ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭೂಪಿಂದರ್

ಭೂಪಿಂದರ್ ಸಿಂಗ್ 


ಭೂಪಿಂದರ್ ಸಿಂಗ್ ಭಾವಪೂರ್ಣ ಚಲನಚಿತ್ರ ಗೀತೆಗಳ ಗಾಯನಕ್ಕೆ ಹೆಸರಾಗಿದ್ದವರು.  ಮೂಲತಃ ಗಝಲ್ ಗಾಯಕರಾದ ಭೂಪಿಂದರ್ ಸಿಂಗ್ ಚಲನಚಿತ್ರ ರಂಗದಲ್ಲಿ ಹೊಸತನ ತಂದವರಲ್ಲಿ ಒಬ್ಬರು. 


ಭೂಪಿಂದರ್ ಸಿಂಗ್  1940ರ ಫೆಬ್ರುವರಿ 6ರಂದು ಪಟಿಯಾಲದಲ್ಲಿ ಜನಿಸಿದರು. ತಂದೆ ನಾಥ ಸಿಂಗ್‍ಜಿ ಅವರು ಮಹಾನ್ ಸಂಗೀತ ಶಿಕ್ಷಕರಾಗಿದ್ದು ಇವರಿಗೆ ಗುರುವಾದರು.


ಗಿಟಾರ್ ಕಲಿತಿದ್ದ ಭೂಪಿಂದರ್ ಸಿಂಗ್ ಅವರು ಸತೀಶ್ ಭಾಟಿಯಾ ಅವರ ನಿರ್ದೇಶನದಲ್ಲಿ ಆಲ್ ಇಂಡಿಯಾ ರೇಡಿಯೊದಲ್ಲಿ ಕ್ಯಾಶುಯಲ್ ಕಲಾವಿದರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ದೆಹಲಿಯ ದೂರದರ್ಶನ ಕೇಂದ್ರದಲ್ಲಿಯೂ ಕೆಲಸ ಮಾಡಿದರು.  ಅವರು ಗಿಟಾರ್ ಕೂಡ ಕಲಿತರು.


1962ರಲ್ಲಿ ಸತೀಶ್ ಭಾಟಿಯಾ ಅವರು ತಮ್ಮ ಗೌರವಾರ್ಥವಾಗಿ ಆಯೋಜಿಸಿದ್ದ ಔತಣಕೂಟದಲ್ಲಿ ಸಂಗೀತ ನಿರ್ದೇಶಕ ಮದನ್ ಮೋಹನ್ ಅವರು ಭೂಪಿಂದರ್ ಹಾಡಿದ್ದನ್ನು ಕೇಳಿ ಮೆಚ್ಚಿ ಅವರನ್ನು ಮುಂಬೈಗೆ ಬರಹೇಳಿದರು. ಚೇತನ್ ಆನಂದ್ ಅವರ ಹಕೀಕತ್ ನಲ್ಲಿ ಮೊಹಮ್ಮದ್ ರಫಿ, ತಲತ್ ಮಹಮೂದ್ ಮತ್ತು ಮನ್ನಾ ಡೇ ಅವರೊಂದಿಗೆ 'ಹೋಕೆ ಮಜ್ಬೂರ್ ಮುಜೆ ಉಸ್ನೆ ಬುಲಾಯಾ ಹೋಗಾ' ಹಾಡನ್ನು ಹಾಡಲು ಅವರಿಗೆ ಅವಕಾಶ ದೊರಕಿತು.


'ಆಖ್ರಿ ಖಾತ್' ಚಿತ್ರದಲ್ಲಿ ಖಯ್ಯಾಮ್ ಅವರು ಭೂಪಿಂದರ್ ಅವರಿಗೆ ಸೋಲೋ ಹಾಡುವ ಅವಕಾಶ ನೀಡಿದರು.  ಅವರು ಕಿಶೋರ್ ಕುಮಾರ್ ಮತ್ತು ಮೊಹಮ್ಮದ್ ರಫಿ ಅವರೊಂದಿಗೆ ಕೆಲವು ಜನಪ್ರಿಯ ಯುಗಳ ಗೀತೆಗಳನ್ನು ಹಾಡಿದರು.


ಭೂಪಿಂದರ್ ಅವರ ಖಾಸಗಿ ಆಲ್ಬಮ್‌ಗಳಲ್ಲಿ  ಮೊದಲ ಮೂರು ಅವರ ಸ್ವಯಂ-ರಚಿತ ಹಾಡುಗಳನ್ನು ಹೊಂದಿತ್ತು. ಇದರಲ್ಲಿ ಅವರು ಸ್ಪ್ಯಾನಿಷ್ ಗಿಟಾರ್, ಬಾಸ್ ಮತ್ತು ಡ್ರಮ್‌ಗಳನ್ನು ಗಜಲ್ ಶೈಲಿಗೆ ಪರಿಚಯಿಸಿದರು. ಅವರ ವೋ ಜೋ ಶೈರ್ ಥಾ ಆಲ್ಬಮ್‍ಗೆ ಗುಲ್ಜಾರ್ ಸಾಹಿತ್ಯ  ಬರೆದಿದ್ದಾರೆ.


ಬಾಂಗ್ಲಾದೇಶದ ಗಾಯಕಿ ಮಿತಾಲಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭೂಪಿಂದರ್ ಅವರು 1980ರ ದಶಕದ ಮಧ್ಯಭಾಗದಲ್ಲಿ ಹಿನ್ನೆಲೆ ಗಾಯನದಿಂದ ದೂರ ಸರಿದು, ತಮ್ಮ ಪತ್ನಿಯೊಂದಿಗೆ ಆಲ್ಬಮ್‌ಗಳು ಮತ್ತು ನೇರ ಕಾರ್ಯಕ್ರಮಗಳಲ್ಲಿ ಜಂಟಿಯಾಗಿ ಹಾಡುತ್ತ ಬಂದರು.


ಭೂಪಿಂದರ್ ಅವರ ಪ್ರಸಿದ್ಧ ಹಾಡುಗಳಲ್ಲಿ "ದಿಲ್ ಧೂಂಡತಾ ಹೈ", "ದೋ ದಿವಾನೆ ಶಹರ್ ಮೇ", "ನಾಮ್ ಗಮ್ ಜಾಯೇಗಾ", "ಕರೋಗೆ ಯಾದ್ ತೋ", "ಮೀಥೆ ಬೋಲ್ ಬೋಲೆ", "ಕಭಿ ಕಿಸಿ ಕೊ ಮುಕಮ್ಮಲ್", "ಕಿಸಿ ನಜರ್ ಕೋ ತೇರಾ ಇಂತೇಜಾರ್ ಆಜ್ ಭಿ", "ಏಕ್ ಅಕೇಲಾ ಇಸ್ ಶೆಹರ್ ಮೇ" ಮುಂತಾದವು ಸೇರಿವೆ.  ರಾಜೇಶ್ ಖನ್ನಾ ಅವರ ಮೇಲೆ ಚಿತ್ರಿಸಿದ "ದುನಿಯಾ ಚೂಟೆ ಯಾರ್ ನಾ ಟೂಟೆ" ಹಾಡನ್ನು ಹಾಡಿದರು. ಆರ್.ಡಿ. ಬರ್ಮನ್ ಅವರು ಭೂಪಿಂದರ್ ಅವರಿಂದ ರಾತ್ ಬಾನೂ ಮೇ ಗೀತ್ ಬನೋ ತುಮ್, ನಾಮ್ ಗಮ್ ಜಾಯೇಗಾ, ಕಹಿಯಾ ಕಹಾನ್ ಸೇ ಆನಾ ಹುವಾ ಮತ್ತು ಬೀತೇ ನಾ ಬಿತಾಯ್ ರೈನಾ ಮುಂತಾದ ಹಾಡುಗಳನ್ನು  ಹಾಡಿಸಿ ಪ್ರಸಿದ್ಧಿಗೊಳಿಸಿದರು. 


ಭೂಪಿಂದರ್ ಸಿಂಗ್ 2022ರ ಜುಲೈ 18ರಂದು ತಮ್ಮ 82 ವಯಸ್ಸಿನ ಬದುಕಿನ ಪಯಣ ಮುಗಿಸಿದರು. ಆಯುಷ್ಯವು ಸಾಧನೆಗಳನ್ನು ಉಳಿಸಿ ದೇಹವನ್ನು ಹೊತ್ತೊಯ್ಯುತ್ತೆ.  ಕಾಲದ ಪ್ರವಹಿನಿಯಲ್ಲಿ ಏನು ತಾನೆ ನಿಲ್ಲುತ್ತೆ? ಆ ಪ್ರವಹಿನಿಯಲ್ಲಿನ ಝಳು ಝಳು ಗಾನವೇ ರಮ್ಯ.  ಅಂತಹ ಗಾನವನ್ನು ನೀಡಿದ ಚೇತನಗಳು ಮತ್ತು ಆಲಿಸಿದ ಹೃದಯದ ಕಿವಿಗಳೇ ಧನ್ಯ.


On the birth anniversary of great singer Bhupinder Singh

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ