ಭುಜಂಗ ಶೆಟ್ಟಿ
ನೇತ್ರವೈದ್ಯ ಭುಜಂಗ ಶೆಟ್ಟಿ
ನಾರಾಯಣ ನೇತ್ರಾಲಯದ ಡಾ. ಭುಜಂಗ ಶೆಟ್ಟಿ ಪ್ರಖ್ಯಾತ ನೇತ್ರ ವೈದ್ಯರಾಗಿದ್ದವರು. ಇಂದು ಅವರ ಸಂಸ್ಮರಣೆ ದಿನ.
ಭುಜಂಗ ಶೆಟ್ಟಿ 1954 ವರ್ಷದಲ್ಲಿ ಜನಿಸಿದರು. ಅವರು 1978ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಪೂರೈಸಿದರು. ಬಳಿಕ 1982 ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ನೇತ್ರಶಾಸ್ತ್ರದ ಉನ್ನತ ಅಧ್ಯಯನ ಪೂರೈಸಿದರು. ಬಳಿಕ ಎಂಬತ್ತರ ದಶಕದಲ್ಲಿ ಸಣ್ಣ ಕ್ಲಿನಿಕ್ನಲ್ಲಿ ನೇತ್ರ ಪರೀಕ್ಷೆ ಆರಂಭಿಸಿದರು.
ಅಂದಿನ ದಿನದಲ್ಲಿ ನಾರಾಯಣ ನೇತ್ರಾಲಯ ದೇವಯ್ಯ ಪಾರ್ಕು ಮತ್ತು ಸತ್ಯಹರಿಶ್ಚಂದ್ರ ಘಾಟ್ ನಡುವೆ ಮಹಾಕವಿ ಕುವೆಂಪು ರಸ್ತೆಯಲ್ಲಿತ್ತು. ನಾವೆಲ್ಲ ತಲೆನೋವು ಬಂದಾಗ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂಬ ನಿಯಮದಂತೆ ಅವರ ಕ್ಲಿನಿಕ್ಕಿಗೆ ಹೋಗಿ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದೆವು. ಪ್ರತಿಯೊಬ್ಬರನ್ನೂ ಆತ್ಮೀಯಯವಾಗಿ ಹೆಸರಿನಿಂದ ಸಂಬೋಧಿಸುವುದು ಅವರ ವಾಡಿಕೆ. ಅವರ ಫೀಸು ಕೂಡಾ ಬಡ ಜನರಿಗೆ ದುಬಾರಿ ಇರಲಿಲ್ಲ. ಕಣ್ಣಿಗೆ ಡ್ರಾಪ್ಸ್ ಹಾಕಿಸಿಕೊಂಡು ದೃತರಾಷ್ಟ್ರರಾಗಿ 40 ನಿಮಿಷ ಆದ ತಕ್ಷಣ ಅವರ ಆಪ್ತ ನಗೆ ಮುಖ ಮತ್ತು ಇಂಪಾದ ಸವಿಧ್ವನಿಯ ಆಪ್ತ ಮಾತು ಸಿಗುತ್ತಿತ್ತು. ಅವರ ಕ್ಲಿನಿಕ್ಕಿಗೆ ಹೊಂದಿಕೊಂಡ ಹಾಗಿದ್ದ ಅವರ ಮನೆಯ ಭಾಗವನ್ನು, ಮೂರು ನಾಲ್ಕು ಜನರಿಗೆ ಶಸ್ತ್ರಕ್ರಿಯೆ ಮಾಡಿ ತಂಗುವ ವ್ಯವಸ್ಥೆಯಾಗಿ ಕಲ್ಪಿಸಿದ್ದರು. ಈ ಎಲ್ಲವೂ ಭುಜಂಗ ಶೆಟ್ಟಿ ಅವರ ಮನದಂತೆಯೇ ಶುಭ್ರ ಮತ್ತು ಅಚ್ಚುಕಟ್ಟು.
ನಮ್ಮ ತಂದೆ ಸುಮಾರು 1985 ವರ್ಷ ಭುಜಂಗ ಶೆಟ್ಟಿ ಅವರ ಅಂದಿನ ಆ ಪುಟ್ಟ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳಲು ಮಾತನಾಡಿ ಬಂದಿದ್ದರು. ನಾನು ನಮ್ಮ ತಂದೆಯವರ ಜೊತೆ ಹೋಗಿ ಅವರ ಶಸ್ತ್ರ ಚಿಕಿತ್ಸೆ ಸಮಯದಲ್ಲಿ ಮತ್ತು ನಂತರ ಹಲವು ದಿನ ಇದ್ದೆ. ಭುಜಂಗ ಶೆಟ್ಟಿ ನನಗೆ ಹೇಳಿದರು: "ಶ್ರೀಧರ್ ಅವರೇ, ನಿಮ್ಮ ತಂದೆ ನನಗೂ ಪೂಜ್ಯರು. ಅವರ ನೇರ ನಿರ್ಮಲ ಗುಣ ನನಗೆ ಇಷ್ಟವಾಯಿತು. ನಿಮ್ಮ ತಂದೆ ಹೇಳಿದರು: ನಾನು ರಿಟೈರ್ ಆಗಿ ಪೆನ್ಷನ್ ಉಳಿತಾಯದಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳುತ್ತಿರುವೆ. ನನ್ನ ಮಕ್ಕಳು ದುಡಿದು ಮನೆ ನೋಡಿಕೊಳ್ಳುತ್ತಿದ್ದಾರೆ. ಅವರಿಗೆ ಇದು ಭಾರವಾಗಬಾರದು. ಹಾಗಾಗಿ ನನಗೆ 350 ಮಾತ್ರವೇ ಕೊಡಲು ಸಾಧ್ಯ ಅಂದರು. ನಾನು ಅಷ್ಟು ಮಾತ್ರವೇ ತೆಗೆದುಕೊಳ್ಳುತ್ತಿರುವೆ". ಭುಜಂಗ ಶೆಟ್ಟರ ಆ ಶಾಂತ ಮಾತು, ಸದ್ಗುಣ ಇವೆಲ್ಲ ಇಂದೂ ನನ್ನ ಕಣ್ಮುಂದೆ ಇದೆ.
ಮುಂದೆ ಭುಜಂಗ ಶೆಟ್ಟಿ ಅವರ ನಾರಾಯಣ ನೇತ್ರಾಲಯವು ಇಸ್ಕಾನ್ ದೇಗುಲದ ಪಕ್ಕದಲ್ಲಿ ದೊಡ್ಡದಾಗಿ ಸುಸಜ್ಜಿತವಾಗಿ ಮೂಡಿತು. ನಮ್ಮಮ್ಮನ ಕಣ್ಣಿನ ಚಿಕಿತ್ಸೆಯನ್ನು ಮಾಡುವಾಗ ಅಂದಿನ ದಿನದಲ್ಲೇ ಅದನ್ನು ಹೊರಗೆ ಕೂತು ಟಿವಿಯಲ್ಲಿ ಲೈವ್ ನೋಡಿದ್ದು ವಿಸ್ಮಯ ಅನಿಸುತ್ತಿತ್ತು.
ಭುಜಂಗ ಶೆಟ್ಟರು ರಾಜ್ಕುಮಾರ್ ಕಣ್ಣಿನ ಬ್ಯಾಂಕ್ ಸ್ಥಾಪಿಸಿದ್ದರು. ಅನೇಕರಿಗೆ ಕಣ್ಣಿನ ದೃಷ್ಟಿ ನೀಡಿದ್ದರು. ಈ ಮಾತುಗಳನ್ನು ಇತರರ ಬಗ್ಗೆಯೂ ಕೇಳಿರುತ್ತೇವೆ ನಿಜ. ಆದರೆ ಭುಜಂಗ ಶೆಟ್ಟಿಯವರ ಗುಣಗಳನ್ನು ನಾನು ನೇರವಾಗಿ ಕಂಡವನು.
ಇಂದು ಹಲವು ತೆರನಾದ ವೈದ್ಯರು ಮತ್ತು ಆಧುನಿಕ ವೈದ್ಯಕೀಯ ವ್ಯವಸ್ಥೆಗಳನ್ನು ನಾವು ಕಾಣುತ್ತಿದ್ದೇವೆ. ಯಾಕೋ ಎಲ್ಲೂ ಅಂದು ಕಂಡ, ನಾನು ಮೇಲೆ ಹೇಳಿದ ಭುಜಂಗ ಶೆಟ್ಟಿ ಅಂತಹ ಗುಣವಂತರು ಕಂಡ ಭಾವ ಮೂಡುತ್ತಿಲ್ಲ. ನನಗೆ ಗುಣಗಳನ್ನು ಕಾಣುವ ಕಣ್ಣು ಕುರುಡಾಗಿದೆಯೋ, ಅಥವಾ ಸದ್ಗುಣಗಳಿಗೇ ಈ ಲೋಕದಲ್ಲಿ ಪೊರೆ ಕವಿದಿದೆಯೋ ಹೇಗೆ ಹೇಳುವುದು?
ನಾನು ಕಂಡ ಹೃದಯವಂತ ವ್ಯಕ್ತಿಗಳಲ್ಲಿ ಒಬ್ಬರಾದ ಡಾ. ಭುಜಂಗ ಶೆಟ್ಟಿ ಅವರು 2023ನೇ ಮೇ 19ರಂದು ಈ ಲೋಕವನ್ನಗಲಿದರು. ಆ ಚೇತನಕ್ಕೆ ಹೃದಯಪೂರ್ವಕವಾಗಿ ನಮಿಸುತ್ತಿರುವೆ.
On Rememberance Day of Great eye specialist Dr. Bhujanga Shetty 🌷🙏🌷
ಕಾಮೆಂಟ್ಗಳು