ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಸ್ ಬಾಲಿ


 ಎಸ್. ಬಾಲಿ


ಪ್ರಖ್ಯಾತ ಸುಗಮ ಸಂಗೀತ ಕಾರ್ಯಕ್ರಮಗಳನ್ನು ಕಂಡು ಅನುಭಾವಿಸಿದವರಿಗೆ ಆ ಕಾರ್ಯಕ್ರಮಗಳಲ್ಲಿ ಕಾಣಬರುತ್ತಿದ್ದ ಒಬ್ಬ  ತೇಜೋಮಯ ಪ್ರತಿಭಾವಂತ ವಾದ್ಯಗಾರರು ಕಣ್ತಪ್ಪಿರಲು ಸಾಧ್ಯವಿಲ್ಲ. ಅವರೇ ಬಹುವಾದ್ಯ ಪರಿಣಿತರಾಗಿ ಎಸ್. ಬಾಲಿ ಎಂದೇ ಪ್ರಖ್ಯಾತರಾಗಿದ್ದ ಎಸ್ ಬಾಲಸುಬ್ರಹ್ಮಣ್ಯಂ.

ಬಾಲಿ ಅವರು 1953ರ ಜನವರಿ 9ರಂದು ಬೆಂಗಳೂರಿನಲ್ಲಿ ಜನಿಸಿದರು.  ತಂದೆ ಬಯಾಲಜಿ ಸುಂದರೇಶನ್ ಎಂದೇ ಖ್ಯಾತರಾಗಿದ್ದ ಎಂ.ವಿ. ಸುಂದರೇಶನ್. ತಾಯಿ ಸಾವಿತ್ರಿ. ಚಿಕ್ಕಂದಿನಿಂದಲೇ ಸಂಗೀತದತ್ತ ಒಲವು ಮೂಡಿಸಿಕೊಂಡ ಬಾಲಿ ಪಾಲಕ್ಕಾಡು ಶ್ರೀ ರವೀಂದ್ರನಾಥ ವಾರಿಯರ್ ಬಳಿ ಮೃದಂಗ ಕಲಿತರು.  ಮುಂದೆ ಅವರು ಹಲವಾರು ಶಾಸ್ತ್ರೀಯ ಸಂಗೀತಗಾರರಿಗೆ  ಮೃದಂಗ ಪಕ್ಕವಾದ್ಯ ಸಹಕಾರದಲ್ಲಿ ಭಾಗಿಯಾಗುತ್ತಾ ಬಂದರು. 

ಬಾಲಿಯವರು ಮೃದಂಗ ಕಲಿತ ತೆರದ ಶ್ರದ್ಧೆಯಲ್ಲೇ  ತಬಲ, ಢೋಲಕ್, ಢೋಲ್ಕಿ, ಖೋಲ್, ಖಂಜಿರ ಮುಂತಾದ ಹಲವಾರು ವಾದ್ಯಗಳನ್ನು ನುಡಿಸುವ ಪರಿಣತಿಯನ್ನು ಸಾಧಿಸಿದರು.  ಹೀಗೆ ಸಕಲ ಲಯ ವಾದ್ಯಗಳ ನುಡಿಸುವಿಕೆಯಲ್ಲಿ ಪರಿಣತಿ ಪಡೆದ ಅಪರೂಪದ ಲಯವಾದ್ಯಗಾರರೆಂಬ ಹೆಗ್ಗಳಿಕೆಗೆ ಪಾತ್ರರಾಗಿ  ‘ರಿದಮ್ ಕಿಂಗ್’ ಎಂದೇ ಬಿರುದಾಂಕಿತರಾದರು. 

ಹೆಸರಾಂತ ಗಾಯಕರುಗಳಾದ ಬಾಳಪ್ಪ ಹುಕ್ಕೇರಿ, ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಶ್ಯಾಮಲಭಾವೆ, ಅಶ್ವತ್ಥ್, ರತ್ನಮಾಲಾ ಪ್ರಕಾಶ್, ಮಾಲತಿ ಶರ್ಮ  ಮುಂತಾದವರ ಕಾರ್ಯಕ್ರಮಗಳಲ್ಲೆಲ್ಲ ಇವರ ವಾದ್ಯಲಯ ಅನುರಣಿಸುತ್ತಿತ್ತು. 

ಚಲನಚಿತ್ರ, ನೃತ್ಯ, ನಾಟಕ, ಕಿರುತೆರೆ, ಧ್ವನಿಮುದ್ರಣ ಕಾರ್ಯಗಳಲ್ಲಿ ಖ್ಯಾತ ಸಂಗೀತಗಾರರುಗಳಾದ ಜಿ.ಕೆ. ವೆಂಕಟೇಶ್, ವಿಜಯಭಾಸ್ಕರ್, ಎಂ. ರಂಗರಾವ್, ರಾಜನ್-ನಾಗೇಂದ್ರ, ಟಿ.ಜಿ. ಲಿಂಗಪ್ಪ, ಅನಂತಸ್ವಾಮಿ, ಅಶ್ವತ್ಥ್-ವೈದಿ ಮುಂತಾದವರ ಸಂಗೀತ ಸಂಯೋಜನೆಗಳಿಗೆ ಬಾಲಿ ಅವರ ಲಯ ಸಂಯೋಜನೆ ಒಂದುಗೂಡಿದೆ.‍‍ ದಕ್ಷಿಣ ಭಾರತದ ಏಕೈಕ ರಿದಂ ಕಂಪೋಸರ್-ಅರೇಂಜರ್-ಕಂಡಕ್ಟರ್ ಎಂಬ ಹೆಗ್ಗಳಿಕೆ ಅವರದ್ದಾಗಿದೆ. ಶಂಕರನಾಗ್‌ ಅವರ ಸಂಕೇತ್‌ ಸ್ಟುಡಿಯೊ ಆರಂಭದ ಸವಾಲುಗಳನ್ನು ಎದುರಿಸಲು ಬಾಲಿ ಹೆಗಲು ನೀಡಿದರು.

ಬಾಲಿ ಅವರು ಕನ್ನಡದ ಮೊಟ್ಟಮೊದಲ ಧ್ವನಿಸುರಳಿ ಕವಿ ನಿಸಾರ ಅಹಮ್‌ದರವರ ನಿತ್ಯೋತ್ಸವದಿಂದ ಮೊದಲುಗೊಂಡು  ಮೈಸೂರು ಅನಂತಸ್ವಾಮಿಯವರ ಸಂಯೋಜನೆಗಳಿಗೆ ಸಹಾಯಕರಾಗಿ  ವಾದ್ಯದ ನೆರವು ನೀಡಿದವರು.  ಬಾಲಿ ಅವರು ಹಲವಾರು ಧ್ವನಿಸುರುಳಿಗಳು, ಕಿರುತೆರೆ, ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. ವಿಶ್ವದೆಲ್ಲೆಡೆ ಬಾಲಿ ಅವರ ಲಯ ಸಂಗೀತ ಮೊಳಗಿತ್ತು.

ಬಾಲಿ ಅವರಿಗ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಗೌರವ, ಕರ್ನಾಟಕ ಕಲಾಶ್ರೀ ಪ್ರಶಸ್ತಿ ಒಳಗೊಂಡಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು.

ಬಾಲಿ ಅವರು 2025ರ ಜನವರಿ 3ರಂದು ಈ ಲೋಕವನ್ನಗಲಿದರು. 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ