ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಜಾ ಚೆಂಡೂರ್


ರಾಜಾ ಚೆಂಡೂರ್

ಪ್ರಸಿದ್ಧ ಬರಹಗಾರ ಮತ್ತು ಬಹುಮುಖಿ ಸಾಧಕರಾಗಿದ್ದ ರಾಜಾ ಚೆಂಡೂರ್ ನಿಧನರಾಗಿದ್ದಾರೆ.

ರಾಜಾ ಚೆಂಡೂರ್ ಕಥೆಗಾರರಾಗಿ; ಪ್ರಸಿದ್ಧ ಅನುವಾದಕರಾಗಿ; ಚಲನಚಿತ್ರಗಳ ಚಿತ್ರಕಥೆ ಮತ್ತು ಸಂಭಾಷಣೆಕಾರರಾಗಿ, ಕಿರುತೆರೆಯ ಕಾರ್ಯಕ್ರಮಗಳ ಚಿತ್ರಕಥೆ - ಸಂಭಾಷಣೆಕಾರರಾಗಿ, ನಿರ್ಮಾಪಕರಾಗಿ, ನಿರ್ದೇಶಕರಾಗಿ; ಪುಸ್ತಕ ಪ್ರಕಾಶಕರಾಗಿ ಹೀಗೆ ಬಹುಮುಖಿ ಸಾಧಕರಾಗಿದ್ದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಚೆಂಡೂರು ಗ್ರಾಮದವರಾದ ರಾಜಾ ಅವರು ಚಿಕ್ಕಂದಿನಿಂದಲೇ ಪಠ್ಯೇತರ ಓದು ಮತ್ತು ಕ್ರಿಯಾಶೀಲ ಚಿಂತಕರಾಗಿ ರೂಪುಗೊಂಡರು. ಗೌರಿಬಿದನೂರಿನಲ್ಲಿ ಪಿಯು ಓದಿ ಮುಂದೆ ಚಿಂತಾಮಣಿಯಲ್ಲಿ ಡಿಪ್ಲೋಮಾ ಓದಿದರು.
ಚಿಂತಾಮಣಿಯಲ್ಲಿರುವ ಮನೆಯ ಸಮೀಪದಲ್ಲಿದ್ದ ಕವಿ ಬಿ. ಆರ್. ಲಕ್ಷ್ಮಣರಾಯರ ಸ್ನೇಹ ಸಾನ್ನಿಧ್ಯ ಪಡೆದುಕೊಂಡು ಅವರಲ್ಲಿ ಅನೇಕ ವಿಚಾರಗಳನ್ನು ಚರ್ಚಿಸುವ ಹವ್ಯಾಸ ಬೆಳೆಸಿಕೊಂಡರು.

ರಾಜಾ ಚೆಂಡೂರ್ ತಾವು ಕಂಡ ಗ್ರಾಮ, ಪಟ್ಟಣಗಳ ಪರಿಸರ ಮತ್ತು ಸಮಾಜದಲ್ಲಿನ ಅನುಭವಗಳನ್ನೆಲ್ಲ ಬರೆಯುವ ಹವ್ಯಾಸ ಮೂಡಿಸಿಕೊಂಡಿದ್ದರು.  1980ರಿಂದ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ವೈದ್ಯಕೀಯ ಸಲಕರಣೆಗಳನ್ನು ಉತ್ಪಾದಿಸುವ ಯಂತ್ರಗಳ ಮಾರಾಟ ವೃತ್ತಿಯಲ್ಲಿದ್ದ ಇವರಿಗೆ ವಿವಿಧ ರಾಜ್ಯಗಳಲ್ಲಿ ತಿರುಗುತ್ತ ಹಲವಾರು ಜನರ ಬಹುಮುಖ ಮತ್ತು ಜನಜೀವನಗಳನ್ನು ಕಾಣುವುದು ಸಾಧ್ಯವಾಯಿತು.  ಒಮ್ಮೆ ಹೈದರಾಬಾದಿನ ಕಲಾಕ್ಷೇತ್ರದಲ್ಲಿ ನಾಟಕ ನೋಡಲು ಹೋದಾಗ ಅಲ್ಲಿ ಪ್ರಸಿದ್ಧ ಬರಹಗಾರರಾದ ಯಂಡಮೂರಿ ವೀರೇಂದ್ರನಾಥ್ ಅವರ ಸ್ನೇಹವಾಯ್ತು. ಯಂಡಮೂರಿ ಅವರು ತಮ್ಮ 'ರಕ್ತಸಿಂಧೂರ' ಕಾದಂಬರಿ ನೀಡಿ ಅನುವಾದಿಸಲು ಇಚ್ಛೆಯಿದ್ದರೆ ಸ್ವಾಗತಿಸುವುದಾಗಿ ಹೇಳಿದರು.  ಅಲ್ಲಿಂದ ಮುಂದುವರೆದ ಇವರಿಬ್ಬರ ಅನುಬಂಧ ಸುಮಾರು 50 ಕಾದಂಬರಿಗಳ ಅನುವಾದದವರೆಗೆ ಮುಂದುವರೆಯಿತು.  ತೆಲುಗಿನ ಇತರ ಪ್ರಮುಖ ಕಾದಂಬರಿಕಾರರಿಂದಲೂ ಇವರಿಗೆ ನಿರಂತರ ಆಹ್ವಾನ ಸಂದಿತು. ಮಲ್ಲಾದಿ ವೆಂಕಟಕೃಷ್ಣಮೂರ್ತಿ ಅವರ ಕಾದಂಬರಿ ಅನುವಾದ ಗಣೇಶನ ಮದುವೆ, ಗೌರಿ ಗಣೇಶ ಮುಂತಾದವು ಚಲನಚಿತ್ರಗಳಾಗಿಯೂ ರಾಜಾ ಚೆಂಡೂರ್ ಅವರದೇ ಚಿತ್ರಕಥೆ-ಸಂಭಾಷಣೆಯಲ್ಲಿ ಭರ್ಜರಿ ಯಶ ಕಂಡಿವೆ. 

ರಾಜಾ ಚೆಂಡೂರ್ ತಾವೇ ಮೂರು ಪ್ರಕಾಶನ ಸಂಸ್ಥೆಗಳನ್ನು ಸ್ಥಾಪಿಸಿ ಅನುವಾದ, ಸ್ವಂತ ಕೃತಿಗಳು, ಇತರ ಲೇಖಕರ ಕೃತಿಗಳು, ಮಕ್ಕಳ ಕೃತಿಗಳು ಮುಂತಾದವುಗಳ ಪ್ರಕಟಣೆ ಕೈಗೊಂಡರು.  

ರಾಜಾ ಚೆಂಡೂರ್ ರೇಡಿಯೋ ನಾಟಕಗಳಿಗೆ ಖ್ಯಾತರಾದರು.  ಮುಂದೆ ದೂರದರ್ಶನದಲ್ಲಿ ಕನ್ನಡದ ಆಗಮನವಾದಾಗ ಅನೇಕ ಧಾರಾವಾಹಿಗಳನ್ನು ನಿರ್ದೇಶಿಸಿದರು.  ಎಚ್. ಎಲ್.  ನಾಗೇಗೌಡರ 'ದೊಡ್ಡಮನೆ' ಕಾದಂಬರಿ ಆಧಾರಿತ ಧಾರಾವಾಹಿಗೆ ಚಿತ್ರಕಥೆ-ಸಂಭಾಷಣೆ ಬರೆದು ಅದರ ಯಶಸ್ಸಿಗೆ ಕಾರಣರಾದರು.  ಅನೇಕ ಪ್ರಸಿದ್ಧ ಸಾಧಕರ ಕುರಿತಾದ ಇವರು ನಿರ್ದೇಶಿಸಿದ ಕಾರ್ಯಕ್ರಮ, ಉಮಾಶ್ರೀ ಅವರ ನಿರೂಪಣೆಯಲ್ಲಿ 50ಕ್ಕೂ ಹೆಚ್ಚು ಕಂತುಗಳಲ್ಲಿ ಮೂಡಿಬಂತು.  'ಸಸ್ಪೆನ್ಸ್ ರಾಮರಾವ್' ಸರಣಿ ಮೂಲಕ ಟಿ. ಕೆ. ರಾಮರಾಯರ ಕಥಾನಕಗಳನ್ನು ಮೂಡಿಸಿದ್ದರು.  'ಹರಯ ನೀ ಬಂದ ಸಮಯ' ಎಂಬ ಕಾರ್ಯಕ್ರಮ ಇವರು ಯುವಪೀಳಿಗೆಯ ಕುರಿತಾಗಿ ತಾವೇ ಬರೆದು ಮೂಡಿಸಿದ್ದು.   ಗಣೇಶನ ಮದುವೆ, ಗೌರಿ ಗಣೇಶ ಅಲ್ಲದೆ ಇನ್ನೂ ಹಲವು ಚಿತ್ರಗಳಿಗೆ ಚಿತ್ರಕಥೆ-ಸಂಭಾಷಣೆ ಬರೆದರು.  ಮುಂದೆ ಬರವಣಿಗೆಗೆ ಸಮಯ ಮೀಸಲಿರಿಸಿ, 
ಅನುವಾದಗಳ ಕಾಯಕದಿಂದಲೂ  ಹೊರಬಂದು ತಮ್ಮದೇ ಚಿಂತನಾನುಭವಗಳ ಕೇಂದ್ರಿತವಾದ ಹತ್ತಾರು ಕೃತಿಗಳನ್ನು ಬರೆದು ಪ್ರಕಟಿಸಿದರು.

ರಾಜಾ ಚೆಂಡೂರ್ ಅವರು 2024ರ ಸೆಪ್ಟೆಂಬರ್ 3ರಂದು ನಿಧನರಾದರು.  ಅವರಿಗೆ 66 ವರ್ಷ ವಯಸ್ಸಾಗಿತ್ತು. ಅಗಲಿದ ಸಾಧಕರಿಗೆ ನಮನ. 


Respects to departed soul, popular writer and playwright Raja Chendur 🌷🙏🌷




ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ