಂದರವೆನುತ ಕಳ
ವಳಿಸಿದವರೇನರಿಯರೇ ತಮ್ಮವನ ಕೈಗುಣವ ೧೬
ತೆಗಸಬೇಹುದೆ ಪವನಜನ ಮು
ತ್ತಿಗೆಯನೆನುತುರವಣಿಪ ನಕುಲಾ
ದಿಗಳ ಕಂಡನು ಕರೆದು ಮರುಳಾಡಿದನು ಕಲಿಪಾರ್ಥ
ತೆಗಸಬೇಹುದು ತರಣಿಬಿಂಬವ
ತಗುಳ್ವ ತಿಮಿರವ ನಿಮ್ಮ ಹಂಗಿನ
ನುಗುಳಗಂಡಿಯ ನುಸುಳುದಲೆಗನೆ ಮರಳಿ ನೀವೆಂದ ೧೭
ಮಾತು ಹಿಂಚಿತ್ತಿದು ವಿಲಂಬಿಸ
ದಾತ ಮುರಿದನು ಮುತ್ತಿದಿಭಸಂ
ಘಾತವನು ಪಲ್ಲಟಿಸಿ ಕಡಿ ಕೊಚ್ಚಿದನು ತೇರುಗಳ
ಆತು ತಾಗಿದ ರಾವುತರ ಸುರ
ಜಾತಿಯಲಿ ಕಂಡೆನು ಪದಾತಿ
ವ್ರಾತ ಪಾಣಿಗ್ರಹಣವನು ಗೀರ್ವಾಣವಧುಗಳಲಿ ೧೮
ಬಲನೆಡನ ಗದೆ ಖಡುಗದಲಿ ರಿಪು
ಜಲನಿಧಿಯನೀಸಾಡಿದನು ಹೆ
ಬ್ಬಲದ ಹೆಬ್ಬೆಳೆ ಸಾಲಕೊಯ್ಲಿನ ಮೆದೆಗಳೊಟ್ಟಿಲಲಿ
ತಳಕುಗಳ ವರ ರಥ ಹಯದ ಹೊಸ
ಮೆಳೆಯ ಕಡಿತದ ಕರಿಘಟಾಳಿಯ
ಬಲುಮೊರಡಿಗಳ ಸವರಿ ತಳಪಟಮಾಡಿದನು ಭೀಮ ೧೯
ಅಸಿಯಲಿಟ್ಟರೆದಂತೆ ಬಲ ನಿ
ಪ್ಪಸರದಲಿ ನುಗ್ಗಾಯ್ತು ನೀಗಿದ
ರಸುವನೀ ದುಶ್ಶಾಸನನ ನಂಬುಗೆಯ ಪರಿವಾರ
ಬಸಿವ ನೆತ್ತರ ಮೆಯ್ಯ ಕರುಳಿನ
ಕುಸುರಿಗಳ ತಲೆಮಿದುಳ ಮೆತ್ತಿಗೆ
ವಸೆಯ ತೊರಳೆಯ ತೊಂಗಲಲಿ ರಂಜಿಸಿತು ರಣಭೂಮಿ ೨೦
ಹೋರಿ ಹಂಗಿಗರಾದೆವೇ ಪರಿ
ವಾರ ನೆರೆದುದು ನಾಕದಲಿ ತೆಗೆ
ವೀರಕಂಕಣವೇಕೆನುತ ದುರಿಯೋಧನಾನುಜರು
ತೇರ ಸೂತನ ಸೂಚನೆಯ ಚೀ
ತ್ಕಾರ ಪರಿಧಾವನೆಯ ಧೂಳಿಯ
ಲೋರಣದ ಭಾರಣೆಯಲೈದಿದರನಿಲನಂದನನ ೨೧
ಇಂದಲೇ ನೀವ್ ಗದೆಯ ಹಬ್ಬಕೆ
ಬಂದಿರೈ ಲೇಸಾಯ್ತು ನೀವೇ
ನೆಂದಿರೈ ನಿಮ್ಮಣ್ಣದೇವನ ಮುಂದೆ ಭಾಷೆಗಳ
ತಂದಿರೈ ತಳ್ಳಂಕವನು ನಮ
ಗೆಂದು ಕೊಡುವಿರಿ ಕೌರವನ ತ
ಮ್ಮಂದಿರೈ ನೀವೆನುತ ಸುಳಿದನು ಸಿಂಹನಾದದಲಿ ೨೨
ಗಿಡಿಗನೆತ್ತಲು ಗಿಣಿಯ ಮರಿಗಳ
ಗಡಣವೆತ್ತಲು ತೋಳನೆತ್ತಲು
ತೊಡಕುವರೆ ತಗರೆತ್ತಲಿವರಿಗೆ ಗೆಲವು ಸೋಲವನು
ನುಡಿಯಲಮ್ಮೆನು ನಿನ್ನ ಮಕ್ಕಳ
ಮಿಡುಕಿನಂತರವೇನು ಪ್ರಳಯದ
ಸಿಡಿಲ ಬಲುಹೋ ಭೀಮನೋ ನಾವರಿಯೆವಿದನೆಂದ ೨೩
ಥಟ್ಟುಗೆಡಹಿ ಕುಮಾರಕರನರೆ
ಯಟ್ಟಿ ಹೊಯ್ದನು ಕೆಲಬಲದಲಡ
ಗಟ್ಟಿದರನಪ್ಪಳಿಸಿದನು ಚಿಗಿದಾನೆವರಿವರಿದು
ಇಟ್ಟಣಿಸಿ ಹೊಕ್ಕೆಸುವವರ ಹುಡಿ
ಗುಟ್ಟಿದನು ಹೆಣಸಾಲಿನಲಿ ಮಡು
ಗಟ್ಟಿ ನಿಂದುದು ರಕ್ತಜಲ ನರನಾಥ ಕೇಳೆಂದ ೨೪
ಒಂದು ಹಲಗೆಯಲೈದು ಹರಿಬಕೆ
ಬಂದು ಹೊಕ್ಕವರೈದು ಖತಿಯಲಿ
ಹಿಂದ ಕೆಣಕಿದರೆಂಟು ಮಗುಳಿಬ್ಬರನು ಕದನದಲಿ
ಕೊಂದನಿಂತಿಪ್ಪತ್ತು ನಿನ್ನಯ
ನಂದನರು ನೀಗಿದರು ನೆಲನನು
ನಿಂದು ಕರೆದನು ಬಳಿಕ ದುಶ್ಶಾಸನನ ಕಲಿಭೀಮ ೨೫
ಧಾರುಣೀಪತಿ ಕೇಳು ನಿನ್ನ ಕು
ಮಾರರಲಿ ತೊಂಬತ್ತಯೆಂಟರ
ಪಾರುಖಾಣೆಯ ಲೆಕ್ಕ ಸಂದುದು ನಿಮ್ಮ ಚಿತ್ತದಲಿ
ಸಾರಭೂತರಲೇ ಸಮಸ್ತವಿ
ಕಾರಿಗಳೊಳೀ ವಿಶ್ವನೃಪ ಸಂ
ಹಾರರಿಬ್ಬರ ಬೀಯವನು ಮೇಲಿನ್ನು ಕೇಳೆಂದ ೨೬
ಮುರಿದುದಚ್ಚಾಳಚ್ಚುಕುದುರೆಗ
ಳುರುಕುಗೊಂಡುದು ನಿನ್ನವರು ಹೊ
ಕ್ಕಿರಿದು ಹೋಗಾಡಿದರು ತನ್ನ ಸಹೋದರವ್ರಜವ
ಹೊರಗೆ ಕರ್ಣಕೃಪಾದಿಗಳು ಮೈ
ಮರೆವ ಹೊತ್ತಾಯ್ತಿವನ ನೆತ್ತರ
ಸುರಿಯದೆಡೆಯಲಿ ಬಿಡೆನೆನುತ ಪವನಜನು ಗರ್ಜಿಸಿದ ೨೭
ದೊರೆಯ ತಮ್ಮನ ತವಕ ತೋಟಿಗೆ
ತಿರುಗುತದೆ ತಡವೇನು ನೂಕೆನು
ತರಸ ಕೇಳೈ ತನತನಗೆ ದುಶ್ಶಾಸನನ ರಥವ
ಪರಿಹರಿಸಿಕೊಂಡೇರಿತೀ ದಳ
ದುರವಣೆಯ ಸೈರಿಸಿದಡವನೀ
ಶ್ವರನಲೇ ಕಲಿಭೀಮನಲ್ಲದೆ ಧೀರನಾರೆಂದ ೨೮
ನೂಕದಿರಿ ಸಂಘಟಿಸಿ ಹೋಹೋ
ಸಾಕು ಸಾಕಾ ಮೆಚ್ಚಿದೆನು ತಳು
ವೇಕೆ ದುಶ್ಶಾಸನ ವೃಥಾ ನೀ ಹೊತ್ತುಗಳೆವೆಯಲಾ
ನೀ ಕಳೆದುಕೊಳು ಧನುವ ನಮ್ಮ ವಿ
ವೇಕವನು ದಳ ನೋಡುತಿರಲಿ ನಿ
ರಾಕುಳದಲೆಚ್ಚಾಡುವೆವು ನಿಲ್ಲೆಂದನಾ ಭೀಮ ೨೯
ರೂಢಿಸಿದ ಭಟ ನೀನು ಹರಿಬವ
ಬೇಡಿ ತೊಡಕಿದೆ ನಾನು ಖಾಡಾ
ಖಾಡಿಯಲಿ ಸಿಗುರಿಲ್ಲ ತೆಗೆ ಹಂಗೇಕೆ ತೆತ್ತಿಗರ
ನೋಡುತಿರಲೀ ಬಲವೆರಡು ಹೋ
ಗಾಡು ನಮ್ಮನು ಮೇಣು ನಿನ್ನನು
ಸೂಡುದರಿವೆನು ಸತ್ವದಳತೆಯ ಕಾಣಲಹುದೆಂದ ೩೦
ತೊಲಗಿರೈ ಪರಿವಾರ ಬಾಳೆಯ
ತಳಿಯ ಮುರಿವತಿಸಹಸಿ ಗಡ ಮರಿ
ಮೊಲನ ಬೇಟೆಯ ವೀರ ಗಡ ಬಾಣಪ್ರಯೋಗದಲಿ
ಸಲೆ ಮೃಗದ ಸಾಹಸಿಕ ಗಡ ಕು
ಟ್ಮಳಿತ ಕೇತಕಿ ತೀಕ್ಷ್ಣ ಗಡ ನೀ
ವಳವಿಗೊಡದಿರಿ ಎನುತ ನಿನ್ನ ಕುಮಾರನನುವಾದ ೩೧
ಪೂತು ಸುಭಟ ಸುಯೋಧನನ ಸಹ
ಜಾತನಲ್ಲಾ ಮತ್ತೆ ಕೆಲಬರಿ
ಗೀ ತವಕವೀ ಶೌರ್ಯವೀ ಬಲುಹೀಸು ದಿಟ್ಟತನ
ಸೋತುದುಂಟೇ ಹೊಳ್ಳುವಾತಿನ
ಹೂತೊಡಬೆ ನಿನಗಿಲ್ಲ ಧೈರ್ಯದ
ಧಾತುವೊಳ್ಳಿತು ಕೊಳ್ಳೆನುತ ತೆಗೆದೆಚ್ಚನಾ ಭೀಮ ೩೨
ಫಡ ಎನುತ ಪವನಜನ ಬಾಣವ
ಕಡಿದು ಕೂರಂಬಿನಲಿ ಭೀಮನ
ಕೆಡೆಯೆಸುತ ಮುರಿಯೆಚ್ಚು ಮಗುಳೆಚ್ಚಂಬ ಹರೆಗಡಿದು
ಎಡೆಯಲೆಚ್ಚಂಬುಗಳನಿಬ್ಬರು
ಕಡಿದರಂಬಂಬುಗಳ ಹೋರಟೆ
ಕಿಡಿಗೆದರೆ ನಿಬ್ಬರದ ಕದನವ ಕಂಡೆನಿಬ್ಬರಲಿ ೩೩
ಸವೆಯೆ ಸರಳೆಚ್ಚಾಡಿದರು ಕಲಿ
ಪವನಸುತ ದುಶ್ಶಾಸನರ ರಣ
ದವಕಿಗರ ಕೋಪಾಗ್ನಿ ಭುಗಿಭುಗಿಲೆಂದುದಡಿಗಡಿಗೆ
ಅವನಿಗಿಳಿಬಿಡು ಧನುವ ತೆಗೆ ಖಡು
ಗವನೆನುತ ರಥದಿಂದ ಹಾಯ್ದರು
ಬವರಿಗರು ಬಿನ್ನಣದಿ ಹೊಯ್ದಾಡಿದರಡಾಯುಧದಿ ೩೪
ಚಾರಣದ ಚಮ್ಮಟದ ಖಡುಗದ
ಪಾರಗದಲುಚ್ಚಟದ ಲುಳಿಯು
ಖ್ಖಾರದೊಡ್ಡಿನ ಹೊಯ್ಲ ಹೋರಟೆಗಳ ಸುರೇಖೆಗಳ
ಸಾರತರಶ್ರಮರೊದಗಿದರು ಜ
ಜ್ಝಾರರುಬ್ಬಣ ಮುರಿಯೆ ಕಾದಿ ಕ
ಠಾರಿಗಳಲೇ ತರುಬಿ ನಿಂದರು ದಂಡೆಮಂಡಿಯಲಿ ೩೫
ಲುಳಿಯ ಪಯಪಾಡುಗಳ ದಂಡೆಯ
ಬಳಿಯ ಲೋಹದ ಲವಣಿಗಳ ಮನ
ಲಳಿಯ ಲಾಗಿನ ದೃಷ್ಟಿಯೋರೆಯ ಕೊಂಕಿದವಯವದ
ಬಲಿದ ದಂಡೆಯ ಮರೆಯ ದೇಹದ
ತಳಿತ ಠಾಣದ ಹಜ್ಜೆ ಹಜ್ಜೆಯ
ನೆಲನ ಪಲ್ಲಟದರಿಭಟರು ಕಾದಿದರು ಖಾತಿಯಲಿ ೩೬
ಬಿಡಿಸಿದರೆ ಕುತ್ತುವ ವಿಘಾತಿಯ
ಮಡಮುರಿಯಲೇ ಕಳೆವ ದಂಡೆಯ
ತುಡುಕಿದಡೆ ನೋಡುವ ನಿವಾರಿಸಿ ಜಡಿದು ಝಳಪಿಸುವ
ಪಡಿಮುಖದೊಳಂಘೈಸಿ ಬವರಿಯ
ಲೊಡಲನೊಲೆವ ಕಠಾರಿಕಾಱರ
ಬಿಡುಶ್ರಮದ ಬಿನ್ನಣಕೆ ಮಝ ಭಾಪೆಂದುದುಭಯಬಲ ೩೭
ಕಣೆಯ ಕಾಲಾಟದಲಿ ಹಿರಿಯು
ಬ್ಬಣದ ಹೋರಟೆಯಲಿ ಕಠಾರಿಯ
ಕುಣಿಹದಲಿ ಮಸೆಗಾಣದಿದ್ದುದು ನಿನ್ನ ದೇಹದಲಿ
ರಣಮುಖದೊಳಿದು ನಮ್ಮ ಪುಣ್ಯದ
ರಿಣವಿಶೇಷ ಕಣಾ ಎನುತ ರಿಪು
ಗಣಭಯಂಕರ ಭೀಮ ನುಡಿದನು ಕೌರವಾನುಜನ ೩೮
ಸಾಕಿದೇತಕೆ ಮಲ್ಲ ಶ್ರಮದಲಿ
ನೂಕಿನೋಡುವೆವಿನ್ನು ಕೈದುಗ
ಳೇಕೆ ದೃಢಮುಷ್ಠಿ ಪ್ರಹಾರ ಪ್ರಕಟಸತ್ವರಿಗೆ
ಈ ಕುಮಾರಕರೊಳಗೆ ನೀನೇ
ಜೋಕೆಯುಳ್ಳವನಹೆ ನಿಯುದ್ಧ
ವ್ಯಾಕರಣಪಾಂಡಿತ್ಯವೆಮಗುಂಟೆಂದನಾ ಭೀಮ ೩೯
ಏಸನಗ್ಗಿಸಿಕೊಂಬೆ ನಿನಗಿ
ನ್ನೈಸು ಕೈದುಗಳಲ್ಲಿ ಕೃತವ
ಭ್ಯಾಸವಾ ಕೈದುಗಳ ಬಾಯಿಗೆ ನಿನ್ನ ಬೀರುವೆನು
ಏಸು ಬೇಹುದು ಮಲ್ಲತನ ನಿನ
ಗೈಸು ಬಿನ್ನಾಣದಲಿ ನಿನ್ನಯ
ಸೀಸವಾಳವ ಹೊಯ್ವೆನೆಂದನು ನಿನ್ನ ಮಗ ನಗುತ ೪೦
ತರಿಸಿ ಬಿಗಿದರು ಚಲ್ಲಣವ ಠ
ಪ್ಪರವನಳವಡೆಗಟ್ಟಿದರು ಕ
ಸ್ತುರಿಯ ತಿಲಕವನೊಟ್ಟಿದರು ನೊಸಲಿನಲಿ ಮುಡುಹಿನಲಿ
ಕರತಳವ ಮಾರುದ್ದಿ ಭುಜದಲಿ
ಶಿರದಲಂದಕ್ಕಡದ ಮಣ್ಣನು
ಬೆರಳಲುದುರಿಚಿ ಬಾಳುಗೆಂದರು ನೆನೆದು ನಿಂಬಜೆಯ ೪೧
ಸೂಳವಿಸಿದರು ಭುಜಶಿಖರ ನಿ
ಸ್ಸಾಳವನು ನೆಲಕುಣಿಯೆ ದಿಕ್ಕಿನ
ಮೂಲೆ ಬಿರಿಯೆ ಪಯೋಧಿಗಳಲಿ ಪಯೋಧಿ ಪಲ್ಲಟಿಸೆ
ಘೀಳಿಡಲು ಕಿವಿಗಳಲಿ ಸೇನಾ
ಜಾಳವೆರಡರೊಳುಭಯ ದಿಗು ಶುಂ
ಡಾಲ ಕೈಯಿಕ್ಕುವವೊಲಿವರೊತ್ತಿದರು ತೋಳ್ಗಳಲಿ ೪೨
ತೆಗೆದು ಗಳಹತ್ತದಲಿ ಕೊರಳನು
ಬಿಗಿಯೆ ಬಿಡಿಸುವ ತೋರಹತ್ತದ
ಹೊಗುತೆಯನು ವಂಚಿಸುವ ತಳಹತ್ತದಲಿ ತವಕಿಸುವ
ಲಗಡಿಯಲಿ ಲಟಕಟಿಸುವಂತರ
ಲಗಡಿಯಲಿ ಲಾಲಿಸುವ ಡೊಕ್ಕರ
ಣೆಗಳ ಬಿಗುಹಿನ ಬಿಡೆಯ ಬಿನ್ನಾಣದಲಿ ಹೆಣಗಿದರು ೪೩
ಘಾಯವೇ ಜಗಜಟ್ಟಿ ಮಲ್ಲರಿ
ಗಾಯಸವು ಚೊಕ್ಕೆಯವು ಬಿಡುವಡು
ಪಾಯ ಕೇಳೆಂದೊದೆದು ದಂಡೆಯನೊಡ್ಡಿದನು ಭೀಮ
ರಾಯ ಕೇಳೈ ಸಿಡಿಲ ತಿವಿಗುಳ
ತಾಯಿಮನೆಯೋ ಪವನಜನ ಬಲು
ಘಾಯವೋ ಘನ ತೋರಹತ್ತರು ತಿವಿದರುರವಣಿಸಿ ೪೪
ಮೈಗೆ ಮೇಣದ ಹಾಹೆ ಸರಿ ಮುಂ
ಗೈಗೆ ಮೇರುವಿನಿರವು ದೊರೆ ಹೊರ
ಕೈಗೆ ವಜ್ರದ ಹೊಯ್ಲು ಪಡಿಘಟ್ಟಣೆ ಮಹಾದೇವ
ಕೈಗಡಿಯ ಪಟುಭಟರೊಳಗೆ ಬಲು
ಗೈಗಳೆಂದಮರಾಳಿ ಹೊಗಳಲು
ಹೊಯ್ಗುಳಿನ ಹೊಸನಾಟಕವನಭಿನಯಿಸಿ ಕಾದಿದರು ೪೫
ಒಂದು ಭೀಮನ ಮೇಲೆ ನಿನ್ನಯ
ನಂದನನ ಮೇಲೆರಡು ಕೊಂತೀ
ನಂದನಗೆ ನಾಲ್ಕೆಂಟು ನಿನ್ನ ಕುಮಾರನಂಗದಲಿ
ಸಂದಣಿಸಿದವು ಘಾಯ ಘಾಯದ
ಮುಂದೆ ಹೊದರೆದ್ದವು ಸುಘಾಯದ
ಬಂದಿಯಲಿ ಸಿಲುಕಿತ್ತು ನಿನ್ನ ಕುಮಾರನಂಘವಣೆ ೪೬
ತ್ರಾಣವೆಳದಾಯ್ತಖಿಳಶೌರ್ಯದ
ಚೂಣಿ ಮುರಿದುದು ಘರ್ಮಜಲವು
ಗ್ರಾಣಿಸಿತು ಭುಜಬಲವನಂಕುರಿಸಿತ್ತು ರಣಭೀತಿ
ಪ್ರಾಣಪವನನ ಬೀಡುಬಿಟ್ಟುದು
ಗೋಣಿನಲಿ ಗರುವಾಯಿಗೆಡೆ ರಣ
ಹೂಣಿಗನು ಜವಗುಂದಿದನು ದುಶ್ಶಾಸನನು ಬಳಿಕ ೪೭
ಹೊಯ್ದು ತುರುಬನು ಹಿಡಿದು ತಡಗಾ
ಲ್ವೊಯ್ದು ಕೆಡಹಿದನಸಬಡಿದು ಹೊಯ್
ಹೊಯ್ದು ಬಿಡೆ ಖೊಪ್ಪರಿಸಿ ಡೊಕ್ಕರವಿಕ್ಕಿ ರಾಘೆಯಲಿ
ಹಾಯ್ದವಾಲಿಗಳುಸುರ ಪಾಳೆಯ
ವೆಯ್ದೆ ಬಿಟ್ಟುದು ಮೂಗಿನಲಿ
ಕೈಗೆಯ್ದು ತುಡುಕಿದ ಶೋಣಿತಕೆ ಲಟಕಟಿಸಿದನು ಭೀಮ ೪೮
ಹರಿ ಮದೋತ್ಕಟ ದಂತಿಯನು ಡೊ
ಕ್ಕರಿಸಿ ಡಾವರಿಸುವವೊಲಾ ನರ
ಹರಿ ಹಿರಣ್ಯಕಶಿಪುವನಂಕದ ಮೇಲೆ ತೆಗೆವಂತೆ
ಅರಸ ನಿನ್ನ ಕುಮಾರಕನ ನಡು
ತರದೊಳಗೆ ಕೆಡಹಿದನು ಕೊಬ್ಬಿದ
ಮರುಷ ಹರುಷ ನಿಯುದ್ಧದಕ್ಕಡನಾದನಾ ಭೀಮ ೪೯
ಸಿಕ್ಕಿದೆಯಲಾ ಸ್ವಾಮಿದ್ರೋಹಿಯೆ
ಸೊಕ್ಕಿದೆಯಲಾ ಹಿಂದೆ ಜೂಜಿನ
ಲಕ್ಕಜವ ಮಾಡಿದೆಯಲಾ ಮಾನಿನಿಯ ಮುಡಿವಿಡಿದು
ಚುಕ್ಕಿಗಳಲಾ ನಿನ್ನವರು ಕೈ
ಯಿಕ್ಕ ಹೇಳಾ ನಿನ್ನನೊಬ್ಬನ
ನಿಕ್ಕಿ ನೋಡಿದರಕಟೆನುತ ಮೂದಲಿಸಿದನು ಭೀಮ ೫೦
ಉಕ್ಕಿದುದು ತನಿಹರುಷ ಮೈಯೊಳ
ಗೊಕ್ಕವಾ ಪುಳಕಾಂಬು ಕಂಗಳು
ಮುಕ್ಕುಳಿಸಿದುವು ಮುನ್ನ ದುಶ್ಶಾಸನನ ಶೋಣಿತವ
ಬಿಕ್ಕುವಹಿತನನಡಿಗಡಿಗೆ ಎವೆ
ಯಿಕ್ಕದೀಕ್ಷಿಸಿ ತಣಿಯದಿನ್ನಕ
ಸಿಕ್ಕಿ ಸಿಡಿಮಿಡಿಗೊಂಬ ರೋಷವೆ ರಾಜ್ಯಮಾಡೆಂದ ೫೧
ಎತ್ತಿ ಕಳೆದಿರಿ ವನಕೆ ನಾವ್ ನಿ
ಮ್ಮೆತ್ತುಗಳಲಾ ಬೀದಿಯಲಿ ಬೆಂ
ಬತ್ತಿ ಕೊಂಕಿನ ಬೆರಳಲೇಡಿಸಿ ಬಯ್ದು ಭಂಗಿಸಿದೈ
ತೊತ್ತಲಾ ಪಾಂಚಾಲೆ ನಾವ್ ನಿ
ಮ್ಮೆತ್ತುಗಳಲಾ ಹಿಂದೆ ಕಿಚ್ಚಿನ
ತುತ್ತು ವಿಷದುಬ್ಬಟೆಗಳನು ನೆನೆಯೆಂದನಾ ಭೀಮ ೫೨
ಎರಗಿದನು ಕಟವಾಯ ಹಲುಗಳ
ಮುರಿಯಲುಗುರಲಿ ಹೊಯ್ದು ಹೃದಯವ
ನುರೆ ಬಗಿದು ಮೊಗೆಮೊಗೆದು ರಕ್ತವ ಕುಡಿತೆಕುಡಿತೆಯಲಿ
ಸುರಿಸುರಿದು ಸುರಿದಡಿಗಡಿಗೆ ಚ
ಪ್ಪಿರಿದು ಚಪ್ಪಿರಿದಿದರ ಮಧುರಕೆ
ನೆರೆವವೇ ಸುಧೆಯಿಕ್ಷುರಸಗಿಸವೆಂದನಾ ಭೀಮ ೫೩
ಆಡಿದುದು ಹುಸಿಯಲ್ಲ ನೀ ಸವಿ
ನೋಡು ಕರ್ಣ ನರೇಂದ್ರ ಕೌರವ
ನೋಡು ಸವಿಯನು ಶಕುನಿ ಕೃಪಕೃತವರ್ಮ ಗುರುಸುತರು
ನೋಡಿರೈ ಹೇವರಿಸುವರೆ ಕೈ
ಮಾಡಿರೈ ನಿಮ್ಮಾತನಳಿವನು
ನೋಡುತಿಹುದೇ ನಿಮಗೆ ನೀತಿಯೆ ಎಂದನಾ ಭೀಮ ೫೪
ಬಿಡಿಸಲಾಗದೆ ಕೈದುಕಾತಿಯ
ರಡಬಳವನೀ ಹುಲಿಯ ಬಾಯಲಿ
ಕೆಡವಿ ಕಳೆದಿರಲಾ ಸುಯೋಧನ ಕರ್ಣ ಗುರುಸುತರು
ಸುಡಲಿ ನಿಮ್ಮನು ಮೊಲೆಗಳಿಲ್ಲದ
ಕಡುಮುಹುಳಿ ನಿಮಗೇಕೆ ನಿಮ್ಮನು
ನುಡಿಸುವವರಾವಲ್ಲೆನುತ ಮದವೇರಿದನು ಭೀಮ ೫೫
ಎಲೆಲೆ ಕೌರವ ಮೋಹರದ ಮಂ
ಡಳಿಕರಿರ ದುಶ್ಶಾಸನನ ತೊ
ಟ್ಟುಳಿಕೆಗಾಂತಿದೆ ಹರಣವಕಟಾ ಕಾಯಲೆಳಸಿರಲಾ
ಸಲಹಿದವನೊಡಹುಟ್ಟಿದೀತನ
ಕೊಲುವೆಡೆಗೆ ಮತವೇ ಮಹೀಶರ
ಕುಲಕೆ ಪಂಥವಿದೇ ಎನುತ ಮೂದಲಿಸಿದನು ಭೀಮ ೫೬
ಏನ ಹೇಳುವೆನರಸ ಕೌರವ
ಸೇನೆ ಗರಹೊಡೆದಂತೆ ಬಹಳಾಂ
ಭೋನಿಧಿಯಲದ್ದಂತೆ ಬೆಗಡಿನ ಸೊಗಡ ಸೆರೆವಿಡಿದು
ಮೋನದಲಿ ಮನವಳುಕಿ ಯೋಗ
ಧ್ಯಾನಪರರಾದಂತೆ ಚಿತ್ತ
ಗ್ಲಾನಿಯೊಳಗೆಲೆಮಿಡುಕದಿದ್ದುದು ನಿನ್ನ ಪರಿವಾರ ೫೭
ಅಡಿಗಡಿಗೆ ಕದುಕಿರಿದು ರಕುತವ
ಕುಡಿತೆಯಲಿ ಕುಡಿಕುಡಿದು ಬೆರಳಲಿ
ಮಿಡಿದು ಕದನಸ್ಥಾನದೇವತೆಯರಿಗೆ ಕೈಕೊಳಿಸಿ
ಕುಡಿದು ಮಿಕ್ಕುದನಖಿಳಭೂತಕೆ
ಬಡಿಸಿ ಚಪ್ಪಿರಿದಾರಿ ಬೊಬ್ಬಿರಿ
ದೊಡನೊಡನೆ ನೊರೆನೆತ್ತರೋಕುಳಿಯಾಡಿದನು ಭೀಮ ೫೮
ಎಲವೆಲವೊ ಗುರುಸೂನು ಭೂಮಂ
ಡಲದೊಳಗೆ ನಿಮ್ಮಯ್ಯನೂ ನೀ
ನುಳಿಯೆ ಭಟರಿಲ್ಲೆಂಬ ಗರ್ವದ ಗಿರಿಯನೇರಿಹಿರಿ
ನಿಲುಕಲಾಗದೆ ಕೌರವಾನುಜ
ನುಳಿವು ಸೊಗಸದೆ ನಿನಗೆ ಬಿಲುವಿಡಿ
ದುಳುಹಿರೈ ಲೇಸಹುದೆನುತ ಮೂದಲಿಸಿದನು ಭೀಮ ೫೯
ಎಲೆ ಕೃಪಾಚಾರಿಯ ಸುಯೋಧನ
ನೊಳಗೆ ಸೇರುವೆ ಹಿರಿದು ನಿಮಗೀ
ಖಳನ ಕೊಲೆಯನು ನೀವು ಮನಗೊಟ್ಟೊಲಿದು ನೋಡುವರೆ
ಎಲೆ ಶಕುನಿಯೆಲೆ ಶಲ್ಯ ಎಲೆ ಬಾ
ಹಿಲಿಕ ಕೃತವರ್ಮಾದಿ ವೀರರು
ಸೆಳೆದುಕೊಳಿ ದುಶ್ಶಾಸನನನೆನುತೊರಲಿದನು ಭೀಮ ೬೦
ಪತಿಗೆ ಮಲೆವರಗಂಡನಾಳ್ದಗೆ
ಹಿತವ ಕೌರವಕುಲಕೆ ಕಣು ಗತಿ
ಮತಿಯೆನಿಸಿ ನೀ ಕರ್ಣನೆಂಬುದು ಸಕಲಜನಜನಿತ
ಪತಿಯ ಸಹಸಂಭವನ ಮರಣ
ವ್ಯತಿಕರವ ನೋಡಿದಡೆ ದುಷ್ಕೀ
ರಿತಿಯ ಮೊಳೆ ಹೊಮ್ಮುವವಲೇ ರವಿಸುತನೆ ಕೇಳೆಂದ ೬೧
ಕರೆದು ಮೂದಲಿಸಿದರೆ ರಣಭೀ
ಕರರು ಮರಳುವರವರಿಗೆತ್ತಿದ
ಬಿರುದಿನಗ್ಗದವೀರ ನೋಡುತ್ತಿಹರೆ ಕಲಿಕರ್ಣ
ಹರಣವಿದೆ ದುಶ್ಶಾಸನನ ತೆಗೆ
ಬರಸೆಳೆವ ಬಲುಹುಳ್ಳಡೆನುತು
ಬ್ಬರಿಸಿ ಗಜರಿನ ಗರುವನೊರಲಿದನಹಿತವೀರರಿಗೆ ೬೨
ಆಕೆವಾಳರು ಕರ್ಣಗುರುಸುತ
ರೀ ಕೃಪಾಚಾರಿಯರು ತಾವೇ
ಕೈಕವೀರರು ನಿನ್ನನೊಬ್ಬನನೊಪ್ಪುಗೊಟ್ಟರಲಾ
ಏಕೆ ತರುಬಿದಿರಿವರನಾಹವ
ಭೀಕರರನವಿವೇಕಿಗಳು ಇವ
ರೇಕೆ ನೀವೇಕೆಂದು ದುಶ್ಶಾಸನನ ನೋಡಿದನು ೬೩
ಮರಣ ನೆರೆಹೊರೆಯಾಯ್ತು ನಿನ್ನಯ
ಹರಣವೆನ್ನಂಗಯ್ಯಲಿದೆ ನಿ
ಮ್ಮರಸನನು ಕರೆಸೆಲವೊ ಕಾದಿಸು ನಿನ್ನ ರಕ್ಷಿಸಲಿ
ಅರಿಬಲದೊಳಿದಿರಿಲ್ಲ ನಿಜಮೋ
ಹರದೊಳಗೆ ಮಿಡುಕುಳ್ಳ ವೀರರು
ಮರಳಿಚಲಿ ನಿನ್ನುವನೆನುತ ನೋಡಿದನು ತನ್ನವರ ೬೪
ಎಲವೊ ಧೃಷ್ಟದ್ಯುಮ್ನ ಸಾತ್ಯಕಿ
ಎಲೆ ಶಿಖಂಡಿಪ್ರಮುಖನಾಯಕ
ರಳುಕದಿಹ ಮನವುಳ್ಳಡಿದಿರಾಗಿವನ ಸಲಹುವುದು
ಹಲಬರಲಿ ಫಲವೇನು ದಾನವ
ಕುಲದಿಶಾಪಟಕೃಷ್ಣ ಮುನಿದಡೆ
ಕಳೆದುಕೊಳು ಕೌಮೋದಕಿಯನೆಂದೊದರಿದನು ಭೀಮ ೬೫
ಕೇಳು ಫಲುಗುಣ ಲೋಕಮೂರರೊ
ಳಾಳು ನೀನೆಂದೆಂಬ ಗರ್ವವ
ಪಾಲಿಸುವೊಡಿದಿರಾಗು ತೊಡು ಗಾಂಡಿವದಲಂಬುಗಳ
ಆಳುತನ ನಿನಗುಳ್ಳೊಡಹಿತನ
ಪಾಲಿಸುವೊಡೇಳೆಂದೆನಲು ಜಯ
ಲೋಲ ಸುಗತಿಯೊಳಿಳಿದನರ್ಜುನನಮಳಮಣಿರಥವ ೬೬
ಅಹುದಹುದು ತಪ್ಪೇನು ತಪ್ಪೇ
ನಹಿತದುಶ್ಶಾಸನನ ಸಲಹುವೆ
ನಹಿತಬಲವೆನಗನಿಲಸುತನೆನುತೈದೆ ಬರೆ ಕಂಡು
ಬಹಳ ಭೀತಿಯೊಳಸುರರಿಪು ಸ
ನ್ನಿಹಿತ ಚಾಪವ ಹಿಡಿದು ಮನದು
ಮ್ಮಹವ ಕೆಡಿಸಿ ಕಿರೀಟಿಯನು ನಿಲಿಸಿದನು ರಥದೊಳಗೆ ೬೭
ಅಹುದು ಭೀಮನ ಗೆಲುವ ಭಟನೀ
ನಹೆಯಲೇ ನಾವಂಜುವೆವು ನಿ
ರ್ವಹಿಸಬಹುದೇ ಕಾಲರುದ್ರನ ಕೆಣಕಿ ಕದನದಲಿ
ಸಹಜವಿದು ಸಾಕ್ಷಾದುಮಾಪತಿ
ಯಹ ಕಣಾ ಪವನಜನ ನೋಡಲು
ಬಹಡೆ ನೋಡೆಂದಸುರರಿಪು ನುಡಿದನು ಧನಂಜಯಗೆ ೬೮
ಕಂಡನರ್ಜುನ ತ್ರಿಪುರದಹನದ
ಖಂಡಪರಶುವೊಲಿರ್ದ ಭೀಮನ
ದಂಡಿಯನು ಥಟ್ಟೈಸಿ ಭೂತಗಳೆಡಬಲದೊಳಿರಲು
ಚಂಡಬಲನಹನೈ ವೃಕೋದರ
ಗಂಡುಗಲಿಗಿದಿರಾವನೆನುತಾ
ಖಂಡಲಾತ್ಮಜನೆರಗಿದನು ಮುರವೈರಿಯಂಘ್ರಿಯಲಿ ೬೯
ಉಭಯ ವೀರರ ನೋಡಿ ಸಂಗರ
ರಭಸದಲಿ ಮೂದಲಿಸಿ ಚಾಪ
ಪ್ರಭವ ಚಪಲರ ಚದುರುಗೆಡಿಸಿದ ಭುಜಬಲೋನ್ನತಿಯ
ಸಭೆಯೊಳಾದವಮಾನದಹನ
ಪ್ರಭೆಯ ನಂದಿಸಲಾಯ್ತಲಾ ರಿಪು
ಸುಭಟನುರವೆಂಬಭ್ರಸಂಭವ ರುಧಿರಜಲವೆಂದ ೭೦
ಕೆಡೆದ ಹಗೆಯೊರಲಿನಲಿ ಕಿವಿ ಎಡೆ
ಯುಡುಗದೀಕ್ಷಿಸಿ ಕಂಗಳಾ ಖಳ
ನೊಡಲ ಕಡಿಗೆಡಹಿನಲಿ ಮೈ ರಿಪುಮಾಂಸಗಂಧದಲಿ
ಬಿಡದೆ ನಾಸಿಕ ಖಳನ ರಕುತವ
ಕುಡಿದು ನಾಲಗೆ ಸೊಗಸೆ ಸೊಕ್ಕಿದ
ನೊಡನೊಡನೆ ಪಂಚೇಂದ್ರಿಯ ಪ್ರೀತಿಯಲಿ ಕಲಿಭೀಮ ೭೧
ಘನಪರಾಕ್ರಮಿ ಭೀಮಸೇನಗೆ
ವಿನುತ ಭುಜಗೇಂದ್ರಂಗೆ ದುಶ್ಶಾ
ಸನನ ಜೀವಾನಿಳನ ಪಾರಣೆ ಸಮರಭೂಮಿಯಲಿ
ಮುನಿವನಾರಿವನೊಳಗೆ ಕರುಳಿನ
ಘನ ನಿಶಾಕರಬಿಂಬದುದಯದೊ
ಳನಿಲಜನ ಮುಖ ಕುಮುದ ನಸುನಗೆಯೆಸಳು ಪಸರಿಸಿತು ೭೨
ಉಕ್ಕಿದುದು ಕಡುಗೋಪ ರಕುತದ
ಸೊಕ್ಕಿನಲಿ ಸೊಗಡೇರಿ ಕಂಗಳ
ಲುಕ್ಕಿದುದು ಕಡುಗೆಂಪು ತೊದಳಿನ ಗಜರು ಘಾಡಿಸಿತು
ಮಿಕ್ಕ ರಕುತವ ಮೊಗೆದು ಬದಿಗಳೊ
ಳೊಕ್ಕ ಕರುಳ್ಗಳನಾಯ್ದು ಮೂಳೆಗ
ಳೊಕ್ಕಿನಲಿ ಕೈಯಿಕ್ಕಿ ರಿಂಗಣಗುಣಿದನಾ ಭೀಮ ೭೩
ಬಳಿಕ ಪರಿತೋಷದಲಿ ಮಾರುತಿ
ಲಲನೆಯಲ್ಲಿಗೆ ಕಳುಹಿದನು ತ
ನ್ನೊಲವಿನಾಹವವಾದುದೈತಹುದೆನಲು ಬೇಗದಲಿ
ನಳಿನಮುಖಿ ನಲವೇರಿ ಮೇಳದ
ಕೆಳದಿಯರು ಕೈಗೊಡಲು ನೇವುರ
ದೆಳಮೊಳಗು ಮೋಹಿಸಲು ಮಾನಿನಿ ಬಂದಳಾಯೆಡೆಗೆ ೭೪
ಮನಸಿಜನ ಮದದಾನೆ ಮೊಗಸಿದ
ಳನುವರಕೆ ಮಝ ಮಾಯೆ ಮೆಚ್ಚಿನ
ಮನದ ಕಡುಹಿನ ಖಾತಿಯೆಂತುಟೊ ಕೌರವನ ಮೇಲೆ
ಎನಲು ದಿವಿಜರು ಝಣಝಣಾಯಿತ
ನಿನದದುರವಣೆ ಮಿಗಲು ಘನಸಂ
ಜನಿತ ಪದತಳಚಲನಕೃತಿಯಿಂದೈದಿದಳು ರಣವ ೭೫
ಅರರೆ ಭೀಮನ ವಿಜಯಲಕ್ಷ್ಮಿಯ
ಬರವೊ ಕೌರವನೃಪನ ಮರಣಾಂ
ಕುರವ ಸೂಚಿಸುವಾತುರಶ್ರೀಸತಿಯ ಸಂಭ್ರಮವೊ
ಅರಿಭಟರಿಗದ್ಭುತವೆನಲು ಭೀ
ಕರರು ದುರ್ಧರವೆಂದೆನಲು ಪಂ
ಕರುಹಮುಖಿ ನಡೆತಂದಳಾ ಪವಮಾನಜನ ಹೊರೆಗೆ ೭೬
ಬರುತ ಕಂಡಳು ಭೀಮಸೇನನ
ಧುರಪರಾಕ್ರಮವಹ್ನಿ ಭುಗಿಲೆಂ
ದರಿಭಯಂಕರ ರೌದ್ರರೂಪಿನೊಳಿರಲು ಬರಲಂಜಿ
ತಿರುಗೆ ಕಂಡನು ಪವನಸುತ ಪಂ
ಕರುಹಮುಖಿಯನು ಕರೆದು ನಿನ್ನಯ
ಭರದ ಬಯಕೆಯಿದಾಯ್ತೆ ದಿಟ ನೋಡೆಂದು ತೋರಿಸಿದ ೭೭
ಆರಿವನು ನೀ ಕೊಟ್ಟ ಭಾಷೆಯ
ಕಾರಣಿಕ ಖಳರೊಳಗಿದಾವನು
ವೀರ ದುಶ್ಶಾಸನ ಕಣಾ ಅಂತಾದಡಾಯ್ತೆನುತ
ಸಾರಿದಳು ಸರಸಿಜವದನೆ ಭ
ರ್ತಾರನನು ನಸುನಗುತ ಚರಣದ
ಚಾರು ನೇವುರವುಲಿಯಲೊದೆದಳು ಖಳನ ಮಸ್ತಕವ ೭೮
ನುಡಿವುದರಿದೇ ನುಡಿದ ಭಾಷೆಯ
ಕಡೆತನಕ ಪೂರೈಸಿ ಮಾಡುವ
ಕಡುಗಲಿಗಳಾರುಂಟು ಜಗದೊಳು ನಿನ್ನ ಹೋಲುವರು
ಮೃಡಪರಾಕ್ರಮಿ ನನ್ನ ಹೋಲುವ
ಮಡದಿಯರು ನಿನ್ನಂದದೊಡೆಯರ
ಪಡೆವುದೇ ಪರಮೈಕಸೌಖ್ಯವಿದೆಂದಳಿಂದುಮುಖಿ ೭೯
ತರುಣಿ ಕುಳ್ಳಿರು ಸ್ವಾಮಿದ್ರೋಹಿಯ
ಕರುಳ ಮುಡಿ ಬಾ ನಿನ್ನ ಖಾತಿಯ
ಪರಿಹರಿಸುವೆನು ಖಳನ ರುಧಿರಸ್ನಾನಕೆಳಸುವರೆ
ಸರಸಿಜಾನನೆ ಕೊಳ್ಳೆನುತ ಖಳ
ನುರವನಿಬ್ಬಗಿಮಾಡಿ ಕುಡಿತೆಯ
ಲರುಣಜಲವನು ಮೊಗೆದು ಮಾನಿನಿಗಿತ್ತನಾ ಭೀಮ ೮೦
ಶೋಣಿತಾಂಬುವಿನಿಂದ ತರುಣಿಯ
ವೇಣಿಯನು ನಾದಿದನು ದಂತ
ಶ್ರೇಣಿಯಲಿ ಬಾಚಿದನು ಬೈತಲೆದೆಗೆದು ಚೆಲುವಿನಲಿ
ರಾಣಿ ಹುಸಿಯದೆ ಹೇಳು ಹೇಳೆ
ನ್ನಾಣೆ ಸೊಗಸೇ ಖಳನ ದಂತ
ಶ್ರೇಣಿ ತವೆ ಪಾವನವೆಯೆಂದನು ಪವನಸುತ ನಗುತ ೮೧
ಮುಡಿಗೆ ಹಾಯ್ದವನುದರರಕ್ತವ
ತೊಡೆದು ಕಬರಿಯ ಕಟ್ಟೆ ಕಟ್ಟುವೆ
ನುಡಿಯನುಡಿದನ ಚರ್ಮವನು ನೀನುಡಿಸಲುಟ್ಟಪೆನು
ಎಡೆಯಲೊಯ್ಯಾರದಲಿ ಕಟ್ಟೆನು
ಮುಡಿಯ ಮಡಿಯುಡೆನೆಂಬ ತೇಜದಿ
ನುಡಿದ ನುಡಿ ಸಲೆ ಸಂದುದೇ ತನ್ನಾಣೆ ಹೇಳೆಂದ ೮೨
ಖಳನ ತೆಳುದೊಗಲುಗಿದು ವಾಸ
ಚ್ಛಲವ ಸಲಿಸಿದನವನ ಜಠರದೊ
ಳೊಳಗರುಳನುಗಿದಬುಜವದನೆಯ ಮುಡಿಗೆ ಮುಡಿಸಿದನು
ತಳುಕಿದನು ಖಳನುರದ ರಕ್ತದ
ತಿಳಕವನು ರಚಿಸಿದನು ಹರುಷದೊ
ಳುಲಿದು ಕೀಚಕವೈರಿ ನೋಡಿದನೊಲಿದು ನಿಜಸತಿಯ ೮೩
ಪಸರಿಸಿದ ಪರಿವಾರ ಶರಧಿಯ
ಮಸಕ ಮಸುಳಿತು ತೊಡೆಯಲಡಗೆಡೆ
ದಸುಹೃದನ ದರುಶನದೊಳಗೆ ಮಸಗಿದವು ಮುಡುಹುಗಳು
ಶಶಿವದನೆಯುತ್ಸಾಹವತಿ ಢಾ
ಳಿಸಿತು ಭೀಮನ ಹರುಷಜಲನಿಧಿ
ವಿಸಟವರಿದುದು ಕೇಳು ಜನಮೇಜಯ ಮಹೀಪಾಲ ೮೪
ಎಡದ ತೊಡೆಯಲಿ ಮಡದಿ ಬಲುವಗೆ
ಯೊಡಲು ಬಲವಂಕದಲಿ ನೆಗಹಿದ
ಕುಡಿವೆರಳ ನಿಡುಗರುಳ ಮಾಲೆಯ ರೌದ್ರರಚನೆಯಲಿ
ಕಡುಮನದ ಖತಿಗಾರ ಭೀಮನ
ಕಡುಹು ಹೋಲುವೆಯಾಯ್ತು ಕಂಭದೊ
ಳೊಡೆದು ಮೂಡಿದ ಮೃಗದ ಮೊಗದ ಮಹಾಸುರಾಂತಕನ ೮೫
ಕೆಲದ ತಲೆಯದ್ರಿಗಳ ಮೂಳೆಯ
ಹೊಳೆವ ಸಾಲಿನ ಸುಂಟಗೆಯ ತೊಂ
ಗಲಿನ ತೋರಣದೊಟ್ಟಿಲಟ್ಟೆಯ ಕರುಳ ಮಾಲೆಗಳ
ತಿಳಿದ ರಕುತದ ಕೊಳನ ಘನಕೊಳು
ಗುಳದ ತೋಪಿನ ನಡುವೆ ಮಾರುತಿ
ಲಲನೆ ಸಹಿತಾಡಿದನು ಶೋಣಿತವಾರಿಯೋಕುಳಿಯ ೮೬
ಕೊಳುಗುಳದ ಜಯಲಕ್ಷ್ಮಿಗಾಯಿತು
ಚಲನಸುತನಲಿ ಮದುವೆಯೆನೆ ಮಂ
ಗಳಮುಹೂರ್ತಕದೊಳಗೆ ಮುಳುಗಿದ ಘಳಿಗೆವಟ್ಟಲೆನೆ
ತಲೆ ಕಪಾಲದ ಸಾಲಶೋಣಿತ
ಜಲದಲಂದೊಪ್ಪಿದವು ರಣದೊಳು
ಕಳದೊಳದ್ಭುತರಚನೆ ಮಿಗೆ ಸೌರಂಭ ರಂಜಿಸಿತು ೮೭
ಉಡಿದು ಕೆಡೆದ ಸಿತಾತಪತ್ರದ
ನಡುವೆ ಹರಿಸಾಲಿನ ಕಪಾಲದ
ಗಡಣವಿರೆ ಚೆಲುವಾಯ್ತು ಜನಮೇಜಯಮಹೀಪಾಲ
ಅಡಗನಂತಕಗಗಲ ತಂದುಣ
ಬಡಿಸಲಿಕ್ಕಿದ ತಳಿಗೆಯೊಳು ಸಂ
ಗಡಿಸಿದವು ಕೆಲವಟ್ಟಲೆನೆ ರಂಜಿಸಿತು ರಣಭೂಮಿ ೮೮
ಸರಳ ತುದಿಹಿಳುಕಿನಲಿ ಸಬಳದ
ಸುರಗಿಗಳ ಸೂನಗಿಯ ಬಂಡಿಯ
ಶರಗಳಲಿ ಸಿಲುಕಿರ್ದ ಸುಭಟರ ಕಡಿಕು ಮೆರೆದಿರಲು
ಅರರೆ ಜವನಂಗಡಿಯೊಳಿಕ್ಕಿದ
ತರತರದೊಳಿಹ ಪಸರವೆನೆ ಸಿಂ
ಗರಿಸಿತೈ ರಣಭೂಮಿ ಜನಮೇಜಯ ಮಹೀಪಾಲ ೮೯
ಸಿಡಿದ ಕಣ್ಣಾಲಿಗಳು ಜವನಂ
ಗಡಿಯ ನೀಲದ ಹಸರದಂತಿರ
ಲಡಗು ಮೆರೆದುದು ಸೂನೆಗಾರರ ಹಸರದಂದದಲಿ
ಹೊಡೆಗೆಡೆದ ಗಜದಟ್ಟೆ ರಕುತದ
ಕಡಲೊಳದ್ದವು ಬೀತರಸುಗಳ
ಪಡಗು ಜವಲೋಕಕ್ಕೆ ಜಂಗುಳಿಸಿರ್ದುವೆಂಬಂತೆ ೯೦
ಬಂದ ತೊರೆಗಳ ಕುಡಿದೆನತಿ ಢಗೆ
ಯಿಂದ ಸಕಲ ಸರೋರುಹಾಂಬುವ
ನೊಂದೆ ಶ್ವಾಸದಲೀಂಟಿದೆನು ಶಂಕಿಸದು ಕೋಪಾಗ್ನಿ
ಇಂದು ದುಶ್ಶಾಸನನ ಶೋಣಿತ
ದೊಂದು ಕುಡಿತೆಯಲಾ ಮಹಾಶಿಖಿ
ನಂದಿತೇನಿದು ಚಿತ್ರವಲ್ಲಾ ಸೂತ ಹೇಳೆಂದ ೯೧
ಇವನ ನೆತ್ತರ ಕುಡಿವ ರಿಪುಕೌ
ರವರ ನೂರ್ವರ ಕಡಿವ ಭಾಷೆಗ
ಳೆವಗೆ ಪೂರಾಯವು ಸುಯೋಧನಹರಣವೊಂದುಳಿಯೆ
ಅವನಿ ಜಳ ಶಿಖಿ ಪವನ ಪುಷ್ಕರ
ದಿವಿಜ ದನುಜೋರಗಮುಖಾಖಿಳ
ಭುವನಜನ ನೀವ್ ಕೇಳಿಯೆಂದನು ಭೀಮ ಮೊಗನೆಗಹಿ ೯೨
ಮಡದಿಯನು ಕಳುಹಿದನು ಕೆಳದಿಯ
ರೊಡನೆ ನಡೆತರೆ ನಾಕುಕಡೆಯಲಿ
ಹಿಡಿದ ಜವನಿಕೆಗಳಲಿ ಜಲರುಹವದನೆ ಗಮಿಸಿದಳು
ತುಡುಕಿ ವಾಮಾಂಘ್ರಿಯಲಿ ಹಗೆಯನು
ಮಡದಲೊದೆದನು ಬಳಿಕ ಕೌರವ
ಪಡೆಯ ಪವನಜ ಕೊಟ್ಟನಂತಕಪುರವರಾಂತರಕೆ ೯೩
ಅರಿಯ ಹೆಣನನು ಹಾಯ್ಕಿ ನೊರೆನೆ
ತ್ತರಲಿ ಬೊಟ್ಟಿಟ್ಟನು ವರೂಥದ
ಹೊರೆಗೆ ಬಂದನು ಕಳಶಜಲದಲಿ ತೊಳೆದು ಕರಪದವ
ಪರಿಹೃತಶ್ರಮನಾಗಿ ವರಕ
ರ್ಪುರದ ಕಸ್ತುರಿಗಂಧಲೇಪವ
ನೊರಸಿ ಹೊಸಮಡಿವರ್ಗದಲಿ ರಂಜಿಸಿದನಾ ಭೀಮ ೯೪
ವೀಳೆಯವ ಕೊಂಡನು ವರೂಥದ
ಮೇಲುವಲಗೆಯ ಗದ್ದುಗೆಗೆ ರಿಪು
ಕಾಲಭೈರವನಡರಿದನು ತುಡುಕಿದನು ನಿಜಧನುವ
ಕಾಳೆಗಕೆ ಕಡೆಹಾರವೇ ತೆಗೆ
ಯಾಳನಾಗಲಿ ಬಂದು ಕುರುಭೂ
ಪಾಲ ಬೀಳಲಿ ಧರ್ಮರಾಯನ ಚರಣಕಮಲದಲಿ ೯೫
ಎನುತ ಬಿಟ್ಟನು ರಥವ ದುರಿಯೋ
ಧನನ ಮೋಹರಕಾಗಿ ಬಂಡಿಯ
ಬಿನುಗುಗಳು ಕೈದೋರಿರೈ ಪುನ್ನಾಮನಾರಿಯರು
ಅನುಜರಾವೆಡೆ ಕರೆಸು ಕೌರವ
ಜನಪ ಕರ್ಣಾದಿಗಳ ಬಿಂಕವ
ನೆನಗೆ ತೋರಾಯೆನುತ ಮೊಳಗಿದನರಸನಿದಿರಿನಲಿ ೯೬
ನಿಯತ ಜಯಲುಬ್ಧಕನು ರಣಭೂ
ಮಿಯಲಿ ಹರಿಸಲು ಜಯದ ಸಿರಿಯನು
ಭಯವಿಹೀನರು ಬೆರಗುಗೊಂಡರು ಭೀಮನುರವಣೆಗೆ
ಹಯದ ವಾಘೆಯನಿಳುಹಿದರು ಮ
ನ್ನೆಯರು ಮನಗುಂದಿದರು ಕುರುಸೇ
ನೆಯಲಿ ಕಾಣಿಸಲಾದುದಪಜಯಸಿರಿಯ ಸಂಭ್ರಮವು ೯೭
ಬೆಟ್ಟವಾದವು ಬಿಸುಟ ಕೈದುಗ
ಳೊಟ್ಟಿಲಾದುವು ಸಿಂಧಸೆಳೆ ರಥ
ವಿಟ್ಟೆಡೆಗಳಲಿ ಮಿಸುಕಲಸದಳವಾದುದನಿಲಂಗೆ
ಥಟ್ಟು ಮುರಿದುದು ಪಟುಭಟರು ಧೃತಿ
ಗೆಟ್ಟು ದೆಸೆದೆಸೆಗಳಲಿ ಮಿಗೆ ಸಾ
ಲಿಟ್ಟು ಸರಿದುದು ಕೇಳು ಜನಮೇಜಯ ಮಹೀಪಾಲ ೯೮
ಬಿಸುಟರಮಲಚ್ಛತ್ರವನು ಕೂ
ರಸಿಯನೀಡಾಡಿದರು ರಾಯರು
ಮುಸುಡ ತಿರುಹುತ ಮಕುಟವರ್ಧನಕೋಟಿ ಸಮರದಲಿ
ಜಸವ ಮಾರಿದರಾಯುಧಂಗಳ
ಹೆಸರ ವೀರರು ಬಾಹುಬಲಸಾ
ಹಸರು ಕಂಗೆಟ್ಟೋಡಿದರು ಪವನಜನ ಸಮರದಲಿ ೯೯
ಬಲ ಮುರಿದು ಬರುತಿರ್ದುದೈ ಕಡೆ
ಜಲಧಿಯ ತೆರೆ ತಿರುಗಿದಂತಿರೆ
ತಲೆಮುಸುಕಿನಲಿ ನೋಟದುರವಣೆಕಾರ ನಾಯಕರು
ನೆಲೆದೆಗೆದು ನಮ್ಮವರು ನೃಪನರ
ನೆಲೆಗೆ ಸೇರದೆ ಸರಿಯೆ ಕಂಡನು
ನಳಿನಮಿತ್ರನ ಮೊಮ್ಮ ತಡೆದನು ಭೀಮನುರವಣೆಯ ೧೦೦
ಸಂಕ್ಷಿಪ್ತ ಭಾವ
ದುಶ್ಶಾಸನನನ್ನು ಕೊಲ್ಲುವ ಮೂಲಕ ಭೀಮ ತನ್ನ ಪ್ರತಿಜ್ಞೆಯನ್ನು ಪೂರೈಸಿದ್ದು.
ಭೀಮನ ಸಾಹಸದ ಮುಂದೆ ಕೌರವನ ಸೈನ್ಯ ತಲೆಕೆಳಗಾಯಿತು. ದುರ್ಯೋಧನನು ಎಲ್ಲರನ್ನೂಒಟ್ಟು ಕೂಡಿಸಿ ಕರ್ಪುರ ವೀಳಯ, ಉಡುಗೊರೆಗಳನ್ನು ಕೊಟ್ಟು ಮನ್ನಿಸಿ ಕಳಿಸಿದನು. ಕಾಲಾಳುಮುಂತಾದವರು ನನಗೆ ಬೇಕಿಲ್ಲ. ಕರೆಯಿರಿ ಕುರುವೀರನ ಅನುಜರನ್ನು ಎಂದು ಆರ್ಭಟಿಸಿದನುಭೀಮ. ತನ್ನ ಸುತ್ತ ನೆರೆದ ಸೈನ್ಯವನ್ನು ಸೀದಾ ಸ್ವರ್ಗಕ್ಕೆ ಕಳಿಸಿದನು. ಹೆಣಗಳ ರಾಶಿ ಬೆಟ್ಟವಾಯಿತು. ಗಾಳಿಯೂ ನುಸುಳಲು ಆಸ್ಪದವಿಲ್ಲದಂತಾಗಿ ರಕ್ತದ ಹೊಳೆ ಹರಿಯಿತು. ಗದೆಯಿಂದ, ಹಲಗೆಯಿಂದ, ಕಠಾರಿಯಿಂದ, ಬಾಣಗಳಿಂದ ಕೊಲ್ಲುತ್ತಾ ಹೋದ ಪರಿಯನ್ನು ಬಣ್ಣಿಸಲಾರೆನೆಂದಸಂಜಯ.
ಒಟ್ಟು ತೊಂಬತ್ತೆಂಟು ಜನ ಕೌರವರು ಕಾಲನೆಡೆಗೆ ಸಂದರು. ಇನ್ನು ಉಳಿದಿರುವ ಇಬ್ಬರನ್ನೂ ಬಹುಬೇಗನೆ ಯಮನೆಡೆಗೆ ಕಳಿಸುವೆನೆಂದನು. ದುಶ್ಶಾಸನನು ಬಹಳ ಕ್ರೋಧದಿಂದ ಇವನ ಬೆನ್ನುಹತ್ತಿದನು. ಎರಡೂ ಪಕ್ಷದವರು ನೋಡಿ ಹೊಗಳುವಂತೆ ಇವರಿಬ್ಬರ ಕಾದಾಟ ಮೊದಲಾಯಿತು. ಸರಳುಗಳು ಸವೆಯುವವರೆಗೂ ಹೊಡೆದರು. ಖಡ್ಗ, ಕಠಾರಿ, ದಂಡೆ ಮೊದಲಾದ ಆಯುಧಗಳನ್ನುಬಳಸಿ ಕಾದಿದರು. ಇಬ್ಬರ ಮೈಯಲ್ಲಿಯೂ ಘಾಯಗಳಾಗಿ ರಕ್ತವು ಸುರಿಯಿತು. ಕೊನೆಯಲ್ಲಿಮಲ್ಲಯುದ್ಧಕ್ಕೆ ಇಬ್ಬರೂ ಸಿದ್ಧರಾದರು.
ವೀರಗಚ್ಚೆಯನ್ನು ಹಾಕಿ, ತಿಲಕವಿಟ್ಟು ಭೂಮಿಗೆ ನಮಿಸಿ ಸಿದ್ಧರಾದರು. ವಿವಿಧ ಬಗೆಯವರಸೆಗಳನ್ನು ಹಾಕುತ್ತ ಒಬ್ಬರು ಇನ್ನೊಬ್ಬರನ್ನು ಮೆಟ್ಟುತ್ತ ಹೊಡೆದಾಡಿದರು. ಭೂಮಿ ನಡುಗಿತು. ಕೊನೆಕೊನೆಗೆ ದುಶ್ಶಾಸನನ ಶಕ್ತಿಯು ಕುಂದುತ್ತ ಬಂದಿತು. ಆಗ ಅವನನ್ನು ಮೆಟ್ಟಿ ಹಿಡಿದುಕರುಳನ್ನು ಬಗೆದ ನರಸಿಂಹನಾದನು ಭೀಮ.
ಸ್ವಾಮಿದ್ರೋಹಿಯು ಸಿಕ್ಕಿದನೆಂದು ಸಂತೋಷಪಡುತ್ತ ಹಿಂದೆ ಆದ ಅವಮಾನಗಳನ್ನು ನೆನೆದುಅದನ್ನು ಎತ್ತಿ ಹೇಳಿ ಮೂದಲಿಸುತ್ತ ಸುರಿಸುರಿದು ಸುರಿದು ಕುಡಿದ ಅವನ ರಕ್ತವನ್ನು ಎನ್ನುವಲ್ಲಿ ಆದೃಶ್ಯದ ಭೀಕರತೆ, ಮೂರು ಬಾರಿ ಸುರಿದು ಎಂದು ಹೇಳಿರುವ ರೀತಿಯಲ್ಲಿಯೇ ನಮಗೆಅರಿವಾಗುತ್ತದೆ.
ಅವನನ್ನು ಬಿಡಿಸಿಕೊಳ್ಳುವ ವೀರರು ಯಾರಾದರೂ ಇದ್ದರೆ ಬನ್ನಿ ಎಂದು ಗುರುಸುತ, ಕೃಪ, ಕೃತವರ್ಮ ಮುಂತಾದವರನ್ನು ಕೂಗಿ ಕರೆದನು ಭೀಮ. ಯಾರಿಗೂ ಧೈರ್ಯವಾಗಲಿಲ್ಲ. ಕರುಳುಗಳನ್ನು ಎಳೆದು ತೆಗೆದು ಮದವೇರಿದ ಭೀಮ. ತನ್ನ ಕಡೆಯವರೂ ಯಾರಾದರೂ ಇವನನ್ನುರಕ್ಷಿಸುವುದಿದ್ದರೆ ಬನ್ನಿರೆಂದ. ಪಾರ್ಥನು ಮನಸ್ಸು ಮಾಡುತ್ತಿದ್ದ. ಆ ಕ್ಷಣದಲ್ಲಿ ಕೃಷ್ಣನು ಅವನನ್ನುತಡೆದು ರಥದಲ್ಲಿ ಕುಳ್ಳಿರಿಸಿದ. ಕಾಲರುದ್ರನ ರೂಪವನ್ನು ಭೀಮನಲ್ಲಿ ಕಂಡರು.
ನಂತರ ದ್ರೌಪದಿಗೆ ಹೇಳಿಕಳಿಸಿದ ಪವಮಾನಸುತನು ದುಶ್ಶಾಶನನ ರಕ್ತದಿಂದ ಅವಳ ಕೂದಲನ್ನುನಾದಿ ಪ್ರತಿಜ್ಞೆಯನ್ನು ಪೂರೈಸಿದ. ದ್ರೌಪದಿಗೆ ಬಹಳ ತೃಪ್ತಿಯಾಯಿತು. ಭೀಮನನ್ನು ಮನಸಾರೆಹೊಗಳಿದಳು. ಅವಳನ್ನು ಸಂತೈಸಿ ಕಳಿಸಿದ ಭೀಮ ತೃಪ್ತನಾದ. ಅವಳ ಸಿರಿಮುಡಿಯನ್ನು ರಕ್ತದಲ್ಲಿತೋಯಿಸಿ, ದಂತಶ್ರೇಣಿಯಲಿ ಬಾಚಿದ ದೃಶ್ಯ ಮರೆಯಲಾಗದ್ದು.
ಇನ್ನು ದುರ್ಯೋಧನ ಒಬ್ಬ ಉಳಿದಿರುವನು. ಅವನನ್ನು ಕೊಂದು ತನ್ನ ಮತ್ತೊಂದು ಪ್ರತಿಜ್ಞೆಪೂರೈಸಿಕೊಳ್ಳಬೇಕೆಂಬ ಆಸೆಯಲ್ಲಿ ರಣಭಯಂಕರ ಕಲಿಭೀಮ ಮತ್ತೆ ರಣದತ್ತ ತಿರುಗಿದ. ಕೈಗಳನ್ನು ತೊಳೆದು ವೀಳಯವನ್ನು ಹಾಕಿಕೊಂಡು ಮಡಿವಸ್ತ್ರವನ್ನು ಧರಿಸಿ ಸಿದ್ಧನಾದನು. ಆಯುಧಗಳ ಬೆಟ್ಟವೇ ಸೃಷ್ಟಿಯಾಯಿತು. ಎಲ್ಲೆಲ್ಲಿಯೂ ಭೀಮನಿಗೆ ಜಯಜಯಕಾರ ಮೊಳಗಿತು. ಕೌರವನ ಕಡೆಯವರು ಕಂಗೆಟ್ಟು ಓಡಿದರು. ಆಗ ಕರ್ಣನ ಮಗ ವೃಷಸೇನನು ಭೀಮನಉಪಟಳವನ್ನು ತಡೆಯಲು ಎದುರಾದನು.
ಕಾಮೆಂಟ್ಗಳು