ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾ. ಸೀತಾರಾಂ


 ರಾ. ಸೀತಾರಾಂ


ಪ್ರಖ್ಯಾತ ಮೈಸೂರು ಸಹೋದರರಲ್ಲಿ ಒಬ್ಬರಾದ ರಾ. ಸೀತಾರಾಂ ಸಂಗೀತ ಮತ್ತು ಚಿತ್ರಕಲೆ ಎರಡೂ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ್ದವರು.  

ರಾ. ಸೀತಾರಾಂ ಅವರು 1918ರ ಜುಲೈ 8 ರಂದು ಮೈಸೂರಿನಲ್ಲಿ ಜನಿಸಿದರು.  

ರಾ. ಸೀತಾರಾಂ ಅವರ ತಂದೆ ಸಂಗೀತ ಪ್ರೇಮಿಗಳಾದ ರಾಮಯ್ಯ ಮತ್ತು ತಾಯಿ ವರಲಕ್ಷ್ಮಮ್ಮ. ಸಹೋದರರಾದ ರಾ. ಚಂದ್ರಶೇಖರಯ್ಯ, ರಾ. ಸತ್ಯನಾರಾಯಣ, ರಾ. ವಿಶ್ವೇಶ್ವರನ್‌ ಎಲ್ಲರೂ ಸಂಗೀತ ವಿದ್ವಾಂಸರೆ. ತಾಯಿ, ತಂದೆಯಿಂದಲೇ ಗಾಯನ ಹಾಗೂ ವೀಣಾವಾದನ ಶಿಕ್ಷಣ ಪಡೆದ ರಾ. ಸೀತಾರಾಂ ಅವರು ಮುಂದೆ  ವೀಣೆ ಶಿವರಾಮಯ್ಯನವರಲ್ಲಿ ಹೆಚ್ಚಿನ ಸಂಗೀತ ಶಿಕ್ಷಣ ಪಡೆದರು. ಮೈಸೂರು ಮಹಾರಾಜರ ದರ್ಬಾರ್ ಹಾಲ್, ಶೃಂಗೇರಿ ಜಗದ್ಗುರುಗಳ ಆಸ್ಥಾನ, ತಿರುವಯ್ಯಾರ್ ತ್ಯಾಗರಾಜರ ಸಂಗೀತೋತ್ಸವಗಳಲ್ಲಿ ಸೇರಿದಂತೆ ಅವರ ಸಂಗೀತ ಕಾರ್ಯಕ್ರಮಗಳು ದೇಶದ  ಎಲ್ಲ ಪ್ರಮುಖ ವೇದಿಕೆಗಳಲ್ಲಿ ಹಾಗೂ ವಿದೇಶಗಳಲ್ಲಿಯೂ ನೆರವೇರಿತ್ತು.  ಸಂಗೀತ ಮತ್ತು ಚಿತ್ರಕಲೆಯ ಕುರಿತಂತೆ ಅವರು ಅನೇಕ ಉಪನ್ಯಾಸಗಳು ಮತ್ತು ಪ್ರಾತ್ಯಕ್ಷಿಕೆಗಳನ್ನೂ ನೀಡಿದ್ದರು.   

ರಾ. ಸೀತಾರಾಂ ಅವರು ಚಿತ್ರಕಲೆಯಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದರು. 1940ರಿಂದಲೂ ಹಲವಾರು ವರ್ಷ ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿನ ಚಿತ್ರಕಲಾ ಪ್ರದರ್ಶನ, ದಕ್ಷಿಣಭಾರತ ಸೊಸೈಟಿ ಬೆಂಗಳೂರು, ಅಖಿಲ ಭಾರತ ಖಾದಿ ಪ್ರದರ್ಶನ, ಆಲ್‌ ಇಂಡಿಯಾ ಫೈನ್‌ ಆರ್ಟ್ಸ್ ಇನ್‌ಸ್ಟಿಟ್ಯೂಟ್‌ ಕೋಲ್ಕತ್ತಾ, ಮೈಸೂರಿನ ಲಲಿತಕಲಾ ಮಹೋತ್ಸವ, ವಿರಾಜಪೇಟೆಯ ಕಲಾ ಮಹೋತ್ಸವ, ರಾಜ್ಯ ಚಿತ್ರಕಲಾ ವಿದ್ಯಾರ್ಥಿಗಳ ಸಮ್ಮೇಳನ ನಂಜನಗೂಡು ಮುಂತಾದೆಡೆಗಳಲ್ಲೆಲ್ಲ ಅವರ  ಚಿತ್ರಕಲಾ ಪ್ರದರ್ಶನಗಳು ನಿರಂತರ ನಡೆಯುತ್ತಿದ್ದವು. ಭಾಗವಹಿಸಿದ ಎಲ್ಲಾ ಸ್ಪರ್ಧೆಗಳಲ್ಲೂ ಬಹುಮಾನ ಗಳಿಸುತ್ತಿದ್ದ ರಾ. ಸೀತಾರಾಂ ಅವರಿಗೆ  ಶೃಂಗೇರಿ ಅವನಿ ಶಂಕರಮಠದಿಂದ ಚಿತ್ರಕಲಾ ನಿಪುಣ ಬಿರುದು ಸಂದಿತ್ತು. 

ದೇಶದ ಇತರೆಡೆಗಳಲ್ಲಿ ಮತ್ತು ವಿದೇಶಗಳಲ್ಲಿ ಸಹಾ ರಾ. ಸೀತಾರಾಂ ಅವರ ಚಿತ್ರ ಪ್ರದರ್ಶನಗಳು ಜನರನ್ನಾಕರ್ಷಿಸಿದ್ದವು,  ಅವರು ರಚಿಸಿದ್ದ ಅನೇಕ ಚಿತ್ರಗಳು ರಾಜ್ಯದ ಪ್ರಮುಖ ವಾರ ಪತ್ರಿಕೆಗಳಲ್ಲಿ ಮುಖಪುಟದ ಸ್ಥಾನ ಪಡೆದಿದ್ದವು.  ತಾವು ರಚಿಸಿದ ಜಲವರ್ಣ ಚಿತ್ರಗಳಿಗೆ ಸಂಗೀತ ಸಾಧಕರನ್ನೇ ರೂಪದರ್ಶಿಯನ್ನಾಗಿಸಿಕೊಂಡಿದ್ದಲ್ಲದೆ, ಅಣ್ಣ, ತಮ್ಮ, ಮಕ್ಕಳು, ಮಡದಿ ಇವರೆಲ್ಲರ ಗಾಯನ ಮಾಡುವ, ವಾದ್ಯ ನುಡಿಸುವ ಹಲವಾರು ಭಂಗಿಗಳನ್ನು ಕುಂಚದಲ್ಲಿ ಸೆರೆಹಿಡಿದಿದ್ದರು. ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರು, ಕನಕದಾಸರು, ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಾ ಶಾಸ್ತ್ರಿಗಳು, ಹರಿಕೇಷ ನಲ್ಲೂರು ಮುತ್ತಯ್ಯ ಭಾಗವತರು, ಸಾಂಬಮೂರ್ತಿ, ಕಾರೈಕುಡಿ ಸಾಂಬಶಿವಯ್ಯ, ಅರಿಯಾಕ್ಕುಡಿ ರಾಮಾನುಜ ಅಯ್ಯಂಗಾರ್ ಮುಂತಾದವರ ಚಿತ್ರಗಳನ್ನು ರಚಿಸಿದ ಕೀರ್ತಿ ರಾ. ಸೀತಾರಾಂ ಅವರದ್ದು.  ಇವರು ರಚಿಸಿದ  ಉತ್ತರ ಭಾರತದ ಪ್ರಮುಖ ಯಾತ್ರಾ ಸ್ಥಳಗಳು, ಹಿಮಾಲಯದ ನಿಸರ್ಗದ ರಮ್ಯನೋಟದ ತೈಲಚಿತ್ರಗಳು ಜಗನ್ಮೋಹನ ಅರಮನೆ, ಮಾನಸ ಗಂಗೋತ್ರಿಯ ಮ್ಯೂಸಿಯಂ, ಧರ್ಮಸ್ಥಳದ ಮಂಜೂಷಾ,  ಜಾನಪದ ವಸ್ತು ಸಂಗ್ರಹಾಲಯ, ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿ, ರಾಜ್ಯ ಲಲಿತ ಕಲಾ ಅಕಾಡೆಮಿ ಮುಂತಾದ ಸಂಸ್ಥೆಗಳ ಸಂಗ್ರಹಗಳಲ್ಲಿದೆ.   ಇವರು ರಚಿಸಿದ ರೇಖಾ ಚಿತ್ರಗಳು ಸಹ ಮನಮೋಹಕವಾಗಿವೆ.  ಅನೇಕ ಶಿಲ್ಪಗಳನ್ನೂ ರಚಿಸಿದ್ದರು.  1954ರಲ್ಲಿ ಇವರು ಮೈಸೂರಿನಲ್ಲಿ ಅಂದಿನ ರಾಷ್ಟ್ರಪತಿಗಳಿಗೆ ನೀಡಿದ ಸದ್ಗುರು ತ್ಯಾಗರಾಜರ ತೈಲವರ್ಣಚಿತ್ರ ಇಂದಿಗೂ ರಾಷ್ಟ್ರಪತಿ ಭವನದಲ್ಲಿ ಕಂಗೊಳಿಸುತ್ತಿದೆ.  

ರಾ. ಸೀತಾರಾಂ ಅವರಿಗೆ ಕನ್ನಡ ರಂಗ ಕಲಾವಿದರ ಶತಮಾನೋತ್ಸವ ಆಚರಣೆ (1948) ಗೌರವ, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಗೌರವ (1974), ನವದೆಹಲಿಯ ಐಎಫ್ಎಸಿಎಸ್ ಪ್ರದರ್ಶನದಲ್ಲಿನ ಗೌರವ (1988), ಪಂಜಾಬ್ ಫೈನ ಆರ್ಟ್ಸ್ ಸೊಸೈಟಿ (1945) ಗೌರವ, ದಕ್ಷಿಣ ಭಾರತ ಕಲಾವಿದರ ವಾರ್ಷಿಕ ಪ್ರದರ್ಶನ  (1946) ಗೌರವ, 1953ರಲ್ಲಿ ಕುಮಟಾದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ, ಕರ್ನಾಟಕ ಲಲಿತ  ಅಕಾಡಮಿ ಮತ್ತು  ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಗೌರವ (1994), ಎಂ.ಟಿ.ವಿ ಆಚಾರ್ಯ ಪ್ರಶಸ್ತಿ (2001), ಕರ್ನಾಟಕ ಚಿತ್ರಕಲಾ ಪರಿಷತ್ ಗೌರವ (2003) ಮುಂತಾದ ಅನೇಕ ಗೌರವಗಳು ಸಂದಿದ್ದವು.  

ರಾ. ಸೀತಾರಾಂ ತಮ್ಮ ಸಹೋದರರೊಂದಿಗೆ ತಮ್ಮ  ತಾಯಿಯವರ ಹೆಸರಿನಲ್ಲಿ ಪ್ರಾರಂಭಿಸಿದ ವರಲಕ್ಷ್ಮೀ ಅಕಾಡೆಮಿ ಆಫ್‌ ಫೈನ್‌ ಆರ್ಟ್ಸ್ ಮುಖಾಂತರ ವಿದ್ಯಾರ್ಥಿಗಳಿಗೆ  ಚಿತ್ರಕಲಾ ಶಿಕ್ಷಣ ನೀಡುತ್ತಿದ್ದರಲ್ಲದೆ,  ಈ ಸಂಸ್ಥೆಯ ಮುಖಾಂತರವೇ ತಮ್ಮ ಸಹೋದರರೊಂದಿಗೆ ಸಂಗೀತ ಶಿಕ್ಷಣವನ್ನೂ ನೀಡುತ್ತಿದ್ದರು.  ಸಮಕಾಲೀನ ಸಂಗೀತ ಲೋಕಕ್ಕೆ ಇವರು ನೀಡಿದ ಕೊಡುಗೆಯನ್ನು ಪ್ರಶಂಸಿಸಿರುವ ಸಂಗೀತ ವಿಮರ್ಶಕರಾದ ಬಿ.ವಿ.ಕೆ ಶಾಸ್ತ್ರಿಯವರು “ಇವರು ಅಭೇದ್ಯರು” ಎಂದು ಕರೆದು  ಗೌರವ ತೋರಿದ್ದಾರೆ. 

ಆರ್. ಸೀತಾರಾಂ ಅವರು 2012ರ ಜನವರಿ 12ರಂದು ಈ ಲೋಕವನ್ನಗಲಿದರು.  

On the birth anniversary of great painter and musician R. Seetharaam 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ