ಕೆ. ಕೆ. ಗಂಗಾಧರನ್
ಕೆ. ಕೆ. ಗಂಗಾಧರನ್ ನಿಧನ
ಅನುವಾದ ಕ್ಷೇತ್ರದಲ್ಲಿ ಹೆಸರಾಗಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರಾಗಿದ್ದ ಕೆ. ಕೆ. ಗಂಗಾಧರನ್ ನಿಧನರಾಗಿದ್ದಾರೆ.
ಗಂಗಾಧರನ್ 1949ರ ಮಾರ್ಚ್ 10ರಂದು ಕೇರಳದ ಕಾಸರಗೋಡು ಜಿಲ್ಲೆಯ ಪಾತನಡ್ಕ ಎಂಬ ಹಳ್ಳಿಯಲ್ಲಿ ಜನಿಸಿದರು. ಬಾಲ್ಯವನ್ನು ಕೊಡಗಿನ ಸೋಮವಾರಪೇಟೆಯ ಸಮೀಪದ ಕಬ್ಬಿಣಸೇತುವೆ ಎಂಬಲ್ಲಿ ಕಳೆದರು. ಕಾಜೂರು, ಸೋಮವಾರಪೇಟೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿ, ಪುತ್ತೂರಿನ ವಿವೇಕಾನಂದ ಕಾಲೇಜಿನಿಂದ ಬಿ.ಎಸ್ಸಿ.ಪದವಿ ಪಡೆದರು.
1970ರಲ್ಲಿ ಹಾಸನದ ಕೊಥಾರಿ ಕಾಫಿ ಕ್ಯೂರಿಂಗ್ ವರ್ಕ್ಸ್ನಲ್ಲಿ ವೃತ್ತಿಯನ್ನು ಆರಂಭಿಸಿದ ಗಂಗಾಧರನ್ ಅವರು 1974ರಲ್ಲಿ ಅಂಚೆ ಇಲಾಖೆಯ ರೈಲ್ವೆ ಮೇಲ್ ಸರ್ವಿಸ್ ವಿಭಾಗದಲ್ಲಿ ಉದ್ಯೋಗ ಪಡೆದರು. ಅರಸೀಕೆರೆ, ತುಮಕೂರು, ಮೈಸೂರು, ಮಡಿಕೇರಿ ಹಾಗೂ ಬೆಂಗಳೂರುಗಳಲ್ಲಿ ಕೆಲಸ ಮಾಡಿದ ಅವರು 2009ರಲ್ಲಿ ನಿವೃತ್ತಿ ಹೊಂದಿ ಬೆಂಗಳೂರಿನಲ್ಲಿ ನೆಲೆಸಿಸಿದ್ದರು.
ಕನ್ನಡ ಮಾಧ್ಯಮದಲ್ಲಿ ಕಲಿತ ಗಂಗಾಧರನ್ ಅವರು, ಮನೆ ಮಾತು ಮಲಯಾಳಂನ್ನು ಸ್ವತಂತ್ರವಾಗಿ ಕಲಿತರು. ಅಂಚೆ ವಿಭಾಗದ ಅವಿರತ ಕೆಲಸಗಳ ನಡುವೆ ಇದ್ದ ಅವರನ್ನು ಮೈಸೂರಿನಲ್ಲಿ ಅನುವಾದ ಕ್ಷೇತ್ರಕ್ಕೆ ನೇರವಾಗಿ ಎಳೆದು ತಂದುದು 'ಒಡನಾಡಿ' ಪತ್ರಿಕೆ. ಆ ಪತ್ರಿಕೆಗಾಗಿ ಇ.ಎಂ.ಎಸ್. ನಂಬೂದಿರಿಪಾದ್ ಅವರ ಬರಹಗಳನ್ನು ಅನುವಾದಿಸುವವರು ಬೇಕಾಗಿತ್ತು. ಒಡನಾಡಿ ನಾರಾಯಣ ಆ ಜವಾಬ್ದಾರಿಯನ್ನು ಪರಿಚಯವಿದ್ದ ಕೆಕೆಜಿ ಅವರಿಗೆ ವಹಿಸಿದರು. ಆ ಕೆಲಸ ಕಷ್ಟದಾಯಕವಾಗಿತ್ತು. ಆದರೂ ಬಿ.ಗಂಗಾಧರಮೂರ್ತಿ, ಜಿ.ಎಚ್. ಸಣ್ಣಗುಡ್ಡಯ್ಯ ಮೊದಲಾದವರೂ ಅನುವಾದವನ್ನು ಕೈಬಿಡದಂತೆ ಕೆಕೆಜಿಯವರನ್ನು ಪ್ರೊತ್ಸಾಹಿಸಿದರು. ಗಂಗಾಧರನ್ ಮಾಡಿದ ಅನುವಾದವನ್ನು ಒಡನಾಡಿ ನಾರಾಯಣ ಅವರು ಸಂಪೂರ್ಣ ತಿದ್ದಿ ತೀಡಿ, ಒಡನಾಡಿಯಲ್ಲಿ ಪ್ರಕಟಿಸುತ್ತಿದ್ದರು. ಹೀಗೆ ಕುದುರಿದ ಅನುವಾದದ ಆಸಕ್ತಿ ಕಾಲಕ್ರಮೇಣ ಅವರ ಬದುಕಿನ ಪ್ರಧಾನ ಆಸಕ್ತಿಯಾಯಿತು.
ಕೆ.ಕೆ.ಗಂಗಾಧರನ್ ಅವರು ಪತ್ರಿಕೆಗಳಲ್ಲಿ ತಮ್ಮ ಅನುವಾದಗಳ ಪ್ರಕಟಣೆಯನ್ನು 1983ರಲ್ಲಿ ಪ್ರಾರಂಭಿಸಿದರೂ, 2009ರಲ್ಲಿ ನಿವೃತ್ತಿಯಾದ ಬಳಿಕವೇ ಅವರ ಮೊದಲ ಪುಸ್ತಕ ಪ್ರಕಟವಾಯಿತು. ಮುಂದೆ ಅವರ ಸುಮಾರು 20 ಅನುವಾದಿತ ಪುಸ್ತಕಗಳು ಹೊರಬಂದವು.
ಗಂಗಾಧರನ್ ಅವರು ಮಲಯಾಳಂನಲ್ಲಿ ಪ್ರಸಿದ್ಧರಾಗಿರುವ ತಕಳಿ ಶಿವಶಂಕರ ಪಿಳ್ಳೈ, ಎಸ್.ಕೆ.ಪೊಟ್ಟೆಕ್ಕಾಟ್, ಎಂ.ಟಿ. ವಾಸುದೇವನ್ ನಾಯರ್, ವೈಕ್ಕಂ ಮಹಮ್ಮದ್ ಬಷೀರ್, ಮಲಯಾಟ್ಟೂರು ರಾಮಕೃಷ್ಣನ್, ಪುನತ್ತಿಲ್ ಕುಂಞಬ್ದುಲ್ಲ ಮೊದಲಾದವರ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅದೇ ರೀತಿ ಬಹು ಜನಪ್ರಿಯರಾಗಿರುವ ಕಮಲಾದಾಸ್, ಕವಿತಾ ಮೊದಲಾದವರ ಕೃತಿಗಳನ್ನೂ ಕನ್ನಡಕ್ಕೆ ತಂದಿದ್ದಾರೆ. ನಟಿ ಶಕೀಲಾ ಅವರ ಅತ್ಮಕತೆಯನ್ನು ಅನವಾದಿಸಿದ್ದಾರೆ. ಅದರೊಡನೆ ಉಣ್ಣಿಕೃಷ್ಣನ್ ಪುದೂರ್ ಅವರ ಜೈನ ಇತಿಹಾಸವನ್ನು ಆಧರಿಸಿದ 'ಧರ್ಮಚಕ್ರ' ಕಾದಂಬರಿ, ಮಾಂತ್ರಿಕ ಕಾದಂಬರಿಗಳನ್ನು ಬರೆಯುವುದರಲ್ಲಿ ನಿಸ್ಸೀಮರಾದ ಏಟುಮಾನೂರು ಶಿವಕುಮಾರ್ ಅವರ 'ಅಷ್ಟಮಂಗಲ', ಪ್ರಸಿದ್ಧ ಪೌರಾಣಿಕ ಕಾದಂಬರಿ 'ದಮಯಂತಿ' ಮುಂತಾದ ವೈವಿಧ್ಯವೂ ಇವರ ಅನುವಾದಗಳಲ್ಲಿವೆ. ಉಣ್ಣಿಕೃಷ್ಣನ್ ಪುದೂರ್, ಮೆಯವೇಲಿ ಬಾಬೂಜಿ, ಅರವಿಂದನ್, ಜಿ.ಡಿ. ಗೇಬ್ರಿಯೆಲ್, ಸುಧಾಕರನ್ ರಾಮಂತಳಿ, ಡಾ.ಎಂ.ಪಿ.ರಾಜನ್, ಬ್ರಿಜಿ, ಮೇಘನಾಥನ್, ಇಂದಿರಾ ಬಾಲನ್, ಡಾ.ಪ್ರಭಾಕರನ್ ಪಳಸ್ಸಿ, ಕೆ.ಕೆ.ಸುಧಾಕರನ್, ಪಿ.ಎನ್.ವಿಜಯನ್, ಬಾಲಕೃಷ್ಣನ್ ಮಾಂಗಾಡ್, ಹೊಸ ಜನಾಂಗದ ಕತೆಗಾರ ಸಂತೋಷ್ ಏಚ್ಚಿಕಾನಂ ಮೊದಲಾದವರ ಬರಹಗಳನ್ನೂ. ಅನುವಾದಿಸಿದ್ದರು.
ಕೆ.ಕೆ. ಗಂಗಾಧರನ್ ಅವರ “ಮಲಯಾಳಂ ಕಥೆಗಳು” ಅನುವಾದ ಕೃತಿಗೆ 2023ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ ಲಭಿಸಿತ್ತು.
ಹಲವು ಪುಸ್ತಕ ಪ್ರಶಸ್ತಿಗಳೇ ಅಲ್ಲದೆ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅನುವಾದಕರಿಗೆ ನೀಡುವ 2017ನೇ ಸಾಲಿನ ಗೌರವ ಪ್ರಶಸ್ತಿಯನ್ನು ಕೆ.ಕೆ.ಗಂಗಾಧರನ್ ಅವರಿಗೆ ನೀಡಿ ಗೌರವಿಸಿತ್ತು.
ಕೆ. ಕೆ. ಗಂಗಾಧರನ್ 2025ರ ಜನವರಿ 19ರಂದು ಈ ಲೋಕವನ್ನಗಲಿದರು.
Respects to departed soul writer K.K.Gangadharan 🌷🙏🌷
ಕಾಮೆಂಟ್ಗಳು