ಬಾಗೂರು ಚಂದ್ರು
ಬಾಗೂರು ಚಂದ್ರು
ಬಾಗೂರು ಚಂದ್ರಶೇಖರ್ ಹಾಸ್ಯ ಸಾಹಿತ್ಯ ಮತ್ತು ಸಂವಹನ ಮಾಧ್ಯಮಗಳಂತಹ ಗಂಭೀರ ಪ್ರಸ್ತುತಿಗಳೆರಡರಲ್ಲೂ ದೊಡ್ಡ ಹೆಸರಾಗಿದ್ದವರು. ಅವರು ಅಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಹಿರಿಯ ಅಧಿಕಾರಿಗಳಾಗಿ ದೇಶದ ವಿವಿದೆಡೆಗಳಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತಹ ಶ್ಲಾಘನೀಯ ಸೇವೆ ಸಲ್ಲಿಸಿದ್ದರು. ಅವರು ಡಾ. ಎಸ್. ಎಲ್. ಭೈರಪ್ಪನವರ ಕೃತಿಗಳ ಪ್ರಥಮ ಓದುಗರಾಗಿದ್ದರು. ಭೈರಪ್ಪನವರು ಮತ್ತು ಎಂ.ಎಸ್.ಕೆ. ಪ್ರಭು ಅವರೊಂದಿಗೆ ನಿರಂತರವಾಗಿ ಜೊತೆಗೂಡಿದ್ದರು.
ಬಾಗೂರು ಚಂದ್ರು ಅವರ ಪೂರ್ಣ ಹೆಸರು ಬಾಗೂರು ಸೂರಪ್ಪ ಚಂದ್ರಶೇಖರ್. ಬಾಗೂರು ಚಿತ್ರದುರ್ಗ ಜಿಲ್ಲೆಯ ಒಂದು ಊರು. ಚಂದ್ರು ಅವರ ಬಾಲ್ಯ, ಪ್ರಾಥಮಿಕ ವಿದ್ಯಾಭ್ಯಾಸಗಳು ಬಾಗೂರಿನಲ್ಲಿ ನಡೆದವು. ಅವರ ತಂದೆ ಸೂರಪ್ಪನವರು ಆಗಿನ ಮೈಸೂರು ಸಂಸ್ಥಾನದ ಅರಣ್ಯ ಇಲಾಖೆಯಲ್ಲಿ ಫಾರೆಸ್ಟರ್ ಕೆಲಸದಲ್ಲಿದ್ದರು. ತಾಯಿ ಮೀನಾಕ್ಷಮ್ಮ. ಚಂದ್ರು ಜನಿಸುವ ವೇಳೆಗೆ ಸೂರಪ್ಪನವರ ಕುಟುಂಬ ಹಾಸನದಲ್ಲಿತ್ತು. ಚಂದ್ರಶೇಖರ್ 1940ರ ಏಪ್ರಿಲ್ 8, ಯುಗಾದಿ ಹಬ್ಬದ ದಿನದಂದು ಜನಿಸಿದರು. ಸೂರಪ್ಪನವರು ಅನಾರೋಗ್ಯದ ಕಾರಣ ನಿವೃತ್ತಿ ಪಡೆದುಕೊಂಡು ಕುಟುಂಬದೊಂದಿಗೆ ಬಾಗೂರಿಗೆ ಬಂದು ನೆಲೆಸಿದರು. ಚಂದ್ರುವಿಗೆ ವರ್ಷ ತುಂಬಲು ಇನ್ನೂ ಎಂಟು ದಿನ ಇರುವಾಗಲೇ ಸೂರಪ್ಪ ತೀರಿಕೊಂಡರು.
ಬಾಲಕ ಚಂದ್ರುವಿನ ಪ್ರಾಥಮಿಕ ವಿದ್ಯಾಭ್ಯಾಸ ಬಾಗೂರಿನಲ್ಲೇ ಆಯಿತು. ಚಂದ್ರುವಿನ ಅಣ್ಣ ಗುಂಡೂರಾಯರು ಹೊಸದುರ್ಗದಲ್ಲಿ ಪ್ರಾಥಮಿಕ ಶಾಲಾ ಅಧ್ಯಾಪಕರಾದಾಗ ಪ್ರೌಢಶಾಲೆಗೆ ಹೊಸದುರ್ಗದಲ್ಲಿ ಸೇರಿದರು. ಆದರೆ ಒಂದೇ ವರ್ಷದಲ್ಲಿ ಗುಂಡೂರಾಯರಿಗೆ ಮರಳಿ ಬಾಗೂರಿಗೇ ವರ್ಗವಾಗಿಬಿಟ್ಟಿತು. ಬಾಗೂರಿನಲ್ಲಿ ಪ್ರೌಢಶಾಲೆ ಇರಲಿಲ್ಲವಾಗಿ ಚಂದ್ರು ಮೈಸೂರಿಗೆ ಬಂದು ತನ್ನ ಅಕ್ಕ ಸುಬ್ಬಲಕ್ಷ್ಮಿಯ ಮನೆಯಲ್ಲಿದ್ದು ವ್ಯಾಸಂಗ ಮುಂದುವರೆಸಿದರು. ಮೈಸೂರಿನ ದಳವಾಯಿ ಪ್ರೌಢಶಾಲೆಯಲ್ಲಿ ಎರಡು ವರ್ಷ ವಿದ್ಯಾರ್ಥಿಯಾಗಿದ್ದ ಚಂದ್ರು 1955ರಲ್ಲಿ ಎಸ್ಎಸ್ಎಲ್ಸಿಯಲ್ಲಿ ಪ್ರಥಮದರ್ಜೆಯಲ್ಲಿ ಉತ್ತೀರ್ಣರಾದರು. ಮೊದಲಿನಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಚಂದ್ರಶೇಖರ್ ವಿಜ್ಞಾನ ವಿಷಯಗಳನ್ನು ಐಚ್ಛಿಕವಾಗಿ ಅಭ್ಯಸಿಸಿ ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ಪ್ರಥಮದರ್ಜೆಯಲ್ಲಿ ಉತ್ತೀರ್ಣರಾದರು. ಮಹಾರಾಜಾ ಕಾಲೇಜಿನಲ್ಲಿ ಸಂಖ್ಯಾಶಾಸ್ತ್ರ, ಅರ್ಥಶಾಸ್ತ್ರ, ಗಣಿತಗಳನ್ನು ಮುಖ್ಯವಿಷಯಗಳಾಗಿ ಆಯ್ದುಕೊಂಡು ಪ್ರಥಮದರ್ಜೆಯಲ್ಲಿ ಬಿ.ಎಸ್ಸಿ ತೇರ್ಗಡೆಯಾದ ಚಂದ್ರಶೇಖರ್, ಸಂಖ್ಯಾಶಾಸ್ತ್ರದ ಎಂಎಸ್ಸಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೇ ಪ್ರಥಮ ರ್ಯಾಂಕ್ ಗಳಿಸಿದರು.
ಭಾವನವರಾದ ಸೂರ್ಯನಾರಾಯಣರು ಒಂದುವರ್ಷ ಉದ್ಯೋಗನಿಮಿತ್ತ ವಿದ್ಯಾನಗರಕ್ಕೆ ವರ್ಗವಾಗಿ ಹೋದಾಗ ಚಂದ್ರು ತನ್ನ ಮಿತ್ರ ಕೇಶವ ಪ್ರಭು (ಹೆಸರಾಂತ ಕತೆಗಾರ ಎಂ. ಎಸ್. ಕೆ. ಪ್ರಭು) ಅವರೊಡನೆ ಒಂದು ಕೊಠಡಿಯೊಂದನ್ನು ಬಾಡಿಗೆಗೆ ಹಿಡಿದು ತಾವೇ ಅಡುಗೆಮಾಡಿಕೊಂಡು ಕಾಲೇಜಿಗೆ ಹೋಗುತ್ತಿದ್ದರು. ಆ ವೇಳೆಗೆ ಚಂದ್ರು ಎಂ.ಎಸ್ಸಿ. ವಿದ್ಯಾರ್ಥಿಯಾದರೆ ಪ್ರಭು ಎಂ.ಎ. ಓದುತ್ತಿದ್ದರು. ಎಸ್.ಎಲ್.ಭೈರಪ್ಪನವರು ಇವರಿಬ್ಬರಿಗೆ ಒಂದೆರಡು ವರ್ಷ ಹಿರಿಯ ಸಮಕಾಲೀನ ಸ್ನೇಹಿತರು. ಚಂದ್ರು ಮತ್ತು ಪ್ರಭು ಮುಂದೆ ಆಕಾಶವಾಣಿಯಲ್ಲಿ ಜೊತೆಗೂಡಿ ಸಹೋದ್ಯೋಗಿಗಳಾದರು. ಈ ಮೂವರು ಸದಾ ಸನ್ಮಿತ್ರರಾಗಿದ್ದರು.
ಚಂದ್ರಶೇಖರ್ 1961ರಲ್ಲಿ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ಸ್ಟಾಟಿಸ್ಟಿಕಲ್ ಅಸಿಸ್ಟೆಂಟ್ ಆಗಿ ಸೇರಿ ಕೆಲವು ತಿಂಗಳುಗಳಕಾಲ ಸಂಶೋಧಕರಾಗಿ ಕೆಲಸ ಮಾಡಿದರು. 1962ರಲ್ಲಿ ಮೈಸೂರಿಗೆ ಹಿಂತಿರುಗಿ ಮಾನಸಗಂಗೋತ್ರಿಯಲ್ಲಿ ಮನಃಶಾಸ್ತ್ರ ವಿಭಾಗದಲ್ಲಿ ಡಾ|| ಟಿ. ಕುಪ್ಪುಸ್ವಾಮಿಯವರ ಸಹಾಯಕರಾಗಿ ಕೆಲಸ ಮಾಡಿದರು. 'Current status of health conditions of middle school children' ಎಂಬ ವಿಷಯದ ಬಗೆಗೆ ಅಧ್ಯಯನ ಕೈಗೊಂಡರು. 1962ರಲ್ಲಿ ಸಿಎಫ್ಟಿಆರ್ಐನಲ್ಲಿ ಕೆಲಸಕ್ಕೆ ಸೇರಿದ ಚಂದ್ರಶೇಖರರು ಕೆಲವು ತಿಂಗಳುಗಳ ಕಾಲ ಸ್ಟಾಟಿಸ್ಟಿಕಲ್ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದರು. 1963ರಲ್ಲಿ ಆಗಿನ ಮೈಸೂರು ಸರಕಾರದ ಸೆಕ್ರೇಟರಿಯೇಟ್ನಲ್ಲಿ ಉದ್ಯೋಗ ದೊರೆತು ಬೆಂಗಳೂರಿಗೆ ಬಂದರು. ಅದೇ ವರ್ಷ ಕೇಂದ್ರ ಸರ್ಕಾರದ ರಕ್ಷಣಾವಿಭಾಗಕ್ಕೆ ಸೇರಿದ್ದ ಸೈಕಲಾಜಿಕಲ್ ರೀಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಸೀನಿಯರ್ ಸೈಂಟಿಫಿಕ್ ಅಸಿಸ್ಟೆಂಟ್ ಆಗಿ ನೇಮಕಗೊಂಡು ನವದೆಹಲಿಗೆ ತೆರಳಿದರು. ಕೆಲವು ವರ್ಷಗಳ ನಂತರ ಚಂದ್ರಶೇಖರ್ ಸಮೂಹ ಮಾಧ್ಯಮಗಳ ಕ್ಷೇತ್ರಕ್ಕೆ ಕಾಲಿರಿಸಿದರು.
1967ರಲ್ಲಿ ಶ್ರೋತೃ ಸಂಶೋಧನಾಧಿಕಾರಿಯಾಗಿ ಬೆಂಗಳೂರು ಆಕಾಶವಾಣಿಗೆ ಬಂದ ಚಂದ್ರಶೇಖರ್ 1967ರಿಂದ 1979ರವರೆಗೆ ಬೆಂಗಳೂರಿನಲ್ಲೇ ಸೇವೆ ಸಲ್ಲಿಸಿದರು. ಅವರ ಸಹೋದ್ಯೋಗಿಗಳಾಗಿ ಕೆಲಸಮಾಡಿದ ಡಾ. ಜ್ಯೋತ್ನಾ ಕಾಮತ್, ಡಾ. ಹೆಚ್. ಆರ್. ಕೃಷ್ಣಮೂರ್ತಿ, ಡಾ. ಬಿ.ಎಸ್. ಸ್ವಾಮಿ, ಎಸ್.ಎಸ್. ಹಿರೇಮಠ್ ಮೊದಲಾದವರು ಚಂದ್ರಶೇಖರ್ರವರ ಕಾರ್ಯಶ್ರದ್ಧೆ, ಮಾರ್ಗದರ್ಶನ, ಸಹೃದಯತೆಗಳನ್ನು ತುಂಬುಹೃದಯದಿಂದ ಸ್ಮರಿಸಿಕೊಳ್ಳುತ್ತಾರೆ.
ಮುಂದೆ ಚಂದ್ರಶೇಖರ್ ಆಡಿಯನ್ಸ್ ರಿಸರ್ಚ್ ಡೆಪ್ಯೂಟಿ ಡೈರೆಕ್ಟರ್ ಆಗಿ ಚೆನ್ನೈ ಆಕಾಶವಾಣಿಗೆ ಬಂದರು. 1988ರಲ್ಲಿ ಇದೇ ಹುದ್ದೆಯ ಮೇರೆಗೆ ನವದೆಹಲಿಗೆ ವರ್ಗಾವಣೆಗೊಂಡ ಚಂದ್ರಶೇಖರ್ ಅವರನ್ನು ನವದೆಹಲಿಯ ದೂರದರ್ಶನದಲ್ಲಿ ಪ್ರಸಾರಭಾರತಿಯ ಆಡಿಯನ್ಸ್ ರಿಸರ್ಚ್ ಡೈರೆಕ್ಟರ್ ಆಗಿ ನೇಮಿಸಲಾಯಿತು. 1992ರಿಂದ 2000ದವರೆಗೆ ಶ್ರೋತೃಸಂಶೋಧನಾ ವಿಭಾಗದ ನಿರ್ದೇಶಕರಾಗಿ ಸೇವೆಸಲ್ಲಿಸಿದ ಚಂದ್ರಶೇಖರ್ ಜೂನ್ 2000ದಲ್ಲಿ ನಿವೃತ್ತರಾದರು.
ಚಂದ್ರಶೇಖರ್ ಅವರದು ಸಮೂಹ ಮಾಧ್ಯಮಗಳ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಹೆಸರು. ಚಂದ್ರಶೇಖರ್ ಅನೇಕ ಪ್ರತಿಷ್ಟಿತ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ಭಾರತದ ಸಮೂಹ ಮಾಧ್ಯಮ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ವಿಶ್ವದ ಅನೇಕ ಮಾಧ್ಯಮ ಸಂಸ್ಥೆಗಳಿಗೆ ಮತ್ತು ಸಂವಹನ ಕ್ಷೇತ್ರದ ವಿದ್ಯಾಸಂಸ್ಥೆಗಳಿಗೆ ಮಾರ್ಗದರ್ಶನಕ್ಕೆ ಮತ್ತು ಉಪನ್ಯಾಸಗಳಿಗೆ ಆಹ್ವಾನಿತರಾಗಿದ್ದರು. ನಿವೃತ್ತಿಯ ನಂತರವೂ ಬೆಂಗಳೂರಿನ ಶ್ರೀ ಶ್ರೀ ರವಿಶಂಕರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲೂ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜರ್ನಲಿಸಂ ಆಂಡ್ ನ್ಯೂ ಮೀಡಿಯಾ ಸಂಸ್ಥೆಯಲ್ಲೂ ವಿಶೇಷ ಉಪನ್ಯಾಸಕರಾಗಿ ಬೋಧನೆ ನೀಡುತ್ತಿದ್ದರು.
ಚೆನ್ನೈನಲ್ಲಿದ್ದಾಗಲೂ 'ಕನ್ನಡ ಸಂಘ'ದ ಸಂಪರ್ಕದಲ್ಲಿದ್ದ ಚಂದ್ರಶೇಖರ್ ‘ಪ್ರಸಾರ ಭಾರತಿ'ಯ ಹಿರಿಯ ಅಧಿಕಾರಿಗಳಾಗಿ ನವದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ದೆಹಲಿ ಕರ್ನಾಟಕ ಸಂಘದ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದರು. ಸಂಘದ ಮುಖವಾಣಿಯಾದ 'ಅಭಿಮತ' ಪತ್ರಿಕೆಯ ಮೊದಲ ಸಂಪಾದಕ ಮಂಡಳಿಯ ಸದಸ್ಯರಲ್ಲೊಬ್ಬರಾಗಿ ಹೊರನಾಡ ಕನ್ನಡಿರ ಸಾಹಿತ್ಯ ಸೇವೆಯನ್ನು ಪ್ರೋತ್ಸಾಹಿಸಿ ಮುನ್ನಡೆಸಿದರು.
ಚಂದ್ರಶೇಖರ ಅವರ ಪುಸ್ತಕ ಪ್ರೀತಿ ಅಪಾರವಾದದ್ದು. ಅವರ ಆಸಕ್ತಿ ಕೇವಲ ಕತೆ, ಕಾದಂಬರಿ, ವಿಮರ್ಶೆಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಸಮಾಜ ವಿಜ್ಞಾನ, ಅರ್ಥಶಾಸ್ತ್ರ, ಸಮಕಾಲೀನ ರಾಜಕೀಯ, ವಿಜ್ಞಾನ-ತಂತ್ರಜ್ಞಾನಗಳಿಗೂ ವಿಸ್ತರಿಸಿತ್ತು.
ಇವರು ಆಕಾಶವಾಣಿಯಲ್ಲಿ ತಮ್ಮ ಸ್ವ-ಆಸಕ್ತಿಯಿಂದ 'ಪ್ರಕಟಣಾ ಪ್ರಪಂಚ' ಎಂಬ ಕನ್ನಡ ಪುಸ್ತಕ ಪರಿಚಯ ಕಾರ್ಯಕ್ರಮವನ್ನು ವಾರದಲ್ಲಿ ಒಂದು ದಿನ ತಾವು ಬೆಂಗಳೂರು ಆಕಾಶವಾಣಿಯಲ್ಲಿರುವವರೆಗೂ ನಡೆಸಿಕೊಡುತ್ತಿದ್ದರು. ಇದು ರಾಜ್ಯದ ಎಲ್ಲ ಕೇಂದ್ರಗಳಿಂದಲೂ ಪ್ರಸಾರವಾಗುತ್ತಿತ್ತು.
ವ್ಯಕ್ತಿಯಾಗಿ ಚಂದ್ರು ಬಹಳ ಮೃದುಸ್ವಭಾವದವರು. ಸೂಕ್ಷ್ಮಗ್ರಾಹಿ. ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ಆದರೆ ಮಾತಿಗೆ ಆಯ್ಕೆಮಾಡಿಕೊಂಡ ವಿಷಯವನ್ನು ಬಲು ಅರ್ಥಪೂರ್ಣವಾಗಿ ವಿಶ್ಲೇಷಿಸಬಲ್ಲವರಾಗಿದ್ದರು. ತಮ್ಮ ಉತ್ತಮಗ್ರಹಿಕೆಗಳಿಂದ ಆಕಾಶವಾಣಿ, ದೂರದರ್ಶನಗಳ ಕಾರ್ಯಕ್ರಮಗಳನ್ನು ಉತ್ತಮಪಡಿಸುವ ಮೂಲಕ ಅವೆಲ್ಲವೂ ಜನಸಾಮಾನ್ಯರಿಗೆ ಮೆಚ್ಚಿಗೆಯಾಗುವಂತೆ ತಲುಪಿಸುವಲ್ಲಿ ಚಂದ್ರಶೇಖರ್ರವರ ಪಾತ್ರವು ಮಹತ್ವದ್ದಾಗಿತ್ತು.
ಸಮೂಹ ಮಾಧ್ಯಮಗಳ ಸಾಹಿತ್ಯ ಕ್ಷೇತ್ರದಲ್ಲೂ ಚಂದ್ರಶೇಖರ್ ಕೊಡುಗೆ ಅಪಾರ. ಅವರು ಮೊದಲಿಗೆ ಬರೆದ ಪುಸ್ತಕ 'ಸಮೂಹ ಮಾಧ್ಯಮಗಳು: ಭಾರತೀಯ ಸಮಾಜದಲ್ಲಿ'. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆ ವಿವಿಧ ವಿಷಯಗಳ ಮೇಲೆ ಕನ್ನಡದಲ್ಲಿ ಬರೆದ ಗ್ರಂಥಗಳಿಗೆ ಬಹುಮಾನ ನೀಡುವುದಾಗಿ ಪ್ರಕಟಿಸಿದ ಯೋಜನೆಯಲ್ಲಿ ಮೊದಲ ಬಹುಮಾನ ಪಡೆದ ಕೃತಿಯಿದು. 1979ರಲ್ಲಿ ಪ್ರಕಟವಾದ ಇದೇ ಗ್ರಂಥಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಸಂದಿತು. ಇದೇ ವಿಷಯವನ್ನು ಆಧರಿಸಿದಂತೆ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಕೋರಿಕೆಯ ಮೇರೆಗೆ 'ಸಮೂಹ ಸಂಪರ್ಕ ಮಾಧ್ಯಮಗಳು' ಎಂಬ ಕಿರುಪುಸ್ತಕವೊಂದನ್ನು ಬರೆದುಕೊಟ್ಟರು. ಮುಂದೆ ಸಂವಹನ ಮಾಧ್ಯಮಗಳು ಸಾಮಾಜಿಕ ಜೀವನದಲ್ಲಿ ಹಾಸುಹೊಕ್ಕಾಗಿ ತಾಳಿದ ವಿಶ್ವರೂಪವನ್ನು ಬಹುಸಮೀಪದಿಂದ ಪರಿಶೀಲಿಸಿ ವಿಶ್ಲೇಷಿಸಿದ ಶ್ರೀ ಚಂದ್ರಶೇಖರ್ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕನ್ನಡ ಚಿಂತನ ಮಾಲೆಗಾಗಿ ಬಹು ಆಸಕ್ತಿಯಿಂದ ಬರೆದುಕೊಟ್ಟ ಮಹತ್ವದ ಪುಸ್ತಕ 'ಸಂವಹನ ಮಾಧ್ಯಮಗಳು'. ಚಂದ್ರಶೇಖರ್ ಪ್ರಸಾರಭಾರತಿಯಲ್ಲಿ ಕೈಗೊಂಡ ಸಮಾಜಶಾಸ್ತ್ರೀಯ ಸಂಶೋಧನೆಗಳನ್ನು ಆಧರಿಸಿ ಮೂಡಿಸಿದ ಮಹತ್ವದ ಕೃತಿ ಹಂಪಿ ವಿಶ್ವವಿದ್ಯಾಲಯದಿಂದ 2001ರಲ್ಲಿ ಪ್ರಕಟಗೊಂಡ 'ಸಮಾಜ ವಿಜ್ಞಾನಗಳಲ್ಲಿ ಸಂಶೋಧನ ವಿಷಯಗಳು'. ಇದಲ್ಲದೆ ವಿವಿಧ ಪತ್ರಿಕೆ ಸಂಚಿಕೆಗಳಲ್ಲಿ ಸಮೂಹ ಕಾರ್ಯಗಳ ಬಗೆಗೆ ಹಲವು ಲೇಖನಗಳಿಗಾಗಿ ನೂರಕ್ಕೂ ಹೆಚ್ಚು ಸಂಶೋಧನಾ ವರದಿಗಳನ್ನು ಚಂದ್ರಶೇಖರ್ ಸಿದ್ದಪಡಿಸಿಕೊಟ್ಟರು.
ಚಂದ್ರಶೇಖರ್ ಕನ್ನಡದ ಪ್ರಸಿದ್ಧ ಕಾದಂಬರಿಕಾರ ಡಾ. ಎಸ್. ಎಲ್. ಭೈರಪ್ಪನವರ ಬಹುಚರ್ಚಿತ ಕೃತಿಯಾದ ಆವರಣದ ಬಗೆಗೆ ದೀರ್ಘಕಾಲ ನಡೆದ ವಾದವಿವಾದ ಪ್ರತಿಕ್ರಿಯೆಗಳನ್ನು 'ಆವರಣ: ಮಾಧ್ಯಮ ಮಂಥನ' ಕೃತಿಯಲ್ಲಿ 2009ರಲ್ಲಿ ಅಚ್ಚುಕಟ್ಟಾಗಿ ದಾಖಲಿಸಿದ್ದಾರೆ. ಈ ಕೃತಿಯ ಪರಿಷ್ಕೃತ ರೂಪವು 2011ರಲ್ಲಿ ಎಸ್. ಎಲ್. ಭೈರಪ್ಪನವರ ಕೃತಿ 'ಸಂದರ್ಭ: ಸಂವಾದ'ದಲ್ಲಿ ಪ್ರಕಟವಾಗಿದೆ.
ಸಮೂಹಮಾಧ್ಯಮ ಮತ್ತಿತರ ಸಾಮಾಜಿಕಸಂಶೋಧನಾ ಅಧ್ಯಯನದಲ್ಲಿ ತಲ್ಲೀನರಾಗಿದ್ದ ಚಂದ್ರಶೇಖರ್ 'ಬಾಗೂರು ಚಂದ್ರು' ವಾಗಿ ವಿನೋದ ಸಾಹಿತ್ಯಲೋಕವನ್ನು ಪ್ರವೇಶಿಸಿದುದೂ ಒಂದು ವಿಶೇಷ. ಚಂಬಾ, ಬಾಗೂರು ಚಂದ್ರು, ಕು.ಕ. ಬಾಚಂ ಮತ್ತಿತರ ಹಲವು ನಾಮಧೇಯಗಳಲ್ಲಿ ಚಂದ್ರಶೇಖರರ ಹಾಸ್ಯಸಾಹಿತ್ಯ ಕೃಷಿ ನಡೆಯಿತು. ನಾಡಿನ ಜನಪ್ರಿಯ ದಿನಪತ್ರಿಕೆಗಳಲ್ಲೂ ನಿಯತಕಾಲಿಕಗಳಲ್ಲೂ ನಿರಂತರವಾಗಿ ಹಾಸ್ಯಲೇಖನಗಳನ್ನು ಬರೆದ ಚಂದ್ರು ಅವರ ಹಲವು ಬರಹಗಳು ಅಂದಂದಿನ ಸಾಮಾಜಿಕ ಘಟನೆಗಳನ್ನು ಕುರಿತ ನವಿರು ವಿಡಂಬನೆಯಂತೆ ಮೇಲುನೋಟಕ್ಕೆ ತೋರಿದರೂ ಬಹುಕಾಲದ ನಂತರವೂ ಪ್ರಸ್ತುತವಾಗಿಯೇ ಕಾಣುತ್ತವೆ. ಚಂದ್ರಶೇಖರ್ ರಚಿಸಿದ ಮೊದಲ ಹಾಸ್ಯ ಪುಸ್ತಕ 'ಮದುವೆಯ ಉಡುಗೊರೆ' 1989ರಲ್ಲಿ ಪ್ರಕಟವಾಯಿತು. ಈ ಕೃತಿಯು ವಿನೋದ ಸಾಹಿತ್ಯವಿಭಾಗದಲ್ಲಿ ಅದೇ ವರ್ಷ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರವಾಯಿತು.
1995ರಲ್ಲಿ ಬಾಗೂರು ಚಂದ್ರು ಅವರು ಮೂಡಿಸಿದ ಹಾಸ್ಯಲೇಖನಗಳ ಸಂಕಲನ 'ಹತ್ತು ಮತ್ತೊಂದು'. 2000ದಲ್ಲಿ ಅವರ ಮತ್ತೊಂದು ಹಾಸ್ಯಲೇಖನ ಸಂಕಲನ ‘ಹಬ್ಬದಡಿಗೆ’ ಮೂಡಿಬಂತು. ‘ಅಹುದಾದರಹುದೆನ್ನಿ’. ಬಾಗೂರು ಚಂದ್ರು ಅವರ ಮತ್ತೊಂದು ಹಾಸ್ಯಲೇಖನ ಸಂಗ್ರಹ.
2010ರಲ್ಲಿ ಪ್ರಿಸಂ ಬುಕ್ಸ್ ಪ್ರಕಟಿಸಿದ ‘ಶತಮಾನದ ನಗೆಬರಹಗಳು’
ಸಂಕಲನದ ಸಂಪಾದಕರಾಗಿ ಚಂದ್ರಶೇಖರ್ ಬರೆದಿರುವ ಸುದೀರ್ಘ ಪ್ರಸ್ತಾವನೆ ಕನ್ನಡ ಹಾಸ್ಯಸಾಹಿತ್ಯಲೋಕವನ್ನು ಕುರಿತ ಅತ್ಯುತ್ತಮ ಸಮೀಕ್ಷೆಯಾಗಿದೆ. ನಾ.ಕಸ್ತೂರಿ, ರಾ.ಶಿ, ಟಿ.ಪಿ.ಕೈಲಾಸಂ, ಬೀಚಿ, ಕೇಫ, ಲಾಂಗೂಲಾಚಾರ್ಯ, ಸುನಂದಮ್ಮ, ಸುನಂದಾ ಬೆಳಗಾಂವಕರ, ಶ್ರೀನಿವಾಸ ವೈದ್ಯ, ಭುವನೇಶ್ವರಿ ಹೆಗಡೆ ಮುಂತಾದ ನಗೆ ಪರಿಣಿತರ ಜೊತೆಗೆ, ಎಂ.ಎಸ್. ಪುಟ್ಟಣ್ಣ, ಪಂಜೆ ಮಂಗೇಶರಾವ್, ಡಿ.ವಿ.ಗುಂಡಪ್ಪ, ಜಿ.ಪಿ.ರಾಜತ್ನಂ, ಶಿವರಾಮ ಕಾರಂತ, ಕುವೆಂಪು, ದ.ರಾ.ಬೇಂದ್ರೆ. ಎ.ಎನ್.ಮೂರ್ತಿರಾವ್, ತೀ.ನಂ.ಶ್ರೀಕಂಠಯ್ಯ, ದೇವನೂರು ಮಹಾದೇವ, ಪೂರ್ಣಚಂದ್ರ ತೇಜಸ್ವಿ, ಕುಂ.ವೀರಭದ್ರಪ್ಪನವರಂಥ ಕನ್ನಡ ಸಾರಸ್ವತ ಲೋಕದ ಘಟಾನುಘಟಿಗಳ ಬರಹಗಳು ಸಹಾ 'ಶತಮಾನದ ನಗೆಬರಹಗಳು' ಪುಸ್ತಕದಲ್ಲಿವೆ. ಒಂದರ್ಥದಲ್ಲಿ ಚಂದ್ರಶೇಖರ್ ಈ ಕೃತಿಯಲ್ಲಿ ನಗೆಯ ಉತ್ಖನನವನ್ನೇ ನಡೆಸಿದ್ದಾರೆ.
ಬಾಗೂರು ಚಂದ್ರು ಅವರ ಹಾಸ್ಯಲೇಖನಗಳಲ್ಲಿ ಆಯ್ದ ಕೆಲವು ಲೇಖನಗಳ ಸಂಕಲನವನ್ನು 'ಬೆಸ್ಟ್ ಆಫ್ ಬಾಗೂರು' ಎಂಬ ಹೆಸರಿನಿಂದ ಅಂಕಿತ ಪ್ರಕಾಶನ ಹಾಸ್ಯಲೇಖಕ ಕೃಷ್ಣಸುಬ್ಬರಾವ್ ಅವರ ಸಂಪಾದಕೀಯದಲ್ಲಿ ಮೂಡಿಸಿದೆ.
ಚಂದ್ರಶೇಖರ್ ಮಕ್ಕಳಿಗಾಗಿ ಬರೆದ ಕಿರುಕಾದಂಬರಿ 'ಗೋಗ್ರಹಣ'. ಇದು ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಮೆಚ್ಚುಗೆ ಪಡೆದುದಲ್ಲದೆ ಕೃತಿಯಾಗಿಯೂ ಜನಪ್ರಿಯತೆ ಗಳಿಸಿತು.
ಬದುಕಿನಲ್ಲಿ ಮತ್ತು ವೃತ್ತಿಯಲ್ಲಿ ಶ್ರದ್ಧೆ, ಆಳವಾದ ಪಾಂಡಿತ್ಯ ಇವೆಲ್ಲಾ ಜೊತೆಗೂಡಿದ್ದರೂ ತಿಳಿ ಹಾಸ್ಯಪ್ರವೃತ್ತಿಗಳನ್ನೂ ಜೊತೆಗೂಡಿಸಿಕೊಂಡು ಸರಳ ಸುಸಂಸ್ಕೃತ ಸಮತ್ವ ಭಾವದೊಂದಿಗೆ ಎಲ್ಲರೊಂದಿಗೆ ಬೆರೆತು ಕೃತಾರ್ಥ ಜೀವನವನ್ನು ನಡೆಸಿದ ಬಾಗೂರು ಸೂರಪ್ಪ ಚಂದ್ರಶೇಖರ್ 2011ರ ಜನವರಿ 21ರಂದು ಈ ಲೋಕವನ್ನಗಲಿದರು.
On the birth anniversary of great scholar and writer B. S. Chandrashekar
ಕಾಮೆಂಟ್ಗಳು