ಎಲ್. ಜಿ. ಸುಮಿತ್ರಾ
ಎಲ್.ಜಿ. ಸುಮಿತ್ರಾ
ಎಲ್.ಜಿ. ಸುಮಿತ್ರಾ ಬರಹಗಾರ್ತಿಯಾಗಿ, ಜಾನಪದ ತಜ್ಞೆಯಾಗಿ, ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದವರಾಗಿ ಹೆಸರಾಗಿದ್ದವರು
ಎಲ್.ಜಿ. ಸುಮಿತ್ರಾ ಅವರು 1934ರ ಮಾರ್ಚ್ 14 ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎಲ್. ಗುಂಡಪ್ಪ ಅವರು ವಿದ್ವಾಂಸರು ಮತ್ತು ಸಾಹಿತಿಗಳಾಗಿ ಹೆಸರಾಗಿದ್ದರು. ತಾಯಿ ಶಾರದಮ್ಮ. ಸುಮಿತ್ರಾ ಅವರು ತಮ್ಮ ಸಹೋದರಿಯರಾದ ವಿಮಲ ಮತ್ತು ಕಮಲಾ ಅವರ ಜೊತೆಯಾಗಿ 'ಎಲ್ಜಿ ಸಿಸ್ಟರ್ಸ್' ಎಂಬ ಖ್ಯಾತಿಯೊಂದಿಗೆ ಕನ್ನಡದ ಜಾನಪದ ಗೀತೆಗಳು ಮತ್ತು ಕನ್ನಡದ ಮಹಾನ್ ಕವಿಗಳ ಭಾವಗೀತೆಗಳನ್ನು ಪ್ರಸ್ತುತ ಪಡಿಸಿ ಹೆಸರಾಗಿದ್ದರು.
ಸುಮಿತ್ರಾ ಅವರು ಉಪನ್ಯಾಸಕಿಯಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಮುಂದೆ ಆಕಾಶವಾಣಿಯಲ್ಲಿ ಹಿರಿಯ ಅಧಿಕಾರಿಗಳವರೆಗಿನ ಜವಾಬ್ದಾರಿಗಳಲ್ಲಿ ಸೇವೆ ಸಲ್ಲಿಸಿದರು
ಕಾವ್ಯ ಕಾವೇರಿ, ಸ್ಪರ್ಶರೇಖೆ, ಕರ್ನಾಟಕ ವೃತ್ತಿಗಾಯಕರು, ಭಾರತದ ಸಂಗೀತ ವಾದ್ಯಗಳು ಮುಂತಾದವು ಸುಮಿತ್ರಾ ಅವರ ಕೃತಿಗಳಲ್ಲಿ ಸೇರಿವೆ.
ಸುಮಿತ್ರಾ ಅವರಿಗೆ ಏಷ್ಯನ್ ಬ್ರಾಡ್ ಕಾಸ್ಟಿಂಗ್ ಯೂನಿಯನ್ ನೀಡಿದ ಪ್ರಶಸ್ತಿ, ‘ಕಾವ್ಯಕಾವೇರಿ' ಕೃತಿಗೆ ಕರ್ನಾಟಕ ಸರಕಾರದ ಬಹುಮಾನ, ಜಾನಪದ ಲೋಕ ಹಾಗೂ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ‘ಜಾನಪದ ತಜ್ಞೆ’ ಪ್ರಶಸ್ತಿ, ಎಂಟನೆಯ ಸಂಗೀತ ಸಮ್ಮೇಳನ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.
ಎಲ್. ಜಿ. ಸುಮಿತ್ರ ಅವರ ಚಿತ್ರದುರ್ಗ, ನಮ್ಮೂರು ಮತ್ತು ಪುಟ್ಟ ಬಾಲೆ ಎಂಬ ಮೂರು ಸೊಗಸಾದ ಕವನಗಳು ‘ಸುವರ್ಣ ಸಂಪುಟ' ಕೃತಿಯಲ್ಲಿ ಪ್ರಕಟಗೊಂಡಿವೆ. ಅವರ ಪುಟ್ಟ ಬಾಲೆ ಕವನ ಇಂತಿದೆ:
ಬಂದಳು ಆ ಬಾಲೆ ನೀರ ತಡಿಗೆ,
ನೋಡೆನಿತು, ಚೆಲುವವಳ ಕುರುಳ ತೊಡಿಗೆ,
ತಂದಿತ್ತು ಜಲಸಿರಿಯ ಮಳೆಯು ಹೊಳೆಗೆ.
ಜಾರು ಹೊಳೆ ಚಿಮ್ಮುತ್ತ ಬಡಿದು ಕರೆಗೆ
ಜಳಜಳನೆ ದನಿಗೈಯ ಒಳಗೆ ಹೊರಗೆ
ಕಳಕಳಿಸಿ ಹೊಳೆದಿತ್ತು ಬೆಳ್ಳಿ ಹಲಗೆ.
ಕೊಡವನತ್ತಲೆ ಬಿಟ್ಟು ದಡದ ಮೇಲೆ
ಉಟ್ಟ ಲಂಗದ ನಿರಿಗೆ ಬಳುಕಿ ಜೋಲೆ
ಹುಡುಗು ಮನದುಲ್ಲಸಕೆ ಮನವು ಸೋಲೆ
ಆಟಕ್ಕೆ ತೊಡಗಿದಳು ಪುಟ್ಟ ಬಾಲೆ.
ಎಳೆ ಮನವ ಸೆರೆಹಿಡಿಯೆ ಹೊಳೆಯ ಮೋಡಿ
ಪುಟ್ಟ ಬಾಲೆಯು ನಿಂತು ನಲಿದು ನೋಡಿ
ದುಂಡುಗಣ್ಣಿನ ಚಪಲದಿಟ್ಟಿಯಾಡಿ
ನಿಂತಾಗ ಅಲ್ಲಾಯ್ತು ಸೊಗದ ಜೋಡಿ
ನೆರಿಗೆಯಂಚಾಗಿತ್ತು ಅಲೆಗೆ ಜೋಡಿ.
ಕುರುಳು ನರ್ತಿಸುತಿತ್ತು ಗಾಳಿ ಗಾಡಿ.
ಅಲೆಯ ಹೊಳಪಿಗೆ ಸಾಟಿ ಕಣ್ಣ ಗಾಡಿ.
ಆರ ಮಗಳಿವಳಾರ ಬಾಳ ಬಾನಾಡಿ?
ಎಳನಗೆಯ ಕೇಳು ಮೈಯ್ಯ ಚಿಕ್ಕ ಹುಡುಗಿ
ಆಟವನು ತೊರೆದಿಂತು ನೀರಿಗಾಗಿ
ಬರಬಹುದೆ ಕೊಡ ಹೊತ್ತು ದೊಡ್ಡದಾಗಿ?
ಈ ಬವಣೆಯೇಕಮ್ಮ? ಹೇಳು ನನಗಾಗಿ.
ಹೊಳೆಯ ದಡದಲಿ ನಿಂತು ನಲಿದ ಆ ಬಾಲೆ
ತೆರಳುತಿರೆ ಸೊಗಕೆಂಥ ಬಲು ಭಾರಿ ಸೋಲೆ !
ಹೊರೆ ಭಾರ ಹೊರಿಸುತ್ತ ಮಗುಮನದ ಮೇಲೆ
ತಾಯೆ ನೀ ತೆರಳಿದೆಯ ಹರಿದೊಲುಮೆ ಮಾಲೆ?
ಎಲ್.ಜಿ. ಸುಮಿತ್ರಾ ಅವರು 2025ರ ಜನವರಿ 1ರಂದು ನಿಧನರಾದರು.
writer L. G. Sumitra 🌷🙏🌷
ಕಾಮೆಂಟ್ಗಳು