ಭಾರತಕಥಾಮಂಜರಿ136
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಕರ್ಣ ಪರ್ವ - ಇಪ್ಪತ್ತಾರನೆಯ ಸಂಧಿ
ಸೂ.
ಚಂಡ ಭುಜಬಲ ವಿಕ್ರಮನ ಮಾ
ರ್ತಂಡತನಯನ ವಿಜಯಸಿರಿ ಮುಂ
ಕೊಂಡು ಮನ್ನಿಸಿ ಭುಜಕೆ ಬಂದಳು ಕಲಿಧನಂಜಯನ
ಕೇಳು ಧೃತರಾಷ್ಟ್ರಾವನಿಪ ನಿ
ನ್ನಾಳ ಜಯಸಿರಿ ಸರ್ಪಬಾಣದ
ಮೇಳೆಯದ ಸೀಮೆಯಲಿ ನಿಂದುದು ಹಲವು ಮಾತೇನು
ಹೇಳಿ ಫಲವೇನಿನ್ನು ಮುಂದಣ
ಕಾಳೆಗದ ಕರ್ಣಾಮೃತದ ಮಳೆ
ಗಾಲ ಮಾದು ವಿಲೋಚನದ ಮಳೆಗಾಲವಾಯ್ತೆಂದ ೧
ಕಳಿದ ಹೂವಿನ ಪರಿಮಳವೊ ಧರೆ
ಗಿಳಿದ ಸೂರ್ಯಪ್ರಭೆಯೊ ಶರದದ
ಹೊಳೆಯೊ ಮೇಘಸ್ಥಿತಿಯೊ ಸುರಪತಿ ಚಾಪ ವಿಭ್ರಮವೊ
ಇಳಿದ ಜವ್ವನದೊಲುಮೆಯೋ ಕುರು
ಬಲವ ಕಂಡೆನು ಜೀಯ ಜಯದ
ಗ್ಗಳಿಕೆಗಳ ಜಾರುಗಳ ನಿನ್ನ ಕುಮಾರನೊಡ್ಡಿನಲಿ ೨
ಇಳಿದುಹೋದಡೆ ಶಲ್ಯನೊಡನ
ಗ್ಗಳಿಕೆ ಹೋಯಿತೆ ಇನ್ನು ಭುಜಬಲ
ವಳಿದುದೇ ಅಸಹಾಯ ಶೂರಗೆ ಪರರ ಹಂಗೇಕೆ
ಗೆಲುವೆ ಹಗೆಯನು ಎನುತ ಮಿಗೆ ಕೈ
ಚಳಕದಲಿ ತೆಗೆದೆಸುವ ತಾವರೆ
ಗೆಳೆಯನಣುಗನ ಧೃತಿಗೆ ಬೆರಗಾಗಿತ್ತು ಸುರಕಟಕ. ೩
ಆಗಳಳಿದುದು ಸರ್ಪಶರ ತಾ
ನಾಗಳೇ ಕುರುರಾಯ ಭುಜವನು
ನೀಗಿದಳು ಜಯವಧು ಧರಾವಧು ಭಾಗ್ಯವಧು ಸಹಿತ
ಆಗಳೇ ಬಿನ್ನೈಸೆನೇ ರಣ
ದಾಗುಹೋಗಿನ ಹೊರಿಗೆಯನು ತಾ
ನೀಗಿ ಬಿಸುಟನು ತನ್ನ ಸತ್ಯಸ್ಥಿತಿಗೆ ಕಲಿಕರ್ಣ ೪
ಆದರೇನದು ಮತ್ತೆ ಕರ್ಣನ
ಕೈದುಕಾರತನಕ್ಕೆ ಸುಭಟರು
ಮೇದಿನಿಯೊಳಾರುಂಟು ಪಡಿ ದೈವಾಭಿಮುಖವುಳಿಯೆ
ಹೋದೆ ಹೋಗಿನ್ನೆನುತ ಕಣೆಗಳ
ಸಾದುಗಳ ತನಿವೀರರಸದಲಿ
ತೇದು ಚಿತ್ರವ ಬರೆದನರ್ಜುನನಂಗಭಿತ್ತಿಯಲಿ ೫
ಮತ್ತೆ ಕೃಷ್ಣನನೆಚ್ಚು ಹನುಮನ
ತೆತ್ತಿಸಿದ ಕೂರಂಬಿನಲಿ ಕೈ
ವರ್ತಿಸಿದನೀರೆಂಟು ಶರವನು ತುರಗದೇಹದಲಿ
ಹೊತ್ತಿದುದು ಕಡುಗೋಪ ವಹ್ನಿಯೊ
ಳಿತ್ತಲಿದೆ ನಿಲ್ಲೆನುತ ಪಾರ್ಥನ
ಮೆತ್ತಿ ನೂರಂಬಿನಲಿ ಪುನರಪಿ ಕಪಿಯನೊಡೆಯೆಚ್ಚ ೬
ನೆಲನ ಬೇಟದ ಬೇಗೆಗೋಸುಗ
ರಳಿವರಿವದಿರು ಪಾಂಡುನಂದನ
ರಳಿಯಲವದಿರ ಬಳಿಯ ವೇಳಾಯಿತನು ಕೃಷ್ಣ ಗಡ
ಅಳಿಯಲಥವಾ ನಿಲಲಿ ಹಣುಹಂ
ಪಲು ಮೆಲಿದು ನೀನಿವರ ಬಲೆಯಲಿ
ಸಿಲುಕಿ ನೊಂದೈ ತಂದೆ ಪವನಜ ಎಂದನಾ ಕರ್ಣ ೭
ಬಾಯಿಬಡಿಕನಲಾ ವೃಥಾ ರಾ
ಧೇಯ ಮದವೇಕಿನ್ನು ನಿನಗಹಿ
ಸಾಯಕದ ಸಾವಿನಲಿ ನೀರಿಳಿಸುವೆನು ನೆತ್ತರಲಿ
ತಾಯ ಬಸುರಿಂಬಿಲ್ಲ ನೀನುಳಿ
ವಾಯತಿಕೆಯಿನ್ನೆಂತು ಕೌರವ
ರಾಯ ನೋಡಲಿ ಕರೆಯೆನುತ ತೆಗೆದೆಚ್ಚನಾ ಪಾರ್ಥ ೮
ಆರು ಶರದಿಂದೆಚ್ಚು ಮಗುಳೀ
ರಾರುಬಾಣದಲೌಕಿ ಮೂವ
ತ್ತಾರು ಮಾರ್ಗಣದಿಂದ ಮುಕ್ಕುರಿಕಿದನು ರಿಪುಭಟನ
ಮೂರುಬಾಣದಲರಿಯ ದೇಹವ
ಕೀರಿದನು ಮತ್ತೆರಡು ಶರದಲಿ
ಜಾರಲೆಚ್ಚನು ಜರೆದು ಕರ್ಣನ ಕರ್ಣಕುಂಡಲವ ೯
ಜೋಡ ಕಡಿದನು ಸೀಸಕವನೀ
ಡಾಡಿದನು ಕೆಲಬಲದ ಕಣೆಗಳ
ನೀಡುಕಾರರನಿಕ್ಕಿದನು ಗರಿಸಹಿತ ಸರಳುಗಿಯೆ
ಹೂಡಿದಂಬಿನ ಹೊದೆಯ ಬಂಡಿಯ
ತೋಡ ಕಡಿದನು ಛತ್ರ ಚಮರದ
ಝಾಡಿಗಳ ತರಿದೊಟ್ಟಿದನು ಕಲಿಪಾರ್ಥ ನಿಮಿಷದಲಿ ೧೦
ಈತನಖ್ಖುಡಿಸುವನೆ ಬಳಕಿನೊ
ಳಾ ತತುಕ್ಷಣವರ್ಜುನನ ಚಮ
ರಾತಪತ್ರವ್ಯೂಹವನು ಕೈದುಗಳ ಬಂಡಿಗಳ
ಘಾತಿಸಿದನೆಡಬಲದ ಸುಭಟ
ವ್ರಾತವನು ಕೆದರಿದನು ಸರಳ ವಿ
ಘಾತಿಯಲಿ ಬಲುಘಾಯವಡೆದನು ಪಾರ್ಥನಡಿಗಡಿಗೆ ೧೧
ಅರಸ ಹೇಳುವುದೇನು ರಾಯನ
ಸಿರಿಯ ಪೈಸರವನು ಸುಯೋಧನ
ನರಸುತನದಾಧಾರ ಮೂಲಸ್ತಂಭ ಭಂಜನವ
ನರನ ಜಯವೆಲ್ಲಿಯದು ದೈವವ
ಮರುಳುಮಾಡಿದರವರು ನಿಮ್ಮಯ
ಧರಣಿ ನಿಮಗನುಚಿತವ ನೆನೆದಳು ಹೇಳಲೇನೆಂದ ೧೨
ಧರೆ ನೆನೆದ ದುಷ್ಕೃತವದೇನೆಂ
ದರಸ ಬೆಸಗೊಂಬೈ ನಿರಂತರ
ಸುರಿವ ರುಧಿರಾಸಾರದಲಿ ಕೆಸರೆದ್ದು ಕಳನೊಳಗೆ
ಹರಿವ ಬಿಂಕದ ರಥದ ಗಾಲಿಯ
ಗರುವತನ ಗಾಳಾಯ್ತಲೇ ಖೊ
ಪ್ಪರಿಸಿ ತಗ್ಗಿತು ತೇರು ತಡೆದುದು ಭಟನ ಸಾಹಸವ ೧೩
ಗಾಲಿಯದ್ದವು ಕೂಡೆ ಯಂತ್ರದ
ಕೀಲುಗಳು ಕಳಚಿದವು ಹಯತತಿ
ತೂಳಿ ಸತ್ವದಲೌಕಿ ಸೆಳೆದವು ಕುಸಿದು ನಿಜಮುಖವ
ಮೇಲು ಮಿಡುಕದು ತೇರು ಕುರುಬಲ
ಜಾಲ ಜರಿದುದು ವೈರಿಬಲದಲಿ
ಸೂಳವಿಸಿದರು ಭುಜವನೊದರಿತು ಬೆರಳ ಬಾಯ್ಗಳಲಿ ೧೪
ಮೂಗಿನಲಿ ಬೆರಳಿಟ್ಟು ಮಕುಟವ
ತೂಗಿ ತೊನೆದನು ಪೂತು ಮಝ ನಿ
ರ್ಭಾಗಧೇಯನು ರಾಯನಕಟಾ ಶಿವ ಮಹಾದೇವ
ಈಗಳಿದು ತಾನೇನು ವಿಧಿ ಬರೆ
ದೋಗಟೆಯೊ ಕುರುವಂಶವಜ್ರದ
ಬೇಗಡೆಯೊ ಮಾಮಾ ಎನುತ ಮರುಗಿದನು ಕಲಿ ಕರ್ಣ ೧೫
ಶಿವನ ಬಲುಹುಂಟೆಂಬೆನೇ ಶಿವ
ನವರ ಕಡೆ ಹರಿಯೆಂಬೆನೇ ಪಾಂ
ಡವರ ಬಂಡಿಯ ಬೋವನಿಂದ್ರಾದ್ಯರು ಸಹಾಯಿಗಳು
ಅವರು ಸಾಕ್ಷಾತರ್ಜುನರು ನ
ಮ್ಮವನಿ ನಮಗುಂಟೆಂಬೆನೇ ಕೌ
ರವನ ಪುಣ್ಯವನರಿಯೆನಿದು ಹದನೆಂದನಾ ಕರ್ಣ ೧೬
ಇಳುಹಿದನು ರಥದೊಳಗೆ ಚಾಪವ
ನಳವಡಿಸಿದನು ಸೆರಗನಲ್ಲಿಂ
ದಿಳಿದು ಗಾಲಿಯನಲುಗಿ ಪಾರ್ಥನ ನೋಡಿ ನಸುನಗುತ
ಎಲೆ ಧನಂಜಯ ಸೈರಿಸುವುದರೆ
ಗಳಿಗೆಯನು ರಥವೆತ್ತಿ ನಿನಗಾ
ನಳವಿಗೊಡುವೆನು ತನ್ನ ಪರಿಯನು ಬಳಿಕ ನೋಡೆಂದ ೧೭
ರೂಡಿಸಿದ ಭಟ ನೀನು ಪಂಥದ
ಪಾಡುಗಳ ಬಲ್ಲವನು ಶಾಸ್ತ್ರವ
ಖೋಡಿಗಳೆವವನಲ್ಲ ಲೌಕಿಕ ವೈದಿಕ ಸ್ಥಿತಿಯ
ನಾಡೆ ಬಲ್ಲಿರಿ ಶಸ್ತ್ರಹೀನರ
ಕೂಡೆ ವಾಹನಹೀನರಲಿ ಕೈ
ಮಾಡಲನುಚಿತವೆಂಬ ಮಾರ್ಗವನೆಂದನಾ ಕರ್ಣ ೧೮
ಎನುತ ಗಾಲಿಯನಲುಗಿ ಕೀಲ
ಚ್ಚಿನಲಿ ಮುಂಗೈಗೊಟ್ಟು ಮೊಳಕಾ
ಲಿನಲಿ ಧರಣಿಯನೌಕಿ ತಗ್ಗಿದ ರಥವ ನೆಗಹುತಿರೆ
ದನುಜರಿಪು ಚಮ್ಮಟಿಗೆಯಲಿ ಫಲು
ಗುಣನ ತಿವಿದನು ನೋಡು ರಾಧಾ
ತನುಜನಿರವನು ಬೇಗಮಾಡೆಂದರ್ಜುನನ ಜರೆದ ೧೯
ಎಸು ಮರುಳೆ ಗಾಂಡೀವಿಯಾಪ
ತ್ತೆಸಗಿದಾಗಳೆ ಹಗೆಯ ಗೆಲುವುದು
ವಸುಮತೀಶರ ನೀತಿ ತೊಡು ತೊಡು ದಿವ್ಯಮಾರ್ಗಣವ
ವಿಷಮವೀರನು ರಥವ ಮೇಳಾ
ಪಿಸದ ಮುನ್ನವೆ ಹರಿವ ನೆನೆ ಸೈ
ರಿಸಿದ ಬಳಿಕೀ ಕರ್ಣ ಕೈಕೊಂಬನೆ ತ್ರಿಯಂಬಕನ ೨೦
ಏನನೆಂಬೆನು ಜೀಯ ಕರ್ಣಂ
ಗೇನಹನೊ ಫಲುಗುಣನು ಬಳಿಕಾ
ದಾನವಾರಿಯ ನುಡಿಯ ಕೇಳಿದು ಕೇಳಿದಾಕ್ಷಣಕೆ
ಗ್ಲಾನಿಯಲಿ ಮುಳುಗಿದನು ಮನದಭಿ
ಮಾನ ಸರ್ಪನ ಕೆಡಹಿ ಧೈರ್ಯನಿ
ಧಾನವನು ಕೈಸೂರೆಗೊಂಡುದು ಶೋಕವರ್ಜುನನ ೨೧
ಮುಕ್ಕಿದನು ಮಹಿಮೆಯನು ಕಂಗಳು
ಮುಕ್ಕುಳಿಸಿದವು ನೀರನಹಿತನೊ
ಳುಕ್ಕುವನುರಾಗದಲಿ ಕೊಂಡನು ಬಳಿಕ ವೀಳೆಯವ
ಸಿಕ್ಕಿದನು ಕರುಣಾಲತಾಂಗಿಯ
ತೆಕ್ಕೆಯಲಿ ನಾನೇನ ಹೇಳುವೆ
ನೊಕ್ಕಲಿಕ್ಕಿತು ಶೋಕವರ್ಜುನನಂತರಂಗದಲಿ ೨೨
ತೇರಿನಲಿ ಚಾಚಿದನು ಮೆಲ್ಲನೆ
ಭಾರಿ ಧನುವನು ಕಯ್ಯ ಕಣೆಗಳ
ನೋರೆಯಲಿ ಸೈತಿರಿಸೆ ಕಂಡನು ಮತ್ತೆ ಮುರವೈರಿ
ಹಾರವೇಕೈ ಕಂಗಳಲಿ ಕ
ಸ್ತೂರಿಯೇಕೈ ಕದಪಿನಲಿ ಶೃಂ
ಗಾರವಿದು ವಿಪರೀತವೇನೈ ಪಾರ್ಥ ಹೇಳೆಂದ ೨೩
ದೇವ ಹಗೆಯಾಗಿರನು ಕರ್ಣನಿ
ದಾವ ಹದನೆಂದರಿಯೆ ಮನದಲಿ
ನೋವು ಮಿಗುವುದು ಕೈಗಳೇಳವು ತುಡುಕುವಡೆ ಧನುವ
ಜೀವವೀತನಮೇಲೆ ಕರಗುವು
ದಾವ ಸಖನೋ ಶತ್ರುವೆಂಬೀ
ಭಾವನೆಯ ಬಗೆ ಬೀಳುಕೊಂಡುದು ಕರ್ಣನಾರೆಂದ ೨೪
ಕೌರವನ ಮೇಲಿಲ್ಲದಗ್ಗದ
ವೈರವೀತನಮೇಲೆ ನಮಗಪ
ಕಾರಿಯೀತನು ಮರಣದನುಸಂಧಾನವಿನ್ನೆಬರ
ವೈರವುಪಶಮಿಸಿತು ಯುಧಿಷ್ಠಿರ
ವೀರನಿಂದಿಮ್ಮಡಿಯ ನೇಹದ
ಭಾರವಣೆ ತೋರುವುದಿದೇನೈ ಕರ್ಣನಾರೆಂದ ೨೫
ಆಸುರದ ವ್ಯಾಮೋಹವಿದು ಡೊ
ಳ್ಳಾಸವೋ ಕೌರವರ ಥಟ್ಟಿನ
ವೈಸಿಕವೊ ನಿಮ್ಮಡಿಯ ಮಾಯಾಮಯದ ಮಾಲೆಗಳೊ
ವಾಸಿ ಬೀತುದು ಛಲಗಿಲದ ಕಾ
ಳಾಸ ಸೋತುದು ಕರ್ಣನಲಿ ಹಿರಿ
ದಾಸೆಯಾಯಿತು ಕೃಷ್ಣ ಕರುಣಿಸು ಕರ್ಣನಾರೆಂದ ೨೬
ಕಾಲಯವನನುಪಾಯದಿಂದವೆ
ಬೀಳಿಸಿದೆ ಮಾಗಧನನಾ ಪರಿ
ಸೀಳಿಸಿದೆ ಭೀಷ್ಮಾದಿಗಳ ಸೋಲಿಸಿದೆ ಸಾಮದಲಿ
ಡಾಳನತಿ ಡೊಂಕಣಿಯ ಠಕ್ಕಿನ
ಠೌಳಿಕಾರನು ನಿನ್ನ ಮಾಯೆಯ
ಹೇಳಲಮ್ಮೆನು ಕೃಷ್ಣ ಕರುಣಿಸು ಕರ್ಣನಾರೆಂದ ೨೭
ಋಷಿಗಳನುಮತದಿಂದ ಕುಂತಿಯ
ಬಸುರಲೇನುದಯಿಸನಲೇ ನೀ
ನಸುರರಿಪು ಬಹು ಕಪಟನಾಟಕ ಸೂತ್ರಧಾರನಲೆ
ವಸುಮತಿಯ ಭಾರವನು ಸಲೆ ಹಿಂ
ಗಿಸುವ ಕೃತ್ಯವು ನಿನ್ನದೆನಗು
ಬ್ಬಸವಿದೇನೆಂದರಿಯೆನಕಟಾ ಕರ್ಣನಾರೆಂದ ೨೮
ಧರೆಯ ಬಿಡುವೆವು ಕುರುಪತಿಗೆ ನಾ
ವರುವರೊಡವುಟ್ಟಿದರು ವಿಪಿನಾಂ
ತರದೊಳಗೆ ಭಜಿಸುವೆವು ನಿನ್ನನು ಭಾವಶುದ್ಧಿಯಲಿ
ತೆರಳುವೀ ಸಿರಿಗೋಸುಗರ ಸೋ
ದರನ ಕೊಲುವೆನೆ ಕೃಷ್ಣ ಕರುಣಿಸು
ಕರುಣಿಸಕಟಾ ಕೃಷ್ಣ ಕರುಣಿಸು ಕರ್ಣನಾರೆಂದ ೨೯
ದೂರುವವರಾವಲ್ಲ ಕರುಣವ
ತೋರಿ ಬಿನ್ನಹಮಾಡಿದೆನು ಹಗೆ
ಯೇರದಿವನಲಿ ಸೇರುವುದು ಸೋದರದ ಸಂಬಂಧ
ಆರೆನೀತನ ಕೊಲೆಗೆ ಹೃದಯವ
ಸೂರೆಗೊಂಡನು ಕರ್ಣನಕಟಾ
ತೋರಿ ನುಡಿಯಾ ಕೃಷ್ಣ ಕರುಣಿಸು ಕರ್ಣನಾರೆಂದ ೩೦
ಅರಸ ಕೇಳೈ ಬಳಿಕ ಪಾರ್ಥನ
ಕರುಣರಸದಾಳಾಪ ವಾಗ್ವಿ
ಸ್ತರಕೆ ಮನದಲಿ ಮರುಗಿದನು ಮುರವೈರಿ ನಸುನಗುತ
ಕೆರಳಿದನು ಮಾತಿನಲಿ ಸುಡು ಬಾ
ಹಿರನಲಾ ನೀ ನಿನ್ನ ವಂಶಕೆ
ಸರಿಯೆ ಸೂತನ ಮಗನಿದೇನೆಂದಸುರರಿಪು ಜರೆದ ೩೧
ವಾಸಿಗಾದುದೆ ಜಾತಿಸಂಕರ
ಬೇಸರಾಯಿತೆ ಧೃತಿಗೆ ಕಲಿತನ
ಕೀಸು ಮೊಲೆಗಳು ಮೂಡಿದವಲಾ ಪಾರ್ಥ ಸಮರದಲಿ
ಹೂಸಕದ ಛಲವೀಯಹಂಕೃತಿ
ಮೀಸಲಳಿದುದೆ ಶಿವಶಿವಾ ನಿ
ರ್ದೋಷದಲಿ ಬಹುದೋಷವಿದು ವಿಪರೀತವಾಯ್ತೆಂದ ೩೨
ಕ್ಷಿತಿಯೊಳೀ ಕ್ಷತ್ರಿಯರ ಧರ್ಮ
ಸ್ಥಿತಿಯನರಿಯಾ ಕೃಷ್ಣ ಚಾಪ
ಚ್ಯುತರನಪಗತವಾಹನರ ಪರಿಮುಕ್ತ ಕೇಶಿಗಳ
ಗತಿವಿಹೀನರ ದೈನ್ಯವಾಚಾ
ಯುತರ ತರು ವಲ್ಮೀಕ ಜಲ ಸಂ
ಗತರನಿರಿವುದು ಧರ್ಮವೇ ನಾವರಿಯೆವಿದನೆಂದ ೩೩
ಹೇಳು ಹೇಳಿನ್ನೊಮ್ಮೆ ಧರ್ಮವ
ಕೇಳಿದರಿಯೆವು ನಿಮ್ಮ ಕಯ್ಯಲಿ
ಕೇಳಲಾಗದೆ ರಾಜಧರ್ಮ ಪುರಾಣ ಸಂಗತಿಯ
ಆಳಿವನಘಾಟವೆ ದೊಠಾರಿಸಿ
ಸೋಲಿಸುವುದೇನರಿದೆ ಬಲುಗೈ
ಯಾಳಲಾ ನೀ ರಣಕೆ ದಿಟ ವಸುದೇವನಾಣೆಂದ ೩೪
ಈಗಲೀ ಧರ್ಮಶ್ರವಣ ನೀ
ನಾಗಳೇರಿಸಿ ನುಡಿದ ಭಾಷೆಗೆ
ಮೂಗುಹೋದುದೆ ಮರೆದಲಾ ಮಾತುಗಳು ಹಳಸುವವೆ
ಹೋಗಲೆಲೆ ಮರುಳೇ ವಿಭಾಡಿಸು
ಬೇಗದಲಿ ಬಹುರಾಜಕಾರ್ಯವ
ನೀಗಳೇ ತಿದ್ದುವೆನು ತೊಲಗಿಸು ಸೂತಜನ ಶಿರವ ೩೫
ಅಕಟ ನಿಷ್ಕರುಣಿಯೆ ವೃಥಾ ಪಾ
ತಕವಿದೇಕೈ ಹೇಳು ಜಯಕಾ
ಮುಕರು ನಾವಲ್ಲದಡೆ ನಿಮಗೇಕೀಸು ನಿರ್ಬಂಧ
ಪ್ರಕಟ ಕುರುವಂಶದಲಿ ಯದುರಾ
ಜಕರೊಡನೆ ಹಗೆಯಿಲ್ಲಲೇ ಮತಿ
ವಿಕಳನಾದೆನು ಕೃಷ್ಣ ಕರ್ಣನ ಕೊಲುವನಲ್ಲೆಂದ ೩೬
ಬಿಸುಟು ಹೋದನು ರಥವ ಸಾರಥಿ
ವಸುಧೆಯಲಿ ರಥವದ್ದು ಕೆಡೆದುದು
ನಿಶಿತಮಾರ್ಗಣವಿಲ್ಲ ಕಯ್ಯಲಿ ದಿವ್ಯಧನುವಿಲ್ಲ
ಎಸುವಡೆಂತೇಳುವುವು ಕಯ್ ನೀ
ಬೆಸಸುವಡೆ ಮನವೆಂತು ಬಂದುದು
ಬಸುರ ಶಿಖಿ ಬಲುಹಾಯ್ತು ಕರ್ಣನ ಕೊಲುವನಲ್ಲೆಂದ ೩೭
ಗುರುವನೆಸುವಡೆ ಮೇಣು ಭೀಷ್ಮನ
ಸರಳ ತಡಿಕೆಗೆ ಚಾಚುವಡೆ ಧಿ
ಕ್ಕರಿಸುವಡೆ ಕೃಪ ಶಲ್ಯ ಸೈಂಧವ ಮುಖ್ಯಬಾಂಧವರ
ತೆರಳಿದೆನೆ ತೇರೈಸಿದೆನೆ ಹೇ
ವರಿಸಿದೆನೆ ಹೋರಿದೆನೆ ಕಲಿತನ
ಕರಗಿತೇನೆಂದರಿಯೆ ಕರ್ಣನ ಕೊಲುವನಲ್ಲೆಂದ ೩೮
ಬಳಿಕ ಭೀಮಾದಿಗಳ ಮನದಲಿ
ಸುಳಿದುದೈ ಸಂದೇಹವೀತನ
ಕೊಲುವುದೇನನುಚಿತವೊ ಮೇಣುಚಿತವೊ ಶಿವಾ ಎನುತ
ಅಳುಕಿದರು ದ್ರೌಪದಿ ಯುಧಿಷ್ಠಿರ
ರೊಳಗೊಳಗೆ ಸಂತಾಪಶಿಖಿಯಲಿ
ತಳಿತ ದುಗುಡದ ಬಿಗಿದ ಬೆರಗಿನೊಳಿದ್ದುದಾಚೆಯಲಿ ೩೯
ಮೊದಲಲೆರಡೊಡ್ಡಿನಲಿ ಸುಮ್ಮಾ
ನದ ಸಘಾಡವ ಕಂಡೆನೀಗಳು
ತುದಿಗೆ ಬರೆವರೆ ಕಂಡೆನಿವರವರೆರಡು ಥಟ್ಟಿನಲಿ
ತುದಿವೆರಳ ಕಂಬನಿಯ ಬಳಸಿದ
ಬೆದರುಗಳ ಕುಕ್ಕುಳಿಸಿದುತ್ಸಾ
ಹದ ವಿಘಾತಿಯ ನಟ್ಟ ಚಿಂತೆಯನರಸ ಕೇಳೆಂದ ೪೦
ಮತ್ತೆ ಜರೆದನು ದನುಜರಿಪು ತಲೆ
ಗುತ್ತಿದನು ಕಲಿ ಪಾರ್ಥನಾತನ
ಕುತ್ತಿ ಬರಸೆಳೆದಂತೆ ಭಂಗಿಸಿದನು ಮುರಧ್ವಂಸಿ
ಒತ್ತುವವು ಫಲುಗುಣನ ನುಡಿ ಮಿಗೆ
ಕೆತ್ತುವವು ಹರಿವಚನವಾತನ
ಚಿತ್ತವನು ಸಂತೈಸಿ ಹರಿ ತಿಳುಹಿದನು ಸಾಮದಲಿ ೪೧
ಎಲೆ ಧನಂಜಯ ನೀನು ಹಿಮಕರ
ಕುಲದ ಸುಕುಮಾರಕನು ಲೋಕದ
ಕುಲವಿಹೀನನು ಕರ್ಣನಿವ ನಿನಗೆಂತು ಸರಿಯಹನು
ತಲೆಯ ಮಾರಿ ಶರೀರವನು ಸಲೆ
ಸಲಹಲೋಸುಗ ಕೌರವನ ತಂ
ಬುಲಕೆ ಕಯ್ಯಾಂತವನು ಬಂಧುವೆ ಪಾರ್ಥ ಹೇಳೆಂದ ೪೨
ಕೇಡಹೊತ್ತಿಸಿ ನಿಮ್ಮ ಬೇಂಟೆಯ
ನಾಡಿಸಿದನಿವ ಜೂಜನಾಡಿಸಿ
ನಾಡ ಕೊಳಿಸಿದ ಹಿಸುಣನಿವ ನಿಮ್ಮೆಲ್ಲರನು ಕೆಡಿಸಿ
ನಾಡ ಸಂಧಾನವನು ನಾವ್ ಮಾ
ತಾಡಲೆಮ್ಮನು ಬಿಗಿಯಲನುವನು
ಮಾಡಿಸಿದನೀ ಕರ್ಣ ನಿಮಗತಿಹಿತವನಹನೆಂದ ೪೩
ಕೊಲ್ಲನೇ ಅಭಿಮನ್ಯುವನು ಹಗೆ
ಯಲ್ಲವೇ ಮಾರುತಿಯ ಕೊರಳನು
ಬಿಲ್ಲ ಕೊಪ್ಪಿನೊಳೆಳೆಯನೇ ಕೆಡೆಯೆಸನೆ ಧರ್ಮಜನ
ಖುಲ್ಲನೀತಿಯ ನೆನೆಯದಿರು ನೀ
ನೆಲ್ಲಿಯವನೀ ವೈರಿ ಕರ್ಣನ
ದೆಲ್ಲಿಯವನೆಸು ಮರುಳೆ ಎಂದನು ನಿಜವ ತೋರಿಸದೆ ೪೪
ಬೀಸಿದನು ನಿಜ ಮಾಯೆಯನು ಡೊ
ಳ್ಳಾಸದಲಿ ಹರಹಿದನು ತಮವನು
ರೋಷವನು ಬಿತ್ತಿದನು ಮನದಲಿ ನರನ ಕಲಿಮಾಡಿ
ಐಸೆ ಬಳಿಕೇನೆನ್ನಖಿಳಗುಣ
ದೋಷ ನಿನ್ನದು ಪುಣ್ಯಪಾಪದ
ವಾಸಿ ನಮಗೇಕೆನುತ ಕೊಂಡನು ಧನುವನಾ ಪಾರ್ಥ ೪೫
ಹಿಡಿ ಧನುವನನುವಾಗು ಸಾಕಿ
ನ್ನೆಡಬಲನ ಹಾರದಿರೆನುತ ಕಯ್
ಗಡಿಯನೆಚ್ಚನು ನೂರು ಶರದಲಿ ಸೂತನಂದನನ
ತೊಡಗಿತೇ ಕಕ್ಕುಲಿತೆ ಮನದಲಿ
ಫಡ ಎನುತ ನೂರಂಬನೆಡೆಯಲಿ
ಕಡಿದು ಬಿಸುಟನು ಸೆಳೆದು ಕಿಗ್ಗಟ್ಟಿನ ಕಠಾರಿಯಲಿ ೪೬
ರಥವ ಸಂತೈಸಿದನು ಬಳಿಕತಿ
ರಥ ಭಯಂಕರನೇರಿದನು ನಿಜ
ರಥವನತಿಹರುಷದಲಿ ತೊಳೆದನು ಚರಣ ಕರತಳವ
ಪೃಥಿವಿ ನೆನೆದಪಕಾರ ಲೋಕ
ಪ್ರಥಿತವಾಯಿತು ಸಾಕು ಬದುಕಲಿ
ಪೃಥೆಯ ಮಕ್ಕಳೆನುತ್ತ ಕೊಂಡನು ನಗುತ ವೀಳೆಯವ ೪೭
ಧನುವ ಕೊಂಡನು ಹಯವ ಜರೆದ
ರ್ಜುನನ ತರುಬಿದನಖಿಳ ಕುರುಬಲ
ವನಧಿಗಭಯವನಿತ್ತು ಮುಸುಕಿದನಂಬಿನಲಿ ನರನ
ಕನಲಿದವು ನಿಸ್ಸಾಳ ರಿಪುನೃಪ
ಜನವ ಬಯ್ದವು ಕಹಳೆ ಬಹುವಿಧ
ನಿನದದಲಿ ಗರ್ಜಿಸಿದವೆರಡೊಡ್ಡಿನಲಿ ಘನವಾದ್ಯ ೪೮
ಅಳುಕಿದನೆ ರಥ ಮುಗ್ಗಿದರೆ ಕಳ
ವಳಿಸಿದನೆ ಶಲ್ಯಾಪಸರಣಕೆ
ಕೆಲಬಲನ ಹಾರಿದನೆ ನರನವಗಡಿಸಿ ಕಾದಿದಡೆ
ಬಲಿಮಥನ ಮಝ ಭಾಪು ಪಾಂಡವ
ಬಲದಿಶಾಪಟ ರಾಯಮದನ
ಪ್ರಳಯಹರ ಭಾಪೆಂದು ಹೊಗಳಿತು ವಂದಿಸಂದೋಹ ೪೯
ಅರಸ ಕೇಳೈ ಜೂಜುಗಾರರ
ಸಿರಿಯ ಸಡಗರ ಕಳಿವಗಲ ತಾ
ವರೆಯ ನಗೆ ಸಜ್ಜನರ ಖಾತಿ ನಿತಂಬಿನೀ ಸ್ನೇಹ
ಪರಮಯೋಗಿಯ ಲೀಲೆ ಕೌರವ
ರರಸನೊಡ್ಡಿನ ಜಯವಿದೀಸರ
ಗರುಡಿಯೊಂದೇ ಶ್ರಮವ ಕೊಡುವುದು ಶಕ್ರಧನುವೆಂದ ೫೦
ಉಬ್ಬಿದನು ನಿನ್ನಾತನಾತನ
ತುಬ್ಬಿನಲಿ ಕುರುಬಲದ ಹರುಷದ
ಜಬ್ಬುರಿಯ ಹುರಿಗೂಡಿ ತೋರಿತು ಚಾರು ಚತುರಂಗ
ತೆಬ್ಬಿ ತುಳುಕುವ ಕಣೆಯ ಕಣೆಯಲಿ
ಹಬ್ಬಿ ಹರೆದುದು ತೋರದಲಿ ಬಲಿ
ದುಬ್ಬುಗವಳದ ಕಣ್ಣುಗಳು ಕರ್ಣಾವಸಾನದಲಿ ೫೧
ಹತ್ತು ಶರದಲಿ ತುರಗವನು ಮೂ
ವತ್ತರಲಿ ಮುರವೈರಿಯನು ತೊಂ
ಬತ್ತರಲಿ ಫಲುಗುಣನನೈವತ್ತಂಬಿನಲಿ ಕಪಿಯ
ಮತ್ತೆ ಮೂವತ್ತರಲಿ ಮಗುಳರು
ವತ್ತರಲಿ ನರರಥವ ನೂರೈ
ವತ್ತು ಶರದಲಿ ಘಾಯಗಾಣಿಸಿದನು ಚತುರ್ಬಲವ ೫೨
ಬಲಜಲಧಿ ಸುಳಿಗೊಂಡು ಪಾರ್ಥನ
ಬಳಿಗೆ ತೆಗೆದುದು ತೆಗೆದುದೀತನ
ಕಲಿತನದ ವಿಕ್ರಮಧನಂಜಯನಾ ಧನಂಜಯನ
ಅಳುಕಿದರು ಭೀಮಾದಿಗಳು ತ
ಲ್ಲಳಿಸಿತಾಚೆಯ ಥಟ್ಟು ಕೌರವ
ದಳದ ಕಳಕಳ ಕೆಟ್ಟುದೊಂದರೆಗಳಿಗೆ ಮಾತ್ರದಲಿ ೫೩
ಸಂಕ್ಷಿಪ್ತ ಭಾವ
Lrphks Kolar
ಕರ್ಣನ ಕಡೆಗಿದ್ದ ವಿಜಯಲಕ್ಷ್ಮಿ ಮನಸ್ಸು ಬದಲಿಸಿ ಅರ್ಜುನನ ಕಡೆಗೆ ಬಂದಳು.
ಶಲ್ಯನೊಡನೆ ಕರ್ಣನ ಅಗ್ಗಳಿಕೆಯೂ ಇಳಿಯಿತು. ಅವನ ದೃಢ ನಿಶ್ಚಯಕ್ಕೆ ಸುರಗಣವು ಬೆರಗಾಯಿತು. ಯಾವಾಗ ಸರ್ಪಶರವಳಿಯಿತೋ ವಿಜಯವಧು ಕುರುರಾಯನ ಭುಜವನ್ನು ಇಳಿದಳು. ಮತ್ತೆ ಧೈರ್ಯ ತಂದುಕೊಂಡು ಕೃಷ್ಣನನ್ನು, ಹನುಮನನ್ನು, ಪಾರ್ಥನನ್ನು ಶರಗಳಿಂದ ನೋಯಿಸತೊಡಗಿದನು. ಸಾಕಷ್ಟು ಶರಗಳಿಂದ ಅರ್ಜುನನೂ ಮರಳಿ ಹೊಡೆದನು. ನಿಮಿಷಾರ್ಧದಲ್ಲಿ ಎಲ್ಲವನ್ನೂ ಪುಡಿಗೈಯ್ದನು. ಹೇಳುವುದೇನು ಅರಸ, ನಿಮ್ಮ ಧರಣಿ ನಿಮಗನುಚಿತವ ನೆನೆದಳು ಎನ್ನಲು ಧೃತರಾಷ್ಟ್ರನು ವಿವರಣೆ ಕೇಳಿದನು.
ರಕ್ತಧಾರೆಯಲ್ಲಿ ಭೂಮಿ ನೆಂದು ಕೆಸರಾಗಿ ಕರ್ಣನ ರಥದ ಗಾಲಿಗಳು ಅದರಲ್ಲಿ ಹೂತುಹೋದವು. ಕುದುರೆಗಳು ಎಳೆಯಲಾರದೆ ಕುಸಿದವು. ವಿಧಿಬರಹಕ್ಕೆ ಯಾರೇನು ಮಾಡುವರು? ಎಲ್ಲ ದೈವಬಲವೂ ಅವರ ಕಡೆಗಿದೆಯೆಂದು ಹಲುಬಿದನು ಕರ್ಣ. ಬಿಲ್ಲನ್ನು ಇಳಿಸಿ ರಥದಿಂದ ಇಳಿದು ರಥದ ಗಾಲಿಯನ್ಬು ಎತ್ತಲು ಪ್ರಯತ್ನಿಸಿದನು.
ಇದೇ ಸಮಯವನ್ನು ಬಳಸಿಕೊಂಡು ಬಾಣ ಪ್ರಯೋಗಿಸೆಂದು ಕೃಷ್ಣನು ಹೇಳಲು ಅರ್ಜುನನು ಒಪ್ಪಲಿಲ್ಲ. ನಿರಾಯುಧನ, ವಾಹನರಹಿತನನ್ನು ಕೊಲ್ಲುವುದು ಅಧರ್ಮವೆಂದು ಅರ್ಜುನನ ಮತ. ಅಲ್ಲದೆ ಆ ಕ್ಷಣದಲ್ಲಿ ಅವನಿಗೆ ಕರ್ಣನ ಮೇಲೆ ಅಂತರಂಗದಲ್ಲಿ ಏನೋ ಮರುಕ. ಸ್ನೇಹ. ಬಂಧುತ್ವದ ಭಾವ ಮೂಡುತ್ತಿದೆ. ವೈರಭಾವವಿಲ್ಲವೆನ್ನುತ್ತಾನೆ. ಈ ಕರ್ಣನ ಮೇಲೆ ಏಕೆ ಸ್ನೇಹ ಬಾವ ಮೂಡುತ್ತಿದೆ? ಈ ಕರ್ಣ ಯಾರು? ಎಂದು ಕೃಷ್ಣನನ್ನು ಪದೇ ಪದೇ ಕೇಳಿದ. ನೀನು ಎಲ್ಲ ಬಲ್ಲವನು. ಕಪಟನಾಟಕ ಸೂತ್ರಧಾರಿ. ದಯವಿಟ್ಟು ಹೇಳು ಎಂದು ಬೇಡಿದನು. ಇವನಲ್ಲಿ ಎನಗೆ ಸೋದರಭಾವ ಮೂಡುತ್ತಿದೆ. ಈ ರಾಜ್ಯ ಬೇಡ. ಕರುಣಿಸು ಕೃಷ್ಣಾ ಎಂದು ಪರಿಪರಿಯಾಗಿ ಕೇಳಿದ ಅರ್ಜುನ. ಆದರೆ ಕೃಷ್ಣ ಹೇಳಲಿಲ್ಲ. ಅವರುಗಳಿಗಿಲ್ಲದ ಯುದ್ಧ ಧರ್ಮ ನಿನಗೆ ಕಾಡಿಸುವುದೇ ಎಲೆ ಮರುಳೆ, ಹೋಗು ಸೂತನ ಸುತನ ಶಿರವನ್ನು ತೊಲಗಿಸು ಎಂದು ಗದರಿಸಿದ ಕೃಷ್ಣ. ಆದರೂ ಅರ್ಜುನ ಕರ್ಣನನ್ನು ಕೊಲುವನಲ್ಲೆಂದ.
ಮತ್ತೆ ಪಾರ್ಥನನ್ನು ಜರಿದನು ಕೃಷ್ಣ. ಕರ್ಣನು ನಿನಗೆ ಯಾವುದರಲ್ಲಿಯೂ ಸಮನಲ್ಲವೆಂದ. ಕೇಡನ್ನು ಹೊತ್ತಿಸಿದವ. ಜೂಜಿಗೆ ಬೆಂಬಲಿಗನಾದ. ಸಂಧಾನವನ್ನು ವಿರೋಧಿಸಿದ. ಇವನು ನಿನಗೆ ಹಿತನೋ ಎಂದು ಹೀಯಾಳಿಸಿದ. ಅಭಿಮನ್ಯುವನ್ನು ಕೊಲ್ಲಲಿಲ್ಲವೇ, ಧರ್ಮಜನನ್ನು ನೋಯಿಸಲಿಲ್ಲವೇ, ಮರೆತೆಯಾ ಎನ್ನುತ್ತ ಅರ್ಜುನನ ಮೇಲೆ ಮಾಯೆಯನ್ನು ಬೀಸಿದನು. ಅರ್ಜುನ ಸರಳನ್ನು ಪ್ರಯೋಗಿಸಲು ಕರ್ಣನು ಇದು ಅಧರ್ಮವೆಂದನು. ಕಟಾರಿಯಿಂದ ಸರಳನ್ನು ನಿವಾರಿಸಿ ರಥವನ್ನು ಸರಿಪಡಿಸಿ ಏರಿದನು. ಏನೇ ತೊಂದರೆ ಬಂದರೂ ಹೆದರಲಿಲ್ಲ ಕರ್ಣ ಎಂದು ಜನರು ಹೊಗಳಿದರು. ಮತ್ತೆ ಅರ್ಜುನನ ಚತುರಂಗಸೈನ್ಯವನ್ನು ನೋಯಿಸಲು ಮೊದಲಿಟ್ಟ. ಆದರೆ ಬಲ ಜಲಧಿ ಬತ್ತಿದುದು ಕರ್ಣನಲಿ. ವಿಜಯಜಲಧಿ ಸುಳಿಯಿತು ಅರ್ಜುನನಲಿ. ಅರೆಗಳಿಗೆಯಲ್ಲಿ ಕೌರವನ ಥಟ್ಟು ಕಳಚಿತು.
ಕಾಮೆಂಟ್ಗಳು