ಕೃಷ್ಣರಾಜ ಒಡೆಯರ್
ನಾಲ್ವಡಿ ಕೃಷ್ಣರಾಜ ಒಡೆಯರ್
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನ ವಿಶ್ವಮಾನ್ಯವಾಗಿ ಸರ್ವಾಂಗೀಣ ಪ್ರಗತಿ ಹೊಂದಲು ಕಾರಣೀಭೂತರಾದವರು. ನಾವು ಯಾವ ಯಾವುದನ್ನು ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅಂತಹ ಮಹನೀಯರ ಶ್ರೇಷ್ಠ ಸೇವೆ ಎಂದು ಕೊಂಡಾಡುತ್ತೇವೆಯೋ ಆ ಹಿರಿಮೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಾತ್ರ ಕೂಡಾ ಮಹತ್ತರವಾದುದು. ಸರ್ವ ಕಾಲದಲ್ಲೂ ಪ್ರಾಜ್ಞರು ನಿಷ್ಠರು ಇದ್ದಿರುತ್ತಾರೆ. ಆ ಪ್ರಾಜ್ಞರಿಗೆ ಕಾರ್ಯದಕ್ಷತೆ ತೋರುವ ಅವಕಾಶ, ಸ್ವಾತಂತ್ರ್ಯ ಅಧಿಕಾರಗಳನ್ನು ನೀಡುವ ಮನೋಬಲ ರಾಜ್ಯಭಾರದವರಿಗೆ ಇದ್ದಾಗ ಮಾತ್ರವೇ ಅದು ಸಾಧ್ಯ ಎಂಬುದು ಅತ್ಯಂತ ಮುಖ್ಯ ಸಂಗತಿಯಲ್ಲವೆ?
ನಾಲ್ವಡಿ ಕೃಷ್ಣರಾಜ ಒಡೆಯರು (ಜೂನ್ 4, 1884 - ಆಗಸ್ಟ್ 3, 1940) ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ 24ನೇ ರಾಜರು. ಇವರ ಆಳ್ವಿಕೆ 1902 ರಿಂದ 1940ರವರೆಗೆ ನಡೆಯಿತು.
ನಾಲ್ವಡಿ ಕೃಷ್ಣರಾಜ ಒಡೆಯರು 1895ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ 10 ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ನಿಧಾನದವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು. ರಾಜಕುಮಾರನಿಗೆ ಸೂಕ್ತ ವಿದ್ಯಾಭ್ಯಾಸ , ಆಡಳಿತ ತರಬೇತಿ ಇವುಗಳನ್ನು ಮಹಾರಾಣಿಯವರು ತೀವ್ರ ನಿಗಾ ವಹಿಸಿ ನಡೆಸಿದುದರ ಪರಿಣಾಮವಾಗಿ, ಮೈಸೂರು ರಾಜ್ಯಕ್ಕೆ ಒಬ್ಬ ಸಮರ್ಥ ಆಡಳಿತಗಾರರಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ದೊರಕಿದರು.
1902ರ ಆಗಸ್ಟ್ 8ನೇ ತಾರೀಖಿನಿಂದ ಮೈಸೂರು ರಾಜ್ಯದ ನೇರ ಉಸ್ತುವಾರಿ ಕೃಷ್ಣರಾಜ ಒಡೆಯರ ಸುಪರ್ದಿಗೆ ಬಂದಿತು. ತಕ್ಷಣದಿಂದಲೇ ಅವರು ಮೈಸೂರು ರಾಜ್ಯದ ಸರ್ವತೋಮಖ ಅಭಿವೃದ್ದಿಗೆ ಕಂಕಣ ಬದ್ದರಾದರು, ಇವರ ಕಾಲದಲ್ಲಿ ಇಡೀ ಭರತ ಖಂಡದಲ್ಲಿ ಯಾವ ಸಂಸ್ಥಾನವೂ ಕಾಣದ ಅಭಿವೃದ್ದಿಯನ್ನು ಮೈಸೂರು ರಾಜ್ಯವು ಕಂಡುದರಿಂದ, ಮೈಸೂರು ಸಂಸ್ಥಾನಕ್ಕೆ 'ಮಾದರಿ ಮೈಸೂರು' ಎಂಬ ಕೀರ್ತಿ ಪ್ರಾಪ್ತವಾಯಿತು
ನಾಲ್ವಡಿ ಕೃಷ್ಣರಾಜ ಒಡೆಯರು ಅರಸು ಮನೆತನದಿಂದ ಬಂದವರಾಗಿದ್ದರೂ ಸಹ, ಜನತೆ ಆಡಳಿತದಲ್ಲಿ ಪಾಲ್ಗೊಳ್ಳುವಿಕೆಯ ಪರವಾಗಿದ್ದರು. ಅವರ ಕಾಲದಲ್ಲಿ, ಮೈಸೂರು ರಾಜ್ಯದಲ್ಲಿ ಹೆಸರಿಗೆ ಮಾತ್ರ ಇದ್ದ 'ಪ್ರಜಾ ಪ್ರತಿನಿಧಿ ಸಭೆ'ಯು ನೂತನ ರೂಪವನ್ನು ಪಡೆದು, ನಿಜವಾದ ಜನ ಪ್ರತಿನಿಧಿ ಸಭೆಯಾಗಿ ಪರಿವರ್ತನೆಯಾಯಿತು. ಇದರ ಜೊತೆಗೆ 'ನ್ಯಾಯ ವಿಧಾಯಕ' ಸಭೆಯನ್ನೂ ಸಹ ಸ್ಥಾಪಿಸಲಾಯಿತು. ರಾಜ್ಯದ ಸಣ್ಣ ಸಣ್ಣ ಪಟ್ಟಣಗಳಲ್ಲಿಯೂ ಸಹ ಮುನಿಸಿಪಾಲಿಟಿಗಳು ರಚನೆಯಾದವು. ಹಳ್ಳಿಗಳಲ್ಲಿ ಪ್ರಥಮ ಬಾರಿಗೆ ಗ್ರಾಮ ಪಂಚಾಯಿತಿಗಳು ಕಾರ್ಯ ನಿರ್ವಹಿಸಲು ಆರಂಭ ಮಾಡಿದುದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಆಡಳಿತದಲ್ಲಿ ಜನರ ಭಾಗವಹಿಸುವಿಕೆಗೆ ಅಪಾರ ಉತ್ತೇಜನ ಪಡೆದುಕೊಂಡಿತು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯಲ್ಲಿ ಗ್ರಾಮ ನಿರ್ಮಲೀಕರಣ, ವೈದ್ಯಕೀಯ ಸಹಾಯ, ವಿದ್ಯಾ ಪ್ರಚಾರ, ನೀರಿನ ಸೌಕರ್ಯ, ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಮಾಡಳಿತ ಸಂಸ್ಥೆಗಳಾದವು. ಹೊಸ ರೈಲು ದಾರಿಗಳ ನಿರ್ಮಾಣಗಳಾದವು.
1897 - 1907 ಅವಧಿಯಲ್ಲಿ 'ವಾಣೀವಿಲಾಸ ಸಾಗರ' (ಮಾರಿ ಕಣಿವೆ) ಕಟ್ಟಲ್ಪಟ್ಟಿತು. 1911 ರಲ್ಲಿ ಆರಂಭವಾದ 'ಕೃಷ್ಣರಾಜ ಸಾಗರ' ಭಾರತದ ಮೊಟ್ಟ ಮೊದಲ ಬೃಹತ್ ಜಲಾಶಯ. 1900ರಲ್ಲಿಯೇ ಶಿವನ ಸಮುದ್ರದ ಬಳಿ ಕಾವೇರಿ ನದಿಯಿಂದ ಜಲ ವಿದ್ಯುತ್ ಕೇಂದ್ರ ಆರಂಭವಾಯಿತು, ಇದು ಭಾರತದ ಮೊದಲ ಬೃಹತ್ ಜಲ ವಿದ್ಯುತ್ ಕೇಂದ್ರ.
ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು, ಉಚಿತವಾಗಿ ಮತ್ತು ಕಡ್ಡಾಯವಾಗಿ ಆರಂಭಿಸಲಾಯಿತು. ನಾಲ್ವಡಿ ಕೃಷ್ಣರಾಜರ ಮತ್ತೊಂದು ಮಹತ್ತರ ಸಾಧನೆಯೆಂದರೆ ಮೈಸೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದುದು. ಕನ್ನಡ ಸಾಹಿತ್ಯ ಪರಿಷತ್ತು ಆರಂಭಗೊಂಡಿತು. ಅವರ ಕಾಲದಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ 270 ಉಚಿತ ಆಸ್ಪತ್ರೆಗಳು ಕಾರ್ಯಾರಂಭ ಮಾಡಿದವು. ಬೆಂಗಳೂರಿನ ಮಿಂಟೊ ಕಣ್ಣಾಸ್ಪತ್ರೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿತ್ತು. ಮೈಸೂರಿನ ಕ್ಷಯರೋಗ ಆಸ್ಪತ್ರೆ ಉತ್ತಮಗೊಂಡಿತು.
ವಾಣಿಜ್ಯ ಕ್ಷೇತ್ರದಲ್ಲಿ ಮೈಸೂರು ಬ್ಯಾಂಕ್ ಖಾಸಗೀ ಸಹಭಾಗಿತ್ವದೊಡನೆ ಕಾರ್ಯಾರಂಭ ಮಾಡಿತು. 1906 ರಲ್ಲಿಯೇ ಸಹಕಾರ ಸಂಘಗಳನ್ನು ಸ್ಥಾಪಿಸಲಾಯಿತು. ರೈತರಿಗಾಗಿ ಜಮೀನು ಅಡಮಾನ ಬ್ಯಾಂಕುಗಳು ಆರಂಭವಾದವು.
ಮೈಸೂರು ಬೆಂಗಳೂರು ಪ್ರದೇಶಗಳಂತಹ ನಗರಗಳಲ್ಲಿ ರಚಿತವಾದ ಶ್ರೇಷ್ಠ ಕಟ್ಟಡಗಳು, ರಸ್ತೆಗಳು, ವಿದ್ಯುತ್ ದೀಪಗಳು, ಉದ್ಯಾನವನಗಳು, ಜಲ ಕಾರಂಜಿಗಳು, ವಿಹಾರಿ ಧಾಮಗಳು, ಶ್ರೇಷ್ಠ ವಿದ್ಯಾ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳು, ಅನಾಥಾಶ್ರಮಗಳು, ಛತ್ರಗಳು, ಶುಲ್ಕ ವಿಧಿಸದೆ ಉತ್ತಮ ಸೇವೆ ನೀಡುತ್ತಿದ್ದ ಆಸ್ಪತ್ರೆಗಳು, ಶುಶ್ರೂಷಾ ಧಾಮಗಳು, ಸಂಪರ್ಕ ವ್ಯವಸ್ಥೆಗಳು, ಪ್ರಯಾಣ ಸೌಲಭ್ಯಗಳು ಬಹುಶಃ ಇಷ್ಟು ಶ್ರೇಷ್ಠ ಮಟ್ಟದಲ್ಲಿದ್ದುದು ನಾಲ್ವಡಿ ಕೃಷ್ಣ ರಾಜ ಒಡೆಯರ್ ಕಾಲದಲ್ಲಿ. ಈ ಪ್ರಾಂತ್ಯದಲ್ಲಿದ್ದ ಸರ್ವ ಭಾಷಿಗರ ಸಮನ್ವಯ, ಸರ್ವ ಧರ್ಮೀಯರ ಸಮನ್ವಯ, ಎಲ್ಲಾ ವರ್ಗದವರ ಹಿತಕಾಯುವ ಮನೋಭಾವ ಇತ್ಯಾದಿಗಳು ಸಾರ್ವಕಾಲಿಕವಾಗಿ ಮಹೋನ್ನತವಾದ ಗಳಿಗೆಗಳು. ಈ ಸಂಸ್ಥಾನದಲ್ಲಿ ಕಲೆ, ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿಗಳ ಪೋಷಣೆ ಅದ್ವಿತೀಯವಾಗಿತ್ತು.
ಇಂಥಹ ರಾಜರು ಮಾತ್ರವೇ ಚರಿತ್ರೆಯಲ್ಲಿ ಅಜರಾಮರರು. ಹೀಗೊಬ್ಬ ಅರಸರು ಕಳೆದ ಶತಮಾನದಲ್ಲಿ ನಮ್ಮ ನಾಡಿನಲ್ಲಿದ್ದರು ಎಂಬ ಹೆಮ್ಮೆ ನಮ್ಮದು. ನಾವು ಯಾವ ಯಾವುದನ್ನು ಶ್ರೇಷ್ಠ ಅರಮನೆ, ಪ್ರೇಕ್ಷಣೀಯ, ಮನೋಲ್ಲಾಸಕರವೆಂದು ಕೊಂಡಾಡುತ್ತಿದ್ದೇವೆಯೋ ಅವೆಲ್ಲಾ ಒಂದಿಲ್ಲೊಂದು ರೀತಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಪ್ರಾರಂಭ ಇಲ್ಲವೇ ಫೋಷಣೆ ಪಡೆದು ಔನ್ನತ್ಯಗೊಂಡಂತಹವು ಎಂಬುದು ಈ ನಾಲ್ವಡಿಯವರ ಬಗೆಗಿನ ಗೌರವವನ್ನು ಇಮ್ಮಡಿಗೊಳಿಸುತ್ತಿವೆ. ಇಂಥಹ ಕೆಲಸ ಮುಂದೆ ಆಗಲಿಲ್ಲ, ಅಂಥಹ ಶ್ರೇಷ್ಠತೆ ಈಗ ಮಣ್ಣುಗೂಡಿ ಮತ್ತೊಬ್ಬ ನಾಲ್ವಡಿ ಕೃಷ್ಣರಾಯನಂತಹ ಸಮರ್ಥ ರಾಜಕಾರಣಿಯನ್ನು ಶೇಷಾದ್ರಿ ಅಯ್ಯರ್, ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅಂಥಹ ಸಮರ್ಥ ಆಡಳಿತಗಾರರನ್ನು ನಮ್ಮ ನಾಡು ಇನ್ನೂ ಅರಸುತ್ತಲೇ ಇದೆ.
ಈ ಮಹಾನ್ ಪ್ರಭು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಚೇತನಕ್ಕೆ ನಮ್ಮ ಗೌರವಯುತ ನಮನ. ಈ ಚೇತನ ಮತ್ತೊಮ್ಮೆ ಉದಯಿಸಿ ನಮ್ಮ ನಾಡು ತನ್ನ ಔನ್ನತ್ಯವನ್ನು ಕಂಡುಕೊಳ್ಳಲು ಸಾರಥ್ಯ ವಹಿಸುವಂತಾಗಲಿ.
great king Sri Sri Nalvadi Krishnaraja Wodeyar
ಕಾಮೆಂಟ್ಗಳು