ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ137


ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ಕರ್ಣ ಪರ್ವ - ಇಪ್ಪತ್ತೇಳನೆಯ ಸಂಧಿ
 
ಸೂ.   
ಸಮರ ಸಾಹಸ ವೀರನನುಪಮ
ಕಮಲಸಖನ ಕುಮಾರನದಟಿಂ
ದಮರನಗರಿಗೆ ನಡೆಯೆ ಹಲುಬಿದ ಕೌರವರ ರಾಯ  
 
ಸಾಲದೇ ಕಥೆಯಿನ್ನು ಮೇಲಣ
ಕಾಳೆಗದ ಮಾತುಗಳನಕಟಾ
ಕೇಳಿ ಜೀವವ ಹಿಡಿಯಲಾಪೈ ತಂದೆ ಧೃತರಾಷ್ಟ್ರ
ಹೇಳುವಡೆ ಕರ್ಣವ್ಯಥೆಯ ಸಂ
ಭಾಳಿಸುವಡೆನಗರಿದು ನುಡಿಗಳ
ಕಾಳಕೂಟವ ಬಡಿಸುವೆನು ಕಿವಿಯಾರೆ ಸವಿಯೆಂದ     ೧  
 
ತೂಳಿದನು ಕಲಿಪಾರ್ಥನೀತನ
ಮೇಲೆ ಶಿವಶಿವ ಕಣೆಯ ಕಡೆವಳೆ
ಗಾಲ ತಪ್ಪಲ್ಲೆನುತ ಕಡಿದನು ಕರ್ಣನಂಬುಗಳ
ಮೇಲೆಮೇಲೆಚ್ಚಂಬುಗಳ ಸಲೆ
ಸೀಳಿ ಕರ್ಣಧ್ವಜದ ಕಂಭದ
ಕೂಲ ಮುರಿಯೆಸಲುಡಿದು ಬಿದ್ದುದು ವರ ರಥಾಗ್ರದಲಿ   ೨  
 
ಆ ಮಹಾಧ್ವಜ ದಂಡಪಾತದ 
ಡಾಮರದ ದಳವುಳಕೆ ಹೆದರಿತು
ಹಾ ಮಹಾದೇವೇನ ಹೇಳುವೆನೈ ಮಹೀಪತಿಯೆ
ಧೂಮಚುಂಬಿತ ಚಿತ್ರದಂತೆ ಸ
ನಾಮರಿದ್ದುದು ಸೌಬಲಾಶ್ವ
ತ್ಥಾಮ ಕೃಪ ಕೃತವರ್ಮಕಾದಿಗಳೊಂದು ನಿಮಿಷದಲಿ     ೩  
 
ಮತ್ತೆ ಕೇಳರಿವಿಕ್ರಮವ ನಭ
ಕೊತ್ತಿತೀತನ ಶೌರ‍್ಯವಾತನ
ನೆತ್ತರಲಿ ನಾದಿದನು ನಾನಾವಿಧ ಶರಾವಳಿಯ
ಹತ್ತು ಶರದಲಿ ಕರ್ಣಚಾಪವ
ಕತ್ತರಿಸಿದನು ಪಾರ್ಥನೀತನ
ಚಿತ್ತದಲಿ ಕರುಣಾರಸಕೆ ಕಾಲಾಟವಾಯ್ತೆಂದ       ೪  
 
ದ್ರೋಣ ಭೀಷ್ಮರ ನಚ್ಚಿದರೆ ಮುಂ
ಗಾಣಿಕೆಯಲೇ ಮಡಿದರೆನ್ನಯ
ಗೋಣ ಕೊಯ್ದನು ಕೃಷ್ಣ ಮುನ್ನಿನ ಕುಲವನೆಚ್ಚರಿಸಿ
ಪ್ರಾಣ ಪಾಂಡವರೆಂಬ ನುಡಿಯನು
ಜಾಣಿನಲಿ ಹರಿ ಬಲಿದನೊಡೆಯಗೆ
ಕಾಣೆನಾಪ್ತರನೆಂದು ಮನದಲಿ ಮರುಗಿದನು ಕರ್ಣ     ೫  
 
ಕುಲಕೆ ಕೀಳಿವನೆಂದು ಟೆಕ್ಕರಿ
ಗಳೆದಡಾ ಬಹುಬಂಧುವರ್ಗವ
ನುಳಿದು ಸಿಂಹಾಸನದಲೆನಗಭಿಷೇಕವನು ಮಾಡಿ
ಕುಲದ ಮಲಿನವ ತೊಳೆದು ಕೌರವ
ಕುಲದೊಳೊಡಬೆಚ್ಚವನಿಪಾಲಕ
ತಿಲಕ ಕುರುಪತಿಗಾಪ್ತರಿಲ್ಲೆಂದಳಲಿದನು ಕರ್ಣ      ೬  
 
ನೋಡಿ ದಣಿಯನು ನಿಚ್ಚಲುಚಿತವ
ಮಾಡಿ ದಣಿಯನು ಖೇಳ ಮೇಳದ
ಲಾಡಿ ದಣಿಯನು ಶಿವಶಿವಾ ತನ್ನೊಡನೆ ಕುರುರಾಯ
ಓಡಲರಿಯದೆ ದ್ರೋಣ ಭೀಷ್ಮರು
ಗೂಡ ತಲೆಗೊಟ್ಟೈಸರಲಿ ತಾ
ಮಾಡಿತೇನರಸಂಗೆನುತ ಮರುಗಿದನು ಕಲಿಕರ್ಣ      ೭  
 
ಮೊದಲಲಾತ್ಮಜರಳಿವನೊಡವು
ಟ್ಟಿದರ ಮೆಯ್ಯಲಿ ಮರೆದನೊಡವು
ಟ್ಟಿದರು ನೂರ್ವರು ಮಡಿಯೆ ಮರೆದನು ತನ್ನ ಸುಳಿವಿನಲಿ
ಕದನವೆನ್ನಯ ಸುಳಿವನೊಳಕೊಂ
ಡುದು ಸುಯೋಧನನೃಪತಿಗಿನ್ನಾ
ಸ್ಪದರ ಕಾಣೆನು ಶಿವಶಿವಾ ಎಂದಳಲಿದನು ಕರ್ಣ     ೮   
 
ಸಲಹಿದೊಡೆಯನ ಜೋಳವಾಳಿಗೆ
ತಲೆಯ ಮಾರುವುದೊಂದು ಪುಣ್ಯದ
ಫಲವು ಮರಣದ ಹೊತ್ತು ಕೃಷ್ಣನ ಕಾಬ ಸುಕೃತಫಲ
ಇಳೆಯ ಮೇಲೆನಗಲ್ಲದಾರಿಗೆ
ಫಲಿಸುವುದು ತಾ ಧನ್ಯನೆನುತೆವೆ
ಹಳಚದಸುರಾಂತಕನನೀಕ್ಷಿಸುತಿರ್ದನಾ ಕರ್ಣ      ೯  
 
ಒಳಗೆ ಹೃದಯಾಂಬುಜದ ಮಧ್ಯ
ಸ್ಥಳದೊಳಗೆ ಮುರವೈರಿಯನು ಹೊರ
ವಳಯದಲಿ ಫಲುಗುಣನ ಮಣಿರಥದಗ್ರಭಾಗದಲಿ
ಹೊಳೆವ ಹರಿಯನು ಕಂಡನಿದು ಹೊರ
ಗೊಳಗೆ ಹರಿ ತಾನೆಂಬಭೇದವ
ತಿಳಿದು ನಿಜದೆಚ್ಚರ ಸಮಾಧಿಯೊಳಿರ್ದನಾ ಕರ್ಣ       ೧೦  
 
ಅರಸ ಚಿತ್ತೈಸಾಚೆಯಲಿ ಮುರ
ಹರನಲೇ ನಿಮ್ಮನ್ವಯವ ಸಂ
ಹರಿಸಿದಾತನು ಭೀಮಸೇನನೊ ಮೇಣ್ ಧನಂಜಯನೊ
ಸರಳ ತೊಡುತೊಡು ಪಾರ್ಥ ಕರ್ಣನ
ಶಿರವನಿಳುಹಾ ಹಾರದಿರು ಹೇ
ವರಿಸದಿರು ತೆಗೆ ದಿವ್ಯಶರವನು ಬೇಗಮಾಡೆಂದ       ೧೧  
 
ಕರಗುವರೆ ನೀ ಸಾರು ಭೀಮನ
ಕರೆದು ಕೊಲಿಸುವೆನೀತನನು ನಿ
ಷ್ಠುರನಲಾ ನೀನೆನ್ನದಿರು ತೆಗೆ ನಿನ್ನ ತನ್ನಿಂದ
ಹರಿಯದೇ ಹಗೆ ನಮ್ಮ ಚಕ್ರದ
ಲರಿಭಟನ ಮುರಿವೆನು ಯುಧಿಷ್ಠಿರ
ನರಸುತನವದು ನಿಲಲಿ ನೀನಂಜುವರೆ ಸಾರೆಂದ    ೧೨  
 
ಈಸು ಕರ್ಣನ ಮೇಲೆ ಬಹಳ
ದ್ವೇಷವೇನೋ ಎನುತ ಮನದಲಿ
ಘಾಸಿಯಾದನು ಪಾರ್ಥ ಕರುಣಕ್ರೋಧದುಪಟಳಕೆ
ಆಸೆಯಿನ್ನೇಕೆನುತ ಸೆಳೆದನು
ಸೂಸುಗಿಡಿಗಳ ಹೊಗೆಯ ಹೊದರಿನ
ಮೀಸಲಳಿದಾರೆಂಜಲಿಸದಂಜಳಿಕ ಮಾರ್ಗಣವ          ೧೩  
 
ಉರಿಯನುಗುಳುವ ಬಾಣದಲಿ ಕ
ತ್ತರಿಸಿ ಕರ್ಣನನೆಸಲು ಸಮರದ
ಲುರವ ಕೀಲಿಸಿತಂಬು ಗರಿಗಡಿಯಾಗಿ ಗಾಢದಲಿ
ಹರಣ ತೊಲಗದ ಮರ್ಮವನು ಮುರ
ಹರನು ಕಂಡನು ರಥದ ವಾಘೆಯ
ನಿರಿಸಿ ಕರ್ಣನ ಹೊರೆಗೆ ಬಂದನು ವಿಪ್ರವೇಷದಲಿ     ೧೪  
 
ತ್ಯಾಗಿ ಜಗದೊಳಗೆಂಬ ಕೀರ್ತಿಯ
ಲೋಗರಿಂದವೆ ಕೇಳ್ದು ಬಂದೆನು
ಮೇಗಳತಿಶಯ ಪದವನೊಲುವಡೆ ಮನದ ಬಯಕೆಗಳ
ಈಗಳೀವುದು ನಮ್ಮಭೀಷ್ಟ
ಶ್ರೀಗೆ ಮಂಗಳವೆಂದು ಹರಸಿದ
ಡಾಗಳರಿದಾ ಕರ್ಣ ನಸುನಗುತಿರ್ದ ಮನದೊಳಗೆ     ೧೫  
 
ತ್ಯಾಗಿ ಸಿಂಹಾಸನದ ಮೇಲಿ
ದ್ದಾಗ ಬೇಡಿತನೀಯಬೇಹುದು
ಈಗಳೀವುದ ಬೆಸಸಿಯೆನೆ ನಗುತೆಂದನಾ ವಿಪ್ರ
ತೂಗುವೀ ಕುಂಡಲವನೀವುದು
ಬೇಗ ಧಾರೆಯನೆರೆದು ಕೊಡಿಯೆನ
ಲಾಗಳುದಕವನರಸಿ ಕಾಣದೆ ನೋಡಿದನು ಕೆಲನ         ೧೬  
 
ಉದಕವನು ಹೊರಗರಸುತಿರಲಾ
ಪದುಮನಾಭನು ನಗುತ ನಿನ್ನಯ
ಹೃದಯದೊಳಗಿರ್ದಮಲಗಂಗಾಜಲವ ತೆಗೆದೆನಗೆ
ಹದುಳದಿಂದೆರೆ ಧಾರೆಯನು ಸಂ
ಪದದ ಮುಕುತಿಯ ಪದವನೊಲುವಡೆ         
ಯಿದು ಶುಭೋದಯವೆಂದು ಮಾಯಾವಿಪ್ರನರುಹಿದನು    ೧೭  
 
ಸರಳ ತೆಗೆದನು ಸರಸಿಜಪ್ರಿಯ
ವರಸುತನು ತನ್ನುರವ ಬಗಿದನು
ಘರಿಘರಿಲು ಘರಿಲೆನಲು ತೆಗೆದನು ನಿರ್ಮಲೋದಕವ
ಪರಮ ಸಂತೋಷದಲಿ ಧಾರೆಯ
ನೆರೆದು ಕುಂಡಲವೀಯೆ ಮಿಗೆ ಪು           
ಷ್ಕರದ  ಜನ ಜಯಯೆನಲು ಮುರರಿಪುವೊಲಿದು ಕೈಕೊಂಡ    ೧೮  
 
ಪರಮ ಕರುಣಾಸಿಂಧು ಕರ್ಣಂ
ಗಿರದೆ ನಿಜಮೂರ್ತಿಯನು ತೋರಿದ
ನುರುತರ ಪ್ರೇಮದಲಿ ಮುಕುತಿಯ ಪದವ ನೇಮಿಸಿದ
ನರನನೆಚ್ಚರಿಸಿದನು ಕರುಣಿಗೆ
ಕರುಣದನುಸಂಧಾನ ಮಾಣದು
ಧರೆಯೊಳಚ್ಚರಿಯೆನುತ ಬೆರಗಿನೊಳಿದ್ದುದಮರಗಣ        ೧೯  
 
ಹಿಂದೆ ಪಾಶುಪತಕ್ಕೆ ಬಳುವಳಿ
ಬಂದುದಂಜನ ಬಾಣವದ ದೊಣೆ
ಯಿಂದ ತೆಗೆದನು ಗಿರಿಜೆಯಂಘ್ರಿಯ ನೆನೆದು ಮಂತ್ರಿಸುತ
ಮಂದರಾಚಲ ನಡುಗೆ ಕಿಡಿಗಳ
ಸಂದಣಿಯ ಸುರಿವಂಬನಾ ರವಿ
ನಂದನನ  ಕೊರಳೆಡೆಯೊಳೆಚ್ಚನು ವಾಸವನ ಸೂನು       ೨೦  
 
ಅರಸ ಕೇಳೈ ಕರ್ಣನೊಡಲಲಿ
ಪರಮತೇಜಃಪುಂಜವೊದೆದು
ಪ್ಪರಿಸಿ ಹಾಯ್ದುದು ಹೊಳೆದುದಿನಮಂಡಲದ ಮಧ್ಯದಲಿ
ಅರರೆ ಭಾಪುರೆ ಕರ್ಣ ಮಝ ಭಾ
ಪುರೆ ಭಟಾಗ್ರಣಿ ನಿನ್ನ ಸರಿದೊರೆ
ಯೆರಡು ಯುಗದಲಿ ಕಾಣೆನೆಂದಳಲಿದನು ಹನುಮಂತ    ೨೧  
 
ಕೊಟ್ಟ ಭಾಷೆಗೆ ಮರಳಿ ಬಾಣವ
ತೊಟ್ಟನೇ ತಾನೊಡೆಯನೆಂದರಿ
ಯಟ್ಟಿದನೆ ಪಾಂಡವರೊಳನುಸಂಧಾನವನು ಬಿಸುಟು
ನಟ್ಟ ಕಣೆಗಳುಕಿದನೆ ಕೌರವ
ಕೆಟ್ಟನಕಟಕಟೆಂದು ಕಾಯವ
ಬಿಟ್ಟ ಕರ್ಣನೊಳಾರು ಸರಿಯೆನುತಿರ್ದುದಮರಗಣ        ೨೨  
 
ಬಲುವಿಡಿಯ ಬಿಲು ವಾಮದಲಿ ಬೆರ
ಳೊಳಗೆ ಸವಡಿಸಿ ತೆಗೆವ ತಿರುವಿನ
ಹಿಳುಕು ನಿಮಿರಿದ ತೋಳ ತೋರಿಕೆ ಬಲದ ಭಾಗದಲಿ
ಬಲಿದ ಮಂಡಿಯ ಬಾಗಿದೊಡಲಿನ
ಹೊಳೆವ ತನುಕಾಂತಿಯ ಮಹೀಪತಿ
ತಿಲಕ ಕೇಳೈ ಕರ್ಣನೆಸೆದನು ರಥದ ಮಧ್ಯದಲಿ        ೨೩  
 
ಕಳಚಿ ದುರಿಯೋಧನನ ಬೆಳುಗೊಡೆ
ನೆಲಕೆ ಬೀಳ್ವಂದದಲಿ ಕೌರವ
ಕುಲದ ನಿಖಿಳೈಶ್ವರ್ಯರವಿಳೆಗೊರ್ಗುಡಿಸಿ ಕೆಡೆವಂತೆ
ಥಳಥಳಿಪ ನಗೆಮೊಗದ ಗಂಟಿಕಿ
ಬಲಿದ ಹುಬ್ಬಿನ ಬಿಟ್ಟ ಕಂಗಳ
ಹೊಳೆವ ಹಲುಗಳ ಕರ್ಣಶಿರ ಕೆಡೆದುದು ಧರಿತ್ರಿಯಲಿ    ೨೪  
 
ಕರ್ಣ ಹಾ ಹಾ ಸೂತಸುತ ಹಾ
ಕರ್ಣ ಹಾ ರಾಧಾತನುಜ ಹಾ
ಕರ್ಣ ಹಾ ಎನ್ನಾನೆ ಹಾ ಬಹಿರಂಗ ಜೀವನವೆ
ನಿರ್ಣಯವು ಕುರುಕುಲಕೆ ಹಾ ಹಾ
ಕರ್ಣ ಮಡಿದೈ ತಂದೆಯೆನುತವೆ
ನಿನ್ನ ಮಗ ರಥದಿಂದ ಧೊಪ್ಪನೆ ಕೆಡೆದನವನಿಯಲಿ        ೨೫  
 
ರಾಯ ಹಮ್ಮೈಸಿದನು ಹಾ ರಾ
ಧೇಯ ಹಾ ರಾಧೇಯ ಹಾ ರಾ
ಧೇಯ ಹಾ ಎನ್ನಾನೆ ಬಾರೈ ನಿನ್ನ ತೋರೆನುತ
ಬಾಯಬಿಟ್ಟುದು ಕಯ್ಯ ಕೈದುವ
ಹಾಯಿಕಿತು ಕಂಬನಿಯ ಕಡಲೊಳು
ಹಾಯಿದೆದ್ದುದು ಹೊರಳುತಿರ್ದುದು ಕೂಡೆ ಪರಿವಾರ     ೨೬  
 
ನರರ್ಗೆ ಸೈರಣೆಯೆತ್ತಣದು ಕರಿ
ತುರಗ ಕಂಬನಿಗರೆದುದದ್ಭುತ
ತರದ ಶೋಕಾಂಬುಧಿಯ ಸುಳಿಯಲಿ ಸಿಕ್ಕಿತೀ ಸೇನೆ
ಅರಸ ಕೇಳಾಚೆಯಲಿ ಭೀಮನ
ನರ ನಕುಲ ಸಹದೇವ ಸಾತ್ಯಕಿ
ಧರಣಿಪನ ದ್ರೌಪದಿಯ ಚಿಂತೆ ದುರಂತವಾಯ್ತೆಂದ        ೨೭  
 
ಕಿತ್ತರೋ ಕಲ್ಪದ್ರುಮವ ಕೆಡೆ
ಗುತ್ತಿದರೊ ಸುರಧೇನುವನು ಕೈ
ವರ್ತಿಸಿದರೋ ಪರುಷವನು ಹಾ ಜಲಧಿ ಮಧ್ಯದಲಿ
ಎತ್ತಣದು ಭಾರತದ ರಣ ನಮ
ಗೆತ್ತಲರಸುತ ಬಂದುದಕಟಾ
ಮಿತ್ತುವೆಂದೊರಲಿದರು ವಂದಿಗಳೆರಡು ಥಟ್ಟಿನಲಿ         ೨೮  
 
ಅರಸ ನೀ ಸೈರಿಸಿದೆಲಾ ಶಂ
ಕರ ವಿರಿಂಚಾದಿಗಳು ಕರ್ಣನ
ಪರಮಸತ್ಯವ್ರತವ ಕೊಂಡಾಡಿದರು ಅಕಟೆನುತ
ಎರಡು ಥಟ್ಟಿನ ದುಃಖಮಯಸಾ
ಗರವ ಹವಣಿಸಲರಿಯೆನರ್ಜುನ
ತಿರುಗಿದನು ದುಮ್ಮಾನದಲಿ ಪಾಳೆಯಕೆ ಹರಿಸಹಿತ       ೨೯  
 
ಇತ್ತ ಪರವಶವಾದ ರಾಯನ
ತೆತ್ತಿಗರು ದಂಡಿಗೆಯೊಳೀತನ
ನೆತ್ತಿ ತಂದರು ಪಾಳೆಯಕೆ ದುಃಸ್ಥಿತಿಯ ಮೇಳೆಯಕೆ
ತೆತ್ತನೇ ಮಗನಸುವನಕಟ ಎ
ನುತ್ತ ಚಿಂತಾರಾಗದಲಿ ಕಡ
ಲತ್ತ ಹಾಯ್ದನು ಬಿಸುಟನಂಬುಜಮಿತ್ರನಂಬರವ         ೩೦  
 
ದ್ಯುಮಣಿ ಕರ್ಣದ್ಯುಮಣಿಸಹಿತ 
ಸ್ತಮಿಸೆ ಕಮಲಿನಿ ಕೌರವನ ಮುಖ
ಕಮಲ ಬಾಡಿತು ತಿಮಿರ ಹೆಚ್ಚಿತು ಶೋಕತಮದೊಡನೆ
ಅಮಳ ಚಕ್ರಾಂಗಕ್ಕೆ ಭೂಪೋ
ತ್ತಮನ ವಿಜಯಾಂಗನೆಗೆ ಅಗಲಿಕೆ
ಸಮನಿಸಿತು ಕೇಳಯ್ಯ ಜನಮೇಜಯ ಮಹೀಪಾಲ       ೩೧

ಸಂಕ್ಷಿಪ್ತ ಭಾವ
Lrphks Kolar

ಕರ್ಣನ ಮರಣ. ದುರ್ಯೋಧನನ ಶೋಕ.

ಇಷ್ಟು ಹೇಳಿದ್ದು ಸಾಲದೇ...ಮತ್ತೂ ಆ ಘಟನೆಯನ್ನು ಹೇಳಬೇಕೇ ಎನ್ನುತ್ತ ಸಂಜಯ ಮುಂದುವರಿಸಿದನು.‌ ಕರ್ಣನ ರಥದ ಮೇಲೆ ಅರ್ಜುನನ ಸರಳ ಸುರಿಮಳೆಯಿಂದಾಗಿ ಧ್ವಜದ ಕೂಲವು ಮುರಿದುಬಿದ್ದಿತು. ಕರ್ಣನ ಮೇಲೆ ಬಾಣಗಳಿಂದ ಮಳೆಗರೆದನು ಪಾರ್ಥ. ಅವನಲ್ಲಿ ಮೂಡಿದ್ದ ಕರುಣೆಯ ಒರತೆ ಕೃಷ್ಣನ ಮಾಯೆಯಿಂದ ಬತ್ತಿಹೋಯಿತು.

ಕರ್ಣನಿಗೆ ತನ್ನ ಸೋಲು ಅರಿವಾಗುತ್ತ ಬಂತು. ತನ್ನನ್ನು ಸಲಹಿದ ರಾಯನಿಗೆ ಗೆಲುವು ತರಲಾಗಲಿಲ್ಲವಲ್ಲ ಎಂದು ಮರುಗಿದನು.  ತನಗೆ ಎಷ್ಟು ಉಪಚರಿಸಿದರೂ ಸಾಲದು, ತನ್ನೊಡನೆ ಎಷ್ಟು ಹೊತ್ತು ಇದ್ದರೂ ಸಾಲದು, ತಮ್ಮನ ಮತ್ತು ಮಕ್ಕಳ, ಇತರ ಅನುಜರ ಸಾವನ್ನೂ ಮರೆಯುವಂತೆ ತನ್ನನ್ನು ಹಚ್ಚಿಕೊಂಡಿದ್ದ ದುರ್ಯೋಧನನ ಬಗ್ಗೆ ಬಹಳ ಮರುಗಿದನು. ಮರಣಕಾಲದಲ್ಲಿ ಕೃಷ್ಣ ಎದುರಿಗಿರುವುದು ತನ್ನ ಸುಕೃತವೆಂದು ಭಾವಿಸಿದನು.ಮೇಲೆ ಧ್ವಜದಲ್ಲಿ ಹರಿ, ಸಾರಥಿಯಾಗಿ ಹರಿ, ತನ್ನ ಹೃದಯದಲ್ಲಿ ಇರುವ ಹರಿಯೆಂಬ ಅರಿವಿನಲ್ಲಿ ನಿಜ ಸಮಾಧಿಯಲ್ಲಿ ಇದ್ದಂತೆ ಇದ್ದನು ಕರ್ಣ.

ಮತ್ತೆ ಕೃಷ್ಣ ಅರ್ಜುನನನ್ನು ಎಚ್ಚರಿಸಿದ. ನೀನು ಕೊಲ್ಲುವೆಯೋ ಅಥವಾ ಭೀಮನನ್ನು ಕರೆಯಲೋ ಎಂದ. ಅರ್ಜುನ ದಿವ್ಯಾಸ್ತ್ರಗಳನ್ನು ಪ್ರಯೋಗಿಸಿದರೂ ಕರ್ಣನಿಗೆ ಮರಣ ಬಾರದ ಕಾರಣವನ್ನು ತಿಳಿದ ಶ್ರೀಹರಿ ವಿಪ್ರವೇಷ ಧರಿಸಿ ಕರ್ಣನ ಮುಂದೆ ಹೋಗಿ ನಿಂತು ಅವನ ಕುಂಡಲಗಳನ್ನು ದಾನವಾಗಿ ಬೇಡಿದನು. ಕರ್ಣನು ಧಾರೆಯೆರೆಯಲು ನೀರಿಗಾಗಿ ಅತ್ತಿತ್ತ ನೋಡಲು ನಿನ್ನ ಹೃದಯದೊಳಗಿರುವ ಅಮಲ ಗಂಗಾಜಲವನ್ನು ತೆಗೆಯೆಂದನು ಕೃಷ್ಣ. ಕರ್ಣ ತನ್ನ ಉರವನ್ನು ಬಗಿದು ಗಂಗಾಜಲ ತೆಗೆದು ಕುಂಡಲಗಳನ್ನು ಧಾರೆಯೆರೆದು ಕೊಟ್ಟನು. ಅವನಿಗೆ ಕೃಷ್ಣನು ತನ್ನ ಮೂಲಸ್ವರೂಪ ದರ್ಶನ ಮಾಡಿಸಿದನು. ಕೃಷ್ಣ ವಾಪಸಾದನು.

ಗಿರಿಜೆಗೆ ನಮಿಸಿ ಅಂಜನಶರವನ್ನು ಪ್ರಯೋಗಿಸಲು ಕರ್ಣನ ದೇಹದಿಂದ ಒಂದು ತೇಜಸ್ಸು ಹೊರಟು ಆಕಾಶದಲ್ಲಿ ಲೀನವಾಯಿತು. ಕರ್ಣ ಕಾಯವನ್ನು ಬಿಟ್ಟನು. ಎರಡೂ ಪಡೆಗಳಲ್ಲಿ ಒಂದು ರೀತಿಯ ದುಗುಡ ಆವರಿಸಿತು. ಆನೆ, ಕುದುರೆಗಳೂ ಕಣ್ಣೀರಿಟ್ಟವು. ಎಲ್ಲರೂ ಕರ್ಣನ ಸಾಹಸಗಳನ್ನು ಕೊಂಡಾಡಿದರು. ಹಾಹಾಕಾರವೆದ್ದಿತು. ದುರ್ಯೋಧನನ ಬೆಳ್ಗೊಡೆ ಕಳಚಿ ಬಿದ್ದಂತೆ ಆಯಿತು.  ಅವನು ಭೂಮಿಯಲ್ಲಿ ಬಿದ್ದು ಹೊರಳಾಡಿದನು. ಪರಿಪರಿಯಾಗಿ ಹಲುಬಿದನು. ಕರ್ಣನನ್ನು ಪಾಳೆಯಕ್ಕೆ ತರಲಾಯಿತು. ಮುಂದಿನದನ್ನು ನೋಡಲಾರೆನೆಂಬಂತೆ ಸೂರ್ಯ ಕಡಲಿಗೆ ಜಾರಿದನು. ಕೌರವನ ಮುಖಕಮಲ ಬಾಡಿತು.

ಇಲ್ಲಿಗೆ ಕರ್ಣಪರ್ವ ಮುಗಿಯಿತು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ