ಐಕ್ಯಗಾನ
ಐಕ್ಯಗಾನ
ಸಾಹಿತ್ಯ: ಕಯ್ಯಾರ ಕಿಞ್ಞಣ್ಣ ರೈ
ಐಕ್ಯವೊಂದೇ ಮಂತ್ರ,
ಐಕ್ಯದಿಂದೆ ಸ್ವತಂತ್ರ,
ಐಕ್ಯಗಾನದಿ ರಾಷ್ಟ್ರ ತೇಲುತಿರಲಿ!
‘ಭಾರತದಿ ಮಮ ಜನ್ಮ
ಸ್ವಾತಂತ್ರ್ಯವೇ ಧರ್ಮ’
ಒಕ್ಕೊರಲಿನುದ್ಘೋಷ ಕೇಳುತಿರಲಿ! ||1||
ಹೊಲೆಯರೇ ಬ್ರಾಹ್ಮಣರೆ,
ಮುಸ್ಲಿಮರೆ ಕ್ರಿಶ್ಚನರೆ,
ಎಲ್ಲರೂ ನಮ್ಮವರೆ ಎದೆಯರಳಲಿ!
‘ರಾಷ್ಟ್ರವೊಂದೇ ಜೀವ’
ಎಂದು ಸಾರಿರಿ, ಯಾವ
ರಕ್ಕಸರು ಇದಿರಿಲ್ಲ ನಾವ್ ಕಡುಗಲಿ! ||2||
ಅರೆಹೊಟ್ಟೆಯುಂಡ ನಾವ್,
ಬರಿ ಚಿಂದಿ ತೊಟ್ಟ ನಾವ್,
ಸುಲಿಗೆಗೊಳಗಾದ ನಾವ್ ಎಲ್ಲರೊಂದೇ!
ಆಳು ಹೋಳಾಗಿರಲು,
ಬಾಳು ಗೋಳಾಗಿರಲು,
ಮೇಳು ಕೀಳೇನುಂಟು? ಎಲ್ಲರೊಂದೇ! ||3||
ಭಾರತಿಯ ಬಸುರಿಂದ
ಜಾರಿ ಬಿದ್ದೆವೆ? ಬಂದ
ಭೂರಿ ಬವಣೆಗಳನ್ನು ನೆನೆಯಿರೊಮ್ಮೆ!
ನೆನೆನೆನೆದು ದಿನದಿನವು,
ದುಡಿದುಡಿದು ಜನಜನವು,
ಭಾರತದ ಸ್ವಾತಂತ್ರ್ಯ ಮೆರೆಸಿ, ಹೆಮ್ಮೆ! ||4||
ಅಜ್ಞಾನ ಪಂಕದಲಿ
ಅದ್ದಿರುವ ಜನರಲ್ಲಿ
ಮತಭೇದ ಬರಲುಂಟೆ? ಎಲ್ಲರೊಂದೇ!
ಪಕ್ಷವೇ? ಪಂಥವೇ?
ಜಾತಿಯೇ? ನೀತಿಯೇ?
ಮೌಢ್ಯ ಮುರಿಯುವ ಬನ್ನಿ; ಎಲ್ಲರೊಂದೇ! ||5||
ಸ್ವಾತಂತ್ರ್ಯ ಪಡೆದಿಹೆವು
ತಲೆಯೆತ್ತಿ ನಡೆಯುವೆವು
ವಜ್ರದೇಹಿಗಳಾವು; ಬನ್ನಿರೆಲ್ಲ!
ಸ್ವಾತಂತ್ರ್ಯವೇ ಪಕ್ಷ
ಸ್ವಾತಂತ್ರ್ಯವೇ ಪಂಥ
ಸ್ವಾತಂತ್ರ್ಯವೇ ಜಾತಿ ಎನ್ನಿರೆಲ್ಲ! ||6||
ಭಾರತದ ಬಿಡುಗಡೆಗೆ
ಹೋರಾಡಿರುವ ನಮಗೆ
ಯಾರ ಭಯ? ನಾವಿಂದು ಮುಂದಾಗಿರೆ!
ತೇಲುವೆವೊ, ಮುಳುಗುವೆವೊ
ಏಳುವೆವೊ, ಬೀಳುವೆವೊ
ಎಲ್ಲರೂ ಒಮ್ಮೆಗೇ ಒಂದಾಗಿರೆ! ||7||
ಐಕ್ಯದಮೃತದ ರಸಕೆ
ಜೀವಜೀವದ ಬೆಸುಗೆ
ಕೂಡಿ ಬರೆ ಭೀಮ ಬಲ ನಮ್ಮೊಳುಂಟು!
ಹದಿನಾಲ್ಕು ಲೋಕವನು
ಸಪ್ತ ಸಾಗರವನ್ನು,
ಗೆದ್ದು ದಾಟುವ ಶಕ್ತಿ ವೇಗವುಂಟು! ||8||
ತಿಳಿ ನೀರ, ಸವಿ ಹಣ್ಣ
ಗಂಧ ಮಂದಾನಿಲನ
ನೀಡುವಳು ನಮಗೆಲ್ಲ ಪುಣ್ಯಧರಣಿ!
ಮಂದಸ್ಮಿತೆಯು ಮಧುರ-
ಭಾಷಿಣಿಯು, ಭೂಷಣೆಯು
ಸಸ್ಯ ಶ್ಯಾಮಲೆ ದೇವಿ ನಮ್ಮ ಜನನಿ! ||9||
ಚೆನ್ನ ಬೆಳ್ದಿಂಗಳಿಂ
ಪುಲಕಿತ ನಿಶಾಮಯೀ
ಸ್ವರ್ಣಗರ್ಭೆಯೆ, ತಾಯೆ! ನಮ್ಮ ಕಾಯೆ!
ಅರಳ್ದ ಹೂ ಗೊಂಚಲಿಂ,
ಚೆಲುವ ದ್ರುಮದಲಗಳಿಂ,
ಸುಖದಾತೆ, ವರದಾತೆ, ನಮ್ಮ ತಾಯೆ! ||10||
ಈ ತಾಯ ಮಕ್ಕಳು
ಬೇರೆ ಬೇರಾಗಲು
ನಾವಾದೆವೊಕ್ಕಲು ಕೇಳಿರೆಲ;
'ಇಡು ಹಜ್ಜೆ, ನಡೆ ಮುಂದೆ,
ಪಡೆ ಪ್ರೇಮಬಲದಿಂದೆ,
ಐಕ್ಯ ಭಾರತ ಜವದೆ’ ಬಾಳಿರೆಲ್ಲ! ||11||
ಜಾತಿ-ಕುಲ-ಮತ-ಕರ್ಮ,
ಕಟ್ಟಳೆ ಕುಹಕ ಧರ್ಮ,
ಕಟ್ಟಿ ಕೂಡಿಸಿ ಕಿಚ್ಚು, ಕೊಟ್ಟು ಸುಡಿರಿ!
ಸೋದರತೆ, ಮಾನವತೆ,
ಸತ್ಯ-ಶಾಂತತೆ, ಸಮತೆ,
ಅಸ್ತಿವಾರದಿ ಜನತೆ ಕಟ್ಟಿ ಬಿಡಿರಿ! ||12||
ಕಾಮೆಂಟ್ಗಳು