ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭೂಪೇನ್ ಹಝಾರಿಕ


 ಭೂಪೇನ್ ಹಝಾರಿಕ


ಭಾರತ ರತ್ನ ಡಾ.ಭೂಪೇನ್ ಹಝಾರಿಕಾ ಭಾರತದ ಪೂರ್ವೋತ್ತರ ಮೂಲೆಯಿಂದ ಬಂದ ಮೊಟ್ಟಮೊದಲ ಸುಪ್ರಸಿದ್ಧ ಸಂಗೀತಗಾರ, ಹಾಡುಗಾರ, ಸಂಗೀತ ನಿರ್ದೇಶಕ, ಕವಿ, ಪತ್ರಕರ್ತ, ಗೀತ ರಚನಕಾರ ಹಾಗೂ ನಿರ್ಮಾಪಕರು.  ಅವರು ತಮ್ಮ ಅನುಪಮ ಕೃತಿ 'ಗಂಗಾ ಬೆಹ್ತಿ ಹೊ ಕ್ಯೊಂ' ಗೀತೆಯ ರಚನೆ ಮತ್ತು ಗಾಯನದಿಂದ ದೇಶದಾದ್ಯಂತ ಹೆಸರಾದವರು.

ಭೂಪೇನ್ ಹಝಾರಿಕಾ 1926ರ ಸೆಪ್ಟೆಂಬರ್ 8ರಂದು ಅಸ್ಸಾಂ ರಾಜ್ಯದ ಸಾದಿಯಾ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ನೀಲಕಾಂತ ಹಝಾರಿಕಾ.  ತಾಯಿ ಶಾಂತಿಪ್ರಿಯ ಹಝಾರಿಕಾ. ಗೌಹಾಟಿಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ,  ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಬಿ.ಎ ಮತ್ತು ಎಂ.ಎ ಪದವಿಗಳನ್ನು ಗಳಿಸಿದರಲ್ಲದೆ, 1952ರಲ್ಲಿ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಗಳಿಸಿದರು. 

ಭೂಪೇನ್ ಹಝಾರಿಕಾ ಬಾಲ್ಯದಲ್ಲೇ ಸಂಗೀತದ ಒಲವುಳ್ಳವರಾಗಿದ್ದರು. ತಾಯಿಯಿಂದ ಪ್ರಾರಂಭಿಕ ಸಂಗೀತ ಕಲಿತು, ಅಸ್ಸಾಂನ ಬುಡಕಟ್ಟು ಜನರ ಹಾಡುಗಳನ್ನು ಹತ್ತಿರದಿಂದ ಕೇಳಿ ಹಾಡಿ ನಲಿಯುತ್ತಾ ಬೆಳೆದರು. ಭೂಪೇನ್ ಹಝಾರಿಕಾ ಅವರ ಸಂಗೀತದಲ್ಲಿ ಅಸ್ಸಾಮಿನ ಜಾನಪದ ಭಾಷೆಯ ಸೊಗಡನ್ನು ಕಾಣಬಹುದಾಗಿದೆ. 

ಭೂಪೇನ್ ಹಝಾರಿಕಾ 1939ರಲ್ಲಿ ತಯಾರಾದ 'ಇಂದ್ರಾ ಮಲತಿ' ಎಂಬ ಚಿತ್ರದಿಂದ ಚಿತ್ರರಂಗಕ್ಕೆ ಕಾಲಿರಿಸಿದರು. ಅಸ್ಸಾಂನ ಎರಡನೆಯ ಸಿನಿಮಾ 'ಬಿಸ್ವ ಬಿಜೊಯ್ ನೊ ಜವಾನ್' ಚಿತ್ರದಲ್ಲಿ ತಮ್ಮ ಹಾಡುಗಳಿಂದ ರಸಿಕರ ಮನ ತಣಿಸಿದರು. 1977ರಲ್ಲಿ ತೆರೆಕಂಡ ಚಲನಚಿತ್ರ 'ಮೇರಾ ಧರಮ್ ಮೇರಿ ಮಾ' ದಲ್ಲಿ ಅವರ ಕಾರ್ಯ ವೈಖರಿಯನ್ನು ಕಾಣಬಹುದು. ಇದೇ ರೀತಿ ಮತ್ತೊಂದು ಹಿಂದಿ ಚಿತ್ರ 'ಏಕ್ ಪಲ್'. ಇದಕ್ಕೆ ಹಲವರು ಪ್ರಶಸ್ತಿಗಳು ಅವರನ್ನು ಅರಸಿ ಬಂದವು. 'ರುಡಾಲಿ' ಚಿತ್ರದ ಜನಪ್ರಿಯತೆಯಿಂದ 'ಭೂಪೇನ್ ಹಝಾರಿಕ' ಮುಂಬೈನಲ್ಲಿ ಮನೆಮಾತಾದರು.

ಭೂಪೇನ್ ಹಝಾರಿಕ ಒಂದು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ರಚಿಸಿ ಅದಕ್ಕೆ ಸಂಗೀತ ಅಳವಡಿಸಿದ್ದಲ್ಲದೆ, ಹಲವಾರು ಅಸ್ಸಾಮಿ ಚಲನಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದರು. ಅವರ ಶಕುಂತಲಾ, ಪ್ರತಿಧ್ವನಿ, ಲೋಟಿ ಘೋಟಿ ಅಸ್ಸಾಮಿ ಚಿತ್ರಗಳಿಗೆ ರಾಷ್ಟ್ರಪತಿ ಪದಕ ದೊರೆತವು. ಮುಂದೆ ಮುಂಬೈನಲ್ಲಿ ಅವರಿಗೆ ಸಲೀಲ್ ಚೌಧರಿ, ಬಲರಾಜ್ ಸಹಾನಿ ಮತ್ತಿತರ ಗೆಳೆತನ ದೊರೆಯಿತು.

ಭೂಪೇನ್ ಹಝಾರಿಕ ಸಂಗೀತ ನಿರ್ದೇಶನದ 'ಚಮೇಲಿ ಮೇಮ್ ಸಾಬ್' ಚಿತ್ರಕ್ಕೆ 'ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ' ದೊರೆಯಿತು. 'ರುಡಾಲಿ ಚಿತ್ರ'ಕ್ಕೆ 'ಏಶಿಯಾ ಪೆಸಿಫಿಕ್ ಫಿಲ್ಮ್ ಫೆಸ್ಟಿವಲ್ ಆಫ್ ಜಪಾನ್' ಪ್ರಶಸ್ತಿ ಸ್ವೀಕರಿಸಿದ ಪ್ರಥಮ ಭಾರತೀಯ ಸಂಗೀತ ನಿರ್ದೇಶಕರೆಂಬ ಕೀರ್ತಿಗೆ ಪಾತ್ರರಾದರು. 1979ರಲ್ಲಿ ಅವರಿಗೆ 'ಆಲ್ ಇಂಡಿಯ ಕ್ರಿಟಿಕ್ ಅಸೋಸಿಯೇಷನ್ ಅವಾರ್ಡ್ ಫಾರ್ ಬೆಸ್ಟ್ ಪರ್ಫಾರ್ಮಿಂಗ್ ಫೋಕ್ ಆರ್ಟ್' ಪ್ರಶಸ್ತಿ ಸಂದಿತು.

ಭೂಪೇನ್ ಹಝಾರಿಕ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಗೌರವ, ಪದ್ಮಭೂಷಣ, ಪದ್ಮವಿಭೂಷಣ ಮತ್ತು ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿ ಸಲ್ಲಿಸಲಾಯಿತು. ಅಸ್ಸಾಮಿನ ಪ್ರತಿಷ್ಠಿತ ಸೇತುವೆಗೆ ಅವರ ಹೆಸರನ್ನಿಡಲಾಯಿತು. ಭೂಪೇನ್ ಹಝಾರಿಕ 1993ರಲ್ಲಿ ಅಸ್ಸಾಂ ಸಾಹಿತ್ಯ ಸಭೆಗೆ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಗೌರವವೂ ಅವರಿಗೆ ಸಂದಿತ್ತು.

ಭೂಪೇನ್ ಹಝಾರಿಕ ತಮ್ಮ ಕೊನೆಯ ಚಲನಚಿತ್ರ 'ಗಾಂಧಿ ಟು ಹಿಟ್ಲರ್' ಚಿತ್ರದಲ್ಲಿ ಪ್ರಸಿದ್ಧ 'ವೈಷ್ಣವ ಜನತೊ ತೇನೆ ಕಹಿಯೆ' ಭಜನೆಯನ್ನು ಹಾಡಿದ್ದರು.

ಭೂಪೇನ್ ಹಝಾರಿಕಾ ಅವರು 2011ರ ನವೆಂಬರ್ 5ರಂದು ತಮ್ಮ 85ನೇ ವಯಸ್ಸಿನಲ್ಲಿ ಈ ಲೋಕವನ್ನಗಲಿದರು. ಗಂಗೆಯ ಹರಿವಿನಂತೆ, ಅವರ ಗಂಗೆಯ ಕುರಿತಾದ ಗೀತೆ ಮತ್ತು ಇಂಪಾದ ಜಾನಪದ ಧ್ವನಿ ಕೂಡಾ ಅಮರ.

On the birth anniversary of great singer and poet Bhupen Hazarika

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ