ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆರ್. ಗುಂಡೂರಾವ್


 ಆರ್. ಗುಂಡೂರಾವ್


ಆರ್. ಗುಂಡೂರಾವ್ ಹಲವು ನಿಟ್ಟಿನಲ್ಲಿ ಗಮನಾರ್ಹ ವ್ಯಕ್ತಿತ್ವದ ಮುಖ್ಯಮಂತ್ರಿಗಳಾಗಿದ್ದವರು.

ಗುಂಡೂರಾವ್ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ 1937ರ ಏಪ್ರಿಲ್ 8ರಂದು ಜನಿಸಿದರು. ತಂದೆ ಕೆ.ರಾಮರಾವ್. ಶಾಲಾ ಶಿಕ್ಷಕರು. ತಾಯಿ ಚೆನ್ನಮ್ಮ. ಗುಂಡೂರಾಯರು ಓದಿದ್ದು ಇಂಟರ್‍ ತನಕ ಮಾತ್ರಾ. ಆರಂಭದಲ್ಲಿ ಖಾಸಗಿ ಬಸ್ಸಿನ ಏಜೆಂಟರಾಗಿದ್ದರು. 

ಪ್ರಾರಂಭದಿಂದಲೂ ಜನಪ್ರಿಯ ವ್ಯಕ್ತಿತ್ವ ರೂಪಿಸಿಕೊಂಡಿದ್ದ ಗುಂಡೂರಾವ್ ತಮ್ಮ 24ನೇ ವಯಸ್ಸಿನಲ್ಲೆ ಕುಶಾಲನಗರ ಪುರಸಭೆಯ ಚುನಾವಣೆಯಲ್ಲಿ, ಕಾಂಗ್ರೆಸ್ ವಿರುದ್ಧ ಯುವಪಡೆಯನ್ನು ನಿಲ್ಲಿಸಿ, ಗೆಲ್ಲಿಸಿ, ಪುರಸಭೆಯನ್ನು ಕೈವಶ ಮಾಡಿಕೊಂಡಿದ್ದರು. 9 ವರ್ಷಗಳ ಕಾಲ ಪುರಸಭೆಯ ಅಧ್ಯಕ್ಷರಾಗಿದ್ದರು.

ಗುಂಡೂರಾಯರು 1965ರಲ್ಲಿ ಕೊಡಗು ಜಿಲ್ಲೆ ಕಾಂಗ್ರೆಸ್ ಸದಸ್ಯರಾದರು.  1972ರಲ್ಲಿ ಸೋಮವಾರ ಪೇಟೆ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. 1973ರಲ್ಲಿ ದೇವರಾಜ ಅರಸು ಸಂಪುಟದಲ್ಲಿ ವಾರ್ತೆ, ಕ್ರೀಡೆ ಮತ್ತು ಯುವಜನ ಸೇವಾ ಖಾತೆಯ ರಾಜ್ಯ ಸಚಿವರಾದರು. 1976ರಲ್ಲಿ ವಸತಿ ಮತ್ತು ಯುವಜನ ಸೇವಾಖಾತೆ ಸಚಿವರಾದರು.  1978ರಲ್ಲಿ ಸಾರಿಗೆ ಮತ್ತು ಪ್ರವಾಸೋದ್ಯಮ ಖಾತೆ ಸಚಿವರಾದರು. 1980ರಲ್ಲಿ ದೇವರಾಜ ಅರಸು ಸರಕಾರ ರಾಜೀನಾಮೆ ನೀಡಿ ಜನವರಿ 12ರಂದು ಗುಂಡೂರಾವ್ ಅತಿ ಕಿರಿಯ ವಯಸ್ಸಿನ ಮುಖ್ಯ ಮಂತ್ರಿಗಳಾಗಿ ಅಧಿಕಾರ ಸ್ವೀಕಾರ ಮಾಡಿದರು.

ಗುಂಡೂರಾಯರು ತಾವು ನೀಡಿದ ಆದೇಶಗಳು ತಕ್ಷಣವೆ ಜಾರಿಗೆ ಬರಬೇಕು ಎಂಬ ಕ್ಷಿಪ್ರ ಮನೋಧರ್ಮಕ್ಕೆ ಹೆಸರಾಗಿದ್ದರು. ಬೆಂಗಳೂರಿನ ಸುಭಾಷನಗರದಲ್ಲಿ ವಿಶಾಲವಾದ ಬಸ್ ಸ್ಟೇಶನ್ ನಿರ್ಮಾಣವಾದದ್ದು ಇಂತಹ ನಿರ್ಧಾರಗಳಲ್ಲಿ ಒಂದು.  ಅನೇಕ ಮೆಡಿಕಲ್ ಕಾಲೇಜುಗಳು ಮತ್ತು ಇಂಜಿನಿಯರಿಂಗ್ ಕಾಲೇಜುಗಳು ಮಂಜೂರಾತಿ ಪಡೆದವು.  ಕಾವೇರಿ ಮೂರನೇ ಹಂತದ ಕೆಲಸ ಕೇವಲ ಒಂದೂವರೆ ವರ್ಷದಲ್ಲೇ ನಡೆಯಿತು. ಮೈಸೂರಿನ ಕಲಾಮಂದಿರ ನಿರ್ಮಾಣಗೊಂಡಿತು.

ಗುಂಡೂರಾವ್ ತಮ್ಮ ಸರಕಾರವನ್ನು “ಇಂದಿರಾಪೋಷಿತ ನಾಟಕ ಕಂಪನಿ” ಎಂದು ಕರೆದುಕೊಳ್ಳುತ್ತಿದ್ದರು. ಕೆಲವು ಪಕ್ಷದ ಸಹೋದ್ಯೋಗಿಗಳ ಆರೋಪ,  ರೋಲರ್ ಫ್ಲೋರ್ ಮಿಲ್ ಲೈಸೆನ್ಸ್ ಹಗರಣ, ಬೆಂಗಳೂರಿನಲ್ಲಿ ಸಾರ್ವಜನಿಕ ರಂಗದ ಕೈಗಾರಿಕೆಗಳ 77 ದಿನಗಳ ದೀರ್ಘ ಮುಷ್ಕರ, ಗೋಕಾಕ್ ಚಳವಳಿಯಲ್ಲಿ ರಾಜ್‍ಕುಮಾರ್ ಪ್ರವೇಶ ತಂದ ಬಿರುಸು, ನರಗುಂದ ಹಾಗು ನವಲಗುಂದಗಳಲ್ಲಿ ನಡೆದ ರೈತ ಚಳವಳಿ ಮುಂತಾದವುಗಳ ಪರಿಣಾಮಗಳನ್ನು ಅವರ ಆಡಳಿತ ಕಾಣಬೇಕಾಯ್ತು. 1983ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಗುಂಡೂರಾವ್ ಸರ್ಕಾರದ ಸೋಲು ಕಂಡಿತು. 

ಇಂದಿರಾ ಗಾಂಧೀ ನಿಧನದ ನಂತರ ರಾಜೀವ್ ಗಾಂಧಿಯಿಂದ ದೂರ ಇಡಲ್ಪಟ್ಟಿದ್ದ ಗುಂಡೂರಾವ್ ಸ್ವಲ್ಪ ಕಾಲ ಕಾಂಗ್ರೆಸ್ ಇಂದ ಹೊರಹೋಗಿದ್ದರು.   1989ರಲ್ಲಿ ಪುನ: ರಾಜೀವ ಗಾಂಧಿ ಮನವೊಲಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು.  ಆದರೆ ಕಾಂಗ್ರೆಸ್ ಇಡೀ ದೇಶದಲ್ಲಿ ಪರಾಭವಗೊಂಡಿತು. 1991ರಲ್ಲಿ ಲೋಕಸಭೆಗೆ ಮಧ್ಯಾವಧಿ ಚುನಾವಣೆ ಘೋಷಣೆ ಆಗಿ, ತಮಿಳುನಾಡಿನ ಪೆರಂಬದೂರಿನಲ್ಲಿ ರಾಜೀವ ಗಾಂಧಿಯವರ ಹತ್ಯೆಯಾಯಿತು. ಮುಂದೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿತಾದರೂ ಗುಂಡೂರಾವ್ ಪರಾಭವಗೊಂಡರು.

ಹುರುಪು ಹುಮ್ಮಸ್ಸು ಉತ್ಸಾಹಗಳಿಂದ ಜೀವನ ಸಾಗಿಸಿದ ಗುಂಡೂರಾವ್ ಕೆಲವು ಕಾಲ ರಕ್ತ ಕ್ಯಾನ್ಸರದಿಂದ ಬಳಲಿ ಲಂಡನ್ನಿನಲ್ಲಿ ಚಿಕಿತ್ಸೆ ಪಡೆದರು. ಕಾಲ ಕಿವಿಗೊಡಲಿಲ್ಲ.  ಇನ್ನೂ 56 ವರ್ಷ ವಯಸ್ಸಿನ ಗುಂಡೂರಾವ್ 1993ರ ಆಗಸ್ಟ್ 22ರಂದು ನಿಧನರಾದರು.


On the birth anniversary of Late Chief Minister R. Gunfire Rao 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ